ಶನಿವಾರ, ಸೆಪ್ಟೆಂಬರ್ 28, 2019

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*



ಉತ್ತರಭಾರತದ ಒಂದು ಹೈವೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ, ಸತತ ಡ್ರೈವ್ ಮಾಡಿ ತುಂಬ ಸುಸ್ತಾಗಿದ್ದಿದ್ದರಿಂದ, ಒಂದು ಡಾಬಾ  ಕಡೆ ಟೀ ಕುಡಿಯೋಣ ಅಂತ ನಿಲ್ಲಿಸಿ, ಟೀ ಕುಡಿಯಲು ಹೋದೆ. ಟೀ ಕುಡಿಯುತ್ತ ಹಾಗೆ ಸುತ್ತಲೂ ನೋಡುತ್ತಿರುವಾಗ, ಕ್ಯಾಷಿಯರ್ ಪಕ್ಕದಲ್ಲಿ ನೇತು ಹಾಕಿದ್ದ ಒಂದು ಫೋಟೋ ಗಮನ ಸೆಳೆಯಿತು.
ಟೀ ಕುಡಿದು ಹಣ ಕೊಡಲು ಅವನ ಹತ್ತಿರ ಹೋಗಿ ವಿಚಾರಿಸಿದೆ., ಏನ್ ಗುರು ಯಾವ ಊರು, ನಿನ್ನನ್ನ ನೋಡೀದರೆ ನಮ್ಮ ಕೇರಳ ಕಡೆ ಯವನ ತರಹ ಕಾಣ್ತೀಯಲ್ಲ ಅಂತ ಕೇಳಿದೆ.
ಹೌದು ಸಾರ್ ನಂದು ಕೇರಳ, ನಿಮ್ಮದು ಯಾವ ಕಡೆ,.
- ನನ್ನದು ಕರ್ನಾಟಕ, ಅದೇನು ಕೇರಳದಿಂದ ಇಷ್ಟು ದೂರ ಬಂದಿದ್ದೀಯಲ್ಲ ಹೇಗೆ ಎಂದೆ.
ಸಾರ್, ಬೆಂಗಳೂರಿನಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡ್ತಾಯಿದ್ದೆ. ನಂತರ ತುಮಕೂರ್ ರಸ್ತೆಯಲ್ಲಿ ಒಂದು ಕಾಕಾ ಹೋಟೆಲ್ ಶುರು ಮಾಡಿದೆ. ಎರಡು ಮೂರು ವರ್ಷ ಚೆನ್ನಾಗಿ ನಡೀತಾಯಿತ್ತು.  ನಮ್ಮ ಪಕ್ಕದಲ್ಲಿ ಇನ್ನೂ ಒಂದು ದಾಬಾ ಶುರುವಾಯಿತು, ಅದರಿಂದ ನಮ್ಮ ವ್ಯಾಪಾರ ಸಹ ಸ್ವಲ್ಪ ಡಲ್ ಹೊಡೆಯಲಿಕ್ಕೆ ಶುರು ಮಾಡಿತು. ನಮ್ಮ ಹೋಟೆಲ್ ಗೆ  ಡೆಲ್ಲಿ ಕಡೆಯಿಂದ ಆಗಾಗ್ಗೆ ಒಬ್ಬ ಲಾರಿಯವನು ಬರ್ತಾಯಿದ್ದ, ಬಹಳಷ್ಟು ಸಾರಿ ಬಂದಿದ್ದರಿಂದ ಪರಿಚಯ ಆಗಿತ್ತು. ಅರೇ ಭಾಯಿ ನೀನು ನಮ್ಮ ಕಡೆ ಬಂದು ಅಲ್ಲಿ ಹೋಟೆಲ್ ಶುರು ಮಾಡು, ಈ ನಿನ್ನ ಅಡಿಗೆ ಟೇಸ್ಟಿಗೆ ಒಳ್ಳೆ ವ್ಯಾಪಾರ ಆಗುತ್ತೆ ಅಂತ ಯಾವಾಗಲು ಹೇಳ್ತಾಯಿದ್ದ. ಒಂದು ದಿನ ಅವನ ಲಾರಿಯಲ್ಲಿ ಸಾಮಾನು ಹಾಕಿಕೊಂಡು ಬಂದು ಇಲ್ಲಿ ಸೆಟ್ಲ್ ಆಗಿಬಿಟ್ಟೆ ಅಂತ ಹೇಳಿದ. ಸುತ್ತ ಮುತ್ತ ಸುಮಾರು ಜನ ಕೇರಳದವರು ಇದ್ದಾರೆ, ಆದ್ದರಿಂದ ಎಲ್ಲ ಚೆನ್ನಾಗಿ ನಡೀತಾಯಿದೆ.
- ಇದೇನು ಇಷ್ಟು ದೊಡ್ಡವರ ಜತೆ ಪೋಟೋ ತೆಗೆಸಿಕೊಡಿದೀಯಾ?
ಅವನು ಹೌದು ಸಾರ್,  ಅದೇನಾಯಿತು ಅಂದ್ರೆ, ಒಂದು ದಿನ ನಾಲ್ಕೈದು ದೊಡ್ಡ ದೊಡ್ಡ ಕಾರುಗಳು ಬಂದವು, ಅದರಲ್ಲಿದ್ದ ಗನ್ ಮ್ಯಾನ್ ಗಳು ಹೊರ ಬಂದು ಅದೇನೋ ಮಾತನಾಡಿಕೊಂಡು ಕಾರ್ ಸುತ್ತ ಮುತ್ತ ನಿಂತು ಕೊಂಡರು., ನಮ್ಮ ಹೋಟೇಲ್ ಗೂ ಸಹ ಕೆಲ ಜನ ಬಂದು ನಿಂತು ಕೊಂಡರು. ನಾವು ಏನಾಗ್ತಾಯಿದೆಯಪ್ಪಾ ಅಂತ ಭಯ ಬಿದ್ದಿವಿ. ಆಮೇಲೆ ಗೊತ್ತಾಗಿದ್ದು ಏನೆಂದರೆ, ರಾಹುಲ್ ಗಾಂಧಿಯವರು ಎಲ್ಲೋ ಹೊರಟಿದ್ದರಂತೆ, ಅವರಿಗೆ ಟೀ ಕುಡಿಬೇಕೆನಿಸಿತಂತೆ ಹೀಗಾಗಿ ನಮ್ಮ ಹೋಟೆಲ್ ನೋಡಿ ಗಾಡಿ ನಿಲ್ಲಿಸಿ ಟೀ ಕುಡಿದು ಹೋದರು. ಆ ಖುಷಿಗಾಗಿ ತೆಗೆದ ಫೋಟೋ ಇದು.
ಇನ್ನೊಂದು ವಿಷಯ ಗೊತ್ತಾ, ಈಗ ಅವರು ನಮ್ಮ ಕೇರಳದ ಎಂಪಿ ಗೊತ್ತಾ ಅಂದ.
- ಗೊತ್ತು ಕಣ್ರೀ, ಮುಂದೇನಾಯಿತು?
ಹಾಂ!! ಮೊನ್ನೆ ಬಂದಾಗ ಅವರಿಗೆ ಒಂದು ಪ್ರಪೋಸಲ್ ಕೊಟ್ಟಿದೀನಿ.
- ನನಗೆ ಆಶ್ಚರ್ಯ ಆಯಿತು, ಏನಾದರು ಮದುವೆ ಪ್ರಪೋಸಲ್ ಕೊಟ್ಟಿದ್ದಾನಾ ಅಂತ ಕೇಳೀದೆ. ಏನು ಮದುವೆ ಪ್ರಪೋಸಲ್ಲಾ?
"ಅಲ್ಲ ಭಾಯ್, ಸೆಕ್ಯುಲರ್ ಇಂಡಿಯಾಗೆ ಸೆಕ್ಯುಲರ್ ಭಾಷೆ ಯಾಗಿರೋ ಮಲೆಯಾಳಂ ಅನ್ನು ರಾಷ್ಟ್ರಭಾಷೆ ಮಾಡಿ ಅಂತ."
- ಅವನ ಮಾತು ಕೇಳಿ ನನಗೆ ತಲೆ ತಿರುಗಿ ನೆಲಕ್ಕೆ ಬೀಳೋದೊಂದೇ ಬಾಕಿ. ಸ್ವಲ್ಪ ಸಾವರಿಸಿಕೊಂಡು, ಯಾಕೆ ಸಿವಾ ಬೇರೆ ಏನ್ ಐಡಿಯಾ ಸಿಗಲಿಲ್ವೆ ನಿಂಗೆ?
- ಭಾಯ್, ಸ್ವಲ್ಪ ಯೋಚನೆ ಮಾಡಿ ನೋಡು. ನಾವು ಗಳು ಒಂಥರಾ ಸರ್ವಂತಾರಯಾಮಿ ಇದ್ದಂಗೆ. ನಿಮ್ಮ ಬೆಂಗಳೂರಿನಿಂದ ಡೆಲ್ಲಿ ವರೆಗೂ ಯಾವುದೇ ಸಿಟಿಗೆ ಹೋಗಿ, ಮಲೆಯಾಳಿಗಳು ಸಿಕ್ಕೇ ಸಿಗ್ತಾರೆ. ಮಲೆಯಾಳಿಗಳು ಇಲ್ಲದ ಸಿಟಿಗಳು, ಸ್ಟೇಟ್ ಗಳು, ದೇಶಗಳು ಇಲ್ಲ. ಈಗ ನೀವು ಯಾವುದೇ ಹಾಸ್ಪಿಟಲ್ ಗೆ ಹೋಗಿ, ಮಲೆಯಾಳಿ ನರ್ಸ್ ಅನ್ನು ಕಾಣ್ತಿರಿ ಅಲ್ವೆ. ಮಿಲಿಟರಿ ನಲ್ಲಿ ನಮ್ಮ ಕೇರಳದವರು ಎಷ್ಟೊಂದು ಜನ ಇದ್ದಾರೆ ನೋಡಿ.
ಗಲ್ಫ್ ರಾಷ್ಟ್ರಗಳಲ್ಲಿ, ಅಲ್ಲಿನ ಅರಬ್ಬರಿಗಿಂತ ಮಲೆಯಾಳಿಗಳು ಅಧಿಕರಾಗಿದ್ದಾರೆ ಗೊತ್ತಲ್ವ. ಗಲ್ಫ್ ರಾಷ್ಟ್ರಗಳಲ್ಲಿ, ನೀವು ಇಂಡಿಯಾದವರ ಅಂದ್ರೆ, ಕೇರಳದವರಾ ಅಂತ ಕೇಳ್ತಾರೆ.
ಒಂದು ಜೋಕ್ ಗೊತ್ತಲ್ಲ ನಿಂಗೆ. ಚಂದ್ರ ನ ಮೇಲೆ ನೀಲ್ ಆರ್ಮ್ ಸ್ಟ್ರಾಂಗ್ ಕಾಲು ಇಟ್ಟಾಗ, ಚಾಯ್, ಕಾಫೀ, ಟೀ ಅಂತ ಕೇಳಿ ಬಂತಂತೆ. ನೀಲ್ ಆರ್ಮ್ ಸ್ಟ್ರಾಂಗ್ ಗೆ ಯಾವನಪ್ಪ ಇವನು ನನಗಿಂತ ಮುಂಚೇನೆ ಇಲ್ಲಿ ಕಾಲಿಟ್ಟಿರೋನು? ಅಂತ ತಿರುಗಿ ನೋಡಿದರೆ ಹಿಂದೆ ಮಲೆಯಾಳಿ ಕಾಕ ಹೋಟೆಲ್........

ಅದೆಲ್ಲ ಸರಿ, ಈ ಸೆಕ್ಯುಲರ್ ಮದ್ಯೆ ಯಾಕೆ ಬಂತು?

- ನೋಡಿ ಭಾಯ್ ನಮ್ಮ ಸ್ಟೇಟ್ ಮಾತ್ರ ಸ್ಪೆಶಿಯಲ್, ನಿಮ್ಮ ಸ್ಟೇಟ್ ನಲ್ಲಿ ಮುಸ್ಲಿಮ್ಸ್ ಉರ್ದು ಮಾತಾಡ್ತಾರೆ. ಮಂಗಳೂರಿಗೆ ಹೋದರೆ ಬ್ಯಾರಿ ಮಾತಾಡ್ತಾರೆ. ಹಿಂದುಗಳು, ಕನ್ನಡ, ತುಳು ಕೊಂಕಣಿ ಮಾತಾಡ್ತೀರಿ. ಆದರೆ ನಮ್ಮ ಕೇರಳದ ಎಲ್ಲ ಧರ್ಮದವರೂ ಮಲೆಯಾಳಿಯನ್ನೆ ಮಾತಾಡ್ತೀವಿ, ಈಗ ಹೇಳಿ, ನಾವು ಸೆಕ್ಯುಲರ್ ತಾನೆ.
ಇಡೀ ಇಂಡಿಯಾದಲ್ಲಿ, ಬಿಜೆಪಿ ಸ್ಟ್ರಾಂಗ್ ಆಗಿದೆ.  ಆದರೆ ನಮ್ಮ ಕಡೆ ಯಾವಾಗಲು LDF ಅಥವ UDF ನಡುವೇ ಫೈಟ್. ಕೇರಳದಲ್ಲಿ ಮಾತ್ರ ಬಿಜೆಪಿ ಇನ್ನೂ ಬೆಳೆದಿಲ್ಲ. ಹೀಗಾಗಿ ನಾವು ಸೆಕ್ಯುಲರ್ ತಾನೆ.
 ಅದೂ ಅಲ್ಲದೆ, ಎಲ್ಲ ಧರ್ಮದವರೂ ಬೀಫ್ ತಿಂತೀವಿ. ಬೇರೆಯವರ ತರಹ ಭೇದ ಭಾವ ಮಾಡಲ್ಲ.  ಆದರೆ, ನೀವು?
ಹಿಂದಿನ ಸುಪ್ರೀಂ ಕೋರ್ಟ್ ನ್ಯಾಯಾದೀಶರಾಗಿದ್ದ ಮಾರ್ಕಂಡೇಯ ಕಾಟ್ಜು ಹೇಳಿದ್ರಲ್ಲ, ಮಲೆಯಾಳಿಗಳು ನಿಜವಾದ ಭಾರತೀಯರು ಅಂತ.
ಅಂತಹ ದೊಡ್ಡವರೇ ಹೇಳಿದ್ ಮೇಲೆ, ನಾವು ಸೆಕ್ಯುಲರ್ ಇಂಡಿಯಾದ ನಿಜವಾದ ಪ್ರಜೆಗಳು ಅಲ್ವೆ.

ಅಯ್ಯೋ, ಇದೇನ್ ತಲೆ ನೋವು. ಇವನೇನ್ ಎಲ್ಲಿಂದ ಎಲ್ಲಿಗೆ ಸಂಭಂದ ಕಲ್ಪಿಸ್ತಾನಲ್ಲ? ಅದೆಲ್ಲ ಸರಿ, ಮಲೆಯಾಳಂ ಅನ್ನೇ ರಾಷ್ಟ್ರ ಭಾಷೆ ಯಾಕೆ ಮಾಡಬೇಕು.
ಆಗಲೇ ಹೇಳಿದೆನಲ್ಲ ಸಾರ್, ಮುಸ್ಲಿಮರು ಕುರಾನ್ ಅನ್ನು ಮಲೆಯಾಳಂ ಅಲ್ಲಿ ಪಠಣ ಮಾಡ್ತೀವಿ, ಹಿಂದು ಗಳು ಮಲೆಯಾಳಂ ನಲ್ಲಿಯೇ ಪೂಜೆ ಮಾಡ್ತಾರೆ, ಅದೇ ರೀತಿ ಕ್ರಿಶ್ಚಿಯನ್ ರು ಮಲೆಯಾಳಂ ನಲ್ಲಿ ಮಲೆಯಾಳಂ ನಲ್ಲಿ ಪ್ರೇಯರ್ ಮಾಡ್ತಾರೆ... ಅದಕ್ಕೆ ಮಲೆಯಾಳಂ ಸೆಕ್ಯುಲರ್ ಭಾಷೆ ಅನ್ನೋದು. ಧರ್ಮ ಭೇದ ಇಲ್ಲ. ಇಂತಹ ಭಾಷೆಯನ್ನ ರಾಷ್ಟ್ರಭಾಷೆ ಮಾಡೋದ್ರಲ್ಲಿ ತಪ್ಪೇನಿದೆ?
ಎಲ್ಲ ಕಡೆ ಮಲೆಯಾಳಿಗಳು ಇರೋದ್ರಿಂದ, ನೀವೆಲ್ಲ ಮಲೆಯಾಳಂ ಮಾತಾಡಿದ್ರೆ ವ್ಯವಹಾರ ಮಾಡೋಕೆ ಸಲೀಸಾಗುತ್ತೆ. ಇದರಿಂದ ನಿಮಗೆ ಅನುಕೂಲ ಅಲ್ವೆ. ಮಲೆಯಾಳಂ ಗೊತ್ತಿದ್ದ್ರೆ ಮಲೆಯಾಳಿಗಳು ಮಲೆಯಾಳಂ  ಅಲ್ಲಿ ಬೈಯೋಕೆ ಆಗಲ್ಲ. ಸುಂದರವಾಗಿರುವ ಮಲೆಯಾಳಿ ಕುಟ್ಟಿಗಳನ್ನು ನಿಮ್ಮ ಹುಡುಗರು ಮದುವೆ ಯಾಗಬಹುದು. ಹೀಗೆ, ರಾಜ್ಯಗಳ ಭಾಂಧವ್ಯ ಬೆಸೆಯುತ್ತ ಹೋಗುತ್ತೆ. ಒಂದು ರಾಷ್ಟ್ರ, ಒಂದು ಭಾಷೆ ಕಲ್ಪನೆ ಅಧ್ಭುತ ವಾಗಿರುತ್ತೆ.

ಇದೆಲ್ಲ ಸರಿ, ಅದಕ್ಕೆ ದೊಡ್ಡವರು ಏನ್ ಹೇಳಿದರು.

- ಅವರಿಗೆ ನನ್ನ ವಾದ ಕೇಳಿ ಖುಷಿ ಯಾಗೋಯ್ತು. ಮಲೆಯಾಳಿಗಳು ಈಗಾಗಲೆ ಎಲ್ಲ ಸ್ಟೇಟ್ ಗಳನ್ನು ಹೈವೆ ರೋಡ್, ರೈಲ್ವೇ ನೆಟ್ ವರ್ಕ್ ತರಹ ಬೆಸೆದು ಬಿಟ್ಟಿದ್ದೀರಿ. ಎಲ್ಲಿ ಹೋದರು ಮಲೆಯಾಳಿಗಳು. ತುಂಬಾ ಗ್ರೇಟ್ ಇದ್ದೀರಿ ನೀವು ಅಂದರು. ಅದಕ್ಕೆ ಸಾರ್ ಎಲ್ಲ ಸ್ಟೇಟ್ ಗಳಲ್ಲಿ ಮಲಯಾಳಂ ಕಲಿಸಿ ಸರ್ರೇ,  ಎಂದು ಕೇಳಿದ್ವಿ.
ಆಯ್ತು ನೋಡೋಣ ಅಂತ ಹೇಳಿ ಹೋದರು.

ನಮ್ಮ ರಾಜ್ಯದಲ್ಲಿ ಈಗಾಗಲೇ ಹಿಂದಿ ಹೇರಿಕೆ ಬೇಡ ಅಂತ ಹೋರಾಟ ಮಾಡ್ತಾ ಯಿದ್ದಾರೆ, ಅದರಲ್ಲಿ ಇದೇನಪ್ಪ ಹೊಸ ತಲೆನೋವು. ನಮ್ಮ ಜನರಿಗೆ ಈಗಲೇ ಅರಿವು ಮೂಡಿಸಬೇಕು. ನಾಳೆ ಟೌನ್ ಹಾಲ್ ಅಲ್ಲಿ ಹೋರಾಟ ಮಾಡಬೇಕು. ಮಲೆಯಾಳಂ ಹೇರಿಕೆ ಬೇಡ ಅಂತ.
ಆದರೆ ಸೆಕ್ಯುಲರ್ ಭಾಷೆ ಕಲಿಯೋದೇನು ತಪ್ಪು ಅಂತ ನಮ್ಮ ಜನ ಹೋರಾಟ ಮಾಡ್ತಾರ ಅಂತ ನನಗೆ ಯೋಚನೆ ಶುರು ಆಯಿತು, ಒಂದೊಂದ್ ಸಾರಿ ಸ್ಪಷ್ಟ ಕನ್ನಡ ಮಾತನಾಡೋಕೆ ನಾಲಿಗೆ ಹೊರಳಲ್ಲ, ಅಂತದ್ರಲ್ಲಿ, ಮಲೆಯಾಳಂ ಮಾತನಾಡಬೇಕೆನಪ್ಪ, ಎಂದ ದೈವಮೇ..........
ನ್ಯಾನ್ ಮಲೆಯಾಳಂ ಕಲಿಯಲ್ಲ ಚೇಟಾ, ಇದ್ ಎಂದಾಣೋ ನಂಗೆ ಇದೋಡ ಸಾವಸಂ ವೇಂಡ.......
ರೀ ರೀ ಅಂತ ಕರೆದಂಗಾಯ್ತು, ಅದ್ರೆ ನಂಗೆ ಚೇಟಾ, ಚೇಟಾ ಅಂತ ........
ರೀ ಆಫೀಸ್ ಇಲ್ವೇನ್ರಿ, ಅಂದ್ರೆ,, ಆಫೀಸ್ ಇಲ್ಲಿಯೋ....... ಅಂತ ಕೇಳಿಸಿದ ಹಾಗಿತ್ತು.....
ಎದ್ದು ಕಣ್ಣು ಬಿಟ್ಟು ನೋಡಿದ್ರೆ, ಮನೆಯಲ್ಲಿದ್ದೀನಿ.
ಅಬ್ಬಾ,,, ಇಷ್ಟೊತ್ತು ನೋಡಿದ್ದು ಕನಸೋ.....   ಬದುಕಿದೆ ಬಡಜೀವ, ಮಲೆಯಾಳಂ ಕಲಿಯೋದು ತಪ್ಪಿತು....ಸದ್ಯ ಕನಸಾಗಿದ್ದು ಒಳ್ಳೇದಾಯ್ತು ಅಂತ ದಡಬಡಸಿ ಎದ್ದೆ.

ಬರಹ: ಪಿ.ಎಸ್.ರಂಗನಾಥ.

Click below headings