ಮಂಗಳವಾರ, ನವೆಂಬರ್ 17, 2020

ಒಮಾನ್: ಸುಲ್ತಾನ್ ಕಾಬೂಸ್ ಬಿನ್ ಸಯೀದ್ ಮತ್ತು ಆ 50 ವರ್ಷ


ಲೇಖನ: ಪಿ.ಎಸ್.ರಂಗನಾಥ, ಮಸ್ಕತ್. ಒಮಾನ್.

ಮತ್ತೊಮ್ಮೆ ನವೆಂಬರ್ 18 ಬಂದಿದೆ.  ಈ ದಿನದ ವಿಶೇಷ ವೇನೆಂದರೆ, ಒಮಾನ್ ರಾಷ್ಟ್ರದ ಈ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ಅಲ್ ಸಯೀದ್ ರವರ ಜನ್ಮದಿನ, ಅವರು ಒಮಾನ್ ರಾಷ್ಟ್ರದ ಆಡಳಿತ ವಹಿಸಿಕೊಂಡಾಗಿನಿಂದ, ಅವರ ಜನ್ಮದಿನವನ್ನು ಇಲ್ಲಿನ ಪ್ರಜೆಗಳು ಒಮಾನ್ ರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾರೆ. ಕಾಕತಾಳೀಯವೆಂಬಂತೆ, 1650 ರಲ್ಲಿ ಪೋರ್ಚಗೀಸ್ ರಿಂದ ಸ್ವಾತಂತ್ರ್ಯಗೊಂಡ ದಿನವೂ ಸಹ ನವೆಂಬರ್ ಹದಿನೆಂಟು. ಹೀಗಾಗಿ, ಒಮಾನ್ ದೇಶದಲ್ಲಿ ನವೆಂಬರ್ 18ನೇ ತಾರೀಖಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.  ಸುಲ್ತಾನರ ಜನ್ಮದಿನದ ನೆನಪಿಗಾಗಿ ಮಸ್ಕತ್ ನಲ್ಲಿ 18ನೇ ನವೆಂಬರ್  ಸ್ಟ್ರೀಟ್ ಎನ್ನುವ ಹದಿನೇಳು ಕಿ.ಮಿ. ಉದ್ದದ ರಸ್ತೆ ಸಹ ಇದೆ.

1970ರಲ್ಲಿ ಒಮಾನ್ ದೇಶದ ಸುಲ್ತಾನ್ ಆಗಿ ಅಧಿಕಾರ ಸ್ವೀಕರಿಸಿದ್ದ ಇವರು, 49 ವರ್ಷಗಳ ಅತಿ ದೀರ್ಘಕಾಲ ದೇಶದ ಆಳ್ವಿಕೆ ನಡೆಸಿದ್ದರು. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಇವರು10 ಜನವರಿ 2020 ರಂದು ನಿಧನರಾಗಿದ್ದು, ಅವರು ಬದುಕಿದ್ದಿದ್ದರೆ ಅವರ ಆಳ್ವಿಕೆಯ 50ನೇ ವರ್ಷ ಸಂಪೂರ್ಣವಾಗಿ, ಅವರಿಗೆ 80 ವರ್ಷ ತುಂಬಿರುತಿತ್ತು. ಈ ಬಾರಿ "ಸುಲ್ತಾನ್ ಕಾಬೂಸ್" ರವರ ಅನುಪಸ್ಥಿತಿಯಲ್ಲಿ ಈಗಿನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ಐವತ್ತನೇ ರಾಷ್ಟ್ರೀಯ ದಿನಾಚರಣೆ ಆಚರಿಸಲಾಗುತ್ತಿದೆ.

ಒಮಾನ್ ದೇಶದ ಇಂದಿನ ಅಭಿವೃದ್ಧಿಗೆ,  ಜನಮಾನಸದಲ್ಲಿ ನೆಲೆಸಿರುವ  ಸುಲ್ತಾನ್ ಖಾಬೂಸ್‌ರವರ ಕೊಡುಗೆ ಬಹಳಷ್ಟಿದೆ. ಅವರು ಒಮಾನ್ ದೇಶದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮುಂಚಿನ ಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿ ಗೆ ಅಜಗಜಾಂತರ ವ್ಯತ್ಯಾಸವಿದೆ. ಈ ಕಾರಣಕ್ಕೆ, ಅಂದಿನ ಪರಿಸ್ಥಿತಿಯನ್ನು ನೋಡಿದವರು, ಇವರ ಆಳ್ವಿಕೆಯಲ್ಲಿ ಕಂಡ ಬದಲಾವಣೆಗಳನ್ನ ನೋಡಿ ಸುಲ್ತಾನ್ ರನ್ನು ದೇವರ ಇನ್ನೊಂದು ರೂಪದಲ್ಲಿ ನೋಡುತ್ತಿದ್ದರು. ಹಿಂದಿನ ಮತ್ತು ಇವರ ಆಡಳಿತ, ಎರಡನ್ನೂ ನೋಡಿರುವ ಹಳೇ ತಲೆಮಾರಿನ ಒಮಾನಿನ ಜನತೆ, ಇಂದಿನ ತಲೆಮಾರಿನವರಿಗೆ ಎಲ್ಲವನ್ನು ಮನಮುಟ್ಟುವಂತೆ ಕಾಲಕಾಲಕ್ಕೆ ತಮ್ಮ ಎಲ್ಲ ಅನುಭವಗಳನ್ನ ಹೇಳುತ್ತಾ ಬಂದಿದ್ದಾರೆ. ಹೀಗಾಗಿ, ಬಹಳಷ್ಟು ಜನರು ಅವರನ್ನು "ಬಾಬ" ಎಂದೇ‌ ಕರೆಯುತ್ತಾರೆ. ಅವರು ಅಧಿಕಾರ ವಹಿಸಿಕೊಳ್ಳುವ ಮುಂಚೆ ಕೇವಲ ಬೆರಳೆಣಿಕೆಯಷ್ಟು ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಬರೀ ನೂರಾರು ಕಿ.ಮಿ. ಉದ್ದದ ಡಾಂಬಾರ್ ರಸ್ತೆ ಗಳು ಮಾತ್ರ ನಿರ್ಮಾಣ ಗೊಂಡಿದ್ದವು.  ಆಗ ಒಮಾನ್ ಜಾಗತಿಕ ಬದಲಾವಣೆಗೆ ಇನ್ನೂ ಮುಕ್ತವಾಗಿರಲಿಲ್ಲ. ವಿದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿಬಂದಿದ್ದ ಸುಲ್ತಾನ್ ರವರು, ಈ ಬಗ್ಗೆ ಪ್ರತಿಯೊಂದನ್ನೂ ಅವಲೋಕಿಸಿ ಒಮಾನ್ ದೇಶದ ಬದಲಾವಣೆಗೆ ಮುನ್ನುಡಿ ಬರೆದರು.  

ಈ ಐವತ್ತು ವರ್ಷಗಳಲ್ಲಿ, ಒಮಾನ್ ದೇಶದಲ್ಲಿ ಅತ್ಯುತ್ತಮ ಆಸ್ಪತ್ರೆ ಗಳು, ಶಾಲಾ ಕಾಲೇಜುಗಳು, ಅಂತರಾಷ್ಟ್ರೀಯ ಮಟ್ಟದ ರಸ್ತೆಗಳು, ಕ್ರೀಡಾಂಗಣಗಳು, ಸತತ ವಿದ್ಯುತ್, ನೀರು, ಎಲ್ಲರಿಗೂ ಉದ್ಯೋಗ, ಜನಸಾಮಾನ್ಯರು ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ಬಡ್ಡಿ ರಹಿತ ಸಾಲದ ವ್ಯವಸ್ಥೆಯನ್ನ ಜಾರಿಗೆ ತಂದರು. ದೇಶದಲ್ಲಿ ಎಲ್ಲ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ. 35 ರಷ್ಟು ಮೀಸಲಾತಿ ಜಾರಿ ಮಾಡಿದ್ದಾರೆ. ಅದು ಮುಂದೆ ಐವತ್ತರಷ್ಟು ತಲುಪುವ ಗುರಿಯನ್ನು ಮುಂದಿಟ್ಟಿದ್ದಾರೆ. 3 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಒಮಾನ್ ರಾಷ್ಟ್ರದಾದ್ಯಂತ ಅಂತರಾಷ್ಟ್ರೀಯ ದರ್ಜೆಯ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ ಪ್ರಪಂಚದ ಅತ್ಯುತ್ತಮ 10 ರಾಷ್ಟ್ರಗಳ ಪಟ್ಟಿಯಲ್ಲಿ ಒಮಾನ್ ಗೆ ಸ್ಥಾನ ಸಿಗುವಂತೆ ಮಾಡಿದೆ. ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ. ಬೇರೆ ರಾಷ್ಟ್ರಗಳಲ್ಲಿ ದೊರಕುವಂತೆ ಇಲ್ಲಿ ಅನಿಲ ಮತ್ತು ಪೆಟ್ರೋಲ್ ಸಂಪನ್ಮೂಲಗಳು ಕಡಿಮೆ. ಆದರೂ ಅದರಲ್ಲಿ ಬರುವ ಆದಾಯದಿಂದ ಒಮಾನ್‌ನಾದ್ಯಂತ ಹಲವಾರು ಯೋಜನೆಗಳನ್ನು ರೂಪಿಸಿ ಸಂಪೂರ್ಣ ಸಶಕ್ತ ರಾಷ್ಟ್ರ ನಿರ್ಮಿಸಿದ್ದಾರೆ. ಹೀಗೆ, ಅವರ ಕಾರ್ಯಗಳು ಮನೆ ಮನ ಮುಟ್ಟಿದವು.  ಅವರ ಪ್ರತಿಯೊಂದು ಕಾರ್ಯಗಳನ್ನು ಒಮಾನಿನ ಪ್ರತಿಯೊಬ್ಬರೂ ಶ್ಲಾಘಿಸುತ್ತಾರೆ.  ಇವರ ನಾಯಕತ್ವದಲ್ಲಿ ಒಮಾನ್ ರಾಷ್ಟ್ರ ಸತತ ಅಭಿವೃದ್ದಿ ಕಂಡಿದೆ. ದೇಶ ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಪ್ರಗತಿಯತ್ತ ಸಾಗಿದೆ. ಸಂಪೂರ್ಣ ಒಮಾನ್‌ನ ವಿವಿಧ ಪ್ರಾಂತ್ಯದ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತ ನೀಡುವಲ್ಲಿ ಅವರು ಯಶಸ್ವಿಯಾಗಿದ್ದರು.  ಸರ್ಕಾರದ ಕೊಡುಗೆಗಳಿಂದ ಬದುಕುವುದಕ್ಕಿಂತ, ಸ್ವಾವಲಂಬಿಯಾಗಿ ಬದುಕುವುದು ಹೇಗೆ ಎಂದು ಜನರಿಗೆ ಪ್ರೇರೇಪಿಸಿ, ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದರು.

ಒಮಾನ್ ದೇಶದಲ್ಲಿ, ಮಾನವ ನಿರ್ಮಿತ ಪ್ರವಾಸಿ ತಾಣಗಳಿಗಿಂತ ನೈಸರ್ಗಿಕ ನಿರ್ಮಿತ ಹಲವಾರು ಅದ್ಭುತ ತಾಣಗಳಿವೆ. ಅಂತಹ ಪ್ರವಾಸಿತಾಣಗಳನ್ನ ಅಭಿವೃದ್ದಿ ಪಡಿಸಿ, ಲಕ್ಷಾಂತರ ವಿದೇಶಿ  ಪ್ರವಾಸಿಗರು ಭೇಟಿನೀಡುವಂತೆ ಮಾಡಿದ್ದಾರೆ. ಈ ಮೂಲಕ ಸಾವಿರಾರು ಒಮಾನಿಗಳು ಸ್ವಾವಲಂಬಿಯಾಗಿ ಬದುಕುವುಂತೆ ಮಾಡಿದ್ದಾರೆ. 

ತಮ್ಮ ಸರಳ ವ್ಯಕ್ತಿತ್ವ, ನಡೆ ನುಡಿಯಿಂದ ಸುಲ್ತಾನ್ ಖಾಬೂಸ್ ಒಮಾನ್ ಪ್ರಜೆಗಳಲ್ಲದೆ, ಭಾರತೀಯರು ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ಉದ್ಯೋಗಕ್ಕಾಗಿ ಬಂದಿರುವ ಪ್ರತಿಯೊಬ್ಬ ವಲಸಿಗರಿಗೂ ಮತ್ತು ಪಕ್ಕದ ಜಿಸಿಸಿ ರಾಷ್ಟ್ರಗಳ (ಯುಏಇ, ಸೌದಿ ಅರೇಬೀಯಾ, ಕುವೈತ್, ಬಹರೇನ್, ಕತಾರ್) ಜನರಿಗೂ ಸಹ ಪ್ರೀತಿ ಪಾತ್ರರಾಗಿದ್ದರು. ಒಮಾನಿನ ಅಚ್ಚು ಮೆಚ್ಚಿನ ರಾಜರಾಗಿದ್ದ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಸುಲ್ತಾನ್‌ರವರಿಗೆ ಪ್ರತ್ಯೇಕವಾದ ಸ್ಥಾನವಿದೆ. ಈ ಪ್ರದೇಶದ ಶಾಂತಿ ನೆಲೆಸುವಲ್ಲಿ ಅವರ ಪಾತ್ರ ಮುಖ್ಯವಾದುದು. ಅವರೊಬ್ಬ ಪ್ರಶ್ನಾತೀತ ನಾಯಕನಾಗಿದ್ದರು. ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಾಗಿದ್ದ ಧೀಮಂತ ನಾಯಕ ಅವರು. 

ಅವರು ಮಾಡಿರುವ ಎಲ್ಲಾ ಕೆಲಸಗಳು ಇಲ್ಲಿನ‌ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ತಮ್ಮ ಅಧಿಕಾರಾವಧಿಯಲ್ಲಿ ಪ್ರಜೆಗಳೊಂದಿಗೆ, ಪಕ್ಕದ ರಾಷ್ಟ್ರಗಳು ಹಾಗೂ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಾಗ ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸುತಿದ್ದರು. 2013ರಲ್ಲಿ ಇರಾನ್ ಮತ್ತು ಅಮೆರಿಕಾ ಮಧ್ಯೆ ಶೀತಲ ಸಮರ ತಾರಕಕ್ಕೇರಿದಾಗ ಎರಡು ರಾಷ್ಟ್ರಗಳ ಮನವೊಲಿಸಿ ಅಂದಿನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಹೀಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಇವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಮಧ್ಯ ಪ್ರಾಚ್ಯದಲ್ಲಿ ಕೆಲ ರಾಷ್ಟ್ರಗಳ ಸರ್ವಾಧಿಕಾರಿ ಧೋರಣೆ ಖಂಡಿಸಿ ಒಂದಲ್ಲ ಒಂದು ಕಡೆ ದಂಗೆಗಳು, ಯುದ್ಧಗಳು, ಸರಕಾರ ಮತ್ತು ಬಂಡುಕೋರರ ಯುದ್ಧ ಭೀತಿ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶದಲ್ಲೂ ಸಹ ಒಮಾನ್ ದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಅವರು ಜನ ಮನ್ನಣೆ ಗಳಿಸಿದ್ದರು.


ಒಮಾನ್ ನಲ್ಲಿ ಭಾರತೀಯರು:  ಈ ಹಿಂದೆ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಭಾರತೀಯ ಉದ್ಯಮಿಗಳು, ಒಮಾನ್ ದೇಶಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅದರಲ್ಲಿ ಕಿಮ್ಜಿ ಕುಟುಂಬ ಪ್ರಮುಖವಾದುದು. ಅವರಿಗೆ ಒಮಾನ್‌ನ ಅತ್ಯುನ್ನತ ಶೇಖ್ ಪದವಿಯನ್ನು ನೀಡಿ ಗೌರವಿಸಲಾಗಿದೆ. ಹಿಂದೂಗಳಿಗೆ ದೇವಸ್ಥಾನಗಳು, ಕ್ರಿಶ್ಚಿಯನ್‌ರಿಗೆ ಚರ್ಚ್‌ಗಳು ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಜತೆಗೆ ಒಮಾನ್ ದೇಶದ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ ನೂರಾರು ಭಾರತೀಯರಿಗೂ ಸಹ ಪೌರತ್ವ ನೀಡಿದ್ದಾರೆ. ಸುಮಾರು ಇಪ್ಪತ್ತು ಲಕ್ಷದಷ್ಟು ವಲಸಿಗರಿರುವ ಒಮಾನ್ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಇಲ್ಲಿ ನೆಲೆಸಿದ್ದಾರೆ. ಕಾರ್ಮಿಕನಿಂದ ಹಿಡಿದು, ಇಂಜಿನಿಯರ್, ಡಾಕ್ಟರ್, ಲೆಕ್ಚರರ್ಸ್, ಪ್ರೊಫೆಸರ್ಸ್, ಇನ್ನು ಮುಂತಾದ ಅತ್ಯುನ್ನತ ಉದ್ಯೋಗದಲ್ಲಿ ಭಾರತೀಯರು ಇಲ್ಲಿ ಕೆಲಸ ಮಾಡುತಿದ್ದಾರೆ. ಒಮಾನ್ ಜನರ ಅತಿ ನಂಬುಗೆಯ ಮತ್ತು ಅತಿ ಹೆಚ್ಚು ವಿಶ್ವಾಸ ಗಳಿಸಿರುವ ಮೊದಲ ಸಾಲಿನಲ್ಲಿ ಭಾರತೀಯರಿದ್ದಾರೆ. 


ಒಮ್ಮೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ಮಸ್ಕತ್ ನಲ್ಲಿ ನಮ್ಮ ಕನ್ನಡಿಗರು ಆಯೋಜಿಸಿದ್ದ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು. ಹೀಗೆ ಮಾತನಾಡುತ್ತ, ಒಮಾನ್ ದೇಶವನ್ನು ಮತ್ತು ಸುಲ್ತಾನ್ ರವನ್ನು ಬಾಯ್ತುಂಬ ಹೊಗಳಿದರು. ನಾವು ಶ್ರೀರಾಮನ ರಾಜ್ಯಭಾರದ ಕುರಿತು ಕೇಳಿದ್ವಿ, ಓದಿದ್ದಿವಿ. ಆದರೆ ಕಣ್ಣಾರೆ ಕಾಣುವ ಭಾಗ್ಯವಿರಲಿಲ್ಲ. ಅಂತಹ ಆಡಳಿತವನ್ನು ಇಲ್ಲಿನ ಜನರಿಗೆ ಅವರು ಕೊಟ್ಟಿದ್ದಾರೆ. ಅವರ ಆಡಳಿತವನ್ನು ನೀವೆಲ್ಲ ಕಾಣುತಿದ್ದೀರಿ. ಇಂತಹ ಆಡಳಿತ ಪ್ರತಿಯೊಂದು ದೇಶ ಮತ್ತು ರಾಜ್ಯಗಳಲ್ಲಿ ಬರಬೇಕು ಎಂದಿದ್ದರು.  


2014 ರಲ್ಲಿ  ಚಿಕಿತ್ಸೆಗಾಗಿ ತಿಂಗಳುಗಳ ಕಾಲ ಸುಲ್ತಾನ್ ರವರು ಜರ್ಮನಿಗೆ ಹೋಗಿದ್ದಾಗ , ಇಲ್ಲಿನ ಜನರು ಪ್ರಾರ್ಥನೆಗಳಲ್ಲಿ ತೊಡಗಿ, ಅವರು ಆರೋಗ್ಯವಂತರಾಗಿ ಮರಳಲು ಕಾಯುತಿದ್ದರು. ಬಂದ ನಂತರ ಒಮಾನಿನಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ನಡೆಯಿತು.  ಭಾರತದಲ್ಲೂ ಸಹ  ಅದರಲ್ಲೂ ನಮ್ಮ ಕರ್ನಾಟಕದ ಹಲವೆಡೆ, ಒಮಾನ್ ಸುಲ್ತಾನ್ ರ ಆರೋಗ್ಯಕ್ಕಾಗಿ ಪೂಜೆ, ಯಾಗಗಳೂ ನಡೆದಿದ್ದವು. ಮೂಡುಬಿದಿರೆಯ ಅನಿವಾಸಿ ಭಾರತೀಯರೊಬ್ಬರು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಮಹಾಯಾಗ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. 


ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, 2018 ರಲ್ಲಿ ಒಮಾನ್ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿದ್ದರು. ಇಲ್ಲಿನ ಸುಲ್ತಾನ್ ಕಾಬೂಸ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯರನ್ನ ಉದ್ದೇಶಿಸಿ ಕಾರ್ಯಕ್ರಮ ನಡೆಸಲು ಸೂಕ್ತ ಸುರಕ್ಷತೆ ಮತ್ತು ಭದ್ರತೆ ಯೊಂದಿಗೆ ಅನುವು ಮಾಡಿಕೊಡಲಾಗಿತ್ತು. ಸಾಮಾನ್ಯವಾಗಿ, ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಚಟುವಟಿಕೆ ಮತ್ತು ಸುಲ್ತಾನ್ ರವರ ಕಾರ್ಯಕ್ರಮ ಹೊರತು ಪಡಿಸಿ ಬೇರಾವುದೇ ಕಾರ್ಯಕ್ರಮ ಅಲ್ಲಿ ನಡೆಯುವುದಕ್ಕೆ ಅವಕಾಶವಿಲ್ಲ. ಆದರೆ ಭಾರತ ದೇಶದೊಂದಿಗಿನ ತಮ್ಮ ಉತ್ತಮ ಬಾಂಧವ್ಯ ದಿಂದ ಅಂತಹ ಕಾರ್ಯಕ್ರಮ ನಡೆಯಲು ಅವಕಾಶ ಮಾಡಿ ಕೊಟ್ಟಿದ್ದರು. 

ಒಮಾನ್ ರಾಷ್ಟ್ರ ದಿನಾಚರಣೆ: ಸಾಮಾನ್ಯವಾಗಿ ಈ ದಿನ ದಂದು ರಾಷ್ಟ್ರದೆಲ್ಲೆಡೆ, ಸಂಭ್ರಮಾಚಾರಣೆಗೆ ಮಿತಿ ಇರುವುದಿಲ್ಲ. ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣದಿಂದ ಹಿಡಿದು, ಪ್ರಮುಖವಾದ ಸ್ಥಳದಲ್ಲಿ,  ಸುಲ್ತಾನ್ ರವರಿಗೆ ಮಿಲಿಟರಿ ಪಡೆಗಳಿಂದ ಅತ್ಯುನ್ನತ ಮಟ್ಟದ ಗೌರವವನ್ನು ಸಲ್ಲಿಸಲಾಗುತ್ತದೆ. ಮಿಲಿಟರಿ ಕವಾಯತು, ಮೆರವಣಿಗೆ, ರಾಷ್ಟ್ರಗೀತೆ, ಮಿಲಿಟರಿ ಬ್ಯಾಂಡ್ ಗಳಿಂದ ಸಂಗೀತ ಕಾರ್ಯಕ್ರಮ, ಒಮಾನ್ ದೇಶದ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ತಿಂಗಳುಗಳ ಕಾಲ ಪ್ರಮುಖ ನಗರಗಳ ಮುಖ್ಯ ರಸ್ತೆಗಳು ದೀಪಾಲಂಕಾರಗೊಂಡು ಸಿಂಗರಿಸಲ್ಪಡುತ್ತವೆ. ಪ್ರತಿ ನೂರು ಮೀಟರ್ ಗೊಂದು ರಾಷ್ಟ್ರ ಧ್ವಜಗಳು ಹಾರಾಡುತ್ತಿರುತ್ತವೆ.

ಒಮಾನಿಗಳು ತಮ್ಮ ತಮ್ಮ ಕಾರ್ ಗಳನ್ನು ರಾಷ್ಟ್ರಧ್ವಜದಲ್ಲಿರುವ ಬಣ್ಣಗಳಂತೆ, ವಿವಿಧರೀತಿಯಲ್ಲಿ ಹಲವು ದಿನಗಳ ಕಾಲ ಅಲಂಕರಿಸುತ್ತಾರೆ. ಅಂದು ಸಂಜೆ, ಪ್ರಮುಖ ನಗರಗಳ ಬೀದಿಗಳಲ್ಲಿ ಮೆರವಣಿಗೆ ರೀತಿಯಲ್ಲಿ ನೂರಾರು ಕಾರುಗಳಲ್ಲಿ ಜನ ರಾಷ್ಟ್ರ ಧ್ವಜವನ್ನಿಡಿದು ಸುತ್ತುತ್ತಾರೆ. ಒಮಾನಿಗಳು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ರಸ್ತೆಗಳಲ್ಲಿ ಬಾವುಟವನ್ನಿಡಿದು ಸುತ್ತುವ ಅವರ ರಾಷ್ಟ್ರ ಪ್ರೇಮವನ್ನು ಅಂದು ಕಾಣ ಬಹುದಾಗಿದೆ.

ಈ ಬಾರಿ ಕೋವಿಡ್-19 ರ ಕರಾಳ ಛಾಯೆಯ ನಡುವೆಯೂ, ಒಮಾನ್ ದೇಶ ಸಿಂಗರಿಸಿಕೊಂಡು ನಿಂತಿದೆ. ರಾಷ್ಟ್ರ ಪ್ರೇಮ ಒಮಾನಿಗಳಲ್ಲಿ ಪುಟಿದೆದ್ದಿದೆ. ಕೊರೋನಾ ತಂದಿಟ್ಟ ಸಂಧಿಗ್ದ ಪರಿಸ್ಥಿತಿಯಲ್ಲಿ, ಜನ ಕೊರೋನಾ ಸಮಯದಲ್ಲಿ ಹಲವಾರು ಕಟ್ಟು ನಿಟ್ಟಿನ ಕಾನೂನುಗಳನ್ನು ಇಲ್ಲಿ ರೂಪಿಸಲಾಗಿದೆ. ಜನ ಎಲ್ಲೆಂದರಲ್ಲಿ ಗುಂಪು ಗೂಡುವಂತಿಲ್ಲ. ಪಾರ್ಕ್ ಗಳು, ಬೀಚ್ ಗಳು ಮುಚ್ಚಿವೆ. ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡ ವಿಧಿಸಲಾಗುತ್ತಿದೆ. ಒಮಾನ್ ದೇಶದ 50ನೇ ರಾಷ್ಟ್ರೀಯ ದಿನಾಚರಣೆಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಬೇಕಿದ್ದ ಈ ಸಂಧರ್ಭದಲ್ಲಿ, ದೇಶದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ರವರ ಅನುಪ ಸ್ಥಿತಿಯಲ್ಲಿ ಅದರಲ್ಲೂ ಕೋವಿಡ್-19 ರ ಈ ಪರಿಸ್ಥಿತಿಯಲ್ಲಿ ಈ ಸಂಭ್ರಮವನ್ನು ತುಂಬ ಸರಳವಾಗಿ ಆಚರಿಸಲಾಗುತ್ತಿದೆ.










PC:Google

ಸೋಮವಾರ, ನವೆಂಬರ್ 16, 2020

Moral Story -ನೀತಿ ಕಥೆ: ನಾನು ಯಾರು ಗೊತ್ತ, ಭೀಮ, ಬಲ ಭೀಮ



 https://www.youtube.com/watch?v=Hx1xhaD3TVA&t=107s


#moralstory

 #shortstory

 #kannada


50 ವರ್ಷಗಳ ಬಳಿಕ ಸುಲ್ತಾನ್ ಕಾಬೂಸ್ ಇಲ್ಲದ ಮೊದಲ ರಾಷ್ಟ್ರೀಯ ದಿನ

*50 ವರ್ಷಗಳ ಬಳಿಕ ಸುಲ್ತಾನ್ ಕಾಬೂಸ್ ಇಲ್ಲದ ಮೊದಲ ರಾಷ್ಟ್ರೀಯ ದಿನ



ಪ್ರತಿ ವರ್ಷ ಸಂಭ್ರಮದಿಂದ ಆಚರಿಸುವ ಒಮಾನ್ ರಾಷ್ಟ್ರೀಯ ದಿನಾಚರಣೆ ಮತ್ತೊಮ್ಮೆ ಬಂದಿದೆ. ಬರುವ ನವೆಂಬರ್ 18 ರಂದು ಒಮಾನ್ ದೇಶದ ಐವತ್ತನೇ ರಾಷ್ಟ್ರೀಯ ದಿನಾಚರಣೆ (National Day of Oman) ಹಾಗೂ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ಅಲ್ ಸಯೀದ್ ರವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. 1650 ರಲ್ಲಿ
ಪೋರ್ಚಗೀಸ್ ರಿಂದ ಸ್ವಾತಂತ್ರ್ಯಗೊಂಡ ದಿನವೂ ಸಹ ನವೆಂಬರ್ ಹದಿನೆಂಟು. ಹೀಗಾಗಿ, ಈ ದಿನ ಬಹು ಪ್ರಮುಖವಾದದ್ದು. ಸುಲ್ತಾನ್ ಕಾಬೂಸ್ ರವರು ಬದುಕಿದ್ದಿದ್ದರೆ, ಅವರ ಆಳ್ವಿಕೆಯ ಐವತ್ತನೇ ವರ್ಷ ಸಂಪೂರ್ಣವಾಗುತಿತ್ತು. ಈ ಬಾರಿ ಹಿಂದಿನ ಸುಲ್ತಾನ್ ಕಾಬೂಸ್ ರವರ ಅನುಪಸ್ಥಿತಿಯಲ್ಲಿ ಈಗಿನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ಐವತ್ತನೇ ರಾಷ್ಟ್ರೀಯ ದಿನಾಚರಣೆ ಆಚರಿಸಲಾಗುತ್ತಿದೆ.

ಅಂದು ಒಮಾನ್ ರಾಷ್ಟ್ರದೆಲ್ಲೆಡೆ, ಸಂಭ್ರಮಾಚಾರಣೆಗೆ ಮಿತಿ ಇಲ್ಲ. ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣದಿಂದ ಹಿಡಿದು, ಪ್ರಮುಖವಾದ ಸ್ಥಳದಲ್ಲಿ, ಸುಲ್ತಾನ್ ರವರಿಗೆ ಮಿಲಿಟರಿ ಪಡೆಗಳಿಂದ ಅತ್ಯುನ್ನತ ಮಟ್ಟದ ಗೌರವವನ್ನು ಸಲ್ಲಿಸಲಾಗುತ್ತದೆ. ಮಿಲಿಟರಿ ಕವಾಯತು, ಮೆರವಣಿಗೆ, ರಾಷ್ಟ್ರಗೀತೆ, ಮಿಲಿಟರಿ ಬ್ಯಾಂಡ್ ಗಳಿಂದ ಸಂಗೀತ ಕಾರ್ಯಕ್ರಮ, ಒಮಾನ್ ದೇಶದ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ತಿಂಗಳುಗಳ ಕಾಲ ಪ್ರಮುಖ ನಗರಗಳ ಮುಖ್ಯ ರಸ್ತೆಗಳು ದೀಪಾಲಂಕಾರಗೊಂಡು ಸಿಂಗರಿಸಲ್ಪಡುತ್ತವೆ. ಪ್ರತಿ ನೂರು ಮೀಟರ್ ಗೊಂದು ರಾಷ್ಟ್ರ ಧ್ವಜಗಳು ಹಾರಾಡುತ್ತಿರುತ್ತವೆ.

ಒಮಾನಿಗಳು ತಮ್ಮ ತಮ್ಮ ವಾಹನಗಳನ್ನು ರಾಷ್ಟ್ರಧ್ವಜದಲ್ಲಿರುವ ಬಣ್ಣಗಳಂತೆ, ವಿವಿಧರೀತಿಯಲ್ಲಿ ಹಲವು ದಿನಗಳ ಕಾಲ ಅಲಂಕರಿಸುತ್ತಾರೆ. ಅಂದು ಸಂಜೆ, ಪ್ರಮುಖ ನಗರಗಳ ಬೀದಿಗಳಲ್ಲಿ ಮೆರವಣಿಗೆ ರೀತಿಯಲ್ಲಿ ನೂರಾರು ಕಾರುಗಳಲ್ಲಿ ಜನ
ರಾಷ್ಟ್ರ ಧ್ವಜವನ್ನಿಡಿದು ಸುತ್ತುತ್ತಾರೆ. ಒಮಾನಿಗಳು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ರಸ್ತೆಗಳಲ್ಲಿ ಬಾವುಟವನ್ನಿಡಿದು ಸುತ್ತುವ ಅವರ ರಾಷ್ಟ್ರ ಪ್ರೇಮವನ್ನು ಅಂದು ಕಾಣ ಬಹುದಾಗಿದೆ.

ಇಲ್ಲಿ ಒಮಾನ್ ಪ್ರಜೆಗಳ ನಂತರ ಅತಿದೊಡ್ಡ ಜನಸಂಖ್ಯೆಯಲ್ಲಿ ಸುಮಾರು ಐದಾರು ಲಕ್ಷ ಭಾರತೀಯ ಪ್ರಜೆಗಳು ಈ ದೇಶದಲ್ಲಿದ್ದಾರೆ. ಭಾರತೀಯರು ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಇಲ್ಲಿನ ವ್ಯಾಪಾರ ವಹಿವಾಟು ನಡೆಸುವ ಕಂಪನಿಗಳಲ್ಲಿ ಭಾರತೀಯರ ಪಾತ್ರ ಪ್ರಮುಖವಾದದ್ದು. ಒಮಾನ್ ದೇಶದ ಸುಲ್ತಾನರು ಮತ್ತು ಪ್ರಜೆಗಳು, ಭಾರತೀಯರನ್ನು ಅತ್ಯಂತ ಪ್ರೀತ್ಯಾದರಗಳಿಂದ ಕಾಣುತ್ತಾರೆ.

ಈ ಬಾರಿ ಕೋವಿಡ್-19 ರ ಕರಾಳ ಛಾಯೆಯ ನಡುವೆಯೂ, ಒಮಾನ್ ದೇಶ ಸಿಂಗರಿಸಿಕೊಂಡು ನಿಂತಿದೆ. ರಾಷ್ಟ್ರ ಪ್ರೇಮ ಒಮಾನಿಗಳಲ್ಲಿ ಪುಟಿದೆದ್ದಿದೆ. ಕೊರೋನಾ ತಂದಿಟ್ಟ ಸಂಧಿಗ್ದ ಪರಿಸ್ಥಿತಿಯಲ್ಲಿ, ಜನ ಕೊರೋನಾ ಸಮಯದಲ್ಲಿ ಹಲವಾರು ಕಟ್ಟು ನಿಟ್ಟಿನ ಕಾನೂನುಗಳನ್ನು ಇಲ್ಲಿ ರೂಪಿಸಲಾಗಿದೆ. ಜನ ಎಲ್ಲೆಂದರಲ್ಲಿ ಗುಂಪು ಗೂಡುವಂತಿಲ್ಲ. ಪಾರ್ಕ್ ಗಳು, ಬೀಚ್ ಗಳು ಮುಚ್ಚಿವೆ. ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಸುಮಾರು ನೂರು ರಿಯಾಲ್ ದಂಡ( 19200 ರೂಪಾಯಿ ಗಳು) ವಿಧಿಸಲಾಗುತ್ತಿದೆ. ಕಾನೂನನ್ನ ಮೀರಿ ಗುಂಪು ಗೂಡಿದವರನ್ನ ದಂಡದ ಜತೆಗೆ ತಿಂಗಳುಗಳ ಕಾಲ ಸೆರೆಮನೆವಾಸ ಅನುಭವಿಸುವ ಶಿಕ್ಷೆ ವಿಧಿಸಲಾಗುತ್ತಿದೆ. ಜನರು ಈಗಾಗಲೆ ಜಾಗೃತಿಗೊಂಡಿದ್ದು, ಮಾಸ್ಕ್ ಇಲ್ಲದೆ ಎಲ್ಲೂ ಓಡಾಡುತ್ತಿಲ್ಲ. ಅನಗತ್ಯವಾಗಿ ಮನೆಯಿಂದ ಹೊರಬರಲು ಹಿಂಜರಿಯುತಿದ್ದಾರೆ.

ಒಮಾನ್ ದೇಶದ 50ನೇ ರಾಷ್ಟ್ರೀಯ ದಿನಾಚರಣೆಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಬೇಕಿದ್ದ ಈ ಸಂಧರ್ಭದಲ್ಲಿ, ದೇಶದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ರವರು 2020ರ ವರ್ಷದ ಆರಂಭದಲ್ಲಿ ನಿಧನರಾದ ನೋವು ಹಾಗೂ ಕೋವಿಡ್-19 ರ ಈ ಪರಿಸ್ಥಿತಿಯಿಂದಾಗಿ ಈ ಬಾರಿ ರಾಷ್ಟ್ರಿಯ ಹಬ್ಬಕ್ಕೆ ಹಿಂದಿನ ಕಳೆ ಇಲ್ಲ.

ಲೇಖನ: ಪಿ.ಎಸ್.ರಂಗನಾಥ,
ಮಸ್ಕತ್. ಒಮಾನ್

ಕ್ಯಾಪ್ಟನ್ ಗೋಪಿನಾಥ್

 ಸೂರರೈ ಪೋಟ್ಟ್ರು !


ಹಳ್ಳಿಯ ಯುವಕನೊಬ್ಬ ಒಂದು ರುಪಾಯಿ ಗೆ ಜನರನ್ನು ವಿಮಾನದಲ್ಲಿ ಕರೆದೊಯ್ದ ರೋಚಕ ಕಥೆ ಇರುವ ತಮಿಳು‌ ಸಿನಿಮಾ. ಕನ್ನಡ ದಲ್ಲಿ‌ ಅದರ ಡಬ್ಬಿಂಗ್ ಕೂಡ ಆಗಿದೆ. ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಕನ್ನಡಿಗ ಕ್ಯಾಪ್ಟನ್ ಗೋಪೀನಾಥ ಅವರ ಆತ್ಮಕಥನ ‘ಸಿಂಪ್ಲಿ ಫ್ಲೈ’ ಪುಸ್ತಕವನ್ನು ಆಧರಿಸಿ ಮಾಡಿರುವ ಸಿನಿಮಾ ಇದು.
ಆದರೆ ಪುಸ್ತಕ ದಲ್ಲಿರುವಂತೆ, ಈ ಸಿನಿಮಾದಲ್ಲಿ ಗೋಪಿನಾಥ್ ಅವರ ನಿಜ ಜೀವನ‌ದಲ್ಲಿ‌ ನಡೆದ ಬಹುತೇಕ ಸನ್ನಿವೇಶಗಳು ಇಲ್ಲ. ಕ್ಯಾಪ್ಟನ್ ಗೋಪಿನಾಥ್ ಅವರು ಹೇಳಿದಂತೆ ಇದು Heavily dramatised and fictionalised ಸಿನಿಮಾ.
ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಯುವಕರಿಗೆ ಕ್ಯಾಪ್ಟನ್ ಗೋಪಿನಾಥ್ ನಿಜಕ್ಕೂ ಸ್ಪೂರ್ತಿಯಾಗುತ್ತಾರೆ.
ಅಂತಹವರು ಅವರ Siplyfly ಪುಸ್ತಕವನ್ನು ಒಮ್ಮೆ ಓದಬೇಕು. ಅವರು ಪಟ್ಟ ಕಷ್ಟ, ಅವರ ಛಲ, ಹಟ, ಸಾಧನೆಗಳು ಎಲ್ಲವೂ ಆ ಪುಸ್ತಕದಲ್ಲಿ ದಾಖಲಾಗಿದೆ.
ಇಂಗ್ಲಿಷಿನಿಂದ ಕನ್ನಡಕ್ಕೆ ಶ್ರೀ ವಿಶ್ವೇಶ್ವರ್ ಭಟ್ ಅವರು ಬಾನಾಯಾನ ಎನ್ನುವ ಹೆಸರಿನಲ್ಲಿ ಪುಸ್ತಕವನ್ನು ಅನುವಾದಿಸಿದ್ದಾರೆ.
ಸಿನಿಮಾದಲ್ಲಿ ಇನ್ನೂ ಹಲವಾರು ನೈಜ ಸನ್ನಿವೇಶಗಳನ್ನು ಪರಿಣಾಮಕಾರಿ ಯಾಗಿ ತೋರಿಸಬಹುದಿತ್ತು, ಆದರೆ ಕೇವಲ ‘ಡೆಕ್ಕನ್ ಏರ್' ವಿಮಾನ ಸಂಸ್ಥೆಯನ್ನು ಆರಂಭಿಸಲು ಕ್ಯಾ. ಗೋಪಿನಾಥ ಅನುಭವಿಸಿದ ಸಂಕಷ್ಟ, ಅಪಮಾನ, ತೊಳಲಾಟಕ್ಕೆ‌ ಮಾತ್ರ ಈ ಚಿತ್ರದಲ್ಲಿ ಒತ್ತು ಕೊಟ್ಟಿದ್ದಾರೆ.
ಕೆಲಸ ಬಿಟ್ಟು ವಾಪಾಸು ತಮ್ಮ ಊರಿಗೆ ‌ಹಿಂತಿರುಗಿದಾಗ, ಏನೂ ಬೆಳೆಯದೆ ಇದ್ದ ಜಾಗದಲ್ಲಿ ತೋಟ ಮಾಡಿ, ನೀರಿನ ವ್ಯವಸ್ಥೆ ಇಲ್ಲದಿದ್ದಾಗ ಕತ್ತೆ ಗಳನ್ನು ಉಪಯೋಗಿಸಿ ನೀರು ತಂದಿದ್ದು, ತೋಟದಲ್ಲಿ ಗಿಡಮರಗಳು ಫಲ ಕೊಡಲು ಶುರುಮಾಡಿದ ಮೇಲೆ, ಉಪ ಕಸುಬನ್ನಾಗಿ ರೇಷ್ಮೆ ಹುಳು ಸಾಕಾಣಿಕೆ ಮಾಡಿದ್ದು, ನಂತರ ಹಾಸನದಲ್ಲಿ ಎನ್ ಫೀಲ್ಡ್ ಬುಲೆಟ್ ಶೋರೂಂ ಶುರುಮಾಡಿ,‌ ಅದರ ಜತೆ, ಪಕ್ಕದಲ್ಲಿದ್ದ ಹೋಟೆಲ್ ಅನ್ನು ‌ಕೊಂಡುಕೊಂಡು ಅದರಲ್ಲಿ ವ್ಯಾಪಾರ ಶುರುಮಾಡಿ, ನಂತರ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಬೆಂಗಳೂರಿಗೆ ಬಂದು, ಅಲ್ಲಿ ಸ್ನೇಹಿತರ ಜತೆಗೂಡಿ, ಡೆಕ್ಕನ್ ಹೆಲಿಕಾಪ್ಟರ್ ಬಾಡಿಗೆ ಕೊಡುವ‌ಕಂಪನಿ ಮಾಡಿ ಅದರಲ್ಲೂ ಸಹ ಯಶಸ್ಸು ಗಳಿಸಿ, ಕೊನೆಗೆ ಡೆಕ್ಕನ್ ಏರ್ ಕಂಪನಿ ಸ್ಥಾಪಿಸಿದ್ದು.
ಹೀಗೆ, ಅವರ ಜೀವನದಲ್ಲಿ ಒಂದರ ಮೇಲೊಂದು ಯಶಸ್ಸು ಕಂಡಿದ್ದಾರೆ.
ಅವರ ಆ ರೋಚಕ ಅನುಭವವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು, ಅವರ Simply fly ಅಥವಾ ಬಾನಾಯಾನ ಪುಸ್ತಕ ಓದಿ. ಆ ಪುಸ್ತಕದಲ್ಲಿ ತಮ್ಮ‌ ಜೀವನದ ಪ್ರತಿಯೊಂದು ಹಂತವನ್ನು ಅಲ್ಲಿ ದಾಖಲಿಸಿದ್ದಾರೆ.

ಭಾನುವಾರ, ಆಗಸ್ಟ್ 23, 2020

ಆರೋಗ್ಯ ಅಥವಾ ಭಾಗ್ಯ

 


ಪ್ರಪಂಚ ಮತ್ತು ನಮ್ಮ ಆಧುನಿಕ ಜೀವನ ದಿನೇ ದಿನೇ ಬದಲಾಗುತ್ತಿರುವದನ್ನ ನಾವು ಕಾಣುತಿದ್ದೇವೆ

ಇವತ್ತಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಭಾಗ್ಯ ಎರಡು ಬೇಕಾಗಿವೆ. ನಾವು ತಿನ್ನುತ್ತಿರುವ ಬಹುತೇಕ ಆಹಾರ ಪದಾರ್ಥಗಳನ್ನು ರಾಸಾಯನಿಕಗಳನ್ನು ಉಪಯೋಗಿಸಿ ‌ಬೆಳೆಯುತಿದ್ದು, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಿಗುವುದು ಅಪರೂಪವಾಗಿದೆ. ಇಂತಹ ಆಹಾರ ಸೇವನೆಯಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗಿದೆ ಎಂದೇ ಹೇಳಬಹುದು.

ಒಂದು ಕಾಲದ ಶ್ರೀಮಂತರ ಕಾಯಿಲೆ ಎಂದು ಹೆಸರಾಗಿದ್ದ ಬಿಪಿ ಮತ್ತು ಸಕ್ಕರೆ ಕಾಯಿಲೆಗಳು ಇಂದು ಬಡವ-ಬಲ್ಲಿದ, ನಗರಗಳು ಮತ್ತು ಹಳ್ಳಿಗಳು ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರ ನ್ನು ಕಾಡುತ್ತಿವೆ. ಅವೊಂದೇ ಅಲ್ಲ, ಹಲವಾರು ಮಾರಣಾಂತಿಕ ಕಾಯಿಲೆಗಳೂ ಸಹ ಇಂದು ಎಲ್ಲೆಡೆ ದಾಂಗುಡಿ ಇಟ್ಟಿವೆ.

ಇತ್ತೀಚೆಗೆ ನಾನು ಕಂಡಂತೆ ಹಲವಾರು ಜನರು ಅದರಲ್ಲೂ ನಲವತ್ತು ವರ್ಷಗಳ ಆಸುಪಾಸಿನ ಜನರು ಅಕಾಲಿಕ ಮೃತ್ಯುವೀಡಾಗಿದ್ದಾರೆ.

ಅಂದು ಅವಿಭಕ್ತ ಕುಟುಂಬದ ಒಂದೊಂದು ಮನೆಯಲ್ಲಿ ಎಂಟಂತ್ತು ಜನ ಒಟ್ಟೊಟ್ಟಿಗೆ ವಾಸಿಸುತಿದ್ದರು.
ಮನೆಯಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಒಬ್ಬರಲ್ಲ ಒಬ್ಬರು ಸೇವೆ ಮಾಡುತಿದ್ದರು.
ಕಾಲಕ್ರಮೇಣ ನ್ಯೂಕ್ಲಿಯರ್ ಫ್ಯಾಮಿಲಿ ಗಳಾಗಿ ಇಂದು ಒಂದು ಎರಡು ಮಕ್ಕಳಿಗೆ ನಿಯಂತ್ರಣ ಮಾಡಿಕೊಂಡು ಅದ್ಯಾವೂದೋ ಜಾಲಕ್ಕೆ ಬಲಿಯಾಗಿ ಆರೋಗ್ಯದ ಕಡೆ ಗಮನ ಕೊಡದೆ
ದುಡಿಮೆಯ ಹಿಂದೆ ಬಿದ್ದಿದ್ದೇವೆ.
ಜನರ ಮೈಯಲ್ಲಿ ಶಕ್ತಿ ಇರುವವರಿಗೆ ದುಡಿಯುತ್ತಾರೆ, ವಯಸ್ಸಾದ ಮೇಲೆ ಯಾರ ಮೇಲೆ ಅವಲಂಬಿತರಾಗದೆ ಜೀವನ ನಡೆಸಲು ಮತ್ತು ಕೊನೆಕಾಲದಲ್ಲಿ ಆರೋಗ್ಯ ಕೈ ಕೊಟ್ಟಾಗ ಕನಿಷ್ಟ ಪಕ್ಷ ಭಾಗ್ಯ (ಹಣ) ವಿದ್ದರೆ ಯಾರ ನೆರವಿಲ್ಲದೆ ಖರ್ಚುಗಳನ್ನ ನಿಭಾಯಿಸಿ ಕೊಳ್ಳಬಹುದು.
ಒಳ್ಳೆಯ ಆರೋಗ್ಯ ವಿಟ್ಟುಕೊಂಡು ಸಾಯುವವರೆಗೆ ದುಡಿದು ತಿನ್ನುತ್ತೇನೆ ಎನ್ನುವುದು ಇಂದಿನ ಕಾಲದಲ್ಲಿ ಬಾಲಿಶವೆನ್ನ ಬಹುದು. ಇಷ್ಟೊಂದು ವೃದ್ದಾಶ್ರಮಗಳು ಇಂದು ಸ್ಥಾಪನೆಯಾಗುತ್ತಿರಲಿಲ್ಲ.

ಪ್ರತಿದಿನವೂ ಹೇಳುವ ಮೃತ್ಯುಂಜಯ ಮಂತ್ರ
ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ. ಅದನ್ನೇ ಇಂದಿನ ಕಾಲದಲ್ಲಿ ಎಲ್ಲರೂ ಬಯಸುವುದು.

ಏನೇ ಇರಲಿ, ಆರೋಗ್ಯವೂ ಬೇಕು ಭಾಗ್ಯವೂ ಬೇಕು, ಯಾರ ಅರವಲಂಬನೆ ಇಲ್ಲದೆ ಬಾಳಿ ಬದುಕಿ ಮುಂದಿನ ಪೀಳಿಗೆಗೆ ನಮ್ಮ ಜೀವನದ ಮೌಲ್ಯಗಳನ್ನು ಬಿಟ್ಟು ಹೋಗಬೇಕಿದೆ.
--
Written by P.S.Ranganataha(ಪಿ.ಎಸ್.ರಂಗನಾಥ)
#p.s.ranganatha

ಶುಕ್ರವಾರ, ಆಗಸ್ಟ್ 7, 2020

ಚೋಲುಟೆಕ ಸೇತುವೆಯೂ ಮತ್ತು ನಮ್ಮ ಮನಸ್ಥಿತಿಯೂ

 ಚೋಲುಟೆಕ ಸೇತುವೆಯೂ ಮತ್ತು ನಮ್ಮ ಮನಸ್ಥಿತಿಯೂ

ಲೇಖನ: ಪಿ.ಎಸ್.ರಂಗನಾಥ

ನೀವು ಎಂದಾದರೂ ಚೋಲುಟೆಕ ಸೇತುವೇ ಬಗ್ಗೆ ಕೇಳಿದ್ದೀರ? ನಾನಂತು ಇದುವರೆಗೂ ಕೇಳಿಲ್ಲ.  ಮಧ್ಯ ಅಮೇರಿಕದ ಹೊಂಡುರಾಸ್ ಎನ್ನುವ ದೇಶದ ಚೋಲುಟೆಕ ನಗರದಲ್ಲಿ ಸುಮಾರು 484 ಮೀಟರ್ ಉದ್ದವಿದೆ ಸೇತುವೆ. ಈ ಪ್ರದೇಶ ಬಿರುಗಾಳಿ ಮತ್ತು ಚಂಡಮಾರುತಗಳಿಗೆ ಕುಖ್ಯಾತಿ ಪಡೆದಿದೆ. 

ಎಂತಹಾ ಬಿರುಗಾಳಿ ಮತ್ತು ಚಂಡಮಾರುತಗಳು ಬಂದರೂ ತಡೆದುಕೊಳ್ಳುವಂತಹ ಒಂದು ಉತ್ತಮ ಸೇತುವೆಯನ್ನು ನಿರ್ಮಾಣ ಮಾಡಲು ಇಲ್ಲಿನ ಸ್ಥಳೀಯ ಆಡಳಿತ ನಿರ್ಧಾರ ಮಾಡುತ್ತದೆ. ಎಂತಹುದೇ ಪ್ರಕೃತಿ ವಿಕೋಪ ಬಂದರೂ ಅದನ್ನು ತಡೆದು ಕೊಳ್ಳುವ ಶಕ್ತಿಯಿರುವ ಉತ್ತಮವಾದ ಗಟ್ಟಿಮುಟ್ಟಾದ ಸೇತುವೆಯನ್ನು ನಿರ್ಮಾಣ ಮಾಡಲು 1996 ರಲ್ಲಿ ಜಪಾನ್ ಕಂಪನಿಯೊಂದಕ್ಕೆ ಗುತ್ತಿಗೆಯನ್ನು ಕೊಡುತ್ತಾರೆ. 

ಅತ್ಯಾಧುನಿಕ ತಂತ್ರಾಜ್ಞಾನದ ವಿನ್ಯಾಸ ದೊಂದಿಗೆ ನಿರ್ಮಾಣವಾದ ಈ ಸೇತುವೆ 1998 ರಲ್ಲಿ ಲೋಕಾರ್ಪಣೆಗೊಳ್ಳುತ್ತದೆ. ನದಿಯ ಆಕಡೆ ದಂಡೆಯಿಂದ ಈ ಕಡೆ ದಂಡೆಯನ್ನು ದಾಟಲು ಸೇತುವೆಯನ್ನು ಬಳಸಲು ಪ್ರಾರಂಭಿಸುತ್ತಾರೆ. ಅತ್ಯದ್ಬುತ ಸೇತುವೆ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ ಎನ್ನುವ ಹೆಮ್ಮೆ ಜನರ ಮನಸ್ಸಿನಲ್ಲಿ ಮೂಡುತ್ತದೆ. ಸಂತೋಷದಿಂದ ಬೀಗುತ್ತಿರುತ್ತಾರೆ.  ಆದರೆ ಸಂಭ್ರಮ ಹೆಚ್ಚು ಕಾಲ ಇರುವುದಿಲ್ಲ.


ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ, "ಮಿಚ್" ಎನ್ನುವ ಚಂಡಮಾರುತ ಹೊಂಡುರಾಸ್ ದೇಶಕ್ಕೆ ಅಪ್ಪಳಿಸುತ್ತದೆ.  ಕೇವಲ ನಾಲ್ಕು ದಿನಗಳಲ್ಲಿ ಸುಮಾರು 75 ಇಂಚುಗಳಷ್ಟು ಮಳೆಯಾಗುತ್ತದೆ. ಅಂದರೆ,  ಆರು ತಿಂಗಳುಗಳ ಕಾಲ ಆಗುವ ಮಳೆಯ ಸಮಪ್ರಮಾಣವಾಗಿರುತ್ತದೆ.  ಚೋಲುಟೆಕ ನದಿಯ ಪ್ರವಾಹದಿಂದಾಗಿ ಹೊಂಡೂರ ದೇಶದ ಸುಮಾರು ಭೂ ಪ್ರದೇಶಗಳು ನಾಶವಾಗುತ್ತದೆ. ಸುಮಾರು 7000 ಜನರು ಪ್ರಾಣವನ್ನ ಕಳೆದು ಕೊಳ್ಳುತ್ತಾರೆ. ಆ ಒಂದು ಸೇತುವೆಯನ್ನು ಬಿಟ್ಟು ಹಲವಾರು ಸೇತುವೆಗಳು ನಾಶವಾಗುತ್ತವೆ. ಆ ಹೊಸ ಚೋಲುಟೆಕ ಸೇತುವೆ ಮಾತ್ರ ಗಟ್ಟಿಮುಟ್ಟಾಗಿರುತ್ತದೆ, ಅದಕ್ಕೆ ಏನು ಹಾನಿಯಾಗಿರುವುದಿಲ್ಲ. ಅಬ್ಬಾ ಎಂತಹ ಗಟ್ಟಿಮುಟ್ಟಾದ ಸೇತುವೆ ಎಂದು ಎಲ್ಲರೂ ಉದ್ಘರಿಸುವವರೇ.......


ಆದರೆ, ಅಲ್ಲೊಂದು ಸಮಸ್ಯೆ ಇರುತ್ತದೆ. ಆ ಸೇತುವೆ ಮಾತ್ರ ಒಂದಿಂಚೂ ಕದಲಿರುವುದಿಲ್ಲ ಮತ್ತು ಯಾವುದೇ ಹಾನಿಗೊಳಗಾಗದೆ ಸುಭದ್ರ ವಾಗಿರುತ್ತದೆ.  ಆದರೆ ಆ ಬದಿಯ ಮತ್ತು ಈ ಬದಿಯ ಎರಡೂ ರಸ್ತೆಗಳು ಮಳೆಗೆ ಕೊಚ್ಚಿಹೊಗಿರುತ್ತವೆ. ಅಲ್ಲೊಂದು ರಸ್ತೆಯಿತ್ತು ಎನ್ನುವ ಒಂದು ಕುರುಹೂ ಇರುವುದಿಲ್ಲ. ಆ ಪ್ರವಾಹದ ರಭಸಕ್ಕೆ ಆ ನದಿಯು ತನ್ನ ಹರಿಯುವ ದಿಕ್ಕನ್ನೂ ಸಹ ಬದಲಿಸಿಕೊಂಡಿರುತ್ತದೆ.  ಸೇತುವೆ ಕೆಳಗೆ ಹರಿಯುವುದನ್ನ ಬಿಟ್ಟು ಸೇತುವೆ ಪಕ್ಕದಲ್ಲಿ ಹೊಸದಾದ ಮಾರ್ಗವನ್ನು ರಚಿಸಿಕೊಂಡು ಹರಿಯಲು ಶುರು ಮಾಡುತ್ತದೆ. 

ಆದರೆ, ಅಷ್ಟೊಂದು ಗಟ್ಟಿ ಮುಟ್ಟಾದ ಸೇತುವೆ, ಎಂತಹುದೇ ಚಂಡ ಮಾರುತ ಬಂದರೂ ತಡೆದುಕೊಳ್ಳುವ ಶಕ್ತಿಯಿರುವಂತಹ ಸೇತುವೆ ಇದ್ದಕ್ಕಿದ್ದಂತೆ ಯಾವುದೇ ಉಪಯೋಗಕ್ಕೆ ಬಾರದಂತಾಗುತ್ತದೆ.  ಯಾವುದಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿರದ ಸೇತುವೆ ಯಂತಾಗುತ್ತದೆ.

ಇದು 22 ವರ್ಷಗಳ ಹಿಂದೆ ನಡೆದ  ಘಟನೆ. ಚೋಲುಟೆಕ ಸೇತುವೇ ಯಿಂದ ಕಲಿಯ ಬೇಕಾದ ಪಾಠ ಆವತ್ತಿಗಿಂತ ಈವತ್ತು ತುಸು ಹೆಚ್ಚೇ ಇದೆ.  ನಾವು ಊಹಿಸಿಕೊಳ್ಳದ್ದಕ್ಕಿಂತ ಹೆಚ್ಚಾಗಿ ಪ್ರಪಂಚ ಬದಲಾಗುತ್ತಿದೆ

ಚೋಲುಟೇಕ ಸೇತುವೆ ವಿಷಯದಲ್ಲಿ ಇದ್ದಕ್ಕಿದ್ದಂತೆ ಆದ ಭಯಂಕರ ಬದಲಾವಣೆ  ನಮ್ಮಲ್ಲೂ ಆಗುತ್ತದೆ. ನಮ್ಮ ಸುತ್ತ ಮುತ್ತಲಿನ ಪ್ರಪಂಚ ಪರಿವರ್ತನೆ ಅಥವ ಬದಲಾವಣೆ ಗೊಂಡಾಗ  ನಮ್ಮ ಭವಿಷ್ಯ, ಉದ್ಯೋಗ, ವ್ಯಾಪಾರ, ನಮ್ಮ ಧೈನಂದಿನ ಜೀವನ ಮತ್ತೊಂದು ಮಗದೊಂದರ ಮೇಲೆ ಪರಿಣಾಮ ಬೀರುತ್ತದೆ.  

ಪ್ರಪಂಚದಲ್ಲಿ ಆಗುವಂತಹ ಎಂತಹುದ್ದೇ ಬದಲಾವಣೆಯನ್ನೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗುವ ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕಿದೆ. ಇಲ್ಲದೇ ಇದ್ದರೆ, ನಿಂತ ನೀರಾಗಿ ಪಾಚಿ ಹಿಡಿದು ಹಾಳಾಗುವುದು ನಿಶ್ಚಿತ.

ನಿಮ್ಮ ವೃತ್ತಿಜೀವನವನ್ನು ನೀವು ನೋಡುವಾಗ, ನೀವು ಇನ್ನೂ ಒಂದು ಹೆಚ್ಚಿನ ಜ್ಞಾನಗಳಿಸುವ  ಕೋರ್ಸ್ ತೆಗೆದುಕೊಳ್ಳುವ ಮೊದಲು ಮತ್ತೊಮ್ಮೆ ಯೋಚಿಸಿ ಅದು ನಿಮ್ಮ ಪರಿಣತಿಯನ್ನು ಇನ್ನಷ್ಟು ಪರಿಣತರನ್ನಾಗಿ ಮಾಡಬಹುದು. ಆದರೆ, ಆ ಪರಿಣತಿಯು ಶೀಘ್ರದಲ್ಲೇ ಅನಗತ್ಯವಾಗಬಹುದು.

ನಿಮ್ಮ ಹಳೆಯ ಕಚೇರಿಯನ್ನು ನವೀಕರಿಸಲು ಹಣವನ್ನು ಖರ್ಚು ಮಾಡುವ ಮೊದಲು, ಯೋಚಿಸಿ.

ದೇಶದ ಮೂಲೆ ಮತ್ತು ಮೂಲೆಯಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದೀರಾ?

ಇನ್ನೊಮ್ಮೆ ಆಲೋಚಿಸಿ.

work from home, concept ಶುರುವಾಗಿರುವ ಈ ಹೊತ್ತಿನಲ್ಲಿ,  ಕಚೇರಿ ಸ್ಥಳಗಳು ಶೀಘ್ರದಲ್ಲೇ ಹಳೆಯ ವಿಷಯವಾಗಬಹುದು.

ನಾವು ಒಂದು ನಿರ್ದಿಷ್ಟ ಸಮಸ್ಯೆಗೆ ಅತ್ಯುತ್ತಮ ಪರಿಹಾರವನ್ನು  ಸೃಷ್ಟಿಸುವ ಬಗ್ಗೆ ಕೇಂದ್ರೀಕರಿಸುತ್ತೇವೆ ಆದರೆ, ಆ ಸಮಸ್ಯೆ ಯೂ ಬದಲಾಗಬಹುದು ಎನ್ನುವದನ್ನ ಮರೆತುಬಿಡುತ್ತೇವೆ. 

ನಾವೆಲ್ಲರೂ  ಅತ್ಯಾಧುನಿಕ ಉತ್ಪನ್ನ ಅಥವಾ ಸೇವೆಯನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದ್ದೇವೆ. ಕಾಲಕ್ರಮೇಣ ಆ ವಸ್ತುವು ಅಥವ ಆ ಸೇವೆ ಜನ ಮಾನಸ ದಿಂದ ಕಣ್ಮರೆಯಾಗುವ ಸಾಧ್ಯತೆಯ ಬಗ್ಗೆ ಯೋಚಿಸುವುದಿಲ್ಲ. ಮಾರುಕಟ್ಟೆ ಬದಲಾಗಬಹುದು. ಜನರ ಅಗತ್ಯತೆ ಬದಲಾಗಬಹುದು. 

ನಾವು ಅತ್ಯುತ್ತಮ ಗಟ್ಟಿ ಮುಟ್ಟಾದ ಸೇತುವೆ ನಿರ್ಮಾಣದ ಬಗ್ಗೆ ನಮ್ಮ ಶಕ್ತಿಯನ್ನು  ಕೇಂದ್ರೀಕರಿಸುತ್ತೇವೆ ಮತ್ತು ಕೆಳಗಿರುವ ನದಿಯು ತನ್ನ ಮಾರ್ಗವನ್ನು ಬದಲಾಯಿಸುವ ಸಾಧ್ಯತೆಯನ್ನು ನಿರ್ಲಕ್ಷಿಸುತ್ತೇವೆ.  

ನಿಜಕ್ಕೂ ಅದರ ಬಗ್ಗೆ ಯೋಚಿಸಬೇಕಿದೆ . 

ಚೋಲುಟೇಕ ನದಿಯ ಅಷ್ಟೊಂದು ಗಟ್ಟಿ ಮುಟ್ಟಾದ ಸೇತುವೆ, ಎಂತಹುದೇ ಚಂಡ ಮಾರುತ ಬಂದರೂ ತಡೆದುಕೊಳ್ಳುವ ಶಕ್ತಿಯಿರುವಂತಹ ಸೇತುವೆ ಇದ್ದಕ್ಕಿದ್ದಂತೆ ಬಂದ ಪ್ರವಾಹದಿಂದ ನದಿಯ ಪಾತ್ರ ಬದಲಾಗಿ ಅಲ್ಲಿದ್ದ ರಸ್ತೆಗಳೆಲ್ಲ ಕೊಚ್ಚಿ ಹೋಗಿ ಆ ಸೇತುವೆ ಯಾವುದೇ ಉಪಯೋಗಕ್ಕೆ ಬಾರದಂತಾಗುತ್ತದೆ.  ಯಾವುದಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿರದ ಸೇತುವೆ ಯಂತಾಗುತ್ತದೆ.

ನಮ್ಮ ಜೀವನವೂ ಹಾಗಾಗಬಾರದು ಎನ್ನುವಂತಿದ್ದರೆ ನಿಮ್ಮ ವೃತ್ತಿಜೀವನ ಅಥವ ವ್ಯಾಪಾರ ದಲ್ಲಿ ಆಗುವ ಎಂತಹುದ್ದೇ ಬದಲಾವಣೆಯನ್ನೂ ಅಳವಡಿಸಿಕೊಂಡು ಮುನ್ನುಗ್ಗುವ ಮನಸ್ಥಿತಿಯನ್ನು ರೂಡಿಸಿಕೊಳ್ಳಲು  ಚೋಲುಟೇಕ ಸೇತುವೆಯು ನಮ್ಮನ್ನು ಎಚ್ಚರಿಸುತ್ತದೆ.


 ಶ್ರೀ ಪ್ರಕಾಶ್ ಐಯರ್ ಅವರ ಲೇಖನದ ಸ್ಪೂರ್ತಿ.

ಲೇಖನ: ಪಿ.ಎಸ್.ರಂಗನಾಥ

#choluteca 

#cholutecabridge

#ಚೋಲುಟೆಕ

#ಚೋಲುಟೆಕಸೇತುವೇ

#honduras

#ಹೊಂಡುರಾಸ್

Click below headings