ಶುಕ್ರವಾರ, ಆಗಸ್ಟ್ 9, 2024

ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿದ್ದರೆ ಹೇಗೆ?


 ನಮ್ಮ ಹೆತ್ತವರು, ಬಂಧು ಬಳಗ, ಸ್ನೇಹಿತರು, ಆತ್ಮೀಯರು, ಹಿತೈಷಿಗಳು ಹೀಗೆ ಹಲವಾರು ಜನ ನಮಗೆ ಕಂಫರ್ಟ್ ಝೋನ್ ನಲ್ಲಿ ಬದುಕುವುದನ್ನ ಅಭ್ಯಾಸ ಮಾಡಿಸುತ್ತಾರೆ. ಉದಾಹರಣೆಗೆ, ಸರ್ಕಾರಿ ಉದ್ಯೋಗ ಪಡೆಯಲೇಬೇಕು, ಸಾಫ್ಟ್ ವೇರ್ ಉದ್ಯೋಗ ಬೇಕು, ಬೆಂಗಳೂರಿನಲ್ಲಿಯೇ ಜೀವನ ರೂಪಿಸಕೊಳ್ಳಬೇಕು, ಹುಟ್ಟಿದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಅಪ್ಪ ಬಿಜಿನೆಸ್ ನಲ್ಲಿ ಸಕ್ಸೆಸ್ ಆಗಿದ್ದಾನೆ, ಈಗಾಗಲೇ ಒಂದು ನಿಯಮಿತ ಆದಾಯ ಬರುತ್ತಿದೆ, ಅದನ್ನ ಬಿಟ್ಟು ಬೇರೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬಾರದು, ಹೊಸ ಕೆಲಸ ಏನೋ ಹೆಂಗೋ, ಸುಮ್ಮನೆ ರಿಸ್ಕ್ ಏಕೇ? ಹಾಗಾಗಿ ಯಾವುದೇ ರಿಸ್ಕ್ ಇಲ್ಲದೇ ಅದೇ ಬಿಜಿನೆಸ್ ಅನ್ನು ಮಗ ಮುಂದುವರೆಸಬೇಕು.

     ಹೀಗೆ ನಮಗಿರುವ ಕಂಫರ್ಟ್ ಝೋನ್ ಅನ್ನು ಬಿಟ್ಟು ಹೊರ ಬರಬಾರದು ಎಂದು ಸುತ್ತಮುತ್ತಲಿನವರು ಎಚ್ಚರಿಸುತ್ತಿರುತ್ತಾರೆ ಮತ್ತು ಬಹಳಷ್ಟು ಜನ ಯೋಚಿಸುತ್ತಾರೆ . ಹೀಗೆ ನಮಗೆ ಈ ಕಂಫರ್ಟ್ ಝೋನ್ ಎನ್ನುವ ಬೇಲಿಯನ್ನು ಹಾಕಿಕೊಂಡು ಕುಳಿತರೆ, ಮುಂದೆ ನಾವು ಅಭಿವೃದ್ದಿ ಹೊಂದುವುದು ಹೇಗೆ, ಹೊಸತನ್ನ ಯೋಚಿಸುವುದು, ಕಲಿಯುವುದು ಹೇಗೆ? ಹೊಸ ವಿಷಯ ತಿಳಿದುಕೊಳ್ಳುವುದು ಹೇಗೆ? ಒಂದು ವಿಷಯವನ್ನ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ನಮ್ಮ ಯಶಸ್ಸಿಗೆ ಒಂದು ಚಿಕ್ಕ ರಿಸ್ಕ್ ಅತ್ಯಗತ್ಯ. ಬರೀ ಕಂಫರ್ಟ್ ಝೋನ್ ಮತ್ತು ಸೇಫ್ ಆಗಿರಬೇಕು ಅಂತ ಯೋಚಿಸಿದರೆ, ಜೀವನದ ಹಲವಾರು ಮಜಲುಗಳನ್ನ ನಾವು ಮಿಸ್ ಮಾಡಿಕೊಳ್ಳುವುದು ಖಂಡಿತ. ಹಾಗಂತ, ಬರೀ ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದು ಸಹ ಬಹಳ ಅಪಾಯಕಾರಿ. ನಮ್ಮ ಇತಿಮಿತಿಯನ್ನ ಅರಿತು ಅದಕ್ಕಿಂತ ಸ್ವಲ್ಪ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಉತ್ತಮ. ರಿಸ್ಕ್ ತೆಗೆದುಕೊಳ್ಳುವುದರಿಂದ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟ ನಷ್ಟಗಳನ್ನ ಸರಿದೂಗಿಸಿಕೊಂಡು ಹೋಗುವ ಆತ್ಮ ಸ್ಥೈರ್ಯ ನಮ್ಮಲ್ಲಿ ಬೆಳೆಯುತ್ತದೆ.

     ಭಾರತದಲ್ಲಿನ ವಿಮಾನ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡಿದ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಬಗ್ಗೆ  ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಅವರ ಜೀವನ ನೂರಾರು ಜನರಿಗೆ ಪ್ರೇರಣೆಯಾಗಿದೆ. ಅವರ ಕುರಿತಾದ ಎರಡು ಸಿನಿಮಾಗಳು ತೆರೆ ಕಂಡಿವೆ. ರಿಸ್ಕ್ ತೆಗೆದುಕೊಂಡು ಯಶಸ್ಸು ಕಂಡ ಹಲವರಲ್ಲಿ ಅವರೂ ಒಬ್ಬರು. ಅವರು ಬಡ ಶಾಲಾ ಶಿಕ್ಷಕನ ಮಗನಾಗಿ ಹುಟ್ಟಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ  ಶಿಕ್ಷಣವನ್ನು ಅವರ ಗ್ರಾಮದಲ್ಲಿ ಪಡೆದ ನಂತರ ಬಿಜಾಪುರದಲ್ಲಿನ ಸೈನಿಕ ಶಾಲೆಯಲ್ಲಿ ತಮ್ಮ ಮುಂದಿನ  ಶಾಲಾ ಶಿಕ್ಷಣವನ್ನು ಮುಂದುವರೆಸುತ್ತಾರೆ. ನಂತರ  ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿಯನ್ನು  ಪಡೆಯುತ್ತಾರೆ.  ತದನಂತರ, ಎಂಟು ವರ್ಷಗಳ ಅವಧಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅಲ್ಲಿಂದ ನಿವೃತ್ತರಾಗಿ, ಹಾಸನ ಜಿಲ್ಲೆಯೊಂದರ ಹಳ್ಳಿಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಾರೆ. ಕಲ್ಲು ಬಂಡೆಗಳಿಂದ ಆವೃತ್ತವಾಗಿದ್ದ ಬಂಜರು ಭೂಮಿಯಲ್ಲಿ ಕೃಷಿ ಮಾಡಿ - ಸುಸ್ಥಿರ ಫಾರ್ಮ್ ಅನ್ನು ಅಭಿವೃದ್ದಿ ಪಡಿಸುತ್ತಾರೆ, ನಂತರದ ದಿನಗಳಲ್ಲಿ ಹಾಸನದಲ್ಲಿ ಎನ್‌ಫೀಲ್ಡ್ ಡೀಲರ್‌ಶಿಪ್ ಅನ್ನು ಪಡೆದು ಶೋ ರೂಮ್ ಅನ್ನು ತೆರೆಯುತ್ತಾರೆ. ಒಂದೆರೆಡು ವರ್ಷದ ನಂತರ, ಪಕ್ಕದಲ್ಲೊಂದು ಉಡುಪಿ ಹೋಟೆಲ್ ಅನ್ನು ಪ್ರಾರಂಭಿಸುತ್ತಾರೆ. ಅಲ್ಲಿ ಯಶಸ್ಸನ್ನು ಕಂಡು ಅಲ್ಲಿಗೆ ಸುಮ್ಮನಿರದೆ, ಮಕ್ಕಳ ವಿದ್ಯಭ್ಯಾಸಕ್ಕಾಗಿ ಮುಂದಾಲೋಚನೆ ಮಾಡಿ ಬೆಂಗಳೂರಿಗೆ ಸೇರುತ್ತಾರೆ. ಅಲ್ಲಿ ಸ್ನೇಹಿತರ ಜತೆ ಸೇರಿ, ಹೆಲಿಕ್ಯಾಪ್ಟರ್ ಅನ್ನು ಬಾಡಿಗೆ ಕೊಡುವ ಬಿಜಿನೆಸ್ ಅನ್ನು ಪ್ರಾರಂಭಿಸಿ, ಒಂದೆರೆಡು ವರ್ಷಗಳ ಕಾಲ ಯಾವುದೇ ಲಾಭವಿಲ್ಲದೆ ಸಂಸ್ಥೆಯನ್ನು ನಡೆಸುತ್ತಾರೆ, ಏವಿಯೇಶನ್ ಉದ್ಯಮಕ್ಕಾಗಿ ಸರ್ಕಾರದಿಂದ ಹಲವಾರು ಲೈಸೆನ್ಸ್ ಗಳು, ವಿದೇಶಿ ಹೆಲಿಕ್ಯಾಪ್ಟರ್ ಅನ್ನು ಭೋಗ್ಯಕ್ಕೆ ಪಡೆಯುವ ಪ್ರಕ್ರಿಯೆಗೆ ಸಮಯ ಕಳೆದು ಹೋಗುತ್ತದೆ. ಧೃತಿಗೆಡದೆ ಸಂಸ್ಥೆಯನ್ನ ನಡೆಸಿ, ಹೆಲಿಕ್ಯಾಪ್ಟರ್ ಅನ್ನು ಜನರು ಬಾಡಿಗೆಗೆ ಪಡೆಯಲು ಹಲವಾರು ದಾರಿಗಳನ್ನ ಕಂಡುಕೊಂಡು, ಯಶಸ್ವಿಯಾಗಿ, ಒಂದರಿಂದ ನಾಲ್ಕೈದು ಹೆಲಿಕ್ಯಾಪ್ಟರ್ ಗಳನ್ನ ಬಾಡಿಗೆಗೆ ಬಿಡುವ ಮಟ್ಟಕೆ ಬೆಳೆಯುತ್ತಾರೆ. ಅಲ್ಲಿಗೆ ಅವರ ಸಾಧನೆ ಮುಗಿಯುವುದಿಲ್ಲ. ವಿಮಾನವನ್ನು ತರುತ್ತಾರೆ. ಜನರಿಗೆ ಕೇವಲ ಐದುನೂರು ರೂಪಾಯಿಯಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ಕೊಡುತ್ತಾರೆ. ಮುಂದೆ ಅವರ ಡೆಕ್ಕನ್ ಏವಿಯೇಶನ್ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದು ನಂಬರ್ 2 ಸ್ಥಾನ ಪಡೆಯುತ್ತದೆ. ಹದಿನೈದು ವರ್ಷಗಳ ಹಿಂದೆ ಆ ಸಂಸ್ಥೆಯನ್ನು 700  ಕೋಟಿಗೆ ವಿಜಯ್ ಮಲ್ಯಗೆ ಮಾರುತ್ತಾರೆ. ನಂತರ ಡೆಕ್ಕನ್ ಕಾರ್ಗೋ ಸಂಸ್ಥೆ ಸ್ಥಾಪಿಸಿ, ಅದರಲ್ಲೂ ಯಶಸ್ಸನ್ನ ಕಾಣುತ್ತಾರೆ. ಹಠ ಬಿಡದೆ ತ್ರಿವಿಕ್ರಮನಂತೆ ಒಂದಾದ ಮೇಲೋಂದು ರಿಸ್ಕ್ ತೆಗೆದುಕೊಂಡು, ನೂರಾರು ಕೋಟಿಯ ಮಾಲೀಕರಾಗಿದ್ದಾರೆ ಎಂದರೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಅವರ ಅನೇಕ ಸಾಹಸಗಳು, ವೈಫಲ್ಯಗಳು ಇಂದು ಉದ್ಯಮಕ್ಕೆ ಇಳಿಯುವ ಪ್ರತಿಯೊಬ್ಬರಿಗೂ ಒಂದೊಂದು ಪಾಠದಂತಿವೆ.

     ನನ್ನ ಸ್ನೇಹಿತನೊಬ್ಬ ಇಪ್ಪತ್ತು ವರ್ಷದ ಹಿಂದೆ, ಮೈಸೂರಿನಲ್ಲಿ ಸರ್ಕಾರಿ ಉದ್ಯೋಗ ಮಾಡುತಿದ್ದ. ಅವನಿಗೆ ಆ ದಿನನಿತ್ಯದ ರೂಟೀನ್ ಕೆಲಸ ಬೇಸರವಾಗಿ, ಹೊಸ ತಾಂತ್ರಿಕ ವಿಷಯವನ್ನು ಕಲಿಯಲು ಕೋರ್ಸ್ ಮಾಡಿದ. ಕೋರ್ಸ್ ಮುಗಿದ ನಂತರ, ಸರ್ಕಾರಿ ಕೆಲಸದ ಸಂಭಳದ ದುಪ್ಪಟ್ಟು ಹಣ ಬರುವ ಖಾಸಗಿ ಉದ್ಯೋಗ ದೊರೆಯಿತು. ಎಲ್ಲ ಲೆಕ್ಕಾಚಾರ ಮಾಡಿ, ಕೊನೆಗೊಂದು ದಿನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಅವನ ಕೆಲಸದ ಅಬುಭವಕ್ಕೆ ತಕ್ಕಂತೆ ಒಂದು ವರ್ಷದ ನಂತರ ಅಮೇರಿಕದಲ್ಲಿ ಉದ್ಯೋಗ ದೊರೆಯಿತು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಉದ್ಯೋಗ ಮಾಡಿ ಸಾಕಷ್ಟು ಹಣ ಸಂಪಾದಿಸಿ ಬೆಂಗಳೂರಿಗೆ ಮರಳಿದ, ಬೆಂಗಳೂರಿನಲ್ಲಿ ಮನೆಯೊಂದನ್ನ ಕಟ್ಟಿದ.  ನಂತರ ಹೊಸದೊಂದು ಕೆಲಸಕ್ಕೆ ಸೇರಿ, ಸಂತೋಷದಿಂದ ಜೀವನ ನಡೆಸುತಿದ್ದಾನೆ. ಈ ಇಪ್ಪತ್ತು ವರ್ಷಗಳಲ್ಲಿ ಅವನು ಸಂಪಾದಿಸಿದ ಹಣ ಕಡಿಮೆ ಏನಿಲ್ಲ, ಅರವತ್ತು ವರ್ಷದವರೆಗೂ  ಸರ್ಕಾರಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿದರೂ ಅಷ್ಟೊಂದು ಹಣ ಅವನಿಗೆ ದೊರೆಯುತ್ತಿರಲಿಲ್ಲ. ಅವನು ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಮುಂದೆ ಬಂದ. ಬೇರೆಯವರಿಗೆ ಅವಕಾಶವಿದ್ದರೂ, ರಿಸ್ಕ್ ತೆಗೆದುಕೊಳ್ಳಲು ಸಿದ್ದವಿರುವುದಿಲ್ಲ.

         ಮ್ಯೂಚುಯಲ್ ಫಂಡ್ಸ್, ಶೇರ್ ಮಾರ್ಕೆಟ್ಟಿನ ವ್ಯವಹಾರ ರಿಸ್ಕ್ ವ್ಯವಹಾರ. ಇದ್ದುದರಲ್ಲಿ ಮ್ಯೂಚುಯಲಿ ಫಂಡ್ಸ್ ಪರವಾಯಿಲ್ಲ ಎಂದು ಹೇಳಬಹುದು. ಈ ರಿಸ್ಕ್ ಎನ್ನುವ ಪದ ಕೇಳಿ, ನನ್ನಂತೆ ಬಹಳಷ್ಟು ಜನ ಈ ವ್ಯವಹಾರದಲ್ಲಿ ಹಣ ತೊಡಗಿಸದೆ ಸುಮ್ಮನಿದ್ದಾರೆ. ಆದರೆ, ಕೆಲವರು ಬಹಳಷ್ಟು ದುಡ್ಡು ಸಂಪಾದಿಸಿರುವುದು ಗುಪ್ತ ಸಂಗತಿಯೇನಲ್ಲ. ನಲವತ್ತು ವಯಸ್ಸಿಗೆ ರಿಟೈರ್ ಮೆಂಟ್ ತೆಗೆದುಕೊಂಡು ಮನೆಯಲ್ಲಿ ಕುಳಿತು ಪ್ರತಿತಿಂಗಳು ಸಾವಿರಾರು ರೂಪಾಯಿಯನ್ನ ಡಿವಿಡೆಂಟ್ ರೂಪದಲ್ಲಿ ಪಡೆಯುವವರೇನು ಕಮ್ಮಿಯಿಲ್ಲ. ನನ್ನ ಸ್ನೇಹಿತರೊಬ್ಬರು, ಎಂಟತ್ತು ವರ್ಷಗಳ ಹಿಂದೆ ಅಂದಾಜು ಹತ್ತು ಲಕ್ಷರೂಪಾಯಿಯನ್ನ ಈ ವ್ಯವಹಾರದಲ್ಲಿ ತೊಡಗಿಸಿದ್ದರು, ಇಂದು ಸುಮಾರು ಐವತ್ತು ಲಕ್ಷ ರೂಪಾಯಿಯಷ್ಟು ಆದಾಯ ಅವರದಾಗಿದೆ. ಲಕ್ಷಾಂತರ ಜನರು ಈ ಶೇರು ವ್ಯವಹಾರದಿಂದ ಕೋಟ್ಯಾದೀಶರೂ ಆಗಿದ್ದಾರೆ ಮತ್ತು ದಿವಾಳಿಯು ಆಗಿದ್ದಾರೆ. ರಿಸ್ಕ್ ಜತೆಗೆ ಬುದ್ದಿವಂತಿಕೆ ಇದ್ದರೆ, ಈ ವ್ಯವಹಾರದಲ್ಲಿ ಲಾಭ ಖಂಡಿತ ಸಾಧ್ಯ. 

 

ನನ್ನ ಆತ್ಮೀಯರೊಬ್ಬರು, ಮಸ್ಕತ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಹತ್ತು ವರ್ಷಗಳ ಸೇವೆಯ ನಂತರ ತಮ್ಮದೇ ಆದ ಕನ್ಸಲ್ಟೆನ್ಸಿ ಉದ್ಯಮವೊಂದನ್ನ ತೆರೆಯುತ್ತಾರೆ. ಇಂದು ಆ ಸಂಸ್ಥೆಯಲ್ಲಿ  ನೂರಾರು ಇಂಜಿನಿಯರ್ ಗಳಿಗೆ ಉದ್ಯೋಗ ನೀಡಿದ್ದಾರೆ. ಭಾರತ, ಆಫ್ರಿಕ, ಯುಏಇ ಯಲ್ಲಿ ವಿಭಾಗಗಳನ್ನ ತೆರೆದಿದ್ದಾರೆ. ಅವರಿಗೆ ದೊರೆತ ಒಂದು ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡೂ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದಾರೆ. ಅವರೇನಾದರು ರಿಸ್ಕ್ ತೆಗೆದುಕೊಳ್ಳದೆ ಕಂಪನಿಯನ್ನ ಸ್ಥಾಪಿಸದೇ ಇದ್ದಿದ್ದರೆ ಇಂದು ಅವರೊಬ್ಬ ಯಶಸ್ಸು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ನೂರಾರು ಜನರಿಗೆ ಕೆಲಸಕೊಡಲು ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರ ಮನೆಯೂ ಬೆಳಗಲು ಸಾಧ್ಯವಾಗುತ್ತಿರಲಿಲ್ಲ.

         ಕೆಲವರು ಚಿಕ್ಕದೊಂದು ಉದ್ಯಮವೊಂದನ್ನ ನಡೆಸಿಕೊಂಡು ಹೋಗುತ್ತಿರುತ್ತಾರೆ. ನಿರೀಕ್ಷೀತ ಆದಾಯಕ್ಕಿಂತ ಹೆಚ್ಚಿನ ಲಾಭ ಬಂದರೆ, ಯಾರು ಸುಮ್ಮನಿರುತ್ತಾರೆ ಹೇಳಿ. ಅದನ್ನ ಇನ್ನೂ ದೊಡ್ಡದಾದ ಉದ್ಯಮವನ್ನಾಗಿ ರೂಪಿಸಲು ಪ್ರಯತ್ನಿಸುತ್ತಾರೆ. ಕೆಲ ಬುದ್ದಿವಂತರು, ತಮ್ಮ ಮೊದಲಿನ ಆದಾಯಕ್ಕೆ ಕುತ್ತುಬಾರದಂತೆ ಹೊಸದಾದ ಬಿಜಿನೆಸ್ ಅನ್ನು ರೂಪಿಸಿಕೊಳ್ಳುತ್ತಾರೆ. ಎಲ್ಲಾ ರಿಸ್ಕ್ ಅನ್ನು ಲೆಕ್ಕಾಚಾರ ಮಾಡಿಯೇ ಮುಂದುವರೆಯುವವರು ಚಾಣಾಕ್ಷರು. ಈವತ್ತು, ಕರ್ನಾಟಕದಲ್ಲಿ ಎಲ್ಲೆಡೆಯೂ ಕಾಣಸಿಗುವ ಮಾರ್ವಾಡಿ ಸಮುದಾಯ ನೋಡಿ. ಒಂದು ಚಿಕ್ಕ ಅಂಗಡಿಯಿಂದ ಶುರು ಮಾಡಿ, ಈವತ್ತು ಕೋಟಿಗಟ್ಟಲೆ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಬಾಡಿಗೆಗೆ ಪಡೆದ ಅಂಗಡಿಗಳನ್ನ ಇಂದು ಅವರೇ ಖರೀದಿಸುವ ಹಂತಕ್ಕೆ ಅವರು ಬೆಳೆದಿದ್ದಾರೆ. ಅವರು ಬೆಳೆದಂತೆ, ನಾವು ಬೆಳೆಯುವುದಕ್ಕೆ ಸಾಧ್ಯವಿಲ್ಲ ಅಂತಲ್ಲ, ಆದರೆ ನಾವು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತೇವೆ. 

 ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಾನು, ಸುಮಾರು ಹತ್ತು ವರ್ಷಗಳ ಕಾಲ ದುಡಿದರೂ ಹೆಚ್ಚಿನದ್ದನ್ನೇನು ಸಂಪಾದಿಸಲಾಗಲಿಲ್ಲ. ದುಡಿದ್ದಿದ್ದೆಲ್ಲ ಖರ್ಚಾಗುತಿತ್ತು, ಭವಿಷ್ಯಕ್ಕೆ ಅಂತ ಉಳಿತಾಯ ಮಾಡುವುದು ಬಹಳ ಕಷ್ಟವಾಗುತಿತ್ತು. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರನ್ನ ಈಗಾಗಲೇ ನೋಡಿದ್ದರಿಂದ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆ ಮನದಲ್ಲಿ ಹುಟ್ಟಿತ್ತು. ಆದರೆ, ಹೊಸದಾಗಿ ರಿಸ್ಕ್ ತೆಗೆದುಕೊಳ್ಳಲು ಬಹಳ ಯೋಚಿಸುತಿದ್ದೆ. ಕೊನೆಗೊಂದು ದಿನ ನಿರ್ಧಾರ ಮಾಡಿ ಸುಮಾರು ಎರಡು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿ, ಕೊನೆಗೆ ಅದರಲ್ಲಿ ಸಫಲನಾದೆ. 2007 ರಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ಬಂದವನು, ಸುಮಾರು ಹದಿನೇಳು ವರ್ಷಗಳ ಕಾಲ ಅಲ್ಲಿ ಉದ್ಯೋಗ ಮಾಡುತ್ತ ಬಂದಿದ್ದೇನೆ. ಯಾವುದೇ ಬಂಡವಾಳ ಉಪಯೋಗಿಸದೇ ಕೇವಲ ವಿದ್ಯೆ, ಅನುಭವ, ನ್ಯಾಯ ನಿಷ್ಟೆಯಿಂದ ಸನ್ಮಾರ್ಗದಲ್ಲಿ ದುಡಿದು ನನ್ನ ಜೀವನವನ್ನ ರೂಪಿಸಿಕೊಂಡೆ.

ಹಣ ಮಾಡುವುದೇ ಉದ್ದೇಶವಾದರೆ, ಲಂಚ ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ಅಕ್ರಮಗಳು ಕಡಿಮೆ ಏನಿಲ್ಲ. ಒಬ್ಬ ಸರ್ಕಾರಿ ಉದ್ಯೋಗಿ, ಒಬ್ಬ ರಾಜಕಾರಣಿ ಕೋಟ್ಯಾಂತರ ಆಸ್ತಿ ಮಾಡಿದ್ದಾನೆ ಎಂದರೆ, ಅದರ ಮೂಲವನ್ನು ಎಲ್ಲರೂ ಊಹಿಸಬಹುದು. ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿಮಾಡಿದವರು ನಮ್ಮ ದೇಶದಲ್ಲಿ ಕಡಿಮೆ ಏನಿಲ್ಲ.  ಒಬ್ಬ ಬಿಜಿನೆಸ್ ಮ್ಯಾನ್ ಸಹ ಅನೈತಿಕ ಮಾರ್ಗದಲ್ಲಿ ದುಡಿಯಬಹುದು. ಅಕ್ರಮವನ್ನೂ ಮಾಡಬಹುದು. ಬಡ್ಡಿಗೆ ಸಾಲಕೊಟ್ಟು ಹಣಮಾಡುವವರು ಕಡಿಮೆ ಏನಲ್ಲ. ಇದ್ಯಾವುದೂ ಯಶಸ್ಸಂತು ಖಂಡಿತ ಅಲ್ಲ.

 

ಯಶಸ್ಸು ಕೇವಲ ಕೆಲವೇ ಕೆಲ ಜನರ ಸ್ವತ್ತಲ್ಲ. ಯಶಸ್ಸು ಎಲ್ಲರಿಗೂ ದಕ್ಕುತ್ತದೆ, ಅವಕಾಶ ನಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಯುವುದಕ್ಕಿಂತ ಬದಲಾಗಿ ನಾವೇ ಅವಕಾಶ ಸೃಷ್ಟಿಸಿ ಕೊಳ್ಳುವ ಪ್ರಯತ್ನ ಮಾಡಬೇಕು. ನ್ಯಾಯ ನೀತಿ ಧರ್ಮದಿಂದ ದುಡಿಯಬೇಕು ಅಂದರೆ, ಜೀವನದಲ್ಲಿ ಸ್ವಲ್ಪ ಮಟ್ಟಿನ ರಿಸ್ಕ್ ಅಗತ್ಯ.  ಕಂಫರ್ಟ್ ಝೋನ್ ನಿಂದ ಹೊರಬಂದು ಸ್ವಲ್ಪ ವಿಭಿನ್ನ ಪ್ರಯತ್ನ ಮಾಡಿ ಯಶಸ್ಸುಗಳಿಸುವುದರ ಬಗ್ಗೆ ಯೋಚಿಸಬೇಕು.

 

ರಿಸ್ಕ್ ತೆಗೆದುಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳು.

1.  ಸಾಧನೆಯ ಭಾವವನ್ನು ಅನುಭವಿಸುವಿರಿ

ಮೊದಲು ರಿಸ್ಕ್ ತೆಗೆದು ಕೊಳ್ಳುವ ಸಮಯದಲ್ಲಿ ಸ್ವಲ್ಪ ಹೆದರಿಕೆಯಾಗುವುದು ಸಹಜ. ನಿಖರವಾಗಿ ಯೋಜಿಸಿದಂತೆ ನಡೆಯದಿದ್ದರೂ ಸಹ, ನಿಮಗೊಂದು ಅನುಭವವಾಗುತ್ತದೆ.  ನಿಮ್ಮ ಧೈರ್ಯ ಮತ್ತು ಆ ಪ್ರಯತ್ನಕ್ಕಾಗಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಅದರಿಂದಾಗುವ ಲಾಭ ಅಥವ ನಷ್ಟ ನಿಮಗೊಂದು ಪಾಠ ಕಲಿಸುತ್ತದೆ.

 

2. ರೆಕಾರ್ಡ್ ಬ್ರೇಕ್ ಮಾಡ್ತೀರಿ ಗೊತ್ತಾ

ಕೆಲವೊಮ್ಮೆ, ನಾವು ನಮ್ಮ ಬಗ್ಗೆ ನಂಬಿಕೆಗಳು ಅಥವಾ ಊಹೆಗಳೊಂದಿಗೆ ಬೆಳೆಯುತ್ತೇವೆ. ಉದಾಹರಣೆಗೆ ನಾಲ್ಕು ಜನ ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅಥವ ಏನೋ ಒಂದು ಹಿಂಜರಿಕೆಯ ಭಾವನಮ್ಮನ್ನ ಕಾಡಲು ಪ್ರಾರಂಭಿಸುತ್ತದೆ.  ಈ ಭಯದಿಂದ ರಿಸ್ಕ್ ತೆಗೆದುಕೊಳ್ಳುವುದನ್ನ ನಾವು ನಿಲ್ಲಿಸುತ್ತೇವೆ. ಆದರೆ ಈ ಊಹೆ ಮತ್ತು ಹಳೆಯ ನಂಬಿಕೆಗಳ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆ. ಒಂದೊಮ್ಮೆ ಆತ್ಮ ವಿಶ್ವಾಸ ದಿಂದ ಮುಂದೆ ಹೆಜ್ಜೆ ಇಟ್ಟು, ಯಶಸ್ಸು ದೊರೆತಮೇಲೆ,  ಈ ಊಹಾ ಪೋಹಗಳು, ಹಳೆಯ ನಂಬಿಕೆಗಳು, ನಕರಾತ್ಮಕ ಆಲೋಚನೆಗಳು, ಮೂಲೆ ಸೇರುವುದು ನಿಶ್ಚಿತ.  ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಮೂಡುವುದು ಸಹಜ.

ಹಳೆ ರೆಕಾರ್ಡ್ ಬ್ರೇಕ್ ಮಾಡಿದೆವು ಎನ್ನುವ ತೃಪ್ತ ಭಾವನೆ ನಿಮ್ಮಲ್ಲಿ ಮೂಡುತ್ತದೆ.

 

3. ನಿಮ್ಮ ಬಗ್ಗೆ ನೀವು ಇನ್ನಷ್ಟು ಕಲಿಯುವಿರಿ

ನೀವು ಏನು ಮಾಡಲು ಇಷ್ಟ ಪಡುತ್ತೀರಿ? ನಿಮ್ಮನ್ನು ಯಾವುದು ಸಂತೋಷಗೊಳಿಸುತ್ತದೆ? ನಿಮ್ಮ ಮೌಲ್ಯಗಳು ಯಾವುವು? ನೀವು ಯಾರು ಮತ್ತು ನಿಮ್ಮ ನಡವಳಿಕೆಯನ್ನು ಯಾವುದು ಪ್ರೇರೇಪಿಸುತ್ತದೆ? ಹೀಗೆ ನೀವು ಇನ್ನಷ್ಟು ತಿಳಿದುಕೊಳ್ಳುತ್ತೀರಿ. ಹೊಸ ಸವಾಲುಗಳು ನಿಮ್ಮನ್ನು ಮೆಚ್ಚಿಸಲು ಮತ್ತು ಬೆಳೆಯಲು ಅವಕಾಶವನ್ನು ನೀಡುತ್ತವೆ.

 

4. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

ಪ್ರತಿ ಹೊಸ ಸವಾಲು ಮತ್ತು ಅಪಾಯದೊಂದಿಗೆ ಮುಂದೆ ಹೆಜ್ಜೆ ಇಟ್ಟಾಗ,  ಸಂದರ್ಭಗಳನ್ನು ನಿಭಾಯಿಸುವ ನಿಮ್ಮ ಸ್ವಂತ ಸಾಮರ್ಥ್ಯವನ್ನು ನೀವು ಮನವರಿಕೆ ಮಾಡಿಕೊಳ್ಳುತ್ತೀರಿ. ಇದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ತುಂಬುತ್ತದೆ. ಎಲ್ಲ ಸಂಧರ್ಭಕ್ಕೆ  ಹೊಂದಿಕೊಳ್ಳುವ ವ್ಯಕ್ತಿಯನ್ನಾಗಿ ಮತ್ತು ಉತ್ತಮ ನಾಯಕನನ್ನಾಗಿ ಮಾಡುತ್ತದೆ. ಈ ಎಲ್ಲಾ ಅನುಭವ ನಿಮ್ಮ ನಿರ್ಧಾರ-ಮಾಡುವ ಕೌಶಲ್ಯಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಬಹುದು.

 

5. ಹೊಸ ಅವಕಾಶಗಳನ್ನು ತೆರೆಯುತ್ತದೆ

ನಿಮ್ಮ ಆರಾಮ ವಲಯ (ಕಂಫರ್ಟ್ ಝೋನ್) ದಿಂದ ಹೊರಬರುವುದು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಎಲ್ಲಾ ರೀತಿಯ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ತೆರೆಯುವುದು ಅಥವಾ ನಿಮ್ಮ ಉದ್ಯಮದಲ್ಲಿ ಟ್ರೆಂಡ್‌ಸೆಟರ್ ಆಗುವುದನ್ನು ನೀವು ಕಂಡುಕೊಳ್ಳಬಹುದು.

 

6. ವ್ಯಕ್ತಿತ್ವವನ್ನು ರೂಪಿಸುತ್ತದೆ.

ರಿಸ್ಕ್ ತೆಗೆದುಕೊಳ್ಳುವುದರಿಂದ, ಪ್ರತಿಕೂಲ ಫಲಿತಾಂಶಗಳು ಮತ್ತು ಹಿನ್ನಡೆಗಳನ್ನು ಹೇಗೆ ನಿರ್ವಹಿಸುವುದು ಎಂಬುವ ಪಾಠವನ್ನು ಕಲಿಯುತ್ತೀರಿ.  ಪ್ರತಿಕೂಲ ಪರಿಸ್ಥಿತಿಯಲ್ಲಿ, ಸಮಚಿತ್ತದಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು,  ಏನೇ ಸಂಭವಿಸಿದರೂ ಅಭಿವೃದ್ಧಿ ಹೇಗೆ ಹೊಂದಬಹುದು ಮತ್ತು ಯಶಸ್ಸಿಗೆ ವಿವಿಧ ಮಾರ್ಗಗಳನ್ನು ಹುಡುಕುವಲ್ಲಿ ಹೇಗೆ ಹೆಚ್ಚು ಪ್ರವೀಣರಾಗಬಹುದು ಎಂದು ನಿಮಗೆ ನಿಧಾನಕ್ಕೆ ತಿಳಿಯುತ್ತ ಹೋಗುತ್ತದೆ.

 

7. ವಿಷಾದವಿಲ್ಲ

ಲೆಕ್ಕಹಾಕಿದ ರಿಸ್ಕ್ (ಅಪಾಯಗಳು) ತೆಗೆದುಕೊಳ್ಳುವುದರಿಂದ ಯಾವಾಗಲೂ ಧನಾತ್ಮಕ ಫಲಿತಾಂಶಗಳನ್ನ ನಿರೀಕ್ಷಿಸಲು ಸಾಧ್ಯವಾಗದಿದ್ದರೂ ಸಹ ಆ ರಿಸ್ಕ್ ನಿಂದ ಆಗುವ ಪಾಠವನ್ನ ನಾವು ಕಲಿಯಬಹುದು, ಮುಂದಿನ ಅಧ್ಯಾಯಕ್ಕೆ ಅದೊಂದು ಅನುಭವ ಎಂಬುದನ್ನ ಮರೆಯಬಾರದು. ಒಂದು ಅಧ್ಯಯನದ ಪ್ರಕಾರ, ರಿಸ್ಕ್ ತೆಗೆದುಕೊಳ್ಳದೆ ಇರುವವರಿಗಿಂತ, ರಿಸ್ಕ್ ತೆಗೆದುಕೊಳ್ಳುವವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಮತ್ತು ಸಂತೋಷವಾಗಿರುತ್ತಾರೆ.

 ಪಿ.ಎಸ್.ರಂಗನಾಥ

ಲೇಖಕರು,

ಶುಕ್ರವಾರ, ಜೂನ್ 28, 2024

ಜೀವನ ಪಾಠ


 *ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ❓*

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ. 

ಬಹಳಷ್ಟು ಜನರಲ್ಲಿ ನಿವೃತ್ತಿ ನಂತರ ಒಂಟಿತನ ಕಾಡುವುದಕ್ಕೆ ಶುರುವಾಗುತ್ತದೆ. ಕೆಲವರು ಖಿನ್ನತೆಗೂ ಒಳಗಾಗುತ್ತಾರೆ. ನ್ಯಾಯ ನೀತಿ, ನೇರ ಮತ್ತು ನಿಷ್ಟುರತೆಯಿಂದ ಬದುಕಿದವರೂ ಇನ್ನೂ ಹೆಚ್ಚಿನ ಖಿನ್ನತೆಗೆ ಒಳಗಾಗುವ ಸಾಧ್ಯತೆ ಜಾಸ್ತಿಯಿರುತ್ತದೆ. ಜತೆಯಲ್ಲಿರುವವರು ಖಿನ್ನತೆಯಿಂದ ಪಾರುಮಾಡುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಮಾನಸಿಕ ಆರೋಗ್ಯದ ಪರಿಣಾಮ ದೇಹದ ಮೇಲೂ ಬೀರಲು ಪ್ರಾರಂಭಿಸುತ್ತದೆ. 

ಒಂದು ನಗರದಲ್ಲಿ, ಅಂದಾಜು 70 ವರ್ಷ ವಯಸ್ಸಿನ ಒಬ್ಬ ಸಂಭಾವಿತ ವ್ಯಕ್ತಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು, ಎಲ್ಲದರಲ್ಲೂ ನಿರಾಸಕ್ತಿ, ಯಾವಗಲೂ ಯೋಚನೆ ಮಾಡುವುದು, ಆ ಸಮಸ್ಯೆ, ಈ ಸಮಸ್ಯೆ ಅಂತ ಗೊಣಗಾಡುವುದು ನಡೆದಿತ್ತು. ವಯಸ್ಸಾಯ್ತು, ಆರಾಮಾಗಿರಿ ಎಂದು ಮನೆಯವರು ಹೇಳಿದರು, ಕೇಳ್ತಿರಲಿಲ್ಲ. ಇವರ ಅವಸ್ಥೆ ಕಂಡ ಅವರ ಪತ್ನಿ, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಲು ಕೌನ್ಸೆಲಿಂಗ್ ಸಲಹೆಗಾರರೊಂದಿಗೆ ಮಾತನಾಡಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಒಂದು ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. 

ಇವರನ್ನ ಭೇಟಿ ಮಾಡಿದ ವೈದ್ಯರು, ಏನು ಸಮಸ್ಯೆ? ಅಂತ ಕೇಳ್ತಾರೆ.

"ಅವರು ತೀವ್ರ ಖಿನ್ನತೆಯಲ್ಲಿದ್ದಾರೆ, ದಯವಿಟ್ಟು ಅದನ್ನು ನೋಡಿ.."  ಎಂದು ಪತ್ನಿ, ಮನೆಯಲ್ಲಿ ಅವರು ನಡೆದುಕೊಳ್ಳುವ ವಿಷಯದ ಕುರಿತು ಹೇಳ್ತಾರೆ...

ಆಯ್ತು ನೀವು ಹೊರಗೆ ಕುಳಿತುಕೊಳ್ಳಿ, ಇವರ ಬಳಿ ಪರ್ಸನಲ್ ಆಗಿ ಮಾತನಾಡುವುದಿದೆ ಎಂದು ಹೆಂಡತಿಯನ್ನು ಹೊರಕಳಿಸುತ್ತಾರೆ.

ವೈದ್ಯರು, ಕೆಲವು ವೈಯಕ್ತಿಕ ವಿಷಯಗಳನ್ನು ಆ ಹಿರಿಯರ ಬಳಿ ಕೇಳುವ ಮೂಲಕ ತಮ್ಮ ಕೌನ್ಸೆಲಿಂಗ್ ಅನ್ನು ಪ್ರಾರಂಭಿಸುತ್ತಾರೆ.

ಆ ಹಿರಿಯರು ಮಾತನಾಡುತ್ತ ಹೋಗ್ತಾರೆ, 

ನನ್ನ ನಿವೃತ್ತಿ ನಂತರ ಬಹಳಷ್ಟು ವಿಷಯಗಳು ಕುರಿತು ಚಿಂತೆ ಮಾಡ್ತಿದ್ದೇನೆ. ಮನೆ ಸಮಸ್ಯೆ, ಮಕ್ಕಳ ಭವಿಷ್ಯ, ಈಗಿರುವ ಸಾಲಗಳು, ಮಗನ ಮದುವೆ, ಮಗಳ ಜೀವನದ ಭದ್ರತೆ, ಹೀಗೆ ಎಲ್ಲದರ ಕುರಿತು ಬಹಳಷ್ಟು ಯೋಚಿಸ್ತಿದ್ದೇನೆ. ನಾನು ಇಷ್ಟಪಡುವ ಎಲ್ಲದರಲ್ಲೂ ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಹೊರ ಜಗತ್ತಿನ ಜನ, ನಾನು ಬಹಳ ಅದೃಷ್ಟಶಾಲಿ, ಉತ್ತಮ ಜೀವನ ನಡೆಸ್ತಿದ್ದಾನೆ. ಎಲ್ಲ ಸೌಕರ್ಯ ಇದೆ ಅಂತ ಅಂದುಕೊಂಡಿದ್ದಾರೆ, ನಿಜ ಹೇಳಬೇಕೆಂದರೆ, ಅವರು ಭಾವಿಸಿದಷ್ಟು ಹಣ, ಆಸ್ತಿ, ಅಂತಸ್ತು, ಸುಖ ನೆಮ್ಮದಿ ನನ್ನಲ್ಲಿಲ್ಲ.  ಈಗ ಬರೀ 70 ವರ್ಷ ವಯಸ್ಸು, ಇನ್ನೂ ಜೀವನದಲ್ಲಿ ಏನಾದರು ಮಾಡಬೇಕು ಎನ್ನುವ ಆಸೆ ಇದೆ. ಆದರೆ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದೇನೆ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ಏನು ಮಾಡುವುದು ಗೊತ್ತಾಗ್ತಿಲ್ಲ ಎಂದು ಮನ ಬಿಚ್ಚಿ ಮಾತನಾಡುತ್ತಾರೆ.


ಆಗ ಆ ವೈದ್ಯರು, "ನೀವು ಯಾವ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದೀರಿ." ಎಂದು ಪ್ರಶ್ನಿಸಿದರು.


ಆ ಸಜ್ಜನರು ತಾವು ಓದಿದ ಶಾಲೆ, ಅವರ ಊರಿನ ಹೆಸರನ್ನು ಹೇಳಿದರು.

ಗುಡ್, ನಿಮಗೆ ನಿಮ್ಮ ಶಾಲೆ ಹೆಸರು ನೆನಪಿದೆ. ನನ್ನ ಟ್ರೀಟ್ ಮೆಂಟ್ ನ ಮೊದಲ ಭಾಗ ಏನೆಂದರೆ,  ನೀವು ಆ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾಧ್ಯಯರನ್ನ ಭೇಟಿ ಮಾಡಿ  ನಿಮ್ಮ 'ಕ್ಲಾಸ್ ರಿಜಿಸ್ಟರ್' ಇನ್ನೂ ಇದ್ದರೆ ಅದನ್ನು ಪತ್ತೆ ಮಾಡಿ, ನಿಮ್ಮ ಗೆಳೆಯರ ಹೆಸರುಗಳನ್ನು ಬರೆದುಕೊಂಡು, ಅವರ ಪ್ರಸ್ತುತ ಯೋಗಕ್ಷೇಮದ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿ. ಅವರ ಬಗ್ಗೆ ನಿಮಗೆ ಸಿಗುವ ಎಲ್ಲಾ ಮಾಹಿತಿಯನ್ನು ಬರೆದು ಒಂದು ತಿಂಗಳ ನಂತರ ನನ್ನನ್ನು ಭೇಟಿ ಮಾಡಿ..❗ ಎಂದು ಅವರನ್ನ ಬೀಳ್ಕೊಟ್ಟರು.

ಆ ಹಿರಿಯರು ತಾವು ಓದಿದ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾದ್ಯಯರನ್ನ ಭೇಟಿ ಮಾಡಿ, ಅಂದಿನ ರಿಜಿಸ್ಟರ್ ಅನ್ನು ಪಡೆದು, ತನ್ನ ಸಹಪಾಠಿಗಳ ಪ್ರತಿ ಹೆಸರನ್ನು ಬರೆದುಕೊಂಡರು. ಅದರಲ್ಲಿ ಒಟ್ಟು 120 ಹೆಸರುಗಳಿದ್ದವು. ಅವರು ಒಂದು ತಿಂಗಳು ಹಗಲಿರುಳು ಪ್ರಯತ್ನಿಸಿ ಸಾಧ್ಯವಾದಷ್ಟು ಜನರ ಸ್ಥಿತಿಗತಿಯನ್ನು ದಾಖಲಿಸುತ್ತ ಹೋದರು.

▪️ಅವರಲ್ಲಿ 20 ಮಂದಿ ಈಗಾಗಲೇ ಮರಣ ಹೊಂದಿದ್ದರು. 

▪️ 4 ಜನರು ವಿಧವೆಯರಾಗಿದ್ದರು

▪️ 4 ಜನರು ವಿದುರರಾಗಿದ್ದರು

▪️13 ಮಂದಿ ವಿಚ್ಛೇದನ ಪಡೆದಿದ್ದರು.

▪️10 ಮಂದಿ ಕುಡುಕರು ಮತ್ತು ಮಾದಕ ವ್ಯಸನಿಗಳಾಗಿದ್ದರು.

▪️ 5 ಜನರ ಬದುಕು ಶೋಚನೀಯವಾಗಿತ್ತು, 

▪️ 6 ಜನರು ನಂಬಲು ಸಾಧ್ಯವಾಗದಷ್ಟು ಶ್ರೀಮಂತರಾಗಿದ್ದರು.

▪️ಕೆಲವು ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದರು.

▪️ಕೆಲವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು,

▪️ಕೆಲವರು ಮಧುಮೇಹಿಗಳು,

▪️ಕೆಲವರು ಆಸ್ತಮಾ ರೋಗಿಗಳು,

▪️ ಕೆಲವರು ಹೃದ್ರೋಗ ರೋಗಿಗಳು.

▪️ ಕೆಲವರು ಕೈ/ಕಾಲು ಅಥವಾ ಬೆನ್ನುಹುರಿಗೆ ಗಾಯಗಳಾಗಿ ಹಾಸಿಗೆಯಲ್ಲಿದ್ದರು.

▪️ ಕೆಲವರ ಮಕ್ಕಳು ಮಾದಕವ್ಯಸನಿಗಳು, ಅಲೆಮಾರಿಗಳು, ಕೆಲವರು ಮನೆಬಿಟ್ಟು ಹೋಗಿದ್ದರು.

▪️ ಒಬ್ಬರು ಜೈಲಿನಲ್ಲಿದ್ದರು.

▪️ ಮತ್ತೊಬ್ಬ ಎರಡು ವಿಚ್ಛೇದನದ ನಂತರ ಒಬ್ಬ ವ್ಯಕ್ತಿಯು ಮೂರನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದನು.

ಇಷ್ಟು ವಿವರ ಮಾತ್ರ ಪಡೆಯಲು ಸಾಧ್ಯವಾಯಿತು. ಕೇವಲ ಎಪ್ಪತ್ತು ಎಂಬತ್ತು ಜನರ ಸ್ಥಿತಿಗತಿ ಹೀಗಿತ್ತು. ಎಲ್ಲವನ್ನ ದಾಖಲಿಸಿಕೊಂಡು ವೈದ್ಯರನ್ನ ಭೇಟಿ ಮಾಡಿದರು.

ವೈದ್ಯರು ಪಟ್ಟಿಯನ್ನು ನೋಡಿ, ವಾವ್ ಅದ್ಭುತವಾದ ಕೆಲಸ ಮಾಡಿದ್ದೀರಿ, ಎಷ್ಟೆಲ್ಲ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿದ್ದೀರಿ. ನೀವು ತುಂಬಾ ಗ್ರೇಟ್ ಎಂದು ಹೊಗಳಿದರು. "ಈಗ ನಿಮ್ಮ ಖಿನ್ನತೆ ಹೇಗಿದೆ" ಎಂದು ಪ್ರಶ್ನೆ ಹಾಕಿದರು.

ಆ ಹಿರಿಯರಿಗೆ ಸಂಪೂರ್ಣವಾಗಿ ಅರಿವಾಯಿತು.

▪️ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ,

▪️ ಅವರು ಹಸಿವಿನಿಂದ ಬಳಲುತ್ತಿರಲಿಲ್ಲ,

▪️ ಅವರ ಮನಸ್ಸು ಪರಿಪೂರ್ಣವಾಗಿತ್ತು,

▪️ ಅವರು ದುರದೃಷ್ಟವಂತನಾಗಿರಲಿಲ್ಲ.

▪️ ತನ್ನ ಹೆಂಡತಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು ಮತ್ತು ಆರೋಗ್ಯವಂತರಾಗಿದ್ದಾರೆ.

▪️ ತಾವು ತುಂಬಾ ಅದೃಷ್ಟವಂತರು ಎಂದು ಭಾವಿಸಿದರು.

▪️ ಸ್ವತಃ ಅವರು ಸಹ ಆರೋಗ್ಯವಾಗಿದ್ದರು, ಅವರು ದಿನಕ್ಕೆ ಮೂರು ಊಟವನ್ನು ಸಂಪೂರ್ಣವಾಗಿ ಜೇರ್ಣಿಸಿಕೊಳ್ಳವರಾಗಿದ್ದರು. 

▪️ ತಮ್ಮ ಸ್ನೇಹಿತರ ಮುಂದೆ ಇವರ ಸಮಸ್ಯೆಗಳು ಪೇಲವವಾಗಿದ್ದವು. 


ಜಗತ್ತಿನಲ್ಲಿ ಕೆಲ ಜನರು ನಿಜಕ್ಕೂ ಕಷ್ಟ ಅನುಭವಿಸುತಿದ್ದಾರೆ. ಕೆಲವರು ಬಹಳಷ್ಟು ದುಃಖಿಗಳು. ಅವರಿಗೆ ಹೋಲಿಸಿದರೆ ತಾನು ತುಂಬಾ ಸಂತೋಷದಿಂದ್ದೇನೆ ಮತ್ತು ತಾನು ನಿಜಕ್ಕೂ ಅದೃಷ್ಟಶಾಲಿ ಎಂದು ಆ ವ್ಯಕ್ತಿ ಅರಿತುಕೊಳ್ತಾನೆ.

ಅರ್ಥ ಆಯಿತು ಡಾಕ್ಟ್ರೆ, ನನಗೆ ಯಾವುದೇ ಸಮಸ್ಯೆ ಇಲ್ಲ. ಏನೇನೋ ಯೋಚಿಸಿ, ಮನಸ್ಸನ್ನ ಕೆಡಿಸಿಕೊಳ್ತಿದ್ದೆ. ಜೀವನ ಬಂದಹಾಗೆ ಸ್ವೀಕರಿಸುತ್ತ ಹೋಗಬೇಕು ಎನ್ನುವುದನ್ನ ಮರೆತಿದ್ದೆ. ಏನು ಆಗಬೇಕು ಅಂತ ಭಗವಂತ ನಿರ್ಧರಿಸಿರುತ್ತಾನೋ, ಅದು ಹಾಗೆಯೇ ನಡೆಯುತ್ತ ಹೋಗುತ್ತೆ. ಚಿಂತೆ ಮಾಡಿ ಪ್ರಯೋಜನವಿಲ್ಲ, ಬರ್ತೀನಿ ಡಾಕ್ಟ್ರೆ. ಧನ್ಯವಾದಗಳು ಎಂದು ಅಲ್ಲಿಂದ ಹೊರಟರು.

*******

ಜೀವನ ಪಾಠ ಏನೆಂದರೆ, ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಬಾರದು. ಇನ್ನೊಬ್ಬರ ತಟ್ಟೆಗಳಲ್ಲಿ ಇಣುಕಿ ನೋಡುವ ಅಭ್ಯಾಸವನ್ನು ಬಿಡಿ,  ನಮ್ಮ ತಟ್ಟೆಯಲ್ಲಿನ ಆಹಾರವನ್ನು ಪ್ರೀತಿಯಿಂದ ತೆಗೆದುಕೊಂಡು ಸೇವಿಸಬೇಕು. ಪ್ರತಿಯೊಬ್ಬರೂ ಅವರವರ ಹಣೆಬರಹದ ಪ್ರಕಾರ ಜೀವನ ನಡೆಸುತಿದ್ದಾರೆ. ನಾವು ಸಹ ಅಷ್ಟೆ, ಅದೇ ಸಮಾನಗತಿಯಲ್ಲಿ ಜೀವಿಸುತಿದ್ದೇವೆ, ನಾವು ಬೇರೆಯವರಿಗಿಂತ ತಡವಾಗಿ ಅಥವಾ ಮುಂಚೆ ಎನ್ನುವ ಭಾವ ಇಲ್ಲವೇ ಇಲ್ಲ.

ಪಾಲಿಗೆ ಬಂದದ್ದು ಪಂಚಾಮೃತ, ಒಳ್ಳೆಯದು ಅಥವಾ ಕೆಟ್ಟದ್ದು, ದೊಡ್ಡದು ಅಥವಾ ಚಿಕ್ಕದು, ಭೇದ ಭಾವ ಸಲ್ಲದು. ಇವತ್ತು ದೇವರು ಕೊಟ್ಟಿರುವ ಉತ್ತಮ ಜೀವನಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಂದೆ ಸಾಗೋಣ. ಈ ಜಗತ್ತಿಗೆ ನಾವು ಒಬ್ಬ ಪ್ರಯಾಣಿಕ ನಿದ್ದಂತೆ, ಪ್ರಯಾಣದಲ್ಲಿ ಎಲ್ಲವನ್ನ ಅನುಭವಿಸುತ್ತ ಸಾಗಬೇಕು, ನಮ್ಮ ನಿಲ್ದಾಣ ಬಂದಾಗ ಇಳಿದು ಹೋಗುತ್ತಿರಬೇಕು. 

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದಂತೆ, 

''ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂ ಮಾ ತೇ ಸಂಗೋಸ್ತ್ವಕರ್ಮಣಿ||''


ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ  ಕೆಲಸದಲ್ಲಿ ಮಾತ್ರ ಹಕ್ಕನ್ನು ಹೊಂದಿರುತ್ತಾನೆ ವಿನಃ, ಅದರ ಫಲಿತಾಂಶಗಳಲ್ಲಿ ಅಲ್ಲ. ಆದ್ದರಿಂದ, ನಿಮ್ಮ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ನೀವು ಮಾಡುವ ಕೆಲಸದಲ್ಲಿ ಫಲ ಸಿಗುತ್ತದೆಯೇ..? ಅಥವಾ ಇಲ್ಲವೇ..? ಎಂಬುದರ ಬಗ್ಗೆ ಯೋಚಿಸದಿರಿ. ಇಷ್ಟು ಅರ್ಥ ಮಾಡಿಕೊಂಡರೆ ಜೀವನ ತುಂಬಾ ಸರಳ. 

ವಿ.ಸೂ:  ಈ ಲೇಖನದ ಮೂಲ ಇಂಗ್ಲೀಷಿನಲ್ಲಿ ಯಾರೋ ಬರೆದಿದ್ದು, ತುಂಬಾ ಚೆಂದದ ಬರಹ. ಇದನ್ನ ಕನ್ನಡಕ್ಕೆ ಭಾವಾನುವಾದ ಮಾಡಿ ಜನರಿಗೆ ಜೀವನದ ವಿಷಯವನ್ನ ಸರಳವಾಗಿ ಹೇಳುವ ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೀನಿ. ಧನ್ಯವಾದಗಳು.

PS.Photo is just illustrative, not relevant to above Article




ಸೋಮವಾರ, ಜೂನ್ 10, 2024

ಕರ್ನಾಟಕಕ್ಕೆ ನಾಲ್ಕು ಮಂತ್ರಿ ಸ್ಥಾನ ನೀಡಿ, ಬಿಜೆಪಿ ಹೈಕಮಾಂಡ್ ಏನು ಸಂದೇಶ ನೀಡಲು ಹೊರಟಿದೆ?

ಶ್ರೀ ನರೇಂದ್ರ ಮೋದಿ ಅವರು 09-06-2024 ರಂದು ಮೂರನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಜತೆಯಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಜೆಡಿಎಸ್‌ನ  ಹೆಚ್‌ ಡಿ ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್‌ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್‌ ಹೊರತು ಪಡಿಸಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ವಿಂಗಡಿಸಿ ನೋಡೋದಾದ್ರೆ, ಉತ್ತರ ಕರ್ನಾಟಕದಿಂದ ಕೇವಲ ಒಬ್ಬರಿಗೆ ಮಾತ್ರ ಮತ್ತು ದಕ್ಷಿಣ ಕರ್ನಾಟಕ ದಿಂದ ಮೂವರಿಗೆ ಮಂತ್ರಿಯಾಗುವ ಅವಕಾಶ ದೊರೆತಿದೆ. NDA ಪಾಲುದಾರರಾಗಿರುವುದರಿಂದ ಸಹಜವಾಗಿ ಜೆಡಿಎಸ್‌ನ  ಹೆಚ್‌.ಡಿ.ಕುಮಾರಸ್ವಾಮಿಗೆ ಮಂತ್ರಿ ಪದವಿ ಅನಾಯಾಸವಾಗಿ ಒಲಿದು ಬಂದಿದೆ. ಪ್ರಹ್ಲಾದ್‌ ಜೋಷಿ ಒಬ್ಬ ಅನುಭವಿ ರಾಜಕಾರಣಿ ಯಾಗಿರುವುದರಿಂದ ಅವರನ್ನ ಮತ್ತೊಮ್ಮೆ ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪರ ಬಳಗದಲ್ಲಿ ಗುರುತಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ಅಚ್ಚರಿಯ ಸನ್ನಿವೇಶದಲ್ಲಿ ವಿ. ಸೋಮಣ್ಣನವರು ರಾಜ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡಿನ ಸಂದೇಶದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಂತು ಸೋತಿದ್ದ ಇವರು ಇದೀಗ ತುಮಕೂರು ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. 

    ಮೋದಿ ನೇತೃತ್ವದ ಎನ್ಡಿಎ ಸರಕಾರ ಮೂರನೆ ಬಾರಿ ಅಧಿಕಾರಕ್ಕೇರಿ, ಈಗ ಸೋಲು ಗೆಲುವಿನ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.    ಕಳೆದ ಬಾರಿ 25 ಕ್ಷೇತ್ರ ಗೆದ್ದು ಅತಿ ಹೆಚ್ಚು ಗಳಿಸುವ ವಿಶ್ವಾಸ ಹೊಂದಿದ್ದ  ಕರ್ನಾಟಕದಲ್ಲಿ ಈ ಬಾರಿ ಸೀಟ್ ಗಳು ಕಡಿಮೆಯಾಗಿದ್ದು ಬಿಜೆಪಿ ಹೈಕಮಾಂಡಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಉತ್ತರ ಕರ್ನಾಟಕದ 12 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಲಿದಿರುವುದು ಕೇವಲ ಆರು. ದಕ್ಷಿಣ ಕರ್ನಾಟಕದ 16 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಗೆದ್ದಿರುವುದು, ಬರೋಬ್ಬರಿ 13 ಕ್ಷೇತ್ರಗಳು. 

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ, ಸುಲಭವಾಗಿ ಗೆಲ್ಲಬಹುದಾಗಿದ್ದ, ದಾವಣಗೆರೆ, ಚಿಕ್ಕೋಡೀ, ಬೀದರ್, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳು ತಪ್ಪಿ ಹೋಗಿದೆ. ಕರ್ನಾಟಕದಲ್ಲಿ ಪ್ರತಿಬಾರಿ ಅಧಿಕಾರಕ್ಕೆ ಬಂದಾಗ ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ ಕೊಟ್ಟಿದ್ದರೂ ಸಹ ಸ್ಥಳೀಯ ನಾಯಕತ್ವ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಪಾಳಯದಲ್ಲಿ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಅತೀವ ಲಾಭವಾಗಿದೆ ಆದರೆ, ಈ ಬಾರಿ ಬೆಂಬಲಿಸುತಿದ್ದ ಲಿಂಗಾಯತರು ಬಿಜೆಪಿಯ ಕೈ ಹಿಡಿಯಲಿಲ್ಲ ಎನ್ನುವುದಕ್ಕಿಂತ, ಸ್ಥಳೀಯ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ ಎನ್ನುವ ಬೇಸರ ಹೈಕಮಾಂಡಿನಲ್ಲಿದೆ. 

ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಗೆದ್ದರೂ, ಪಕ್ಕದ ದಾವಣಗೆರೆ ಕ್ಷೇತ್ರ ಉಳಿಸಿಕೊಳ್ಳಲಾಗಲಿಲ್ಲ. ಜಗದೀಶ ಶೆಟ್ಟರ್ ಬೆಳಗಾವಿ ಗೆದ್ದರೂ ಪಕ್ಕದ ಚಿಕ್ಕೋಡಿ ಗೆಲ್ಲಿಸಿಕೊಡಲಾಗಲಿಲ್ಲ, ಹೀಗಾಗಿ ಇವರಿಬ್ಬರಿಗೆ ಮಂತ್ರಿ ಪದವಿ ತಪ್ಪಿರಬಹುದು ಎಂದು ಊಹಿಸಲಾಗುತ್ತಿದೆ. ಅದೂ ಅಲ್ಲದೆ, ಇವರಿಬ್ಬರೂ ಮುಖ್ಯಮಂತ್ರಿಯಾಗಿ ಕೆಲಸಮಾಡಿರುವುದರಿಂದ ಬಿಎಸ್ ವೈ ವಿರೋಧಿ ಎಂದೇ ಗುರುತಿಸಿಕೊಂಡಿರುವ ಸೋಮಣ್ಣನಂತಹ ಲಿಂಗಾಯಿತ ನಾಯಕನಿಗೆ ಮಣೆ ಹಾಕಿದ್ದಾರೆ. ಬಿಎಸ್ ವೈ ಅವರ ಮಗ ಬಿ.ವೈ.ರಾಘವೇಂದ್ರ ಮೂರನೇ ಬಾರಿಗೆ ಸಂಸದರಾಗಿರುವುದರಿಂದ ಅವರಿಗೆ ಮಂತ್ರಿ ಪದವಿ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ವಿಜಯೇಂದ್ರ ಕರ್ನಾಟಕದ ಅಧ್ಯಕ್ಷರಾಗಿರುವುದರಿಂದ, ರಾಘವೇಂದ್ರ ಅವರನ್ನ ಪರಿಗಣಿಸಲಿಲ್ಲ. 

    ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆ ಬಿಜೆಪಿ ಹೈಕಮಾಂಡಿಗೆ ಮೊದಲೇ ದೊರಕಿತ್ತು. ಪಂಚ ಗ್ಯಾರಂಟಿಯಿಂದಾಗಿ  ಕಾಂಗ್ರೆಸ್ ಪಾಳಯ 18-20 ಸೀಟ್ ಗಳನ್ನ ಗಳಿಸುವ ವಿಶ್ವಾಸ ಹೊಂದಿತ್ತು. ಈ ಸೂಚನೆ ಮೊದಲೆ ಸಿಕ್ಕಿದ್ದರಿಂದ  ಬಿಜೆಪಿ ಹೈಕಮಾಂಡ್, ಜೆಡಿಎಸ್ ಜತೆಗೆ ಮೈತ್ರಿ ಮುಂದಾಯಿತು. ಜೆಡಿಎಸ್ ಮೈತ್ರಿಯಿಂದಾಗಿ, ಒಕ್ಕಲಿಗರು ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ ಒಕ್ಕಲಿಗ ಬೆಲ್ಟ್ ನಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎರಡು ಕ್ಷೇತ್ರಗಳು. 

    ಈಬಾರಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ - 9, ಒಕ್ಕಲಿಗರಿಗೆ - 3, ಬ್ರಾಹ್ಮಣರಿಗೆ - 2, ಪರಿಶಿಷ್ಟ ಜಾತಿಯವರಿಗೆ - 4  ವಾಲ್ಮೀಕಿ ಜನಾಂಗದವರಿಗೆ - 2, ಬಂಜಾರ,   ಕ್ಷತ್ರಿಯ, ಬಲಿಜ, ಬಂಟ್ಸ್ ಮತ್ತು ಬಿಲ್ಲವ ಸಮುದಾಯಕ್ಕೆ ತಲಾ 1 ಟಿಕೆಟ್ ನೀಡಲಾಗಿದೆ. ಈ ಸಾರಿ ಕಂಪ್ಲೀಟ್ ಸ್ವೀಪ್ ಮಾಡಬೇಕೆಂದು, ಯಡಿಯೂರಪ್ಪ ಹೇಳಿದವರಿಗೆ ಪಕ್ಷ ಟಿಕೆಟ್ ಕೊಟ್ಟರೂ ಸಹ, ಈ ಬಾರಿ 17ಕ್ಕೆ ಕುಸಿದಿರುವುದರಿಂದ ತೀವ್ರ ಅಸಮಧಾನಗೊಂಡಿರುವ ಬಿಜೆಪಿಯ ಹೈಕಮಾಂಡ್, ಮುಂಬರುವ ಚುನಾವಣೆಗಳಲ್ಲಿ ಇದೇ ರೀತಿ ಕೆಲಸ ಮಾಡಿದರೆ, ಈಗಿರುವ ಸ್ಥಳೀಯ ನಾಯಕತ್ವವನ್ನ ಬದಲಾಯಿಸಬೇಕಾಗಬಹುದು ಎಂದು ಯಡಿಯೂರಪ್ಪ ಬಳಗಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ. 

    ಇವೆಲ್ಲಾ ಏನೇ ಇದ್ದರೂ, ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದಿದ್ದೆ. ಜಾತಿ ಲೆಕ್ಕಾಚಾರಕ್ಕಿಂತ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವನ್ನ ಎಲ್ಲಾ ನಾಯಕರು ರೂಡಿಸಿಕೊಳ್ಳಬೇಕಿದೆ. ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕಾಂಗ್ರೆಸ್ಸಿನ ಗ್ಯಾರಂಟಿಯ ಹೊಡೆತದಿಂದ ಬಚಾವಾಗುವ ಸನ್ನಿವೇಶ ಸೃಷ್ಟಿಯ ಅಗತ್ಯತೆ ಇದೆ. ಕೇವಲ ಮೋದಿ ಅಲೆ, ಮೋದಿ ಮುಖ ನೋಡಿ ಜನ ಓಟ್ ಹಾಕುತ್ತಾರೆ ಎನ್ನುವ ಭ್ರಮೆಯಿಂದ ಹೊರಬಂದು ಎಲ್ಲಾ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ಸಿನ ಪ್ರತಿಯೊಂದು ತಪ್ಪನ್ನ ಹುಡುಕಿ ಜನರ ಮುಂದೆ ಕೊಂಡೋಯ್ದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲದೆ ಇದ್ದರೆ, ಕಾಂಗ್ರೆಸ್ಸಿನ ಅಹಿಂದ ರಾಜಕಾರಣ ಮತ್ತು ಹೊಸ ಗ್ಯಾರಂಟಿಗಳ ಅಲೆಯಲ್ಲಿ ಕೊಚ್ಚಿಹೋಗುವುದು ನಿಶ್ಚಿತ. ಸೋಲಿನ ಬೇಗುದಿ, ಕಾಂಗ್ರೆಸ್ ನಲ್ಲಿಯೂ ಜೋರಾಗಿಯೆ ಇದೆ.  ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಹ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮೇಲೆ ಬೇಸರಿಸಿಕೊಂಡಿದ್ದಾರೆ. ಅಲ್ಲೂ ನಾಯಕತ್ವ ಬದಲಾದರೂ ಅಚ್ಚರಿಯಿಲ್ಲ. 


ಗುರುವಾರ, ಜೂನ್ 6, 2024

ಕೈ ಪಾಲಾದ ಕಲ್ಯಾಣ ಕರ್ನಾಟಕ



 2024ರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಕಳೆದ ಬಾರಿ ಮಾತ್ರ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿತ್ತು, ಈ ಬಾರಿ ಕಾಂಗ್ರೆಸ್ಸಿನ ಅದೃಷ್ಟ ಖುಲಾಯಿಸಿದೆ. ಈ ಕ್ಷೇತ್ರಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳು ಮುಂಚೆಯಿಂದಲೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿಯೇ ಇತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಹನ್ನೆರೆಡಕ್ಕೂ ಹೆಚ್ಚುಬಾರಿ ಕಾಂಗ್ರೆಸ್ ಜಯಗಳಿಸಿದೆ.  ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮುಸ್ಲಿಂ, ಕುರುಬ ಮತ್ತು ಹಿಂದುಳಿದ ವರ್ಗದವರ ಮತಗಳೇ ನಿರ್ಣಾಯಕ. 

    ಈ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ (SC), ವರ್ಗ(ST), ಹಿಂದುಳಿದ ವರ್ಗ (OBC) ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರೇ ಅಧಿಕವಾಗಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ ಹಿಂದುಳಿರುವುದರಿಂದ ಬೆಂಗಳೂರು. ಕರಾವಳಿ ಮಲೆನಾಡು ಕಡೆ ದುಡಿಯುವುದಕ್ಕೆ ಹೋಗುವಂತಹವರು. ಹೀಗಾಗಿ ಇಲ್ಲಿನ ಹೆಚ್ಚಿನ ಮಕ್ಕಳು ತುಮಕೂರಿನ ಸಿದ್ದಗಂಗ ಮಠದಲ್ಲಿ ಉಚಿತ ಶಿಕ್ಷಣ ಪಡೆಯುತಿದ್ದಾರೆ. ಅತ್ಯಂತ ಮುಗ್ಧ ಜನರು ಇವರು, ಯಾರಾದರು ಆಸೆ ತೋರಿಸಿದರೆ ಅದಕ್ಕೆ ಮಾರು ಹೋಗುವಂತಹ ಮುಗ್ಧರು. ಹೀಗಿರುವಾಗ, ಇಷ್ಟು ವರ್ಷಗಳ ಕಾಲ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು  ಇವರನ್ನು ವೋಟಿಗಾಗಿ ಬಳಸಿಕೊಂಡಿದ್ದಾರೆ ವಿನಹ ಅಭಿವೃದ್ದಿ ಪಡಿಸುವಂತಹ ಕೆಲಸಕ್ಕೆ ಹೋಗಿಲ್ಲ. ಈ ಬಾರಿ ಕಾಂಗ್ರೆಸ್ಸಿನ ಗ್ಯಾರಂಟಿಗಾಗಿ ಜನ ಮರುಳಾಗಿರುವುದ್ದಾರೆ.

    ಮೈಸೂರು, ಬೆಂಗಳೂರು, ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆರ್ಥಿಕವಾಗಿ ಪ್ರಬಲವಾಗಿಲ್ಲ. ಶೈಕ್ಷಣಿಕವಾಗಿ ಸಹ ಹಿಂದುಳಿವೆ. ಬಿಸಿಲ ನಾಡು ಬರಪ್ರದೇಶ ಎಂದೇ ಹೆಸರುವಾಸಿ, ತುಂಗಭದ್ರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು, ಕೃಷ್ಣಾ ನದಿ ಹರಿಯುವ ಪ್ರದೇಶದ ಹಳ್ಳಿಗಳು ಬಿಟ್ಟರೆ ಮಿಕ್ಕೆಲ್ಲ ಪ್ರದೇಶ ಮಳೆಯಾಧಾರಿತ. ಅಲ್ಲಿನ ಜನರು ಬಹುತೇಕ ಬಡವರು,  ಬಳ್ಳಾರಿ ಮತ್ತು ಹೊಸಪೇಟೆ ಮಾತ್ರ ಸ್ವಲ್ಪ ಮುಂದುವರಿದಿದೆ ಎನ್ನಬಹುದು ಬಿಟ್ಟರೆ, ಮಿಕ್ಕೆಲ್ಲ ಜಿಲ್ಲೆಗಳು ಅತೀ ಹಿಂದುಳಿವೆ. ಇನ್ನೂ ಸಹ ಈ ಭಾಗವನ್ನು ಅಭಿವೃದ್ದಿ ಪಡಿಸಲಿಕ್ಕೆ ಸಾಧ್ಯವಾಗಿಲ್ಲ. ಇಲ್ಲಿನ ಪೂರ್ವಜರು ಹೈದರಬಾದಿನ ನಿಜಾಮರ ಆಡಳಿತ ಕಾಲದಲ್ಲಿ ರಜಾಕರ ದಾಳಿಗೆ ನೊಂದು ಬೆಂದವರು. 

    ಚುನಾವಣೆ ರಾಜಕೀಯ ಎಂದ ಮೇಲೆ ಪ್ರತಿಯೊಂದು ಜಾತಿ ಸಮುದಾಯ ಮತಗಳು ಸಹ ನಿರ್ಣಾಯಕವಾಗುತ್ತವೆ. ಬುದ್ದಿವಂತರು ವಿವೇಚಿಸಿ ಮತನೀಡುತ್ತಾರೆ, ಕೆಲವರು ಜಾತಿ ಅಥವ ಹಣದ ಆಮಿಷಕ್ಕೆ ಒಳಗಾಗುತ್ತಾರೆ. ಒಂದು ಕ್ಷೇತ್ರದಲ್ಲಿ ಎರಡು ಪಕ್ಷದವರು ಒಂದೇ ಜಾತಿಯವರಾದರೂ ಸಹ, ಮುಂಬರುವ ದಿನಗಳಲ್ಲಿ ಯಾವ ಪಕ್ಷದಿಂದ ಅವರ ಸಮುದಾಯಕ್ಕೆ ಬೆಂಬಲ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಉದಾ: ಪರಿಶಿಷ್ಟ ಜಾತಿ (SC), ವರ್ಗ(ST), ಜನರು ಯಡಿಯೂರಪ್ಪ ದೇವೆಗೌಡರಿಗಿಂತ, ಸಿದ್ದರಾಮಯ್ಯ, ಖರ್ಗೆ ಮೇಲೆ ನಂಬಿಕೆ ಜಾಸ್ತಿ. ಹಾಗೆಯೇ ಅಂದಾಜು 15% ಇರುವ ಮುಸ್ಲಿಂ ಸಮುದಾಯ ಪಕ್ಕಾ ಕಾಂಗ್ರೆಸ್ಸಿಗೆ ಹಾಕುವುದು ನಿಶ್ಚಿತ. ಅದೇ ರೀತಿ 50 ರಿಂದ 60% ಪರಿಶಿಷ್ಟ ಜಾತಿ (SC), ವರ್ಗ(ST),  ಖಂಡಿತ ಕಾಂಗ್ರೆಸಿಗೆ ಹಾಕುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕುರುಬರ ಓಟುಗಳು ಸಹ ಕಾಂಗ್ರೆಸ್ಸಿಗೆ. ಇನ್ನು ಕಾಂಗ್ರೆಸಿನ ಪಂಚ ಗ್ಯಾರಂಟಿ ಕೆಲವರಿಗೆ ಪಥ್ಯವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿಗೆ ಈ ಭಾಗ ಕೈಹಿಡಿದಿರುವುದು ಸ್ಪಷ್ಟವಾಗುತ್ತಿದೆ.

ಬೀದರ್ ಲೋಕಸಭಾ ಕ್ಷೇತ್ರ:

ಈ ಕ್ಷೇತ್ರದಲ್ಲಿ ೧೦ ಬಾರಿ ಕಾಂಗ್ರೆಸ್, ೭ ಬಾರಿ ಬಿಜೆಪಿ,  ಗೆಲುವು ಸಾಧಿಸಿದೆ. ಎಂದಿನಂತೆ, ಕಾಂಗ್ರೆಸ್ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದರು ಸಹ ಈಶ್ವರ್ ಖಂಡ್ರೆ ಯವರ ಸತತ ಪರಿಶ್ರಮದಿಂದ ಈ ಬಾರಿ ಬಿಜೆಪಿಗೆ ಸೋಲಾಯಿತು. ಈ ಬಾರಿ ಆಳಂದದಲ್ಲಿ ಮಾತ್ರ ಬಿಜೆಪಿಗೆ ಮುನ್ನೆಡೆ ದೊರೆತಿದೆ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ಸಿನ ಸಾಗರ್ ಈಶ್ವರ್ ಖಂಡ್ರೆ ಅವರು ಬಿಜೆಪಿಯ ಭಗವಂತ್ ಖೂಬಾ ವಿರುದ್ಧ 1 ಲಕ್ಷದ 28 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು 4,66,000 ಮಂದಿ ಇದ್ದರೆ, SC, ST ಸಮುದಾಯದ ಮತದಾರರು 4,26,000 ಮಂದಿ ಇದ್ದಾರೆ. ಇನ್ನು ಮುಸ್ಲಿಂ - 2,31,000, ಲಂಬಾಣಿ - 1,50,000, ಕುರುಬ - 97,000, ಮರಾಠ - 1,60,000 ಹಾಗೂ ಇತರೇ ಸಮುದಾಯದ ಮತಾದರರು 3,13,787 ಮಂದಿ ಇದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ:- . 

ಈವರೆಗೆ ನಡೆದಿರುವ 18 ಚುನಾವಣೆಗಳಲ್ಲಿ ಕಾಂಗ್ರೆಸ್ 15 ಬಾರಿಗೆ ಗೆದ್ದಿದೆ. 90ರ ದಶಕದಲ್ಲಿ ಒಮ್ಮೆ ಜನತಾ ದಳ, ಎರಡು ಬಾರಿ ಬಿಜೆಪಿ ಇಲ್ಲಿ ಜಯ ಕಂಡದ್ದು ಬಿಟ್ಟರೆ ಇಲ್ಲಿ ಕೈ ಪಾಳಯದ್ದೇ ಮೇಲುಗೈ. ಪರಿಶಿಷ್ಟ ಜಾತಿ (SCಗಳು):  24%, ಪರಿಶಿಷ್ಟ ಪಂಗಡಗಳು (STಗಳು): 3%, ಮುಸ್ಲಿಂ: 24%. ಹಿಂದುಳಿದ ವರ್ಗ: 27%, ಇತರೆ 22%.  ಈ ಲೆಕ್ಕಾಚಾರ ನೋಡಿದರೆ, ಕಾಂಗ್ರೆಸ್ಸಿಗೆ ಗೆಲುವು ಸುಲಭ ಮತ್ತು ಸಹಜ.

ಕಾಂಗ್ರೆಸ್ಸಿನ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಡಾ. ಉಮೇಶ್ ಜಾಧವ್ ವಿರುದ್ಧ ಕೇವಲ 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ನಿರ್ಣಾಯಕ ಪಾತ್ರವಹಿಸಿದ ಮುಸ್ಲಿಂ ಮತದಾರರು ಮಾತ್ರ

ಜಾಧವ್​ ವಿರುದ್ಧ ಗೆಲ್ಲಲು ಕಾರಣವಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರ. ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ (ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ) ಪತ್ರಿನಿಧಿಸುವ ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಕಾಂಗ್ರೆಸ್‌ ಬರೋಬ್ಬರಿ 51,729 ಮತಗಳ ಭಾರೀ ಮುನ್ನಡೆ ತಂದುಕೊಂಡಿದೆ. ಈ ಮೂಲಕ ಮೂಲಕ ಉಳಿದ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಕ್ಷೇತ್ರ ನೆರವಾಯಿತು. ಮುಸ್ಲೀಮ್ ಬಾಹುಳ್ಯವಿರುವ ಕ್ಷೇತ್ರದಲ್ಲಿ ಡಾ.ಜಾಧವ್ ಇಲ್ಲಿ 70,313 ಮತಗಳನ್ನ ಪಡೆದರೆ, ದೊಡ್ಡಮನಿ ಬರೋಬ್ಬರಿ 1,22,042 ಮತಗಳನ್ನು ಪಡೆದರು. ದೊಡ್ಡ ಅಂತರವೇ ಅವರ ಗೆಲುವಿಗೆ ಕಾರಣವಾಯಿತು.

ರಾಯಚೂರು ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 14 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 1 ಬಾರಿ ಜನತಾದಳ ಗೆಲುವು ಸಾಧಿಸಿದೆ.  ಪರಿಶಿಷ್ಟ ಜಾತಿ – 18%, ಪರಿಶಿಷ್ಟ ಪಂಗಡ – 19%, ಲಿಂಗಾಯತ – 16%,  ಕುರುಬ ಸಮುದಾಯ – 13% ಮುಸ್ಲಿಂ – 15% ಇತರೆ – 19%.  ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜ. ಕಾಂಗ್ರೆಸ್ಸಿನ ಕುಮಾರ್ ನಾಯಕ್ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯಕ್  ವಿರುದ್ಧ  79 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕೊಪ್ಪಳ ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 2 ಬಾರಿ ಜನತಾದಳ  ಗೆಲುವು ಸಾಧಿಸಿದೆ. ಲಿಂಗಾಯತ 27%, ಕುರುಬ 21%, SC 21%, ಮುಸ್ಲಿಂ –  10% , ಇತರೆ – 21%. ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜವಾಗಿ ದೊರೆತಿದೆ. ಎರಡು ಬಾರಿ ಬಿಜೆಪಿಯಿಂದ ವಿಜಯಿಯಾಗಿದ್ದ ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡದೆ ಇರುವುದು ಸಹ ಬೀಜೆಪಿ ಸೋಲಲು ಒಂದು ಕಾರಣ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿಯಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಗೆದ್ದಿದ್ದಾರೆ.

ಕಾಂಗ್ರೆಸ್ಸಿನ ರಾಜಶೇಖರ್‌ ಹಿಟ್ನಾಳ್‌ ಅವರು ಬಿಜೆಪಿಯ ಡಾ ಬಸವರಾಜ ಕೆ ಶರಣಪ್ಪ ವಿರುದ್ಧ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡಿದ್ದಿದ್ದರೆ, ಬಹುಶಃ ಬಿಜೆಪಿಯು ಸುಲಭವಾಗಿ ಗೆಲ್ಲುತಿತ್ತು ಎಂದೆನಿಸುತ್ತದೆ.

ಬಳ್ಳಾರಿ  ಲೋಕಸಭಾ ಕ್ಷೇತ್ರ 

 ಈ ಕ್ಷೇತ್ರದಲ್ಲಿ 15 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ಗೆಲುವು ಸಾಧಿಸಿದೆ. ಈ ಬಾರಿ ಕಾಂಗ್ರೆಸ್ಸಿನ ತುಕಾರಾಂ ಅವರು ಬಿಜೆಪಿಯ ಶ್ರೀರಾಮುಲು ವಿರುದ್ಧ 98 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಕ್ಷೇತ್ರವೂ ಸಹ ಕಾಂಗ್ರೆಸ್ಸಿನ ಭದ್ರ ಕೋಟೇಯಾಗಿತ್ತು. ರೆಡ್ಡಿ ಸಹೋದರರ ನಂತರ ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಾಬಲ್ಯವನ್ನು ಮೆರೆದಿದೆ.  

ಮುಸ್ಲಿಂ, ಬಲಿಜ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ನಿರ್ಣಾಯಕರಾಗಿದ್ದಾರೆ.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಸೋಲಿಸಿದ್ದರು.

ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿದ ಬಳಿಕ, 2009ರಲ್ಲಿ ಬಿಜೆಪಿಯ ಜೆ ಶಾಂತಾ ಸಂಸದೆಯಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿ ಶ್ರೀರಾಮುಲು ಅವರು ಸಂಸದರಾದರು. 2019ರಲ್ಲಿ ದೇವೆಂದ್ರಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.  ಜನಾರ್ದನ ರೆಡ್ಡಿ ಅವರ ಬೆಂಬಲದ ಮಧ್ಯೆಯೂ ಬಿಜೆಪಿ ಈ ಬಾರಿ ಸೋತಿದೆ.

ಮಂಗಳವಾರ, ಮೇ 28, 2024

ಭಾರತದಾಚೆಗೂ ಇರುವ ರಾಮಾಯಣ, ಮಹಾಭಾರತದ ಕುರುಹುಗಳು

 ಈವತ್ತಿನ ಬಹಳಷ್ಟು ಯುವ ಜನರಿಗೆ ಭಾರತ ದೇಶದ ಸುತ್ತಮುತ್ತಲಿನ ದೇಶಗಳು, ಒಂದು ಕಾಲದಲ್ಲಿ ಭಾರತದ ಭಾಗವಾಗ್ತಿತ್ತು ಎಂದರೆ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಮ್ಮ ಶಾಲೆಗಳಲ್ಲಿ ಪಾಕಿಸ್ತಾನ, ಬಾಂಗ್ಲದೇಶ ಭಾರತದಿಂದ ವಿಭಜನೆ ಗೊಂಡಿದ್ದರ ಬಗ್ಗೆ ಕಲಿಸುತ್ತಿರುವುದರಿಂದ, ಈ ವಿಭಜನೆ ಬಗ್ಗೆ ಗೊತ್ತಿದೆ, ಆದರೆ ಬ್ರಿಟೀಷರ ಮುಂಚೆಯೇ ನಮ್ಮ ಕೈ ಜಾರಿ ಹೋಗಿದ್ದ ದೇಶಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿಯಿಲ್ಲ. ಕೆಲವರ ಪ್ರಕಾರ, ಭಾರತ ಎನ್ನುವ ದೇಶವೇ ಇರಲಿಲ್ಲ. ಸುಮಾರು ಐದುನೂರಕ್ಕೂ ಹೆಚ್ಚು ಸಂಸ್ಥಾನಗಳೇ ಇದ್ದವು, ಅವೆಲ್ಲವನ್ನು ಒಟ್ಟು ಗೂಡಿಸಿ ಭಾರತ ಎನ್ನುವ ದೇಶವನ್ನು ರಚಿಸಿದ್ದು ಬ್ರಿಟೀಷರು. ಹಾಗೂ ಇಡೀ ಭಾರತವನ್ನು ಒಟ್ಟು ಮಾಡಿ ಆಳಲು ಪ್ರಯತ್ನಿಸಿದ್ದು ದೆಹಲಿ ಸುಲ್ತಾನರು ಮತ್ತು ಮೊಘಲರು ಎಂದು ಪ್ರತಿಪಾದಿಸುವ ಮಂದಿ ಕಡಿಮೆ ಏನಿಲ್ಲ. 18ನೇ ಶತಮಾನದ ಮಧ್ಯದ ವರೆಗೂ ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ವಿಸ್ತರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವ ಮೊದಲು ತಮ್ಮ ಆಳ್ವಿಕೆಯ ಕೊನೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ

    ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶ, ನಾಡು, ನುಡಿ, ಭಾಷೆ, ಆಚಾರ, ವಿಚಾರ, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳಲ್ಲಿ ನಮ್ಮ ಒಂದೊಂದು ಪ್ರಾಂತ್ಯವನ್ನು ಮತ್ತು ಜನರನ್ನು ಬೆಸೆದಿದೆ. ಭೌಗೋಳಿಕ ಸಂಸ್ಥಾನದ ಗಡಿ ರೇಖೆಗಳಿಗಿಂತ, ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ವಿಷಯಗಳಿಗೆ ಗಡಿ ರೇಖೆಗಳಿರಲಿಲ್ಲ ಎನ್ನುವುದು ಭಾರತೀಯ ಸಂಸ್ಕೃತಿಯನ್ನು ಅರಿತವರಿಗೆ ತಿಳಿದಿದೆ. ರಾಮಾಯಣ, ಮಹಾಭಾರತ ಈ ಮಹಾಕೃತಿಗಳ ಕುರಿತು ಉತ್ತರದ ಕಾಶ್ಮಿರದಿಂದ  ದಕ್ಷಿಣದ ಕನ್ಯಾಕುಮಾರಿ, ಮತ್ತು ಫೂರ್ವದ ಅಸ್ಸಾಂ ನಿಂದ ಪಶ್ಚಿಮದ ಗುಜರಾತ್ ನವರೆಗೂ, ಭಾರತದ ಎಲ್ಲೆಡೆ ಯಿರುವ ಪ್ರತಿಯೊಬ್ಬರಿಗೂ ಗೊತ್ತಿರುವುಂತಹದ್ದು. ಮಹಾಕಾವ್ಯಗಳಲ್ಲಿ ದಾಖಲಾಗಿರುವ ಘಟನೆಗಳು, ಸ್ಥಳಗಳು ಇಂದಿಗೂ ಭಾರತದಲ್ಲಿ ಕುರುಹುಗಳು ಲಭ್ಯವಿದೆ. ನಮ್ಮ ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ರಾಮಾಯಣ, ಮಹಾಭಾರತಕ್ಕೆ ಸಂಭಂದ ಪಟ್ಟಂತ ಮಾಹಿತಿ ಮತ್ತು ಸಂಸ್ಕೃತದ ಪ್ರಭಾವದ ಕುರಿತು ಒಂದು ಕಿರು ಮಾಹಿತಿ ಈ ಲೇಖನದ ಮುಖಾಂತರ ಓದುಗರಿಗೆ ತಲುಪಿಸುವ ಒಂದು ಕಿರು ಪ್ರಯತ್ನ.  

ಅಫ್ಘನಿಸ್ಥಾನ್:

ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ವಿಮಾನ ಅಪಹರಣ ವಾದಾಗ, ಬಹಳಷ್ಟು ಜನರಿಗೆ ಕಂದಹಾರ್ ಎಂದರೆ ಗಾಂಧಾರ ಎನ್ನುವುದು ತಿಳಿಯಿತು. ನಮ್ಮ ಗಾಂಧಾರ ಅಫ್ಘನಿಸ್ತಾನದ ಕಂದಹಾರ್ ಹೇಗಾಯ್ತು ಎನ್ನುವುದು ಶಾಲೆಗಳಲ್ಲಿ ಯಾರೂ ಕಲಿಸಿಕೊಡಲೇ ಇಲ್ಲ. ಮಹಾಭಾರತದ ಐತಿಹಾಸಿಕ ಸ್ಥಳಗಳ ಕುರಿತು ಸಂಶೋಧನೆ ನಡೆದಾಗ, ಇಂತಹ ಹಲವಾರು ಸತ್ಯಗಳು ಹೊರಜಗತ್ತಿಗೆ ಗೊತ್ತಾಯಿತು. ಅಫ್ಘಾನಿಸ್ತಾನಕ್ಕೆ "ಉಪಗಣಸ್ಥಾನ" ಎನ್ನುವ ಹೆಸರು ಇತ್ತೆಂದು ಹೇಳುತ್ತಾರೆ 

ತುರ್ಕಮೆನಿಸ್ತಾನ್

ಇಂದಿನ ತುರ್ಕಮೆನಿಸ್ತಾನ್ ರಾಷ್ಟ್ರವನ್ನು, ಮಹಾಭಾರತದಲ್ಲಿ ತುಷಾರ ಎಂದು ಕರೆಯಲಾಗಿದೆ.  ಮಹಾಭಾರತದಲ್ಲಿ ತುಷಾರರನ್ನು (ಮ್ಲೇಚ್ಚರು) "ರಾಜ ಯಯಾತಿಯ" ಶಾಪಗ್ರಸ್ತ ಪುತ್ರರಲ್ಲಿ ಒಬ್ಬರಾದ ಅನುದೃಹ್ಯವಿನ ವಂಶಸ್ಥರು ಎಂದು ಎಂದು ಹೇಳಲಾಗಿದೆ.  ಯಯಾತಿಗೆ ಐದು ಜನ ಮಕ್ಕಳು. ಯದು, ಪುರು, ತುರ್ವಸು, ದೃಹ್ಯ ಮತ್ತು ಅನುದೃಹ್ಯ.  ಶುಕ್ರಾಚಾರ್ಯರಿಂದ ಪಡೆದ ಶಾಪದ ಫಲವಾಗಿ ಅಕಾಲಿಕ ವೃದ್ಧಾಪ್ಯ ಯಯಾತಿಗೆ ಪ್ರಾಪ್ತವಾಗುತ್ತದೆ. ಆಗ ಶಾಪ ವಿಮೋಚನೆ ಯಾಚಿಸಿದ ಯಯಾತಿಗೆ, ಶುಕ್ರಾಚಾರ್ಯರು " ಯಾರಾದರೂ ತಮ್ಮ ಯೌವನವನ್ನು ಕೊಡುವುದಾದರೆ ನೀನು ಮತ್ತೆ ಯೌವನವನ್ನು ಪಡೆಯಬಹುದು" ಎಂಬುದಾಗಿ ತಿಳಿಸುತ್ತಾರೆ. ಭೋಗ ಜೀವನದ ಹಸಿವು ಆರದಿದ್ದ ಯಯಾತಿ ತನ್ನ ಎಲ್ಲಾ ಮಕ್ಕಳಲ್ಲಿ ಯೌವನಕ್ಕಾಗಿ ಯಾಚಿಸುತ್ತಾನೆ. ಐವರು ಮಕ್ಕಳಲ್ಲಿ ನಾಲ್ಕು ಜನ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಪುರುವು ತನ್ನ ಯೌವನವನ್ನು ತಂದೆಯೊಂದಿಗೆ ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಾಗ ಅತ್ಯಂತ ಆನಂದ ಭರಿತನಾದ ಯಯಾತಿ ಅವನಿಂದ ಯೌವನ ಪಡೆಯುತ್ತಾನೆ. ಭೋಗ ಜೀವನಕ್ಕೆ ಕೊನೆ ಇಲ್ಲ ಎಂದು ಅರಿತ ಯಯಾತಿ ಪುನಃ ತನ್ನ ಮಗನಿಗೆ ಯೌವನ ಮರಳಿಸಿ ಅವನಿಗೆ ಪಟ್ಟಕಟ್ಟಿ ಅನೇಕ ವರಗಳನ್ನು ಕೊಟ್ಟು ತಾನು ತಪಸ್ಸಿಗೆ ಹೋಗುತ್ತಾನೆ.  ಇತರ ನಾಲ್ಕು ಮಕ್ಕಳನ್ನು ಶಪಿಸಿ ಅವರಿಗೆ ರಾಜತ್ವವನ್ನು ನಿರಾಕರಿಸುತ್ತಾನೆ. ಪುರುವಿನ ವಂಶಸ್ಥರೇ ಪೌರವರು, ಯಯಾತಿಯ ಮೂಲ ಸಾಮ್ರಾಜ್ಯವನ್ನು ಆನುವಂಶಿಕವಾಗಿ ಪಡೆದರು ಮತ್ತು ನಂತರ ಕುರು ಮತ್ತು ಪಾಂಚಾಲ ರಾಜ್ಯಗಳನ್ನು ರಚಿಸಿಕೊಂಡು ಆಳುತ್ತಾರೆ. ಈವತ್ತಿನ ಠಾಕೂರ್, ಥಕ್ಕರ್, ತಖರ್, ಠಾಕೆರೆ,  ಠಾಕ್ರೆ,  ಮುಂತಾದ ವಿವಿಧ ಪ್ರಾದೇಶಿಕ ಪದಗಳು ಮತ್ತು ತುಷಾರ//ತುಖಾರ ರಿಂದ ಹುಟ್ಟಿಕೊಂಡಿರಬಹುದು ಎಂದು ಹೇಳಲಾಗುತ್ತದೆ.  ಈ ಪ್ರಾಂತ್ಯ ಕ್ರಿ.ಶ 1 ರಿಂದ- ಕ್ರಿ.ಶ  3 ನೇ ಶತಮಾನದವರೆಗೂ ಕುಶಾನರ ಹಿಡಿತದಲ್ಲಿತ್ತು. 

ಮಾರಿಶಸ್ ದ್ವೀಪ:

ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಆ ಮಾರೀಚ ದ್ವೀಪವೇ ಈಗಿನ ಮಾರಿಶಸ್‌. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ತನ್ನ ಮಾವ ಮಾರೀಚನನ್ನು ಒತ್ತಾಯಿಸುತ್ತಾನೆ. ರಾಮ- ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದಾಗ ಮಾರೀಚನು ಸೀತೆಯ ಕುಟೀರದ  ಮುಂದೆ ಮಾಯಾಜಿಂಕೆ ರೂಪದಲ್ಲಿ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ. ಪತ್ನಿಯ ಆಸೆಗಾಗಿ ಈ ಮಾಯಾಮೃಗದ ಬೆನ್ನತ್ತಿ ಹೋದ ರಾಮ ಕೊನೆಗೆ ಬೇಸತ್ತು ಕೊಂದುಹಾಕುತ್ತಾನೆ. ಮರಣಾವಸ್ಥೆಯಲ್ಲಿದ್ದ ಮಾರೀಚನು ರಾಮನಿಗೆ ತನ್ನನ್ನು ಸಾಗರಕ್ಕೆ ಎಸೆಯುವಂತೆಯೂ ಸಾಗರದಲ್ಲಿ ತನ್ನ ದೇಹ ಬೀಳುವ ಭಾಗದಲ್ಲಿ ಉಂಟಾಗುವ ಭೂಮಿಗೆ ತನ್ನ ಹೆಸರಿಡಬೇಕೆಂದು ಪ್ರಾರ್ಥಿಸುತ್ತಾನೆ. ಶ್ರೀ ರಾಮಚಂದ್ರನಿಂದ ಅನುಗ್ರಹಿಸಿದ ಬಳಿಕ ಮಾರೀಚ ಕೊನೆಯುಸಿರೆಳೆಯುತ್ತಾನೆ. 

ಗಲ್ಫ್ ರಾಷ್ಟ್ರಗಳು: 

ಆತ್ಮೀಯ ಗೆಳೆಯರಾದ ಸುರೇಶ್ ಜಿ ಹುಳ್ಳೇನಹಳ್ಳಿಯವರು, ನಮ್ಮ ಗಲ್ಫ್ ರಾಷ್ಟ್ರಗಳ ಕುರಿತಾದ  ಒಂದು ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಶ್ರೀ ರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಹೋಗಲು ಸಮುದ್ರದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಾಗ ಸೇತುವೆ ನಿಲ್ಲದೆ ಕುಸಿಯುತ್ತಿರುತ್ತದೆ. ಆಗ ಶ್ರೀ ರಾಮ ಸಮುದ್ರ ರಾಜನನ್ನು ಪ್ರಾರ್ಥಿಸಿ ತಪಸ್ಸು ಮಾಡುತ್ತಾನೆ, ಸಮುದ್ರ ರಾಜ ಒಳಿಯುವುದಿಲ್ಲ. ಕೋಪಗೊಂಡ ಶ್ರೀ ರಾಮ ತಮ್ಮ ಲಕ್ಷ್ಮಣನ  ಅಣತಿಯಂತೆ ಸಮುದ್ರವನ್ನು ನಿರ್ನಾಮ ಮಾಡಲು ಧನಸ್ಸನ್ನು ಎದೆಗೆ ಏರಿಸುತ್ತಾನೆ, ಭಯಗೊಂಡ ಸಮುದ್ರ ರಾಜ ಓಡಿ ಬಂದು  ಶ್ರೀ ರಾಮನಿಗೆ ಶರಣಾಗುತಾನೆ. ಶಾಂತನಾದ ಶ್ರೀ ರಾಮ ಸಮುದ್ರ ರಾಜನನ್ನು ಕೇಳುತ್ತಾನೇ, ಒಮ್ಮೆ ಎದೆಗೆ ಏರಿಸಿದ ಬಾಣವನ್ನು ಹಿಂತಿರುಗಿ ಬತ್ತಳಿಕೆಯಲ್ಲಿ ಇಡುವುದಿಲ್ಲ ನೀನೆ ಹೇಳು ಇದನ್ನು ಎಲ್ಲಿ ಪ್ರಯೋಗಿಸಲಿ ಎಂದು ಕೇಳುತ್ತಾನೆ. ಆಗ ಸಮುದ್ರರಾಜ ತನಗೆ ಪಶ್ಚಿಮ ದಿಕ್ಕಿನಲ್ಲಿ ತುಂಬ ತೊಂದರೆ ಕೊಡುವ ರಾಕ್ಷಸರ ಬಗ್ಗೆ ತಿಳಿಸಿ ಅವರನ್ನು ನಾಶ ಮಾಡು ಎಂದು ಭಿನ್ನವಿಸುತ್ತಾನೆ, ಅದೇ ರೀತಿ ಶ್ರೀ ರಾಮ ಪ್ರಾಯೋಗಿಸಿದ ಬಾಣ ಪಶ್ಚಿಮ ದಿಕ್ಕಿನಲ್ಲಿ ಇದ್ದ ಈಗಿನ ಗಲ್ಫ್ ದೇಶಗಳ ಮೇಲೆ ಪ್ರಯೋಗವಾಗುತ್ತೆ ಮತ್ತು ಇಲ್ಲಿ ಎಲ್ಲವು ಸರ್ವ ನಾಶ ವಾಗುತ್ತೆ. ಬಹುಶಃ ಇದೇ ಕಾರಣದಿಂದ ಈ ಪ್ರದೇಶ ಮರುಭೂಮಿಯಾಗಿದೆಯೇನೋ?  ಮತ್ತು ಸಮುದ್ರ ನೀರು ಕಮ್ಮಿಯಾಗಿ ಭೂ ಪ್ರದೇಶ ಮೇಲೆ ಬರಲು ಇದೂ ಒಂದು ಕಾರಣ ಎಂದು ಅಭಿಪ್ರಾಯಪಡುತ್ತಾರೆ.

ಸೊಕೊಟ್ರಾ ದ್ವೀಪ:

ಅವರು ನೀಡಿದ ಇನ್ನೊಂದು ಮಾಹಿತಿ, ಸೊಕೊಟ್ರಾ ದ್ವೀಪ ಬಗ್ಗೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಸುಖಧಾರೆ ಎನ್ನುವ ರಾಕ್ಷಸ ನನ್ನು ಶ್ರೀ ರಾಮ ಲಕ್ಷ್ಮಣರು ಯುದ್ದವೊಂದರಲ್ಲಿ ಸೋಲಿಸಿ. ಮರಣಾನಂತರ ಸಮುದ್ರದೊಳಗೆ ಎಸೆಯುತ್ತಾರೆ. ಈ ರೀತಿ ಎಸೆಯಲ್ಪಟ್ಟ ರಕ್ಕಸ ನಿಂದ ನಿರ್ಮಿತವಾದ ದ್ವೀಪವೇ ಸುಖದಾರೆ ಎನ್ನಲಾಗುತ್ತದೆ.

ಕಿರ್ಗಿಸ್ತಾನ್:

ಇಂದಿನ ಕಿರ್ಗಿಸ್ತಾನ್ ಪ್ರದೇಶ ಮಹಾಭಾರತದಲ್ಲಿ "ಉತ್ತರಕುರು" ಪ್ರಾಂತ್ಯ ಎಂದು ಉಲ್ಲೇಖಿಸಲ್ಪಟ್ಟಿದೆ.  ಯುಧಿಷ್ಠಿರನ ರಾಜಸೂಯ ಯಾಗಕ್ಕಾಗಿ ಉತ್ತರದ ಸೇನಾ ಕಾರ್ಯಾಚರಣೆಯಲ್ಲಿ ಅರ್ಜುನನು ಉತ್ತರ ಕುರುವಿನಿಂದ ಗೌರವವನ್ನು ಪಡೆದನು ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.  ಕುಮಾರವ್ಯಾಸ ಭಾರತದಲ್ಲಿಯೂ ಸಹ ಈ ಕುರಿತು ಮಾಹಿತಿಯಿದೆ.

ಅದೇ ರೀತಿ ಪಕ್ಕದಲ್ಲಿರುವ  ಉತ್ತರ ಮಾದ್ರ ಎನ್ನುವ ಪ್ರದೇಶ ಇಂದು ಕಿರ್ಗಿಸ್ತಾನ್ ನಲ್ಲಿ ವಿಲೀನವಾಗಿದೆ.

ಟಿಬೆಟ್: 

ಮಹಾಭಾರತದ ಕುರುಕ್ಷೇತ್ರದ ಯುದ್ದ ಸೋಲಿನ ನಂತರ ರೂಪತಿ ಅಥವ ರುಪಾಟಿ ಎನ್ನುವ  ಕೌರವ ಸೈನ್ಯದ ಒಬ್ಬ ಸೇನಾಧಿಪತಿ ತನ್ನ ಸೈನ್ಯದ ಸಮೇತ ಟಿಬೆಟ್ ಕಡೆ ಹೊರಟುಹೋಗುತ್ತಾನೆ. ಅಂದು ಅಲ್ಲಿಗೆ ವಲಸೆ ಹೋದ ಜನರೇ ಟಿಬೆಟಿಯನ್ನರು ಎಂದು ನಂಬಲಾಗಿದೆ. ಕ್ರಿ.ಪೂ 150 ರ ಸಮಯದಲ್ಲಿ ಭಾರತದಲ್ಲಿ ಆಳ್ವಿಕೆಯಲ್ಲಿದ್ದ ಮಗಧ ಸಾಮ್ರ್ಯಾಜ್ಯದ ಒಬ್ಬ ರಾಜಕುಮಾರನನ್ನ ರಾಜತಾಂತ್ರಿಕ ಕಾರಣಗಳಿಂದ ಗಡಿಪಾರು ಮಾಡಲಾಗುತ್ತದೆ. ಆ ಸಮಯದಲ್ಲಿ ಆತ  ಟಿಬೆಟ್‌ಗೆ ಪಲಾಯನ ಮಾಡಿದನೆಂದು ನಂಬಲಾಗಿದೆ. ಟಿಬೆಟಿಯನ್ನರು ಅವನನ್ನು ನ್ಯಾ-ಟ್ರಿ ತ್ಸೆನ್ಪೋ ಎಂದು ನಾಮಕರಣ ಮಾಡುತ್ತಾರೆ. ಮುಂದೆ ಆತನನ್ನು ತಮ್ಮ ರಾಜನನ್ನಾಗಿ ಮಾಡಿದರು. ಹೀಗೆ ಅಲ್ಲಿಂದ ಟಿಬೆಟಿಯನ್ ರಾಜವಂಶ ಪ್ರಾರಂಭವಾಯಿತು.  ಟಿಬೆಟಿಯನ್ ವಿದ್ವಾಂಸರಾದ ಬು-ಸ್ಟನ್ ಎನ್ನುವವರು ಇದನ್ನು ಪ್ರತಿಪಾದಿಸಿದ್ದಾರೆ, ಅಷ್ಟು ಮಾತ್ರವಲ್ಲದೆ, ದಲಾಯಿಲಾಮ ರವರು 2009 ರಲ್ಲಿ ಭಾರತಕ್ಕೆ ಧನ್ಯವಾದ ಅರ್ಪಿಸುವ ಪತ್ರದಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಕಾಂಬೋಡಿಯಾ:

ಕಾಂಬೋಡಿಯಾ ಕಾಂಬೋಜ್ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಮಹಾಭಾರತದ ಸಮಯದಲ್ಲಿ ಭಾರತದ ಪಶ್ಚಿಮಕ್ಕೆ ಇದ್ದ ಕಾಂಬೋಜ ದೇಶ ದಿಂದ ಬಂದ ಕಂಬು ಎನ್ನುವ ಸನ್ಯಾಸಿಯೋರ್ವರು ಇಲ್ಲಿ ನೆಲೆಸಿದ್ದರಂತೆ. ಹೀಗಾಗಿ ಇದು ಕಾಂಬೋಜ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ, ನಂತರ ಕಾಂಬೋಡಿಯಾ ಎಂದಾಗಿದೆ.

ನೇಪಾಳ: 

ನೇಪಾಳ ವನ್ನು ಪ್ರಾಚೀನ ಕಾಲದಲ್ಲಿ ದೇವಧರ್ ಎಂದು ಕರೆಯಲಾಗುತ್ತಿತ್ತು.  ಸೀತಾಮಾತೆ ಜನಿಸಿದ್ದು ಇಂದು ನೇಪಾಳದಲ್ಲಿರುವ ಜನಕಪುರದಲ್ಲಿ. ಚಕ್ರವರ್ತಿ ಅಶೋಕ ಮತ್ತು ಸಮುದ್ರಗುಪ್ತನ ಆಳ್ವಿಕೆಯಲ್ಲಿ ನೇಪಾಳ ಭಾರತದ ಅವಿಭಾಜ್ಯ ಅಂಗವಾಗಿತ್ತು. 1904ರಲ್ಲಿ ಬ್ರಿಟಿಷರು ನೇಪಾಳವನ್ನು ಪ್ರತ್ಯೇಕ ದೇಶವನ್ನಾಗಿ ವಿಭಜನೆ ಮಾಡಿದರು.

ಶ್ರೀಲಂಕಾ:- 

ಶ್ರೀಲಂಕಾ ಬಗ್ಗೆ ಎಲ್ಲರಿಗೂ ಗೊತ್ತಿರುವುಂತಹದ್ದು. ರಾಮಾಯಣ ಕಾಲದಲ್ಲಿ ಲಂಕೆಯನ್ನು ಆಳುತ್ತಿದ್ದು ರಾವಣ.  ಸೀತಾ ಮಾತೆಯನ್ನು ಲಂಕೆಯ ಆಶೋಕವನದಲ್ಲಿ ಬಂಧಿಸಿಟ್ಟಿದ್ದು ನಮಗೆಲ್ಲರಿಗೂ ತಿಳಿದಿದೆ.

ಇಂಡೋನೇಷ್ಯಾ:

ಇಂಡೋನೇಷ್ಯಾದ ಪುರಾತನ ಹೆಸರು ದೀಪಂತರ ಭಾರತ. ದೀಪಂತರ ಭಾರತ ಎಂದರೆ ಭಾರತದಾದ್ಯಂತ ಸಾಗರ ಎನ್ನುವ ಅರ್ಥ ಬರುವುದು. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ.

ಇರಾನ್:

ಮಹಾಭಾರತದ ಯುದ್ದಾನಂತರ ಯಾದವರು ಇರಾನ್ ಮತ್ತು ಇಸ್ರೇಲ್ ಕಡೆ ವಲಸೆ ಹೋದರು ಎಂದು ಹೇಳುತ್ತಾರೆ. ಇರಾನಿನ ಸುಸ ಎಂಬ ಪ್ರದೇಶದಲ್ಲಿ ಪಾರ್ಥಿಯನ್ ಕಾಲಾವಧಿಯ( ಕ್ರಿ.ಪೂ 247- ಕ್ರಿ.ಶ.-224)  ಶ್ರೀ ಕೃಷ್ಣನ ವಿಗ್ರಹಗಳು ಪತ್ತೆಯಾಗಿವೆ. ಈ ಪಾರ್ಥಿಯನ್ ಎನ್ನುವ ರಾಜವಂಶ ಐದು ನೂರುವರ್ಷಗಳ ಕಾಲ ಇರಾನ್ ಅನ್ನು ಆಳಿತ್ತು. ಪಾರ್ಥಿಯನ್ ಗೂ ಪಾರ್ಥಗೂ ಹೋಲಿಕೆ ಇದೆ ಎಂದು ಹೇಳಬಹುದು. ಅರ್ಜುನನಿಗೆ ಪಾರ್ಥ ಎಂದು ಕರೆಯುತ್ತೇವೆ, ಆತನ ಸಾರಥಿಯಾಗಿದ್ದ ಕೃಷ್ಣನಿಗೆ, ಪಾರ್ಥಸಾರಥಿ ಎಂದು ಹೇಳುತ್ತೇವೆ ಯಲ್ಲವೇ, ಹಾಗಾಗಿ ಪಾರ್ಥಿಯನ್ ಎಂಬ ಹೆಸರಿಗೂ ಸಾಮ್ಯತೆ ಇರಬಹುದು. ಆರ್ಯನ್ನರ ಪ್ರದೇಶವು ಇರಾನ್ ಎಂದು ಕೆಲವರು ಹೇಳುತ್ತಾರೆ. ಅದರ ಬಗ್ಗೆ ಹಲವಾರು ಚರ್ಚೆಗಳು, ವಾದಗಳು ನಡೆದಿವೆ. ಪ್ರಾಚೀನ ಪರ್ಶಿಯಾ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ದಗಳ ಹೋಲಿಕೆಯಿದೆ. ಎಲ್ಲಾ  ಮುಸ್ಲಿಂ ರಾಷ್ಟ್ರಗಳು ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಸಹ ಇತರೆ ದೇಶಗಳು ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಹೋಲುವ 12 ತಿಂಗಳುಗಳನ್ನು ಒಳಗೊಂಡಿದೆ. ಆದಾಗ್ಯೂ, ಇದು ಸಾಮಾನ್ಯ ಕ್ಯಾಲೆಂಡರ್‌ನಲ್ಲಿರುವ 365-366 ದಿನಗಳಿಗಿಂತ ಭಿನ್ನವಾಗಿ 354-355 ದಿನಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಹೊಸ ವರ್ಷವು ಮೊಹರಂನೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಈ ಮೊಹರಂ ಹಬ್ಬ ಪ್ರತಿವರ್ಷ ಒಂದೇ ಸಮಯದಲ್ಲಿ ಬರುವುದಿಲ್ಲ. ಪ್ರತಿ ವರ್ಷ ಮೂರು ವರ್ಷಕ್ಕೊಮ್ಮೆ ಒಂದೊಂದು ತಿಂಗಳು ಮುಂಚಿತವಾಗಿ ಬರುತ್ತದೆ.  ಒಮ್ಮೆ, ಜೂನ್ ನಲ್ಲಿ ಬಂದರೆ, ಮುಂದಿನ ಮೂರು ವರ್ಷದ ನಂತರ ಮೇ ನಲ್ಲಿ ಬರುತ್ತದೆ, ಅದರ ಮೂರುವರ್ಷಗಳ ನಂತರ ಏಪ್ರಿಲ್ ನಲ್ಲಿ ಬರುತ್ತದೆ.

    ಇರಾನಿ ಜನತೆ ಇಸ್ಲಾಂ ಕ್ಯಾಲೆಂಡರ್ ಉಪಯೋಗಿಸಿದರು ಸಹ ಪ್ರಾಚೀನ ಪರ್ಶಿಯನ್ ಕ್ಯಾಲೆಂಡರ್ ನಂತೆ, ನೌರುಜ್ ಎನ್ನುವ ಪರ್ಷಿಯನ್ ಹೊಸ ವರ್ಷವನ್ನು ತಪ್ಪದೆ ಆಚರಿಸುತ್ತಾರೆ. ಇರಾನ್‌ನಲ್ಲಿ ವರ್ಷದ ಪ್ರಮುಖ ಹಬ್ಬವಾಗಿದೆ. ಪರ್ಷಿಯನ್ ಭಾಷೆಯಲ್ಲಿ ನೌರುಜ್ ಎಂದರೆ 'ಹೊಸ ದಿನ'. ಭಾರತದಲ್ಲಿ ಹೊಸ ವರ್ಷ ಯುಗಾದಿ ಹಬ್ಬವನ್ನು ನಾವು ಪ್ರತಿವರ್ಷ ಮಾರ್ಚ್ ತಿಂಗಳ ಆಸು ಪಾಸಿನಲ್ಲಿ ಆಚರಿಸುವಂತೆಯೇ ಇರಾನಿಯನ್ನರು ತಮ್ಮ ಹೊಸವರ್ಷವನ್ನು ಮಾರ್ಚ್ 20 ಅಥವಾ 21 ರಂದು ಆಚರಿಸುತ್ತಾರೆ. ಚಳಿಗಾಲವು ವಸಂತಕಾಲಕ್ಕೆ ಬದಲಾಗುವ ದಿನ, ಮತ್ತು ಇದು ಹೊಸ ಆರಂಭದಂತೆ ಭಾಸವಾಗುವುದರಿಂದ "ನೌರುಜ್" ಇರಾನಿಯನ್ನರಿಗೆ ಪ್ರಮುಖ ಹಬ್ಬ. ಇದಕ್ಕಾಗಿಯೇ ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳು ನೀಡಲಾಗುತ್ತದೆ. ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎರಡು ವಾರಗಳವರೆಗೆ ರಜೆಯನ್ನು ನೀಡುತ್ತಾರೆ. ನೌರುಜ್ ಎನ್ನುವುದು ನವ ಮತ್ತು ರೋಜು ಎನ್ನುವ ಎರಡು ಶಬ್ದಗಳಿಂದ ರೂಪುಗೊಂಡಿದೆ. ನವ ಎಂದರೆ ಹೊಸದು, ರೋಜು ಎನ್ನುವುದು ದಿನ. ತೆಲುಗಿನಲ್ಲಿಯೂ ಸಹ ರೋಜು ಅಂದರೆ ದಿನ ಎಂದರ್ಥ.

ಇವೆಲ್ಲವನ್ನು ಗಮನಿಸಿದರೆ, ಸನಾತನ ಸಂಸ್ಕೃತಿ, ಸಂಸ್ಕೃತ ಭಾಷೆ ಭಾರತದಾಚೆಗೂ ಇತ್ತು ಎನ್ನುವ ವಿಚಾರ ಸ್ಪಷ್ಟವಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಇಂದು ಬೇರೆ ಬೇರೆ ಧರ್ಮ, ಆಚಾರವಿಚಾರಗಳನ್ನು ಜನರು ಅಳವಡಿಸಿಕೊಂಡು ಮುನ್ನೆಡೆಯುತಿದ್ದಾರೆ.

ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಪರ್ಷಿಯನ್ 

ಭ್ರಾತಾ ಬಿರಾದರ್ 

ತೀವ್ರ ತೇಜ್ 

ಶ್ವೇತ /ಶ್ವೇತ್ ಸಫೇದ್ / ಸೇಫ್ಡ್

ದ್ವಾರ್ /ದ್ವಾರ ದರ್ /ದಾರ್

ನಾಮ ನಾಮ್

ತಾರಾ ಸಿತಾರಾ 

ಸ್ಥಾನ ಸ್ತಾನ್ 

ವರ್ಷ ಬಾರಿಶ್

ಛಾಯಾ ಸಾಯಾ

ಬಾಹು ಬಾಜು

ಯುವ ಜವಾನ್

ಇಸ್ರೇಲ್:

ಇಸ್ರೇಲ್ ರಾಷ್ಟ್ರವನ್ನು ಕ್ರಿ.ಪೂ  200 ರ ಸಮಯದಲ್ಲಿ ಕಾನಾನ್ಯರು ಆಳುತಿದ್ದರು. ಈ ಕಾನಾನ್ಯ ಎನ್ನುವ ಹೆಸರು ಬಂದಿದ್ದು, ಕೃಷ್ಣನ  ಕನ್ನಯ್ಯ ಎನ್ನುವ ಹೆಸರಿನಿಂದ. ಉತ್ತರಭಾರತದಲ್ಲಿ ಕೃಷ್ಣನಿಗೆ ಕನ್ನಯ್ಯ, ಕಿಶನ್ ಎಂದು ಕರೆಯುತ್ತಾರೆ. ಹೀಗಾಗಿ ಯಾದವರೇ ಕಾನಾನ್ಯರು ಯಾಕಾಗಿರಬಾರದು? ಇದಕ್ಕೆ ಪೂರಕವೆಂಬಂತೆ ಅಲ್ಲಿ ಕಿಶೋನ್ ಎನ್ನುವ ನದಿ ಇದೆ. ಬಾಲ್ಗಾದ್ ಎಂಬ ನಗರವೂ ಇದೆ. ಇದು ಪ್ರಾಚೀನ ಇಸ್ರೇಲ್ ನಲ್ಲಿ ಕಾನಾನ್ಯರ ನಗರವಾಗಿತ್ತು.  ಇತಿಹಾಸಕಾರ ಪ್ರೊಫೆಸರ್ ಪಿ.ಎನ್ ಓಕ್ ಇಸ್ರೇಲ್ ನ ಕಾನಾನ್ಯರು ಹಾಗೂ ಬಾಲ್ ಗಡ್ ನಗರಕ್ಕೂ ಭಾರತದಲ್ಲಿ ಅವತಾರ ಪುರುಷನೆಂದೇ ನಂಬಲಾಗುವ ಶ್ರೀಕೃಷ್ಣನಿಗೂ ಇರಬಹುದಾದ ನಂಟಿನ ಬಗ್ಗೆ ಹೇಳಿದ್ದಾರೆ. 

ಯುರೋಪ್:

ಪ್ರಾಚೀನ ಯುರೋಪಿಯನ್ ಜನರು, ಅದರಲ್ಲೂ ಸೆಲ್ಟ್ಸ್ ಮತ್ತು ಜರ್ಮನ್ನರು ತಮ್ಮನ್ನು ದನುವಿನ ಮಕ್ಕಳೆಂದು ಹೇಳಿಕೊಂಡಿದ್ದಾರೆ. ಜರ್ಮನಿಯಲ್ಲಿ ದನು ಎಂದರೆ ದೇವತೆಗಳ ತಾಯಿ ಎಂದರ್ಥ ಹಾಗೂ ನದಿ ದೇವತೆ ಎಂದೂ ಅರ್ಥವಂತೆ. ಯುರೋಪಿನಲ್ಲಿ ಹರಿಯುವ ಡ್ಯಾನುಬ್ ನದಿಯೂ ಇದಾಗಿದೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಗಳಿಗೆ ದಕ್ಷನ ಹದಿಮೂರು ಪುತ್ರಿಯರಾದ ದಿತಿ, ಅದಿತಿ, ದನು, ಕಲಾ, ಗನಾಯು, ಕ್ರೋಧಾ, ಪ್ರಾಧಾ, ವಿನತೆ, ಕಪಿಲಾ, ಮುನಿ, ಕದ್ರು, ಸುರಸೆ ಮತ್ತು ಇಲೆ ಯರು ಇವರೆಲ್ಲರನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ದನುವಿನಿಂದ ದಾನವರು ಹುಟ್ಟಿದರು. ಬಹುಶಃ ಇವರ ಸಂತಾನವೇ ಯುರೋಪಿಯನ್ನರು ಯಾಕಾಗಿರಬಾರದು.  ಕಾಕತಾಳೀಯವೆಂಬಂತೆ, ಜರ್ಮನ್ ಭಾಷೆಯಲ್ಲಿ ಬಹಳಷ್ಟು ಸಂಸ್ಕೃತ ಶಬ್ದಗಳಿವೆ, ಇಂಗ್ಲೀಷಿನಲ್ಲಿಯೂ ಹಲವಾರು ಸಂಸ್ಕೃತ ಶಬ್ದಗಳಿವೆ. 

ಸಂಸ್ಕೃತ ಮತ್ತು ಆಂಗ್ಲ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಆಂಗ್ಲ ಭಾಷೆ

ಶ್ರೀ ಸರ್

ನಾಮ ನೇಮ್‌

ಕಫ ಕಾಫ್‌

ಮಾನವ ಮ್ಯಾನ್‌

ಮಿಥ್ಯ ಮಿಥ್‌

ಮಾತೃ ಮದರ್‌

ಪಿತೃ ಫಾದರ್‌ 

ಭ್ರಾತೃ  ಬ್ರದರ್‌

ನವ ನ್ಯೂ 

ತ್ರಿ ತ್ರೀ 

ಶರಣಂ ಸರೆನ್‌ಡರ್‌ 

ದಶ ಡೆಸಿ/ಡೆಕಾ

ಯುವ ಯೂತ್‌ 

ಶರ್ಕರ ಸುಕ್ರೊಸ್‌-ಶುಗರ್‌, 

ಮಾಧ್ಯಮ ಮೀಡಿಯಮ್‌

ಸ್ಥಾನ ಸ್ಟೇಶನ್

    ಹೀಗೆ ಅನೇಕ ಸಂಸ್ಕೃತ- ಆಂಗ್ಲ ಭಾಷೆಗಳ ಪದಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುವುದನ್ನು ನಾವು ಕಾಣಬಹುದು. ಯೂರೋಪಿನ ಭಾಷೆಗಳ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಾಗಲು, ಬಹುಶಃ ಪ್ರಾಚೀನ ಭಾರತದಿಂದ ಯೂರೋಪಿನ ಕಡೆ ವಲಸೆ ಹೋದ ವೈದಿಕ ಸಂಸ್ಕೃತ ಭಾಷೆ ಮಾತನಾಡುತ್ತಿದ್ದ ಒಂದು ಗುಂಪು ಕಾರಣವಾಗಿರಬಹುದು. 


ಭಾರತದ ಸುತ್ತಮುತ್ತ ಇರುವ ಪಾಕಿಸ್ತಾನ್, ಅಫ್ಘನಿಸ್ಥಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್, ಕಜಕಸ್ಥಾನ್, ಉಜ಼್ಬೇಕಿಸ್ತಾನ್,  ಈ ರಾಷ್ಟ್ರಗಳ ಹೆಸರಿನಲ್ಲಿ ಸ್ಥಾನ ಇದೆಯಲ್ಲ, ಇದರ ಮೂಲ ಸಂಸ್ಕೃತ ಭಾಷೆ, ಸ್ಥಾನ ಎಂದರೆ ಸ್ಥಳ ಎನ್ನುವ ಅರ್ಥ. ಸ್ಥಾನ ಎನ್ನುವುದು ಸ್ಟೇಶನ್ ಎಂದು ಆಂಗ್ಲಭಾಷೆಯಲ್ಲಿ ಬದಲಾವಣೆಗೊಂಡಿದೆ. ಪೋಲೀಸರು ಇರುವ ಸ್ಥಳ, ಪೋಲೀಸ್ ಸ್ಟೇಶನ್, ರೈಲು ಗಾಡಿಗಳು ನಿಲ್ಲುವ ಸ್ಥಳ ರೈಲ್ವೇ ಸ್ಟೇಶನ್, ಇತ್ಯಾದಿ.

    ಪ್ರಸ್ತುತ ದೇಶಗಳ ಹೆಸರು, ಹಿಂದೊಮ್ಮೆ ಸಂಸ್ಕೃತದ ಹೆಸರುಗಳನ್ನು ಹೊಂದಿದ್ದವು, ಉದಾಹರಣೆಗೆ, ಲಾವಾ ದ್ವೀಪ (ಲಾವೋಸ್), ವರುಣ್ ದ್ವೀಪ (ಬೋರ್ನಿಯೊ), ಶ್ಯಾಮ್ ದೇಶ್ (ಥೈಲ್ಯಾಂಡ್), ಚಂಪಾ ದೇಶ್ (ವಿಯೆಟ್ನಾಂ), ಬ್ರಹ್ಮ ದೇಶ್ (ಬರ್ಮಾ/ ಮ್ಯಾನ್ಮಾರ್), ಭು ಉತ್ತನ್ ( ಭೂತಾನ್) ಮತ್ತು ಮಲಯ ದ್ವೀಪ್ (ಮಲೇಷ್ಯಾ).  ಸಿಂಗಪುರ.  ಒಂದು ಮೂಲ ಹೆಸರು, ಕಾಲಕ್ರಮೇಣ ವಿಭಿನ್ನ ರೂಪ ಪಡೆಯುವುದು ನಮಗೆ ಗೊತ್ತಿದೆ, ಮಂಗಳೂರಿನಲ್ಲಿ ಹಂಪನಕಟ್ಟೆ ಎನ್ನುವ ಸ್ಥಳವಿದೆ. ನೂರುವರ್ಷಗಳ ಹಿಂದೆ ಅದು ಅಪ್ಪಯ್ಯನಕಟ್ಟೆ ಎಂದಾಗಿತ್ತು, ಇತ್ತೀಚೆಗೆ ದೊರೆತ ಶಾಸನ ಒಂದರಿಂದ ಈ ಮಾಹಿತಿ ತಿಳಿಯಿತು. ಬಯಲು ಸೀಮೆಯಲ್ಲಿ ಸ್ವಲ್ಪ ಎನ್ನುವುದಕ್ಕೆ ರವೊಷ್ಟು ಎನ್ನುತ್ತಾರೆ, ಅದರ ಅರ್ಥ ರವೆಯಷ್ಟು, ಆಡುಮಾತಿನಲ್ಲಿ ಅದು ರವೊಷ್ಟು ಎನ್ನುವ ಅರ್ಥ ಪಡೆದಿದೆ. ವಿಜಾಪುರ/ಬಿಜಾಪುರದ ಹೆಸರು ವಿಜಯಪುರ ಎನ್ನುವುದಾಗಿತ್ತು, ಆಡು ಬಳಕೆಯಲ್ಲಿ ಅದು ವಿಜಾಪುರ/ಬಿಜಾಪುರ ಎಂದಾಗಿದೆ. ಹೀಗೆ ಹುಡುಕುತ್ತ ಹೋದಂತೆಲ್ಲ ಸಹಸ್ರಾರು ಶಬ್ದಗಳು ಅದರ ಮೂಲ ಸ್ವರೂಪದಿಂದ ಬದಲಾಗಿರುವುದು ಕಂಡು ಬರುತ್ತದೆ. 

    ಇತಿಹಾಸ ಎಂದರೆ ದಾಖಲೆ ಪುರಾವೆಗಳು ಇರಲೇ ಬೇಕೆಂದು ಎನ್ನುವುದನ್ನು ಬ್ರಿಟೀಷರು ಪ್ರತಿಪಾದಿಸಿ, ಅದನ್ನೇ ನಮ್ಮ ಜನರ ತಲೆಯಲ್ಲಿ ತುಂಬಿ ಹೋಗಿದ್ದಾರೆ. ಅದನ್ನೇ ನಾವು ಅನುಸರಿಸುತ್ತ, ಈ ನೆಲದ ಮೂಲ ಇತಿಹಾಸವನ್ನು ಮರೆಯುವ ಪ್ರಯತ್ನವನ್ನ ನಾವು ಮಾಡುತ್ತಿರುವುದು ವಿಷಾದನೀಯ. ಅದೃಷ್ಟವಶಾತ್ ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳ ಹಿಂದಿನ ವೇದ ಉಪನಿಷತ್ ಗಳು, ರಾಮಾಯಣ ಮಹಾಭಾರತ, ಪುರಾಣ ಕಥೆಗಳು ಇತ್ಯಾದಿಗಳನ್ನ ಶ್ರುತಿ ಮತ್ತು ಸ್ಮೃತಿ ವಿಧಾನದ ಮೂಲಕ ತಲುಪಿಸುವ ವ್ಯವಸ್ಥೆಯನ್ನ ಮಾಡಿದ್ದರಿಂದ, ಸಹಸ್ರಾರು ತಲೆಮಾರುಗಳಿಂದ ಇಂದಿನ ತಲೆಮಾರಿನವರಿಗೆ ಮಾಹಿತಿ ಲಭ್ಯವಾಗುತ್ತಿದೆ.

ಬರಹ:- ಪಿ.ಎಸ್.ರಂಗನಾಥ,
ಮಸ್ಕತ್ - ಒಮಾನ್ ರಾಷ್ಟ್ರ.

ಗುರುವಾರ, ಮೇ 23, 2024

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ಈಜಿಪ್ಟ್


ಈಜಿಪ್ಟ್ ದೇಶದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈಜಿಪ್ಟ್  ಎಂದೊಡನೆ ಅಲ್ಲಿನ ಪಿರಮಿಡ್ ಗಳು, ನೈಲ್ ನದಿ, ಪುರಾತನ ನಾಗರೀಕತೆ ಎಲ್ಲರಿಗೂ ನೆನಪಾಗುತ್ತದೆ. ಈಜಿಪ್ಟಿನ ನಾಗರೀಕತೆ ಮತ್ತು ಪುರಾತನ ಪಿರಮಿಡ್ ಗಳು ವಿಶ್ವವಿಖ್ಯಾತ. ಪ್ರಪಂಚದ ಮಹಾ ಅದ್ಭುತಗಳ ಪಟ್ಟಿಯಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳೂ ಸೇರಿವೆ. ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೈತ್ಯಗಾತ್ರದ ಪಿರಮಿಡ್ ಗಳನ್ನು ವೀಕ್ಷಿಸಲು  ಸಾವಿರಾರು ಪ್ರವಾಸಿಗರನ್ನು ದಿನನಿತ್ಯ ಭೇಟಿ ನೀಡುತಿದ್ದಾರೆ.  ಇಲ್ಲಿನ ನೈಲ್ ನದಿ ಈ ದೇಶದ ಜೀವನದಿ. ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ ಎನ್ನುವಂತೆ, ಅಂದಿನ ಈಜಿಪ್ಟಿನ ಪುರಾತನ ನಾಗರಿಕತೆ ಹುಟ್ಟಿದ್ದು ಈಜಿಪ್ಟಿನ ನೈಲ್ ನದಿ ಹರಿಯುವ ಇಕ್ಕೆಲಗಳಲ್ಲಿ.  ಅಗಾಧವಾದ ಮರುಭೂಮಿಯ ಮಧ್ಯೆ ಜನವಸತಿ ಕೇಂದ್ರೀಕೃತವಾಗಿರುವುದು ಈ ನದಿಯ ಎರಡು ದಂಡೆಗಳ ಬದಿಯಲ್ಲಿ ಹಲವಾರು ಹಳ್ಳಿಗಳು, ಪಟ್ಟಣಗಳು ಜನವಸತಿ ಕೇಂದ್ರಗಳನ್ನು ಕಾಣಬಹುದು. ಮಿಕ್ಕಂತೆ ಕಣ್ಣು ಹಾಯಿಸಿದೆಡೆಯಲ್ಲೆಲ್ಲೂ ಮರುಭೂಮಿ. 

ಕಣ್ಮರೆಯಾದ ಪ್ರಾಚೀನ ಈಜಿಪ್ಟಿನ ಜನಾಂಗ:-

ಕೇವಲ ಇನ್ನೂರೈವತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಅಮೇರಿಕ ದೇಶ ಇಂದು ಪ್ರಪಂಚದಲ್ಲಿ ದೊಡ್ಡಣ್ಣನೆಂದು ಹೆಸರುವಾಸಿ.  ಆಧುನಿಕತೆ, ಆರ್ಥಿಕತೆ, ಮಿಲಿಟರಿ ಶಕ್ತಿ, ಇತ್ಯಾದಿಯಲ್ಲಿ ನಂಬರ್ ಒನ್ ದೇಶ ಎಂದೇ ಗುರುತಿಸಲಾಗುತ್ತಿದೆ. ವಿಷಯ ಹೀಗಿರುವಾಗ ಏಳು ಸಾವಿರ ವರ್ಷಗಳ ಹಿಂದೆಯೇ ಆಧುನಿಕ ನಾಗರೀಕತೆಯನ್ನು ರೂಡಿಸಿಕೊಂಡಿದ್ದ ಈಜಿಪ್ಟ್ ದೇಶ ಹೇಗಿರಬಹುದು ಎನ್ನುವ ಕಲ್ಪನೆ ನಮ್ಮ ಮನದಲ್ಲಿ ಮೂಡಬಹುದು. ಆದರೆ ವಾಸ್ತವ ಸ್ಥಿತಿ ಬೇರೆಯದೇ ಇದೆ. ಅಂದಿನ ಸುವರ್ಣಯುಗ, ಗತ ವೈಭವ ಕೇವಲ ಇಂದು ಪಳೆಯುಳಿಕೆಗಳಾಗಿ ಉಳಿದಿದೆ. 

ಇತ್ತೀಚಿನ ಕೆಲ ವರ್ಷಗಳ ಹಿಂದೆ ಈಜಿಪ್ಟ್ ಪ್ರಜೆಗಳ ಕುರಿತು ಹಲವಾರು DNA  ವರದಿಗಳನ್ನು ಬಿಡುಗಡೆಗೊಳಿಸಿದರು. ಆ ವರದಿಗಳ ಪ್ರಕಾರ  ಮಮ್ಮಿಗಳು ಸೇರಿದಂತೆ, ಅಂದಿನ ಜನರು ಮತ್ತು ಇಂದಿನ ಜನರ ನಡುವೆ ಹೋಲಿಕೆಯೇ ಇಲ್ಲವಂತೆ, ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಮೂಲನಿವಾಸಿಗಳು ಕಾಲಕ್ರಮೇಣ ಕಣ್ಮರೆಯಾಗಿದ್ದಾರೆ. ನಮ್ಮ ಹರಪ್ಪ ಮೆಹೆಂಜದಾರೋ ನಾಗರೀಕತೆಯಂತೆ, ಅಂದಿನ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದಂತೆ, ಇಲ್ಲಿನ ಮೂಲನಿವಾಸಿಗಳು ಬೇರೆಡೆ ವಲಸೆ ಹೋಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಥವಾ ಆ ಜನಾಂಗ ನಶಿಸಿ ಹೋಗಿದೆಯೋ ಗೊತ್ತಿಲ್ಲ. ಇಂದಿನ ಈಜಿಪ್ಟಿನ ದೇಶದಲ್ಲಿರುವ ಬಹುತೇಕರು ಇತರೆ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು. ಪ್ರಸ್ತುತ ಈಜಿಪ್ಟ್ ಜನರ DNA ಮಧ್ಯಪ್ರಾಚ್ಯ ರಾಷ್ಟ್ರಗಳ ಜನರ ಜನರ ಜತೆ ಹೆಚ್ಚು ಹೋಲಿಕೆಯಾಗುತ್ತದೆಯಂತೆ. ಇನ್ನೂ ಒಂದು ವಿಷಯ ಏನೆಂದರೆ, ಈಜಿಪ್ಟ್ ದೇಶ ಆಫ್ರಿಕಾ ಖಂಡದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆಫ್ರಿಕಾ ಖಂಡದ ಜನಾಂಗಕ್ಕೂ ಈಗಿರುವ ಈಜಿಪ್ಟ್ ದೇಶದ ಜನರಿಗೂ ಹೋಲಿಕೆಯೂ ಬಹಳ ಕಡಿಮೆ 

ಒಂದು ಕಾಲದಲ್ಲಿ ಶ್ರೀಮಂತವಾಗಿ ಮೆರೆದಿದ್ದ ಈಜಿಪ್ಟ್ ರಾಷ್ಟ್ರ, ಈಗ ಬಡ ರಾಷ್ಟ್ರವಾಗಿದೆ. ವರದಿಗಳ ಪ್ರಕಾರ, ಈಜಿಪ್ಟ್ ದೇಶದ 32% ಜನರು ಬಡತನದಲ್ಲಿದ್ದಾರೆ. ದೇಶದ ಆರ್ಥಿಕತೆ ಕುಸಿದಿದ್ದು, ವಿಶ್ವಬ್ಯಾಂಕ್ ಮತ್ತು ಇತರೆ ಅರಬ್ ದೇಶಗಳ ನೆರವಿನಿಂದ ದೇಶವು ಮುನ್ನೆಡೆಯುತ್ತಿದೆ. ಪ್ರವಾಸೋದ್ಯಮದಿಂದ ಅಲ್ಪ ಮಟ್ಟಿನ ಆದಾಯವಿದೆ. ಲಕ್ಷಾಂತರ ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ವಿದ್ಯಾವಂತ ಜನ ಉದ್ಯೋಗ ಅರಸಿ ಗಲ್ಫ್ ಸೇರಿದಂತೆ ಇತರೆ ರಾಷ್ಟ್ರಗಳಿಗೆ ವಲಸೆ ಹೋಗುತಿದ್ದಾರೆ. ಕೃಷಿಯು ಬಹುತೇಕ ನೈಲ್ ನದಿಯ ಮೇಲೆ ಅವಲಂಬಿತವಾಗಿರುವುದರಿಂದ, ಆಹಾರ ಪದಾರ್ಥಗಳನ್ನ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಸಾವಿರಾರು ವರ್ಷಗಳ ಹಿಂದೆ ಶ್ರೀಮಂತ ರಾಷ್ಟ್ರವಾಗಿದ್ದ ಈಜಿಪ್ಟ್ ಹೀಗೇಕಾಯ್ತು ಎನ್ನುವುದಕ್ಕೆ ನೂರಾರು ಕಾರಣಗಳು ಸಿಗಬಹುದು. 

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ನಾಗರೀಕತೆ:-

ಅಪರಿಮಿತ ಉತ್ಸಾಹದಿಂದ ಈಜಿಪ್ಟ್ ಪ್ರವಾಸಕ್ಕೆ ಹೋದ ಜನರು, ಮರಳಿ ಬರುವಾಗ ಬೇಸರದಿಂದಲೇ ಮರಳಿ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರವಾಸಿ ಗೈಡ್ ಗಳು ಎಂದು ಹಲವಾರು ಜನ ಯಾಮಾರಿಸುತ್ತಾರೆ.  ಕ್ಯಾಮೆಲ್ ರೈಡ್ ಬೇಕಾ? ಸಿಗರೇಟ್ ಬೇಕಾ? ಗಾಡಿ ಬೇಕಾ? ಕುದರೆ ಸವಾರಿ ಬೇಕಾ? ಎಂದು ಹಲವರು ನಮ್ಮ ಹಿಂದೆ ಬೀಳುವುದು ಸಾಮಾನ್ಯ, ಅವರೆಲ್ಲರನ್ನೂ ನಿರ್ಲಕ್ಷಿಸಿ ಪ್ರವಾಸಿ ಸ್ಥಳಗಳಿಗೆ ಹೋದರೆ ಅಲ್ಲಿನ ಅವ್ಯವಸ್ಥತೆ ಬೇಸರವನ್ನುಂಟು ಮಾಡುತ್ತದೆ. ಕೆಲವರು ಒಂದಕ್ಕೆ ಎರಡರಷ್ಟು ಹಣ ಪಡೆಯುವುದು ಮಾಮೂಲಿಯಾಗಿದೆ. ಏನೇ ಸಹಾಯ ಬೇಕಿದ್ದರೂ, ಉಚಿತವಾಗಿ ದೊರೆಯುವುದು ಕಡಿಮೆ. ಎಲ್ಲದಕ್ಕೂ ಭಕ್ಷೀಸು ಅಥವ ಟಿಪ್ಸ್ ಕೇಳುವುದು ಸಾಮಾನ್ಯ ಸಂಗತಿ. ಇನ್ನು ಸ್ವಚ್ಚತೆ ವಿಷಯದಲ್ಲಂತೂ ಹೇಳುವುದೇ ಬೇಡ. ಎಲ್ಲಿ ನೋಡಿದರೂ ಕಸದ ರಾಶಿ. ಅದು ಪಿರಮಿಡ್ ಗಳಿರಲಿ, ನೈಲ್ ನದಿಯ ಅಕ್ಕಪಕ್ಕದಲ್ಲಾಗಲಿ, ಲಕ್ಸರ್ ನ ದೇವಾಲಯ ಸುತ್ತಮುತ್ತ, ಎಲ್ಲೇ ಆದರು ಕಸ ಕಡಿಮೆ ಏನಿಲ್ಲ. ಕೈರೋ ನಗರ ಜನಸಾಗರ ದಿಂದ ತುಂಬಿ ಹೋಗಿದೆ, ಇನ್ನು ಐವತ್ತು ವರ್ಷಗಳಲ್ಲಿ ಆ ನಗರದ ಜನಸಂಖ್ಯೆ ದುಪ್ಪಟ್ಟಾಗಲಿದೆ. ಮೈಲುಗಟ್ಟಲೆ ಇರುವ ಅಂದವಿಲ್ಲದ ಅಪಾರ್ಟ್ ಮೆಂಟ್ ಗಳು ನೀರಸವೆನಿಸಿ ಬಿಡುತ್ತವೆ  ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ನಮ್ಮ ಪ್ರವಾಸವನ್ನು ದುಸ್ತರಗೊಳಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಆಧುನಿಕ ನಾಗರೀಕತೆ ಹೊಂದಿದ್ದ ಈಜಿಪ್ಟ್ ದೇಶಾನ ಇದು ಎಂದೆನಿಸುತ್ತದೆ. ಡಾಕ್ಟರ್ ಇಂಜಿನಿಯರುಗಳು, ಶಿಕ್ಷಕರು, ಪ್ರೊಫೆಸರ್ ಗಳು ಮುಂತಾದ ಸುಶಿಕ್ಷಿತ ಜನರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇಂದಿನ ಈಜಿಪ್ಟ್ ನ ಸ್ಥಿತಿಗೆ ಇದು ಒಂದು ಕಾರಣ ಸಹ ಎನ್ನಲಾಗುತ್ತಿದೆ. ಮುಂದೊದು ದಿನ ಬದಲಾಗುವ ರಾಜಕೀಯ ಕಾಲಘಟ್ಟದಲ್ಲಿ ಈಜಿಪ್ಟ್ ತನ್ನ ಗತ ವೈಭವ ಪಡೆಯಬಹುದು ಎನ್ನುವ ಆಶಾಭಾವ ಇಲ್ಲಿಗೆ ಭೇಟಿ ನೀಡಿ ಹಿಂತಿರುಗುವ ಪ್ರವಾಸಿಗರಲ್ಲಿದೆ


ಪ್ರಮುಖ ಪ್ರವಾಸಿ ತಾಣಗಳು:- 

ಇಲ್ಲಿರುವ ಹಲವಾರು ಪ್ರವಾಸಿ ತಾಣಗಳನ್ನು ನೋಡಲು, ಪ್ರತಿವರ್ಷ ಲಕ್ಷಾಂತರ ಜನರು ಈಜಿಪ್ಟ್ ಪ್ರವಾಸ ಕೈಗೊಳ್ಳುತ್ತಾರೆ. ನೋಡುವುದಕ್ಕೆ ಅಸಂಖ್ಯಾತ ತಾಣಗಳಿದ್ದು, ಭರಪೂರ ಮಾಹಿತಿ ಇಲ್ಲಿ ದೊರೆಯುತ್ತದೆ. ಇತಿಹಾಸ ಓದುವ ವಿಧ್ಯಾರ್ಥಿಗಳಿಗೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಜನರಿಗೆ ಈಜಿಪ್ಟ್ ಪ್ರವಾಸ ಒಂದು ಅದ್ಭುತವಾದ ಅನುಭವವನ್ನೇ ನೀಡುತ್ತದೆ. ಈಜಿಪ್ಟ್ ದೇಶದಲ್ಲಿ ನೋಡುವಂತಹ ಸ್ಥಳಗಳು ಬಹಳಷ್ಟಿವೆ. ಸಾವಿರಾರು ವರ್ಷಗಳ ಹಿಂದೆಯೇ ಏನೆಲ್ಲಾ ತಂತ್ರಜ್ನಾನವನ್ನು ಅಂದಿನ ಕಾಲದಲ್ಲಿ ಅವರು ಉಪಯೋಗಿಸಿದ್ದರು ಅಂತ ಆಶ್ಚರ್ಯವಾಗುತ್ತಿದೆ. ಇವರ ಆರಾಧ್ಯ ದೇವರು "ಸೂರ್ಯ". ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಆದ್ದರಿಂದ ಈಜಿಪ್ಟ್ ದೇವತೆಗಳ ಎಲ್ಲ ದೇವಾಲಯಗಳು ನೈಲ್ ನದಿಯ ಪೂರ್ವ ತಟದಲ್ಲಿವೆ. ಸೂರ್ಯ ಮುಳುಗುವುದು ಪಶ್ಚಿಮ ದಿಕ್ಕಿನಲ್ಲಿ, ಹೀಗಾಗಿ ಸತ್ತವರ ಗೋರಿಗಳಿರುವ  ಈಜಿಪ್ಟಿನ ಎಲ್ಲ ಪಿರಮಿಡ್‌ಗಳು ನೈಲ್ ನದಿಯ ಪಶ್ಚಿಮ ಭಾಗದಲ್ಲಿವೆ. ಸೂರ್ಯ ಉದಯಿಸುವಾಗ ಬೆಳಕು, ಹೊಸ ಜೀವನ ಮತ್ತು ಸೂರ್ಯ ಮುಳುಗುವಾಗ ಕತ್ತಲು ಅಥವಾ ಮರಣ ಎಂಬರ್ಥದಲ್ಲಿ ಪಿರಮಿಡ್ ಗಳನ್ನು ಮತ್ತು ದೇವಾಲಯಗಳನ್ನು ನಿರ್ಮಿಸಲಾಗಿದೆ


ಈಜಿಪ್ಟ್ ಪ್ರವಾಸಿ ತಾಣಗಳ ಕುರಿತು ಕಿರು ಚಿತ್ರಣ ಇಲ್ಲಿ ನೀಡಲಾಗಿದೆ.

1. ಗಿಜಾದ ಪಿರಮಿಡ್‌ಗಳು (Pyramids of Giza), : 



ಈಜಿಪ್ಟ್ ಪ್ರಖ್ಯಾತವಾಗಿರುವುದಕ್ಕೆ ಕಾರಣ ಇಲ್ಲಿನ ಪಿರಮಿಡ್ ಗಳು. ಈ ಎಲ್ಲಾ ಪಿರಮಿಡ್‌ಗಳು ಈಜಿಪ್ಟ್‌ನ ರಾಜಮನೆತನದವರ ಗೋರಿಗಳು. ಪ್ರಾಚೀನ ಈಜಿಪ್ಟಿನ ರಾಜರುಗಳನ್ನು ಫೆರೋಗಳು ಎಂದು ಕರೆಯುತ್ತಾರೆ. ಈ ಫೆರೋಗಳ ಮರಣಾನಂತರ ಅವರನ್ನು ಪಿರಮಿಡ್ ಗಳ ಒಳಗೆ ಮಮ್ಮಿಗಳಾಗಿ ಮಾಡಿ ಶವಸಂಸ್ಕಾರ ಮಾಡುತಿದ್ದರು. ರಾಜ ಸತ್ತಮೇಲೆ ಕಳೇಬರವನ್ನು ಸುಗಂಧದ್ರವ್ಯಗಳಿಂದ ಅಲಂಕರಿಸಿ, ರಾಜನಿಗೆ ಪ್ರಿಯವಾದ ವಸ್ತುಗಳ ಜೊತೆಗೆ ಚಿನ್ನಾಭರಣಗಳು, ಅಲಂಕಾರಿಕ ವಸ್ತುಗಳನ್ನು ಇಡಲಾಗುತ್ತಿತ್ತು. ನೆಲದಲ್ಲಿ ಹೂಳಿದ ಮೇಲೆ (ಇದನ್ನೇ ‘ಮಮ್ಮಿ’ ಎನ್ನುವುದು)  ಅದರ ಮೇಲೆ ಪಿರಮಿಡ್‌ ಅನ್ನು ಕಟ್ಟುತ್ತ ಹೋಗುತ್ತಾರೆ. ಫೆರೋ ರಾಜನ ಪ್ರಖ್ಯಾತಿಗೆ ಅನುಗುಣವಾಗಿ ದೊಡ್ಡ ಗಾತ್ರದ ಪಿರಮಿಡ್‌ ಕಟ್ಟುವ ಮೂಲಕ ಗೌರವ ಸೂಚಿಸುತಿದ್ದರಂತೆ. ಕೈರೋ ನಗರದ ಸುತ್ತಮುತ್ತಲೂ ಏನಿಲ್ಲೆಂದರೂ ನೂರಕ್ಕೂ ಹೆಚ್ಚು ಪಿರಮಿಡ್‌ಗಳಿವೆ. ಅತ್ಯಂತ ದೊಡ್ಡ ಪಿರಮಿಡ್ಡ್  ಗಿಜಾ ದಲ್ಲಿದೆ.  ಈ ಪಿರಮಿಡ್ಡ್  481 ಅಡಿ ಎತ್ತರ 146 ಅಡಿ ಅಗಲವನ್ನು ಹೊಂದಿದ್ದು, 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ.  ಪಿರಮಿಡ್‌ಗಳು ಪ್ರಾಚೀನ ಈಜಿಪ್ಟ್‌ ನಾಗರಿಕತೆಯನ್ನು ಹಾಗೂ ಅಲ್ಲಿ ಆಡಳಿತ ನಡೆಸಿದ ಫೇರೋಗಳ ಪ್ರಾಬಲ್ಯ ಸೂಚಿಸುವ ಅವಿಸ್ಮರಣೀಯ ಸಂಕೇತಗಳಾಗಿವೆ. ಒಂದೊಂದು ಪಿರಮಿಡ್‌ನ ರಚನೆಗೂ ಸುಮಾರು 20 ವರ್ಷಗಳು ಕಾಲ ಸಮಯ ಹಿಡಿದಿದೆ. ಪ್ರಾಚೀನ ಈಜಿಪ್ಟಿನ ಫೆರೋ ರಾಜರು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದರಿಂದ ಮೃತ ಮೃತ ರಾಜನ ಆತ್ಮವು ಇನ್ನೊಂದು ಲೋಕಕ್ಕೆ ಹೋಗಲು ಅನುಕೂಲವಾಗುವಂತೆ ಪಿರಮಿಡ್‌ಗಳ ಒಳಗೆ ಪಿರಮಿಡ್ಡಿನ ತುತ್ತ ತುದಿಯ ಮೂಲಕ ನೇರವಾಗಿ ಆಕಾಶಕ್ಕೆ ಹೋಗಿ ಸ್ವರ್ಗ ಸೇರುವುದು ಎನ್ನುವ ನಂಬಿಕೆ ಅವರಲ್ಲಿತ್ತು.

2. ಲಕ್ಸರ್ ದೇವಾಲಯಗಳು ಮತ್ತು ಗೋರಿಗಳು (Luxor's Temples & Tombs), 

ಇಂದಿನ ಲಕ್ಸರ್ ನಗರವನ್ನು ಪುರಾತನ ಥೀಬ್ಸ್ ನಗರ ಎಂದು ಕರೆಯುತ್ತಾರೆ. ಇದು ಕೈರೊದಿಂದ ಸುಮಾರು 650 ಕಿ.ಮೀ. ದೂರದಲ್ಲಿದೆ. ಈ ನಗರವು ನೈಲ್ ನದಿಯ ಪೂರ್ವ ದಂಡೆಯಲ್ಲಿದೆ.

ಲಕ್ಸರ್‌ ಪಟ್ಟಣ ಕೈರೋಗಿಂತ ತುಂಬ ಚಿಕ್ಕ ನಗರ.  ಪ್ರಾಚೀನ ಕಾಲದಲ್ಲಿ ಈಜಿಪ್ಟ್‌ನ ರಾಜಧಾನಿಯಾಗಿತ್ತಂತೆ. ಈ ಪ್ರದೇಶದಲ್ಲಿ  ಪುರಾತನನ ಈಜಿಪ್ಟ್ ದೇವಾಲಯಗಳ ಸಂಕೀರ್ಣವಿದೆ.  ಫೆರೋಗಳು ಬದುಕಿದ್ದಾಗಲೇ ಗೋರಿಗಳನ್ನ ಇಲ್ಲಿ ನಿರ್ಮಿಸುತಿದ್ದರಂತೆ, ಅಂದರೆ ಜೀವಂತ ಸಮಾಧಿಯಾಗಲು ಅಲ್ಲ. ಮುಂದೊಂದು ದಿನ ಸಾವು ಬಂದೇ ಬರುತ್ತದೆ. ಸತ್ತ ನಂತರ ಅವರ ಹೆಸರು ಮತ್ತು ಘನತೆ ಚಿರಸ್ಥಾಯಿಯಾಗಿಯಿರಲು ಭವ್ಯವಾದ ಮಂದಿರ ನಿರ್ಮಾಣ ಮಾಡುತಿದ್ದರು.  ಈ ದೇವಾಲಯಗಳಿಗೆ ‘ಅಂತ್ಯಸಂಸ್ಕಾರದ ದೇವಾಲಯ’(ಫ್ಯುನರರಿ ಟೆಂಪಲ್) ಎಂದೂ ಕರೆಯುತ್ತಾರೆ. ಮೂರು ಹಂತಗಳಲ್ಲಿ ಹಟ್‌ಶೆಪ್‌ಸುಟ್‌ ರಾಣಿ ಕಟ್ಟಿಸಿದ ಈ ಮಂದಿರ ಆ ಕಾಲದಲ್ಲಿ ಇಡೀ ಈಜಿಪ್ಟ್‌ನಲ್ಲೇ ಅತ್ಯಂತ ಭವ್ಯ ಮತ್ತು ಸುಂದರ ದೇವಾಲಯವಾಗಿತ್ತು. ಈಜಿಪ್ಟಿನಲ್ಲಿ ಕೆಲವು ರಾಣಿಯರು ಹಟ್‌ಶೆಪ್‌ಸುಟ್‌ಗಿಂತ ಮೊದಲು ಮಹಿಳಾ ಫೆರೋ ಆಗಿ ರಾಜ್ಯಭಾರ ಮಾಡಿದ್ದರೂ ಸಹ  21 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಟ್‌ಶೆಪ್‌ಸುಟ್‌ ಎಲ್ಲರಿಗಿಂತ ಹೆಚ್ಚು ಪ್ರಖ್ಯಾತ. ವಿಭಿನ್ನ ಫೆರೋಗಳು ಹಂತ ಹಂತವಾಗಿ ಕಟ್ಟಿಸಿದ ಲಕ್ಸರ್‌ ಮಂದಿರ, ಪುರಾತನ ಈಜಿಪ್ಟ್‌ನ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು ಇಪ್ಪತ್ತು ಅಡಿ ಉದ್ದದ 61 ಕಂಬಗಳ ಮೇಲೆ ಹಟ್‌ಶೆಪ್‌ಸುಟ್‌ ರಾಣಿಯ ಅಡಳಿತಾವಧಿಯ ಸಾಧನೆಗಳು, ಹಲವು ದೇವರ ಕತೆಗಳು ಹಾಗೂ ಧರ್ಮಾಚರಣೆಗಳ ಕುರಿತು ವಿವರಗಳನ್ನು ಕೆತ್ತಲಾಗಿದೆ. ಈ ಲಕ್ಸರ್ ನ ನೈಲ್ ನದಿಯ  ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ಹಲವಾರು ದೇವಾಲಯಗಳಿವೆ. ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ಕಾರ್ನಕ್ ದೇವಾಲಯ ಇದೇ ದಂಡೆಯ ಮೇಲಿದೆ. ಹತ್ತಿರದಲ್ಲಿ, ಲಕ್ಸರ್ ಮ್ಯೂಸಿಯಂ, ಕಾರ್ನಾಕ್ ಟೆಂಪಲ್, ಕೋನ್ಸು ಟೆಂಪಲ್, ಬಿಸಿಗಾಳಿ ಬೆಲೂನ್ ಗಳು ಹಾರಾಡುವ ಸ್ಥಳ, ‘ವ್ಯಾಲೀ ಆಫ್‌ ಕಿಂಗ್ಸ್‌ ಏಂಡ್‌ ಕ್ವೀನ್ಸ್‌’ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಕಾಣಬಹುದು. 

3. ನೈಲ್ ಕ್ರೂಸಿಂಗ್ (Cruising the Nile):- 

ಈಜಿಪ್ಟ್ ನ ಜನವಸತಿ ನೈಲ್ ನದಿಗುಂಟ ಹರಡಿಕೊಂಡಿದೆ. ಮರುಭೂಮಿಯ ಮಧ್ಯದಲ್ಲಿ ನೈಲ್ ನದಿ ಮತ್ತು ಎರಡೂ ಕಡೆಯ ದಂಡೆಯ ಮೇಲೆ ಹಸಿರು ಹೊದ್ದ ಹೊಲ ಗದ್ದೆಗಳು ಅಲ್ಲಲ್ಲಿ ಪ್ರಾಚೀನ ದೇವಾಲಯಗಳು ಮತ್ತು ಗೋರಿಗಳು, ಇವೆಲ್ಲವನ್ನು ನದಿಯಲ್ಲಿ ಬೋಟ್ ರೈಡ್ ಮಾಡುತ್ತ ಈ ದೃಶ್ಯಗಳನ್ನ ಕಣ್ ತುಂಬಿಸಕೊಳ್ಳಬಹುದು. ನೈಲ್ ಕ್ರೂಸ್‌ನಲ್ಲಿ ಎರಡು ಜನಪ್ರಿಯ ದೃಶ್ಯಗಳೆಂದರೆ ಕೋಮ್ ಒಂಬೊ ದೇವಾಲಯ ಮತ್ತು ಎಡ್ಫುನಲ್ಲಿರುವ ಹೋರಸ್ ದೇವಾಲಯ, ಅಲ್ಲಿ ಎಲ್ಲಾ ದೊಡ್ಡ ಕ್ರೂಸ್ ದೋಣಿಗಳು ನಿಲ್ಲುತ್ತವೆ.

 4. ಆಸ್ವಾನ್(Aswan), :- 

ಅತ್ಯಂತ ಪ್ರಶಾಂತವಾದ ಪಟ್ಟಣ ಎಂದು ಕರೆಯುತ್ತಾರೆ, ಅಂಕು ಡೊಂಕಾಗಿ ಹರಿಯುವ ನೈಲ್ ನದಿಯ ಸುತ್ತಲೂ ಈ ನಗರ ಹರಡಿಕೊಂಡಿದೆ. ಇಲ್ಲಿ ಚಿಕ್ಕ ಚಿಕ್ಕ ದ್ವೀಪಗಳು ಇವೆ. ಇವುಗಳನ್ನು ಸಂಪರ್ಕಿಸಲು ಬೋಟ್ ಮುಖಾಂತರವೇ ಹೋಗಬೇಕು. ಇಲ್ಲಿ ಹಲವಾರು ಚಟುವಟಿಕೆಗಳಿಗೆ ಪ್ರಸಿದ್ದ, ರಿವರ್ ಬೋಟಿಂಗ್, ಒಂಟೆ ಸವಾರಿ, ಇಲ್ಲಿನ ಹಳ್ಳಿಗಳಲ್ಲಿ ಒಂದು ಸುತ್ತು ಹಾಕಿ ಇಲ್ಲಿನ ಜನಜೀವನದ ಕುರಿತು ತಿಳಿದುಕೊಳ್ಳಬಹುದು.   ಮರುಭೂಮಿಯ ಜತೆಗೆ ನದಿಜೀವನವನ್ನು ಈ  ಕಾಣಬಹುದು.ಇಲ್ಲಿಯೂ ಸಹ ಹಲವಾರು ಪ್ರಾಚೀನ ದೇವಾಲಯಗಳಿವೆ. ನದಿಯ ದಂಡೆಯಲ್ಲಿನ ಖರ್ಜೂರದ ಮರಗಳು, ಮರುಭೂಮಿಯ ಮರಳು ರಾಶಿ ಇವೆಲ್ಲದರ ಜತೆಗೆ ಸುರ್ಯೊದಯ ಮತ್ತು ಸೂರ್ಯಾಸ್ತ ದ ವಿಹಂಗಮ ನೋಟವನ್ನು ಸವಿಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

5. ಅಬು ಸಿಂಬೆಲ್ (Abu Simbel):- 

ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು. ಕೈರೋ ದಿಂದ 1200 ಕಿ.ಮಿ. ದೂರದಲ್ಲಿ ಈ ನಗರವಿದೆ. ಲಕ್ಸರ್ ಮತ್ತು ಆಸ್ವಾನ್ ನ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಇಲ್ಲಿಗೆ ಭೇಟಿ ನೀಡಬಹುದು. ಇದು ರಾಮ್‌ಸೆಸ್ II ರ ಮಹಾನ್ ದೇವಾಲಯವಾಗಿದ್ದು, ಇದನ್ನು ಕ್ರಿಸ್ತಪೂರ್ವ 1265 ರಲ್ಲಿ ನಿರ್ಮಿಸಲಾಗಿದೆ, ಆಲಯದ ಹೊರಭಾಗದಲ್ಲಿ ಬೃಹದಾಕಾರದ ಪ್ರತಿಮೆಗಳಿಮ್ದ ಅಲಂಕರಿಸಲ್ಪಟ್ಟಿದೆ ಮತ್ತು ಒಳಭಾಗದ ಗೋಡೆಯು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. 

ಆಸ್ವಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ಈ ಪ್ರದೇಶ ಮುಳುಗಿ ಹೋಗುತಿತ್ತು, ಇದನ್ನು ಮನಗಂಡ ಯುನೆಸ್ಕೋ, ಮೂರು ಸಾವಿರ ವರ್ಷದಷ್ಟು ಹಳೆಯದಾದ ಈ ಸಂಕೀರ್ಣ ಹಾಳಾಗುವುದನ್ನು ಸಂರಕ್ಷಿಸಲು 1968 ರಲ್ಲಿ ಈ ದೇವಾಲಯವನ್ನು ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಇದಕ್ಕೆ ತಗುಲಿದ ವೆಚ್ಚ ಅಂದಾಜು US$80 million. ಇದರ ಅರ್ಧದಷ್ಟು ಹಣವನ್ನು ಸುಮಾರು 50 ಕ್ಕೂ ಹೆಚ್ಚು ದೇಶಗಳು ದೇಣಿಗೆ ನೀಡಿದ್ದವು. 

6. ಸಕ್ಕಾರಾ (Saqqara):- 


ಕೈರೋ ನಗರದಿಂದ 30 ಕಿ.ಮಿ. ದೂರದಲ್ಲಿ ಈ ನಗರವಿದೆ. ಇಲ್ಲಿ ಪುರಾತನವಾದ ಪಿರಮಿಡ್ ಗಳನ್ನ ನೋಡಬಹುದು. ಗಿಜಾದಲ್ಲಿನ ಪಿರಮಿಡ್ ಗಳು ಕಟ್ಟುವ ಮುಂಚಿನ ವಿನ್ಯಾಸವನ್ನು ಇಲ್ಲಿ ಕಾಣಬಹುದು, ಬಹುಶಃ  ಪಿರಮಿಡ್ ಗಳನ್ನು ರಚಿಸಲು ಪ್ರಾರಂಭಿಸಿದ ಸಮಯದಲ್ಲಿ, ಈ ಆಕಾರದಲ್ಲಿ ವಿನ್ಯಾಸ ಮಾಡಿ ಕಟ್ಟಲಾಗಿದೆ, ಕಾಲಕ್ರಮೇಣ ಅನುಭವ ಮತ್ತು ಕೌಶಲ್ಯತೆ  ಕರಗತವಾದ ನಂತರ ಗಿಜಾದಲ್ಲಿ ಉನ್ನತಮಟ್ಟದ ಪಿರಮಿಡ್ ಗಳು ರಚನೆಯಾಗಿರಬಹುದು ಎನ್ನಲಾಗಿದೆ.  

7. ಈಜಿಪ್ಟಿನ ವಸ್ತುಸಂಗ್ರಹಾಲಯ(Egyptian Museum):- 

ಪ್ರಾಚ್ಯವಸ್ತು ಸಂಶೋಧನೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ನೋಡಲೇ ಬೇಕಾದ ಮ್ಯೂಸಿಯಂ ಇದು. ಪ್ರಪಂಚದ  ಅದ್ಭುತಗಳ ಒಂದು ವಸ್ತುಸಂಗ್ರಹಾಲಯ ವೆಂದೇ ಇದನ್ನು ಪರಿಗಣಿಸಲಾಗುತ್ತದೆ. ಈಜಿಪ್ಟ್ ಅನ್ನು ಆಳಿದ ಹಲವು ರಾಜಮನೆತನಗಳ ವಿವರ, ಅವರು ಉಪಯೋಗಿಸಿದ ವಸ್ತುಗಳು, ಫೆರೋಗಳ ಕಾಲದ ಅತ್ಯಮೂಲ್ಯವಸ್ತುಗಳು, ಗೋರಿಗಳನ್ನು ಉತ್ಖನನ ಮಾಡಿದಾಗ, ಮಮ್ಮಿಗಳು ಸೇರಿದಂತೆ ಅವುಗಳ ಜತೆ ದೊರೆತ ಹಲವಾರು ವಸ್ತುಗಳು ಇಲ್ಲಿ ಸಂಗ್ರಹಿಸಲ್ಪಟ್ಟಿವೆ.  

8. ವೈಟ್ ಮರುಭೂಮಿ (White Desert Natioanl Park):- 

ಈ ಪ್ರದೇಶ ಕೈರೋ ನಗರದಿಂದ 425 ಕಿ.ಮಿ. ದೂರದಲ್ಲಿದೆ.  ಮರಳಿನ ಮಧ್ಯೆ ದೊಡ್ಡದಾದ ಮಂಜುಗಡ್ಡೆಗಳ ರೀತಿಯಲ್ಲಿ ಬಿಳಿ ಬಣ್ಣದ ಚಿತ್ರವಿಚಿತ್ರ ಕೆತ್ತನೆಯ ಸುಣ್ಣದ ಕಲ್ಲಿನಲ್ಲಿ ಪ್ರಕೃತಿನಿರ್ಮಿತ ಈ ಆಕೃತಿಗಳು ಪ್ರವಾಸಿಗರ ಕಣ್ ಮನಸೆಳೆಯುತ್ತವೆ.  ಲಕ್ಷಾಂತರವರ್ಷಗಳ ಹಿಂದೆ ಈ ಪ್ರದೇಶ ರೂಪುಗೊಂಡಿದೆ ಎಂದು ಭೂವಿಜ್ನಾನಿಗಳು ಹೇಳುತ್ತಾರೆ.

9. ಅಲೆಕ್ಸಾಂಡ್ರಿಯಾ (Alexandria):- 

ಈಜಿಪ್ಟಿನ ಎರಡನೇ ಅತಿದೊಡ್ಡ ಪಟ್ಟಣ ಇದಾಗಿದ್ದು, ಕೈರೋ ದಿಂದ 240 ಕಿ.ಮಿ.ದೂರದಲ್ಲಿದೆ.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ನಿರ್ಮಿಸಿದ ನಗರವಿದು. ರಾಣಿ ಕ್ಲಿಯೋಪಾತ್ರಳು ಸಹ ಹುಟ್ಟಿದ್ದು ಇದೇ ನಗರದಲ್ಲಿ.  ಪುರಾತನನಗರವಾದ್ದರಿಂದ ಇಲ್ಲಿ ಐತಿಹಾಸಿಕ ಸ್ಥಳಗಳೇನು ಕಮ್ಮಿಯಿಲ್ಲ. ನಗರವು ಬೆಳೆದು ದೊಡ್ಡದಾಗಿರುವುದರಿಂದ ಬಹುಮುಖ್ಯ ಪ್ರಾಚೀನ ಸಂಗತಿಗಳು ಈ ನಗರದಲ್ಲಿ ಹುದುಗಿಹೋಗಿವೆ. ಸಮುದ್ರದಾಳದಲ್ಲಿ ನಡೆಯುತ್ತಿರುವ ಉತ್ಖನನದಿಂದ ಹಲವು ಪುರಾತನ ವಸ್ತುಗಳು ಆಗಾಗ್ಗೆ ದೊರೆಯುತ್ತಿರುತ್ತವೆ. ಈಜಿಪ್ಟಿನ ಉತ್ತರಭಾಗದಲ್ಲಿರುವ ಮೆಡಿಟೇರಿಯನ್ ಸಮುದ್ರದ ದಂಡೆಯಲ್ಲಿ ಈ ನಗರವಿದ್ದು, ಬೇಸಿಗೆಯಲ್ಲಿ ಸಮುದ್ರದ ಕಡೆಯಿಂದ ಬರುವ ತಂಪಾದಗಾಳಿಯನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ. ಪ್ರಪಂಚದ ಅತಿ ಪ್ರಸಿದ್ದ ಗ್ರಂಥಾಲಯ ಈ ನಗರದಲ್ಲಿದೆ. ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಇಲ್ಲಿ ಲಭಿಸುತ್ತದೆ.  ಈ ನಗರವು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಗ್ರೀಕ್ ಸಾಮ್ರಾಜ್ಯ, ರೋಮನ್ ಆಡಳಿತ, ಒಟ್ಟೋಮನ್ ಆಳ್ವಿಕೆ, ಇಸ್ಲಾಂ ಧರ್ಮ ಆಗಮನ ಹೀಗೆ ಆಯಾ ಕಾಲಘಟ್ಟದಲ್ಲಿ ಪ್ರಮುಖ ಸಂಗತಿಗಳು ಇಲ್ಲಿ ಘಟಿಸಿವೆ. 

10. ಅಬಿಡೋಸ್ ದೇವಾಲಯ, (Abydos Temple) :- 

ಇದು ಒಸಿರಿಸ್ ನ ದೇವಾಲಯ. ಲಕ್ಸರ್ ಪಟ್ಟಣ ದಿಂದ ನೂರೈವತ್ತು ಕಿ.ಮಿ.ದೂರದಲ್ಲಿ ಈ ದೇವಾಲಯವಿದೆ. ಕ್ರಿ.ಪೂ 13ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದಿನ ಫೆರೋ ಒಂದನೇ ಸೆಟಿ (Seti-1) ಇದನ್ನು ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿವೆ. ಇಲ್ಲಿನ ಗೋಡೆಗಳ ಮೇಲೆ ಅಂದು ಆಳಿದ ರಾಜರುಗಳ ಹೆಸರುಗಳನ್ನ ಸಹ ಕೆತ್ತಲಾಗಿದೆ. 

11. ಸಿವಾ ಓಯಸಿಸ್ (Siwa Oasis):- 

ಕೈರೋ ನಗರದಿಂದ ಪಶ್ಚಿಮ ದಿಕ್ಕಿಗೆ 760ಕಿ.ಮಿ. ದೂರದಲ್ಲಿ ಸಿವಾ ಪಟ್ಟಣದಲ್ಲಿ ಈ ಪ್ರವಾಸಿತಾಣವಿದೆ. ಇಲ್ಲಿನ ವಿಶೇಷವೇನೆಂದರೆ, ಪುರಾತನ ಮಣ್ಣಿನ ಮನೆಗಳು, ಬಿಸಿನೀರಿನ ಬುಗ್ಗೆಗಳು, ಖರ್ಜೂರದ ತೋಟಗಳು, ಹಾಗೂ ಹಲವಾರು ಪ್ರಾಚೀನ ದೇವಾಲಯಗಳು ಇಲ್ಲಿವೆ. ಮರಳುಗಾಡಿನ ಮಧ್ಯದಲ್ಲಿ, ನೀರು ಸಿಗುವ ಫಲವತ್ತಾದ ಪ್ರದೇಶವಾದ್ದರಿಂದ ಈ ಓಯಸಿಸ್ ಅಂದಿನ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ಮತ್ತು ಪರ್ಶಿಯನ್ ದೊರೆಗಳು ಇಲ್ಲಿಗೆ ಭೇಟಿ ನೀಡಿದ್ದರು, 

12. ಸೇಂಟ್ ಕ್ಯಾಥರೀನ್ ಮೊನಸ್ಟೆರಿ  (St. Catherine's Monastery):-  

ಈಜಿಪ್ಟಿನ ಪೂರ್ವಭಾಗದಲ್ಲಿ ಕೈರೋದಿಂದ 440ಕಿ.ಮಿ.ದೂರದಲ್ಲಿರುವ ಸಿನಾಯಿ ಎನ್ನುವ ಪರ್ವತದ ಬುಡದಲ್ಲಿ ಈ ಪ್ರವಾಸಿತಾಣವಿದೆ.  ಆಶ್ಚರ್ಯವೆಂದರೆ, ಮರುಭೂಮಿ ಮತ್ತು ಬೆಟ್ಟಗಳ ಕಡಿದಾದ ಜಾಗದಲ್ಲಿ ನೂರಾರು ಕಿಲೋಮೀಟರ್ ಗಳವರೆಗೂ ಯಾವುದೇ ಜನವಸತಿಯಿಲ್ಲದ ಈ ಪ್ರದೇಶದಲ್ಲಿ ಇದನ್ನು 6ನೇಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕ್ರಿಶ್ಚಿಯನ್ ಮತ ಅನುನಾಯಿಗಳ ಧಾರ್ಮಿಕ ಶ್ರದ್ದಾಕೇಂದ್ರ ವಾಗಿದೆ. ಪ್ರವಾದಿ ಮೋಸೆಸ್ ಅವರು ಇಲ್ಲಿಗೆ ಭೇಟಿನೀಡಿದ್ದರು. ಅಲೆಕ್ಸಾಂಡ್ರಿಯಾದ ಸನ್ಯಾಸಿ ಕ್ಯಾಥರೀನ್ ಗಾಗಿ ಈ ಮೊನೆಸ್ಟರಿಯನ್ನು ಅಂದಿನ ಈಜಿಪ್ಟಿನ ಪೂರ್ವ ಪ್ರಾಂತ್ಯದ ಚಕ್ರವರ್ತಿ ಜಸ್ಟಿನಿಯನ್ ಕಟ್ಟಿಸಿದ್ದ.

ಈಜಿಪ್ಟಿನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಒಂದೊಂದು ಪಟ್ಟಣದಲ್ಲೂ ಹಲವಾರು ಪ್ರವಾಸಿತಾಣಗಳಿವೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಪ್ರಾಚೀನ ಈಜಿಪ್ಟಿನ ಇತಿಹಾಸವನ್ನು, ಅಂದಿನ ಕಾಲದ ಕಟ್ಟಡಗಳು, ದೇವಾಲಯಗಳು, ಪಿರಮಿಡ್ ಗಳು, ನೈಲ್ ನದಿ,  ಕೆಂಪು ಸಮುದ್ರದ ಕಡಲತೀರಗಳು (Red Sea Beaches),  ಪುರಾತನ  ಕಾಪ್ಟಿಕ್ ಕೈರೋ (Coptic Cairo), ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುತಿದ್ದಾರೆ.

ಈಜಿಪ್ಟಿನ ಕೆಲ ವಿಶೇಷತೆಗಳು:-

1. ಹನ್ನೊಂದು ಕೋಟಿ ಜನರಿರುವ ಈಜಿಪ್ಟ್ ದೇಶ ಅರಬ್ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ನೈಜೀರಿಯಾ ಮತ್ತು ಇಥಿಯೋಪಿಯಾದ ನಂತರ ಆಫ್ರಿಕಾದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಾಚೀನ ಈಜಿಪ್ಟಿನವರು ತಮ್ಮ ತಾಯ್ನಾಡನ್ನು ಕೆಮೆಟ್ ಎಂದು ಕರೆಯುತಿದ್ದರು, ಇದರರ್ಥ "ಕಪ್ಪು ಭೂಮಿ". ಇದು ನೈಲ್ ನದಿಯ ಪ್ರವಾಹದ ನಂತರ ಉಳಿದಿರುವ ಫಲವತ್ತಾದ ಮಣ್ಣನ್ನು ಸೂಚಿಸುತ್ತದೆ.

2. ಪ್ರಪಂಚದ ಏಳು ಅದ್ಭುತಗಳಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಒಂದು. ಈ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ

 ಇದು 3,800 ವರ್ಷಗಳ ಹಿಂದೆ ಕಟ್ಟಿದ ಏಕೈಕ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಪುರಾತನ ರಚನೆಯಾಗಿದೆ. ಈ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ

3. ಕೈರೋನಗರದಲ್ಲಿ ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾಗಿತ್ತು. 

4. ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್

5. ಈಜಿಪ್ಟಿನ ನಾಗರಿಕತೆಯು ವಿಶ್ವದಲ್ಲೇ ಅತ್ಯಂತ ಪುರಾತನವಾಗಿದ್ದು, 7,000 ವರ್ಷಗಳಷ್ಟು ಹಿಂದಿನದ್ದು ಎಂದು ಹೇಳಲಾಗುತ್ತಿದೆ.

6. ವಿಶ್ವದ ಅತ್ಯಂತ ಹಳೆಯ ಉಡುಗೆಯಾದ "ತರ್ಖಾನ್" ಈಜಿಪ್ಟ್‌ನಲ್ಲಿ ಕಂಡುಬಂದಿದೆ. ಇದು ಅಂದಾಜು 5,000 ವರ್ಷಗಳಷ್ಟು ಹಳೆಯದ್ದಾಗಿದೆ.

7. ಪ್ರಾಚೀನ ಈಜಿಪ್ಟಿನವರು ಉಪ್ಪು, ಮೆಣಸು, ನೀರು ಮತ್ತು ಪುದೀನ ಎಲೆಗಳಿಂದ ಮಾಡಿದ ಪೇಸ್ಟ್ ಅನ್ನು ಬಳಸಿಕೊಂಡು ಹಲ್ಲು ಉಜ್ಜುತಿದ್ದರಂತೆ. ವಿಶ್ವದ ಮೊಟ್ಟ ಮೊದಲ ಪೇಸ್ಟ್ ಇದಾಗಿತ್ತು ಎಂದು ಹೇಳಲಾಗುತ್ತಿದೆ.

8. ಈಜಿಪ್ಟಿನ ಮಹಿಳೆಯರು ವ್ಯಾಪಕವಾದ ವೈಯುಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹೊಂದಿದ್ದರು. ಅಂದಿನ ಕಾಲದಲ್ಲಿಯೇ ಅವರು ಆಸ್ತಿಯನ್ನು ಖರೀದಿಸಬಹುದಿತ್ತು ಮತ್ತು ಮಾರಾಟ ಮಾಡಬಹುದಾಗಿತ್ತಲ್ಲದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆಯನ್ನೂ ಸಲ್ಲಿಸಬಹುದಾಗಿತ್ತು. 

9. ಆಪ್ರಿಕಾ ಖಂಡದ ಮಹಾನದಿ ಎಂದು ನೈಲ್ ನದಿಯನ್ನು ಕರೆಯುತ್ತಾರೆ. ನೈಲ್ ನದಿ, ವಿಶ್ವದ ಅತಿ ಉದ್ದದ ನದಿಯಾಗಿದ್ದು, ಪ್ರಾಚೀನ ಈಜಿಪ್ಟಿನವರು ಕೃಷಿಯಲ್ಲಿ ಈ ನದಿಯು ಪ್ರಮುಖ ಪಾತ್ರ ವಹಿಸಿದ್ದರಿಂದ ಜೀವನಾಡಿಯೆಂದೇ ಪರಿಗಣಿಸಲಾಗಿದೆ.

10. ನೈಲ್ ನದಿಯ ವಾರ್ಷಿಕ ಪ್ರವಾಹವನ್ನು ಊಹಿಸಲು ಅಂದಿನ ಈಜಿಪ್ಟಿನವರು 365-ದಿನಗಳ ವರ್ಷದ ಕ್ಯಾಲೆಂಡರ್ ಅನ್ನು ಕಂಡುಹಿಡಿದಿದ್ದರು. ಮತ್ತು ಜಲಗಡಿಯಾರವನ್ನು ಕಂಡು ಹಿಡಿದಿದ್ದರು. 

11. ಈಜಿಪ್ಟ್‌ನ ಸೂಯೆಜ್ ಕಾಲುವೆಯು ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ, ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಯುರೋಪ್ ಮತ್ತು ಏಷ್ಯಾದ ನಡುವಿನ ಸಮುದ್ರ ಪ್ರಯಾಣವನ್ನು ಕಡಿಮೆ ಮಾಡುತ್ತದೆ.

12.  ಪ್ರವಾಹ ನಿಯಂತ್ರಿಸುವುದಕ್ಕಾಗಿ ಕಟ್ಟಿದ ಅಸ್ವಾನ್ ಹೈ ಅಣೆಕಟ್ಟು, 1970 ರಲ್ಲಿ ಪೂರ್ಣಗೊಂಡಿತು. ಈ ಅಣೆಕಟ್ಟಿನಿಂದ ಕೃಷಿ ಉತ್ಪಾದನೆ ಅಧಿಕವಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಈ ಅಣೆಕಟ್ಟು ಕಟ್ಟಿದ ಪರಿಣಾಮ ಹಲವಾರು ಪ್ರಾಚೀನ ಐತಿಹಾಸಿಕ ಸ್ಥಳಗಳು ಜಲಸಮಾಧಿಯಾಗಿವೆ.

13. ಈಜಿಪ್ಟ್ ಒಂದು ಖಂಡಾಂತರ ದೇಶವಾಗಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡದ ಎರಡರಲ್ಲೂ ತನ್ನ ಪ್ರದೇಶವನ್ನು ಹೊಂದಿದೆ. 

14. ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯದ ಹೆಸರು "ಪ್ಯಾಕ್ಸ್"

15. ಪುರಾತನ ನಗರವಾದ ಥೀಬ್ಸ್ (ಈಗ ಲಕ್ಸರ್) ಒಮ್ಮೆ ಈಜಿಪ್ಟ್‌ನ ಧಾರ್ಮಿಕ ರಾಜಧಾನಿಯಾಗಿತ್ತು.

16. ಗ್ರೀಕ್ ದೊರೆ "ದ ಗ್ರೇಟ್ ಅಲೆಗ್ಸಾಂಡರ್" ಈಜಿಪ್ಟ್ ನಲ್ಲಿ ಅಲೆಕ್ಸಾಂಡ್ರಿಯಾ ನಗರವನ್ನು ನಿರ್ಮಿಸಿದ ಮತ್ತು ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿ ಅಲ್ಲಿನ ಆಡಳಿತವನ್ನು ಅವರ ಕೈಗೆ ನೀಡಿದ್ದ.  

17. ಈಜಿಪ್ಟಿನ ಪ್ರಮುಖ ಪಟ್ಟಣಗಳು:-  ಕೈರೋ, ಹುರ್ ಗಡಾ, ಅಲೆಕ್ಸಾಂಡ್ರಿಯಾ, ಶರಮ್ ಅಲ್ ಶೇಖ್ ಮತ್ತು ಲಕ್ಸರ್. ಟಿಲ್ ಅಮರ್ನಾ

18. ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್, ಲಕ್ಸರ್ ಹಾಗೂ ಕಾರ್ನಾಕ್

19. ಪುರಾತನ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಕೀಟಗಳನ್ನು ನಿಯಂತ್ರಿಸಲು ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಆಕಸ್ಮಿಕವಾಗಿಯಾದರೂ ಬೆಕ್ಕನ್ನು ಕೊಲ್ಲುವುದು ಮರಣದಂಡನೆಗೆ ಅರ್ಹವಾದ ಅಪರಾಧವಾಗಿತ್ತು.

20. ಈಜಿಪ್ಟಿನ ಚಿತ್ರಲಿಪಿಗಳು ಪ್ರಪಂಚದ ಅತ್ಯಂತ ಹಳೆಯ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಚಿತ್ರಗಳಲ್ಲಿ ಚಿಹ್ನೆಗಳನ್ನು 3,000 ವರ್ಷಗಳಿಂದ ಬಳಸಲಾಗುತ್ತಿತ್ತು.

21. ಇತಿಹಾಸದಲ್ಲಿ ಮೊಟ್ಟ ಮೊದಲ ಕಾರ್ಮಿಕ ಮುಷ್ಕರವು ಈಜಿಪ್ಟ್‌ನಲ್ಲಿ ಸುಮಾರು 1152 BC ಯಲ್ಲಿ ನಡೆದಿದೆ, ಡೀರ್ ಎಲ್-ಮದೀನಾದಲ್ಲಿನ ರಾಯಲ್ ನೆಕ್ರೋಪೊಲಿಸ್‌ನ ಕುಶಲಕರ್ಮಿಗಳು ವೇತನವನ್ನು ನೀಡದ ಕಾರಣ ತಮ್ಮ ಕೆಲಸದಿಂದ ಹೊರನಡೆದಿದ್ದರಂತೆ.

22. ಪ್ರಾಚೀನ ಈಜಿಪ್ಟಿನವರು ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ರೂಡಿಸಿಕೊಂಡಿದ್ದರು, ಔಷಧಿ ಗಳನ್ನು ಕಂಡುಹಿಡಿದಿದ್ದರು, ಶಸ್ತ್ರಚಿಕಿತ್ಸೆಯನ್ನು ನಡೆಸುತಿದ್ದರು.

23. ಈಜಿಪ್ಟ್‌ನ ಟಾಲೆಮಿಕ್ ಸಾಮ್ರಾಜ್ಯದ ಕೊನೆಯ ಸಕ್ರಿಯ ಆಡಳಿತಗಾರ ಕ್ಲಿಯೋಪಾತ್ರ VII, ವಾಸ್ತವವಾಗಿ ಗ್ರೀಕ್ ಮೂಲದವನು, ಅಲೆಕ್ಸಾಂಡರ್ ದಿ ಗ್ರೇಟ್‌ನ ಜನರಲ್‌ಗಳಲ್ಲಿ ಒಬ್ಬನಾದ ಪ್ಟೋಲೆಮಿ I ವಂಶದವನು.

24. 1798 ರಲ್ಲಿ ಫ್ರೆಂಚ್ ದೊರೆ ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ್ದನಂತೆ

25. 1799 ರಲ್ಲಿ ಪತ್ತೆಯಾದ ರೊಸೆಟ್ಟಾ ಸ್ಟೋನ್, ಈಜಿಪ್ಟಿನ ಚಿತ್ರಲಿಪಿಗಳನ್ನು ಅರ್ಥೈಸುವ ಕೀಲಿಯಾಗಿದೆ. ಇದು ಮೂರು ಲಿಪಿಗಳಲ್ಲಿ ಬರೆಯಲಾದ ಶಾಸನವನ್ನು ಒಳಗೊಂಡಿದೆ: ಚಿತ್ರಲಿಪಿ, ಡೆಮೋಟಿಕ್ ಮತ್ತು ಗ್ರೀಕ್.

26. ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ. ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್. ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ. ಪವಿತ್ರ ಲಿಪಿಯನ್ನು ಪುರೋಹಿತ ವರ್ಗವು ಬಳಸುತ್ತಿತ್ತು 

27. Paper ಎಂಬ ಪದದ ಮೂಲ ಪದ - ಪ್ಯಾಪಿರಸ್

28. ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ

29. ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ

30. ಬೈಬಲ್ ಪದದ ಅರ್ಥ - ಪುಸ್ತಕ

31. ಮಡಿದವರ ಕುರಿತ ಪುಸ್ತಕವು ಶವ ಪೆಟ್ಟಿಗೆಯ ಎಂದು ಕರೆಯಲ್ಪಡುವ ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತಿವೆ 

32. ಪ್ರಾಚೀನ ಈಜಿಪ್ಷಿಯನ್ನರು ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು

33. ಪುರಾತನ ಅಲೆಕ್ಸಾಂಡ್ರಿಯಾದ ಲೈಬ್ರರಿಯು  ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಗ್ರಂಥಾಲಯಗಳಲ್ಲಿ ಒಂದಾಗಿದೆ.

34. ಗೀಜಾದ ಗ್ರೇಟ್ ಸಿಂಹನಾರಿ ಪ್ರತಿಮೆಯು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಹಳೆಯ ಪ್ರತಿಮೆಗಳಲ್ಲಿ ಒಂದಾಗಿದೆ ಆದರೆ ಅದರ ನಿರ್ಮಾಣದ ಮೂಲ ಮತ್ತು ಇತಿಹಾಸವು ನಿಗೂಢವಾಗಿಯೇ ಉಳಿದಿದೆ.

35. ಅತ್ಯಂತ ಎತ್ತರದ  (160 ಅಡಿ) ಮೂರ್ತಿ  "ಸ್ಪಿಂಕ್ಸ್" ಅನ್ನು ರಚಿಸಿದ ಈಜಿಪ್ಟ್ ದೊರೆಯ ಹೆಸರು "ಖಪ್ರೆ" 

36. ಮೂರನೇ ರಾಮೆಸಸ್ ಇತಿಹಾಸ ಪ್ರಸಿದ್ದ ಕಾರ್ನಾಕ್ ದೇವಾಲಯದ ವನ್ನು ಕಟ್ಟಿಸಿದ್ದ 

37. ಪ್ರಾಚೀನ ಈಜಿಪ್ಟಿಯನ್ನರು  ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದಿದ್ದರು. 

38. ಪ್ರಾಚೀನ ಈಜಿಪ್ಟಿಯನ್ನರು ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು 

39. ಪ್ರಾಚೀನ ಈಜಿಪ್ಟಿಯನ್ನರು ನೆರಳಿನ ಗಡಿಯಾರವನ್ನು ರೂಪಿಸಿದ್ದರು

40. ಸೂರ್ಯ ಪ್ರಾಚೀನ ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವನಾಗಿದ್ದ.  ಸೂರ್ಯನನ್ನು " ರಾ"  ಮತ್ತು ಅಟನ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು.  ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ, ಇವರು ವಾಯುದೇವನನ್ನ "ಶು" ಹೆಸರಿನಿಂದ ಕರೆದಿದ್ದಾರೆ. ಇವರ ಕಾಲದ ನ್ಯಾಯ ದೇವರನ್ನ ಒಸಿರಸ್ ಹೆಸರಿನಿಂದ ಕರೆದಿದ್ದಾರೆ. ಸಾವಿನ ದೇವರು ಎಂದು ಹೇಳಲಾಗುತಿತ್ತು. ಭೂ ದೇವಿಯನ್ನ "ಇಸಿಸ್" ಎನ್ನುವ ಹೆಸರಿನಿಂದ ಕರೆಯುತಿದ್ದರು. ಟಗರು" ಅಮನ್ ರಾ ದೇವರ ಪ್ರತೀಕ.  ಪ್ರಾಚೀನ ಈಜಿಪ್ಟಿನವರು 2,000 ಕ್ಕೂ ಹೆಚ್ಚು ದೇವರು ಮತ್ತು ದೇವತೆಗಳನ್ನು ಪೂಜಿಸಿದ್ದರು.

41. ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್,  ಈದೇವಾಲಯದ ಪ್ರಮುಖ ವಾಸ್ತು ಶಿಲ್ಪಿ - ಸೇನ್ ಮುಥ್

42. ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್, ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ

43. ರಾಣಿ ಹಟ್ಸೆಪುತ್ಸಳ ವಿಗ್ರಹ ನ್ಯೂಯಾರ್ಕ್ ಮ್ಯೂಸಿಯಂನಲ್ಲಿದೆ  

44. ಈಜಿಪ್ಟಿನ ಫೇರೋಗಳು ಸಾಮಾನ್ಯವಾಗಿ ಹೆಚ್ಚಿನ ತೂಕವನ್ನು ಹೊಂದಿದ್ದರು, ವಾಸ್ತವವಾಗಿ ಚಿತ್ರಪಟಗಳಲ್ಲಿದ್ದಂತೆ, ಉತ್ತಮವಾದ ಮೈಕಟ್ಟಿನ ಯುವಕರ ಚಿತ್ರಗಳಿಗೆ ವಿರುದ್ಧವಾಗಿ ಅವರ ದೇಹವಿತ್ತು. ಅವರ ಆಹಾರದಲ್ಲಿ ಸಕ್ಕರೆ, ಆಲ್ಕೋಹಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದವು ಎಂದು ಸಂಶೋಧನೆಯಿಂದ ತಿಳಿಯಲಾಗಿದೆ .

45.  ರಾಣಿ ಕ್ಲಿಯೋಪಾತ್ರ ಈಜಿಪ್ಟ್ ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳೆ  

46. 3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31

47. ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್

48. ಈಜಿಪ್ಟ್ ನ ರಾಜರು ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - 

49. ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್

50. ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Courtesy: Internet. 
Phot Credit goes to Original Owner of the Photos

Click below headings