ತಾಲೂಕಿನ ಪ್ರಮುಖ ಸಮಸ್ಯೆಗಳು:
೧. ಭೌಗೋಳಿಕ ಮತ್ತು ಹವಾಮಾನ ವೈಪರೀತ್ಯ (ಬರಪೀಡಿತ ಪ್ರದೇಶ):
* ಮಳೆಯ ಕೊರತೆ: ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಮಳೆನೆರಳಿನ ಪ್ರದೇಶದಲ್ಲಿದೆ. ಇಲ್ಲಿ ವಾರ್ಷಿಕ ಮಳೆ ಪ್ರಮಾಣ ಬಹಳ ಕಡಿಮೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.
* ಬಯಲುಸೀಮೆ ಮತ್ತು ಕಲ್ಲುಬಂಡೆಗಳು: ಇಲ್ಲಿನ ಭೂಪ್ರದೇಶವು ಹೆಚ್ಚಾಗಿ ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾದ ಫಲವತ್ತಾದ ಭೂಮಿಯ ಕೊರತೆಯಿದೆ.
೨. ನೀರಿನ ತೀವ್ರ ಅಭಾವ:
* ಶಾಶ್ವತ ನೀರಾವರಿ ಇಲ್ಲದಿರುವುದು: ತಾಲೂಕಿನಲ್ಲಿ ಯಾವುದೇ ದೊಡ್ಡ ನದಿಗಳು ಹರಿಯುವುದಿಲ್ಲ. ದಶಕಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆಯ ನಿರೀಕ್ಷೆಯಲ್ಲೇ ಜನರಿದ್ದಾರೆ. ಕೃಷಿಗೆ ಸಂಪೂರ್ಣವಾಗಿ ಮಳೆ ಅಥವಾ ಬೋರ್ವೆಲ್ಗಳನ್ನೇ ಆಶ್ರಯಿಸಬೇಕಿದೆ.
* ಅಂತರ್ಜಲ ಕುಸಿತ: ಮಳೆ ಇಲ್ಲದ ಕಾರಣ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ.
* ಫ್ಲೋರೈಡ್ ಯುಕ್ತ ನೀರು: ಲಭ್ಯವಿರುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.
೩. ಕೃಷಿ ಸಂಕಷ್ಟ:
* ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಪ್ರತಿವರ್ಷ ನಷ್ಟ ಅನುಭವಿಸುವಂತಾಗಿದೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಕಡಿಮೆಯಿದೆ.
೪. ನೇಕಾರರ ಸಮಸ್ಯೆಗಳು:
* ಕಚ್ಚಾ ವಸ್ತುಗಳ ಬೆಲೆ ಏರಿಕೆ: ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಜಾಗತಿಕ ಮನ್ನಣೆ ಇದ್ದರೂ, ಇಲ್ಲಿನ ನೇಕಾರರ ಬದುಕು ಹಸನಾಗಿಲ್ಲ. ರೇಷ್ಮೆ ನೂಲಿನ ಬೆಲೆ ಏರಿಕೆ ಮತ್ತು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ನೇಕಾರರಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರಿಂದಾಗಿ ಅನೇಕರು ಕುಲಕಸುಬನ್ನು ಬಿಡುತ್ತಿದ್ದಾರೆ.
೫. ಭೌಗೋಳಿಕ ಪ್ರತ್ಯೇಕತೆ (ಗಡಿ ಭಾಗದ ನಿರ್ಲಕ್ಷ್ಯ):
* ಇದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲೂಕು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಾಗೂ ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದಲೂ ಸಾಕಷ್ಟು ದೂರದಲ್ಲಿರುವುದರಿಂದ, ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
೬. ಗುಳೆ ಹೋಗುವಿಕೆ (ವಲಸೆ):
* ಊರಿನಲ್ಲಿ ಉದ್ಯೋಗವಿಲ್ಲದೆ, ಕೃಷಿ ಮಾಡಲು ನೀರಿಲ್ಲದೆ, ಜನರು ಹೊಟ್ಟೆಪಾಡಿಗಾಗಿ ಬೆಂಗಳೂರು ಅಥವಾ ಇತರ ದೊಡ್ಡ ನಗರಗಳಿಗೆ ಕೂಲಿ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಯುವಜನತೆ ಊರು ಬಿಡುತ್ತಿರುವುದರಿಂದ ಸ್ಥಳೀಯ ಅಭಿವೃದ್ಧಿ ಕುಂಠಿತವಾಗಿದೆ.
೭. ಕೈಗಾರಿಕೆಗಳ ಕೊರತೆ:
* ಕೃಷಿ ಆಧಾರಿತ ಅಥವಾ ಜವಳಿ ಆಧಾರಿತ ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.
ಮೊಳಕಾಲ್ಮೂರು ಪಟ್ಟಣಕ್ಕೆ ರೈಲು ಸಂಪರ್ಕವಿದ್ದರೂ ಇದು ತಾಲೂಕಿನ ಪ್ರಮುಖಭಾಗವಾದ ರಾಂಪುರವನ್ನು ಸಂಪರ್ಕಿಸುವುದಿಲ್ಲ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುವ ರಾಂಪುರ ಪಟ್ಟಣವು ರೈಲ್ವೆ ಸೌಲಭ್ಯದಿಂದ ವಂಚಿತವಾಗಿದೆ. ರಾಂಪುರವು ಅತಿ ವೇಗವಾಗಿ ಬೆಳೆಯುತ್ತಿರುವ ಊರಾಗಿದ್ದು ಈ ಭಾಗದಲ್ಲಿ ಪ್ರಮುಖ ವಾಣಿಜ್ಯಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಇಂದಿಗೂ ಸರ್ಕಾರಿ ಪ್ರೌಡಶಾಲೆ, ಸರ್ಕಾರಿ ಪದವಿ ಕಾಲೇಜು ಇಲ್ಲ.
ಮೈಸೂರು ರಾಜ್ಯವನ್ನು 'ಮಾದರಿ ಸಂಸ್ಥಾನ'ವನ್ನಾಗಿ ರೂಪಿಸಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರ ಆಳ್ವಿಕೆಯಲ್ಲಿ ಕೇವಲ ಬೃಹತ್ ಅಣೆಕಟ್ಟುಗಳು ಅಥವಾ ಶಿಕ್ಷಣ ಸಂಸ್ಥೆಗಳು ಮಾತ್ರ ನಿರ್ಮಾಣವಾಗಲಿಲ್ಲ; ಬದಲಾಗಿ, ಹಳ್ಳಿಗಳ ಮೂಲೆಯಲ್ಲಿ ನಶಿಸಿಹೋಗುತ್ತಿದ್ದ ಸಾಂಪ್ರದಾಯಿಕ ಕಲೆಗಳಿಗೂ ಹೊಸ ಜೀವ ಕಳೆ ನೀಡಲಾಯಿತು. ಅದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಮೊಳಕಾಲ್ಮೂರು ಕೈಮಗ್ಗ ಉದ್ಯಮ ಪ್ರಮುಖವಾದುದು. ಸಾಂಪ್ರದಾಯಿಕ ನೇಕಾರರು ತಮ್ಮ ಹಳೆಯ ಶೈಲಿಯ ನೇಯ್ಗೆಯನ್ನು ಮುಂದುವರಿಸಲು ಮಹಾರಾಜರು ಬೆನ್ನೆಲುಬಾಗಿ ನಿಂತರು. ಅವರಿಗೆ ಬೇಕಾದ ಕಚ್ಚಾ ಸಾಮಗ್ರಿ ಮತ್ತು ಮಾರುಕಟ್ಟೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ, ಮೊಳಕಾಲ್ಮೂರು ರೇಷ್ಮೆ ಸೀರೆಗಳು ದೇಶಾದ್ಯಂತ ಗುರುತಿಸಿಕೊಳ್ಳುವಂತೆ ಮಾಡಿದರು. ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿ. ಅವರು ಹಾಕಿಕೊಟ್ಟ ಈ ಬಲಿಷ್ಠ ಅಡಿಪಾಯದಿಂದಾಗಿಯೇ ಇಂದು ಮೊಳಕಾಲ್ಮೂರು ಸೀರೆಗಳು ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿವೆ.
ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಯಾಗಿರು ವುದರಿಂದ, ನೇಕಾರರನ್ನು ಪ್ರೋತ್ಸಾಹಿಸಲು 'ಜವಳಿ ಪಾರ್ಕ್' ಅಥವಾ ಮಿನಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಯ ಪ್ರಸ್ತಾಪಗಳಿವೆ. ನೇಕಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಮಾರುಕಟ್ಟೆ ಸೌಲಭ್ಯ ದೊರೆಯಬೇಕು ಹಾಗೂ ಗುಳೆ ಹೋಗುವುದನ್ನು ತಡೆಯಲು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕು.
ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಮೊಳಕಾಲ್ಮೂರು ಅಭಿವೃದ್ಧಿ ಹೊಂದಬೇಕಾದರೆ ಪ್ರಮುಖವಾಗಿ ಧೀರ್ಘಕಾಲಿಕ ನೀರಾವರಿ ಯೋಜನೆ ಜಾರಿಯಾಗಬೇಕಿದೆ, ಮೊಳಕಾಲ್ಮೂರಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಸುಧಾರಿಸಿ, ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಲಿದೆ.
ತುಂಗಭದ್ರಾ ನದಿ ಹಿನ್ನೀರಿನಿಂದ ಅಥವಾ ಶಾಶ್ವತ ಮೂಲಗಳಿಂದ ತಾಲೂಕಿನ ಫ್ಲೋರೈಡ್ ಪೀಡಿತ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪೈಪ್ಲೈನ್ ಅಳವಡಿಕೆ ಮತ್ತು ಶುದ್ಧ ನೀರಿನ ಘಟಕಗಳ ಸ್ಥಾಪನೆ ಪ್ರಗತಿಯಲ್ಲಿದೆ. ಶುದ್ದ ಕುಡಿಯುವ ನೀರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ತಲುಪಬೇಕಿದೆ. ಆದರೆ ಸದ್ಯದ ಯೋಜನೆ, ಕೆಲ ಊರುಗಳಿಗೆ ಮಾತ್ರ ತಲುಪುವಂತಿದೆ. ಜನಪ್ರತಿನಿಧಿಗಳು ಇದರ ಕುರಿತು ಯೋಚಿಸುತ್ತಿಲ್ಲ.
ಲೇಖಕರು:
ಪಿ.ಎಸ್.ರಂಗನಾಥ
ರಾಂಪುರ





.jpeg)
.jpeg)


.jpeg)














