ನಮ್ಮ ದೇಶದ ಒಂದಲ್ಲ ಒಂದು ಕಡೆ ಪುರಾತನ ಕಾಲದ ವಸ್ತುಗಳು, ಆಭರಣಗಳು, ವಿಗ್ರಹಗಳು ಇತ್ಯಾದಿಗಳು ದೊರೆಯುತ್ತಿರುತ್ತವೆ, ಕಳೆದ ಮೂರು ದಶಕಗಳ ಹಿಂದೆ ತಲಕಾಡಿನಲ್ಲಿ ಮರಳಿನಲ್ಲಿ ಹೂತು ಹೋಗಿದ್ದ ದೇವಾಲಯವೂ ಪತ್ತೆಯಾಗಿತ್ತು. ವಿಜಯನಗರದ ಹಂಪೆಯಲ್ಲೂ ಇಂದಿಗೂ ಸಹ ಒಂದಲ್ಲ ಒಂದು ಅಚ್ಚರಿಯ ಅಂಶಗಳು ದೊರಕುತ್ತಿವೆ. ಹಂಪೆ, ಮಸ್ಕಿ, ಬ್ರಹ್ಮಗಿರಿ, ಹೀಗೆ ಹಲವಾರು ಕಡೆ ಉತ್ಖನನ ನಡೆಸಿದಾಗ ಇನ್ನೂ ಅಚ್ಚರಿಯ ಅಂಶಗಳು ದೊರಕಿವೆ. ೧೦೦೦೦ ವರ್ಷಗಳ ಹಿಂದಿನ ಜನ ವಸತಿ ಪ್ರದೇಶ, ೪೦೦೦ ವರ್ಷಗಳ ಹಿಂದಿನ ಮನುಷ್ಯನ ಅಸ್ಥಿಪಂಜರ, ಹೀಗೆ ಕೆಲವೊಮ್ಮೆ ಅಚ್ಚರಿಯ ಅಂಶಗಳು ಪತ್ತೆಯಾಗುತ್ತಿರುತ್ತವೆ.
ಇತ್ತೀಚೆಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯೊಂದನ್ನು ಕಟ್ಟಲು ಅಡಿಪಾಯ ತೆಗೆಯುವಾಗ ಬಂಗಾರದ ಒಡವೆಗಳು ದೊರೆತಿದ್ದವು, ಹಿಂದೆಯೂ ಕೆಲ ರೈತರಿಗೆ ಹೊಲ ಊಳೂವಾಗ ನಿಧಿ ಸಿಕ್ಕಿರುವ ಘಟನೆಗಳು ನಡೆದಿವೆ. ಚರಿತ್ರೆಯ ಹಲವಾರು ಸಂಗತಿಗಳು ಭೂಗರ್ಭದಲ್ಲಿ ಹೂತು ಹೊಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿ.
1963ರಲ್ಲಿ ಟರ್ಕಿಯಲ್ಲಿ ನಡೆದ ಒಂದು ಸಣ್ಣ ದುರಸ್ತಿ ಕಾರ್ಯವು ಇಡೀ ಮಾನವ ಇತಿಹಾಸದ ಒಂದು ಮರೆಯಾದ ಪುಟವನ್ನೇ ತೆರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಒಂದು ಅಚ್ಚರಿಯ ಘಟನೆಯಿಂದ ಭೂಗರ್ಭದಲ್ಲಿ ಹೂತು ಹೋಗಿದ್ದ ಡೆರಿಂಕ್ಯೂ ನಗರದ ಕುರಿತಾಗಿ ಮಾಹಿತಿ ದೊರಕಿತು. ಈ ಕುರಿತಾದ ಆಸಕ್ತಿದಾಯಕ ಲೇಖನ ಇಲ್ಲಿದೆ.
ಟರ್ಕಿಯ ಕಪ್ಪಡೋಕಿಯಾ ಎಂಬಲ್ಲಿ. ಒಬ್ಬ ಸಾಮಾನ್ಯ ರೈತನಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿತ್ತು. ಮನೆಯ ನೆಲಮಹಡಿಯ ಒಂದು ಭಾಗದಲ್ಲಿ ಕೋಳಿಗಳನ್ನು ಸಾಕುತಿದ್ದ. ಒಂದು ಸಾರಿ ಕೋಳಿಗೆ ಕಾಳುಗಳನ್ನು ಹಾಕುವಾಗ, ಕೋಳಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂತು, ಇದೇನು ಒಂದು ಕೋಳಿ ಕಡಿಮೆಯಾಗಿದೆಯಲ್ಲ ಎಂದು ಯೋಚಿಸಿದ. ಹೀಗೆ ಹಲವಾರು ಬಾರಿ ಕೋಳಿಗಳು ಇದ್ದಕಿದ್ದಂತೆ ಮಾಯವಾಗುತಿದ್ದವು. ವಿಚಿತ್ರವೇನೆಂದರೆ ಅವು ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ, ಆದರೂ ಒಳಗೆಲ್ಲೂ ಕಾಣಿಸುತ್ತಿರಲಿಲ್ಲ. ಇದೆಂತ ಮಾಯಾಜಾಲ ಎಂದು ಆಲೋಚಿಸಿ ಸುಮ್ಮನಾಗಿಬಿಟ್ಟಿದ್ದ.
ಮನೆ ತುಂಬಾ ಹಳೆಯದಾಗಿತ್ತು, ಅಲ್ಲಲ್ಲಿ ಗೋಡೆಯ ಮಣ್ಣು ಕೆಳಗೆ ಬೀಳುತಿತ್ತು, ಹಾಗೂ ಗೋಡೆಯಲ್ಲಿ ಕೆಲಕಡೆ ಸಂದುಗಳಿದ್ದವು. ಅವೆಲ್ಲವನ್ನು ಸರಿಪಡಿಸೋಣ ಎಂದು ಕೆಲಕಾಲದ ನಂತರ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದೊಂದು ಭಾಗವನ್ನು ಸರಿಪಡಿಸುತ್ತ ಬರುವಾಗ, ಒಂದು ರಂಧ್ರ ಸ್ವಲ್ಪ ದೊಡ್ಡದಾಗಿತ್ತು. ಅದಕ್ಕೆ ಕೆಸರಿನ ಬುರುದೆಯನ್ನು ಮೆತ್ತಲು ಹೋದಾಗ ಅಗತ್ಯಕ್ಕಿಂತ ಹೆಚ್ಚಿನ ಮಣ್ಣು ಬೇಕಾಗುತಿತ್ತು. ಇದೇನಿಂದು ಎಂದು ಆಶ್ಚರ್ಯದಿಂದ, ಆ ಭಾಗವನ್ನು ಒಡೆಯಲು ಪ್ರಾರಂಭಿಸುತ್ತಾನೆ. ಆ ಕಿಂಡಿಯನ್ನು ಸ್ವಲ್ಪ ದೊಡ್ಡದಾಗಿ ಮಾಡುತ್ತಾನೆ. ಕೈ ಹಾಕಿ ನೊಡಿದರೆ ಆ ಕಡೆ ಟೊಳ್ಳು. ನಂತರ ಒಂದು ಉದ್ದನೆಯ ಕೋಲನ್ನು ಹಾಕುತ್ತಾನೆ. ಆ ಕೋಲು ಸಂಪೂರ್ಣವಾಗಿ ಒಳ ಹೋಗುತ್ತದೆ. ಆ ಕೋಲನ್ನು ತಿರುಗಿಸಿ ನೋಡಿದರೆ, ಒಳಗಡೆ ಒಂದು ಖಾಲಿ ಕೋಣೆ ಎಂಬಂತೆ ಕಾಣುತ್ತದೆ. ಆಗ ಆ ರಂಧ್ರವನ್ನು ದೊಡ್ಡದಾಗಿ ತೆರೆದಾದ ಮೇಲೆ ಆ ಬದಿಯಲ್ಲಿ ನೋಡಿದರೆ ಒಂದು ಸುರಂಗ ಮಾರ್ಗ ಕಾಣಿಸುತ್ತದೆ. ಅವನಿಗೆ ಇನ್ನೂ ಆಶ್ಚರ್ಯವಾಯಿತು. ಮನೆಯ ಒಳಗಡೆ ಮತ್ತೊಂದು ಮಹಡಿ ಅಥವ ಕೋಣೆಗಳಿರುವುದು ಮನೆಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಒಳ ಹೊಕ್ಕು ನೋಡಿದರೆ, ಅವನ ಕಣ್ಣನ್ನ ಅವನೇ ನಂಬಲಾಗಲಿಲ್ಲ. ಈ ಜಾಗದಲ್ಲಿ ಇಂತಹ ದೊಡ್ಡ ಪ್ರದೇಶವನ್ನು ನೋಡುತಿದ್ದಂತೆ ಅವನಿಗೆ ಮಹದಾಶ್ಚರ್ಯವಾಗಿತ್ತು, ಅದು ಒಂದು ಕೋಣೆ, ಸುರಂಗ, ಅಥವ ಒಂದು ಮಹಡಿಯಾಗಿರಲಿಲ್ಲ, ಹತ್ತಾರು ಕೋಣೆಗಳು, ಸುರಂಗ ದಾರಿಗಳು ಕಂಡು ಬಂದವು. ಆ ಮನೆ ಹಲವಾರು ಅಂತಸ್ತಿನ ಒಂದು ಅರಮನೆಯಂತೆ ಭಾಸವಾಯಿತು.
ಸುದ್ದಿ ಜನರಿಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಹೋಯಿತು. ಆ ರೈತ ಕೊನೆಗೆ ವಿಷಯವನ್ನು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಮುಟ್ಟಿಸುತ್ತಾನೆ. ಅವರು ಟರ್ಕಿಶ್ ಪುರಾತತ್ವ ಮತ್ತು ಪ್ರಾಚೀನ ವಸ್ತುಗಳ ಇಲಾಖೆಯ ಅಧಿಕಾರಿಗಳ ತಂಡ ಸಮೇತ ಅಲ್ಲಿಗೆ ಆಗಮಿಸಿ ಎಲ್ಲವನ್ನು ಪರಿಶೀಲಿಸುತ್ತಾರೆ. ಅವರಿಗೂ ಸಹ ಆಶ್ಚರ್ಯವಾಗುತ್ತದೆ. ಇದು ಭೂಮಿಯ ಆಳದಲ್ಲಿರುವ ಒಂದು ಪಟ್ಟಣ ಪ್ರದೇಶ ಎಂದು ಅಂದಾಜಿಸುತ್ತಾರೆ. ಸರ್ಕಾರದ ಅನುಮತಿಯನ್ನು ಪಡೆದು ಆ ಸ್ಥಳವನ್ನು ತಮ್ಮ ಸುಪರ್ದಿಗೆ ಪಡೆದು ಪ್ರತಿಯೊಂದನ್ನೂ ಪರಿಶೀಲಿಸುತ್ತಾರೆ.
*ಭೂಗರ್ಭದ ಎಂಜಿನಿಯರಿಂಗ್ ಅದ್ಭುತ:*
ತಜ್ಞರು ಈ ಜಾಗದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಿದರು. ಅಲ್ಲಿ ದೊರೆತ ವಸ್ತುಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದವು. ಅಲ್ಲಿ ಸಾವಿರಾರು ಜನ ವಾಸ ಮಾಡಿರುವ ಕುರುಹುಗಳು ಪತ್ತೆಯಾದವು. ಒಳಗಡೆ ಹೋದಂತೆಲ್ಲ, ಭೂಗರ್ಭದಲ್ಲಿ ಅಡಗಿ ಹೋದ ನಗರವೇ ಅವರ ಮುಂದೆ ನಿಂತಿತ್ತು. ಇತಿಹಾಸದ ಗರ್ಭದಲ್ಲಿ ಅಡಗಿದ ಮಹಾನಗರ. ಡೆರಿಂಕುಯು ಕೇವಲ ಒಂದು ಗುಹೆಯಲ್ಲ; ಇದು ಎಂಜಿನಿಯರಿಂಗ್ ಲೋಕಕ್ಕೆ ಇಂದಿಗೂ ಸವಾಲಾಗಿರುವ ಒಂದು ವ್ಯವಸ್ಥಿತ ನಗರ ಅದಾಗಿತ್ತು.
ಭೂಮಿಯ ಮೇಲ್ಮೈಯಿಂದ ಸುಮಾರು 280 ಅಡಿ ಆಳದವರೆಗೆ ಇದ್ದ ಈ ಪ್ರದೇಶದಲ್ಲಿ ಒಟ್ಟು 18 ಮಹಡಿಗಳ ಬೃಹದಾಕಾರ ನಿರ್ಮಾಣ ಆ ಪ್ರದೇಶದಲ್ಲಿತ್ತು, ವಾಯು ಸಂಚಾರಕ್ಕಾಗಿ, ಸಾವಿರಾರು ಕಡೆ ಸಣ್ಣ ಗಾಳಿ ರಂಧ್ರಗಳನ್ನು ನಿರ್ಮಿಸಲಾಗಿತ್ತು. ವಾಸದ ಕೋಣೆಗಳು, ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು. ಸುಮಾರು 20,000 ಜನರು ಆರಾಮವಾಗಿ ವಾಸಿಸಬಹುದಾದ ಬೃಹತ್ ನಗರವಾಗಿತ್ತು. ಇಲ್ಲಿ ಕೇವಲ ವಾಸದ ಕೋಣೆಗಳಿರಲಿಲ್ಲ; ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು!
*18 ಹಂತಗಳ ರಚನೆ*: ಭೂಮಿಯ ಮೇಲ್ಮೈಯಿಂದ ಸುಮಾರು **280 ಅಡಿ** ಆಳದವರೆಗೆ ಹರಡಿರುವ ಈ ನಗರವು ಸುಮಾರು 18 ಅಂತಸ್ತುಗಳನ್ನು ಹೊಂದಿದ್ದು, ಪ್ರತಿಯೊಂದು ಅಂತಸ್ತೂ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆಯಾಗುತ್ತಿತ್ತು:
* ಮೇಲಿನ ಅಂತಸ್ತುಗಳು: ಇಲ್ಲಿ ಮುಖ್ಯವಾಗಿ ವಾಸದ ಮನೆಗಳು ಮತ್ತು ಪಶುಗಳ ಕೊಟ್ಟಿಗೆಗಳಿದ್ದವು. ಇದರಿಂದ ಪ್ರಾಣಿಗಳ ವಾಸನೆ ಸುಲಭವಾಗಿ ಹೊರಹೋಗುತ್ತಿತ್ತು.
* ಮಧ್ಯದ ಅಂತಸ್ತುಗಳು: ಇಲ್ಲಿ ಅಡುಗೆಮನೆಗಳು, ಧಾನ್ಯದ ಉಗ್ರಾಣಗಳು, ಮತ್ತು ದ್ರಾಕ್ಷಾರಸ (Wine) ತಯಾರಿಸುವ ಘಟಕಗಳಿದ್ದವು.
* ಕೆಳಗಿನ ಅಂತಸ್ತುಗಳು: ಇಲ್ಲಿ ಚರ್ಚ್ಗಳು, ಧಾರ್ಮಿಕ ಶಾಲೆಗಳು ಮತ್ತು ಸಭೆ ನಡೆಸುವ ಸ್ಥಳಗಳಿದ್ದವು. ಇವು ಅತ್ಯಂತ ಸುರಕ್ಷಿತ ಪ್ರದೇಶಗಳಾಗಿದ್ದವು.
* ವಾಯು ಸಂಚಾರ: ಭೂಮಿಯ ಆಳಕ್ಕಿಳಿದಂತೆ, ಗಾಳಿಯ ಸಂಚಾರ ಕಡಿಮೆ ಯಿರುತ್ತದೆ, ಆಮ್ಲಜನಕ ಸಮಸ್ಯೆ ಕಾಡುವುದು ಸಹಜ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದರು, ಭೂಮಿಯ 280 ಅಡಿ ಆಳದಲ್ಲಿ ಸಾವಿರಾರು ಜನರಿಗೆ ಉಸಿರಾಡಲು ಗಾಳಿ ಮತ್ತು ಕುಡಿಯಲು ನೀರು ಒದಗಿಸುವುದು ಸುಲಭದ ಮಾತಲ್ಲ. ಎಂಟನೇ ಹಂತದವರೆಗೆ ತಾಜಾ ಗಾಳಿ ಒಳಗೆ ಬರಲು ಸುಮಾರು 15,000 ಕ್ಕೂ ಹೆಚ್ಚು ಸಣ್ಣ ಕಿಂಡಿಗಳು (ಸುಮಾರು 10 ಸೆಂ.ಮೀ ಅಗಲ) ಕೊರೆದಿದ್ದರು.
* ನೀರಿನ ವ್ಯವಸ್ಥೆ: ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ, ನಗರದ ಒಳಗೇ ಗುಪ್ತ ಬಾವಿಗಳಿನ್ನೂ ಸಹ ಅಗೆದಿದ್ದರು. ಹೊರಗಿನಿಂದ ಒಳಗೆ ನೀರು ಬರಲು ವ್ಯವಸ್ಥೆ ಇದ್ದರೂ ಸಹಿತ, ಮುಂಜಾಗ್ರತೆಗಾಗಿ ಈ ಗುಪ್ತ ಬಾವಿಗಳನ್ನು ಕೊರೆದಿದ್ದರು. ಒಂದುವೇಳೆ, ಶತ್ರುಗಳು ಹೊರಗಿನ ನೀರಿನ ಮೂಲಕ್ಕೆ ವಿಷ ಬೆರೆಸಿದರೂ, ನಗರದ ಒಳಗಿದ್ದವರಿಗೆ ನೀರಿನ ತೊಂದರೆಯಾಗುತ್ತಿರಲಿಲ್ಲ.
*ಕಲ್ಲಿನಲ್ಲಿ ಅರಳಿದ ನಗರ: ಭೂವಿಜ್ಞಾನದ ಕೊಡುಗೆ:*
ಮೇಲೆ ವಿವರಿಸಿದ ಎಲ್ಲಾ ಸೌಲಭ್ಯಗಳನ್ನು ಅದೂ ಭೂಗರ್ಭದಲ್ಲಿ ಹೇಗೆ ನಿರ್ಮಿಸಲಾಯಿತು ಎಂದು ವಿಜ್ನಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಾರೆ. ಮೊದಲಿಗೆ ಆ ಪ್ರದೇಶದ ಪರಿಸರ, ಅಲ್ಲಿ ಹಿಂದೆ ನಡೆದಿದ್ದ ನೈಸರ್ಗಿಕ ಪ್ರಕ್ರಿಯೆಗಳು ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿದಾಗ, ಮೊದಲ ಕಂಡುಬಂದಿದ್ದು ಅಲ್ಲಿನ ಭೂರಚನೆ. ಕಪ್ಪಡೋಕಿಯಾ ಪ್ರದೇಶದ ವಿಶೇಷತೆಯೆಂದರೆ ಅಲ್ಲಿನ ಜ್ವಾಲಾಮುಖಿ ಭಸ್ಮ (Volcanic Tuff). ಈ ಜ್ವಾಲಾಮುಖಿಯ ಬೂದಿ ಕಾಲಕ್ರಮೇಣ ಕಲ್ಲಿನಂತಾಗಿವೆ. ಆರಂಭದಲ್ಲಿ ಈ ಕಲ್ಲುಗಳು ಮೃದುವಾಗಿದ್ದು, ಗಾಳಿಗೆ ಒಡ್ಡಿಕೊಂಡ ನಂತರ ಇವು ಗಟ್ಟಿಯಾಗುತ್ತವೆ. ಈ ವಿಶಿಷ್ಟ ಭೂಗುಣದಿಂದಾಗಿಯೇ ಪ್ರಾಚೀನ ಜನರಿಗೆ ಇಂತಹ ಬೃಹತ್ ಭೂಗರ್ಭ ನಗರವನ್ನು ನಿರ್ಮಿಸಲು ಸಾಧ್ಯವಾಯಿತು. ಚೂಪಾದ ಕಲ್ಲು ಅಥವ ಹುಳಿ( ಚಿಸೆಲ್) ಮತ್ತು ಸುತ್ತಿಗೆ ಇದ್ದರೆ ಸಾಕು, ಸಲೀಸಾಗಿ ಈ ಕಲ್ಲುಗಳನ್ನು ಕತ್ತರಿಸಬಹುದು.
*ರಕ್ಷಣೆ ಮತ್ತು ಯುದ್ಧತಂತ್ರ*:
ಅಂದಿನ ಕಾಲದಲ್ಲಿ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಕೋಟೆ ಕೊತ್ತಲುಗಳನ್ನು ನಿರ್ಮಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದೇ ತಂತ್ರವನ್ನು ಇಲ್ಲಿ ನೆಲೆಸಿದ್ದ ಅಂದಿನ ಕಾಲದ ಜನರು ತಮ್ಮ ರಕ್ಷಣೆಗಾಗಿ ಪ್ರಮುಖವಾಗಿ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಭೂಮಿಯ ಅಡಿಯಲ್ಲಿ ಇಡೀ ಜಗತ್ತನ್ನೇ ಸೃಷ್ಟಿಸಿಕೊಂಡಿದ್ದರೆಂದು ಸಂಶೋಧನೆ ಮೂಲಕ ಗೊತ್ತಾಯಿತು. ಇಲ್ಲಿನ ಭೌಗೋಳಿಕ ಪರಿಸರ ಅಥವಾ ಭೂರಚನೆ ಅವರಿಗೆ ಇಂತಹ ರಕ್ಷಣಾತ್ಮಕ ನಗರವನ್ನು ಕಟ್ಟಿಕೊಳ್ಳಲು ನೆರವು ನೀಡಿದೆ ಎನ್ನಬಹುದು. ಈ ನಗರದ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ಭದ್ರತೆ.
ಕಲ್ಲಿನ ಬಾಗಿಲುಗಳು:
ಇಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತೆಂದರೆ, ಒಳಗಿನಿಂದ ಮಾತ್ರ ತೆರೆಯಬಹುದಾದ ಬೃಹತ್ ಗುಂಡಿನಾಕಾರದ ಕಲ್ಲುಗಳನ್ನು ದಾರಿಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪ್ರತಿಯೊಂದು ಅಂತಸ್ತನ್ನು ಸುಮಾರು 500 ಕೆ.ಜಿ. ತೂಕದ ಬೃಹತ್ ಚಕ್ರಾಕಾರದ ಕಲ್ಲಿನ ಬಾಗಿಲುಗಳಿಂದ ಮುಚ್ಚಬಹುದಾಗಿತ್ತು.
ಕಿರಿದಾದ ಸುರಂಗಗಳು:
ಸುರಂಗಗಳು ಬಹಳ ಕಿರಿದಾಗಿದ್ದವು, ಇದರಿಂದ ಶತ್ರು ಸೈನಿಕರು ಗುಂಪಾಗಿ ಒಳಬರಲು ಸಾಧ್ಯವಿರಲಿಲ್ಲ; ಒಬ್ಬೊಬ್ಬರಾಗಿ ಬರಬೇಕಿತ್ತು, ಇದರಿಂದ ಕಾವಲು ಕಾಯುತಿದ್ದ ರಕ್ಷಕರಿಗೆ ಆಕ್ರಮಣಕಾರರನ್ನು ಎದುರಿಸುವುದು ಸುಲಭವಾಗುತ್ತಿತ್ತು. ಓಬವ್ವನ ಕಿಂಡಿಯಲ್ಲಿ ಒಬ್ಬೊಬ್ಬರೆ ಒಳ ಬರುವಂತಹ ರೀತಿಯಲ್ಲಿ ಅತಿ ಕಿರಿದಾದ ಮಾರ್ಗಗಳಿದ್ದವು, ಆದರೆ, ಬಗ್ಗಿಕೊಂಡು ನುಸುಳಿ ಬರುವಂತೆ ಅಲ್ಲ.
ಈ ನಗರವನ್ನೆನೂ ಕೆಲವೇ ವರ್ಷಗಳಲ್ಲಿ ನಿರ್ಮಿಸಲಾಗಿರಲಿಲ್ಲ. ನೂರಾರು ವರ್ಷಗಳ ಕಾಲ ಹಂತಹಂತವಾಗಿ ಈ ನಗರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ಕ್ರಿ.ಪೂ. 2000ರ ಕಾಲಕ್ಕೆ ಸೇರಿದ ಹಿಟ್ಟೈಟ್ ಜನಾಂಗದವರು ಈ ಕಟ್ಟಡದ ಕೆಲಸವನ್ನು ಶುರು ಮಾಡಿದ್ದರು. ತದನಂತರ ಫ್ರಿಜಿಯನ್ ಸಮುದಾಯದವರು (ಕ್ರಿ. ಪೂರ್ವ 1600 -1200)ಮುಂದುವರಿಸಿಕೊಂಡು ಹೋಗಿದ್ದಾರೆ. ತದನಂತರ ಹಲವಾರು ನಾಗರೀಕತೆಯ ಜನಾಂಗದವರು ಇದನ್ನು ಅಭಿವೃದ್ದಿ ಪಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಸಾವಿರಾರು ವರ್ಷಗಳ ಹಿಂದೆ ಹಿಟ್ಟೈಟ್ಗಳು ಮತ್ತು ಫ್ರಿಜಿಯನ್ ಸಮುದಾಯಗಳು (Hittites and Phrygians) ಈ ನಗರವನ್ನು ನಿರ್ಮಿಸಿರಬಹುದು ಎನ್ನಲಾಗಿದೆ.
ರೋಮನ್ ಆಳ್ವಿಕೆಯ ಆರಂಭಿಕ ಶತಮಾನಗಳಲ್ಲಿ (2 ಮತ್ತು 3ನೇ ಶತಮಾನ), ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಕಾನೂನುಬಾಹಿರ ಅಥವಾ ಅನುಮಾನದಿಂದ ನೋಡಲಾಗುತ್ತಿತ್ತು. ಟರ್ಕಿ ದೇಶದ ಕಪ್ಪಡೋಸಿಯಾ ರೋಮನ್ ಪ್ರಾಂತ್ಯವಾಗಿದ್ದರಿಂದ, ಸ್ಥಳೀಯ ಮತಾಂತರಿಗಳು ರೋಮನ್ ಸಾಮ್ರಾಜ್ಯದ ಕಿರುಕುಳದಿಂದ ತಪ್ಪಿಸಿಕೊಳ್ಳಲು ಡೆರಿಂಕ್ಯೂ ದಂತಹ ಭೂಗತ ನಗರಗಳಲ್ಲಿ ಬಚ್ಚಿಟ್ಟುಕೊಂಡು ಜೀವಿಸಲು ಪ್ರಾರಂಭಿಸಿದರು, ಇದಕ್ಕೆ ಪುರಾವೆಯೆಂಬಂತೆ, ಪುರಾತತ್ತ್ವಜ್ಞರು ಸಂಶೋಧನೆ ನಡೆಸುವಾಗ ಸುರಂಗಗಳ ಒಳಗೆ ರೋಮನ್ ಯುಗದ ನಾಣ್ಯಗಳು ಮತ್ತು ಎಣ್ಣೆ ದೀಪಗಳು ದೊರಕಿವೆ, ಇದು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿದ್ದಾಗ ಇಲ್ಲಿನ ಜನರು ಈ ಜಾಗದಲ್ಲಿ ವಾಸಿಸುತ್ತಿದ್ದರು ಅಥವಾ ಅಡಗಿಕೊಂಡಿದ್ದರು. ಇದೇ ಸಮಯದಲ್ಲಿ ಇಲ್ಲಿ ವಾಸವಿದ್ದ ಜನರು ರಕ್ಷಣಾತ್ಮಕ ವ್ಯವಸ್ಥೆಯನ್ನು ಇನ್ನೂ ಕಠಿಣಗೊಳಿಸಿದರು. ನಂತರ, ಅರಬ್-ಬೈಜಾಂಟೈನ್ ಯುದ್ಧಗಳ(ಕ್ರಿ.ಶ. 780–1180) ಸಮಯದಲ್ಲಿ ಅರಬ್ ದಾಳಿಗಳಿಂದ ಇಲ್ಲಿ ವಾಸಿಸುತಿದ್ದ ನಿವಾಸಿಗಳನ್ನು ರಕ್ಷಿಸಲು ಇದೇ ಸುರಂಗಗಳನ್ನು ಇನ್ನಷ್ಟು ವಿಸ್ತರಿಸಲಾಯಿತು. ಅದೇ ಸಮಯದಲ್ಲಿ ಸುಮಾರು 20,000 ಜನಸಂಖ್ಯೆಯ ಗರಿಷ್ಠ ಜನಸಂಖ್ಯೆಯನ್ನು ತಲುಪಿತು ಎಂದು ಅಂದಾಜಿಸಲಾಗಿದೆ.
*ಪ್ರಾಚೀನ ಭಾರತೀಯ ನಂಟು ಮತ್ತು ಇತಿಹಾಸ*
ಈ ನಗರದ ಮೇಲಿನ ಹಂತಗಳಲ್ಲಿ ಕ್ರಿ.ಪೂ. 2000ರ ಕಾಲದ **ಹಿಟ್ಟೈಟ್ (Hittites)** ಸಂಸ್ಕೃತಿಯ ಕುರುಹುಗಳು ಸಿಕ್ಕಿವೆ. ಇತಿಹಾಸಕಾರರ ಪ್ರಕಾರ, ಈ ಹಿಟ್ಟೈಟ್ಗಳು ಇಂಡೋ-ಯೂರೋಪಿಯನ್ ಮೂಲದವರಾಗಿದ್ದು, ಹಿಟ್ಟೈಟ್ ಸಮುದಾಯ ಮತ್ತು ಪ್ರಾಚೀನ ಭಾರತದ ನಡುವೆ ಆಳವಾದ ಸಂಪರ್ಕವಿದೆ, ಏಕೆಂದರೆ ಅವರು ಋಗ್ವೇದದಂತಹ ಪವಿತ್ರ ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಆರ್ಯರೊಂದಿಗೆ ಸಂಬಂಧಿಸಿದ ವಿಶಾಲ ಇಂಡೋ-ಯೂರೋಪಿಯನ್ ವಲಸೆಯ ಭಾಗವಾಗಿದ್ದರು. ಇವರು ಸಹ ಭಾರತೀಯರಂತೆ ಬಹುದೇವತ ಆರಾಧಕರಾಗಿದ್ದರು. ಕಳೆದ ಶತಮಾನದಲ್ಲಿ ನಡೆದ ಸಂಶೋಧನೆ ಪ್ರಕಾರ ಇವರು ಸರ್ವ ಧರ್ಮ ಸಹಿಷ್ಣುಗಳಾಗಿದ್ದರು. ಜಾತ್ಯಾತೀತ ಮೌಲ್ಯಗಳಿಗೂ ಸಹ ಒತ್ತು ಕೊಟ್ಟಿದ್ದರು. ನಮ್ಮಲ್ಲಿನ ಹಬ್ಬಗಳು, ಜಾತ್ರೆಗಳು ಹೇಗೆ ಪ್ರಕೃತಿಗೆ ಸಂಭಂಧಿಸಿದವಾಗಿದ್ದವೋ ಅದೇ ರೀತಿ ಅವರು ಸಹ ಸುಗ್ಗಿ, ಹೊಸ ವರ್ಷ, ಇತ್ಯಾದಿಗಳನ್ನು ಆಚರಿಸುತಿದ್ದರು. ಕೆಲ ಹಬ್ಬಗಳ ಆಚರಣೆಯಲ್ಲಿ ದೇವರುಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತಿದ್ದರಂತೆ. ಭಾರತದಲ್ಲಿದ್ದಂತೆ ರಾಜಾಡಳಿತ ಅಲ್ಲಿಯೂ ಇತ್ತು, ಜನರ ಆಪೇಕ್ಷೆ, ಇಚ್ಚೆ, ಕಷ್ಟ ನಷ್ಟಗಳ ಬಗ್ಗೆ ಅರಿವಿಟ್ಟುಕೊಂಡು ಆಡಳಿತ ನಡೆಸುತಿದ್ದರು. ಇವರ ಮೇಲೆ ಆಕ್ರಮಣಗಳು ಹೆಚ್ಚಾದಂತೆ, ಇವರ ಅರಸೊತ್ತಿಗೆ ನಶಿಸಿಹೋಯಿತು. ನಂತರ ಬಂದ ಹಲವಾರು ಶತ್ರುಗಳು ಈ ಭಾಗವನ್ನು ಆಕ್ರಮಿಸಿಕೊಂಡಿದ್ದರೂ ಬಹುಕಾಲ ಮುಂದುವರೆಯಲಿಲ್ಲ.
ಮುಂದೆ ಅಲ್ಲಿ ನೆಲೆಕಂಡುಕೊಂಡ ಫ್ರಿಜಿಯನ್ ಸಮುದಾಯವು ಸಹ ಇನ್ನೊಂದು ಇಂಡೋ-ಯೂರೋಪಿಯನ್ ಗುಂಪಾಗಿದ್ದರು. ಈ ನಗರದಲ್ಲಿನ ಕೆಳಗಿನ ಹಂತಗಳು ಲೋಹ ಯುಗದಲ್ಲಿ ಫ್ರಿಜಿಯನ್ಗಳಿಂದ ನಿರ್ಮಾಣ ಮುಂದುವರಿದಿದ್ದನ್ನು ಸೂಚಿಸುತ್ತವೆ. ಇವರು ಸಹ ಇಂಡೋ ಆರ್ಯನ್ ಮೂಲದವರಾಗಿದ್ದರಿಂದ ಭಾರತೀಯ ಪೂರ್ವಜರಿಗೂ ಇವರಿಗೂ, ವಾಸ್ತುಶಿಲ್ಪ ಕೌಶಲ್ಯ ಸೇರಿದಂತೆ ಹಲವಾರು ವಿಚಾರಗಳಲ್ಲಿ ಮತ್ತು ವಿಷಯಗಳಲ್ಲಿ ಹೋಲಿಕೆಗಳಿದ್ದವು.
*ಮರುಹುಟ್ಟು*:
1920ರ ದಶಕದ ಗ್ರೀಕೊ-ಟರ್ಕಿಷ್ ಯುದ್ಧದ ನಂತರ ಈ ನಗರದ ರಹಸ್ಯಗಳು ಜನರ ನೆನಪಿನಿಂದ ಮರೆಯಾಗಿದ್ದವು. ಆದರೆ 1963ರ ಆ ರೈತನ "ಕೋಳಿ ಕಳೆದುಹೋದ" ಘಟನೆಯಿಂದಾಗಿ ಈ ಅದ್ಭುತ ಪ್ರಪಂಚಕ್ಕೆ ಮತ್ತೆ ಜೀವ ಬಂದಿತು. 1985ರಲ್ಲಿ ಯುನೆಸ್ಕೋ (UNESCO) ಇದನ್ನು **ವಿಶ್ವ ಪರಂಪರೆ ತಾಣ** ಎಂದು ಘೋಷಿಸಿದೆ. ನಮ್ಮ ಕಾಲದ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ, ಕೇವಲ ಕೈ ಉಪಕರಣಗಳಿಂದ ಇಂತಹ ಬೃಹತ್ ನಗರವನ್ನು ನಿರ್ಮಿಸಿದ್ದು ಮಾನವನ ಬುದ್ಧಿಶಕ್ತಿಗೆ ಹಿಡಿದ ಕನ್ನಡಿಯಾಗಿದೆ, ಮಾನವ ಇತಿಹಾಸದ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.. ಡೆರಿಂಕ್ಯು ನಗರ ನಮಗೆ ಕಲಿಸುವ ಪಾಠವೇನೆಂದರೆ ಮನುಷ್ಯನಿಗೆ ಬದುಕುವ ಛಲವಿದ್ದರೆ ಭೂಮಿಯ ಆಳದಲ್ಲೂ ಸ್ವರ್ಗವನ್ನು ಸೃಷ್ಟಿಸಬಲ್ಲ.
ಟರ್ಕಿಯ ಕಪ್ಪಡೋಕಿಯಾದ ಪ್ರಮುಖ ಆಕರ್ಷಣೆಗಳು:
ಇಂದು ಈ ಪ್ರದೇಶ ಪ್ರವಾಸಿಗರ ಪ್ರಮುಖ ಭೇಟಿಯ ತಾಣವಾಗಿ ಮಾರ್ಪಟ್ಟಿದೆ. ಟರ್ಕಿಗೆ ಭೇಟಿ ನೀಡುವ ಲಕ್ಷಾಂತರ ವಿದೇಶಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ.
೧) ಹಾಟ್ ಏರ್ ಬಲೂನ್ ಸವಾರಿ: ಮುಂಜಾನೆಯ ಸೂರ್ಯೋದಯದ ಸಮಯದಲ್ಲಿ ನೂರಾರು ಬಲೂನ್ಗಳು ಬಂಡೆಗಳ ಮೇಲೆ ಹಾರಾಟ ನಡೆಸುವುದು ಪ್ರಮುಖ ಆಕರ್ಷಣೆಯಾಗಿದೆ.
೨) ಗೋರೆಮ್ ಓಪನ್ ಏರ್ ಮ್ಯೂಸಿಯಂ: ಬಂಡೆಗಳನ್ನು ಕೊರೆದು ನಿರ್ಮಿಸಲಾದ ಚರ್ಚ್ಗಳು ಮತ್ತು ಹಳೆಯ ಕಾಲದ ಹಸಿಚಿತ್ರಗಳನ್ನು ಇಲ್ಲಿ ನೋಡಬಹುದು.
೩) ಭೂಗರ್ಭ ನಗರಗಳು (Underground Cities): ಡೆರಿಂಕುಯು (Derinkuyu) ಮತ್ತು ಕೈಮಾಕ್ಲಿ (Kaymakli) ಭೂಮಿಯ ಆಳದಲ್ಲಿರುವ ಈ ಪ್ರಾಚೀನ ನಗರಗಳಿಗೆ ಭೇಟಿ ನೀಡಬಹುದು.
೪) ಗುಹೆ ಹೋಟೆಲ್ಗಳು ( Cave Hotels): ಬಂಡೆಗಳನ್ನು ಕೊರೆದು ನಿರ್ಮಿಸಲಾದ ಮನೆಗಳಲ್ಲಿ ತಂಗುವ ವಿಶಿಷ್ಟ ಅನುಭವವನ್ನು ನೀವು ಇಲ್ಲಿ ಹೊಂದ ಬಹುದು.
೫) ಪಾರಿವಾಳಗಳ ಕಣಿವೆ (Pigeon Valley) & ಲವ್ ವ್ಯಾಲಿ: ವಿಶಿಷ್ಟವಾದ ಕಲ್ಲುಗಳ ರಚನೆಗಳು ಮತ್ತು ಹೈಕಿಂಗ್ಗೆ ಸೂಕ್ತ ಸ್ಥಳ, ಹೈಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.
ಭೇಟಿ ನೀಡಲು ಉತ್ತಮ ಸಮಯ:
ವಸಂತ (ಏಪ್ರಿಲ್-ಜೂನ್) ಮತ್ತು ಶರತ್ಕಾಲ (ಸೆಪ್ಟೆಂಬರ್-ಅಕ್ಟೋಬರ್) ಹವಾಮಾನವು ಹಿತಕರವಾಗಿರುತ್ತದೆ, ಇದು ಬಲೂನ್ ಸವಾರಿಗೆ ಉತ್ತಮ ಸಮಯ.
ತಲುಪುವುದು ಹೇಗೆ?:
ಕೈಸೇರಿ (Kayseri) ಅಥವಾ ನೆವ್ಸೆಹಿರ್ (Nevşehir) ವಿಮಾನ ನಿಲ್ದಾಣಗಳ ಮೂಲಕ ಕಪ್ಪಡೋಕಿಯಾವನ್ನು ಸುಲಭವಾಗಿ ತಲುಪಬಹುದು. ಇಸ್ತಾಂಬುಲ್ನಿಂದ ಇಲ್ಲಿಗೆ ಪ್ರಯಾಣಿಸಲು ವಿಮಾನ ಅಥವಾ ಬಸ್ ವ್ಯವಸ್ಥೆಯಿದೆ.
ಬರಹ: ಪಿಎಸ್.ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ.




.webp)








.jpeg)
.jpeg)


.jpeg)
