ಶನಿವಾರ, ಮೇ 2, 2026

ಅರಬ್ ಮಣ್ಣಿನಲ್ಲಿ ಅರಳಿದ ಭಾರತೀಯ ಮಾಧುರ್ಯ: ಯೆಮೆನ್ ಮಾವಿನ ಕಥೆ

ಹಣ್ಣುಗಳ ರಾಜ ಹೆಸರಾಗಿರುವ ಮಾವಿನ ಹಣ್ಣಿನ ರುಚಿಗೆ ಮನಸೋತವರು ಯಾರಿಲ್ಲ ಹೇಳಿ? ಮಾವಿನ ಹಣ್ಣಿನ ಸೀಸನ್ ಬಂದೊಡನೆ ಪ್ರತಿ ಊರಿನಲ್ಲೂ ಮಾವಿನ ಹಣ್ಣಿನ ಹಬ್ಬ ಅಂತ ಹೇಳಬಹುದು, ಮಾರುಕಟ್ಟೆಯ ಬೀದಿಬೀದಿಗಳಲ್ಲೂ ತರಹೇವಾರಿ ಮಾವಿನ ಹಣ್ಣನ್ನು ಮಾರುತ್ತಾರೆ. ಅಷ್ಟೇ ಅಲ್ಲದೆ ಹಲವಾರು ದೇಶಗಳಿಗೆ ನಮ್ಮ ಭಾರತದಿಂದ  ಹಣ್ಣುಗಳು ರಫ್ತಾಗುತ್ತವೆ. ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ದೇಶದಲ್ಲಿ ಭಾರತವು ಮೊದಲನೆಯ ಸ್ಥಾನದಲ್ಲಿದೆ.


ಒಮಾನ್ ನಲ್ಲಿ ನೆಲೆಸಿರುವ ನಾವು ಪ್ರತಿ ವರ್ಷದ ಮಾವಿನ ಹಣ್ಣಿನ ಸೀಸನ್ ನಲ್ಲಿ ಭಾರತದಿಂದ ರಫ್ತು ಮಾಡಲ್ಪಟ್ಟ  ಹಣ್ಣುಗಳನ್ನು ಖರೀದಿಸಿ ತಿನ್ನುವುದು ರೂಡಿ. ಸುಮಾರು ಹದಿನಾರು ವರ್ಷಗಳ ಹಿಂದೆ  ಮಸ್ಕತ್ ಗೆ ಮೊದಲು ಬಂದಾಗ, ಮಾರುಕಟ್ಟೆಯಲ್ಲಿ ದೊರೆಯುತಿದ್ದ ಅತಿ ಹೆಚ್ಚು ಬೆಲೆಯ ಮಾವಿನ ಹಣ್ಣಗಳನ್ನು ಕೊಳ್ಳಲು ಹಿಂದೆ ಮುಂದೆ ಯೋಚಿಸುತಿದ್ದೆವು. ಸಾಮಾನ್ಯವಾಗಿ ಭಾರತದಿಂದ ಆಮದಾಗುವ ವಸ್ತುಗಳು ಇಲ್ಲಿ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತವೆ. ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಲಾಭಾಂಶ, ಸಾಗಣೆ ವೆಚ್ಚ ಇತ್ಯಾದಿ ಸೇರಿ, ವಸ್ತುಗಳ ಬೆಲೆ ದುಪ್ಪಟ್ಟಾಗುವುದು ಸಹಜ. ಊರಿನಲ್ಲಿ ನೂರು ರೂಪಾಯಿಗೆ ದೊರೆಯುವ ವಸ್ತುಗಳು ಇನ್ನೂರಕ್ಕೂ ಹೆಚ್ಚಿನ ಬೆಲೆಗೆ ಮಾರುತ್ತಾರೆ.  ಒಮಾನಿನ ಮಾರ್ಕೆಟ್ ಗಳಲ್ಲಿ ನಾವು ಯಾವುದೇ ವಸ್ತುಗಳನ್ನು ಖರೀದಿಸುವಾಗ, ಭಾರತ ಮೂಲದ ಆಹಾರ ಪದಾರ್ಥಗಳಿಗೆ ಯಾವಾಗಲು ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಕೇಜಿಗೆ ಬೆಲೆ ದುಪ್ಪಟ್ಟಾದರು ನೂರಾರು ರೂಪಾಯಿ ಕೊಟ್ಟು ಹಲವಾರು ಬಾರಿ ಹೀಗಾಗಿ ನಮ್ಮೆಲ್ಲರ ಅಚ್ಚು ಮೆಚ್ಚಿನ ಮಾವಿನ ಹಣ್ಣನ್ನು ಪ್ರತಿ ಸೀಸನ್ ನಲ್ಲಿ ಖರೀದಿಸಿ ತಂದು, ಅದರ ಸ್ವಾದವನ್ನು ಅನುಭವಿಸುತ್ತಿರುತ್ತೇವೆ. ಒಮ್ಮೊಮ್ಮೆ, ತುಂಬಾ ಇಷ್ಟ ಪಟ್ಟು, ಜಾಸ್ತಿ ದುಡ್ಡು ಕೊಟ್ಟು ತಂದ ಹಣ್ಣುಗಳಲ್ಲಿ ಕೆಲವೊಂದು ತಳಿಗಳು ನೋಡಲು ಸುಂದರವಾಗಿದ್ದರೂ ಅಷ್ಟೊಂದು ರುಚಿ ನೀಡುತ್ತಿರುತ್ತಿಲ್ಲ. ಹೀಗಾಗಿ ಒಳ್ಳೆ ರುಚಿಯಾದ ಹಣ್ಣಿಗಾಗಿ ವಿವಿಧ ತಳಿಗಳನ್ನು ಟ್ರೈ ಮಾಡುವುದು ನಮ್ಮ ಅಭ್ಯಾಸ. ಒಮ್ಮೆ ಟ್ರೈ ಮಾಡೋಣ ಎಂದು  ಯೆಮೆನ್ ಮಾವಿನ ಹಣ್ಣನ್ನು ಖರೀದಿಸಿ ತಂದು ರುಚಿ ನೋಡಿದೆವು. ಅಬ್ಬಾ! ಆ ಹಣ್ಣಿನ ರುಚಿಗೆ ನಾನೊಬ್ಬನೆ ಮಾತ್ರವಲ್ಲ, ಮನೆಯಲ್ಲಿ ಎಲ್ಲರೂ ಮನಸೋತು ಹೋದೆವು.  ಬಾಯಲ್ಲಿ ಇಟ್ಟ ತಕ್ಷಣ ಆ ಮಾವು ಕರಗಿ ಹೋಗುವಂತಹ ಅನ್ಬುಭವ. ಜೇನುತುಪ್ಪದಂತಹ ಸಿಹಿ, ಜೊತೆಗೆ ಬಾಯಲ್ಲಿ ಉಕ್ಕುವ ರಸ. ಮಾವಿನ ಹಣ್ಣಿನಲ್ಲಿ ನಾರೇ ಇರಲಿಲ್ಲ. ಚಾಕುವಿನಿಂದ ಹಣ್ಣನ್ನು ಕತ್ತರಿಸಿದಾಗ ಅದು ಬೆಣ್ಣೆಯನ್ನು ಕತ್ತರಿಸಿದ ಅನುಭವ ನೀಡಿತ್ತು. ಆಗ ನನಗನಿಸಿದ್ದು, ನಾವ್ಯಾಕೆ ಇಷ್ಟು ದಿನ ಈ ಹಣ್ಣನ್ನು ತಿನ್ನಲೇ ಇಲ್ಲವಲ್ಲ ಅಂತ! ಈ ಹಣ್ಣಿನ ರುಚಿಗೆ ಮಾರು ಹೋಗದವರು ಯಾರು ಇಲ್ಲ. ಮಾರ್ಕೆಟ್ ನಲ್ಲಿ ಯೆಮೆನ್ ಮಾವಿನ ಹಣ್ಣುಗಳು ಬಂದೊಡನೆ, ಅತಿ ಶೀಘ್ರವಾಗಿ ಖಾಲಿಯಾಗಿ ಬಿಡುತ್ತವೆ. ನನ್ನ ಸ್ನೇಹಿತರೂ ಸಹ ಇದೇ ಮಾತನ್ನು ಹೇಳುತಿದ್ದರು. 


*ಮರುಭೂಮಿಯಲ್ಲಿ ಕೃಷಿ*:

ಹಳ್ಳ ಕೊಳ್ಳ, ನದಿ, ಹೊಲ,ಗದ್ದೆ, ಕೆರೆ ಕಟ್ಟೆ, ಹಸಿರು ಹೊದ್ದ ಬೆಟ್ಟಗಳು ಹೀಗೆ ನಿತ್ಯವೂ ಹಸಿರನ್ನು ನೋಡಿ ಬೆಳೆದ ನಮಗೆ, ಗಲ್ಫ್ ರಾಷ್ಟ್ರಗಳಲ್ಲಿ ಬಹುತೇಕ ಕಡೆ ಮರುಭೂಮಿ, ಬೊಳು ಬೋಳಾಗಿರುವ ಬೆಟ್ಟ ಗುಡ್ಡಗಳು, ಸುಣ್ಣದ ಕಲ್ಲಿನ ಪದರಗಳನ್ನು ಒಳಗೊಂಡ ಭೂ ಪ್ರದೇಶ, ಜಾಲಿ ಮುಳ್ಳು ಬಿಟ್ಟರೆ ಬೇರೇನು ಬೆಳೆಯದ ಭೂಮಿ, ಕಣ್ಣು ಹಾಯಿಸಿದಷ್ಟೂ ದೂರ ಮರಳಿನ ದಿಬ್ಬಗಳು ಹೀಗೆ ಈ ಎಲ್ಲವೂ ನಮ್ಮನ್ನು ಉಲ್ಲಾಸ ಕಳೆದುಕೊಳ್ಳುವಂತೆ ಮಾಡುತ್ತವೆ. ಆದರೆ ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳನ್ನು ನೋಡಿದೊಡನೆ ಮನಸ್ಸಿಗೆ ಉತ್ಸಾಹ ತುಂಬುತ್ತವೆ. ತಿಂಗಳಿಗೆ ಒಂದೆರೆಡು ಬಾರಿ ಇಂತಹ ಪ್ರದೇಶಗಳಿಗೆ ಹೋಗಿ ಧೈನಂದಿನ ಏಕತಾನತೆಯನ್ನು ದೂರಮಾಡಿಕೊಂಡು ಮನಸ್ಸನ್ನು ಸಂತೈಸಿಕೊಂಡು ಹಿಂತಿರುವುದು ಇಲ್ಲಿ ನೆಲೆಸೆರಿವು ನಮ್ಮಂತ ವಲಸಿಗರಿಗೆ ಇದು ಸಾಮಾನ್ಯದ ಸಂಗತಿ. ಈ ಮಣ್ಣಿನ ವೈಶಿಷ್ಟ್ಯವೇನೋ ಗೊತ್ತಿಲ್ಲ, ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳಲ್ಲಿ ಖರ್ಜೂರದ ಮರಗಳು ಯಥೇಚ್ಚವಾಗಿ ಬೆಳೆದಿರುತ್ತವೆ, ಅಲ್ಲಲ್ಲಿ ಮಾವಿನ ಮರಗಳು, ನಿಂಬೆ ಹಣ್ಣಿನ ಮರಗಳು, ಸೀಬೆ ಹಣ್ಣಿನ ಗಿಡಗಳು, ಕರಿಬೇವಿನ ಸೊಪ್ಪಿನ ಗಿಡ, ನುಗ್ಗೆಕಾಯಿ ಗಿಡಗಳು, ಸಪೋಟ ಗಿಡಗಳು ಇತ್ಯಾದಿ ಮರಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇವೆಲ್ಲವನ್ನೂ ನೋಡುವುದು ಮನಸ್ಸಿಗೆ ಮುದ ನೀಡುತ್ತವೆ.



ಈ ಮರುಭೂಮಿಯಲ್ಲೂ ವಿವಿಧ ಹಣ್ಣಿನ ಗಿಡಗಳು ಬೆಳೆಯುವುದಕ್ಕೆ ಕಾರಣ ನಮ್ಮ ಭಾರತ ದೇಶ ಎಂದು ಹೇಳಬಹುದು. ಅನಾದಿಕಾಲದಿಂದಲೂ ನಮ್ಮ ಭಾರತ ಮತ್ತು ಅರಬ್ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟು ನಡೆಯುತಿತ್ತು. ಇಲ್ಲಿ ದೊರೆಯುತ್ತಿದ್ದ ಖರ್ಜೂರ, ಸಾಂಭ್ರಾಣಿ, ನಿಂಬೆಹಣ್ಣು, ಮುತ್ತು ರತ್ನಗಳು ಇತ್ಯಾದಿಗಳನ್ನ ಭಾರತಕ್ಕೆ ರಫ್ತುಮಾಡಿ ಅಲ್ಲಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತಿದ್ದರು. ಹೀಗಾಗಿ ಅಲ್ಲಿಂದ ತರಲಾಗಿದ್ದ ಹಲವಾರು ಧಾನ್ಯಗಳು, ಹಣ್ಣುಗಳ ಬೀಜಗಳನ್ನು ಇಲ್ಲಿ ಬೆಳೆಸಲು ಪ್ರಯತ್ನಿಸಲಾಗಿದೆ. ಈ ಮಣ್ಣಿನ ಗುಣಕ್ಕೆ ಅನುಗುಣವಾಗಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಲಾಗಿದೆ. ಇತ್ತೀಚೆಗಂತೂ ಆಧುನಿಕ ಕೃಷಿ ಪದ್ದತಿಯಲ್ಲಿ ತರಹೇವಾರಿ ಹಣ್ಣುಗಳು, ತರಕಾರಿಗಳು, ಸೊಪ್ಪುಗಳನ್ನು ಒಮಾನಿನಲ್ಲಿ ಬೆಳೆಯಲಾಗುತ್ತಿದೆ. ಕೇವಲ ಇಲ್ಲಿನ ಮಾರುಕಟ್ಟೆಗೆ ಮಾತ್ರವಲ್ಲದೆ, ಪಕ್ಕದ ಅರಬ್ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ. 

*ಯೆಮೆನ್ ಮಾವಿಗೂ ನಮ್ಮ ಭಾರತಕ್ಕೂ ಅವಿನಾಭಾವ ಸಂಬಂಧವಿದೆ!:-*

ಈ ಯೆಮೆನ್ ಮಾವಿನ ಹಣ್ಣುಗಳು ಮೂಲತಃ ಭಾರತದಿಂದಲೇ ಯೆಮೆನ್‌ಗೆ ಹೋಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ವಿಶಿಷ್ಟ ರುಚಿ ಪಡೆದುಕೊಂಡಿವೆ ಎಂಬ ವಿಷಯ ತಿಳಿದಾಗ ಭಾರತೀಯರು ಹೆಮ್ಮೆ ಪಡುತ್ತಾರೆ. ಇತಿಹಾಸದ ದಾಖಲೆಗಳ ಪ್ರಕಾರ, ಸುಮಾರು 200 ವರ್ಷಗಳ ಹಿಂದೆ, ಯೆಮೆನ್‌ನ  ಲಾಹಜ್ (Lahj)  ಪ್ರಾಂತ್ಯದ ಸುಲ್ತಾನರಾದ ಅಹ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಅಬ್ದಾಲಿ (Ahmed bin Abdul Karim) ಮತ್ತು ಅವರ ಉತ್ತರಾಧಿಕಾರಿಗಳು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಸುಲ್ತಾನರೇ ಲಾಹಜ್‌ನಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಭಾರತದಿಂದ ವಿವಿಧ ಮಾವಿನ ತಳಿಗಳನ್ನು ತರಿಸಿ ನೆಟ್ಟರು ಎಂದು ಹೇಳಲಾಗಿದೆ. ಮೊದಲು ಈ ಸಸಿಗಳನ್ನು ಲಾಹಜ್‌ನ ಪ್ರಸಿದ್ಧ ಅಲ್-ಹುಸೇನಿ ತೋಟಗಳಲ್ಲಿ (Al-Husseini Gardens) ನೆಟ್ಟರು. ಅಂದಿನಿಂದ ಲಾಹಜ್ ಯೆಮೆನ್‌ನ "ಹಸಿರು ಓಯಸಿಸ್" ಎಂದು ಪ್ರಸಿದ್ಧವಾಯಿತು. ಇಂದಿಗೂ ಯೆಮೆನ್‌ನ ಅತ್ಯುತ್ತಮ ತಳಿಗಳಾದ ತೈಮೂರ್ ಮತ್ತು ಅಲ್ಫಾನ್ಸೋ ಅಲ್ಲಿ ಬೆಳೆಯುತ್ತಿರುವುದಕ್ಕೆ ಅಂದು ಸುಲ್ತಾನರು ಭಾರತದಿಂದ ತಂದ ತಳಿಗಳೇ ಅಡಿಪಾಯವಾಗಿವೆ. ಈ ಸುಲ್ತಾನರ ಪ್ರಯತ್ನದಿಂದಾಗಿ ಇಂದು ಯೆಮೆನ್‌ನ ಮಾವುಗಳು ಅರಬ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.  ಅಂದು ಸುಲ್ತಾನರು ಅಕ್ಕರೆಯಿಂದ ನೆಟ್ಟ ಆ ಗಿಡಗಳೇ ಇಂದು ಯೆಮೆನ್ ಅನ್ನು "ಮಾವುಗಳ ನಾಡು" ಎಂಬಂತೆ ಮಾಡಿದೆ. ಯೆಮೆನ್ ಮಾತ್ರವಲ್ಲದೆ, ನೆರೆಯ ಒಮನ್ ರಾಷ್ಟ್ರಕ್ಕೂ ಸಹ ಮಾವು ಭಾರತದಿಂದಲೇ ಪರಿಚಯವಾಗಿತ್ತು. 11ನೇ ಶತಮಾನದ ಸುಮಾರಿಗೆ ನಭಾನಿ ಸುಲ್ತಾನರ (Nabhani Sultans) ಕಾಲದಲ್ಲಿ ಮಾವು ಬಂದಿತ್ತು ಎಂದು ಹೇಳಲಾಗುತ್ತದೆ. ಯೆಮೆನ್‌ನಲ್ಲಿ ಮಾವನ್ನು ಸ್ಥಳೀಯವಾಗಿ 'ಅಂಬಾ' (Amba) ಎಂದು ಕರೆಯುತ್ತಾರೆ. ಇದನ್ನು ಕೇಳಿದಾಗ ನಮಗೆ ಸಂಸ್ಕೃತದ 'ಆಮ್ರ' ಅಥವಾ ಹಿಂದಿಯ 'ಆಮ್' ನೆನಪಾಗದೆ ಇರಲು ಸಾಧ್ಯವೇ ಇಲ್ಲ! ಹೆಸರಿನಲ್ಲೂ ನಮ್ಮ ನಂಟು ಹಾಗೆಯೇ ಉಳಿದುಕೊಂಡಿದೆ.

*ಯೆಮೆನ್ ಮಾವುಗಳ ವೈವಿಧ್ಯತೆ:* ಯೆಮೆನ್‌ನಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ತಳಿಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ತೈಮೂರ್,  'ಖಲ್ಬ್ ಅಲ್-ತೋರ್' ಮಾವು, ಅಬೂ ಸಿನಾರಾ, ಅಬೂ ಸಿನಾರಾ


*ತೈಮೂರ್:*  ದುಂಡನೆಯ ಬೃಹತ್ ಗಾತ್ರದ ಈ ಹಣ್ಣನ್ನು ಕೈಯಲ್ಲಿ ಹಿಡಿದಾಗ ಅದರ ಭಾರವೇ ನಮಗೊಂದು ತೂಕದ ಅನುಭವ ನೀಡುತ್ತದೆ. ಸುಮಾರು ನಾಲ್ಕೈದು ಹಣ್ಣುಗಳಿಗೆ ಒಂದು ಕೇಜಿ ತೂಕ ಬರುತ್ತದೆ.  ಆದರೆ ಈ ಹಣ್ಣಿನ ಅಸಲಿ ಮ್ಯಾಜಿಕ್ ಇರುವುದು ಅದನ್ನು ಕತ್ತರಿಸಿದಾಗ!  ಮಾವಿನ ಹಣ್ಣು ಎಂದರೆ ಸಾಮಾನ್ಯವಾಗಿ ನಾರು (fiber) ಇರುತ್ತದೆ, ಆದರೆ ಈ ಹಣ್ಣು ಬೆಣ್ಣೆಯಂತಹ ಮೃದುತ್ವವನ್ನು ಹೊಂದಿದೆ. ಯಾವುದೇ ನಾರಿನ ಕಿರಿಕಿರಿಯಿಲ್ಲದ ಈ ಮೃದುತ್ವವೇ ಇದರ ದೊಡ್ಡ ಪ್ಲಸ್ ಪಾಯಿಂಟ್. ಹಣ್ಣಿನ ತುಂಡನ್ನು ಬಾಯಲ್ಲಿಟ್ಟರೆ ಸಾಕು, ಅದು ಐಸ್ ಕ್ರೀಂನಂತೆ ಕರಗಿ ಹೋಗುತ್ತದೆ. ಜೇನುತುಪ್ಪದಂತಹ ತೀವ್ರವಾದ ಸಿಹಿ ಮತ್ತು ಬಾಯಲ್ಲಿ ಉಕ್ಕುವ ರಸದ ಸಮ್ಮಿಲನ ಅದ್ಭುತ. ಇದನ್ನು ತಿಂದಾಗಲೇ "ವಿಶ್ವದ ಅತ್ಯುತ್ತಮ ಮಾವುಗಳಲ್ಲಿ ಒಂದು" ಎಂಬ ಕೀರ್ತಿ ಈ ಹಣ್ಣಿಗೆ ಏಕೆ ಬಂದಿದೆ ಎಂಬುದು ನಮಗೆ ಅರ್ಥವಾಗುತ್ತದೆ.


*ಖಲ್ಬ್ ಅಲ್-ತೋರ್:*  ತೈಮೂರ್ ಪಕ್ಕದಲ್ಲೇ ಕಣ್ಣು ಸೆಳೆಯುವ ಮತ್ತೊಂದು ತಳಿ ಅರಬ್ ಮೂಲದ 'ಖಲ್ಬ್ ಅಲ್-ತೋರ್' (Bull's Heart). ನೋಡಲು ಅಚ್ಚುಕಟ್ಟಾದ ಹೃದಯದ ಆಕಾರದಲ್ಲಿರುವ ಈ ಹಣ್ಣುಗಳು ಗಾತ್ರದಲ್ಲಿ ಬಹಳ ದೊಡ್ಡವು. 

ಈ ಯೆಮೆನ್ ಮಾವಿನಹಣ್ಣುಗಳ ವಿಶೇಷತೆ ಏನೆಂದರೆ ಇವುಗಳಲ್ಲಿರುವ ಅತೀವವಾದ ರಸದ ಅಂಶ. ಅತ್ಯಂತ ರಸಭರಿತವಾಗಿರುವ ಕಾರಣದಿಂದಲೇ ಇವುಗಳನ್ನು ಜ್ಯೂಸ್ ಅಥವಾ ಶೇಕ್ ತಯಾರಿಸಲು  ಬಳಸುತ್ತಾರೆ. ಯೆಮೆನ್ ಮಾವುಗಳು ನೈಸರ್ಗಿಕವಾಗಿ ಹಣ್ಣಾಗುತ್ತವೆ ಮತ್ತು ಯಾವುದೇ ರಾಸಾಯನಿಕಗಳಿಲ್ಲದೆ ಸಿಗುತ್ತವೆ ಎಂಬ ನಂಬಿಕೆ ಭಾರತೀಯ ಗ್ರಾಹಕರಲ್ಲಿದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಮಾವು ಸಿಗದ ಸಮಯದಲ್ಲಿ ಯೆಮೆನ್ ಮಾವಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವೊಮ್ಮೆ ಭಾರತೀಯ ಮಾವುಗಳಿಗಿಂತ ಯೆಮೆನ್ ಮಾವುಗಳು ಗಲ್ಫ್ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದ್ದರೂ, ಅದರ ರುಚಿಗಾಗಿ ಭಾರತೀಯರು ಇದನ್ನು ಖರೀದಿಸಲು ಹಿಂಜರಿಯುವುದಿಲ್ಲ. ಯೆಮೆನ್ ಮಾವುಗಳು ಸಾಮಾನ್ಯವಾಗಿ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಲಭ್ಯವಿರುತ್ತವೆ.  ಮುಖ್ಯವಾಗಿ ಯೆಮೆನ್‌ನಲ್ಲಿ ಬೆಳೆದರೂ, ಇವುಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಒಮಾನ್‌ನಂತಹ ಮಧ್ಯಪ್ರಾಚ್ಯದ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. 


ಮತ್ತೆ ಕೆಲ ತಳಿಗಳಿವೆ ಅದರಲ್ಲಿ ಅಬೂ ಸಿನಾರಾ ಹಣ್ಣುಗಳು ತೆಳುವಾದ ಸಿಪ್ಪೆಯಿಂದ ಕೂಡಿದ್ದು ಇದು ವಿಶಿಷ್ಟ ರುಚಿಯನ್ನು ಹೊಂದಿದೆ. ಅಲ್ಫಾನ್ಸೋ ಮಾವಿನಹಣ್ಣು ಭಾರತ ಮೂಲದ್ದಾದರೂ ಯೆಮೆನ್ ಮಣ್ಣಿನಲ್ಲಿ ಈಗ ಯಶಸ್ವಿಯಾಗಿ ಬೆಳೆಯುತ್ತಿದೆ. ಮತ್ತೊಂದು ತಳಿಯಾದ ಸುಡಾನಿ ಹಣ್ಣು ತನ್ನದೇ ಆದ ವಿಶಿಷ್ಟ ಸುವಾಸನೆಗೆ ಪ್ರಸಿದ್ಧವಾಗಿದೆ. 

ಮಾವು ಮೂಲತಃ ನಮ್ಮ ಭಾರತದ್ದೇ ಆಗಿರಬಹುದು, ಆದರೆ ಯೆಮೆನ್  ದೇಶದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬೆಳೆಸಿ ಅದಕ್ಕೊಂದು ಹೊಸ ಆಯಾಮ ನೀಡಿದೆ. ನೀವು ಎಂದಾದರೂ ಗಲ್ಫ್ ರಾಷ್ಟ್ರಗಳಿಗೆ ಹೋದರೆ ಅಥವಾ ಮಾರುಕಟ್ಟೆಯಲ್ಲಿ ಯೆಮೆನ್ ಮಾವು ಕಂಡರೆ ಖಂಡಿತಾ ಮಿಸ್ ಮಾಡಬೇಡಿ. ಅದು ಕೇವಲ ಹಣ್ಣಲ್ಲ, ಎರಡು ಸಂಸ್ಕೃತಿಗಳನ್ನು ಜೋಡಿಸುವ ಒಂದು 'ಸಿಹಿ' ಕೊಂಡಿ!


ಬರಹ:

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


ಶನಿವಾರ, ಏಪ್ರಿಲ್ 4, 2026

ಹಾಡು: ರಾಂಪುರ ನಮ್ಮೂರು ರಾಂಪುರ

 *ನಮ್ಮೂರು ರಾಂಪುರ ಕುರಿತಾದ ಒಂದು ಸುಂದರ ಹಾಡು*


#rampura #ರಾಂಪುರ #chitradurga #molakalmuru #jatayu #jatinga_rameshwara #ashoka_siddapura ##ashoka_Shilashasana #ಅಶೋಕ_ಶಿಲಾಶಾಸನ #ಜಟಿಂಗ_ರಾಮೇಶ್ವರ #ಜಟಾಯು #ಮೊಳಕಾಲ್ಮೂರು #ಚಿತ್ರದುರ್ಗ


https://youtu.be/ZBhCczNT6GQ


ಗುರುವಾರ, ಮಾರ್ಚ್ 19, 2026

ಕಾಣೆಯಾದ ಕೋಳಿ ಮತ್ತು ಪತ್ತೆಯಾದ ಭೂಗರ್ಭ ನಗರ ಡೆರಿಂಕ್ಯುನ ವಿಸ್ಮಯಕಾರಿ ಕಥೆ!

ನಮ್ಮ ದೇಶದ ಒಂದಲ್ಲ ಒಂದು ಕಡೆ ಪುರಾತನ ಕಾಲದ ವಸ್ತುಗಳು, ಆಭರಣಗಳು, ವಿಗ್ರಹಗಳು ಇತ್ಯಾದಿಗಳು ದೊರೆಯುತ್ತಿರುತ್ತವೆ, ಕಳೆದ ಮೂರು ದಶಕಗಳ ಹಿಂದೆ ತಲಕಾಡಿನಲ್ಲಿ ಮರಳಿನಲ್ಲಿ ಹೂತು ಹೋಗಿದ್ದ ದೇವಾಲಯವೂ ಪತ್ತೆಯಾಗಿತ್ತು. ವಿಜಯನಗರದ ಹಂಪೆಯಲ್ಲೂ ಇಂದಿಗೂ ಸಹ ಒಂದಲ್ಲ ಒಂದು ಅಚ್ಚರಿಯ ಅಂಶಗಳು ದೊರಕುತ್ತಿವೆ. ಹಂಪೆ, ಮಸ್ಕಿ, ಬ್ರಹ್ಮಗಿರಿ, ಹೀಗೆ ಹಲವಾರು ಕಡೆ ಉತ್ಖನನ ನಡೆಸಿದಾಗ ಇನ್ನೂ ಅಚ್ಚರಿಯ ಅಂಶಗಳು ದೊರಕಿವೆ. ೧೦೦೦೦ ವರ್ಷಗಳ ಹಿಂದಿನ ಜನ ವಸತಿ ಪ್ರದೇಶ, ೪೦೦೦ ವರ್ಷಗಳ ಹಿಂದಿನ ಮನುಷ್ಯನ ಅಸ್ಥಿಪಂಜರ, ಹೀಗೆ ಕೆಲವೊಮ್ಮೆ ಅಚ್ಚರಿಯ ಅಂಶಗಳು ಪತ್ತೆಯಾಗುತ್ತಿರುತ್ತವೆ. 

    ಇತ್ತೀಚೆಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯೊಂದನ್ನು ಕಟ್ಟಲು ಅಡಿಪಾಯ ತೆಗೆಯುವಾಗ ಬಂಗಾರದ ಒಡವೆಗಳು ದೊರೆತಿದ್ದವು,  ಹಿಂದೆಯೂ ಕೆಲ ರೈತರಿಗೆ ಹೊಲ ಊಳೂವಾಗ ನಿಧಿ ಸಿಕ್ಕಿರುವ ಘಟನೆಗಳು ನಡೆದಿವೆ.  ಚರಿತ್ರೆಯ ಹಲವಾರು ಸಂಗತಿಗಳು ಭೂಗರ್ಭದಲ್ಲಿ ಹೂತು ಹೊಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿ.

    1963ರಲ್ಲಿ ಟರ್ಕಿಯಲ್ಲಿ ನಡೆದ ಒಂದು ಸಣ್ಣ ದುರಸ್ತಿ ಕಾರ್ಯವು ಇಡೀ ಮಾನವ ಇತಿಹಾಸದ ಒಂದು ಮರೆಯಾದ ಪುಟವನ್ನೇ ತೆರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಒಂದು ಅಚ್ಚರಿಯ ಘಟನೆಯಿಂದ  ಭೂಗರ್ಭದಲ್ಲಿ ಹೂತು ಹೋಗಿದ್ದ ಡೆರಿಂಕ್ಯೂ ನಗರದ ಕುರಿತಾಗಿ ಮಾಹಿತಿ ದೊರಕಿತು. ಈ ಕುರಿತಾದ ಆಸಕ್ತಿದಾಯಕ ಲೇಖನ ಇಲ್ಲಿದೆ.

ಟರ್ಕಿಯ ಕಪ್ಪಡೋಕಿಯಾ ಎಂಬಲ್ಲಿ. ಒಬ್ಬ ಸಾಮಾನ್ಯ ರೈತನಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿತ್ತು. ಮನೆಯ ನೆಲಮಹಡಿಯ ಒಂದು ಭಾಗದಲ್ಲಿ ಕೋಳಿಗಳನ್ನು ಸಾಕುತಿದ್ದ. ಒಂದು ಸಾರಿ ಕೋಳಿಗೆ ಕಾಳುಗಳನ್ನು ಹಾಕುವಾಗ, ಕೋಳಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂತು, ಇದೇನು ಒಂದು ಕೋಳಿ ಕಡಿಮೆಯಾಗಿದೆಯಲ್ಲ ಎಂದು ಯೋಚಿಸಿದ. ಹೀಗೆ ಹಲವಾರು ಬಾರಿ ಕೋಳಿಗಳು ಇದ್ದಕಿದ್ದಂತೆ ಮಾಯವಾಗುತಿದ್ದವು.  ವಿಚಿತ್ರವೇನೆಂದರೆ ಅವು ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ, ಆದರೂ ಒಳಗೆಲ್ಲೂ ಕಾಣಿಸುತ್ತಿರಲಿಲ್ಲ. ಇದೆಂತ ಮಾಯಾಜಾಲ ಎಂದು ಆಲೋಚಿಸಿ ಸುಮ್ಮನಾಗಿಬಿಟ್ಟಿದ್ದ.

    ಮನೆ ತುಂಬಾ ಹಳೆಯದಾಗಿತ್ತು, ಅಲ್ಲಲ್ಲಿ ಗೋಡೆಯ ಮಣ್ಣು ಕೆಳಗೆ ಬೀಳುತಿತ್ತು, ಹಾಗೂ ಗೋಡೆಯಲ್ಲಿ ಕೆಲಕಡೆ ಸಂದುಗಳಿದ್ದವು. ಅವೆಲ್ಲವನ್ನು ಸರಿಪಡಿಸೋಣ ಎಂದು ಕೆಲಕಾಲದ ನಂತರ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದೊಂದು ಭಾಗವನ್ನು ಸರಿಪಡಿಸುತ್ತ ಬರುವಾಗ, ಒಂದು ರಂಧ್ರ ಸ್ವಲ್ಪ ದೊಡ್ಡದಾಗಿತ್ತು. ಅದಕ್ಕೆ ಕೆಸರಿನ ಬುರುದೆಯನ್ನು ಮೆತ್ತಲು ಹೋದಾಗ ಅಗತ್ಯಕ್ಕಿಂತ ಹೆಚ್ಚಿನ ಮಣ್ಣು ಬೇಕಾಗುತಿತ್ತು. ಇದೇನಿಂದು ಎಂದು ಆಶ್ಚರ್ಯದಿಂದ, ಆ ಭಾಗವನ್ನು ಒಡೆಯಲು ಪ್ರಾರಂಭಿಸುತ್ತಾನೆ. ಆ ಕಿಂಡಿಯನ್ನು ಸ್ವಲ್ಪ ದೊಡ್ಡದಾಗಿ ಮಾಡುತ್ತಾನೆ. ಕೈ ಹಾಕಿ ನೊಡಿದರೆ ಆ ಕಡೆ ಟೊಳ್ಳು. ನಂತರ ಒಂದು ಉದ್ದನೆಯ ಕೋಲನ್ನು ಹಾಕುತ್ತಾನೆ. ಆ ಕೋಲು ಸಂಪೂರ್ಣವಾಗಿ ಒಳ ಹೋಗುತ್ತದೆ. ಆ ಕೋಲನ್ನು ತಿರುಗಿಸಿ ನೋಡಿದರೆ, ಒಳಗಡೆ ಒಂದು ಖಾಲಿ ಕೋಣೆ ಎಂಬಂತೆ ಕಾಣುತ್ತದೆ. ಆಗ ಆ ರಂಧ್ರವನ್ನು  ದೊಡ್ಡದಾಗಿ ತೆರೆದಾದ ಮೇಲೆ  ಆ ಬದಿಯಲ್ಲಿ ನೋಡಿದರೆ  ಒಂದು ಸುರಂಗ ಮಾರ್ಗ ಕಾಣಿಸುತ್ತದೆ. ಅವನಿಗೆ ಇನ್ನೂ ಆಶ್ಚರ್ಯವಾಯಿತು. ಮನೆಯ ಒಳಗಡೆ ಮತ್ತೊಂದು ಮಹಡಿ ಅಥವ ಕೋಣೆಗಳಿರುವುದು ಮನೆಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಒಳ ಹೊಕ್ಕು ನೋಡಿದರೆ, ಅವನ ಕಣ್ಣನ್ನ ಅವನೇ ನಂಬಲಾಗಲಿಲ್ಲ. ಈ ಜಾಗದಲ್ಲಿ ಇಂತಹ ದೊಡ್ಡ ಪ್ರದೇಶವನ್ನು ನೋಡುತಿದ್ದಂತೆ ಅವನಿಗೆ ಮಹದಾಶ್ಚರ್ಯವಾಗಿತ್ತು, ಅದು ಒಂದು ಕೋಣೆ, ಸುರಂಗ, ಅಥವ ಒಂದು ಮಹಡಿಯಾಗಿರಲಿಲ್ಲ, ಹತ್ತಾರು ಕೋಣೆಗಳು, ಸುರಂಗ ದಾರಿಗಳು ಕಂಡು ಬಂದವು. ಆ ಮನೆ ಹಲವಾರು ಅಂತಸ್ತಿನ ಒಂದು ಅರಮನೆಯಂತೆ ಭಾಸವಾಯಿತು. 

ಸುದ್ದಿ ಜನರಿಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಹೋಯಿತು. ಆ ರೈತ ಕೊನೆಗೆ ವಿಷಯವನ್ನು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಮುಟ್ಟಿಸುತ್ತಾನೆ. ಅವರು ಟರ್ಕಿಶ್ ಪುರಾತತ್ವ ಮತ್ತು ಪ್ರಾಚೀನ ವಸ್ತುಗಳ ಇಲಾಖೆಯ ಅಧಿಕಾರಿಗಳ ತಂಡ ಸಮೇತ ಅಲ್ಲಿಗೆ ಆಗಮಿಸಿ ಎಲ್ಲವನ್ನು ಪರಿಶೀಲಿಸುತ್ತಾರೆ. ಅವರಿಗೂ ಸಹ ಆಶ್ಚರ್ಯವಾಗುತ್ತದೆ. ಇದು ಭೂಮಿಯ ಆಳದಲ್ಲಿರುವ ಒಂದು ಪಟ್ಟಣ ಪ್ರದೇಶ ಎಂದು ಅಂದಾಜಿಸುತ್ತಾರೆ. ಸರ್ಕಾರದ ಅನುಮತಿಯನ್ನು ಪಡೆದು ಆ ಸ್ಥಳವನ್ನು ತಮ್ಮ ಸುಪರ್ದಿಗೆ ಪಡೆದು ಪ್ರತಿಯೊಂದನ್ನೂ ಪರಿಶೀಲಿಸುತ್ತಾರೆ. 


*ಭೂಗರ್ಭದ ಎಂಜಿನಿಯರಿಂಗ್ ಅದ್ಭುತ:*

ತಜ್ಞರು ಈ ಜಾಗದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಿದರು. ಅಲ್ಲಿ ದೊರೆತ ವಸ್ತುಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದವು. ಅಲ್ಲಿ ಸಾವಿರಾರು ಜನ ವಾಸ ಮಾಡಿರುವ ಕುರುಹುಗಳು ಪತ್ತೆಯಾದವು. ಒಳಗಡೆ ಹೋದಂತೆಲ್ಲ, ಭೂಗರ್ಭದಲ್ಲಿ ಅಡಗಿ ಹೋದ ನಗರವೇ ಅವರ ಮುಂದೆ ನಿಂತಿತ್ತು. ಇತಿಹಾಸದ ಗರ್ಭದಲ್ಲಿ ಅಡಗಿದ ಮಹಾನಗರ. ಡೆರಿಂಕುಯು ಕೇವಲ ಒಂದು ಗುಹೆಯಲ್ಲ; ಇದು ಎಂಜಿನಿಯರಿಂಗ್ ಲೋಕಕ್ಕೆ ಇಂದಿಗೂ ಸವಾಲಾಗಿರುವ ಒಂದು ವ್ಯವಸ್ಥಿತ ನಗರ ಅದಾಗಿತ್ತು.

ಭೂಮಿಯ ಮೇಲ್ಮೈಯಿಂದ ಸುಮಾರು 280 ಅಡಿ ಆಳದವರೆಗೆ ಇದ್ದ ಈ ಪ್ರದೇಶದಲ್ಲಿ ಒಟ್ಟು 18 ಮಹಡಿಗಳ ಬೃಹದಾಕಾರ ನಿರ್ಮಾಣ ಆ ಪ್ರದೇಶದಲ್ಲಿತ್ತು, ವಾಯು ಸಂಚಾರಕ್ಕಾಗಿ, ಸಾವಿರಾರು ಕಡೆ  ಸಣ್ಣ ಗಾಳಿ ರಂಧ್ರಗಳನ್ನು ನಿರ್ಮಿಸಲಾಗಿತ್ತು. ವಾಸದ ಕೋಣೆಗಳು, ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು. ಸುಮಾರು 20,000 ಜನರು ಆರಾಮವಾಗಿ ವಾಸಿಸಬಹುದಾದ ಬೃಹತ್ ನಗರವಾಗಿತ್ತು. ಇಲ್ಲಿ ಕೇವಲ ವಾಸದ ಕೋಣೆಗಳಿರಲಿಲ್ಲ; ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು!


*18 ಹಂತಗಳ ರಚನೆ*: ಭೂಮಿಯ ಮೇಲ್ಮೈಯಿಂದ ಸುಮಾರು **280 ಅಡಿ** ಆಳದವರೆಗೆ ಹರಡಿರುವ ಈ ನಗರವು ಸುಮಾರು 18 ಅಂತಸ್ತುಗಳನ್ನು ಹೊಂದಿದ್ದು, ಪ್ರತಿಯೊಂದು ಅಂತಸ್ತೂ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆಯಾಗುತ್ತಿತ್ತು:

* ಮೇಲಿನ ಅಂತಸ್ತುಗಳು: ಇಲ್ಲಿ ಮುಖ್ಯವಾಗಿ ವಾಸದ ಮನೆಗಳು ಮತ್ತು ಪಶುಗಳ ಕೊಟ್ಟಿಗೆಗಳಿದ್ದವು. ಇದರಿಂದ ಪ್ರಾಣಿಗಳ ವಾಸನೆ ಸುಲಭವಾಗಿ ಹೊರಹೋಗುತ್ತಿತ್ತು.

* ಮಧ್ಯದ ಅಂತಸ್ತುಗಳು: ಇಲ್ಲಿ ಅಡುಗೆಮನೆಗಳು, ಧಾನ್ಯದ ಉಗ್ರಾಣಗಳು, ಮತ್ತು ದ್ರಾಕ್ಷಾರಸ (Wine) ತಯಾರಿಸುವ ಘಟಕಗಳಿದ್ದವು.

* ಕೆಳಗಿನ ಅಂತಸ್ತುಗಳು: ಇಲ್ಲಿ ಚರ್ಚ್‌ಗಳು, ಧಾರ್ಮಿಕ ಶಾಲೆಗಳು ಮತ್ತು ಸಭೆ ನಡೆಸುವ ಸ್ಥಳಗಳಿದ್ದವು. ಇವು ಅತ್ಯಂತ ಸುರಕ್ಷಿತ ಪ್ರದೇಶಗಳಾಗಿದ್ದವು.

* ವಾಯು ಸಂಚಾರ:  ಭೂಮಿಯ ಆಳಕ್ಕಿಳಿದಂತೆ, ಗಾಳಿಯ ಸಂಚಾರ ಕಡಿಮೆ ಯಿರುತ್ತದೆ, ಆಮ್ಲಜನಕ ಸಮಸ್ಯೆ ಕಾಡುವುದು ಸಹಜ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದರು, ಭೂಮಿಯ 280 ಅಡಿ ಆಳದಲ್ಲಿ ಸಾವಿರಾರು ಜನರಿಗೆ ಉಸಿರಾಡಲು ಗಾಳಿ ಮತ್ತು ಕುಡಿಯಲು ನೀರು ಒದಗಿಸುವುದು ಸುಲಭದ ಮಾತಲ್ಲ. ಎಂಟನೇ ಹಂತದವರೆಗೆ ತಾಜಾ ಗಾಳಿ ಒಳಗೆ ಬರಲು ಸುಮಾರು 15,000 ಕ್ಕೂ ಹೆಚ್ಚು ಸಣ್ಣ ಕಿಂಡಿಗಳು (ಸುಮಾರು 10 ಸೆಂ.ಮೀ ಅಗಲ) ಕೊರೆದಿದ್ದರು. 

* ನೀರಿನ ವ್ಯವಸ್ಥೆ:  ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ, ನಗರದ ಒಳಗೇ ಗುಪ್ತ ಬಾವಿಗಳಿನ್ನೂ ಸಹ ಅಗೆದಿದ್ದರು. ಹೊರಗಿನಿಂದ ಒಳಗೆ ನೀರು ಬರಲು ವ್ಯವಸ್ಥೆ ಇದ್ದರೂ ಸಹಿತ, ಮುಂಜಾಗ್ರತೆಗಾಗಿ ಈ ಗುಪ್ತ ಬಾವಿಗಳನ್ನು ಕೊರೆದಿದ್ದರು. ಒಂದುವೇಳೆ, ಶತ್ರುಗಳು ಹೊರಗಿನ ನೀರಿನ ಮೂಲಕ್ಕೆ ವಿಷ ಬೆರೆಸಿದರೂ, ನಗರದ ಒಳಗಿದ್ದವರಿಗೆ ನೀರಿನ ತೊಂದರೆಯಾಗುತ್ತಿರಲಿಲ್ಲ. 

*ಕಲ್ಲಿನಲ್ಲಿ ಅರಳಿದ ನಗರ: ಭೂವಿಜ್ಞಾನದ ಕೊಡುಗೆ:*

ಮೇಲೆ ವಿವರಿಸಿದ ಎಲ್ಲಾ ಸೌಲಭ್ಯಗಳನ್ನು ಅದೂ ಭೂಗರ್ಭದಲ್ಲಿ ಹೇಗೆ ನಿರ್ಮಿಸಲಾಯಿತು ಎಂದು ವಿಜ್ನಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಾರೆ. ಮೊದಲಿಗೆ ಆ ಪ್ರದೇಶದ ಪರಿಸರ, ಅಲ್ಲಿ ಹಿಂದೆ ನಡೆದಿದ್ದ ನೈಸರ್ಗಿಕ ಪ್ರಕ್ರಿಯೆಗಳು ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿದಾಗ, ಮೊದಲ ಕಂಡುಬಂದಿದ್ದು ಅಲ್ಲಿನ ಭೂರಚನೆ. ಕಪ್ಪಡೋಕಿಯಾ ಪ್ರದೇಶದ ವಿಶೇಷತೆಯೆಂದರೆ ಅಲ್ಲಿನ  ಜ್ವಾಲಾಮುಖಿ ಭಸ್ಮ (Volcanic Tuff). ಈ ಜ್ವಾಲಾಮುಖಿಯ ಬೂದಿ ಕಾಲಕ್ರಮೇಣ ಕಲ್ಲಿನಂತಾಗಿವೆ. ಆರಂಭದಲ್ಲಿ  ಈ ಕಲ್ಲುಗಳು ಮೃದುವಾಗಿದ್ದು, ಗಾಳಿಗೆ ಒಡ್ಡಿಕೊಂಡ ನಂತರ ಇವು ಗಟ್ಟಿಯಾಗುತ್ತವೆ. ಈ ವಿಶಿಷ್ಟ ಭೂಗುಣದಿಂದಾಗಿಯೇ ಪ್ರಾಚೀನ ಜನರಿಗೆ ಇಂತಹ ಬೃಹತ್ ಭೂಗರ್ಭ ನಗರವನ್ನು ನಿರ್ಮಿಸಲು ಸಾಧ್ಯವಾಯಿತು.  ಚೂಪಾದ ಕಲ್ಲು ಅಥವ ಹುಳಿ( ಚಿಸೆಲ್) ಮತ್ತು ಸುತ್ತಿಗೆ ಇದ್ದರೆ ಸಾಕು, ಸಲೀಸಾಗಿ ಈ ಕಲ್ಲುಗಳನ್ನು ಕತ್ತರಿಸಬಹುದು.

*ರಕ್ಷಣೆ ಮತ್ತು ಯುದ್ಧತಂತ್ರ*:

ಅಂದಿನ ಕಾಲದಲ್ಲಿ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಕೋಟೆ ಕೊತ್ತಲುಗಳನ್ನು ನಿರ್ಮಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದೇ ತಂತ್ರವನ್ನು ಇಲ್ಲಿ ನೆಲೆಸಿದ್ದ ಅಂದಿನ ಕಾಲದ ಜನರು ತಮ್ಮ ರಕ್ಷಣೆಗಾಗಿ ಪ್ರಮುಖವಾಗಿ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಭೂಮಿಯ ಅಡಿಯಲ್ಲಿ ಇಡೀ ಜಗತ್ತನ್ನೇ ಸೃಷ್ಟಿಸಿಕೊಂಡಿದ್ದರೆಂದು ಸಂಶೋಧನೆ ಮೂಲಕ ಗೊತ್ತಾಯಿತು. ಇಲ್ಲಿನ ಭೌಗೋಳಿಕ ಪರಿಸರ ಅಥವಾ ಭೂರಚನೆ ಅವರಿಗೆ ಇಂತಹ ರಕ್ಷಣಾತ್ಮಕ ನಗರವನ್ನು ಕಟ್ಟಿಕೊಳ್ಳಲು ನೆರವು ನೀಡಿದೆ ಎನ್ನಬಹುದು.  ಈ ನಗರದ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ಭದ್ರತೆ.

ಕಲ್ಲಿನ ಬಾಗಿಲುಗಳು: 

ಇಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತೆಂದರೆ, ಒಳಗಿನಿಂದ ಮಾತ್ರ ತೆರೆಯಬಹುದಾದ ಬೃಹತ್ ಗುಂಡಿನಾಕಾರದ ಕಲ್ಲುಗಳನ್ನು ದಾರಿಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪ್ರತಿಯೊಂದು ಅಂತಸ್ತನ್ನು ಸುಮಾರು 500 ಕೆ.ಜಿ. ತೂಕದ ಬೃಹತ್ ಚಕ್ರಾಕಾರದ ಕಲ್ಲಿನ ಬಾಗಿಲುಗಳಿಂದ ಮುಚ್ಚಬಹುದಾಗಿತ್ತು. 

ಕಿರಿದಾದ ಸುರಂಗಗಳು: 

ಸುರಂಗಗಳು ಬಹಳ ಕಿರಿದಾಗಿದ್ದವು, ಇದರಿಂದ ಶತ್ರು ಸೈನಿಕರು ಗುಂಪಾಗಿ ಒಳಬರಲು ಸಾಧ್ಯವಿರಲಿಲ್ಲ; ಒಬ್ಬೊಬ್ಬರಾಗಿ ಬರಬೇಕಿತ್ತು, ಇದರಿಂದ ಕಾವಲು ಕಾಯುತಿದ್ದ ರಕ್ಷಕರಿಗೆ ಆಕ್ರಮಣಕಾರರನ್ನು ಎದುರಿಸುವುದು ಸುಲಭವಾಗುತ್ತಿತ್ತು. ಓಬವ್ವನ ಕಿಂಡಿಯಲ್ಲಿ ಒಬ್ಬೊಬ್ಬರೆ ಒಳ ಬರುವಂತಹ ರೀತಿಯಲ್ಲಿ ಅತಿ ಕಿರಿದಾದ ಮಾರ್ಗಗಳಿದ್ದವು, ಆದರೆ, ಬಗ್ಗಿಕೊಂಡು ನುಸುಳಿ ಬರುವಂತೆ ಅಲ್ಲ. 

ಈ ನಗರವನ್ನೆನೂ ಕೆಲವೇ ವರ್ಷಗಳಲ್ಲಿ ನಿರ್ಮಿಸಲಾಗಿರಲಿಲ್ಲ. ನೂರಾರು ವರ್ಷಗಳ ಕಾಲ ಹಂತಹಂತವಾಗಿ ಈ ನಗರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ಕ್ರಿ.ಪೂ. 2000ರ ಕಾಲಕ್ಕೆ ಸೇರಿದ ಹಿಟ್ಟೈಟ್ ಜನಾಂಗದವರು ಈ ಕಟ್ಟಡದ ಕೆಲಸವನ್ನು ಶುರು ಮಾಡಿದ್ದರು. ತದನಂತರ ಫ್ರಿಜಿಯನ್‌ ಸಮುದಾಯದವರು (ಕ್ರಿ. ಪೂರ್ವ 1600 -1200)ಮುಂದುವರಿಸಿಕೊಂಡು ಹೋಗಿದ್ದಾರೆ. ತದನಂತರ ಹಲವಾರು ನಾಗರೀಕತೆಯ ಜನಾಂಗದವರು ಇದನ್ನು ಅಭಿವೃದ್ದಿ ಪಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಸಾವಿರಾರು ವರ್ಷಗಳ ಹಿಂದೆ ಹಿಟ್ಟೈಟ್‌ಗಳು ಮತ್ತು ಫ್ರಿಜಿಯನ್‌ ಸಮುದಾಯಗಳು (Hittites and Phrygians) ಈ ನಗರವನ್ನು ನಿರ್ಮಿಸಿರಬಹುದು ಎನ್ನಲಾಗಿದೆ. 

ರೋಮನ್ ಆಳ್ವಿಕೆಯ ಆರಂಭಿಕ ಶತಮಾನಗಳಲ್ಲಿ (2 ಮತ್ತು 3ನೇ ಶತಮಾನ), ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಕಾನೂನುಬಾಹಿರ ಅಥವಾ ಅನುಮಾನದಿಂದ ನೋಡಲಾಗುತ್ತಿತ್ತು. ಟರ್ಕಿ ದೇಶದ ಕಪ್ಪಡೋಸಿಯಾ  ರೋಮನ್ ಪ್ರಾಂತ್ಯವಾಗಿದ್ದರಿಂದ, ಸ್ಥಳೀಯ ಮತಾಂತರಿಗಳು ರೋಮನ್ ಸಾಮ್ರಾಜ್ಯದ ಕಿರುಕುಳದಿಂದ ತಪ್ಪಿಸಿಕೊಳ್ಳಲು ಡೆರಿಂಕ್ಯೂ ದಂತಹ ಭೂಗತ ನಗರಗಳಲ್ಲಿ ಬಚ್ಚಿಟ್ಟುಕೊಂಡು ಜೀವಿಸಲು ಪ್ರಾರಂಭಿಸಿದರು,  ಇದಕ್ಕೆ ಪುರಾವೆಯೆಂಬಂತೆ, ಪುರಾತತ್ತ್ವಜ್ಞರು ಸಂಶೋಧನೆ ನಡೆಸುವಾಗ ಸುರಂಗಗಳ ಒಳಗೆ ರೋಮನ್ ಯುಗದ ನಾಣ್ಯಗಳು ಮತ್ತು ಎಣ್ಣೆ ದೀಪಗಳು ದೊರಕಿವೆ, ಇದು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿದ್ದಾಗ ಇಲ್ಲಿನ ಜನರು ಈ ಜಾಗದಲ್ಲಿ ವಾಸಿಸುತ್ತಿದ್ದರು ಅಥವಾ ಅಡಗಿಕೊಂಡಿದ್ದರು. ಇದೇ ಸಮಯದಲ್ಲಿ ಇಲ್ಲಿ ವಾಸವಿದ್ದ ಜನರು ರಕ್ಷಣಾತ್ಮಕ ವ್ಯವಸ್ಥೆಯನ್ನು ಇನ್ನೂ ಕಠಿಣಗೊಳಿಸಿದರು. ನಂತರ,  ಅರಬ್-ಬೈಜಾಂಟೈನ್ ಯುದ್ಧಗಳ(ಕ್ರಿ.ಶ. 780–1180)  ಸಮಯದಲ್ಲಿ ಅರಬ್ ದಾಳಿಗಳಿಂದ ಇಲ್ಲಿ ವಾಸಿಸುತಿದ್ದ ನಿವಾಸಿಗಳನ್ನು ರಕ್ಷಿಸಲು ಇದೇ ಸುರಂಗಗಳನ್ನು ಇನ್ನಷ್ಟು ವಿಸ್ತರಿಸಲಾಯಿತು. ಅದೇ ಸಮಯದಲ್ಲಿ ಸುಮಾರು 20,000 ಜನಸಂಖ್ಯೆಯ ಗರಿಷ್ಠ ಜನಸಂಖ್ಯೆಯನ್ನು ತಲುಪಿತು ಎಂದು ಅಂದಾಜಿಸಲಾಗಿದೆ.

*ಪ್ರಾಚೀನ ಭಾರತೀಯ ನಂಟು ಮತ್ತು ಇತಿಹಾಸ*

ಈ ನಗರದ ಮೇಲಿನ ಹಂತಗಳಲ್ಲಿ ಕ್ರಿ.ಪೂ. 2000ರ ಕಾಲದ **ಹಿಟ್ಟೈಟ್ (Hittites)** ಸಂಸ್ಕೃತಿಯ ಕುರುಹುಗಳು ಸಿಕ್ಕಿವೆ. ಇತಿಹಾಸಕಾರರ ಪ್ರಕಾರ, ಈ ಹಿಟ್ಟೈಟ್‌ಗಳು ಇಂಡೋ-ಯೂರೋಪಿಯನ್ ಮೂಲದವರಾಗಿದ್ದು, ಹಿಟ್ಟೈಟ್‌ ಸಮುದಾಯ ಮತ್ತು ಪ್ರಾಚೀನ ಭಾರತದ ನಡುವೆ ಆಳವಾದ ಸಂಪರ್ಕವಿದೆ, ಏಕೆಂದರೆ ಅವರು ಋಗ್ವೇದದಂತಹ ಪವಿತ್ರ ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಆರ್ಯರೊಂದಿಗೆ ಸಂಬಂಧಿಸಿದ ವಿಶಾಲ ಇಂಡೋ-ಯೂರೋಪಿಯನ್ ವಲಸೆಯ ಭಾಗವಾಗಿದ್ದರು. ಇವರು ಸಹ ಭಾರತೀಯರಂತೆ ಬಹುದೇವತ ಆರಾಧಕರಾಗಿದ್ದರು. ಕಳೆದ ಶತಮಾನದಲ್ಲಿ ನಡೆದ ಸಂಶೋಧನೆ ಪ್ರಕಾರ ಇವರು ಸರ್ವ ಧರ್ಮ ಸಹಿಷ್ಣುಗಳಾಗಿದ್ದರು. ಜಾತ್ಯಾತೀತ ಮೌಲ್ಯಗಳಿಗೂ ಸಹ ಒತ್ತು ಕೊಟ್ಟಿದ್ದರು. ನಮ್ಮಲ್ಲಿನ ಹಬ್ಬಗಳು, ಜಾತ್ರೆಗಳು ಹೇಗೆ ಪ್ರಕೃತಿಗೆ ಸಂಭಂಧಿಸಿದವಾಗಿದ್ದವೋ ಅದೇ ರೀತಿ ಅವರು ಸಹ ಸುಗ್ಗಿ, ಹೊಸ ವರ್ಷ, ಇತ್ಯಾದಿಗಳನ್ನು ಆಚರಿಸುತಿದ್ದರು.  ಕೆಲ ಹಬ್ಬಗಳ ಆಚರಣೆಯಲ್ಲಿ ದೇವರುಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತಿದ್ದರಂತೆ. ಭಾರತದಲ್ಲಿದ್ದಂತೆ ರಾಜಾಡಳಿತ ಅಲ್ಲಿಯೂ ಇತ್ತು,  ಜನರ ಆಪೇಕ್ಷೆ, ಇಚ್ಚೆ, ಕಷ್ಟ ನಷ್ಟಗಳ ಬಗ್ಗೆ ಅರಿವಿಟ್ಟುಕೊಂಡು ಆಡಳಿತ ನಡೆಸುತಿದ್ದರು. ಇವರ ಮೇಲೆ ಆಕ್ರಮಣಗಳು ಹೆಚ್ಚಾದಂತೆ, ಇವರ ಅರಸೊತ್ತಿಗೆ ನಶಿಸಿಹೋಯಿತು. ನಂತರ ಬಂದ ಹಲವಾರು ಶತ್ರುಗಳು  ಈ ಭಾಗವನ್ನು ಆಕ್ರಮಿಸಿಕೊಂಡಿದ್ದರೂ ಬಹುಕಾಲ ಮುಂದುವರೆಯಲಿಲ್ಲ.

    ಮುಂದೆ ಅಲ್ಲಿ ನೆಲೆಕಂಡುಕೊಂಡ  ಫ್ರಿಜಿಯನ್‌ ಸಮುದಾಯವು ಸಹ ಇನ್ನೊಂದು ಇಂಡೋ-ಯೂರೋಪಿಯನ್ ಗುಂಪಾಗಿದ್ದರು. ಈ ನಗರದಲ್ಲಿನ ಕೆಳಗಿನ ಹಂತಗಳು ಲೋಹ ಯುಗದಲ್ಲಿ ಫ್ರಿಜಿಯನ್‌ಗಳಿಂದ ನಿರ್ಮಾಣ ಮುಂದುವರಿದಿದ್ದನ್ನು ಸೂಚಿಸುತ್ತವೆ.  ಇವರು ಸಹ ಇಂಡೋ ಆರ್ಯನ್ ಮೂಲದವರಾಗಿದ್ದರಿಂದ ಭಾರತೀಯ ಪೂರ್ವಜರಿಗೂ ಇವರಿಗೂ, ವಾಸ್ತುಶಿಲ್ಪ ಕೌಶಲ್ಯ ಸೇರಿದಂತೆ ಹಲವಾರು ವಿಚಾರಗಳಲ್ಲಿ ಮತ್ತು ವಿಷಯಗಳಲ್ಲಿ ಹೋಲಿಕೆಗಳಿದ್ದವು. 

*ಮರುಹುಟ್ಟು*:

1920ರ ದಶಕದ ಗ್ರೀಕೊ-ಟರ್ಕಿಷ್ ಯುದ್ಧದ ನಂತರ ಈ ನಗರದ ರಹಸ್ಯಗಳು ಜನರ ನೆನಪಿನಿಂದ ಮರೆಯಾಗಿದ್ದವು. ಆದರೆ 1963ರ ಆ ರೈತನ "ಕೋಳಿ ಕಳೆದುಹೋದ" ಘಟನೆಯಿಂದಾಗಿ ಈ ಅದ್ಭುತ ಪ್ರಪಂಚಕ್ಕೆ ಮತ್ತೆ ಜೀವ ಬಂದಿತು. 1985ರಲ್ಲಿ ಯುನೆಸ್ಕೋ (UNESCO)  ಇದನ್ನು **ವಿಶ್ವ ಪರಂಪರೆ ತಾಣ** ಎಂದು ಘೋಷಿಸಿದೆ. ನಮ್ಮ ಕಾಲದ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ, ಕೇವಲ ಕೈ ಉಪಕರಣಗಳಿಂದ ಇಂತಹ ಬೃಹತ್ ನಗರವನ್ನು ನಿರ್ಮಿಸಿದ್ದು ಮಾನವನ ಬುದ್ಧಿಶಕ್ತಿಗೆ ಹಿಡಿದ ಕನ್ನಡಿಯಾಗಿದೆ, ಮಾನವ ಇತಿಹಾಸದ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.. ಡೆರಿಂಕ್ಯು ನಗರ ನಮಗೆ ಕಲಿಸುವ ಪಾಠವೇನೆಂದರೆ ಮನುಷ್ಯನಿಗೆ ಬದುಕುವ ಛಲವಿದ್ದರೆ ಭೂಮಿಯ ಆಳದಲ್ಲೂ ಸ್ವರ್ಗವನ್ನು ಸೃಷ್ಟಿಸಬಲ್ಲ. 

ಟರ್ಕಿಯ ಕಪ್ಪಡೋಕಿಯಾದ ಪ್ರಮುಖ ಆಕರ್ಷಣೆಗಳು:

ಇಂದು ಈ ಪ್ರದೇಶ ಪ್ರವಾಸಿಗರ ಪ್ರಮುಖ ಭೇಟಿಯ ತಾಣವಾಗಿ ಮಾರ್ಪಟ್ಟಿದೆ. ಟರ್ಕಿಗೆ ಭೇಟಿ ನೀಡುವ ಲಕ್ಷಾಂತರ ವಿದೇಶಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ.   


೧) ಹಾಟ್ ಏರ್ ಬಲೂನ್ ಸವಾರಿ: ಮುಂಜಾನೆಯ ಸೂರ್ಯೋದಯದ ಸಮಯದಲ್ಲಿ ನೂರಾರು ಬಲೂನ್‌ಗಳು ಬಂಡೆಗಳ ಮೇಲೆ ಹಾರಾಟ ನಡೆಸುವುದು ಪ್ರಮುಖ ಆಕರ್ಷಣೆಯಾಗಿದೆ.






೨) ಗೋರೆಮ್ ಓಪನ್ ಏರ್ ಮ್ಯೂಸಿಯಂ: ಬಂಡೆಗಳನ್ನು ಕೊರೆದು ನಿರ್ಮಿಸಲಾದ ಚರ್ಚ್‌ಗಳು ಮತ್ತು ಹಳೆಯ ಕಾಲದ ಹಸಿಚಿತ್ರಗಳನ್ನು ಇಲ್ಲಿ ನೋಡಬಹುದು.




೩) ಭೂಗರ್ಭ ನಗರಗಳು (Underground Cities): ಡೆರಿಂಕುಯು (Derinkuyu) ಮತ್ತು ಕೈಮಾಕ್ಲಿ (Kaymakli) ಭೂಮಿಯ ಆಳದಲ್ಲಿರುವ ಈ ಪ್ರಾಚೀನ ನಗರಗಳಿಗೆ ಭೇಟಿ ನೀಡಬಹುದು.


೪) ಗುಹೆ ಹೋಟೆಲ್‌ಗಳು ( Cave Hotels): ಬಂಡೆಗಳನ್ನು ಕೊರೆದು ನಿರ್ಮಿಸಲಾದ ಮನೆಗಳಲ್ಲಿ ತಂಗುವ ವಿಶಿಷ್ಟ ಅನುಭವವನ್ನು ನೀವು ಇಲ್ಲಿ ಹೊಂದ ಬಹುದು.







೫) ಪಾರಿವಾಳಗಳ ಕಣಿವೆ (Pigeon Valley) & ಲವ್ ವ್ಯಾಲಿ: ವಿಶಿಷ್ಟವಾದ ಕಲ್ಲುಗಳ ರಚನೆಗಳು ಮತ್ತು ಹೈಕಿಂಗ್‌ಗೆ ಸೂಕ್ತ ಸ್ಥಳ, ಹೈಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. 





ಭೇಟಿ ನೀಡಲು ಉತ್ತಮ ಸಮಯ:

ವಸಂತ (ಏಪ್ರಿಲ್-ಜೂನ್) ಮತ್ತು ಶರತ್ಕಾಲ (ಸೆಪ್ಟೆಂಬರ್-ಅಕ್ಟೋಬರ್) ಹವಾಮಾನವು ಹಿತಕರವಾಗಿರುತ್ತದೆ, ಇದು ಬಲೂನ್ ಸವಾರಿಗೆ ಉತ್ತಮ ಸಮಯ. 


ತಲುಪುವುದು ಹೇಗೆ?:

ಕೈಸೇರಿ (Kayseri) ಅಥವಾ ನೆವ್ಸೆಹಿರ್ (Nevşehir) ವಿಮಾನ ನಿಲ್ದಾಣಗಳ ಮೂಲಕ ಕಪ್ಪಡೋಕಿಯಾವನ್ನು ಸುಲಭವಾಗಿ ತಲುಪಬಹುದು. ಇಸ್ತಾಂಬುಲ್‌ನಿಂದ ಇಲ್ಲಿಗೆ ಪ್ರಯಾಣಿಸಲು ವಿಮಾನ ಅಥವಾ ಬಸ್ ವ್ಯವಸ್ಥೆಯಿದೆ.

ಬರಹ: ಪಿಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ.






ಶುಕ್ರವಾರ, ಫೆಬ್ರವರಿ 20, 2026

ಮೊಳಕಾಲ್ಮೂರು ತಾಲೂಕಿಗೆ ಅಭಿವೃದ್ಧಿಯ ಬೆಳಕು ಯಾವಾಗ?

 


ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪ್ರಸಿದ್ಧ ರೇಷ್ಮೆ ಸೀರೆಗಳ ತವರೂರಾಗಿದ್ದರೂ, ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದೆ. ರಾಜ್ಯದಲ್ಲಿನ ಪ್ರಾದೇಶಿಕ ಅಸಮಾನತೆ, ವಿಶೇಷವಾಗಿ ಉತ್ತರ ಕರ್ನಾಟಕದ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು 2000ದಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಯಿತು. ವರದಿ 2002ರಲ್ಲಿ ಸಲ್ಲಿಕೆಯಾಯಿತು. ವರದಿ ಸಲ್ಲಿಸಿ ಇಷ್ಟುವರ್ಷವಾದರೂ ಮೊಳಕಾಲ್ಮೂರುವಿನ ಅಭಿವೃದ್ದಿ ಮರೀಚಿಕೆಯಾಗಿರುವುದು ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಎನ್ನುವುದು ತಾಲೂಕಿನ ಎಲ್ಲರಿಗೂ ತಿಳಿದಿರುವ ವಿಷಯ. ರಾಜಕಾರಣಿಗಳಿಗೆ ತಾಲೂಕಿನ ಅಭಿವೃದ್ದಿ ಬಗ್ಗೆ ದೂರದೃಷ್ಟಿ ಇಲ್ಲದೆ ಇರುವುದರಿಂದ ತಾಲೂಕ್ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ.  



ತಾಲೂಕಿನ ಪ್ರಮುಖ ಸಮಸ್ಯೆಗಳು:


೧. ಭೌಗೋಳಿಕ ಮತ್ತು ಹವಾಮಾನ ವೈಪರೀತ್ಯ (ಬರಪೀಡಿತ ಪ್ರದೇಶ):

 * ಮಳೆಯ ಕೊರತೆ: ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಮಳೆನೆರಳಿನ ಪ್ರದೇಶದಲ್ಲಿದೆ. ಇಲ್ಲಿ ವಾರ್ಷಿಕ ಮಳೆ ಪ್ರಮಾಣ ಬಹಳ ಕಡಿಮೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

 * ಬಯಲುಸೀಮೆ ಮತ್ತು ಕಲ್ಲುಬಂಡೆಗಳು: ಇಲ್ಲಿನ ಭೂಪ್ರದೇಶವು ಹೆಚ್ಚಾಗಿ ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾದ ಫಲವತ್ತಾದ ಭೂಮಿಯ ಕೊರತೆಯಿದೆ.

೨. ನೀರಿನ ತೀವ್ರ ಅಭಾವ:

 * ಶಾಶ್ವತ ನೀರಾವರಿ ಇಲ್ಲದಿರುವುದು: ತಾಲೂಕಿನಲ್ಲಿ ಯಾವುದೇ ದೊಡ್ಡ ನದಿಗಳು ಹರಿಯುವುದಿಲ್ಲ. ದಶಕಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆಯ ನಿರೀಕ್ಷೆಯಲ್ಲೇ ಜನರಿದ್ದಾರೆ. ಕೃಷಿಗೆ ಸಂಪೂರ್ಣವಾಗಿ ಮಳೆ ಅಥವಾ ಬೋರ್‌ವೆಲ್‌ಗಳನ್ನೇ ಆಶ್ರಯಿಸಬೇಕಿದೆ.   

 * ಅಂತರ್ಜಲ ಕುಸಿತ: ಮಳೆ ಇಲ್ಲದ ಕಾರಣ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ.

 * ಫ್ಲೋರೈಡ್ ಯುಕ್ತ ನೀರು: ಲಭ್ಯವಿರುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

೩. ಕೃಷಿ ಸಂಕಷ್ಟ:

 * ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಪ್ರತಿವರ್ಷ ನಷ್ಟ ಅನುಭವಿಸುವಂತಾಗಿದೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಕಡಿಮೆಯಿದೆ.

೪. ನೇಕಾರರ ಸಮಸ್ಯೆಗಳು:

 * ಕಚ್ಚಾ ವಸ್ತುಗಳ ಬೆಲೆ ಏರಿಕೆ: ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಜಾಗತಿಕ ಮನ್ನಣೆ ಇದ್ದರೂ, ಇಲ್ಲಿನ ನೇಕಾರರ ಬದುಕು ಹಸನಾಗಿಲ್ಲ. ರೇಷ್ಮೆ ನೂಲಿನ ಬೆಲೆ ಏರಿಕೆ ಮತ್ತು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ನೇಕಾರರಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರಿಂದಾಗಿ ಅನೇಕರು ಕುಲಕಸುಬನ್ನು ಬಿಡುತ್ತಿದ್ದಾರೆ.

೫. ಭೌಗೋಳಿಕ ಪ್ರತ್ಯೇಕತೆ (ಗಡಿ ಭಾಗದ ನಿರ್ಲಕ್ಷ್ಯ):

 * ಇದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲೂಕು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಾಗೂ ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದಲೂ ಸಾಕಷ್ಟು ದೂರದಲ್ಲಿರುವುದರಿಂದ, ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

೬. ಗುಳೆ ಹೋಗುವಿಕೆ (ವಲಸೆ):

 * ಊರಿನಲ್ಲಿ ಉದ್ಯೋಗವಿಲ್ಲದೆ, ಕೃಷಿ ಮಾಡಲು ನೀರಿಲ್ಲದೆ, ಜನರು ಹೊಟ್ಟೆಪಾಡಿಗಾಗಿ ಬೆಂಗಳೂರು ಅಥವಾ ಇತರ ದೊಡ್ಡ ನಗರಗಳಿಗೆ ಕೂಲಿ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಯುವಜನತೆ ಊರು ಬಿಡುತ್ತಿರುವುದರಿಂದ ಸ್ಥಳೀಯ ಅಭಿವೃದ್ಧಿ ಕುಂಠಿತವಾಗಿದೆ.

೭. ಕೈಗಾರಿಕೆಗಳ ಕೊರತೆ:

 * ಕೃಷಿ ಆಧಾರಿತ ಅಥವಾ ಜವಳಿ ಆಧಾರಿತ ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.

    ಮೊಳಕಾಲ್ಮೂರು ಪಟ್ಟಣಕ್ಕೆ ರೈಲು ಸಂಪರ್ಕವಿದ್ದರೂ ಇದು ತಾಲೂಕಿನ ಪ್ರಮುಖಭಾಗವಾದ ರಾಂಪುರವನ್ನು ಸಂಪರ್ಕಿಸುವುದಿಲ್ಲ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುವ ರಾಂಪುರ ಪಟ್ಟಣವು ರೈಲ್ವೆ ಸೌಲಭ್ಯದಿಂದ ವಂಚಿತವಾಗಿದೆ. ರಾಂಪುರವು ಅತಿ ವೇಗವಾಗಿ ಬೆಳೆಯುತ್ತಿರುವ ಊರಾಗಿದ್ದು ಈ ಭಾಗದಲ್ಲಿ ಪ್ರಮುಖ ವಾಣಿಜ್ಯಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಇಂದಿಗೂ ಸರ್ಕಾರಿ ಪ್ರೌಡಶಾಲೆ, ಸರ್ಕಾರಿ ಪದವಿ ಕಾಲೇಜು ಇಲ್ಲ. 

ಮೈಸೂರು ರಾಜ್ಯವನ್ನು 'ಮಾದರಿ ಸಂಸ್ಥಾನ'ವನ್ನಾಗಿ ರೂಪಿಸಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರ ಆಳ್ವಿಕೆಯಲ್ಲಿ ಕೇವಲ ಬೃಹತ್ ಅಣೆಕಟ್ಟುಗಳು ಅಥವಾ ಶಿಕ್ಷಣ ಸಂಸ್ಥೆಗಳು ಮಾತ್ರ ನಿರ್ಮಾಣವಾಗಲಿಲ್ಲ; ಬದಲಾಗಿ, ಹಳ್ಳಿಗಳ ಮೂಲೆಯಲ್ಲಿ ನಶಿಸಿಹೋಗುತ್ತಿದ್ದ ಸಾಂಪ್ರದಾಯಿಕ ಕಲೆಗಳಿಗೂ ಹೊಸ ಜೀವ ಕಳೆ ನೀಡಲಾಯಿತು. ಅದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಮೊಳಕಾಲ್ಮೂರು ಕೈಮಗ್ಗ ಉದ್ಯಮ ಪ್ರಮುಖವಾದುದು. ಸಾಂಪ್ರದಾಯಿಕ ನೇಕಾರರು ತಮ್ಮ ಹಳೆಯ ಶೈಲಿಯ ನೇಯ್ಗೆಯನ್ನು ಮುಂದುವರಿಸಲು ಮಹಾರಾಜರು ಬೆನ್ನೆಲುಬಾಗಿ ನಿಂತರು. ಅವರಿಗೆ ಬೇಕಾದ ಕಚ್ಚಾ ಸಾಮಗ್ರಿ ಮತ್ತು ಮಾರುಕಟ್ಟೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ, ಮೊಳಕಾಲ್ಮೂರು ರೇಷ್ಮೆ ಸೀರೆಗಳು ದೇಶಾದ್ಯಂತ ಗುರುತಿಸಿಕೊಳ್ಳುವಂತೆ ಮಾಡಿದರು. ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿ. ಅವರು ಹಾಕಿಕೊಟ್ಟ ಈ ಬಲಿಷ್ಠ ಅಡಿಪಾಯದಿಂದಾಗಿಯೇ ಇಂದು ಮೊಳಕಾಲ್ಮೂರು ಸೀರೆಗಳು ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿವೆ.

  


 ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಯಾಗಿರು ವುದರಿಂದ, ನೇಕಾರರನ್ನು ಪ್ರೋತ್ಸಾಹಿಸಲು 'ಜವಳಿ ಪಾರ್ಕ್' ಅಥವಾ ಮಿನಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯ ಪ್ರಸ್ತಾಪಗಳಿವೆ. ನೇಕಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಮಾರುಕಟ್ಟೆ ಸೌಲಭ್ಯ ದೊರೆಯಬೇಕು ಹಾಗೂ ಗುಳೆ ಹೋಗುವುದನ್ನು ತಡೆಯಲು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕು.  

    ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಮೊಳಕಾಲ್ಮೂರು ಅಭಿವೃದ್ಧಿ ಹೊಂದಬೇಕಾದರೆ ಪ್ರಮುಖವಾಗಿ ಧೀರ್ಘಕಾಲಿಕ ನೀರಾವರಿ ಯೋಜನೆ ಜಾರಿಯಾಗಬೇಕಿದೆ, ಮೊಳಕಾಲ್ಮೂರಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಸುಧಾರಿಸಿ, ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಲಿದೆ.

    ತುಂಗಭದ್ರಾ ನದಿ ಹಿನ್ನೀರಿನಿಂದ ಅಥವಾ ಶಾಶ್ವತ ಮೂಲಗಳಿಂದ ತಾಲೂಕಿನ ಫ್ಲೋರೈಡ್ ಪೀಡಿತ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಅಳವಡಿಕೆ ಮತ್ತು ಶುದ್ಧ ನೀರಿನ ಘಟಕಗಳ ಸ್ಥಾಪನೆ ಪ್ರಗತಿಯಲ್ಲಿದೆ. ಶುದ್ದ ಕುಡಿಯುವ ನೀರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ತಲುಪಬೇಕಿದೆ. ಆದರೆ ಸದ್ಯದ ಯೋಜನೆ, ಕೆಲ ಊರುಗಳಿಗೆ ಮಾತ್ರ ತಲುಪುವಂತಿದೆ. ಜನಪ್ರತಿನಿಧಿಗಳು ಇದರ ಕುರಿತು ಯೋಚಿಸುತ್ತಿಲ್ಲ.


ಲೇಖಕರು:

ಪಿ.ಎಸ್.ರಂಗನಾಥ

ರಾಂಪುರ

#ಮೊಳಕಾಲ್ಮೂರು #molakalmuru #chitradurga #rampura #577540 #kannada #karnataka #psranganath #psr #ರಾಂಪುರ #ashoka_siddapura #devasamudra #jatingarameshwara #jatinga_rameshwara 

ಶನಿವಾರ, ಫೆಬ್ರವರಿ 7, 2026

ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

    ವಿದೇಶದಲ್ಲಿ ಉದ್ಯೋಗಕ್ಕಾಗಿ ನೆಲೆನಿಂತಾಗ, ಮಕ್ಕಳು ಮಾತೃಭಾಷೆ ಕಲಿಕೆಯಿಂದ ವಂಚಿತರಾಗುವುದು ಸಹಜ. ಮನೆಯಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೆ, ಕನ್ನಡ ಮಾತನಾಡುವುದನ್ನ ಸಹಜವಾಗಿ ಕಲಿಯಬಹುದು, ಆದರೂ  ಕನ್ನಡ ಓದುವುದು ಮತ್ತು ಬರೆಯುವುದರಿಂದ ಮಕ್ಕಳು ವಂಚಿತರಾಗುವ ಅವಕಾಶವೇ ಹೆಚ್ಚು. ಇಂತಹ ಸಂಧರ್ಭಗಳಲ್ಲಿ ಹೆತ್ತವರು ಆಸಕ್ತಿಯಿಂದ ಮಕ್ಕಳಿಗೆ ಕನ್ನಡ ಓದುವುದು ಮತ್ತು ಬರೆಯುವುದನ್ನ ಕಲಿಸಿದರೆ ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನೆಲೆನಿಂತಾಗ ಕನ್ನಡ ಉಪಯೋಗಕ್ಕೆ ಬರುವ ಸಾದ್ಯತೆ ಇರುತ್ತದೆ.

    ಮಸ್ಕತ್ ನ  ಶಾಲೆಗಳಲ್ಲಿ ಇಂಗ್ಲೀಶ್, ಹಿಂದಿ, ಸಂಸ್ಕೃತ ಮತ್ತು ಅರೇಬಿಕ್ ಭಾಷೆಯ ಜತೆಗೆ ಕೆಲವೆಡೆ, ಫ್ರೆಂಚ್ ಮತ್ತು ಸ್ಪಾನಿಶ್ ಭಾಷೆಯನ್ನು ಕಲಿಸುತ್ತಾರೆ. ಆದರೆ ಮಸ್ಕತ್ ನಲ್ಲಿರುವ ಭಾರತೀಯ ಶಾಲೆಗಳಲ್ಲಿ ಕನ್ನಡಿಗ ವಿಧ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಿರುವುದರಿಂದ, ಇಲ್ಲಿನ ಶಾಲೆಗಳಲ್ಲಿ ಕನ್ನಡ ಕಲಿಸಲು ಆಡಳಿತ ಮಂಡಳಿಗಳು ಆಸಕ್ತಿ ತೋರುವುದಿಲ್ಲ. ಈ ಸಮಸ್ಯೆಯನ್ನು ಮನಗಂಡ ಆಸಕ್ತ ಕನ್ನಡ ಅಭಿಮಾನಿಗಳು ಸುಮಾರು 2006 ನೇ ಇಸವಿಯಲ್ಲಿ ಕನ್ನಡ ಶಾಲೆಯೊಂದನ್ನು ಪ್ರಾರಂಭಿಸಿ  ಮಕ್ಕಳಿಗಾಗಿ ಕನ್ನಡ ಕಲಿಸುವ ತರಗತಿಗಳನ್ನು ನಡೆಸುತಿದ್ದಾರೆ. ಇಲ್ಲಿ ಪೋಷಕರೇ ಶಿಕ್ಷಕರು. ಯಾವುದೇ ಶುಲ್ಕ ಮತ್ತು ಸಂಭಾವನೆಯಿಲ್ಲದೆ ಕೇವಲ ಸೇವಾ ಮನೋಭಾವನೆ ಯಿಂದ ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ಕನ್ನಡ ಕಲಿಸುತಿದ್ದಾರೆ. ಈ ವ್ಯವಸ್ಥೆಯಿಂದ ಕನ್ನಡ ಕಲಿತ ಮಕ್ಕಳು, ಮುಂದಿನ ದಿನಗಳಲ್ಲಿ ಕನ್ನಡನಾಡಿನಲ್ಲಿ ಭಾಷಾ ಸಮಸ್ಯೆಯನ್ನು ಎದುರಿಸುವುದಿಲ್ಲ, 

    2006 ನೇ ಇಸವಿಯಲ್ಲಿ ಶ್ರೀ ಯೋಗಾನಂದ ಹೊಳಲ್ಕೆರೆ ಇವರ ಮುಂದಾಳತ್ವದಲ್ಲಿ ಕನ್ನಡ ತರಗತಿಗಳಿಗೆ ಚಾಲನೆ ನೀಡಲಾಯಿತು. ಪ್ರಥಮ ವರ್ಷ ಸುಮಾರು ನೂರು ವಿದ್ಯಾರ್ಥಿಗಳು ಕನ್ನಡ ಕಲಿಯಲು ನೊಂದಾಯಿಸಿದ್ದರು. ಅಂದು ಪ್ರಾರಂಭಿಸಲಾಗಿದ್ದ ಶಾಲೆಯಲ್ಲಿ ಇಂದಿಗೆ ಸಾವಿರಾರು ಮಕ್ಕಳು ಕನ್ನಡ ಕಲಿತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. 

    ಕಡಲಾಚೆಯ ಮಸ್ಕತ್‌ನಲ್ಲಿ ಕನ್ನಡದ ದೀಪವನ್ನು ಬೆಳಗಿಸುತ್ತಿರುವ ನಮ್ಮ ಹೆಮ್ಮೆಯ ಶಿಕ್ಷಕಿಯರ ಸೇವೆಯನ್ನು ಗುರುತಿಸಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ‘ಗಡಿನಾಡ ಚೇತನ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅತ್ಯಂತ ಶ್ಲಾಘನೀಯ. "ಎಲ್ಲೆ ಇರು ಹೇಗೆ ಇರು  ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ಅಕ್ಷರಶಃ ಪಾಲಿಸುತ್ತಿರುವ ಮಸ್ಕತ್‌ನ ಅನಿವಾಸಿ ಕನ್ನಡಿಗರ ಸಾಧನೆ ಇಂದು ಸಮಸ್ತ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ. 


*ಎರಡು ದಶಕಗಳ ಅವಿರತ ಕಾಯಕ*

ತಾಯ್ನಾಡಿನಿಂದ ಸಾವಿರಾರು ಮೈಲಿ ದೂರವಿದ್ದರೂ, ಕನ್ನಡದ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಮಸ್ಕತ್‌ನ ಕನ್ನಡ ಶಾಲೆಯೇ ಸಾಕ್ಷಿ. ಕಳೆದ ಎರಡು ದಶಕಗಳಿಂದ ಯಾವುದೇ ಅಡೆತಡೆಯಿಲ್ಲದೆ, ನಿರಂತರವಾಗಿ ಇಲ್ಲಿನ ಅನಿವಾಸಿ ಕನ್ನಡಿಗ ಮಕ್ಕಳಿಗೆ ಕನ್ನಡವನ್ನು ಕಲಿಸಲಾಗುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ಮಾತೃಭಾಷೆ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಪರದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ 'ಅ ಆ ಇ ಈ' ಕಲಿಸಿ, ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುವ ಈ ಕಾರ್ಯ ನಿಜಕ್ಕೂ ಒಂದು ತಪಸ್ಸು.


*ಪ್ರಚಾರದ ಹಂಗಿಲ್ಲದ ನಿಸ್ವಾರ್ಥ ಸೇವೆ.*

ಈ ಶಾಲೆಯ ಮತ್ತು ಇಲ್ಲಿನ ಶಿಕ್ಷಕವೃಂದದ ವಿಶೇಷತೆಯೆಂದರೆ ಅವರ 'ನಿಸ್ವಾರ್ಥ ಮನೋಭಾವ'. ಯಾವುದೇ ಪ್ರಚಾರದ ಹಂಗಿಲ್ಲದೆ, ಹಣದ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ಕೇವಲ ಕನ್ನಡದ ಮೇಲಿನ ಪ್ರೀತಿಯಿಂದ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಸ್ಕತ್‌ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೇ ಸ್ವಯಂಪ್ರೇರಿತರಾಗಿ ಶಿಕ್ಷಕರಾಗಿ ದುಡಿಯುತ್ತಿರುವುದು ಅವರ ಭಾಷಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ.


*ಗಡಿನಾಡ ಚೇತನ ಪ್ರಶಸ್ತಿಯ ಮೆರುಗು*

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಇಂತಹ ಎಲೆಮರೆ ಕಾಯಿಯಂತಿದ್ದ ಸಾಧನೆಯನ್ನು ಗುರುತಿಸಿರುವುದು ಸ್ವಾಗತಾರ್ಹ. ಶಿಕ್ಷಕಿಯರಿಗೆ ನೀಡಿರುವ  *‘ಗಡಿನಾಡ ಚೇತನ ಪ್ರಶಸ್ತಿ’* ಯು ಕೇವಲ ಒಬ್ಬ ವ್ಯಕ್ತಿಗೆ ಸಿಕ್ಕ ಗೌರವವಲ್ಲ, ಬದಲಾಗಿ ಇದು ಇಡೀ ಮಸ್ಕತ್ ಕನ್ನಡಿಗರ ಸಮುದಾಯಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕನ್ನಡ ಸೇವೆಯನ್ನು ಮಾಡಲು ಪ್ರೇರಣೆ ನೀಡಲಿದೆ.

✍️ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

ಶುಕ್ರವಾರ, ಫೆಬ್ರವರಿ 6, 2026

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ "ಬೆಲ್ಲದ ಗಟ್ಟಿ" (Bellada Gatti) ತುಳು ಚಲನಚಿತ್ರ

ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳೊನ್ನಳೊಗೊಂಡ ತುಳು ಚಲನಚಿತ್ರ "ಬೆಲ್ಲದ ಗಟ್ಟಿ" ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಶುಕ್ರವಾರ 06/02/2026 ರಂದು ಪ್ರೀಮಿಯರ್ ಶೋ ದಲ್ಲಿ ತುಳು ಚಿತ್ರ ಪ್ರೇಮಿಗಳಿಂದ ಚಿತ್ರಮಂದಿರ ಭರ್ತಿಯಾಗಿ ಅದ್ಭುತ ಪ್ರದರ್ಶನ ಕಂಡು ಬಂತು. 

      ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದಲ್ಲಿ, ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ತುಳುನಾಡಿನ ಸುಂದರ ಬದುಕು, ಕರಾವಳಿ ದೈವಗಳು, ಕೌಟುಂಬಿಕ ಜೀವನ, ಕರಾವಳಿಯ ಸುಂದರ ಪ್ರಕೃತಿ, ಎಲ್ಲವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.  ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಘಟನೆಗಳ ಸನ್ನಿವೇಶಗಳಲ್ಲಿ ಬರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕರಾವಳಿಯ ಸುಂದರ ದೃಶ್ಯಗಳು ಚಿತ್ರದ ಛಾಯಾಗ್ರಹಣವೂ ಇನ್ನೊಂದು ಪ್ಲಸ್ ಪಾಯಿಂಟ್.  ಊರಿನಿಂದ ದೂರ ಇರುವ ಜನರು, ಆ ದೃಶ್ಯಗಳನ್ನು ನೋಡುವಾಗ ತಮ್ಮ ಹುಟ್ಟೂರನ್ನು ನೆನಪಿಸುವಂತೆ ಮಾಡುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ.

        ಚಿತ್ರದ ಚಿತ್ರಕಥೆ ಬಹಳ ಗಟ್ಟಿಯಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವಂತಿದೆ. ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ.  ಕರಾವಳಿ ಸಿಹಿ ತಿನಿಸು ‘ಬೆಲ್ಲದಗಟ್ಟಿ’ ಈ ಕಥೆಯ ತಿರುವು. ಗರ್ಭಿಣಿ ಜಾನಕಿ ಹಸಿವಾದಾಗ ಆಸೆಯಿಂದ ತಿಂದ ಆ ಒಂದು ಬೆಲ್ಲದಗಟ್ಟಿ ಇಡೀ ಮನೆಯ ಶಾಂತಿಯನ್ನು ಕದಡುತ್ತದೆ. ಮಾವನ ತಪ್ಪು ಕಲ್ಪನೆ ಹಾಗೂ ಸೊಸೆ ಜಲಜಾಳ ನಡುವಿನ ಮಾತಿನ ಚಕಮಕಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಮುಂಚಿನಿಂದಲೂ ಸೊಸೆ ಜಲಜಾಳ ಬಗ್ಗೆ ಮಾವನಿಗೆ ಅಸಹನೆ ಇರುತ್ತದೆ. 

    ದೈವದ ಹೆಸರಿನಲ್ಲಿ ಮಾವ ಮಾಡಿದ ಒಂದು ಸಣ್ಣ ತಪ್ಪು, ಇಡೀ ಮನೆಯ ವಾತಾವರಣವನ್ನೇ ಬದಲಿಸಿಬಿಡುತ್ತದೆ. ಈ ಘಟನೆಯ ನಂತರ ಜಾನಕಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳಾಗುತ್ತವೆ. ಅವಳ ವಿಚಿತ್ರ ನಡವಳಿಕೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ನಂತರ ನಡೆಯುವ ಘಟನೆಗಳು ಕಥೆಗೆ ಹೊಸ ಆಯಾಮ ನೀಡುತ್ತವೆ. ಕೊನೆಗೆ, ತನ್ನ ತಪ್ಪಿನ ಅರಿವಾಗುವ ಮಾವನಿಗೆ "ಮಗಳು ಮತ್ತು ಸೊಸೆ ಇಬ್ಬರೂ ಒಂದೇ" ಎಂಬ ಸತ್ಯ ದರ್ಶನವಾಗುತ್ತದೆ. "ಪರರ ಮನೆಯಿಂದ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು, ಅವಳ ತವರು ಮನೆಯನ್ನು ಹೀಯಾಳಿಸುವುದು ತಪ್ಪು" ಎಂಬ ಉದಾತ್ತ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

        ಥ್ರಿಲ್ಲರ್ ಜತೆಗೆ, ಚಿತ್ರದಲ್ಲಿ ಲಘು ಹಾಸ್ಯವೂ ಇದೆ.  ಹದಿ ಹರೆಯದ ಯುವಕ ಯುವತಿಯರ ಸನ್ನಿವೇಶ ಮತ್ತು  ನಿರ್ದೇಶಕ ರಾಜಾ ಕಟಪಾಡಿ ಯವರು, ಮಾತು ಬರದ ಮೂಗನಂತೆ ನಟಿಸಿರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. ಹಾಡುಗಳು ಸಹ ಸುಮಧರವಾಗಿ ಮೂಡಿ ಬಂದಿದೆ. ಚಿತ್ರದ ನಟ ನಟಿಯರು, ಪೋಷಕ ಕಲಾವಿದರು ಎಲ್ಲರೂ ಸ್ಥಳೀಯ ಕಲಾವಿದರು ಎನ್ನುವುದು ವಿಶೇಷ, ಪ್ರತಿಯೊಬ್ಬರೂ ಚಿತ್ರದಲ್ಲಿ ಮನಮುಟ್ಟುವಂತೆ ನಟಿಸಿದ್ದಾರೆ, ತೆರೆ ಮೇಲೆ ಪ್ರತಿ ಪಾತ್ರವು ತುಂಬಾ ಸರಳವಾಗಿ ನೈಜವಾಗಿ ಮೂಡಿ ಬರಲು ನಿರ್ದೇಶಕರು ಚಿತ್ರದ ಪ್ರಮುಖ ಪಾತ್ರದಾರಿಗಳಿಂದ ಕಥೆಗೆ ಬೇಕಾದ ನಟನೆಯನ್ನು ತೆಗೆಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಪ್ರಭುದ್ದತೆಯನ್ನು ಪ್ರತಿ ದೃಶ್ಯಗಳಲ್ಲಿ ಕಾಣಬಹುದು. ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಮಾತ್ರವಲ್ಲದೆ, ಭಟ್ಟರ ಪಾತ್ರದಲ್ಲಿ ಅನುಭವ ನಟರಂತೆ ಅದ್ಭುತವಾಗಿ ನಟಿಸಿದ್ದಾರೆ. 

        ವಿದ್ಯಾವಂತ ಯುವಕರು ಊರಿನಲ್ಲಿ ದುಡಿಯಲು ಸಾಧ್ಯವಿಲ್ಲ ಎಂದು ಹುಟ್ಟಿದ ಊರನ್ನ ಬಿಟ್ಟು ಮುಂಬಯಿಗೆ ಹೋಗಿ, ಅಲ್ಲಿ ಹೋಟೆಲ್ ಬಾರ್ ಗಳಲ್ಲಿ ದುಡಿದು ಉತ್ತಮವಾಗಿ ಹಣ ಸಂಪಾದಿಸುತ್ತಾರೆ. ಅವರ ಜೀವನವನ್ನು ನೋಡಿ ಬೇರೆಯವರು ಸಹ ಊರನ್ನು ಬಿಟ್ಟು ಮುಂಬಯಿಗೆ ಹೋಗಿ ಹಣ ಸಂಪಾದಿಸಲು ಪ್ರೇರೆಪಿಸುತ್ತದೆ, ಆದರೆ ಸ್ವಂತ ಊರಿನಲ್ಲಿ ರಾಜನಂತೆ ಬದುಕುವ ನೆಮ್ಮದಿ ಪರ ಊರಿನಲ್ಲಿ ಇಲ್ಲ ಎನ್ನುವ ಸ್ಮೂಕ್ಷ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


ಶುಕ್ರವಾರ, ಜನವರಿ 30, 2026

​ಜೀವನದಲ್ಲಿ ಯಶಸ್ವಿಯಾಗಲು ಭಂಡ ಧೈರ್ಯವೂ ಬೇಕು.




​ನಮ್ಮ ದೈನಂದಿನ ಜೀವನದಲ್ಲಿ ನಾವು ಸಾವಿರಾರು ಜನರನ್ನು ಭೇಟಿ ಮಾಡುತ್ತೇವೆ. ಕೆಲವರನ್ನು ನೋಡಿದಾಗ, ಅವರ ಮಾತುಗಾರಿಕೆ ಅಥವಾ ಅವರು ನಡೆದುಕೊಳ್ಳುವ ರೀತಿ ಕಂಡು "ಅಬ್ಬಾ! ಅವರದ್ದೇನು ವ್ಯಕ್ತಿತ್ವ!" ಎಂದು ನಾವು ಅಚ್ಚರಿಪಡುತ್ತೇವೆ. ಅವರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ನಾವು ಮಾರುಹೋಗುತ್ತೇವೆ ಮತ್ತು ಅಂತಹ ಆತ್ಮವಿಶ್ವಾಸ ನಮ್ಮಲ್ಲಿಲ್ಲವಲ್ಲ ಎಂದು ಕೆಲವೊಮ್ಮೆ ಬೇಸರಿಸಿಕೊಳ್ಳುತ್ತೇವೆ. ಕೆಲವರಿಗೆ ಇಂತಹ ಆಕರ್ಷಕ ವ್ಯಕ್ತಿತ್ವವು ಹುಟ್ಟಿನಿಂದಲೇ ಬಂದ ವರದಂತಿರಬಹುದು. ಅವರು ಬೆಳೆದ ಪರಿಸರ, ಪೋಷಕರು, ಗುರು-ಹಿರಿಯರ ಮಾರ್ಗದರ್ಶನ ಹಾಗೂ ಅವರ ಮನೆತನದ ಸಂಸ್ಕಾರಗಳು ಅವರ ವ್ಯಕ್ತಿತ್ವದ ಮೇಲೆ ಗಾಢವಾದ ಪ್ರಭಾವ ಬೀರಿರುತ್ತವೆ. ಆದರೆ, ಆತ್ಮವಿಶ್ವಾಸ ಎಂಬುದು ಕೇವಲ ಹುಟ್ಟಿನಿಂದ ಬರುವ ಗುಣವಲ್ಲ; ಅದನ್ನು ಹಂತ ಹಂತವಾಗಿ ಯಾರು ಬೇಕಾದರೂ ಬೆಳೆಸಿಕೊಳ್ಳಬಹುದು.


​ಎಂತಹದ್ದೇ ಕಠಿಣ ಸಂದರ್ಭ ಎದುರಾದರೂ ಎದೆಗುಂದದೆ, "ನಾನು ಇದನ್ನು ಸಾಧಿಸಿಯೇ ತೀರುತ್ತೇನೆ" ಎಂಬ ಭಂಡ ಧೈರ್ಯದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಆತ್ಮವಿಶ್ವಾಸವೇ ಮೂಲಾಧಾರ. ಈ ಶಕ್ತಿಯನ್ನು ನಮ್ಮಲ್ಲಿ ವೃದ್ಧಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಹಂತಗಳು ಇಲ್ಲಿವೆ:



​೧. ಮುಜುಗರ ಮತ್ತು ನಾಚಿಕೆಯಿಂದ ಮುಕ್ತಿ

​ಆತ್ಮವಿಶ್ವಾಸದ ಹಾದಿಯಲ್ಲಿ ಮೊದಲ ಅಡೆತಡೆಯೆಂದರೆ ಅದು ಮುಜುಗರ. ನಾಲ್ಕು ಜನರ ಮುಂದೆ ಮಾತನಾಡಲು ಅಥವಾ ಹೊಸದೇನನ್ನಾದರೂ ಪ್ರಯತ್ನಿಸಲು ನಾವು ನಾಚಿಕೆಪಡುತ್ತೇವೆ. ಆದರೆ, ಸಾಧನೆಯ ಹಾದಿಯಲ್ಲಿ ಸಾಗಲು ಮೊದಲು ಈ ಮುಜುಗರದ ಸ್ವಭಾವವನ್ನು ಬಿಡಲೇಬೇಕು. ನಾವು ಇತರರ ಬಗ್ಗೆ ಏನು ಯೋಚಿಸುತ್ತೇವೆ ಎನ್ನುವುದಕ್ಕಿಂತ, ಇತರರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬ ಭಯವೇ ನಮ್ಮನ್ನು ಕಟ್ಟಿಹಾಕುತ್ತದೆ. ಈ ಸಂಕೋಲೆಯನ್ನು ಕತ್ತರಿಸಿದಾಗ ಮಾತ್ರ ನಮ್ಮ ನಿಜವಾದ ಸಾಮರ್ಥ್ಯ ಹೊರಬರಲು ಸಾಧ್ಯ.


​೨. ಸಣ್ಣ ಸವಾಲುಗಳು ಮತ್ತು ಗೆಲುವಿನ ರುಚಿ

​ಒಮ್ಮೆಲೇ ದೊಡ್ಡ ಶಿಖರವನ್ನು ಏರಲು ಸಾಧ್ಯವಿಲ್ಲ. ಆದ್ದರಿಂದ, ಜೀವನದಲ್ಲಿ ಸಣ್ಣ ಸಣ್ಣ ರಿಸ್ಕ್‌ಗಳನ್ನು ಅಥವಾ ಸವಾಲುಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಸಣ್ಣ ಪ್ರಯತ್ನಗಳಲ್ಲಿ ನೀವು ಗೆಲುವು ಸಾಧಿಸಿದಾಗ, ನಿಮ್ಮ ಮನಸ್ಸಿಗೆ "ನನ್ನಿಂದಲೂ ಸಾಧ್ಯ" ಎಂಬ ಭರವಸೆ ಸಿಗುತ್ತದೆ. ಇದು ನಿಮ್ಮಲ್ಲಿ ಅದ್ಭುತವಾದ ಆತ್ಮವಿಶ್ವಾಸವನ್ನು ತುಂಬುತ್ತದೆ. ಇದರೊಂದಿಗೆ ಸದಾ ಹೊಸ ವಿಷಯಗಳನ್ನು ಕಲಿಯುವ ಹಂಬಲವನ್ನು ಜೀವಂತವಾಗಿರಿಸಿಕೊಳ್ಳಿ.


​೩. ಭಯವನ್ನು ಮೆಟ್ಟಿ ನಿಲ್ಲುವ ಧೈರ್ಯ

​ಭಯವಿಲ್ಲದ ಮನುಷ್ಯನೇ ಇಲ್ಲ. ಆದರೆ ವಿಜೇತರು ಭಯಕ್ಕೆ ಶರಣಾಗುವುದಿಲ್ಲ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಭಯವಿರುವುದು ಸಹಜ, ಆದರೆ ಆ ಭಯವನ್ನು ಬದಿಗಿಟ್ಟು ಕೆಲಸವನ್ನು ಸಂಪೂರ್ಣವಾಗಿ ಮಾಡಬೇಕು. ಯಾವಾಗ ನಾವು ಭಯಪಡುವ ಕೆಲಸವನ್ನೇ ಧೈರ್ಯದಿಂದ ಮಾಡುತ್ತೇವೆಯೋ, ಆಗ ಆ ಭಯವೇ ನಮ್ಮನ್ನು ಬಿಟ್ಟು ಓಡಿಹೋಗುತ್ತದೆ. ಇದನ್ನೇ "ಭಂಡ ಧೈರ್ಯ" ಎನ್ನುವುದು.


​೪. ಸಕಾರಾತ್ಮಕ ಆತ್ಮವಿಮರ್ಶೆ (Positive Self-Talk)

​ನಮ್ಮ ಬಗ್ಗೆ ನಾವು ಏನು ಅಂದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ದಿನವೂ ಕನ್ನಡಿಯ ಮುಂದೆ ನಿಂತು ನಿಮ್ಮೊಂದಿಗೆ ನೀವೇ ಸಕಾರಾತ್ಮಕವಾಗಿ ಮಾತನಾಡಿಕೊಳ್ಳಿ. "ನಾನು ಸಮರ್ಥನಿದ್ದೇನೆ", "ಇಂದು ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ" ಎಂಬ ಮಾತುಗಳು ನಿಮ್ಮ ಮನೋಬಲವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಿ; ಅಂದರೆ ಸ್ವಯಂ ಕಾಳಜಿಗೆ (Self-care) ಪ್ರಾಮುಖ್ಯತೆ ಕೊಡಿ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿದ್ದರೆ ಆತ್ಮವಿಶ್ವಾಸ ತಾನಾಗಿಯೇ ವೃದ್ಧಿಸುತ್ತದೆ.


​೫. ತಪ್ಪುಗಳಿಂದ ಕಲಿಯುವ ಗುಣ

​ಅಪರಾಧ ಮಾಡುವುದು ಮಾನವ ಸಹಜ ಗುಣ, ಆದರೆ ಅದನ್ನೇ ನೆಪ ಮಾಡಿಕೊಂಡು ಕುಳಿತುಕೊಳ್ಳುವುದು ತಪ್ಪು. ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕು. ಅಕಸ್ಮಾತ್ ತಪ್ಪು ಸಂಭವಿಸಿದಾಗ ಅದನ್ನು ಮರೆಮಾಚುವ ಬದಲು, ಆತ್ಮವಿಶ್ವಾಸದಿಂದ ಆ ತಪ್ಪನ್ನು ಒಪ್ಪಿಕೊಂಡು ಮುಂದೆ ಸಾಗೋಣ. ತಪ್ಪುಗಳನ್ನು ಒಪ್ಪಿಕೊಳ್ಳುವವನು ಮಾತ್ರ ಅದನ್ನು ತಿದ್ದಿಕೊಳ್ಳಲು ಸಾಧ್ಯ. ಸಮಸ್ಯೆಗಳು ಬಂದಾಗ ಭಯಪಡುವ ಬದಲು ಅವುಗಳನ್ನು ಬಗೆಹರಿಸಲು ಪ್ರಯತ್ನಿಸುವುದು ನಿಮ್ಮನ್ನು ಒಬ್ಬ ಸಮರ್ಥ ವ್ಯಕ್ತಿಯನ್ನಾಗಿ ರೂಪಿಸುತ್ತದೆ.


​೬. ಸಕಾರಾತ್ಮಕ ಜನರ ಒಡನಾಟ

​ನಮ್ಮ ಸುತ್ತಮುತ್ತಲಿನ ಜನರ ಪ್ರಭಾವ ನಮ್ಮ ಮೇಲೆ ಅಧಿಕವಾಗಿರುತ್ತದೆ. ಸದಾ ನಕಾರಾತ್ಮಕವಾಗಿ ಮಾತನಾಡುವವರ ಜೊತೆಗಿದ್ದರೆ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಆದ್ದರಿಂದ, ಸದಾ ಪ್ರೋತ್ಸಾಹ ನೀಡುವ ಮತ್ತು ಪಾಸಿಟಿವ್ ಆಗಿರುವ ಜನರ ಜೊತೆ ಸಮಯ ಕಳೆಯಬೇಕು.

ಆತ್ಮವಿಶ್ವಾಸ ಎನ್ನುವುದು ಒಂದು ದಿನದಲ್ಲಿ ಬರುವ ಮಂತ್ರವಲ್ಲ. ಇದು ನಿರಂತರ ಪ್ರಯತ್ನದಿಂದ ಸಿದ್ಧಿಸುವ ಕಲೆ. ಎಲ್ಲಕ್ಕಿಂತ ಮಿಗಿಲಾಗಿ, ಇಡೀ ಜಗತ್ತು ನಮ್ಮನ್ನು ನಂಬುವ ಮೊದಲು ನಮ್ಮ ಮೇಲೆ ನಮಗೆ ಅಚಲವಾದ ನಂಬಿಕೆ ಇರಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ಜಗತ್ತಿನ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಮೇಲೆ ತಿಳಿಸಿದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ವ್ಯಕ್ತಿತ್ವವೂ ಇತರರಿಗೆ ಮಾದರಿ ಯಾಗುವುದರಲ್ಲಿ ಸಂಶಯವಿಲ್ಲ.

ಬರಹ: ಪಿ.ಎಸ್.ರಂಗನಾಥ.

ಮಸ್ಕತ್, ಒಮಾನ್ ರಾಷ್ಟ್ರ


Click below headings