ಮಂಗಳವಾರ, ಮೇ 28, 2024

ಭಾರತದಾಚೆಗೂ ಇರುವ ರಾಮಾಯಣ, ಮಹಾಭಾರತದ ಕುರುಹುಗಳು

 ಈವತ್ತಿನ ಬಹಳಷ್ಟು ಯುವ ಜನರಿಗೆ ಭಾರತ ದೇಶದ ಸುತ್ತಮುತ್ತಲಿನ ದೇಶಗಳು, ಒಂದು ಕಾಲದಲ್ಲಿ ಭಾರತದ ಭಾಗವಾಗ್ತಿತ್ತು ಎಂದರೆ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಮ್ಮ ಶಾಲೆಗಳಲ್ಲಿ ಪಾಕಿಸ್ತಾನ, ಬಾಂಗ್ಲದೇಶ ಭಾರತದಿಂದ ವಿಭಜನೆ ಗೊಂಡಿದ್ದರ ಬಗ್ಗೆ ಕಲಿಸುತ್ತಿರುವುದರಿಂದ, ಈ ವಿಭಜನೆ ಬಗ್ಗೆ ಗೊತ್ತಿದೆ, ಆದರೆ ಬ್ರಿಟೀಷರ ಮುಂಚೆಯೇ ನಮ್ಮ ಕೈ ಜಾರಿ ಹೋಗಿದ್ದ ದೇಶಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿಯಿಲ್ಲ. ಕೆಲವರ ಪ್ರಕಾರ, ಭಾರತ ಎನ್ನುವ ದೇಶವೇ ಇರಲಿಲ್ಲ. ಸುಮಾರು ಐದುನೂರಕ್ಕೂ ಹೆಚ್ಚು ಸಂಸ್ಥಾನಗಳೇ ಇದ್ದವು, ಅವೆಲ್ಲವನ್ನು ಒಟ್ಟು ಗೂಡಿಸಿ ಭಾರತ ಎನ್ನುವ ದೇಶವನ್ನು ರಚಿಸಿದ್ದು ಬ್ರಿಟೀಷರು. ಹಾಗೂ ಇಡೀ ಭಾರತವನ್ನು ಒಟ್ಟು ಮಾಡಿ ಆಳಲು ಪ್ರಯತ್ನಿಸಿದ್ದು ದೆಹಲಿ ಸುಲ್ತಾನರು ಮತ್ತು ಮೊಘಲರು ಎಂದು ಪ್ರತಿಪಾದಿಸುವ ಮಂದಿ ಕಡಿಮೆ ಏನಿಲ್ಲ. 18ನೇ ಶತಮಾನದ ಮಧ್ಯದ ವರೆಗೂ ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ವಿಸ್ತರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವ ಮೊದಲು ತಮ್ಮ ಆಳ್ವಿಕೆಯ ಕೊನೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ

    ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶ, ನಾಡು, ನುಡಿ, ಭಾಷೆ, ಆಚಾರ, ವಿಚಾರ, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳಲ್ಲಿ ನಮ್ಮ ಒಂದೊಂದು ಪ್ರಾಂತ್ಯವನ್ನು ಮತ್ತು ಜನರನ್ನು ಬೆಸೆದಿದೆ. ಭೌಗೋಳಿಕ ಸಂಸ್ಥಾನದ ಗಡಿ ರೇಖೆಗಳಿಗಿಂತ, ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ವಿಷಯಗಳಿಗೆ ಗಡಿ ರೇಖೆಗಳಿರಲಿಲ್ಲ ಎನ್ನುವುದು ಭಾರತೀಯ ಸಂಸ್ಕೃತಿಯನ್ನು ಅರಿತವರಿಗೆ ತಿಳಿದಿದೆ. ರಾಮಾಯಣ, ಮಹಾಭಾರತ ಈ ಮಹಾಕೃತಿಗಳ ಕುರಿತು ಉತ್ತರದ ಕಾಶ್ಮಿರದಿಂದ  ದಕ್ಷಿಣದ ಕನ್ಯಾಕುಮಾರಿ, ಮತ್ತು ಫೂರ್ವದ ಅಸ್ಸಾಂ ನಿಂದ ಪಶ್ಚಿಮದ ಗುಜರಾತ್ ನವರೆಗೂ, ಭಾರತದ ಎಲ್ಲೆಡೆ ಯಿರುವ ಪ್ರತಿಯೊಬ್ಬರಿಗೂ ಗೊತ್ತಿರುವುಂತಹದ್ದು. ಮಹಾಕಾವ್ಯಗಳಲ್ಲಿ ದಾಖಲಾಗಿರುವ ಘಟನೆಗಳು, ಸ್ಥಳಗಳು ಇಂದಿಗೂ ಭಾರತದಲ್ಲಿ ಕುರುಹುಗಳು ಲಭ್ಯವಿದೆ. ನಮ್ಮ ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ರಾಮಾಯಣ, ಮಹಾಭಾರತಕ್ಕೆ ಸಂಭಂದ ಪಟ್ಟಂತ ಮಾಹಿತಿ ಮತ್ತು ಸಂಸ್ಕೃತದ ಪ್ರಭಾವದ ಕುರಿತು ಒಂದು ಕಿರು ಮಾಹಿತಿ ಈ ಲೇಖನದ ಮುಖಾಂತರ ಓದುಗರಿಗೆ ತಲುಪಿಸುವ ಒಂದು ಕಿರು ಪ್ರಯತ್ನ.  

ಅಫ್ಘನಿಸ್ಥಾನ್:

ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ವಿಮಾನ ಅಪಹರಣ ವಾದಾಗ, ಬಹಳಷ್ಟು ಜನರಿಗೆ ಕಂದಹಾರ್ ಎಂದರೆ ಗಾಂಧಾರ ಎನ್ನುವುದು ತಿಳಿಯಿತು. ನಮ್ಮ ಗಾಂಧಾರ ಅಫ್ಘನಿಸ್ತಾನದ ಕಂದಹಾರ್ ಹೇಗಾಯ್ತು ಎನ್ನುವುದು ಶಾಲೆಗಳಲ್ಲಿ ಯಾರೂ ಕಲಿಸಿಕೊಡಲೇ ಇಲ್ಲ. ಮಹಾಭಾರತದ ಐತಿಹಾಸಿಕ ಸ್ಥಳಗಳ ಕುರಿತು ಸಂಶೋಧನೆ ನಡೆದಾಗ, ಇಂತಹ ಹಲವಾರು ಸತ್ಯಗಳು ಹೊರಜಗತ್ತಿಗೆ ಗೊತ್ತಾಯಿತು. ಅಫ್ಘಾನಿಸ್ತಾನಕ್ಕೆ "ಉಪಗಣಸ್ಥಾನ" ಎನ್ನುವ ಹೆಸರು ಇತ್ತೆಂದು ಹೇಳುತ್ತಾರೆ 

ತುರ್ಕಮೆನಿಸ್ತಾನ್

ಇಂದಿನ ತುರ್ಕಮೆನಿಸ್ತಾನ್ ರಾಷ್ಟ್ರವನ್ನು, ಮಹಾಭಾರತದಲ್ಲಿ ತುಷಾರ ಎಂದು ಕರೆಯಲಾಗಿದೆ.  ಮಹಾಭಾರತದಲ್ಲಿ ತುಷಾರರನ್ನು (ಮ್ಲೇಚ್ಚರು) "ರಾಜ ಯಯಾತಿಯ" ಶಾಪಗ್ರಸ್ತ ಪುತ್ರರಲ್ಲಿ ಒಬ್ಬರಾದ ಅನುದೃಹ್ಯವಿನ ವಂಶಸ್ಥರು ಎಂದು ಎಂದು ಹೇಳಲಾಗಿದೆ.  ಯಯಾತಿಗೆ ಐದು ಜನ ಮಕ್ಕಳು. ಯದು, ಪುರು, ತುರ್ವಸು, ದೃಹ್ಯ ಮತ್ತು ಅನುದೃಹ್ಯ.  ಶುಕ್ರಾಚಾರ್ಯರಿಂದ ಪಡೆದ ಶಾಪದ ಫಲವಾಗಿ ಅಕಾಲಿಕ ವೃದ್ಧಾಪ್ಯ ಯಯಾತಿಗೆ ಪ್ರಾಪ್ತವಾಗುತ್ತದೆ. ಆಗ ಶಾಪ ವಿಮೋಚನೆ ಯಾಚಿಸಿದ ಯಯಾತಿಗೆ, ಶುಕ್ರಾಚಾರ್ಯರು " ಯಾರಾದರೂ ತಮ್ಮ ಯೌವನವನ್ನು ಕೊಡುವುದಾದರೆ ನೀನು ಮತ್ತೆ ಯೌವನವನ್ನು ಪಡೆಯಬಹುದು" ಎಂಬುದಾಗಿ ತಿಳಿಸುತ್ತಾರೆ. ಭೋಗ ಜೀವನದ ಹಸಿವು ಆರದಿದ್ದ ಯಯಾತಿ ತನ್ನ ಎಲ್ಲಾ ಮಕ್ಕಳಲ್ಲಿ ಯೌವನಕ್ಕಾಗಿ ಯಾಚಿಸುತ್ತಾನೆ. ಐವರು ಮಕ್ಕಳಲ್ಲಿ ನಾಲ್ಕು ಜನ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಪುರುವು ತನ್ನ ಯೌವನವನ್ನು ತಂದೆಯೊಂದಿಗೆ ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಾಗ ಅತ್ಯಂತ ಆನಂದ ಭರಿತನಾದ ಯಯಾತಿ ಅವನಿಂದ ಯೌವನ ಪಡೆಯುತ್ತಾನೆ. ಭೋಗ ಜೀವನಕ್ಕೆ ಕೊನೆ ಇಲ್ಲ ಎಂದು ಅರಿತ ಯಯಾತಿ ಪುನಃ ತನ್ನ ಮಗನಿಗೆ ಯೌವನ ಮರಳಿಸಿ ಅವನಿಗೆ ಪಟ್ಟಕಟ್ಟಿ ಅನೇಕ ವರಗಳನ್ನು ಕೊಟ್ಟು ತಾನು ತಪಸ್ಸಿಗೆ ಹೋಗುತ್ತಾನೆ.  ಇತರ ನಾಲ್ಕು ಮಕ್ಕಳನ್ನು ಶಪಿಸಿ ಅವರಿಗೆ ರಾಜತ್ವವನ್ನು ನಿರಾಕರಿಸುತ್ತಾನೆ. ಪುರುವಿನ ವಂಶಸ್ಥರೇ ಪೌರವರು, ಯಯಾತಿಯ ಮೂಲ ಸಾಮ್ರಾಜ್ಯವನ್ನು ಆನುವಂಶಿಕವಾಗಿ ಪಡೆದರು ಮತ್ತು ನಂತರ ಕುರು ಮತ್ತು ಪಾಂಚಾಲ ರಾಜ್ಯಗಳನ್ನು ರಚಿಸಿಕೊಂಡು ಆಳುತ್ತಾರೆ. ಈವತ್ತಿನ ಠಾಕೂರ್, ಥಕ್ಕರ್, ತಖರ್, ಠಾಕೆರೆ,  ಠಾಕ್ರೆ,  ಮುಂತಾದ ವಿವಿಧ ಪ್ರಾದೇಶಿಕ ಪದಗಳು ಮತ್ತು ತುಷಾರ//ತುಖಾರ ರಿಂದ ಹುಟ್ಟಿಕೊಂಡಿರಬಹುದು ಎಂದು ಹೇಳಲಾಗುತ್ತದೆ.  ಈ ಪ್ರಾಂತ್ಯ ಕ್ರಿ.ಶ 1 ರಿಂದ- ಕ್ರಿ.ಶ  3 ನೇ ಶತಮಾನದವರೆಗೂ ಕುಶಾನರ ಹಿಡಿತದಲ್ಲಿತ್ತು. 

ಮಾರಿಶಸ್ ದ್ವೀಪ:

ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಆ ಮಾರೀಚ ದ್ವೀಪವೇ ಈಗಿನ ಮಾರಿಶಸ್‌. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ತನ್ನ ಮಾವ ಮಾರೀಚನನ್ನು ಒತ್ತಾಯಿಸುತ್ತಾನೆ. ರಾಮ- ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದಾಗ ಮಾರೀಚನು ಸೀತೆಯ ಕುಟೀರದ  ಮುಂದೆ ಮಾಯಾಜಿಂಕೆ ರೂಪದಲ್ಲಿ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ. ಪತ್ನಿಯ ಆಸೆಗಾಗಿ ಈ ಮಾಯಾಮೃಗದ ಬೆನ್ನತ್ತಿ ಹೋದ ರಾಮ ಕೊನೆಗೆ ಬೇಸತ್ತು ಕೊಂದುಹಾಕುತ್ತಾನೆ. ಮರಣಾವಸ್ಥೆಯಲ್ಲಿದ್ದ ಮಾರೀಚನು ರಾಮನಿಗೆ ತನ್ನನ್ನು ಸಾಗರಕ್ಕೆ ಎಸೆಯುವಂತೆಯೂ ಸಾಗರದಲ್ಲಿ ತನ್ನ ದೇಹ ಬೀಳುವ ಭಾಗದಲ್ಲಿ ಉಂಟಾಗುವ ಭೂಮಿಗೆ ತನ್ನ ಹೆಸರಿಡಬೇಕೆಂದು ಪ್ರಾರ್ಥಿಸುತ್ತಾನೆ. ಶ್ರೀ ರಾಮಚಂದ್ರನಿಂದ ಅನುಗ್ರಹಿಸಿದ ಬಳಿಕ ಮಾರೀಚ ಕೊನೆಯುಸಿರೆಳೆಯುತ್ತಾನೆ. 

ಗಲ್ಫ್ ರಾಷ್ಟ್ರಗಳು: 

ಆತ್ಮೀಯ ಗೆಳೆಯರಾದ ಸುರೇಶ್ ಜಿ ಹುಳ್ಳೇನಹಳ್ಳಿಯವರು, ನಮ್ಮ ಗಲ್ಫ್ ರಾಷ್ಟ್ರಗಳ ಕುರಿತಾದ  ಒಂದು ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಶ್ರೀ ರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಹೋಗಲು ಸಮುದ್ರದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಾಗ ಸೇತುವೆ ನಿಲ್ಲದೆ ಕುಸಿಯುತ್ತಿರುತ್ತದೆ. ಆಗ ಶ್ರೀ ರಾಮ ಸಮುದ್ರ ರಾಜನನ್ನು ಪ್ರಾರ್ಥಿಸಿ ತಪಸ್ಸು ಮಾಡುತ್ತಾನೆ, ಸಮುದ್ರ ರಾಜ ಒಳಿಯುವುದಿಲ್ಲ. ಕೋಪಗೊಂಡ ಶ್ರೀ ರಾಮ ತಮ್ಮ ಲಕ್ಷ್ಮಣನ  ಅಣತಿಯಂತೆ ಸಮುದ್ರವನ್ನು ನಿರ್ನಾಮ ಮಾಡಲು ಧನಸ್ಸನ್ನು ಎದೆಗೆ ಏರಿಸುತ್ತಾನೆ, ಭಯಗೊಂಡ ಸಮುದ್ರ ರಾಜ ಓಡಿ ಬಂದು  ಶ್ರೀ ರಾಮನಿಗೆ ಶರಣಾಗುತಾನೆ. ಶಾಂತನಾದ ಶ್ರೀ ರಾಮ ಸಮುದ್ರ ರಾಜನನ್ನು ಕೇಳುತ್ತಾನೇ, ಒಮ್ಮೆ ಎದೆಗೆ ಏರಿಸಿದ ಬಾಣವನ್ನು ಹಿಂತಿರುಗಿ ಬತ್ತಳಿಕೆಯಲ್ಲಿ ಇಡುವುದಿಲ್ಲ ನೀನೆ ಹೇಳು ಇದನ್ನು ಎಲ್ಲಿ ಪ್ರಯೋಗಿಸಲಿ ಎಂದು ಕೇಳುತ್ತಾನೆ. ಆಗ ಸಮುದ್ರರಾಜ ತನಗೆ ಪಶ್ಚಿಮ ದಿಕ್ಕಿನಲ್ಲಿ ತುಂಬ ತೊಂದರೆ ಕೊಡುವ ರಾಕ್ಷಸರ ಬಗ್ಗೆ ತಿಳಿಸಿ ಅವರನ್ನು ನಾಶ ಮಾಡು ಎಂದು ಭಿನ್ನವಿಸುತ್ತಾನೆ, ಅದೇ ರೀತಿ ಶ್ರೀ ರಾಮ ಪ್ರಾಯೋಗಿಸಿದ ಬಾಣ ಪಶ್ಚಿಮ ದಿಕ್ಕಿನಲ್ಲಿ ಇದ್ದ ಈಗಿನ ಗಲ್ಫ್ ದೇಶಗಳ ಮೇಲೆ ಪ್ರಯೋಗವಾಗುತ್ತೆ ಮತ್ತು ಇಲ್ಲಿ ಎಲ್ಲವು ಸರ್ವ ನಾಶ ವಾಗುತ್ತೆ. ಬಹುಶಃ ಇದೇ ಕಾರಣದಿಂದ ಈ ಪ್ರದೇಶ ಮರುಭೂಮಿಯಾಗಿದೆಯೇನೋ?  ಮತ್ತು ಸಮುದ್ರ ನೀರು ಕಮ್ಮಿಯಾಗಿ ಭೂ ಪ್ರದೇಶ ಮೇಲೆ ಬರಲು ಇದೂ ಒಂದು ಕಾರಣ ಎಂದು ಅಭಿಪ್ರಾಯಪಡುತ್ತಾರೆ.

ಸೊಕೊಟ್ರಾ ದ್ವೀಪ:

ಅವರು ನೀಡಿದ ಇನ್ನೊಂದು ಮಾಹಿತಿ, ಸೊಕೊಟ್ರಾ ದ್ವೀಪ ಬಗ್ಗೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಸುಖಧಾರೆ ಎನ್ನುವ ರಾಕ್ಷಸ ನನ್ನು ಶ್ರೀ ರಾಮ ಲಕ್ಷ್ಮಣರು ಯುದ್ದವೊಂದರಲ್ಲಿ ಸೋಲಿಸಿ. ಮರಣಾನಂತರ ಸಮುದ್ರದೊಳಗೆ ಎಸೆಯುತ್ತಾರೆ. ಈ ರೀತಿ ಎಸೆಯಲ್ಪಟ್ಟ ರಕ್ಕಸ ನಿಂದ ನಿರ್ಮಿತವಾದ ದ್ವೀಪವೇ ಸುಖದಾರೆ ಎನ್ನಲಾಗುತ್ತದೆ.

ಕಿರ್ಗಿಸ್ತಾನ್:

ಇಂದಿನ ಕಿರ್ಗಿಸ್ತಾನ್ ಪ್ರದೇಶ ಮಹಾಭಾರತದಲ್ಲಿ "ಉತ್ತರಕುರು" ಪ್ರಾಂತ್ಯ ಎಂದು ಉಲ್ಲೇಖಿಸಲ್ಪಟ್ಟಿದೆ.  ಯುಧಿಷ್ಠಿರನ ರಾಜಸೂಯ ಯಾಗಕ್ಕಾಗಿ ಉತ್ತರದ ಸೇನಾ ಕಾರ್ಯಾಚರಣೆಯಲ್ಲಿ ಅರ್ಜುನನು ಉತ್ತರ ಕುರುವಿನಿಂದ ಗೌರವವನ್ನು ಪಡೆದನು ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.  ಕುಮಾರವ್ಯಾಸ ಭಾರತದಲ್ಲಿಯೂ ಸಹ ಈ ಕುರಿತು ಮಾಹಿತಿಯಿದೆ.

ಅದೇ ರೀತಿ ಪಕ್ಕದಲ್ಲಿರುವ  ಉತ್ತರ ಮಾದ್ರ ಎನ್ನುವ ಪ್ರದೇಶ ಇಂದು ಕಿರ್ಗಿಸ್ತಾನ್ ನಲ್ಲಿ ವಿಲೀನವಾಗಿದೆ.

ಟಿಬೆಟ್: 

ಮಹಾಭಾರತದ ಕುರುಕ್ಷೇತ್ರದ ಯುದ್ದ ಸೋಲಿನ ನಂತರ ರೂಪತಿ ಅಥವ ರುಪಾಟಿ ಎನ್ನುವ  ಕೌರವ ಸೈನ್ಯದ ಒಬ್ಬ ಸೇನಾಧಿಪತಿ ತನ್ನ ಸೈನ್ಯದ ಸಮೇತ ಟಿಬೆಟ್ ಕಡೆ ಹೊರಟುಹೋಗುತ್ತಾನೆ. ಅಂದು ಅಲ್ಲಿಗೆ ವಲಸೆ ಹೋದ ಜನರೇ ಟಿಬೆಟಿಯನ್ನರು ಎಂದು ನಂಬಲಾಗಿದೆ. ಕ್ರಿ.ಪೂ 150 ರ ಸಮಯದಲ್ಲಿ ಭಾರತದಲ್ಲಿ ಆಳ್ವಿಕೆಯಲ್ಲಿದ್ದ ಮಗಧ ಸಾಮ್ರ್ಯಾಜ್ಯದ ಒಬ್ಬ ರಾಜಕುಮಾರನನ್ನ ರಾಜತಾಂತ್ರಿಕ ಕಾರಣಗಳಿಂದ ಗಡಿಪಾರು ಮಾಡಲಾಗುತ್ತದೆ. ಆ ಸಮಯದಲ್ಲಿ ಆತ  ಟಿಬೆಟ್‌ಗೆ ಪಲಾಯನ ಮಾಡಿದನೆಂದು ನಂಬಲಾಗಿದೆ. ಟಿಬೆಟಿಯನ್ನರು ಅವನನ್ನು ನ್ಯಾ-ಟ್ರಿ ತ್ಸೆನ್ಪೋ ಎಂದು ನಾಮಕರಣ ಮಾಡುತ್ತಾರೆ. ಮುಂದೆ ಆತನನ್ನು ತಮ್ಮ ರಾಜನನ್ನಾಗಿ ಮಾಡಿದರು. ಹೀಗೆ ಅಲ್ಲಿಂದ ಟಿಬೆಟಿಯನ್ ರಾಜವಂಶ ಪ್ರಾರಂಭವಾಯಿತು.  ಟಿಬೆಟಿಯನ್ ವಿದ್ವಾಂಸರಾದ ಬು-ಸ್ಟನ್ ಎನ್ನುವವರು ಇದನ್ನು ಪ್ರತಿಪಾದಿಸಿದ್ದಾರೆ, ಅಷ್ಟು ಮಾತ್ರವಲ್ಲದೆ, ದಲಾಯಿಲಾಮ ರವರು 2009 ರಲ್ಲಿ ಭಾರತಕ್ಕೆ ಧನ್ಯವಾದ ಅರ್ಪಿಸುವ ಪತ್ರದಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಕಾಂಬೋಡಿಯಾ:

ಕಾಂಬೋಡಿಯಾ ಕಾಂಬೋಜ್ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಮಹಾಭಾರತದ ಸಮಯದಲ್ಲಿ ಭಾರತದ ಪಶ್ಚಿಮಕ್ಕೆ ಇದ್ದ ಕಾಂಬೋಜ ದೇಶ ದಿಂದ ಬಂದ ಕಂಬು ಎನ್ನುವ ಸನ್ಯಾಸಿಯೋರ್ವರು ಇಲ್ಲಿ ನೆಲೆಸಿದ್ದರಂತೆ. ಹೀಗಾಗಿ ಇದು ಕಾಂಬೋಜ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ, ನಂತರ ಕಾಂಬೋಡಿಯಾ ಎಂದಾಗಿದೆ.

ನೇಪಾಳ: 

ನೇಪಾಳ ವನ್ನು ಪ್ರಾಚೀನ ಕಾಲದಲ್ಲಿ ದೇವಧರ್ ಎಂದು ಕರೆಯಲಾಗುತ್ತಿತ್ತು.  ಸೀತಾಮಾತೆ ಜನಿಸಿದ್ದು ಇಂದು ನೇಪಾಳದಲ್ಲಿರುವ ಜನಕಪುರದಲ್ಲಿ. ಚಕ್ರವರ್ತಿ ಅಶೋಕ ಮತ್ತು ಸಮುದ್ರಗುಪ್ತನ ಆಳ್ವಿಕೆಯಲ್ಲಿ ನೇಪಾಳ ಭಾರತದ ಅವಿಭಾಜ್ಯ ಅಂಗವಾಗಿತ್ತು. 1904ರಲ್ಲಿ ಬ್ರಿಟಿಷರು ನೇಪಾಳವನ್ನು ಪ್ರತ್ಯೇಕ ದೇಶವನ್ನಾಗಿ ವಿಭಜನೆ ಮಾಡಿದರು.

ಶ್ರೀಲಂಕಾ:- 

ಶ್ರೀಲಂಕಾ ಬಗ್ಗೆ ಎಲ್ಲರಿಗೂ ಗೊತ್ತಿರುವುಂತಹದ್ದು. ರಾಮಾಯಣ ಕಾಲದಲ್ಲಿ ಲಂಕೆಯನ್ನು ಆಳುತ್ತಿದ್ದು ರಾವಣ.  ಸೀತಾ ಮಾತೆಯನ್ನು ಲಂಕೆಯ ಆಶೋಕವನದಲ್ಲಿ ಬಂಧಿಸಿಟ್ಟಿದ್ದು ನಮಗೆಲ್ಲರಿಗೂ ತಿಳಿದಿದೆ.

ಇಂಡೋನೇಷ್ಯಾ:

ಇಂಡೋನೇಷ್ಯಾದ ಪುರಾತನ ಹೆಸರು ದೀಪಂತರ ಭಾರತ. ದೀಪಂತರ ಭಾರತ ಎಂದರೆ ಭಾರತದಾದ್ಯಂತ ಸಾಗರ ಎನ್ನುವ ಅರ್ಥ ಬರುವುದು. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ.

ಇರಾನ್:

ಮಹಾಭಾರತದ ಯುದ್ದಾನಂತರ ಯಾದವರು ಇರಾನ್ ಮತ್ತು ಇಸ್ರೇಲ್ ಕಡೆ ವಲಸೆ ಹೋದರು ಎಂದು ಹೇಳುತ್ತಾರೆ. ಇರಾನಿನ ಸುಸ ಎಂಬ ಪ್ರದೇಶದಲ್ಲಿ ಪಾರ್ಥಿಯನ್ ಕಾಲಾವಧಿಯ( ಕ್ರಿ.ಪೂ 247- ಕ್ರಿ.ಶ.-224)  ಶ್ರೀ ಕೃಷ್ಣನ ವಿಗ್ರಹಗಳು ಪತ್ತೆಯಾಗಿವೆ. ಈ ಪಾರ್ಥಿಯನ್ ಎನ್ನುವ ರಾಜವಂಶ ಐದು ನೂರುವರ್ಷಗಳ ಕಾಲ ಇರಾನ್ ಅನ್ನು ಆಳಿತ್ತು. ಪಾರ್ಥಿಯನ್ ಗೂ ಪಾರ್ಥಗೂ ಹೋಲಿಕೆ ಇದೆ ಎಂದು ಹೇಳಬಹುದು. ಅರ್ಜುನನಿಗೆ ಪಾರ್ಥ ಎಂದು ಕರೆಯುತ್ತೇವೆ, ಆತನ ಸಾರಥಿಯಾಗಿದ್ದ ಕೃಷ್ಣನಿಗೆ, ಪಾರ್ಥಸಾರಥಿ ಎಂದು ಹೇಳುತ್ತೇವೆ ಯಲ್ಲವೇ, ಹಾಗಾಗಿ ಪಾರ್ಥಿಯನ್ ಎಂಬ ಹೆಸರಿಗೂ ಸಾಮ್ಯತೆ ಇರಬಹುದು. ಆರ್ಯನ್ನರ ಪ್ರದೇಶವು ಇರಾನ್ ಎಂದು ಕೆಲವರು ಹೇಳುತ್ತಾರೆ. ಅದರ ಬಗ್ಗೆ ಹಲವಾರು ಚರ್ಚೆಗಳು, ವಾದಗಳು ನಡೆದಿವೆ. ಪ್ರಾಚೀನ ಪರ್ಶಿಯಾ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ದಗಳ ಹೋಲಿಕೆಯಿದೆ. ಎಲ್ಲಾ  ಮುಸ್ಲಿಂ ರಾಷ್ಟ್ರಗಳು ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಸಹ ಇತರೆ ದೇಶಗಳು ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಹೋಲುವ 12 ತಿಂಗಳುಗಳನ್ನು ಒಳಗೊಂಡಿದೆ. ಆದಾಗ್ಯೂ, ಇದು ಸಾಮಾನ್ಯ ಕ್ಯಾಲೆಂಡರ್‌ನಲ್ಲಿರುವ 365-366 ದಿನಗಳಿಗಿಂತ ಭಿನ್ನವಾಗಿ 354-355 ದಿನಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಹೊಸ ವರ್ಷವು ಮೊಹರಂನೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಈ ಮೊಹರಂ ಹಬ್ಬ ಪ್ರತಿವರ್ಷ ಒಂದೇ ಸಮಯದಲ್ಲಿ ಬರುವುದಿಲ್ಲ. ಪ್ರತಿ ವರ್ಷ ಮೂರು ವರ್ಷಕ್ಕೊಮ್ಮೆ ಒಂದೊಂದು ತಿಂಗಳು ಮುಂಚಿತವಾಗಿ ಬರುತ್ತದೆ.  ಒಮ್ಮೆ, ಜೂನ್ ನಲ್ಲಿ ಬಂದರೆ, ಮುಂದಿನ ಮೂರು ವರ್ಷದ ನಂತರ ಮೇ ನಲ್ಲಿ ಬರುತ್ತದೆ, ಅದರ ಮೂರುವರ್ಷಗಳ ನಂತರ ಏಪ್ರಿಲ್ ನಲ್ಲಿ ಬರುತ್ತದೆ.

    ಇರಾನಿ ಜನತೆ ಇಸ್ಲಾಂ ಕ್ಯಾಲೆಂಡರ್ ಉಪಯೋಗಿಸಿದರು ಸಹ ಪ್ರಾಚೀನ ಪರ್ಶಿಯನ್ ಕ್ಯಾಲೆಂಡರ್ ನಂತೆ, ನೌರುಜ್ ಎನ್ನುವ ಪರ್ಷಿಯನ್ ಹೊಸ ವರ್ಷವನ್ನು ತಪ್ಪದೆ ಆಚರಿಸುತ್ತಾರೆ. ಇರಾನ್‌ನಲ್ಲಿ ವರ್ಷದ ಪ್ರಮುಖ ಹಬ್ಬವಾಗಿದೆ. ಪರ್ಷಿಯನ್ ಭಾಷೆಯಲ್ಲಿ ನೌರುಜ್ ಎಂದರೆ 'ಹೊಸ ದಿನ'. ಭಾರತದಲ್ಲಿ ಹೊಸ ವರ್ಷ ಯುಗಾದಿ ಹಬ್ಬವನ್ನು ನಾವು ಪ್ರತಿವರ್ಷ ಮಾರ್ಚ್ ತಿಂಗಳ ಆಸು ಪಾಸಿನಲ್ಲಿ ಆಚರಿಸುವಂತೆಯೇ ಇರಾನಿಯನ್ನರು ತಮ್ಮ ಹೊಸವರ್ಷವನ್ನು ಮಾರ್ಚ್ 20 ಅಥವಾ 21 ರಂದು ಆಚರಿಸುತ್ತಾರೆ. ಚಳಿಗಾಲವು ವಸಂತಕಾಲಕ್ಕೆ ಬದಲಾಗುವ ದಿನ, ಮತ್ತು ಇದು ಹೊಸ ಆರಂಭದಂತೆ ಭಾಸವಾಗುವುದರಿಂದ "ನೌರುಜ್" ಇರಾನಿಯನ್ನರಿಗೆ ಪ್ರಮುಖ ಹಬ್ಬ. ಇದಕ್ಕಾಗಿಯೇ ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳು ನೀಡಲಾಗುತ್ತದೆ. ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎರಡು ವಾರಗಳವರೆಗೆ ರಜೆಯನ್ನು ನೀಡುತ್ತಾರೆ. ನೌರುಜ್ ಎನ್ನುವುದು ನವ ಮತ್ತು ರೋಜು ಎನ್ನುವ ಎರಡು ಶಬ್ದಗಳಿಂದ ರೂಪುಗೊಂಡಿದೆ. ನವ ಎಂದರೆ ಹೊಸದು, ರೋಜು ಎನ್ನುವುದು ದಿನ. ತೆಲುಗಿನಲ್ಲಿಯೂ ಸಹ ರೋಜು ಅಂದರೆ ದಿನ ಎಂದರ್ಥ.

ಇವೆಲ್ಲವನ್ನು ಗಮನಿಸಿದರೆ, ಸನಾತನ ಸಂಸ್ಕೃತಿ, ಸಂಸ್ಕೃತ ಭಾಷೆ ಭಾರತದಾಚೆಗೂ ಇತ್ತು ಎನ್ನುವ ವಿಚಾರ ಸ್ಪಷ್ಟವಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಇಂದು ಬೇರೆ ಬೇರೆ ಧರ್ಮ, ಆಚಾರವಿಚಾರಗಳನ್ನು ಜನರು ಅಳವಡಿಸಿಕೊಂಡು ಮುನ್ನೆಡೆಯುತಿದ್ದಾರೆ.

ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಪರ್ಷಿಯನ್ 

ಭ್ರಾತಾ ಬಿರಾದರ್ 

ತೀವ್ರ ತೇಜ್ 

ಶ್ವೇತ /ಶ್ವೇತ್ ಸಫೇದ್ / ಸೇಫ್ಡ್

ದ್ವಾರ್ /ದ್ವಾರ ದರ್ /ದಾರ್

ನಾಮ ನಾಮ್

ತಾರಾ ಸಿತಾರಾ 

ಸ್ಥಾನ ಸ್ತಾನ್ 

ವರ್ಷ ಬಾರಿಶ್

ಛಾಯಾ ಸಾಯಾ

ಬಾಹು ಬಾಜು

ಯುವ ಜವಾನ್

ಇಸ್ರೇಲ್:

ಇಸ್ರೇಲ್ ರಾಷ್ಟ್ರವನ್ನು ಕ್ರಿ.ಪೂ  200 ರ ಸಮಯದಲ್ಲಿ ಕಾನಾನ್ಯರು ಆಳುತಿದ್ದರು. ಈ ಕಾನಾನ್ಯ ಎನ್ನುವ ಹೆಸರು ಬಂದಿದ್ದು, ಕೃಷ್ಣನ  ಕನ್ನಯ್ಯ ಎನ್ನುವ ಹೆಸರಿನಿಂದ. ಉತ್ತರಭಾರತದಲ್ಲಿ ಕೃಷ್ಣನಿಗೆ ಕನ್ನಯ್ಯ, ಕಿಶನ್ ಎಂದು ಕರೆಯುತ್ತಾರೆ. ಹೀಗಾಗಿ ಯಾದವರೇ ಕಾನಾನ್ಯರು ಯಾಕಾಗಿರಬಾರದು? ಇದಕ್ಕೆ ಪೂರಕವೆಂಬಂತೆ ಅಲ್ಲಿ ಕಿಶೋನ್ ಎನ್ನುವ ನದಿ ಇದೆ. ಬಾಲ್ಗಾದ್ ಎಂಬ ನಗರವೂ ಇದೆ. ಇದು ಪ್ರಾಚೀನ ಇಸ್ರೇಲ್ ನಲ್ಲಿ ಕಾನಾನ್ಯರ ನಗರವಾಗಿತ್ತು.  ಇತಿಹಾಸಕಾರ ಪ್ರೊಫೆಸರ್ ಪಿ.ಎನ್ ಓಕ್ ಇಸ್ರೇಲ್ ನ ಕಾನಾನ್ಯರು ಹಾಗೂ ಬಾಲ್ ಗಡ್ ನಗರಕ್ಕೂ ಭಾರತದಲ್ಲಿ ಅವತಾರ ಪುರುಷನೆಂದೇ ನಂಬಲಾಗುವ ಶ್ರೀಕೃಷ್ಣನಿಗೂ ಇರಬಹುದಾದ ನಂಟಿನ ಬಗ್ಗೆ ಹೇಳಿದ್ದಾರೆ. 

ಯುರೋಪ್:

ಪ್ರಾಚೀನ ಯುರೋಪಿಯನ್ ಜನರು, ಅದರಲ್ಲೂ ಸೆಲ್ಟ್ಸ್ ಮತ್ತು ಜರ್ಮನ್ನರು ತಮ್ಮನ್ನು ದನುವಿನ ಮಕ್ಕಳೆಂದು ಹೇಳಿಕೊಂಡಿದ್ದಾರೆ. ಜರ್ಮನಿಯಲ್ಲಿ ದನು ಎಂದರೆ ದೇವತೆಗಳ ತಾಯಿ ಎಂದರ್ಥ ಹಾಗೂ ನದಿ ದೇವತೆ ಎಂದೂ ಅರ್ಥವಂತೆ. ಯುರೋಪಿನಲ್ಲಿ ಹರಿಯುವ ಡ್ಯಾನುಬ್ ನದಿಯೂ ಇದಾಗಿದೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಗಳಿಗೆ ದಕ್ಷನ ಹದಿಮೂರು ಪುತ್ರಿಯರಾದ ದಿತಿ, ಅದಿತಿ, ದನು, ಕಲಾ, ಗನಾಯು, ಕ್ರೋಧಾ, ಪ್ರಾಧಾ, ವಿನತೆ, ಕಪಿಲಾ, ಮುನಿ, ಕದ್ರು, ಸುರಸೆ ಮತ್ತು ಇಲೆ ಯರು ಇವರೆಲ್ಲರನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ದನುವಿನಿಂದ ದಾನವರು ಹುಟ್ಟಿದರು. ಬಹುಶಃ ಇವರ ಸಂತಾನವೇ ಯುರೋಪಿಯನ್ನರು ಯಾಕಾಗಿರಬಾರದು.  ಕಾಕತಾಳೀಯವೆಂಬಂತೆ, ಜರ್ಮನ್ ಭಾಷೆಯಲ್ಲಿ ಬಹಳಷ್ಟು ಸಂಸ್ಕೃತ ಶಬ್ದಗಳಿವೆ, ಇಂಗ್ಲೀಷಿನಲ್ಲಿಯೂ ಹಲವಾರು ಸಂಸ್ಕೃತ ಶಬ್ದಗಳಿವೆ. 

ಸಂಸ್ಕೃತ ಮತ್ತು ಆಂಗ್ಲ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಆಂಗ್ಲ ಭಾಷೆ

ಶ್ರೀ ಸರ್

ನಾಮ ನೇಮ್‌

ಕಫ ಕಾಫ್‌

ಮಾನವ ಮ್ಯಾನ್‌

ಮಿಥ್ಯ ಮಿಥ್‌

ಮಾತೃ ಮದರ್‌

ಪಿತೃ ಫಾದರ್‌ 

ಭ್ರಾತೃ  ಬ್ರದರ್‌

ನವ ನ್ಯೂ 

ತ್ರಿ ತ್ರೀ 

ಶರಣಂ ಸರೆನ್‌ಡರ್‌ 

ದಶ ಡೆಸಿ/ಡೆಕಾ

ಯುವ ಯೂತ್‌ 

ಶರ್ಕರ ಸುಕ್ರೊಸ್‌-ಶುಗರ್‌, 

ಮಾಧ್ಯಮ ಮೀಡಿಯಮ್‌

ಸ್ಥಾನ ಸ್ಟೇಶನ್

    ಹೀಗೆ ಅನೇಕ ಸಂಸ್ಕೃತ- ಆಂಗ್ಲ ಭಾಷೆಗಳ ಪದಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುವುದನ್ನು ನಾವು ಕಾಣಬಹುದು. ಯೂರೋಪಿನ ಭಾಷೆಗಳ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಾಗಲು, ಬಹುಶಃ ಪ್ರಾಚೀನ ಭಾರತದಿಂದ ಯೂರೋಪಿನ ಕಡೆ ವಲಸೆ ಹೋದ ವೈದಿಕ ಸಂಸ್ಕೃತ ಭಾಷೆ ಮಾತನಾಡುತ್ತಿದ್ದ ಒಂದು ಗುಂಪು ಕಾರಣವಾಗಿರಬಹುದು. 


ಭಾರತದ ಸುತ್ತಮುತ್ತ ಇರುವ ಪಾಕಿಸ್ತಾನ್, ಅಫ್ಘನಿಸ್ಥಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್, ಕಜಕಸ್ಥಾನ್, ಉಜ಼್ಬೇಕಿಸ್ತಾನ್,  ಈ ರಾಷ್ಟ್ರಗಳ ಹೆಸರಿನಲ್ಲಿ ಸ್ಥಾನ ಇದೆಯಲ್ಲ, ಇದರ ಮೂಲ ಸಂಸ್ಕೃತ ಭಾಷೆ, ಸ್ಥಾನ ಎಂದರೆ ಸ್ಥಳ ಎನ್ನುವ ಅರ್ಥ. ಸ್ಥಾನ ಎನ್ನುವುದು ಸ್ಟೇಶನ್ ಎಂದು ಆಂಗ್ಲಭಾಷೆಯಲ್ಲಿ ಬದಲಾವಣೆಗೊಂಡಿದೆ. ಪೋಲೀಸರು ಇರುವ ಸ್ಥಳ, ಪೋಲೀಸ್ ಸ್ಟೇಶನ್, ರೈಲು ಗಾಡಿಗಳು ನಿಲ್ಲುವ ಸ್ಥಳ ರೈಲ್ವೇ ಸ್ಟೇಶನ್, ಇತ್ಯಾದಿ.

    ಪ್ರಸ್ತುತ ದೇಶಗಳ ಹೆಸರು, ಹಿಂದೊಮ್ಮೆ ಸಂಸ್ಕೃತದ ಹೆಸರುಗಳನ್ನು ಹೊಂದಿದ್ದವು, ಉದಾಹರಣೆಗೆ, ಲಾವಾ ದ್ವೀಪ (ಲಾವೋಸ್), ವರುಣ್ ದ್ವೀಪ (ಬೋರ್ನಿಯೊ), ಶ್ಯಾಮ್ ದೇಶ್ (ಥೈಲ್ಯಾಂಡ್), ಚಂಪಾ ದೇಶ್ (ವಿಯೆಟ್ನಾಂ), ಬ್ರಹ್ಮ ದೇಶ್ (ಬರ್ಮಾ/ ಮ್ಯಾನ್ಮಾರ್), ಭು ಉತ್ತನ್ ( ಭೂತಾನ್) ಮತ್ತು ಮಲಯ ದ್ವೀಪ್ (ಮಲೇಷ್ಯಾ).  ಸಿಂಗಪುರ.  ಒಂದು ಮೂಲ ಹೆಸರು, ಕಾಲಕ್ರಮೇಣ ವಿಭಿನ್ನ ರೂಪ ಪಡೆಯುವುದು ನಮಗೆ ಗೊತ್ತಿದೆ, ಮಂಗಳೂರಿನಲ್ಲಿ ಹಂಪನಕಟ್ಟೆ ಎನ್ನುವ ಸ್ಥಳವಿದೆ. ನೂರುವರ್ಷಗಳ ಹಿಂದೆ ಅದು ಅಪ್ಪಯ್ಯನಕಟ್ಟೆ ಎಂದಾಗಿತ್ತು, ಇತ್ತೀಚೆಗೆ ದೊರೆತ ಶಾಸನ ಒಂದರಿಂದ ಈ ಮಾಹಿತಿ ತಿಳಿಯಿತು. ಬಯಲು ಸೀಮೆಯಲ್ಲಿ ಸ್ವಲ್ಪ ಎನ್ನುವುದಕ್ಕೆ ರವೊಷ್ಟು ಎನ್ನುತ್ತಾರೆ, ಅದರ ಅರ್ಥ ರವೆಯಷ್ಟು, ಆಡುಮಾತಿನಲ್ಲಿ ಅದು ರವೊಷ್ಟು ಎನ್ನುವ ಅರ್ಥ ಪಡೆದಿದೆ. ವಿಜಾಪುರ/ಬಿಜಾಪುರದ ಹೆಸರು ವಿಜಯಪುರ ಎನ್ನುವುದಾಗಿತ್ತು, ಆಡು ಬಳಕೆಯಲ್ಲಿ ಅದು ವಿಜಾಪುರ/ಬಿಜಾಪುರ ಎಂದಾಗಿದೆ. ಹೀಗೆ ಹುಡುಕುತ್ತ ಹೋದಂತೆಲ್ಲ ಸಹಸ್ರಾರು ಶಬ್ದಗಳು ಅದರ ಮೂಲ ಸ್ವರೂಪದಿಂದ ಬದಲಾಗಿರುವುದು ಕಂಡು ಬರುತ್ತದೆ. 

    ಇತಿಹಾಸ ಎಂದರೆ ದಾಖಲೆ ಪುರಾವೆಗಳು ಇರಲೇ ಬೇಕೆಂದು ಎನ್ನುವುದನ್ನು ಬ್ರಿಟೀಷರು ಪ್ರತಿಪಾದಿಸಿ, ಅದನ್ನೇ ನಮ್ಮ ಜನರ ತಲೆಯಲ್ಲಿ ತುಂಬಿ ಹೋಗಿದ್ದಾರೆ. ಅದನ್ನೇ ನಾವು ಅನುಸರಿಸುತ್ತ, ಈ ನೆಲದ ಮೂಲ ಇತಿಹಾಸವನ್ನು ಮರೆಯುವ ಪ್ರಯತ್ನವನ್ನ ನಾವು ಮಾಡುತ್ತಿರುವುದು ವಿಷಾದನೀಯ. ಅದೃಷ್ಟವಶಾತ್ ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳ ಹಿಂದಿನ ವೇದ ಉಪನಿಷತ್ ಗಳು, ರಾಮಾಯಣ ಮಹಾಭಾರತ, ಪುರಾಣ ಕಥೆಗಳು ಇತ್ಯಾದಿಗಳನ್ನ ಶ್ರುತಿ ಮತ್ತು ಸ್ಮೃತಿ ವಿಧಾನದ ಮೂಲಕ ತಲುಪಿಸುವ ವ್ಯವಸ್ಥೆಯನ್ನ ಮಾಡಿದ್ದರಿಂದ, ಸಹಸ್ರಾರು ತಲೆಮಾರುಗಳಿಂದ ಇಂದಿನ ತಲೆಮಾರಿನವರಿಗೆ ಮಾಹಿತಿ ಲಭ್ಯವಾಗುತ್ತಿದೆ.

ಬರಹ:- ಪಿ.ಎಸ್.ರಂಗನಾಥ,
ಮಸ್ಕತ್ - ಒಮಾನ್ ರಾಷ್ಟ್ರ.

ಗುರುವಾರ, ಮೇ 23, 2024

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ಈಜಿಪ್ಟ್


ಈಜಿಪ್ಟ್ ದೇಶದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈಜಿಪ್ಟ್  ಎಂದೊಡನೆ ಅಲ್ಲಿನ ಪಿರಮಿಡ್ ಗಳು, ನೈಲ್ ನದಿ, ಪುರಾತನ ನಾಗರೀಕತೆ ಎಲ್ಲರಿಗೂ ನೆನಪಾಗುತ್ತದೆ. ಈಜಿಪ್ಟಿನ ನಾಗರೀಕತೆ ಮತ್ತು ಪುರಾತನ ಪಿರಮಿಡ್ ಗಳು ವಿಶ್ವವಿಖ್ಯಾತ. ಪ್ರಪಂಚದ ಮಹಾ ಅದ್ಭುತಗಳ ಪಟ್ಟಿಯಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳೂ ಸೇರಿವೆ. ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೈತ್ಯಗಾತ್ರದ ಪಿರಮಿಡ್ ಗಳನ್ನು ವೀಕ್ಷಿಸಲು  ಸಾವಿರಾರು ಪ್ರವಾಸಿಗರನ್ನು ದಿನನಿತ್ಯ ಭೇಟಿ ನೀಡುತಿದ್ದಾರೆ.  ಇಲ್ಲಿನ ನೈಲ್ ನದಿ ಈ ದೇಶದ ಜೀವನದಿ. ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ ಎನ್ನುವಂತೆ, ಅಂದಿನ ಈಜಿಪ್ಟಿನ ಪುರಾತನ ನಾಗರಿಕತೆ ಹುಟ್ಟಿದ್ದು ಈಜಿಪ್ಟಿನ ನೈಲ್ ನದಿ ಹರಿಯುವ ಇಕ್ಕೆಲಗಳಲ್ಲಿ.  ಅಗಾಧವಾದ ಮರುಭೂಮಿಯ ಮಧ್ಯೆ ಜನವಸತಿ ಕೇಂದ್ರೀಕೃತವಾಗಿರುವುದು ಈ ನದಿಯ ಎರಡು ದಂಡೆಗಳ ಬದಿಯಲ್ಲಿ ಹಲವಾರು ಹಳ್ಳಿಗಳು, ಪಟ್ಟಣಗಳು ಜನವಸತಿ ಕೇಂದ್ರಗಳನ್ನು ಕಾಣಬಹುದು. ಮಿಕ್ಕಂತೆ ಕಣ್ಣು ಹಾಯಿಸಿದೆಡೆಯಲ್ಲೆಲ್ಲೂ ಮರುಭೂಮಿ. 

ಕಣ್ಮರೆಯಾದ ಪ್ರಾಚೀನ ಈಜಿಪ್ಟಿನ ಜನಾಂಗ:-

ಕೇವಲ ಇನ್ನೂರೈವತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಅಮೇರಿಕ ದೇಶ ಇಂದು ಪ್ರಪಂಚದಲ್ಲಿ ದೊಡ್ಡಣ್ಣನೆಂದು ಹೆಸರುವಾಸಿ.  ಆಧುನಿಕತೆ, ಆರ್ಥಿಕತೆ, ಮಿಲಿಟರಿ ಶಕ್ತಿ, ಇತ್ಯಾದಿಯಲ್ಲಿ ನಂಬರ್ ಒನ್ ದೇಶ ಎಂದೇ ಗುರುತಿಸಲಾಗುತ್ತಿದೆ. ವಿಷಯ ಹೀಗಿರುವಾಗ ಏಳು ಸಾವಿರ ವರ್ಷಗಳ ಹಿಂದೆಯೇ ಆಧುನಿಕ ನಾಗರೀಕತೆಯನ್ನು ರೂಡಿಸಿಕೊಂಡಿದ್ದ ಈಜಿಪ್ಟ್ ದೇಶ ಹೇಗಿರಬಹುದು ಎನ್ನುವ ಕಲ್ಪನೆ ನಮ್ಮ ಮನದಲ್ಲಿ ಮೂಡಬಹುದು. ಆದರೆ ವಾಸ್ತವ ಸ್ಥಿತಿ ಬೇರೆಯದೇ ಇದೆ. ಅಂದಿನ ಸುವರ್ಣಯುಗ, ಗತ ವೈಭವ ಕೇವಲ ಇಂದು ಪಳೆಯುಳಿಕೆಗಳಾಗಿ ಉಳಿದಿದೆ. 

ಇತ್ತೀಚಿನ ಕೆಲ ವರ್ಷಗಳ ಹಿಂದೆ ಈಜಿಪ್ಟ್ ಪ್ರಜೆಗಳ ಕುರಿತು ಹಲವಾರು DNA  ವರದಿಗಳನ್ನು ಬಿಡುಗಡೆಗೊಳಿಸಿದರು. ಆ ವರದಿಗಳ ಪ್ರಕಾರ  ಮಮ್ಮಿಗಳು ಸೇರಿದಂತೆ, ಅಂದಿನ ಜನರು ಮತ್ತು ಇಂದಿನ ಜನರ ನಡುವೆ ಹೋಲಿಕೆಯೇ ಇಲ್ಲವಂತೆ, ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಮೂಲನಿವಾಸಿಗಳು ಕಾಲಕ್ರಮೇಣ ಕಣ್ಮರೆಯಾಗಿದ್ದಾರೆ. ನಮ್ಮ ಹರಪ್ಪ ಮೆಹೆಂಜದಾರೋ ನಾಗರೀಕತೆಯಂತೆ, ಅಂದಿನ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದಂತೆ, ಇಲ್ಲಿನ ಮೂಲನಿವಾಸಿಗಳು ಬೇರೆಡೆ ವಲಸೆ ಹೋಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಥವಾ ಆ ಜನಾಂಗ ನಶಿಸಿ ಹೋಗಿದೆಯೋ ಗೊತ್ತಿಲ್ಲ. ಇಂದಿನ ಈಜಿಪ್ಟಿನ ದೇಶದಲ್ಲಿರುವ ಬಹುತೇಕರು ಇತರೆ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು. ಪ್ರಸ್ತುತ ಈಜಿಪ್ಟ್ ಜನರ DNA ಮಧ್ಯಪ್ರಾಚ್ಯ ರಾಷ್ಟ್ರಗಳ ಜನರ ಜನರ ಜತೆ ಹೆಚ್ಚು ಹೋಲಿಕೆಯಾಗುತ್ತದೆಯಂತೆ. ಇನ್ನೂ ಒಂದು ವಿಷಯ ಏನೆಂದರೆ, ಈಜಿಪ್ಟ್ ದೇಶ ಆಫ್ರಿಕಾ ಖಂಡದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆಫ್ರಿಕಾ ಖಂಡದ ಜನಾಂಗಕ್ಕೂ ಈಗಿರುವ ಈಜಿಪ್ಟ್ ದೇಶದ ಜನರಿಗೂ ಹೋಲಿಕೆಯೂ ಬಹಳ ಕಡಿಮೆ 

ಒಂದು ಕಾಲದಲ್ಲಿ ಶ್ರೀಮಂತವಾಗಿ ಮೆರೆದಿದ್ದ ಈಜಿಪ್ಟ್ ರಾಷ್ಟ್ರ, ಈಗ ಬಡ ರಾಷ್ಟ್ರವಾಗಿದೆ. ವರದಿಗಳ ಪ್ರಕಾರ, ಈಜಿಪ್ಟ್ ದೇಶದ 32% ಜನರು ಬಡತನದಲ್ಲಿದ್ದಾರೆ. ದೇಶದ ಆರ್ಥಿಕತೆ ಕುಸಿದಿದ್ದು, ವಿಶ್ವಬ್ಯಾಂಕ್ ಮತ್ತು ಇತರೆ ಅರಬ್ ದೇಶಗಳ ನೆರವಿನಿಂದ ದೇಶವು ಮುನ್ನೆಡೆಯುತ್ತಿದೆ. ಪ್ರವಾಸೋದ್ಯಮದಿಂದ ಅಲ್ಪ ಮಟ್ಟಿನ ಆದಾಯವಿದೆ. ಲಕ್ಷಾಂತರ ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ವಿದ್ಯಾವಂತ ಜನ ಉದ್ಯೋಗ ಅರಸಿ ಗಲ್ಫ್ ಸೇರಿದಂತೆ ಇತರೆ ರಾಷ್ಟ್ರಗಳಿಗೆ ವಲಸೆ ಹೋಗುತಿದ್ದಾರೆ. ಕೃಷಿಯು ಬಹುತೇಕ ನೈಲ್ ನದಿಯ ಮೇಲೆ ಅವಲಂಬಿತವಾಗಿರುವುದರಿಂದ, ಆಹಾರ ಪದಾರ್ಥಗಳನ್ನ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಸಾವಿರಾರು ವರ್ಷಗಳ ಹಿಂದೆ ಶ್ರೀಮಂತ ರಾಷ್ಟ್ರವಾಗಿದ್ದ ಈಜಿಪ್ಟ್ ಹೀಗೇಕಾಯ್ತು ಎನ್ನುವುದಕ್ಕೆ ನೂರಾರು ಕಾರಣಗಳು ಸಿಗಬಹುದು. 

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ನಾಗರೀಕತೆ:-

ಅಪರಿಮಿತ ಉತ್ಸಾಹದಿಂದ ಈಜಿಪ್ಟ್ ಪ್ರವಾಸಕ್ಕೆ ಹೋದ ಜನರು, ಮರಳಿ ಬರುವಾಗ ಬೇಸರದಿಂದಲೇ ಮರಳಿ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರವಾಸಿ ಗೈಡ್ ಗಳು ಎಂದು ಹಲವಾರು ಜನ ಯಾಮಾರಿಸುತ್ತಾರೆ.  ಕ್ಯಾಮೆಲ್ ರೈಡ್ ಬೇಕಾ? ಸಿಗರೇಟ್ ಬೇಕಾ? ಗಾಡಿ ಬೇಕಾ? ಕುದರೆ ಸವಾರಿ ಬೇಕಾ? ಎಂದು ಹಲವರು ನಮ್ಮ ಹಿಂದೆ ಬೀಳುವುದು ಸಾಮಾನ್ಯ, ಅವರೆಲ್ಲರನ್ನೂ ನಿರ್ಲಕ್ಷಿಸಿ ಪ್ರವಾಸಿ ಸ್ಥಳಗಳಿಗೆ ಹೋದರೆ ಅಲ್ಲಿನ ಅವ್ಯವಸ್ಥತೆ ಬೇಸರವನ್ನುಂಟು ಮಾಡುತ್ತದೆ. ಕೆಲವರು ಒಂದಕ್ಕೆ ಎರಡರಷ್ಟು ಹಣ ಪಡೆಯುವುದು ಮಾಮೂಲಿಯಾಗಿದೆ. ಏನೇ ಸಹಾಯ ಬೇಕಿದ್ದರೂ, ಉಚಿತವಾಗಿ ದೊರೆಯುವುದು ಕಡಿಮೆ. ಎಲ್ಲದಕ್ಕೂ ಭಕ್ಷೀಸು ಅಥವ ಟಿಪ್ಸ್ ಕೇಳುವುದು ಸಾಮಾನ್ಯ ಸಂಗತಿ. ಇನ್ನು ಸ್ವಚ್ಚತೆ ವಿಷಯದಲ್ಲಂತೂ ಹೇಳುವುದೇ ಬೇಡ. ಎಲ್ಲಿ ನೋಡಿದರೂ ಕಸದ ರಾಶಿ. ಅದು ಪಿರಮಿಡ್ ಗಳಿರಲಿ, ನೈಲ್ ನದಿಯ ಅಕ್ಕಪಕ್ಕದಲ್ಲಾಗಲಿ, ಲಕ್ಸರ್ ನ ದೇವಾಲಯ ಸುತ್ತಮುತ್ತ, ಎಲ್ಲೇ ಆದರು ಕಸ ಕಡಿಮೆ ಏನಿಲ್ಲ. ಕೈರೋ ನಗರ ಜನಸಾಗರ ದಿಂದ ತುಂಬಿ ಹೋಗಿದೆ, ಇನ್ನು ಐವತ್ತು ವರ್ಷಗಳಲ್ಲಿ ಆ ನಗರದ ಜನಸಂಖ್ಯೆ ದುಪ್ಪಟ್ಟಾಗಲಿದೆ. ಮೈಲುಗಟ್ಟಲೆ ಇರುವ ಅಂದವಿಲ್ಲದ ಅಪಾರ್ಟ್ ಮೆಂಟ್ ಗಳು ನೀರಸವೆನಿಸಿ ಬಿಡುತ್ತವೆ  ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ನಮ್ಮ ಪ್ರವಾಸವನ್ನು ದುಸ್ತರಗೊಳಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಆಧುನಿಕ ನಾಗರೀಕತೆ ಹೊಂದಿದ್ದ ಈಜಿಪ್ಟ್ ದೇಶಾನ ಇದು ಎಂದೆನಿಸುತ್ತದೆ. ಡಾಕ್ಟರ್ ಇಂಜಿನಿಯರುಗಳು, ಶಿಕ್ಷಕರು, ಪ್ರೊಫೆಸರ್ ಗಳು ಮುಂತಾದ ಸುಶಿಕ್ಷಿತ ಜನರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇಂದಿನ ಈಜಿಪ್ಟ್ ನ ಸ್ಥಿತಿಗೆ ಇದು ಒಂದು ಕಾರಣ ಸಹ ಎನ್ನಲಾಗುತ್ತಿದೆ. ಮುಂದೊದು ದಿನ ಬದಲಾಗುವ ರಾಜಕೀಯ ಕಾಲಘಟ್ಟದಲ್ಲಿ ಈಜಿಪ್ಟ್ ತನ್ನ ಗತ ವೈಭವ ಪಡೆಯಬಹುದು ಎನ್ನುವ ಆಶಾಭಾವ ಇಲ್ಲಿಗೆ ಭೇಟಿ ನೀಡಿ ಹಿಂತಿರುಗುವ ಪ್ರವಾಸಿಗರಲ್ಲಿದೆ


ಪ್ರಮುಖ ಪ್ರವಾಸಿ ತಾಣಗಳು:- 

ಇಲ್ಲಿರುವ ಹಲವಾರು ಪ್ರವಾಸಿ ತಾಣಗಳನ್ನು ನೋಡಲು, ಪ್ರತಿವರ್ಷ ಲಕ್ಷಾಂತರ ಜನರು ಈಜಿಪ್ಟ್ ಪ್ರವಾಸ ಕೈಗೊಳ್ಳುತ್ತಾರೆ. ನೋಡುವುದಕ್ಕೆ ಅಸಂಖ್ಯಾತ ತಾಣಗಳಿದ್ದು, ಭರಪೂರ ಮಾಹಿತಿ ಇಲ್ಲಿ ದೊರೆಯುತ್ತದೆ. ಇತಿಹಾಸ ಓದುವ ವಿಧ್ಯಾರ್ಥಿಗಳಿಗೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಜನರಿಗೆ ಈಜಿಪ್ಟ್ ಪ್ರವಾಸ ಒಂದು ಅದ್ಭುತವಾದ ಅನುಭವವನ್ನೇ ನೀಡುತ್ತದೆ. ಈಜಿಪ್ಟ್ ದೇಶದಲ್ಲಿ ನೋಡುವಂತಹ ಸ್ಥಳಗಳು ಬಹಳಷ್ಟಿವೆ. ಸಾವಿರಾರು ವರ್ಷಗಳ ಹಿಂದೆಯೇ ಏನೆಲ್ಲಾ ತಂತ್ರಜ್ನಾನವನ್ನು ಅಂದಿನ ಕಾಲದಲ್ಲಿ ಅವರು ಉಪಯೋಗಿಸಿದ್ದರು ಅಂತ ಆಶ್ಚರ್ಯವಾಗುತ್ತಿದೆ. ಇವರ ಆರಾಧ್ಯ ದೇವರು "ಸೂರ್ಯ". ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಆದ್ದರಿಂದ ಈಜಿಪ್ಟ್ ದೇವತೆಗಳ ಎಲ್ಲ ದೇವಾಲಯಗಳು ನೈಲ್ ನದಿಯ ಪೂರ್ವ ತಟದಲ್ಲಿವೆ. ಸೂರ್ಯ ಮುಳುಗುವುದು ಪಶ್ಚಿಮ ದಿಕ್ಕಿನಲ್ಲಿ, ಹೀಗಾಗಿ ಸತ್ತವರ ಗೋರಿಗಳಿರುವ  ಈಜಿಪ್ಟಿನ ಎಲ್ಲ ಪಿರಮಿಡ್‌ಗಳು ನೈಲ್ ನದಿಯ ಪಶ್ಚಿಮ ಭಾಗದಲ್ಲಿವೆ. ಸೂರ್ಯ ಉದಯಿಸುವಾಗ ಬೆಳಕು, ಹೊಸ ಜೀವನ ಮತ್ತು ಸೂರ್ಯ ಮುಳುಗುವಾಗ ಕತ್ತಲು ಅಥವಾ ಮರಣ ಎಂಬರ್ಥದಲ್ಲಿ ಪಿರಮಿಡ್ ಗಳನ್ನು ಮತ್ತು ದೇವಾಲಯಗಳನ್ನು ನಿರ್ಮಿಸಲಾಗಿದೆ


ಈಜಿಪ್ಟ್ ಪ್ರವಾಸಿ ತಾಣಗಳ ಕುರಿತು ಕಿರು ಚಿತ್ರಣ ಇಲ್ಲಿ ನೀಡಲಾಗಿದೆ.

1. ಗಿಜಾದ ಪಿರಮಿಡ್‌ಗಳು (Pyramids of Giza), : 



ಈಜಿಪ್ಟ್ ಪ್ರಖ್ಯಾತವಾಗಿರುವುದಕ್ಕೆ ಕಾರಣ ಇಲ್ಲಿನ ಪಿರಮಿಡ್ ಗಳು. ಈ ಎಲ್ಲಾ ಪಿರಮಿಡ್‌ಗಳು ಈಜಿಪ್ಟ್‌ನ ರಾಜಮನೆತನದವರ ಗೋರಿಗಳು. ಪ್ರಾಚೀನ ಈಜಿಪ್ಟಿನ ರಾಜರುಗಳನ್ನು ಫೆರೋಗಳು ಎಂದು ಕರೆಯುತ್ತಾರೆ. ಈ ಫೆರೋಗಳ ಮರಣಾನಂತರ ಅವರನ್ನು ಪಿರಮಿಡ್ ಗಳ ಒಳಗೆ ಮಮ್ಮಿಗಳಾಗಿ ಮಾಡಿ ಶವಸಂಸ್ಕಾರ ಮಾಡುತಿದ್ದರು. ರಾಜ ಸತ್ತಮೇಲೆ ಕಳೇಬರವನ್ನು ಸುಗಂಧದ್ರವ್ಯಗಳಿಂದ ಅಲಂಕರಿಸಿ, ರಾಜನಿಗೆ ಪ್ರಿಯವಾದ ವಸ್ತುಗಳ ಜೊತೆಗೆ ಚಿನ್ನಾಭರಣಗಳು, ಅಲಂಕಾರಿಕ ವಸ್ತುಗಳನ್ನು ಇಡಲಾಗುತ್ತಿತ್ತು. ನೆಲದಲ್ಲಿ ಹೂಳಿದ ಮೇಲೆ (ಇದನ್ನೇ ‘ಮಮ್ಮಿ’ ಎನ್ನುವುದು)  ಅದರ ಮೇಲೆ ಪಿರಮಿಡ್‌ ಅನ್ನು ಕಟ್ಟುತ್ತ ಹೋಗುತ್ತಾರೆ. ಫೆರೋ ರಾಜನ ಪ್ರಖ್ಯಾತಿಗೆ ಅನುಗುಣವಾಗಿ ದೊಡ್ಡ ಗಾತ್ರದ ಪಿರಮಿಡ್‌ ಕಟ್ಟುವ ಮೂಲಕ ಗೌರವ ಸೂಚಿಸುತಿದ್ದರಂತೆ. ಕೈರೋ ನಗರದ ಸುತ್ತಮುತ್ತಲೂ ಏನಿಲ್ಲೆಂದರೂ ನೂರಕ್ಕೂ ಹೆಚ್ಚು ಪಿರಮಿಡ್‌ಗಳಿವೆ. ಅತ್ಯಂತ ದೊಡ್ಡ ಪಿರಮಿಡ್ಡ್  ಗಿಜಾ ದಲ್ಲಿದೆ.  ಈ ಪಿರಮಿಡ್ಡ್  481 ಅಡಿ ಎತ್ತರ 146 ಅಡಿ ಅಗಲವನ್ನು ಹೊಂದಿದ್ದು, 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ.  ಪಿರಮಿಡ್‌ಗಳು ಪ್ರಾಚೀನ ಈಜಿಪ್ಟ್‌ ನಾಗರಿಕತೆಯನ್ನು ಹಾಗೂ ಅಲ್ಲಿ ಆಡಳಿತ ನಡೆಸಿದ ಫೇರೋಗಳ ಪ್ರಾಬಲ್ಯ ಸೂಚಿಸುವ ಅವಿಸ್ಮರಣೀಯ ಸಂಕೇತಗಳಾಗಿವೆ. ಒಂದೊಂದು ಪಿರಮಿಡ್‌ನ ರಚನೆಗೂ ಸುಮಾರು 20 ವರ್ಷಗಳು ಕಾಲ ಸಮಯ ಹಿಡಿದಿದೆ. ಪ್ರಾಚೀನ ಈಜಿಪ್ಟಿನ ಫೆರೋ ರಾಜರು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದರಿಂದ ಮೃತ ಮೃತ ರಾಜನ ಆತ್ಮವು ಇನ್ನೊಂದು ಲೋಕಕ್ಕೆ ಹೋಗಲು ಅನುಕೂಲವಾಗುವಂತೆ ಪಿರಮಿಡ್‌ಗಳ ಒಳಗೆ ಪಿರಮಿಡ್ಡಿನ ತುತ್ತ ತುದಿಯ ಮೂಲಕ ನೇರವಾಗಿ ಆಕಾಶಕ್ಕೆ ಹೋಗಿ ಸ್ವರ್ಗ ಸೇರುವುದು ಎನ್ನುವ ನಂಬಿಕೆ ಅವರಲ್ಲಿತ್ತು.

2. ಲಕ್ಸರ್ ದೇವಾಲಯಗಳು ಮತ್ತು ಗೋರಿಗಳು (Luxor's Temples & Tombs), 

ಇಂದಿನ ಲಕ್ಸರ್ ನಗರವನ್ನು ಪುರಾತನ ಥೀಬ್ಸ್ ನಗರ ಎಂದು ಕರೆಯುತ್ತಾರೆ. ಇದು ಕೈರೊದಿಂದ ಸುಮಾರು 650 ಕಿ.ಮೀ. ದೂರದಲ್ಲಿದೆ. ಈ ನಗರವು ನೈಲ್ ನದಿಯ ಪೂರ್ವ ದಂಡೆಯಲ್ಲಿದೆ.

ಲಕ್ಸರ್‌ ಪಟ್ಟಣ ಕೈರೋಗಿಂತ ತುಂಬ ಚಿಕ್ಕ ನಗರ.  ಪ್ರಾಚೀನ ಕಾಲದಲ್ಲಿ ಈಜಿಪ್ಟ್‌ನ ರಾಜಧಾನಿಯಾಗಿತ್ತಂತೆ. ಈ ಪ್ರದೇಶದಲ್ಲಿ  ಪುರಾತನನ ಈಜಿಪ್ಟ್ ದೇವಾಲಯಗಳ ಸಂಕೀರ್ಣವಿದೆ.  ಫೆರೋಗಳು ಬದುಕಿದ್ದಾಗಲೇ ಗೋರಿಗಳನ್ನ ಇಲ್ಲಿ ನಿರ್ಮಿಸುತಿದ್ದರಂತೆ, ಅಂದರೆ ಜೀವಂತ ಸಮಾಧಿಯಾಗಲು ಅಲ್ಲ. ಮುಂದೊಂದು ದಿನ ಸಾವು ಬಂದೇ ಬರುತ್ತದೆ. ಸತ್ತ ನಂತರ ಅವರ ಹೆಸರು ಮತ್ತು ಘನತೆ ಚಿರಸ್ಥಾಯಿಯಾಗಿಯಿರಲು ಭವ್ಯವಾದ ಮಂದಿರ ನಿರ್ಮಾಣ ಮಾಡುತಿದ್ದರು.  ಈ ದೇವಾಲಯಗಳಿಗೆ ‘ಅಂತ್ಯಸಂಸ್ಕಾರದ ದೇವಾಲಯ’(ಫ್ಯುನರರಿ ಟೆಂಪಲ್) ಎಂದೂ ಕರೆಯುತ್ತಾರೆ. ಮೂರು ಹಂತಗಳಲ್ಲಿ ಹಟ್‌ಶೆಪ್‌ಸುಟ್‌ ರಾಣಿ ಕಟ್ಟಿಸಿದ ಈ ಮಂದಿರ ಆ ಕಾಲದಲ್ಲಿ ಇಡೀ ಈಜಿಪ್ಟ್‌ನಲ್ಲೇ ಅತ್ಯಂತ ಭವ್ಯ ಮತ್ತು ಸುಂದರ ದೇವಾಲಯವಾಗಿತ್ತು. ಈಜಿಪ್ಟಿನಲ್ಲಿ ಕೆಲವು ರಾಣಿಯರು ಹಟ್‌ಶೆಪ್‌ಸುಟ್‌ಗಿಂತ ಮೊದಲು ಮಹಿಳಾ ಫೆರೋ ಆಗಿ ರಾಜ್ಯಭಾರ ಮಾಡಿದ್ದರೂ ಸಹ  21 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಟ್‌ಶೆಪ್‌ಸುಟ್‌ ಎಲ್ಲರಿಗಿಂತ ಹೆಚ್ಚು ಪ್ರಖ್ಯಾತ. ವಿಭಿನ್ನ ಫೆರೋಗಳು ಹಂತ ಹಂತವಾಗಿ ಕಟ್ಟಿಸಿದ ಲಕ್ಸರ್‌ ಮಂದಿರ, ಪುರಾತನ ಈಜಿಪ್ಟ್‌ನ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು ಇಪ್ಪತ್ತು ಅಡಿ ಉದ್ದದ 61 ಕಂಬಗಳ ಮೇಲೆ ಹಟ್‌ಶೆಪ್‌ಸುಟ್‌ ರಾಣಿಯ ಅಡಳಿತಾವಧಿಯ ಸಾಧನೆಗಳು, ಹಲವು ದೇವರ ಕತೆಗಳು ಹಾಗೂ ಧರ್ಮಾಚರಣೆಗಳ ಕುರಿತು ವಿವರಗಳನ್ನು ಕೆತ್ತಲಾಗಿದೆ. ಈ ಲಕ್ಸರ್ ನ ನೈಲ್ ನದಿಯ  ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ಹಲವಾರು ದೇವಾಲಯಗಳಿವೆ. ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ಕಾರ್ನಕ್ ದೇವಾಲಯ ಇದೇ ದಂಡೆಯ ಮೇಲಿದೆ. ಹತ್ತಿರದಲ್ಲಿ, ಲಕ್ಸರ್ ಮ್ಯೂಸಿಯಂ, ಕಾರ್ನಾಕ್ ಟೆಂಪಲ್, ಕೋನ್ಸು ಟೆಂಪಲ್, ಬಿಸಿಗಾಳಿ ಬೆಲೂನ್ ಗಳು ಹಾರಾಡುವ ಸ್ಥಳ, ‘ವ್ಯಾಲೀ ಆಫ್‌ ಕಿಂಗ್ಸ್‌ ಏಂಡ್‌ ಕ್ವೀನ್ಸ್‌’ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಕಾಣಬಹುದು. 

3. ನೈಲ್ ಕ್ರೂಸಿಂಗ್ (Cruising the Nile):- 

ಈಜಿಪ್ಟ್ ನ ಜನವಸತಿ ನೈಲ್ ನದಿಗುಂಟ ಹರಡಿಕೊಂಡಿದೆ. ಮರುಭೂಮಿಯ ಮಧ್ಯದಲ್ಲಿ ನೈಲ್ ನದಿ ಮತ್ತು ಎರಡೂ ಕಡೆಯ ದಂಡೆಯ ಮೇಲೆ ಹಸಿರು ಹೊದ್ದ ಹೊಲ ಗದ್ದೆಗಳು ಅಲ್ಲಲ್ಲಿ ಪ್ರಾಚೀನ ದೇವಾಲಯಗಳು ಮತ್ತು ಗೋರಿಗಳು, ಇವೆಲ್ಲವನ್ನು ನದಿಯಲ್ಲಿ ಬೋಟ್ ರೈಡ್ ಮಾಡುತ್ತ ಈ ದೃಶ್ಯಗಳನ್ನ ಕಣ್ ತುಂಬಿಸಕೊಳ್ಳಬಹುದು. ನೈಲ್ ಕ್ರೂಸ್‌ನಲ್ಲಿ ಎರಡು ಜನಪ್ರಿಯ ದೃಶ್ಯಗಳೆಂದರೆ ಕೋಮ್ ಒಂಬೊ ದೇವಾಲಯ ಮತ್ತು ಎಡ್ಫುನಲ್ಲಿರುವ ಹೋರಸ್ ದೇವಾಲಯ, ಅಲ್ಲಿ ಎಲ್ಲಾ ದೊಡ್ಡ ಕ್ರೂಸ್ ದೋಣಿಗಳು ನಿಲ್ಲುತ್ತವೆ.

 4. ಆಸ್ವಾನ್(Aswan), :- 

ಅತ್ಯಂತ ಪ್ರಶಾಂತವಾದ ಪಟ್ಟಣ ಎಂದು ಕರೆಯುತ್ತಾರೆ, ಅಂಕು ಡೊಂಕಾಗಿ ಹರಿಯುವ ನೈಲ್ ನದಿಯ ಸುತ್ತಲೂ ಈ ನಗರ ಹರಡಿಕೊಂಡಿದೆ. ಇಲ್ಲಿ ಚಿಕ್ಕ ಚಿಕ್ಕ ದ್ವೀಪಗಳು ಇವೆ. ಇವುಗಳನ್ನು ಸಂಪರ್ಕಿಸಲು ಬೋಟ್ ಮುಖಾಂತರವೇ ಹೋಗಬೇಕು. ಇಲ್ಲಿ ಹಲವಾರು ಚಟುವಟಿಕೆಗಳಿಗೆ ಪ್ರಸಿದ್ದ, ರಿವರ್ ಬೋಟಿಂಗ್, ಒಂಟೆ ಸವಾರಿ, ಇಲ್ಲಿನ ಹಳ್ಳಿಗಳಲ್ಲಿ ಒಂದು ಸುತ್ತು ಹಾಕಿ ಇಲ್ಲಿನ ಜನಜೀವನದ ಕುರಿತು ತಿಳಿದುಕೊಳ್ಳಬಹುದು.   ಮರುಭೂಮಿಯ ಜತೆಗೆ ನದಿಜೀವನವನ್ನು ಈ  ಕಾಣಬಹುದು.ಇಲ್ಲಿಯೂ ಸಹ ಹಲವಾರು ಪ್ರಾಚೀನ ದೇವಾಲಯಗಳಿವೆ. ನದಿಯ ದಂಡೆಯಲ್ಲಿನ ಖರ್ಜೂರದ ಮರಗಳು, ಮರುಭೂಮಿಯ ಮರಳು ರಾಶಿ ಇವೆಲ್ಲದರ ಜತೆಗೆ ಸುರ್ಯೊದಯ ಮತ್ತು ಸೂರ್ಯಾಸ್ತ ದ ವಿಹಂಗಮ ನೋಟವನ್ನು ಸವಿಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

5. ಅಬು ಸಿಂಬೆಲ್ (Abu Simbel):- 

ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು. ಕೈರೋ ದಿಂದ 1200 ಕಿ.ಮಿ. ದೂರದಲ್ಲಿ ಈ ನಗರವಿದೆ. ಲಕ್ಸರ್ ಮತ್ತು ಆಸ್ವಾನ್ ನ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಇಲ್ಲಿಗೆ ಭೇಟಿ ನೀಡಬಹುದು. ಇದು ರಾಮ್‌ಸೆಸ್ II ರ ಮಹಾನ್ ದೇವಾಲಯವಾಗಿದ್ದು, ಇದನ್ನು ಕ್ರಿಸ್ತಪೂರ್ವ 1265 ರಲ್ಲಿ ನಿರ್ಮಿಸಲಾಗಿದೆ, ಆಲಯದ ಹೊರಭಾಗದಲ್ಲಿ ಬೃಹದಾಕಾರದ ಪ್ರತಿಮೆಗಳಿಮ್ದ ಅಲಂಕರಿಸಲ್ಪಟ್ಟಿದೆ ಮತ್ತು ಒಳಭಾಗದ ಗೋಡೆಯು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. 

ಆಸ್ವಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ಈ ಪ್ರದೇಶ ಮುಳುಗಿ ಹೋಗುತಿತ್ತು, ಇದನ್ನು ಮನಗಂಡ ಯುನೆಸ್ಕೋ, ಮೂರು ಸಾವಿರ ವರ್ಷದಷ್ಟು ಹಳೆಯದಾದ ಈ ಸಂಕೀರ್ಣ ಹಾಳಾಗುವುದನ್ನು ಸಂರಕ್ಷಿಸಲು 1968 ರಲ್ಲಿ ಈ ದೇವಾಲಯವನ್ನು ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಇದಕ್ಕೆ ತಗುಲಿದ ವೆಚ್ಚ ಅಂದಾಜು US$80 million. ಇದರ ಅರ್ಧದಷ್ಟು ಹಣವನ್ನು ಸುಮಾರು 50 ಕ್ಕೂ ಹೆಚ್ಚು ದೇಶಗಳು ದೇಣಿಗೆ ನೀಡಿದ್ದವು. 

6. ಸಕ್ಕಾರಾ (Saqqara):- 


ಕೈರೋ ನಗರದಿಂದ 30 ಕಿ.ಮಿ. ದೂರದಲ್ಲಿ ಈ ನಗರವಿದೆ. ಇಲ್ಲಿ ಪುರಾತನವಾದ ಪಿರಮಿಡ್ ಗಳನ್ನ ನೋಡಬಹುದು. ಗಿಜಾದಲ್ಲಿನ ಪಿರಮಿಡ್ ಗಳು ಕಟ್ಟುವ ಮುಂಚಿನ ವಿನ್ಯಾಸವನ್ನು ಇಲ್ಲಿ ಕಾಣಬಹುದು, ಬಹುಶಃ  ಪಿರಮಿಡ್ ಗಳನ್ನು ರಚಿಸಲು ಪ್ರಾರಂಭಿಸಿದ ಸಮಯದಲ್ಲಿ, ಈ ಆಕಾರದಲ್ಲಿ ವಿನ್ಯಾಸ ಮಾಡಿ ಕಟ್ಟಲಾಗಿದೆ, ಕಾಲಕ್ರಮೇಣ ಅನುಭವ ಮತ್ತು ಕೌಶಲ್ಯತೆ  ಕರಗತವಾದ ನಂತರ ಗಿಜಾದಲ್ಲಿ ಉನ್ನತಮಟ್ಟದ ಪಿರಮಿಡ್ ಗಳು ರಚನೆಯಾಗಿರಬಹುದು ಎನ್ನಲಾಗಿದೆ.  

7. ಈಜಿಪ್ಟಿನ ವಸ್ತುಸಂಗ್ರಹಾಲಯ(Egyptian Museum):- 

ಪ್ರಾಚ್ಯವಸ್ತು ಸಂಶೋಧನೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ನೋಡಲೇ ಬೇಕಾದ ಮ್ಯೂಸಿಯಂ ಇದು. ಪ್ರಪಂಚದ  ಅದ್ಭುತಗಳ ಒಂದು ವಸ್ತುಸಂಗ್ರಹಾಲಯ ವೆಂದೇ ಇದನ್ನು ಪರಿಗಣಿಸಲಾಗುತ್ತದೆ. ಈಜಿಪ್ಟ್ ಅನ್ನು ಆಳಿದ ಹಲವು ರಾಜಮನೆತನಗಳ ವಿವರ, ಅವರು ಉಪಯೋಗಿಸಿದ ವಸ್ತುಗಳು, ಫೆರೋಗಳ ಕಾಲದ ಅತ್ಯಮೂಲ್ಯವಸ್ತುಗಳು, ಗೋರಿಗಳನ್ನು ಉತ್ಖನನ ಮಾಡಿದಾಗ, ಮಮ್ಮಿಗಳು ಸೇರಿದಂತೆ ಅವುಗಳ ಜತೆ ದೊರೆತ ಹಲವಾರು ವಸ್ತುಗಳು ಇಲ್ಲಿ ಸಂಗ್ರಹಿಸಲ್ಪಟ್ಟಿವೆ.  

8. ವೈಟ್ ಮರುಭೂಮಿ (White Desert Natioanl Park):- 

ಈ ಪ್ರದೇಶ ಕೈರೋ ನಗರದಿಂದ 425 ಕಿ.ಮಿ. ದೂರದಲ್ಲಿದೆ.  ಮರಳಿನ ಮಧ್ಯೆ ದೊಡ್ಡದಾದ ಮಂಜುಗಡ್ಡೆಗಳ ರೀತಿಯಲ್ಲಿ ಬಿಳಿ ಬಣ್ಣದ ಚಿತ್ರವಿಚಿತ್ರ ಕೆತ್ತನೆಯ ಸುಣ್ಣದ ಕಲ್ಲಿನಲ್ಲಿ ಪ್ರಕೃತಿನಿರ್ಮಿತ ಈ ಆಕೃತಿಗಳು ಪ್ರವಾಸಿಗರ ಕಣ್ ಮನಸೆಳೆಯುತ್ತವೆ.  ಲಕ್ಷಾಂತರವರ್ಷಗಳ ಹಿಂದೆ ಈ ಪ್ರದೇಶ ರೂಪುಗೊಂಡಿದೆ ಎಂದು ಭೂವಿಜ್ನಾನಿಗಳು ಹೇಳುತ್ತಾರೆ.

9. ಅಲೆಕ್ಸಾಂಡ್ರಿಯಾ (Alexandria):- 

ಈಜಿಪ್ಟಿನ ಎರಡನೇ ಅತಿದೊಡ್ಡ ಪಟ್ಟಣ ಇದಾಗಿದ್ದು, ಕೈರೋ ದಿಂದ 240 ಕಿ.ಮಿ.ದೂರದಲ್ಲಿದೆ.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ನಿರ್ಮಿಸಿದ ನಗರವಿದು. ರಾಣಿ ಕ್ಲಿಯೋಪಾತ್ರಳು ಸಹ ಹುಟ್ಟಿದ್ದು ಇದೇ ನಗರದಲ್ಲಿ.  ಪುರಾತನನಗರವಾದ್ದರಿಂದ ಇಲ್ಲಿ ಐತಿಹಾಸಿಕ ಸ್ಥಳಗಳೇನು ಕಮ್ಮಿಯಿಲ್ಲ. ನಗರವು ಬೆಳೆದು ದೊಡ್ಡದಾಗಿರುವುದರಿಂದ ಬಹುಮುಖ್ಯ ಪ್ರಾಚೀನ ಸಂಗತಿಗಳು ಈ ನಗರದಲ್ಲಿ ಹುದುಗಿಹೋಗಿವೆ. ಸಮುದ್ರದಾಳದಲ್ಲಿ ನಡೆಯುತ್ತಿರುವ ಉತ್ಖನನದಿಂದ ಹಲವು ಪುರಾತನ ವಸ್ತುಗಳು ಆಗಾಗ್ಗೆ ದೊರೆಯುತ್ತಿರುತ್ತವೆ. ಈಜಿಪ್ಟಿನ ಉತ್ತರಭಾಗದಲ್ಲಿರುವ ಮೆಡಿಟೇರಿಯನ್ ಸಮುದ್ರದ ದಂಡೆಯಲ್ಲಿ ಈ ನಗರವಿದ್ದು, ಬೇಸಿಗೆಯಲ್ಲಿ ಸಮುದ್ರದ ಕಡೆಯಿಂದ ಬರುವ ತಂಪಾದಗಾಳಿಯನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ. ಪ್ರಪಂಚದ ಅತಿ ಪ್ರಸಿದ್ದ ಗ್ರಂಥಾಲಯ ಈ ನಗರದಲ್ಲಿದೆ. ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಇಲ್ಲಿ ಲಭಿಸುತ್ತದೆ.  ಈ ನಗರವು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಗ್ರೀಕ್ ಸಾಮ್ರಾಜ್ಯ, ರೋಮನ್ ಆಡಳಿತ, ಒಟ್ಟೋಮನ್ ಆಳ್ವಿಕೆ, ಇಸ್ಲಾಂ ಧರ್ಮ ಆಗಮನ ಹೀಗೆ ಆಯಾ ಕಾಲಘಟ್ಟದಲ್ಲಿ ಪ್ರಮುಖ ಸಂಗತಿಗಳು ಇಲ್ಲಿ ಘಟಿಸಿವೆ. 

10. ಅಬಿಡೋಸ್ ದೇವಾಲಯ, (Abydos Temple) :- 

ಇದು ಒಸಿರಿಸ್ ನ ದೇವಾಲಯ. ಲಕ್ಸರ್ ಪಟ್ಟಣ ದಿಂದ ನೂರೈವತ್ತು ಕಿ.ಮಿ.ದೂರದಲ್ಲಿ ಈ ದೇವಾಲಯವಿದೆ. ಕ್ರಿ.ಪೂ 13ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದಿನ ಫೆರೋ ಒಂದನೇ ಸೆಟಿ (Seti-1) ಇದನ್ನು ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿವೆ. ಇಲ್ಲಿನ ಗೋಡೆಗಳ ಮೇಲೆ ಅಂದು ಆಳಿದ ರಾಜರುಗಳ ಹೆಸರುಗಳನ್ನ ಸಹ ಕೆತ್ತಲಾಗಿದೆ. 

11. ಸಿವಾ ಓಯಸಿಸ್ (Siwa Oasis):- 

ಕೈರೋ ನಗರದಿಂದ ಪಶ್ಚಿಮ ದಿಕ್ಕಿಗೆ 760ಕಿ.ಮಿ. ದೂರದಲ್ಲಿ ಸಿವಾ ಪಟ್ಟಣದಲ್ಲಿ ಈ ಪ್ರವಾಸಿತಾಣವಿದೆ. ಇಲ್ಲಿನ ವಿಶೇಷವೇನೆಂದರೆ, ಪುರಾತನ ಮಣ್ಣಿನ ಮನೆಗಳು, ಬಿಸಿನೀರಿನ ಬುಗ್ಗೆಗಳು, ಖರ್ಜೂರದ ತೋಟಗಳು, ಹಾಗೂ ಹಲವಾರು ಪ್ರಾಚೀನ ದೇವಾಲಯಗಳು ಇಲ್ಲಿವೆ. ಮರಳುಗಾಡಿನ ಮಧ್ಯದಲ್ಲಿ, ನೀರು ಸಿಗುವ ಫಲವತ್ತಾದ ಪ್ರದೇಶವಾದ್ದರಿಂದ ಈ ಓಯಸಿಸ್ ಅಂದಿನ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ಮತ್ತು ಪರ್ಶಿಯನ್ ದೊರೆಗಳು ಇಲ್ಲಿಗೆ ಭೇಟಿ ನೀಡಿದ್ದರು, 

12. ಸೇಂಟ್ ಕ್ಯಾಥರೀನ್ ಮೊನಸ್ಟೆರಿ  (St. Catherine's Monastery):-  

ಈಜಿಪ್ಟಿನ ಪೂರ್ವಭಾಗದಲ್ಲಿ ಕೈರೋದಿಂದ 440ಕಿ.ಮಿ.ದೂರದಲ್ಲಿರುವ ಸಿನಾಯಿ ಎನ್ನುವ ಪರ್ವತದ ಬುಡದಲ್ಲಿ ಈ ಪ್ರವಾಸಿತಾಣವಿದೆ.  ಆಶ್ಚರ್ಯವೆಂದರೆ, ಮರುಭೂಮಿ ಮತ್ತು ಬೆಟ್ಟಗಳ ಕಡಿದಾದ ಜಾಗದಲ್ಲಿ ನೂರಾರು ಕಿಲೋಮೀಟರ್ ಗಳವರೆಗೂ ಯಾವುದೇ ಜನವಸತಿಯಿಲ್ಲದ ಈ ಪ್ರದೇಶದಲ್ಲಿ ಇದನ್ನು 6ನೇಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕ್ರಿಶ್ಚಿಯನ್ ಮತ ಅನುನಾಯಿಗಳ ಧಾರ್ಮಿಕ ಶ್ರದ್ದಾಕೇಂದ್ರ ವಾಗಿದೆ. ಪ್ರವಾದಿ ಮೋಸೆಸ್ ಅವರು ಇಲ್ಲಿಗೆ ಭೇಟಿನೀಡಿದ್ದರು. ಅಲೆಕ್ಸಾಂಡ್ರಿಯಾದ ಸನ್ಯಾಸಿ ಕ್ಯಾಥರೀನ್ ಗಾಗಿ ಈ ಮೊನೆಸ್ಟರಿಯನ್ನು ಅಂದಿನ ಈಜಿಪ್ಟಿನ ಪೂರ್ವ ಪ್ರಾಂತ್ಯದ ಚಕ್ರವರ್ತಿ ಜಸ್ಟಿನಿಯನ್ ಕಟ್ಟಿಸಿದ್ದ.

ಈಜಿಪ್ಟಿನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಒಂದೊಂದು ಪಟ್ಟಣದಲ್ಲೂ ಹಲವಾರು ಪ್ರವಾಸಿತಾಣಗಳಿವೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಪ್ರಾಚೀನ ಈಜಿಪ್ಟಿನ ಇತಿಹಾಸವನ್ನು, ಅಂದಿನ ಕಾಲದ ಕಟ್ಟಡಗಳು, ದೇವಾಲಯಗಳು, ಪಿರಮಿಡ್ ಗಳು, ನೈಲ್ ನದಿ,  ಕೆಂಪು ಸಮುದ್ರದ ಕಡಲತೀರಗಳು (Red Sea Beaches),  ಪುರಾತನ  ಕಾಪ್ಟಿಕ್ ಕೈರೋ (Coptic Cairo), ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುತಿದ್ದಾರೆ.

ಈಜಿಪ್ಟಿನ ಕೆಲ ವಿಶೇಷತೆಗಳು:-

1. ಹನ್ನೊಂದು ಕೋಟಿ ಜನರಿರುವ ಈಜಿಪ್ಟ್ ದೇಶ ಅರಬ್ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ನೈಜೀರಿಯಾ ಮತ್ತು ಇಥಿಯೋಪಿಯಾದ ನಂತರ ಆಫ್ರಿಕಾದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಾಚೀನ ಈಜಿಪ್ಟಿನವರು ತಮ್ಮ ತಾಯ್ನಾಡನ್ನು ಕೆಮೆಟ್ ಎಂದು ಕರೆಯುತಿದ್ದರು, ಇದರರ್ಥ "ಕಪ್ಪು ಭೂಮಿ". ಇದು ನೈಲ್ ನದಿಯ ಪ್ರವಾಹದ ನಂತರ ಉಳಿದಿರುವ ಫಲವತ್ತಾದ ಮಣ್ಣನ್ನು ಸೂಚಿಸುತ್ತದೆ.

2. ಪ್ರಪಂಚದ ಏಳು ಅದ್ಭುತಗಳಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಒಂದು. ಈ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ

 ಇದು 3,800 ವರ್ಷಗಳ ಹಿಂದೆ ಕಟ್ಟಿದ ಏಕೈಕ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಪುರಾತನ ರಚನೆಯಾಗಿದೆ. ಈ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ

3. ಕೈರೋನಗರದಲ್ಲಿ ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾಗಿತ್ತು. 

4. ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್

5. ಈಜಿಪ್ಟಿನ ನಾಗರಿಕತೆಯು ವಿಶ್ವದಲ್ಲೇ ಅತ್ಯಂತ ಪುರಾತನವಾಗಿದ್ದು, 7,000 ವರ್ಷಗಳಷ್ಟು ಹಿಂದಿನದ್ದು ಎಂದು ಹೇಳಲಾಗುತ್ತಿದೆ.

6. ವಿಶ್ವದ ಅತ್ಯಂತ ಹಳೆಯ ಉಡುಗೆಯಾದ "ತರ್ಖಾನ್" ಈಜಿಪ್ಟ್‌ನಲ್ಲಿ ಕಂಡುಬಂದಿದೆ. ಇದು ಅಂದಾಜು 5,000 ವರ್ಷಗಳಷ್ಟು ಹಳೆಯದ್ದಾಗಿದೆ.

7. ಪ್ರಾಚೀನ ಈಜಿಪ್ಟಿನವರು ಉಪ್ಪು, ಮೆಣಸು, ನೀರು ಮತ್ತು ಪುದೀನ ಎಲೆಗಳಿಂದ ಮಾಡಿದ ಪೇಸ್ಟ್ ಅನ್ನು ಬಳಸಿಕೊಂಡು ಹಲ್ಲು ಉಜ್ಜುತಿದ್ದರಂತೆ. ವಿಶ್ವದ ಮೊಟ್ಟ ಮೊದಲ ಪೇಸ್ಟ್ ಇದಾಗಿತ್ತು ಎಂದು ಹೇಳಲಾಗುತ್ತಿದೆ.

8. ಈಜಿಪ್ಟಿನ ಮಹಿಳೆಯರು ವ್ಯಾಪಕವಾದ ವೈಯುಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹೊಂದಿದ್ದರು. ಅಂದಿನ ಕಾಲದಲ್ಲಿಯೇ ಅವರು ಆಸ್ತಿಯನ್ನು ಖರೀದಿಸಬಹುದಿತ್ತು ಮತ್ತು ಮಾರಾಟ ಮಾಡಬಹುದಾಗಿತ್ತಲ್ಲದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆಯನ್ನೂ ಸಲ್ಲಿಸಬಹುದಾಗಿತ್ತು. 

9. ಆಪ್ರಿಕಾ ಖಂಡದ ಮಹಾನದಿ ಎಂದು ನೈಲ್ ನದಿಯನ್ನು ಕರೆಯುತ್ತಾರೆ. ನೈಲ್ ನದಿ, ವಿಶ್ವದ ಅತಿ ಉದ್ದದ ನದಿಯಾಗಿದ್ದು, ಪ್ರಾಚೀನ ಈಜಿಪ್ಟಿನವರು ಕೃಷಿಯಲ್ಲಿ ಈ ನದಿಯು ಪ್ರಮುಖ ಪಾತ್ರ ವಹಿಸಿದ್ದರಿಂದ ಜೀವನಾಡಿಯೆಂದೇ ಪರಿಗಣಿಸಲಾಗಿದೆ.

10. ನೈಲ್ ನದಿಯ ವಾರ್ಷಿಕ ಪ್ರವಾಹವನ್ನು ಊಹಿಸಲು ಅಂದಿನ ಈಜಿಪ್ಟಿನವರು 365-ದಿನಗಳ ವರ್ಷದ ಕ್ಯಾಲೆಂಡರ್ ಅನ್ನು ಕಂಡುಹಿಡಿದಿದ್ದರು. ಮತ್ತು ಜಲಗಡಿಯಾರವನ್ನು ಕಂಡು ಹಿಡಿದಿದ್ದರು. 

11. ಈಜಿಪ್ಟ್‌ನ ಸೂಯೆಜ್ ಕಾಲುವೆಯು ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ, ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಯುರೋಪ್ ಮತ್ತು ಏಷ್ಯಾದ ನಡುವಿನ ಸಮುದ್ರ ಪ್ರಯಾಣವನ್ನು ಕಡಿಮೆ ಮಾಡುತ್ತದೆ.

12.  ಪ್ರವಾಹ ನಿಯಂತ್ರಿಸುವುದಕ್ಕಾಗಿ ಕಟ್ಟಿದ ಅಸ್ವಾನ್ ಹೈ ಅಣೆಕಟ್ಟು, 1970 ರಲ್ಲಿ ಪೂರ್ಣಗೊಂಡಿತು. ಈ ಅಣೆಕಟ್ಟಿನಿಂದ ಕೃಷಿ ಉತ್ಪಾದನೆ ಅಧಿಕವಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಈ ಅಣೆಕಟ್ಟು ಕಟ್ಟಿದ ಪರಿಣಾಮ ಹಲವಾರು ಪ್ರಾಚೀನ ಐತಿಹಾಸಿಕ ಸ್ಥಳಗಳು ಜಲಸಮಾಧಿಯಾಗಿವೆ.

13. ಈಜಿಪ್ಟ್ ಒಂದು ಖಂಡಾಂತರ ದೇಶವಾಗಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡದ ಎರಡರಲ್ಲೂ ತನ್ನ ಪ್ರದೇಶವನ್ನು ಹೊಂದಿದೆ. 

14. ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯದ ಹೆಸರು "ಪ್ಯಾಕ್ಸ್"

15. ಪುರಾತನ ನಗರವಾದ ಥೀಬ್ಸ್ (ಈಗ ಲಕ್ಸರ್) ಒಮ್ಮೆ ಈಜಿಪ್ಟ್‌ನ ಧಾರ್ಮಿಕ ರಾಜಧಾನಿಯಾಗಿತ್ತು.

16. ಗ್ರೀಕ್ ದೊರೆ "ದ ಗ್ರೇಟ್ ಅಲೆಗ್ಸಾಂಡರ್" ಈಜಿಪ್ಟ್ ನಲ್ಲಿ ಅಲೆಕ್ಸಾಂಡ್ರಿಯಾ ನಗರವನ್ನು ನಿರ್ಮಿಸಿದ ಮತ್ತು ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿ ಅಲ್ಲಿನ ಆಡಳಿತವನ್ನು ಅವರ ಕೈಗೆ ನೀಡಿದ್ದ.  

17. ಈಜಿಪ್ಟಿನ ಪ್ರಮುಖ ಪಟ್ಟಣಗಳು:-  ಕೈರೋ, ಹುರ್ ಗಡಾ, ಅಲೆಕ್ಸಾಂಡ್ರಿಯಾ, ಶರಮ್ ಅಲ್ ಶೇಖ್ ಮತ್ತು ಲಕ್ಸರ್. ಟಿಲ್ ಅಮರ್ನಾ

18. ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್, ಲಕ್ಸರ್ ಹಾಗೂ ಕಾರ್ನಾಕ್

19. ಪುರಾತನ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಕೀಟಗಳನ್ನು ನಿಯಂತ್ರಿಸಲು ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಆಕಸ್ಮಿಕವಾಗಿಯಾದರೂ ಬೆಕ್ಕನ್ನು ಕೊಲ್ಲುವುದು ಮರಣದಂಡನೆಗೆ ಅರ್ಹವಾದ ಅಪರಾಧವಾಗಿತ್ತು.

20. ಈಜಿಪ್ಟಿನ ಚಿತ್ರಲಿಪಿಗಳು ಪ್ರಪಂಚದ ಅತ್ಯಂತ ಹಳೆಯ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಚಿತ್ರಗಳಲ್ಲಿ ಚಿಹ್ನೆಗಳನ್ನು 3,000 ವರ್ಷಗಳಿಂದ ಬಳಸಲಾಗುತ್ತಿತ್ತು.

21. ಇತಿಹಾಸದಲ್ಲಿ ಮೊಟ್ಟ ಮೊದಲ ಕಾರ್ಮಿಕ ಮುಷ್ಕರವು ಈಜಿಪ್ಟ್‌ನಲ್ಲಿ ಸುಮಾರು 1152 BC ಯಲ್ಲಿ ನಡೆದಿದೆ, ಡೀರ್ ಎಲ್-ಮದೀನಾದಲ್ಲಿನ ರಾಯಲ್ ನೆಕ್ರೋಪೊಲಿಸ್‌ನ ಕುಶಲಕರ್ಮಿಗಳು ವೇತನವನ್ನು ನೀಡದ ಕಾರಣ ತಮ್ಮ ಕೆಲಸದಿಂದ ಹೊರನಡೆದಿದ್ದರಂತೆ.

22. ಪ್ರಾಚೀನ ಈಜಿಪ್ಟಿನವರು ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ರೂಡಿಸಿಕೊಂಡಿದ್ದರು, ಔಷಧಿ ಗಳನ್ನು ಕಂಡುಹಿಡಿದಿದ್ದರು, ಶಸ್ತ್ರಚಿಕಿತ್ಸೆಯನ್ನು ನಡೆಸುತಿದ್ದರು.

23. ಈಜಿಪ್ಟ್‌ನ ಟಾಲೆಮಿಕ್ ಸಾಮ್ರಾಜ್ಯದ ಕೊನೆಯ ಸಕ್ರಿಯ ಆಡಳಿತಗಾರ ಕ್ಲಿಯೋಪಾತ್ರ VII, ವಾಸ್ತವವಾಗಿ ಗ್ರೀಕ್ ಮೂಲದವನು, ಅಲೆಕ್ಸಾಂಡರ್ ದಿ ಗ್ರೇಟ್‌ನ ಜನರಲ್‌ಗಳಲ್ಲಿ ಒಬ್ಬನಾದ ಪ್ಟೋಲೆಮಿ I ವಂಶದವನು.

24. 1798 ರಲ್ಲಿ ಫ್ರೆಂಚ್ ದೊರೆ ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ್ದನಂತೆ

25. 1799 ರಲ್ಲಿ ಪತ್ತೆಯಾದ ರೊಸೆಟ್ಟಾ ಸ್ಟೋನ್, ಈಜಿಪ್ಟಿನ ಚಿತ್ರಲಿಪಿಗಳನ್ನು ಅರ್ಥೈಸುವ ಕೀಲಿಯಾಗಿದೆ. ಇದು ಮೂರು ಲಿಪಿಗಳಲ್ಲಿ ಬರೆಯಲಾದ ಶಾಸನವನ್ನು ಒಳಗೊಂಡಿದೆ: ಚಿತ್ರಲಿಪಿ, ಡೆಮೋಟಿಕ್ ಮತ್ತು ಗ್ರೀಕ್.

26. ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ. ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್. ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ. ಪವಿತ್ರ ಲಿಪಿಯನ್ನು ಪುರೋಹಿತ ವರ್ಗವು ಬಳಸುತ್ತಿತ್ತು 

27. Paper ಎಂಬ ಪದದ ಮೂಲ ಪದ - ಪ್ಯಾಪಿರಸ್

28. ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ

29. ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ

30. ಬೈಬಲ್ ಪದದ ಅರ್ಥ - ಪುಸ್ತಕ

31. ಮಡಿದವರ ಕುರಿತ ಪುಸ್ತಕವು ಶವ ಪೆಟ್ಟಿಗೆಯ ಎಂದು ಕರೆಯಲ್ಪಡುವ ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತಿವೆ 

32. ಪ್ರಾಚೀನ ಈಜಿಪ್ಷಿಯನ್ನರು ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು

33. ಪುರಾತನ ಅಲೆಕ್ಸಾಂಡ್ರಿಯಾದ ಲೈಬ್ರರಿಯು  ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಗ್ರಂಥಾಲಯಗಳಲ್ಲಿ ಒಂದಾಗಿದೆ.

34. ಗೀಜಾದ ಗ್ರೇಟ್ ಸಿಂಹನಾರಿ ಪ್ರತಿಮೆಯು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಹಳೆಯ ಪ್ರತಿಮೆಗಳಲ್ಲಿ ಒಂದಾಗಿದೆ ಆದರೆ ಅದರ ನಿರ್ಮಾಣದ ಮೂಲ ಮತ್ತು ಇತಿಹಾಸವು ನಿಗೂಢವಾಗಿಯೇ ಉಳಿದಿದೆ.

35. ಅತ್ಯಂತ ಎತ್ತರದ  (160 ಅಡಿ) ಮೂರ್ತಿ  "ಸ್ಪಿಂಕ್ಸ್" ಅನ್ನು ರಚಿಸಿದ ಈಜಿಪ್ಟ್ ದೊರೆಯ ಹೆಸರು "ಖಪ್ರೆ" 

36. ಮೂರನೇ ರಾಮೆಸಸ್ ಇತಿಹಾಸ ಪ್ರಸಿದ್ದ ಕಾರ್ನಾಕ್ ದೇವಾಲಯದ ವನ್ನು ಕಟ್ಟಿಸಿದ್ದ 

37. ಪ್ರಾಚೀನ ಈಜಿಪ್ಟಿಯನ್ನರು  ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದಿದ್ದರು. 

38. ಪ್ರಾಚೀನ ಈಜಿಪ್ಟಿಯನ್ನರು ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು 

39. ಪ್ರಾಚೀನ ಈಜಿಪ್ಟಿಯನ್ನರು ನೆರಳಿನ ಗಡಿಯಾರವನ್ನು ರೂಪಿಸಿದ್ದರು

40. ಸೂರ್ಯ ಪ್ರಾಚೀನ ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವನಾಗಿದ್ದ.  ಸೂರ್ಯನನ್ನು " ರಾ"  ಮತ್ತು ಅಟನ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು.  ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ, ಇವರು ವಾಯುದೇವನನ್ನ "ಶು" ಹೆಸರಿನಿಂದ ಕರೆದಿದ್ದಾರೆ. ಇವರ ಕಾಲದ ನ್ಯಾಯ ದೇವರನ್ನ ಒಸಿರಸ್ ಹೆಸರಿನಿಂದ ಕರೆದಿದ್ದಾರೆ. ಸಾವಿನ ದೇವರು ಎಂದು ಹೇಳಲಾಗುತಿತ್ತು. ಭೂ ದೇವಿಯನ್ನ "ಇಸಿಸ್" ಎನ್ನುವ ಹೆಸರಿನಿಂದ ಕರೆಯುತಿದ್ದರು. ಟಗರು" ಅಮನ್ ರಾ ದೇವರ ಪ್ರತೀಕ.  ಪ್ರಾಚೀನ ಈಜಿಪ್ಟಿನವರು 2,000 ಕ್ಕೂ ಹೆಚ್ಚು ದೇವರು ಮತ್ತು ದೇವತೆಗಳನ್ನು ಪೂಜಿಸಿದ್ದರು.

41. ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್,  ಈದೇವಾಲಯದ ಪ್ರಮುಖ ವಾಸ್ತು ಶಿಲ್ಪಿ - ಸೇನ್ ಮುಥ್

42. ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್, ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ

43. ರಾಣಿ ಹಟ್ಸೆಪುತ್ಸಳ ವಿಗ್ರಹ ನ್ಯೂಯಾರ್ಕ್ ಮ್ಯೂಸಿಯಂನಲ್ಲಿದೆ  

44. ಈಜಿಪ್ಟಿನ ಫೇರೋಗಳು ಸಾಮಾನ್ಯವಾಗಿ ಹೆಚ್ಚಿನ ತೂಕವನ್ನು ಹೊಂದಿದ್ದರು, ವಾಸ್ತವವಾಗಿ ಚಿತ್ರಪಟಗಳಲ್ಲಿದ್ದಂತೆ, ಉತ್ತಮವಾದ ಮೈಕಟ್ಟಿನ ಯುವಕರ ಚಿತ್ರಗಳಿಗೆ ವಿರುದ್ಧವಾಗಿ ಅವರ ದೇಹವಿತ್ತು. ಅವರ ಆಹಾರದಲ್ಲಿ ಸಕ್ಕರೆ, ಆಲ್ಕೋಹಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದವು ಎಂದು ಸಂಶೋಧನೆಯಿಂದ ತಿಳಿಯಲಾಗಿದೆ .

45.  ರಾಣಿ ಕ್ಲಿಯೋಪಾತ್ರ ಈಜಿಪ್ಟ್ ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳೆ  

46. 3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31

47. ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್

48. ಈಜಿಪ್ಟ್ ನ ರಾಜರು ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - 

49. ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್

50. ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Courtesy: Internet. 
Phot Credit goes to Original Owner of the Photos

ಕಾಫಿ ಕಥೆ


ದಕ್ಷಿಣ ಭಾರತದವರಿಗೆ ಕಾಫಿ ಅಂದರೆ ಬಹಳ ಪ್ರಾಣ, ಕೆಲವರ ದಿನ ಶುರುವಾಗುವುದೇ ದಿನದ ಮೊದಲ ಕಾಫಿ ಕುಡಿದ ನಂತರವೇ. ಅದರಲ್ಲೂ ಫಿಲ್ಟರ್ ಕಾಫಿಯ ರುಚಿಗೆ ಮಾರು ಹೋಗದವರು ಇಲ್ಲವೇ ಇಲ್ಲ ಎಂದು ಹೇಳಬಹುದು. 

ಕೆಲವರಿಗೆ ಕಾಫಿ' ಎಂಬ  ಹೆಸರು ಕೇಳಿದರೆ ಮನಸ್ಸಿಗೆ ತಾಜಾತನ ನೀಡುತ್ತದೆ.  ಇತ್ತೀಚಿಗೆ ಬಿಡುಗಡೆಯಾದ ಟೇಸ್ಟ್ ಅಟ್ಲಾಸ್ ರವರ ವರದಿಯ ಪ್ರಕಾರ ವಿಶ್ವದಲ್ಲೇ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ ಇದೆಯಂತೆ. ಈ ಫಿಲ್ಟರ್ ಕಾಫಿಯನ್ನು ಕರ್ನಾಟಕದ ಜನರು ಮಾತ್ರವಲ್ಲ, ತಮಿಳುನಾಡು, ಕೇರಳ ಮತ್ತು ದಕ್ಷಿಣ ಆಂಧ್ರದ ಕೆಲವು ಊರುಗಳಲ್ಲಿ ಬಹಳಷ್ಟು ಜನರು  ಪ್ರತಿಮನೆಯಲ್ಲಿ ತಯಾರಿಸಿ ಕುಡಿಯುತ್ತಾರೆ. ಹೋಟೆಲ್ ಗಳಲ್ಲಿಯೂ ಸಹ ಇನಸ್ಟಂಟ್ ಕಾಫಿಗಳಾದ ಬ್ರೂ ಮತ್ತು ನೆಸ್ ಕೆಫೆಗಿಂತ ಫಿಲ್ಟರ್ ಕಾಫಿಯನ್ನು ಜನ ಇಷ್ಟ ಪಟ್ಟು ಕುಡಿಯುತ್ತಾರೆ. ಇತ್ತೀಚೆಗೆ ಕೇವಲ ಕಾಫಿಗಾಗಿಯೇ ಕಾಫಿ ಶಾಪ್ ಗಳು ಎಗ್ಗಿಲ್ಲದೆ ತಲೆಯೆತ್ತಿವೆ.  ವಿಧವಿಧವಾದ ಕಾಫಿಗಳು ಇಲ್ಲಿ ದೊರೆಯುತ್ತವೆ.


ಕಾಫಿ ಪ್ರಿಯರು ವರ್ಣಿಸುವ ಪರಿ ಕೇಳಿದರೆ, ಕಾಫಿ ಕುಡಿಯದವರು ಸಹ ಒಮ್ಮೆ ಕುಡಿಯಬೇಕು ಎಂದೆನೆಸುತ್ತದೆ. 

ಕಾಫಿ ಪ್ರಿಯರಾದ ಅರೇನಳ್ಳಿ ಧರ್ಮೇಂದ್ರ ಕುಮಾರ್ ಹೀಗೆ ಹೇಳುತ್ತಾರೆ,....

ಕಣ್ಣು ಮುಚ್ಚಿ

ಸುದೀರ್ಘವಾಗಿ ಉಸಿರೆಳೆದುಕೊಂಡು

ಬಿಸ್ಸಿ ಬಿಸ್ಸಿ ಕಾಫಿಯನ್ನು ಸ್ವಲ್ಪ ಸ್ವಲ್ಪವೇ ಹೀರುತ್ತ,

ಬಾಯಿಯೊಳಗಿನ ಅಂಗಾಗವೆಲ್ಲವಕ್ಕೂ 

ಮಜ್ಜನ ಮಾಡಿಸಿ, ಅಂದರೆ, ನಾಲಿಗೆ, ದವಡೆ ಹೀಗೆ ಎಲ್ಲ ಕಡೆಯೂ 

ಕಾಫಿಯನ್ನು ಒಮ್ಮೆ ಟಚ್ ಮಾಡಿ,  ಅವಕ್ಕೂ ರುಚಿ ತೋರಿಸಿ,

ಬಿಸಿ ಕಳೆದು ಬೆಚ್ಚಗಾದ ಮೇಲೆ ಗಂಟಲಿನಾಳಕ್ಕೆ ಮೃದುವಾಗಿ ಕಳಿಸಿಕೊಟ್ಟರೆ

ಅದು ಕೊಡುವ ಕಿಕ್ಕಿಗೆ ಕಣ್ಣು ಮುಚ್ಚಿದಾಗ,

ಆಹಾ!! ಇದೇ ಸ್ವರ್ಗ ಅಂತ ಅನಿಸುತ್ತದೆ. 

ಮೈಯಲ್ಲಿ ಹೊಸ ಚೈತನ್ಯ ಹುಟ್ಟಿ,

ಕೆಲಸಕ್ಕೆ ತೊಡಗುತ್ತಾರಲ್ಲ, ಅವರ ಹುರುಪು ನೋಡಬೇಕು ಕಣ್ರೀ.

ಕೆಲಸ ಮಾಡಿ ಸುಸ್ತಾದಾಗ, ಆಗೊಮ್ಮೆ ಈಗೋಮ್ಮೆ ಕಾಫಿ ಗಂಟಲಿಗೆ ಬಿಳದೇ ಇದ್ದರೆ, ಏನೋ ಕಳೆದು ಕೊಂಡತಂಹ ಭಾವ ಈ ಕಾಫಿ ಪ್ರಿಯರಿಗೆ ಆಗುತ್ತದೆ. 



ಭಾರತ ದೇಶಕ್ಕೆ ಕಾಫಿಯನ್ನು ಪರಿಚಯಿಸಿದ್ದು ಬಾಬಾ ಬುಡನ್ ಎನ್ನುವ ಸೂಫಿ ಸಂತ:-

ಭಾರತ ದೇಶಕ್ಕೆ ಕಾಫಿಯನ್ನು ಪರಿಚಯಿಸಿದ್ದು ಬಾಬಾ ಬುಡನ್ ಎನ್ನುವ ಸೂಫಿ ಸಂತ ಎಂದು ಹೇಳಲಾಗುತ್ತಿದೆ. ಬಾಬಾ ಬುಡನ್ ಎಂದೇ ಪ್ರಖ್ಯಾತರಾಗಿದ್ದ ಸುಫಿ ಸಂತ ಹಜ್ರತ್ ಶಾ ಜನಾಬ್ ಅಲ್ಲಾಹ್ ಮಹಗತಾಬಿ, ಚಿಕ್ಕಮಗಳೂರಿನ ಚಂದ್ರಗಿರಿ ಬೆಟ್ಟದಲ್ಲಿರುವ ಕೆಲವು ಗುಹೆಗಳಲ್ಲಿ ವಾಸವಾಗಿದ್ದರಂತೆ, ಅವರು ಮೆಕ್ಕಾ ಯಾತ್ರೆಗೆ ತೆರಳಿ ಹಿಂತಿರುಗಿದ್ದರು, ಅಲ್ಲಿರುವ ಸಮಯದಲ್ಲಿ, ಕಾಫಿಯ ರುಚಿಗೆ ಮಾರು ಹೋಗಿದ್ದರು. ಚಿಕ್ಕಮಗಳೂರಿನ ಹಸಿರು ಹೊದ್ದ ಗಿರಿಶ್ರೇಣೀಯ ಪರ್ವತದ ತಪ್ಪಲಿನಲ್ಲಿ ಈ ಗಿಡಗಳನ್ನು ಯಾಕೆ ಬೆಳೆಸಬಾರದು ಎನ್ನುವ ಆಲೋಚನೆ ಅವರಿಗೆ ಬಂತು. ಮಲೆನಾಡಿನ ಉತ್ತಮ ಹವಾಗುಣದಲ್ಲಿ ಈ ಬೀಜಗಳು ಇನ್ನಷ್ಟು ಚೆನ್ನಾಗಿ ಫಲಕೊಡಬಲ್ಲವು ಎಂದು ಆಲೋಚಿಸಿದರು. ಆದರೆ ಅಲ್ಲಿಂದ ಕಾಫಿ ಬೀಜ ಅಥವ ಸಸಿಗಳನ್ನು ರಫ್ತು ಮಾಡುವುದು ನಿಷಿದ್ದವಾಗಿತ್ತು. ಯೆಮನ್ ನ ಬಂದರಿನಲ್ಲಿ ಅತಿಯಾದ ತಪಾಸಣೆ ಜರುಗುತಿತ್ತಂತೆ, ಮರಳಿ ಬರುವಾಗ ಏಳು ಕಾಫಿ ಬೀಜಗಳನ್ನ ಭಾರತಕ್ಕೆ ತರಲು ಬಹಳ ಶ್ರಮಪಡಬೇಕಾಯಿತು. ಕಷ್ಟಪಟ್ಟು ಏಳು ಬೀಜಗಳನ್ನು ತಂದು ಚಂದ್ರ ಗಿರಿಯಲ್ಲಿನ ತೋಟಗಳಲ್ಲಿ ಬೆಳೆಸಿದರಂತೆ. ಮಲೆನಾಡಿನ ಹವಮಾನಕ್ಕೆ ಉತ್ಕೃಷ್ಟ ಗುಣಮಟ್ಟದ ಅರೇಬಿಕಾ ಕಾಫಿ ಇಲ್ಲಿ ಬೆಳೆಯಲಾರಂಬಿಸಿತು. ಕ್ರಮೇಣ ಜನರಿಗೆ ಕಾಫಿ ಪೇಯ ಇಷ್ಟವಾಗುತ್ತ ಹೋಯಿತು ಸ್ಥಳೀಯವಾಗಿ ಬೇಡಿಕೆ ಹೆಚ್ಚಾಯಿತು, ವರ್ಷದಿಂದ ವರ್ಷಕ್ಕೆ ತೋಟಗಳ ವಿಸ್ತಾರ ಜಾಸ್ತಿಯಾಗುತ್ತ ಹೋಯಿತು.  ಇಲ್ಲಿನ ರೈತರು ಕಾಫಿಯನ್ನು ಹೆಚ್ಚು ಹೆಚ್ಚು ಬೆಳೆದು, ಭಾರತ ಮಾತ್ರವಲ್ಲದೆ ವಿವಿಧ ದೇಶಗಳಿಗೆ ಮಾರಿ ಅತಿ ಹೆಚ್ಚು ಹಣ ಸಂಪಾದಿಸಲು ಆರಂಭಿಸಿದರು. ಪೋರ್ಚುಗೀಸರು, ಫ್ರೆಂಚರು, ಬ್ರಿಟೀಶರು ಎಲ್ಲರೂ ಭಾರತದಲ್ಲಿ ಕಾಫಿ ಬೆಳೆಯಲು ಹೆಚ್ಚು ಪ್ರೋತ್ಸಾಹ ನೀಡಲಾರಂಭಿಸಿದರು. ಅಂದು ಶುರುವಾದ ಕಾಫಿ ಉದ್ಯಮ ಇಂದು ಕಾಫಿ ಬೆಳೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶ ಆರನೇ ಸ್ಥಾನದಲ್ಲಿದೆ.  ಭಾರತದ ಒಟ್ಟು ಉತ್ಪಾದನೆಯ ಶೇ 70–80ರಷ್ಟು ಕಾಫಿಯನ್ನು ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇದರ ಬಹುಪಾಲು ಕರ್ನಾಟಕದ್ದೆ ಎನ್ನುವುದೇ ವಿಶೇಷ.



ಕಾಫಿಯು ಮೂಲತಃ ಅರೇಬಿಯಾದ್ದು ಅಲ್ಲ:-

ಜಗತ್ತಿಗೆ ಅರಬ್ ರಾಷ್ಟ್ರಗಳಿಂದ ಕಾಫಿ ಪರಿಚಯವಾಯಿತು ಎಂದು ಬಹುತೇಕರು ನಂಬಿದ್ದಾರೆ. ಆದರೆ ಅದು ಸತ್ಯವಲ್ಲ.  ಸುಮಾರು ಹದಿನೆಂಟು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ನಾನು ವಾಸಿಸುತಿದ್ದೇನೆ. ಇಲ್ಲಿನ ಅರಬ್ಬರು ಮತ್ತು ಕೆಲಸಕ್ಕಾಗಿ ವಲಸೆ ಬಂದಿರುವ ಟರ್ಕಿ ದೇಶದ ಪ್ರಜೆಗಳು ಮತ್ತು ಈಜಿಪ್ಟಿನ, ಸಿರಿಯಾ, ಲಿಬಿಯಾ ಮತ್ತಿತರ ದೇಶಗಳ ಪ್ರಜೆಗಳು ಕುಡಿಯುವ ಕಡು ಕಪ್ಪಿನ ಡಿಕಾಶನ್ ತರಹದ ಕಾಫಿ, ಮತ್ತು ಇನ್ನೂ ಕೆಲವರು ಕುಡಿಯುವ ಕಾವ್ಹ ನೋಡಿ ಬಹಳ ಆಶ್ಚರ್ಯವಾಗುತಿತ್ತು. ಬಹುತೇಕ ಅರಬ್ ಜನರಿಗೆ ಟೀ ಪೇಯಗಿಂತ ಕಾಫಿಯೇ ಬಹಳ ಇಷ್ಟ. ಅವರು ಇಷ್ಟ ಪಟ್ಟು ಕುಡಿಯುವ ಕಡುಕಪ್ಪಿನ ಕಾಫಿ, ನಮ್ಮ ಭಾರತೀಯರಿಗೆ ಖಂಡಿತ ಇಷ್ಟವಾಗುವುದಿಲ್ಲ. ನಮಗೇನಿದ್ದರು, ಹಾಲು ಮತ್ತು ಸಕ್ಕರೆ ಮಿಶ್ರಿತ ಕಾಫಿಯೇ ಇಷ್ಟವಾಗುವುದು. 

ದುಬೈ, ಅಬುಧಾಬಿ, ಶಾರ್ಜಾ, ಕುವೈತ್, ಒಮಾನ್ ಹೀಗೆ ಹಲವಾರು ನಗರಗಳು ಮತ್ತು ಇಲ್ಲಿನ ಒಳನಾಡಿನ ಪರಿಚಯವಿರುವ ನನಗೆ ಇಲ್ಲಿನ ಹವಮಾನ, ಇಲ್ಲಿನ ಭೌಗೋಳಿಕ ಲಕ್ಷಣದ ಬಗ್ಗೆ ಸಂಪೂರ್ಣವಾದ ಅರಿವಿದೆ. ಬಿರುಬಿಸಿಲಿನ ಒಣ ಪ್ರದೇಶ, ಮರುಭೂಮಿ,  ಇವೆಲ್ಲವನ್ನು ನೋಡಿ ಬಹುಶಃ ಕಾಫಿ ಇಲ್ಲಿ ಹೇಗೆ ಬೆಳೆಯಲು ಸಾಧ್ಯ ಎನ್ನುವ ಪ್ರಶ್ನೆ ನನ್ನ ಮನದ ಮೂಲೆಯಲ್ಲಿತ್ತು. ಇಲ್ಲಿನ ಅರಬ್ಬಿ ಜನರು ನೀಡಿದ ಮಾಹಿತಿ ಪ್ರಕಾರ ಯೆಮನ್ ದೇಶ ಮತ್ತು ಸೌದಿ ಅರೇಬೀಯಾ ದೇಶದಲ್ಲಿ ಮಲೆನಾಡಿನಂತಹ ಪ್ರದೇಶವಿದೆ ಅಲ್ಲಿ ಸ್ವಲ್ಪ ಮಟ್ಟಿಗೆ ಬೆಳೆಯುತ್ತಾರೆ ಎಂದು ಕೆಲವರು ಮಾಹಿತಿ ನೀಡಿದರು. ಆ ಪ್ರದೇಶಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿತು ಆದರೂ ಅಲ್ಲಿ ಅಷ್ಟು ದೊಡ್ಡ ಮಟ್ಟಿಗಿನ ಕಾಫಿ ಬೆಳೆಯಲ್ಲ, ಅದೇನಿದ್ದರು ಸ್ಥಳೀಯ ಮಾರುಕಟ್ಟೆಗೆ ಸಾಕಾಗುವಂತಹದ್ದು. ಆದರೆ ಬಹುತೇಕ ಅದರಲ್ಲೂ ಉತ್ತಮ ಗುಣಮಟ್ಟದ ಕಾಫಿ ಆಮದಾಗುತ್ತಿರುವುದು ಆಫ್ರಿಕಾ ಖಂಡದ ಇತಿಯೋಪಿಯಾ ದೇಶದಿಂದ ಎಂದು ತಿಳಿಯಿತು. 

ಅರಬ್ ರಾಷ್ಟ್ರಗಳಲ್ಲಿ ಕಾಫಿ:-

 ಇಲ್ಲಿ ಕಾಫಿ ಹೇಗೆ ಪ್ರಖ್ಯಾತಿ ಪಡೆಯಿತು ಎಂದು ತಿಳಿದು ಕೊಳ್ಳೋಣ. ಸೌದಿ ಅರೇಬಿಯಾದ ಮೆಕ್ಕಾ ನಗರವು ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಶತಶತಮಾನಗಳಿಂದ ಲಕ್ಷಾಂತರ ಜನರು ಧಾರ್ಮಿಕ ಯಾತ್ರೆಗೆ ಇತರೆ ರಾಷ್ಟ್ರಗಳಿಂದ  ಧಾವಿಸುತ್ತಾರೆ. ಜನರು ದೂರದ ದೇಶಗಳಿಂದ ಸಹಸ್ರಾರು ಮೈಲುಗಳಿಂದ ಅರೇಬಿಯಾದ ಬಂದರು ಪ್ರದೇಶಗಳಿಗೆ ಧಾವಿಸಿ ಅಲ್ಲಿಂದ ಒಳನಾಡಿನಲ್ಲಿರುವ ಮೆಕ್ಕಾ ನಗರಕ್ಕೆ ಹೋಗುತಿದ್ದರು. ಹೀಗೆ ಹೋಗುವಾಗ ಸುಸ್ತು ದಣಿವು ಆವರಿಸುತಿದ್ದರಿಂದ, ದೇಹಕ್ಕೆ ಚೈತನ್ಯ ಪಡೆಯಲು ಕಾಫೀ ಪಾನೀಯವನ್ನು ಸೇವಿಸುತಿದ್ದರಂತೆ. ಇದು ಉತ್ತೇಜನಕಾರಿಯಾದ್ದರಿಂದ, ಇಲ್ಲಿ ದಿನದಿಂದ ದಿನ ಕಾಫಿ ಬೇಡಿಕೆ ಹೆಚ್ಚಾಗುತ್ತ ಹೋಯಿತು. ಮರುಭೂಮಿಯಲ್ಲಿ ಬೆಳೆಯಲು ಸಾಧ್ಯವಿಲ್ಲದ್ದರಿಂದ, ಕಾಫಿ ಗಿಡ ಬೆಳೆಯಲು ಅನುಕೂಲವಾಗುವಂತಹ ವಾತಾವರಣವಿರುವ ಪ್ರದೇಶಗಳಲ್ಲಿ ಕೃಷಿ ಮಾಡಲೆತ್ನಿಸಿದರು. ಮೆಕ್ಕಾಗೆ ಆಗಮಿಸಿದ ಪ್ರವಾಸಿಗರು ಕಾಫಿಯನ್ನು ಇಷ್ಟ ಪಟ್ಟು ತಮ್ಮ ತಮ್ಮ ದೇಶಗಳಿಗೆ ಕೊಂಡೋಯ್ದು ಅಲ್ಲಿ ಮಾರುಕಟ್ಟೆಯನ್ನ ಸೃಷ್ಟಿಸಿದರು.  ಅದೇ ರೀತಿ ಬಾಬಾ ಬುಡನ್ ಅವರು ಸಹ ಇದರಿಂದ ಪ್ರೇರಿತರಾಗಿ ಕರ್ನಾಟಕಕ್ಕೆ ಕಾಫಿ ಬೀಜಗಳನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾ ಖಂಡದ ಇತಿಯೋಪಿಯಾ ದೇಶದಲ್ಲಿ ಮೊದಲ ಬಳಕೆ:-

ಸೌದಿ ಅರೇಬಿಯಾ, ಯೆಮನ್ ನಂತಹ ಅರಬ್ ರಾಷ್ಟ್ರಗಳಿಗೆ ಕಾಫಿ ಪರಿಚಯಿಸಿದ್ದು ಸಹ ಇತಿಯೋಪೀಯಾ ದೇಶದಿಂದಲೇ.  ಅಲ್ಲಿ 9 ನೇ ಶತಮಾನದಲ್ಲಿಯೇ ಕಾಫಿ ಬಳಕೆಗೆ ಬಂತು.

ಒಮ್ಮೆ ಕುರಿಗಾಹಿಗಳು, ಮೇಯಲು ಬಿಟ್ಟಿದ್ದ ತಮ್ಮ ಮೇಕೆಗಳು ಅತಿ ಉತ್ಸಾಹದಿಂದ ಕುಣಿದಾಡುತ್ತಿರುವುದನ್ನು ಕಂಡು, ಇವ್ಯಾಕೆ ಹಿಂಗೆ ಕುಣಿಯುತ್ತಿವೆ ಎಂದು ಯೋಚಿಸಿದನಂತೆ. ಆ ಮೇಕೆಗಳು ಅಲ್ಲಿದ್ದ ಕೆಲ ಗಿಡಗಳ ಹಣ್ಣನ್ನ ತಿನ್ನುವುದನ್ನ ಗಮನಿಸಿತ್ತಾರೆ, ಬಹುಶಃ ಈ ಹಣ್ಣುಗಳ ಸೇವನೆಯಿಂದ ಮೇಕೆಗಳು ಕುಣಿದಾಡುತ್ತಿವೆ ಎಂದು ಅರಿಯುತ್ತಾರೆ. ಅದರಲ್ಲೊಬ್ಬ ತಾನು ಸಹ ಆ ಹಣ್ಣುಗಳನ್ನ ತಿಂದನಂತೆ. ಅದರ ಫಲಿತಾಂಶಗಳಿಂದ ಆಕರ್ಷಿತನಾದ ಮೇಕೆ ಮೇಯಿಸುವವನು ಊರಿಗೆಲ್ಲ ಸುದ್ದಿ ಹಬ್ಬಿಸಿದನಂತೆ. ಕ್ರಮೇಣ ವಿವಿಧ ಪ್ರಯೋಗಳು ನಡೆದು ಇಂದು ನಾವೆಲ್ಲರೂ ಸೇವಿಸುವ ಕಾಫಿಯು ತನ್ನ ಹೊಸ ರೂಪದಲ್ಲಿ ನಮಗೆ ಇಂದು ಲಭ್ಯವಾಗುತ್ತಿದೆ.   "ಕಾಫಿ" ಎಂಬ ಪದ ಇತಿಯೋಪಿಯದ "ಕಾಫ" ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ಹೇಳಲಾಗುತ್ತಿದೆ.  

15 ನೇ ಶತಮಾನದ ನಂತರ, ಅಲ್ಲಿಂದ ಅದು ಈಜಿಪ್ಟ್, ಯೆಮನ್, ಯುರೋಪ್, ಭಾರತ ಮತ್ತಿತರ ದೇಶಗಳಿಗೆ ಹಬ್ಬುತ್ತ ಹೋಯಿತು. ಹಾಗೆಯೇ ಯುರೋಪಿಯನ್ನರು ಅದರಲ್ಲೂ ಪೋರ್ಚುಗೀಸರು, ಡಚ್ ವ್ಯಾಪಾರಿಗಳು ಕಾಫಿಯ ರುಚಿಗೆ ಮಾರು ಹೋದದ್ದರಿಂದ ಅದನ್ನು ತಮ್ಮ ದೇಶಗಳಿಗೆ ತೆಗೆದುಕೊಂಡು ಹೋದರು. ಮೊಟ್ಟ ಮೊದಲ ಕಾಫೀ ಶಾಪ್  ಟರ್ಕಿದೇಶದ ಇಸ್ತಾನ್ ಬುಲ್ ನಗರದಲ್ಲಿ, ಕ್ರಿ.ಶ. 1475 ರಲ್ಲಿ ಪ್ರಾರಂಭವಾಯಿತು. 17 ನೇ ಶತಮಾದ ವೇಳೆಗೆ ಯೂರೋಪ್ ಖಂಡದಾದ್ಯಂತ ಕಾಫಿಯು ಅತ್ಯಂತ ಜನಪ್ರಿಯ ಪೇಯವಾಗಿತ್ತು. ಇಂಗ್ಲೆಂಡಿನ ನಗರಗಳಲ್ಲಿ ಬಗೆ ಬಗೆಯ ಕಾಫಿ ಕೇಂದ್ರಗಳನ್ನು ತೆರೆಯಲಾಯಿತು.

ಕಾಫಿಗೂ ನಿಷೇದ ಹೇರಲಾಗಿತ್ತು:-

ಇಷ್ಟು ಪ್ರಖ್ಯಾತಿ ಪಡೆದ ಕಾಫಿಗೂ ಸಹ ಕಂಟಕ ಕಾದಿತ್ತು ಎಂದರೆ ನೀವು ನಂಬುವುದಿಲ್ಲ. ಆಗಿನ ಕಾಲದ ಆಡಳಿತಗಾರರ ಚಿಂತನೆ ಹೇಗಿತ್ತು ಎಂದರೆ, ಕಾಫಿ ಕುಡಿಯುವುದರಿಂದ ದೇಹದಲ್ಲಿ ಚೈತನ್ಯ ಉಂಟಾಗುವುದನ್ನು ಗಮನಿಸಿದ ಕೆಲವರು, ಕಾಫೀ ಪಾನೀಯ ಉತ್ತೇಜನಕಾರಿ ಎಂದು ನಿರ್ಧರಿಸಿ ಕೆಲ ದೇಶಗಳಲ್ಲಿ ನಿಷೇದ ಹೇರಲಾಗುತ್ತದೆ.  ಸೌದಿ ಅರೇಬಿಯಾದ ಮೆಕ್ಕಾದಲ್ಲಿ 1511 ರಲ್ಲಿ ಕಾಫಿಗೆ ನಿಷೇಧವನ್ನು ಹೇರಿದರು. 1532 ರಲ್ಲಿ ಈಜಿಪ್ಟಿನ ಕೈರೋ ನಗರ ದಿಂದಲೂ ಕಾಫಿ ನಿಷೇಧಿತವಾಯಿತು. ಆದರೆ ಕಾಫಿಯ ಜನಪ್ರಿಯತೆಯ ಕಾರಣದಿಂದಾಗಿ ಕೆಲ ವರ್ಷಗಳ ನಂತರ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. 17 ನೇ ಶತಮಾನದ ಇಂಗ್ಲೆಂಡಿನಲ್ಲಿ ಇದನ್ನು "ರಾಜಕೀಯವಾಗಿ ವಿದ್ರೋಹಕಾರಿ" ಜನರು ಉಪಯೋಗಿಸುವ ಪೇಯ ಎಂದು ನಿಷೇಧಿಸಲಾಗಿತ್ತಂತೆ.

ಕಾಫಿ ಗಿಡಗಳಲ್ಲಿ ಎರಡು ಮುಖ್ಯ ಪ್ರಭೇದಗಳಿವೆ:- ಅರೇಬಿಕ ಮತ್ತು  ರೋಬಸ್ಟ. ಅರೇಬಿಕ ತಳಿ ಆಫ್ರಿಕಾ ಖಂಡದ ಇತಿಯೋಪಿಯದಲ್ಲಿಬೆಳೆದಿದ್ದು, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡಿದ್ದು. ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೀನ್ ಅಂಶವನ್ನು ಹೊಂದಿದ್ದು ಅತಿ ಹೆಚ್ಚು ಕಹಿಯಾಗಿರುತ್ತವೆ ಮತ್ತು ಹೆಚ್ಚು ಆಮ್ಲೀಯ ಗುಣವನ್ನು ಹೊಂದಿರುತ್ತದೆ. ಅರೇಬಿಕಾ ತಳಿಯ ಕಡಿಮೆ ಆಮ್ಲೀಯತೆ ಗುಣವನ್ನು  ಹೊಂದಿದ್ದು,  ಉತ್ತಮ ರುಚಿಯನ್ನು ಹೊಂದಿರುತ್ತದೆ.

ಕಾಫಿ ಉತ್ಪಾದಕರಲ್ಲಿ ಬ್ರೆಜಿಲ್ ಮೊದಲ ಸ್ಥಾನ:-

ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಷ್ಟ್ರ ಬ್ರೆಜಿಲ್ ಆಗಿದ್ದು, ಇದು ಪ್ರಪಂಚದ ಎಲ್ಲಾ ಕಾಫಿಯ ಮೂರನೇ ಒಂದು ಭಾಗ ಇಲ್ಲಿ ಉತ್ಪಾದಿಸಲಾಗುತ್ತಿದೆ. ವಿಯೆಟ್ನಾಂ ಮತ್ತು ಕೊಲಂಬಿಯಾ ನಂತರದ ಸ್ಥಾನದಲ್ಲಿದೆ. ಅತಿ ಹೆಚ್ಚು ಕಾಫಿ ಸೇವಿಸುವ ರಾಷ್ಟ್ರ ಫಿನ್ ಲ್ಯಾಂಡ್ ಆಗಿದೆ. 1929 ರಲ್ಲಿ ಬ್ರೆಜಿಲ್ ರಾಷ್ಟ್ರದಲ್ಲಿ ಬಳಕೆ ಮತ್ತು ಮಾರಾಟಕ್ಕಿಂತ ಅತಿ ಹೆಚ್ಚು ಕಾಫಿ ಉತ್ಪನ್ನವಾಗಿತ್ತು, ಇದಕ್ಕೆ ಪರಿಹಾರ ಕಂಡು ಹಿಡಿಯುವ ಸಲುವಾಗಿ ನೆಸ್ ಕೆಫೆ ಕಂಪನಿಯು ಮೊಟ್ಟ ಮೊದಲ ಬಾರಿಗೆ ಇನ್ಸ್ಟಂಟ್ ಕಾಫಿ ತಯಾರಿಕೆಯಲ್ಲಿ ತೊಡಗಿತು.  

"ಕೋಪಿ ಲುವಾಕ್" ವಿಶ್ವದ ಅತ್ಯಂತ ದುಬಾರಿ ಕಾಫಿ:- ಇದನ್ನು ಸಿವೆಟ್ ಕಾಫಿ ಎಂದೂ ಕರೆಯುತ್ತಾರೆ. ಬಹಳಷ್ಟು ಜನರು ಒಂದು ಕಪ್‌ ಸಿವೆಟ್ ಕಾಫಿಗೆ ಸಾವಿರಾರು ರೂ. ಖರ್ಚು ಮಾಡಿ ಕುಡಿಯುತ್ತಾರೆ. ಈ ಕಾಫಿ  ರುಚಿಕರವಾಗಿರುವುದರ ಜೊತೆಗೆ ತುಂಬಾ ಪೌಷ್ಟಿಕಯುತವಾಗಿದೆ ಎಂದು ಹೇಳಲಾಗುತ್ತದೆ.  ಇದನ್ನು ಸಿವೆಟ್ ಅಥವಾ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ. 

ಸಿವೆಟ್ ಬೆಕ್ಕುಗಳು ಕಾಫಿ ಬೀಜಗಳನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಈ ಬೆಕ್ಕುಗಳು ಚೆರ್ರಿ ಹಣ್ಣಿನ ತಿರುಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವುಗಳ ಕರುಳುಗಳು ಇದಕ್ಕೆ ಜೀರ್ಣಕಾರಿ ಕಿಣ್ವಗಳನ್ನು ಹೊಂದಿಲ್ಲ. ಹೀಗಾಗಿ, ಕಾಫಿಯ ಆ ಭಾಗವು ಬೆಕ್ಕಿನ ಮಲದೊಂದಿಗೆ ಹೊರಬರುತ್ತದೆ. ನಂತರ ಅದನ್ನು ಶುದ್ಧೀಕರಿಸಲಾಗುತ್ತದೆ. ಮಲದಲ್ಲಿರುವ ಎಲ್ಲಾ ರೀತಿಯ ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸಿದ ನಂತರ ಮತ್ತಷ್ಟು ಸಂಸ್ಕರಣೆ ನಡೆಯುತ್ತದೆ. ಆ ಬೀಜಗಳನ್ನು ತೊಳೆದು ಹುರಿದ ನಂತರ ಕಾಫಿ ಸಿದ್ಧವಾಗುತ್ತದೆ. ಈ ಕಾಫಿಯನ್ನು ಏಷ್ಯಾದ ದೇಶಗಳಲ್ಲಿ, ಇಂಡೋನೇಷ್ಯಾದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ, ಕರ್ನಾಟಕದಲ್ಲಿ ನಮ್ಮ  ಕೊಡಗು ಜಿಲ್ಲೆಯಲ್ಲಿಯೂ ಸಹ ತಯಾರಿಸಲಾಗುತ್ತದೆ.  ಈ ಕಾಫಿ ಕೆಜಿಗೆ 20 ರಿಂದ 25 ಸಾವಿರ ರೂ. ಇದೆ. ಅಮೆರಿಕದಲ್ಲಿ ಇದರ ಒಂದು ಕಪ್’ಗೆ ಸುಮಾರು 6 ಸಾವಿರ ರೂಪಾಯಿ ಇದೆ. ವಿಶೇಷವೆಂದರೆ ಸೌದಿ ಅರೇಬಿಯಾ, ದುಬೈ, ಅಮೆರಿಕ, ಯುರೋಪ್ ಮೊದಲಾದ ದೇಶಗಳಲ್ಲಿ ಸಿವೆಟ್ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Courtesy: Internet. 
Phot Credit goes to Original Owner of the Photos




Click below headings