ತಾಯಿ
ಈ ಎರಡಕ್ಷರದ ಪದದಲ್ಲಿ ಅಡಗಿರುವ ಅರ್ಥದ ಆಳವನ್ನು ಅಳೆಯಲು ಯಾವ ನಿಘಂಟಿನಿಂದಲೂ ಸಾಧ್ಯವಿಲ್ಲ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ನಾವು 'ವಿಶ್ವ ತಾಯಂದಿರ ದಿನ'ವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆಕೆಯನ್ನು ಗೌರವಿಸುವುದು, ಉಡುಗೊರೆ ನೀಡುವುದು, ಆಕೆಯ ಕೆಲಸಕ್ಕೆ ಅಂದು ಒಂದು ದಿನ ವಿರಾಮ ನೀಡಿ ವಿಶೇಷ ಭೋಜನ ಸವಿಯುವುದು ಇಂದು ರೂಢಿಯಾಗಿದೆ. ಆದರೆ, ಈ ಆಚರಣೆಯ ಹಿಂದೆ ಕೇವಲ ಸಂಭ್ರಮವಿದೆಯೇ ಅಥವಾ ಮರೆಯಾಗುತ್ತಿರುವ ಮನುಷ್ಯತ್ವದ ನೆನಪಿನ ಅನಿವಾರ್ಯತೆ ಇದೆಯೇ?
ತಾಯಂದಿರ ದಿನದ ಇತಿಹಾಸವನ್ನು ಕೆದಕಿದಾಗ ನಮಗೆ ಸಿಗುವುದು 1908ರ ಅಮೇರಿಕಾ. ಅನ್ನಾ ಜಾರ್ವಿಸ್ ಎಂಬುವವರು ತನ್ನ ತಾಯಿಯ ಸ್ಮರಣಾರ್ಥವಾಗಿ ಮತ್ತು ತಾಯಂದಿರ ತ್ಯಾಗವನ್ನು ಗೌರವಿಸಲು ಈ ದಿನವನ್ನು ಆರಂಭಿಸಿದರು. ಭಾರತಕ್ಕೆ ಈ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ 20ನೇ ಶತಮಾನದ ಅಂತ್ಯದಲ್ಲಿ ಕಾಲಿಟ್ಟಿತು. ಇಂದು ನಗರಗಳಲ್ಲಿ ಇದು ದೊಡ್ಡ ಹಬ್ಬದಂತೆ ಆಚರಿಸಲ್ಪಡುತ್ತಿದೆ.
ದೇವರಿಗಿಂತ ಮಿಗಿಲಾದವಳು:
ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಮ್ಮನನ್ನು ಸೃಷ್ಟಿಸಿದನಂತೆ. ಈ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಮಗು ಮಾಂಸದ ಮುದ್ದೆಯಾಗಿ ಭೂಮಿಗೆ ಬಂದಾಗಿನಿಂದ ಹಿಡಿದು, ಅದರ ಮಲ ಮೂತ್ರ, ಬೆವರು ಯಾವುದನ್ನೂ ಅಸಹ್ಯ ಪಟ್ಟುಕೊಳ್ಳದೆ ಎದೆಯ ಹಾಲಿನೊಂದಿಗೆ ಪ್ರೀತಿಯನ್ನು ಉಣಿಸಿ ಬೆಳೆಸುವವಳು ಅಮ್ಮ. ಒಬ್ಬ ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿ ಮಾಡುವಂತೆ, ಅಮ್ಮ ತನ್ನ ಪ್ರೀತಿಯೆಂಬ ಉಳಿಯಿಂದ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತಾಳೆ. ತನ್ನ ಬಯಕೆಗಳಿಗೆ ತಿಲಾಂಜಲಿ ಇಟ್ಟು, ಹರಿದ ಸೀರೆಯಲ್ಲೇ ದಿನಗಳನ್ನು ಕಳೆಯುತ್ತಾ, ಮಕ್ಕಳ ಹಿತವನ್ನೇ ತನ್ನ ಸುಖ ಎಂದು ಭಾವಿಸುವವಳು ಅವಳು. ಬಿಸಿಲು, ಮಳೆ, ಬಿರುಗಾಳಿ ಬಂದರೂ ತನ್ನ ಮಡಿಲಿನಲ್ಲಿ ಮಕ್ಕಳಿಗೆ ನೆಮ್ಮದಿಯ ಆಶ್ರಯ ನೀಡುವ ಆಲದ ನೆರಳು ಅಮ್ಮ.
ಇಂದು ನಾವು ಅದ್ದೂರಿಯಾಗಿ ತಾಯಂದಿರ ದಿನವನ್ನು ಆಚರಿಸುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ನಾವು ತಾಯಿಯನ್ನು ಮರೆಯುತ್ತಿದ್ದೇವೆ ಎಂಬ ಕಟು ಸತ್ಯ. 'ಮದರ್ ಇಂಡಿಯಾ' ಎಂದು ನಾವು ಭಾರತದ ಅಮ್ಮನನ್ನು ಪೂಜಿಸುತ್ತೇವೆ, ಆದರೆ ಇಂದು ಎಷ್ಟೋ ತಾಯಂದಿರಿಗೆ ಸ್ವಂತ ಮನೆಯಲ್ಲೇ ನೆಲೆ ಇಲ್ಲದಂತಾಗಿದೆ. ಮಗು ಬೆಳೆದಂತೆ ತಾಯಿಯ ಅಕ್ಕರೆ ಹೆಚ್ಚುತ್ತದೆ, ಆದರೆ ಅದೇ ಮಗು ಬೆಳೆದು ಮನುಷ್ಯನಾದಾಗ ತಾಯಿಯನ್ನೇ ತೊರೆಯಲಾರಂಭಿಸುತ್ತಾನೆ.
ಮಕ್ಕಳು ತಮ್ಮ ಬದುಕಿನಲ್ಲಿ ಬ್ಯುಸಿಯಾದಂತೆ, ಅಮ್ಮನನ್ನು ವೃದ್ಧಾಶ್ರಮಕ್ಕೆ ದೂಡುತ್ತಿರುವುದು ಇಂದಿನ ಕಾಲದ ದೊಡ್ಡ ವಿಡಂಬನೆ. ಒಂದು ದಿನದ ಉಡುಗೊರೆ ಅಥವಾ ಸ್ಟೇಟಸ್ ಅಪ್ಡೇಟ್ಗಿಂತ, ಆಕೆಗೆ ಬೇಕಿರುವುದು ಆಕೆಯ ಮುಪ್ಪಿನ ಕಾಲದಲ್ಲಿ ಮಕ್ಕಳ ಪ್ರೀತಿಯ ಸಾಮೀಪ್ಯ.
ನಮ್ಮ ಕರ್ತವ್ಯ:
ತಾಯಂದಿರ ದಿನ ಕೇವಲ ಒಂದು ದಿನದ ಫೋಟೋಶೂಟ್ ಆಗಬಾರದು. ಆಕೆಯ ತ್ಯಾಗದ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಆಕೆಯನ್ನು ಗೌರವದಿಂದ ಕಾಣುವುದು ನಮ್ಮ ಕೈಯಲ್ಲಿದೆ. ಆಕೆಯ ಬದುಕಿನ ಸಂಜೆ ಹೊತ್ತು ಒಂಟಿಯಾಗದಂತೆ ನೋಡಿಕೊಳ್ಳುವುದು ನಿಜವಾದ ಆಚರಣೆ. ಕೊನೆಯದಾಗಿ, ಅಮ್ಮ ಎಂಬುದು ಕೇವಲ ಒಂದು ಸಂಬಂಧವಲ್ಲ, ಅದು ಒಂದು ಅನುಭವ. ಆಕೆಯನ್ನು ಪ್ರೀತಿಸೋಣ, ಗೌರವಿಸೋಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೊಂದಿಗೆ ಇರಿಸಿಕೊಳ್ಳೋಣ. ಇಂದು ಆಕೆಗೆ ನಿಮ್ಮ ಸಮಯವನ್ನು ನೀಡಿ, ಅದೇ ನೀವು ನೀಡುವ ಅತ್ಯುತ್ತಮ ಉಡುಗೊರೆ.
ಪಿ.ಎಸ್.ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ