ಶುಕ್ರವಾರ, ಜೂನ್ 28, 2024

ಜೀವನ ಪಾಠ


 *ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ❓*

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ. 

ಬಹಳಷ್ಟು ಜನರಲ್ಲಿ ನಿವೃತ್ತಿ ನಂತರ ಒಂಟಿತನ ಕಾಡುವುದಕ್ಕೆ ಶುರುವಾಗುತ್ತದೆ. ಕೆಲವರು ಖಿನ್ನತೆಗೂ ಒಳಗಾಗುತ್ತಾರೆ. ನ್ಯಾಯ ನೀತಿ, ನೇರ ಮತ್ತು ನಿಷ್ಟುರತೆಯಿಂದ ಬದುಕಿದವರೂ ಇನ್ನೂ ಹೆಚ್ಚಿನ ಖಿನ್ನತೆಗೆ ಒಳಗಾಗುವ ಸಾಧ್ಯತೆ ಜಾಸ್ತಿಯಿರುತ್ತದೆ. ಜತೆಯಲ್ಲಿರುವವರು ಖಿನ್ನತೆಯಿಂದ ಪಾರುಮಾಡುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಮಾನಸಿಕ ಆರೋಗ್ಯದ ಪರಿಣಾಮ ದೇಹದ ಮೇಲೂ ಬೀರಲು ಪ್ರಾರಂಭಿಸುತ್ತದೆ. 

ಒಂದು ನಗರದಲ್ಲಿ, ಅಂದಾಜು 70 ವರ್ಷ ವಯಸ್ಸಿನ ಒಬ್ಬ ಸಂಭಾವಿತ ವ್ಯಕ್ತಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು, ಎಲ್ಲದರಲ್ಲೂ ನಿರಾಸಕ್ತಿ, ಯಾವಗಲೂ ಯೋಚನೆ ಮಾಡುವುದು, ಆ ಸಮಸ್ಯೆ, ಈ ಸಮಸ್ಯೆ ಅಂತ ಗೊಣಗಾಡುವುದು ನಡೆದಿತ್ತು. ವಯಸ್ಸಾಯ್ತು, ಆರಾಮಾಗಿರಿ ಎಂದು ಮನೆಯವರು ಹೇಳಿದರು, ಕೇಳ್ತಿರಲಿಲ್ಲ. ಇವರ ಅವಸ್ಥೆ ಕಂಡ ಅವರ ಪತ್ನಿ, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಲು ಕೌನ್ಸೆಲಿಂಗ್ ಸಲಹೆಗಾರರೊಂದಿಗೆ ಮಾತನಾಡಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಒಂದು ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. 

ಇವರನ್ನ ಭೇಟಿ ಮಾಡಿದ ವೈದ್ಯರು, ಏನು ಸಮಸ್ಯೆ? ಅಂತ ಕೇಳ್ತಾರೆ.

"ಅವರು ತೀವ್ರ ಖಿನ್ನತೆಯಲ್ಲಿದ್ದಾರೆ, ದಯವಿಟ್ಟು ಅದನ್ನು ನೋಡಿ.."  ಎಂದು ಪತ್ನಿ, ಮನೆಯಲ್ಲಿ ಅವರು ನಡೆದುಕೊಳ್ಳುವ ವಿಷಯದ ಕುರಿತು ಹೇಳ್ತಾರೆ...

ಆಯ್ತು ನೀವು ಹೊರಗೆ ಕುಳಿತುಕೊಳ್ಳಿ, ಇವರ ಬಳಿ ಪರ್ಸನಲ್ ಆಗಿ ಮಾತನಾಡುವುದಿದೆ ಎಂದು ಹೆಂಡತಿಯನ್ನು ಹೊರಕಳಿಸುತ್ತಾರೆ.

ವೈದ್ಯರು, ಕೆಲವು ವೈಯಕ್ತಿಕ ವಿಷಯಗಳನ್ನು ಆ ಹಿರಿಯರ ಬಳಿ ಕೇಳುವ ಮೂಲಕ ತಮ್ಮ ಕೌನ್ಸೆಲಿಂಗ್ ಅನ್ನು ಪ್ರಾರಂಭಿಸುತ್ತಾರೆ.

ಆ ಹಿರಿಯರು ಮಾತನಾಡುತ್ತ ಹೋಗ್ತಾರೆ, 

ನನ್ನ ನಿವೃತ್ತಿ ನಂತರ ಬಹಳಷ್ಟು ವಿಷಯಗಳು ಕುರಿತು ಚಿಂತೆ ಮಾಡ್ತಿದ್ದೇನೆ. ಮನೆ ಸಮಸ್ಯೆ, ಮಕ್ಕಳ ಭವಿಷ್ಯ, ಈಗಿರುವ ಸಾಲಗಳು, ಮಗನ ಮದುವೆ, ಮಗಳ ಜೀವನದ ಭದ್ರತೆ, ಹೀಗೆ ಎಲ್ಲದರ ಕುರಿತು ಬಹಳಷ್ಟು ಯೋಚಿಸ್ತಿದ್ದೇನೆ. ನಾನು ಇಷ್ಟಪಡುವ ಎಲ್ಲದರಲ್ಲೂ ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಹೊರ ಜಗತ್ತಿನ ಜನ, ನಾನು ಬಹಳ ಅದೃಷ್ಟಶಾಲಿ, ಉತ್ತಮ ಜೀವನ ನಡೆಸ್ತಿದ್ದಾನೆ. ಎಲ್ಲ ಸೌಕರ್ಯ ಇದೆ ಅಂತ ಅಂದುಕೊಂಡಿದ್ದಾರೆ, ನಿಜ ಹೇಳಬೇಕೆಂದರೆ, ಅವರು ಭಾವಿಸಿದಷ್ಟು ಹಣ, ಆಸ್ತಿ, ಅಂತಸ್ತು, ಸುಖ ನೆಮ್ಮದಿ ನನ್ನಲ್ಲಿಲ್ಲ.  ಈಗ ಬರೀ 70 ವರ್ಷ ವಯಸ್ಸು, ಇನ್ನೂ ಜೀವನದಲ್ಲಿ ಏನಾದರು ಮಾಡಬೇಕು ಎನ್ನುವ ಆಸೆ ಇದೆ. ಆದರೆ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದೇನೆ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ಏನು ಮಾಡುವುದು ಗೊತ್ತಾಗ್ತಿಲ್ಲ ಎಂದು ಮನ ಬಿಚ್ಚಿ ಮಾತನಾಡುತ್ತಾರೆ.


ಆಗ ಆ ವೈದ್ಯರು, "ನೀವು ಯಾವ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದೀರಿ." ಎಂದು ಪ್ರಶ್ನಿಸಿದರು.


ಆ ಸಜ್ಜನರು ತಾವು ಓದಿದ ಶಾಲೆ, ಅವರ ಊರಿನ ಹೆಸರನ್ನು ಹೇಳಿದರು.

ಗುಡ್, ನಿಮಗೆ ನಿಮ್ಮ ಶಾಲೆ ಹೆಸರು ನೆನಪಿದೆ. ನನ್ನ ಟ್ರೀಟ್ ಮೆಂಟ್ ನ ಮೊದಲ ಭಾಗ ಏನೆಂದರೆ,  ನೀವು ಆ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾಧ್ಯಯರನ್ನ ಭೇಟಿ ಮಾಡಿ  ನಿಮ್ಮ 'ಕ್ಲಾಸ್ ರಿಜಿಸ್ಟರ್' ಇನ್ನೂ ಇದ್ದರೆ ಅದನ್ನು ಪತ್ತೆ ಮಾಡಿ, ನಿಮ್ಮ ಗೆಳೆಯರ ಹೆಸರುಗಳನ್ನು ಬರೆದುಕೊಂಡು, ಅವರ ಪ್ರಸ್ತುತ ಯೋಗಕ್ಷೇಮದ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿ. ಅವರ ಬಗ್ಗೆ ನಿಮಗೆ ಸಿಗುವ ಎಲ್ಲಾ ಮಾಹಿತಿಯನ್ನು ಬರೆದು ಒಂದು ತಿಂಗಳ ನಂತರ ನನ್ನನ್ನು ಭೇಟಿ ಮಾಡಿ..❗ ಎಂದು ಅವರನ್ನ ಬೀಳ್ಕೊಟ್ಟರು.

ಆ ಹಿರಿಯರು ತಾವು ಓದಿದ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾದ್ಯಯರನ್ನ ಭೇಟಿ ಮಾಡಿ, ಅಂದಿನ ರಿಜಿಸ್ಟರ್ ಅನ್ನು ಪಡೆದು, ತನ್ನ ಸಹಪಾಠಿಗಳ ಪ್ರತಿ ಹೆಸರನ್ನು ಬರೆದುಕೊಂಡರು. ಅದರಲ್ಲಿ ಒಟ್ಟು 120 ಹೆಸರುಗಳಿದ್ದವು. ಅವರು ಒಂದು ತಿಂಗಳು ಹಗಲಿರುಳು ಪ್ರಯತ್ನಿಸಿ ಸಾಧ್ಯವಾದಷ್ಟು ಜನರ ಸ್ಥಿತಿಗತಿಯನ್ನು ದಾಖಲಿಸುತ್ತ ಹೋದರು.

▪️ಅವರಲ್ಲಿ 20 ಮಂದಿ ಈಗಾಗಲೇ ಮರಣ ಹೊಂದಿದ್ದರು. 

▪️ 4 ಜನರು ವಿಧವೆಯರಾಗಿದ್ದರು

▪️ 4 ಜನರು ವಿದುರರಾಗಿದ್ದರು

▪️13 ಮಂದಿ ವಿಚ್ಛೇದನ ಪಡೆದಿದ್ದರು.

▪️10 ಮಂದಿ ಕುಡುಕರು ಮತ್ತು ಮಾದಕ ವ್ಯಸನಿಗಳಾಗಿದ್ದರು.

▪️ 5 ಜನರ ಬದುಕು ಶೋಚನೀಯವಾಗಿತ್ತು, 

▪️ 6 ಜನರು ನಂಬಲು ಸಾಧ್ಯವಾಗದಷ್ಟು ಶ್ರೀಮಂತರಾಗಿದ್ದರು.

▪️ಕೆಲವು ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದರು.

▪️ಕೆಲವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು,

▪️ಕೆಲವರು ಮಧುಮೇಹಿಗಳು,

▪️ಕೆಲವರು ಆಸ್ತಮಾ ರೋಗಿಗಳು,

▪️ ಕೆಲವರು ಹೃದ್ರೋಗ ರೋಗಿಗಳು.

▪️ ಕೆಲವರು ಕೈ/ಕಾಲು ಅಥವಾ ಬೆನ್ನುಹುರಿಗೆ ಗಾಯಗಳಾಗಿ ಹಾಸಿಗೆಯಲ್ಲಿದ್ದರು.

▪️ ಕೆಲವರ ಮಕ್ಕಳು ಮಾದಕವ್ಯಸನಿಗಳು, ಅಲೆಮಾರಿಗಳು, ಕೆಲವರು ಮನೆಬಿಟ್ಟು ಹೋಗಿದ್ದರು.

▪️ ಒಬ್ಬರು ಜೈಲಿನಲ್ಲಿದ್ದರು.

▪️ ಮತ್ತೊಬ್ಬ ಎರಡು ವಿಚ್ಛೇದನದ ನಂತರ ಒಬ್ಬ ವ್ಯಕ್ತಿಯು ಮೂರನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದನು.

ಇಷ್ಟು ವಿವರ ಮಾತ್ರ ಪಡೆಯಲು ಸಾಧ್ಯವಾಯಿತು. ಕೇವಲ ಎಪ್ಪತ್ತು ಎಂಬತ್ತು ಜನರ ಸ್ಥಿತಿಗತಿ ಹೀಗಿತ್ತು. ಎಲ್ಲವನ್ನ ದಾಖಲಿಸಿಕೊಂಡು ವೈದ್ಯರನ್ನ ಭೇಟಿ ಮಾಡಿದರು.

ವೈದ್ಯರು ಪಟ್ಟಿಯನ್ನು ನೋಡಿ, ವಾವ್ ಅದ್ಭುತವಾದ ಕೆಲಸ ಮಾಡಿದ್ದೀರಿ, ಎಷ್ಟೆಲ್ಲ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿದ್ದೀರಿ. ನೀವು ತುಂಬಾ ಗ್ರೇಟ್ ಎಂದು ಹೊಗಳಿದರು. "ಈಗ ನಿಮ್ಮ ಖಿನ್ನತೆ ಹೇಗಿದೆ" ಎಂದು ಪ್ರಶ್ನೆ ಹಾಕಿದರು.

ಆ ಹಿರಿಯರಿಗೆ ಸಂಪೂರ್ಣವಾಗಿ ಅರಿವಾಯಿತು.

▪️ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ,

▪️ ಅವರು ಹಸಿವಿನಿಂದ ಬಳಲುತ್ತಿರಲಿಲ್ಲ,

▪️ ಅವರ ಮನಸ್ಸು ಪರಿಪೂರ್ಣವಾಗಿತ್ತು,

▪️ ಅವರು ದುರದೃಷ್ಟವಂತನಾಗಿರಲಿಲ್ಲ.

▪️ ತನ್ನ ಹೆಂಡತಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು ಮತ್ತು ಆರೋಗ್ಯವಂತರಾಗಿದ್ದಾರೆ.

▪️ ತಾವು ತುಂಬಾ ಅದೃಷ್ಟವಂತರು ಎಂದು ಭಾವಿಸಿದರು.

▪️ ಸ್ವತಃ ಅವರು ಸಹ ಆರೋಗ್ಯವಾಗಿದ್ದರು, ಅವರು ದಿನಕ್ಕೆ ಮೂರು ಊಟವನ್ನು ಸಂಪೂರ್ಣವಾಗಿ ಜೇರ್ಣಿಸಿಕೊಳ್ಳವರಾಗಿದ್ದರು. 

▪️ ತಮ್ಮ ಸ್ನೇಹಿತರ ಮುಂದೆ ಇವರ ಸಮಸ್ಯೆಗಳು ಪೇಲವವಾಗಿದ್ದವು. 


ಜಗತ್ತಿನಲ್ಲಿ ಕೆಲ ಜನರು ನಿಜಕ್ಕೂ ಕಷ್ಟ ಅನುಭವಿಸುತಿದ್ದಾರೆ. ಕೆಲವರು ಬಹಳಷ್ಟು ದುಃಖಿಗಳು. ಅವರಿಗೆ ಹೋಲಿಸಿದರೆ ತಾನು ತುಂಬಾ ಸಂತೋಷದಿಂದ್ದೇನೆ ಮತ್ತು ತಾನು ನಿಜಕ್ಕೂ ಅದೃಷ್ಟಶಾಲಿ ಎಂದು ಆ ವ್ಯಕ್ತಿ ಅರಿತುಕೊಳ್ತಾನೆ.

ಅರ್ಥ ಆಯಿತು ಡಾಕ್ಟ್ರೆ, ನನಗೆ ಯಾವುದೇ ಸಮಸ್ಯೆ ಇಲ್ಲ. ಏನೇನೋ ಯೋಚಿಸಿ, ಮನಸ್ಸನ್ನ ಕೆಡಿಸಿಕೊಳ್ತಿದ್ದೆ. ಜೀವನ ಬಂದಹಾಗೆ ಸ್ವೀಕರಿಸುತ್ತ ಹೋಗಬೇಕು ಎನ್ನುವುದನ್ನ ಮರೆತಿದ್ದೆ. ಏನು ಆಗಬೇಕು ಅಂತ ಭಗವಂತ ನಿರ್ಧರಿಸಿರುತ್ತಾನೋ, ಅದು ಹಾಗೆಯೇ ನಡೆಯುತ್ತ ಹೋಗುತ್ತೆ. ಚಿಂತೆ ಮಾಡಿ ಪ್ರಯೋಜನವಿಲ್ಲ, ಬರ್ತೀನಿ ಡಾಕ್ಟ್ರೆ. ಧನ್ಯವಾದಗಳು ಎಂದು ಅಲ್ಲಿಂದ ಹೊರಟರು.

*******

ಜೀವನ ಪಾಠ ಏನೆಂದರೆ, ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಬಾರದು. ಇನ್ನೊಬ್ಬರ ತಟ್ಟೆಗಳಲ್ಲಿ ಇಣುಕಿ ನೋಡುವ ಅಭ್ಯಾಸವನ್ನು ಬಿಡಿ,  ನಮ್ಮ ತಟ್ಟೆಯಲ್ಲಿನ ಆಹಾರವನ್ನು ಪ್ರೀತಿಯಿಂದ ತೆಗೆದುಕೊಂಡು ಸೇವಿಸಬೇಕು. ಪ್ರತಿಯೊಬ್ಬರೂ ಅವರವರ ಹಣೆಬರಹದ ಪ್ರಕಾರ ಜೀವನ ನಡೆಸುತಿದ್ದಾರೆ. ನಾವು ಸಹ ಅಷ್ಟೆ, ಅದೇ ಸಮಾನಗತಿಯಲ್ಲಿ ಜೀವಿಸುತಿದ್ದೇವೆ, ನಾವು ಬೇರೆಯವರಿಗಿಂತ ತಡವಾಗಿ ಅಥವಾ ಮುಂಚೆ ಎನ್ನುವ ಭಾವ ಇಲ್ಲವೇ ಇಲ್ಲ.

ಪಾಲಿಗೆ ಬಂದದ್ದು ಪಂಚಾಮೃತ, ಒಳ್ಳೆಯದು ಅಥವಾ ಕೆಟ್ಟದ್ದು, ದೊಡ್ಡದು ಅಥವಾ ಚಿಕ್ಕದು, ಭೇದ ಭಾವ ಸಲ್ಲದು. ಇವತ್ತು ದೇವರು ಕೊಟ್ಟಿರುವ ಉತ್ತಮ ಜೀವನಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಂದೆ ಸಾಗೋಣ. ಈ ಜಗತ್ತಿಗೆ ನಾವು ಒಬ್ಬ ಪ್ರಯಾಣಿಕ ನಿದ್ದಂತೆ, ಪ್ರಯಾಣದಲ್ಲಿ ಎಲ್ಲವನ್ನ ಅನುಭವಿಸುತ್ತ ಸಾಗಬೇಕು, ನಮ್ಮ ನಿಲ್ದಾಣ ಬಂದಾಗ ಇಳಿದು ಹೋಗುತ್ತಿರಬೇಕು. 

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದಂತೆ, 

''ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂ ಮಾ ತೇ ಸಂಗೋಸ್ತ್ವಕರ್ಮಣಿ||''


ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ  ಕೆಲಸದಲ್ಲಿ ಮಾತ್ರ ಹಕ್ಕನ್ನು ಹೊಂದಿರುತ್ತಾನೆ ವಿನಃ, ಅದರ ಫಲಿತಾಂಶಗಳಲ್ಲಿ ಅಲ್ಲ. ಆದ್ದರಿಂದ, ನಿಮ್ಮ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ನೀವು ಮಾಡುವ ಕೆಲಸದಲ್ಲಿ ಫಲ ಸಿಗುತ್ತದೆಯೇ..? ಅಥವಾ ಇಲ್ಲವೇ..? ಎಂಬುದರ ಬಗ್ಗೆ ಯೋಚಿಸದಿರಿ. ಇಷ್ಟು ಅರ್ಥ ಮಾಡಿಕೊಂಡರೆ ಜೀವನ ತುಂಬಾ ಸರಳ. 

ವಿ.ಸೂ:  ಈ ಲೇಖನದ ಮೂಲ ಇಂಗ್ಲೀಷಿನಲ್ಲಿ ಯಾರೋ ಬರೆದಿದ್ದು, ತುಂಬಾ ಚೆಂದದ ಬರಹ. ಇದನ್ನ ಕನ್ನಡಕ್ಕೆ ಭಾವಾನುವಾದ ಮಾಡಿ ಜನರಿಗೆ ಜೀವನದ ವಿಷಯವನ್ನ ಸರಳವಾಗಿ ಹೇಳುವ ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೀನಿ. ಧನ್ಯವಾದಗಳು.

PS.Photo is just illustrative, not relevant to above Article




10 ಕಾಮೆಂಟ್‌ಗಳು:

  1. ನಿವೃತ್ತಿ ಆದರೂ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿ ಕೊಂಡರೆ ಯೋಚನೆಗಳು ಭಾದಿಸುವುದಿಲ್ಲ.
    ಏನಾದರೂ ಆಗಲಿ ನಮ್ಮ ಮನಸ್ಸು ನಮ್ಮ ಕೈಯಲ್ಲಿ.
    ಬರಹ ಚೆನ್ನಾಗಿದೆ. ರಂಗನಾಥ ಸರ್ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. 🙏🙏😊👌✌️ ಅತ್ಯಂತ ಅದ್ಭುತ ಅರ್ಥಪೂರ್ಣ ಶ್ಲಾಘನೀಯ ಲೇಖನ, ನಮ್ಮಂತಹ ನಿವೃತ್ತ ವ್ಯಕ್ತಿಗಳಿಗೆ ಮನಮುಟ್ಟುವ ಸಂದೇಶ.
    ಧನ್ಯವಾದಗಳು ಸರ್.🤝🥬

    ಪ್ರತ್ಯುತ್ತರಅಳಿಸಿ
  3. ಸರ್ ನಮ್ಮೆಲ್ಲರ ಕಣ್ಣು ತೆರೆಸಿದಿರಿ ಧನ್ಯವಾದಗಳು🙏

    ಪ್ರತ್ಯುತ್ತರಅಳಿಸಿ
  4. ಈ ಲೇಖನ ಈಗಾಗಲೇ ಓದಿದ್ದೆ, ಮತ್ತೊಮ್ಮೆ ಓದಿದೆ, ಅತ್ಯಾನಂದವಾಯ್ತು. ಕಾರಣ . , ನಾವು ಕಡಿಮ ಆಸೆ ಹೊಂದಿದ್ದ ರೆ ಇಂತಹ ಮತ್ತು ಎಂತಹ ಸಮಯ ಬಂದರೂ ವಿಚಲಿತರಾಗದೇ ಮುಂದುವರಿಯಬಹುದು.
    ಅಷ್ಟೇ ಅಲ್ಲದೆ, ಕೈಹಿಡಿದಾಕೆಯ ಕೈ ಜಾರಿದ ಮೇಲಂತೂ ದೊಡ್ಡ ಸೋಲಾಯ್ತು ಎಂದು ಕೊಂಡೆ.. ಆದರೆ, ಆಕೆಯ ಸಹಜ ಮರಣವು ಜೀವನದ ಸಾರ್ತಕಥೆಯ ಅನುಭವ ಒದಗಿಸಿತು! ಆ ಮರಣವು ಅಪರೂಪದ್ದು ಎಂಬ ಅನುಭವ, ನಮ್ಮ ಜೀವನ ನಡೆಯ ಸಾರ್ಥಕವಾಯಿತೆಂದೆನಿಸಿತು!!! ಈ ಬದುಕು ಶಾಶ್ವತವಲ್ಲ . ಇದರ ಅವಧಿ , ಪೂರ್ವ ಜನ್ಮದ ಮತ್ತು ಪೂರ್ವಜರ ಕರ್ಮ ಫಲ. ಇದೆಲ್ಲ ಜ್ಞಾಪಿಸಿಕೊಳ್ಳುವಾಗ, ನಾವೆಷ್ಟು ಪುಣ್ಯವಂತರು ಎಂದು ಆನಂದವಾಗುವುದು.
    ಈ ಎಲ್ಲದರ ಅನುಭವ , ಬುದ್ಧನ ಭೋದನೆಯಾದ "ಆಸೆಯೇ ದುಖಕ್ಕೆ ಮೂಲ " ಎಂಬ ತತ್ವದ ತಿಳುವಳಿಕೆಯಾಗುತ್ತಿದೆ. ಮತ್ತು ಸಮಾಜಸೇವೆ, ದೇವತಾ ಸವೆಯಲ್ಲಿ ಇನ್ನೂ ಜಾಸ್ತಿಯಾಗಿ ಓಡಾಡುವ ಉತ್ಸುಕತೆ ಮೂಡುತ್ತಿದೆ. ಆ ನಿಟ್ಟಿನಲ್ಲಿ ತನು ಮನ ಧನ ದೊಂದಿಗೆ ತೊಡಗಿಸಿಕೊಂಡಿದ್ದೇನೆ.🙏🌸🙏🌺🙏

    ಪ್ರತ್ಯುತ್ತರಅಳಿಸಿ

Click below headings