ಭಾನುವಾರ, ನವೆಂಬರ್ 28, 2010

ಮರಳುಗಾಡಿನಲ್ಲಿ ಮಲೆನಾಡು!

ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ  ಪಶ್ಚಿಮ ಘಟ್ಟ, ಹಲವಾರು ನದಿಗಳು, ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು, ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ? ಓಮನ್ ದೇಶದ ದಕ್ಷಿಣ ಭಾಗದ  ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ, ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಚಿಕ್ಕ ಜಲಪಾತಗಳು, ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ. ಕಛೆರಿಯ ಕೆಲಸದ ಸಲುವಾಗಿ ಕುಟುಂಬ ಸಮೇತ ಇಲ್ಲಿ ಠಿಕಾಣಿ ಹೂಡಿದ್ದೀನಿ, ಸಾಧ್ಯವಾದಾಗಲೆಲ್ಲ  ಇಂತಹ ಸ್ಥಳಗಳಿಗೆ ಹೋಗಿ ಬರುತಿದ್ದೇನೆ. ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ, ಸೌದಿ ಅರೇಬಿಯ, ಯುಏಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹ ದಲ್ಲಿನ ತಂಪಾದ ಹವೆ ಮತ್ತು ವಾತಾವರಣ ವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ. ಸರಕಾರ ಸಹ ಪ್ರವಾಸಿ ಹಬ್ಬ ವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ. ಕೆಳಗಡೆಯಿರುವ ಫೋಟೊಗಳು ಈ ಸ್ಥಳದ ಬಗ್ಗೆ ಕುತುಹಲ ಮೂಡಿಸುವುದು ಸುಳ್ಳಲ್ಲ. ಒಮಾನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗು ಈ ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ. ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ.
ಮಸ್ಕತ್ ನಿಂದ ೧೦೦೦ ಕಿಲೋ ಮೀಟರ್ ದೂರದಲ್ಲಿದೆ.

ರಂಗನಾಥ.ಪಿ.ಎಸ್


ನಾನಿರುವ ಮನೆಯ ಮುಂದಿನ ತೋಟ


ಪಿಕ್ನಿಕ್ ಗೆ ಹೋದಾಗ ರಸ್ತೆಯ ಮಧ್ಯದಲ್ಲಿ ನನ್ನ ಮಗಳು ಮತ್ತು ಮಗ

ಕಾಡಿನಲ್ಲಿ ಒಂಟೆಗಳು

ಬೋಟಿಂಗ್ ತಾಣ


ಮಗ್ಸೇಲ್ ಬೀಚ್ ಹತ್ತಿರ ಒಂದು ಬೆಟ್ಟ









ಕೆಳಗಿನ ಚಿತ್ರಗಳ ಕೃಪೆ: ಅಂತರ್ಜಾಲ 


ಮಳೆಗಾಲದಲ್ಲಿ ದುಮ್ಮಿಕ್ಕಿ ಹರೆಯುವ ಜಲಪಾತ

ವಾದಿ ದರ್ಬಾತ್ ನಲ್ಲಿರುವ ಜಲಪಾತ, ಮಳೆಗಾಲ ದಲ್ಲಿ ಮಾತ್ರ ಹರಿಯುತ್ತದೆ
ಚಿಕ್ಕ ಚಿಕ್ಕ ತೊರೆಗಳು




ಅಯ್ನ್ ಘಾರ್ಜಿಜ್ ಗೆ ಹೋಗುವ ನುಣುಪಾದ ರಸ್ತೆ

ಗುರುವಾರ, ನವೆಂಬರ್ 25, 2010

ಇದು ಯಾರು ಬರೆದ ಕಥೆಯೊ!

"ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?".
"ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್".
"ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? "
"ಅದೇ ನಮ್ಮ್ ಸಿಯೆಮ್ ಬರ್ತಾರೆ ಅಂತ ಶೋಭಾಯಾತ್ರೆ ಗೆ ತಯಾರಿ ಮಾಡಿದ್ದೆ. ಆದರೆ ಆಯಪ್ಪ ಹೊಸ ಏರ್ಪೋಟ್ಗೆ ಬರದೆ, ಹಳೆ ಏರ್ಪೋಟಿಗೆ ಬಂದ್ರು. ಅಲ್ಲಿ ಬೇರೆಯಾತ್ರೆ ನೆ ಮಾಡಿದ್ರು."
"ಕೊನೆಗೂ ಸೀಟು ಉಳಿಸಿ ಕೊಂಡು ಬಂದ್ರಲ್ಲ, ಬಿಡಪ್ಪ ಅವರನ್ನು ಅವರಪಾಡಿಗೆ ಸ್ವಲ್ಪ ಕೆಲಸ ಮಾಡಿಕೊಂಡು ಇರಲಿ. ಇನ್ಮುಂದೆ ಶೋಭಾಯಾತ್ರೆ, ಸ್ವಜನ ಪಕ್ಷಪಾತ ಏನು ಮಾಡಲ್ಲಂತೆ"
"ಅಲ್ಲ ಸಾರ್ ನಿನ್ನೆ ಪೇಪರ್ ನಲ್ಲಿ ಯಡ್ಯೂರಪ್ಪ ನವರ ಅತ್ತಿಗೆ ಒಂದು ಮಾತು ಹೇಳಿದ್ದಾರೆ " ತಿಂದೇ ಇರೋರು ಯಾರವರೆ, ಇವತ್ತು ಯಾರ್ಯಾರು ಆರೋಪ ಮಾಡ್ತಾವ್ರೊ ಅವರೆಲ್ಲ ನಿಯತ್ತನವರ? ಅವರಿಗೊಂದು ನ್ಯಾಯನ, ನಮಗೊಂದು ನ್ಯಾಯಾನ" ಆಮೇಲೆ ಇನ್ನೊಬ್ರು ಹೇಳಿದ್ದಾರೆ ಬೇರೆಯವರೆಲ್ಲ ಬೇನಾಮಿ ಹೆಸರಲ್ಲಿ ಇವರೆಲ್ಲ ಆಸ್ತಿ ಮಾಡ್ತಾರೆ, ಇವರು ಡೈರೆಕ್ಟಾಗಿ ಮಾಡಿದ್ದಾರೆ. ಅಷ್ಟೆ ವ್ಯತ್ಯಾಸ, ಆರೋಪ ಮಾಡುವವರಿಗೆ ನೈತಿಕತೆ ಇದೆಯಾ. ಅಕ್ರಮ ಸಂಭಂದ, ಅಕ್ರಮ ಸಂತಾನ ಇಟ್ಕೊಂಡು ಅದೂ ಅಲ್ಲದೆ ಬೇಕಾದ ಸಂಖ್ಯೆಯ ಶಾಸಕರಿಲ್ಲದೆ ಇದ್ರು ವಾಮ ಮಾರ್ಗ ದಲ್ಲಿ ಅಧಿಕಾರ ಹಿಡಿದು ರಾಜ್ಯಭಾರ ಮಾಡಿದ್ರು, ಮತ್ತೆ ಇವತ್ತು ಸರಕಾರ ಕೆಡವೋಕೆ ಎಷ್ಟೆಲ್ಲ ಸರ್ಕಸ್ ಮಾಡ್ತಾರೆ ಇವ್ರಗೆ ಯಾವ ನೈತಿಕತೆ ಯಿದೆ ಸಾರ್"
"ಅಲ್ರೀ ಸಿದ್ದಣ್ಣ, ಕೊನೆಗೂ ಯಡಿಯೂರಪ್ಪ ನವರನ್ನು ಸಮರ್ಥನೆ ಮಾಡ್ತೀರಲ್ರಿ, ಕುರ್ಚಿ ಬೇಕು ಅಂತ ಜಿಗಣೆ ತರಹ ಕಚ್ಚಿಕೊಂಡು ಕೂತಿದಾರಲ್ವ. ನಾನು ತಪ್ಪು ಮಾಡಿದ್ದೀನಿ ಅಂತ ಅವರೆ ಒಪ್ಪಿ ಕೊಂಡಿರಬೇಕಾದ್ರೆ ಪ್ರಾಯಶಿತಕ್ಕೊಸ್ಕರ ರಾಜಿನಾಮೆ ಕೊಡಬಹುದಲ್ವ. ಇವರಿಗೆ ಯಾವ ನೈತಿಕತೆ ಇದೆ. ನಿಯತ್ತಾದ ಮನುಷ್ಯ ಸುರೇಶ್ ಕುಮಾರ್ ಇದ್ದರು ಅವರು ಸಿಎಮ್ ಆಗಿದ್ದಿದ್ದರೆ ಏನಾಗ್ತಿತ್ತು. ಎಲ್ಲರು ಬಾಯ್ಮುಚ್ಚಿಕೊಂಡು ಕೂತಿರ್ತಿದ್ದ್ರು, ಈಗೇನು ವಿರೋಧ ಪಕ್ಷದವರು ಸುಮ್ಮನೆ ಇರ್ತಾರ, ಅವರು ಕುರ್ಚಿಯಿಂದ ಇಳಿಯೋತನಕ ಏನಾದ್ರು ತೊಂದರೆ ಕೊಡೋದು ತಪ್ಪಲ್ವಲ್ಲ. ನಮ್ಮ ಕರ್ಮ ಇವರ ಎಲ್ಲ ರಾಜಕೀಯ ದೊಂಬರಾಟ ಗಳನ್ನು ನಾವು ನೋಡ್ತಾಯಿರಬೇಕು. ಹೋಗ್ರಿ ಸಾಕು ಈ ಹೊಲಸು ರಾಜಕೀಯ."
"ಇಷ್ಟಕ್ಕೆ ಬೇಜಾರು ಮಾಡಿಕೊಂಡರೆ ಹೆಂಗೆ ಸಾರ್, ಬೇರೆ ಏನು ದಾರಿ ಯಿದೆ. ಸಾಯೊವರೆಗು ಇದನ್ನೆಲ್ಲ ನೋಡಿ ಅನುಭವಿಸಬೇಕು ಅದು ನಮ್ಮ ಕರ್ಮ ಅಲ್ವಾ ಮತ್ತೆ". "ನನಗೊಂದು ಐಡಿಯ ಬಂದಿದೇರಿ, ಮತಚಲಾವಣೆ ಸಂಧರ್ಬದಲ್ಲಿ ಒಬ್ಬರು ಮಿಲ್ಟ್ರಿ ಕ್ಯಾಂಡಿಡೇಟ್ ಗೆ ಮತ ಹಾಕೊದಿಕ್ಕೆ ಒಂದು ಅವಕಾಶ ಕೊಡಬೇಕು, ನಮಗೆ ಈ ರಾಜಕೀಯದವರು ಬೇಡ ಮಿಲ್ಟ್ರಿ ಯವರು ಬೇಕು ಅಂತ ಯಾರು ಬಯಸುತ್ತಾರೊ ಅವರು ಅದನ್ನು ಆಯ್ಕೆ ಮಾಡಬಹುದು, ಏನಂತೀರಾ"
"ಸಾರ್ ಒಳ್ಳೆ ಐಡಿಯ. ನನಗೊಂದು ಇನ್ನು ಒಂದು ಒಳ್ಳೆ ಐಡಿಯ ಬರ್ತಾ ಯಿದೆ"
"ಏನಪ್ಪಾ ಅದು"
"ಇನ್ಫೊಸಿಸ್, ವಿಪ್ರೊ, ಆಮೇಲೆ ಬೇರೆ ಬಹುರಾಷ್ಟ್ರಿಯ ಕಂಪನಿಯವರು ನಮ್ಮ ಸರ್ಕಾರಿ ಕಂಪನಿ ಗಳಿಗಿಂತ ಅವರ ಚೆನ್ನಾಗಿ ಕಂಪನಿಗಳನ್ನು ನಡೆಸಿ ಒಳ್ಳೆ ಹೆಸರು ಮತ್ತು ಲಾಭ ಮಾಡ್ತಾ ಯಿದ್ದಾರೆ, ಇಂತಹ ಕಂಪನಿಗಳನ್ನು ಅದರಲ್ಲಿ ಯಾಕೆ ಸೇರಿಸಬಾರದು, ಒಳ್ಳೇ ಆಡಳಿತ ಕೊಡಬಹುದಲ್ವ"
"ನಿಮ್ಮ ಐಡಿಯ ಆಗಲೆ ಅನ್ ಅಫಿಸಿಯಲ್ ಆಗಿ ವರ್ಕ್ ಔಟ್ ಆಗ್ತಾಯಿದೆ.
"ನಿಜವಾಗ್ಲುನ? ಎಲ್ಲಿ ಸಾರ್"
"ಅದೇ ಸೆಂಟ್ರಲ್ ಗೌರ್ನ್ಮೆಂಟ್ ನಲ್ಲಿ, ಆಗಲೆ ಸೆಂಟ್ರಲ್ ನಲ್ಲಿ ಕಳೆದ ೬ ವರ್ಷಗಳಿಂದ ನಡಿತಾ ಯಿದೆ"
"ಅದು ಹೆಂಗೆ, ಅಲ್ಲಿರೋದು ಕಾಂಗ್ರೆಸ್ ಗೌರ್ನ್ಮೆಂಟ್, ಮನಮೋಹನಸಿಂಗ್ ಪಿಎಮ್ "
"ಅದೊಂದು ದೊಡ್ಡ ಕಥೆ ಯಿದೆ, ಅಲ್ಲಲ್ಲಿ ಗುಸು ಗುಸ್ ಕೇಳಿದ್ದು. ನಾನು ಹೇಳಲ್ಲರಿ ಅದರ ಒಳ ಅರ್ಥ ನೀವೆ ಅರ್ಥ ಮಾಡ್ಕೋಬೇಕು"
"ಸಾರ್ ಹುಳ ಬಿಟ್ರಲ್ಲ ನೀವು, ಸ್ವಲ್ಪ ಬಿಡಿಸಿ ಹೇಳಿ"
" ಜನತಾ ಪಕ್ಷದ ಸುಬ್ರಮಣ್ಯ ಸ್ವಾಮಿ ಯವರನ್ನು ಕೇಳಿ, ಮತ್ತೆ ಅರ್ ಎಸ್ ಎಸ್ ನ ಸುದರ್ಶನ್ ಅವರನ್ನು ಕೇಳಿದರೆ ಎಲ್ಲ ಹೇಳ್ತಾರೆ"
"ಬಿಡಿ ಸಾ ಅದೆಲ್ಲ ದೊಡ್ಡವರ ವಿಚಾರ, ನಮಗ್ಯಾಕೆ. ಇವತ್ತು ಯಾವ ಹಗರಣ ಬಯಲಿಗೆ ಬರುತ್ತೊ ಆ ದೇವರಿಗೆ ಗೊತ್ತು, ನಮ್ಮ ಕುಮಾರಸ್ವಾಮಿ ಇನ್ನು ಏನು ಹುಡುಕ್ತಾ ಯಿದ್ದಾರೊ, ಏನು ಕಥೆಯೊ"
"ಒಂದು ವಿಷಯ ಗೊತ್ತ ನಿಮಗೆ, ಇಷ್ಟು ದಿನ ಇಲ್ಲದೆ ಇದ್ದ ಹಗರಣ ಗಳ ಕ್ಯಾತೆ, ಈಗ ಒಮ್ಮಿಂದೊಮ್ಮಲೆ ಹ್ಯಾಗೆ ಹೊರಗೆ ಬರ್ತಾಯಿದೆ ಗೊತ್ತಾ"
"ಗೊತ್ತು ಸಾರ್, ಶಾಸಕರ ಬಂಡಾಯ ಆಯ್ತು ಸರಕಾರ ಬೀಳಿಸಲಿಕ್ಕೆ ಅದು ವರ್ಕ್ ಔಟ್ ಆಗಲಿಲ್ಲ. ಅದಕ್ಕೆ ಈ ಹೊಸ ಬಾಂಬು ಗಳು, ಇನ್ನೊಂದು ವಿಶಯ ಗೊತ್ತಾ. ನಿಮಗೆ ಶಮಿಕಾ. ಕೆ. ಸ್ವಾಮಿ ಗೊತ್ತಾ.
"ಇಲ್ವಲ್ಲ"
"ನಟಿ ರಾಧಿಕಾ ಅವರ ಮಗಳು, ಹೆಸರಲ್ಲಿ ಕೆ, ಸ್ವಾಮಿ ಅಂದರೆ ಏನು ಗೊತ್ತಾ? ಅದು ಬಿಡಿ. ಇವತ್ತು ಮಂಗಳೂರಿನ ಬಿ.ಜೇ.ಪಿ ಜಿಲ್ಲಾಧ್ಯಕ್ಷರು ಹೊಸ ಬಾಂಬ್ ಹಾಕಿದ್ದಾರೆ, ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಬೇನಾಮಿ ಯಾಗಿ ೩೦ ಕೋಟಿ ಆಸ್ತಿ ಇದೆ ಅಂತ. ಇನ್ನು ಎಲ್ಲೆಲ್ಲಿ ಬೇನಾಮಿ ಯಾಗಿ ಏನು ಇಟ್ಟಿದ್ದಾರೊ ದೇವರಿಗೆ ಗೊತ್ತು. ನೀವು ಹೇಳಿದಂಗೆ ರಾಜಕೀಯ ಹೊಲಸು ಸಾರ್, ಕೊನೆಗೆ ಒಂದು ಮಾತು, ನಮ್ಮ ಮಾಧ್ಯಮ ಗಳಿಗೆ ಕಳೆದ ಹದಿನೈದು ದಿನ ಗಳಿಂದ ಬೇರೆ ಸುದ್ದಿನೆ ಇರಲಿಲ್ಲ ಸಾರ್, ಬರೀ ಹಗರಣದ ಸುದ್ದೀನೆ ಜತೆಗೆ ಯಡ್ಡಿ ಉಳಿತಾರ ಹೊಗ್ತಾರಾ? ರಾಜಕೀಯ ದವರೆಗೆ ಇಲ್ಲದ ಟೆನ್ಶನ್ ನಮ್ಮ ಮಾದ್ಯಮದವರಿಗೆ ಇತ್ತು, ಅವರು ಬದಲಾಗಲ್ಲ ಇವರು ಬದಲಾಗಲ್ಲ. ಎಲ್ಲ ನಮ್ಮ ಕರ್ಮ. ಇದು ಯಾರು ಬರೆದ ಕಥೆಯೊ ನಮಗಾಗಿ ಬಂದ ವ್ಯಥೆಯೊ!.

ಶನಿವಾರ, ನವೆಂಬರ್ 13, 2010

ಕಥೆ - "ಗಾಂಧಿಜಯಂತಿ,ರಂಜಾನ್ ಮತ್ತು ರಾಜಕಾರಣ"

ಅದೊಂದು ಪ್ರಮುಖ ರಾಜಕಾರಣಿಯ ಬಂಗಲೆ, ಅವರ ಹೆಸರು ಕುಮಾರ ಚೈತನ್ಯ, ವಾರಕೊಮ್ಮೆ ಊರಿಗೆ ಬಂದರೆ ಒಂದೆರಡು ದಿನ ಊರಿನಲ್ಲಿ ಉಳಿದುಕೊಳ್ಳುತಿದ್ದರು. ಹುಟ್ಟೂರು ಆದ್ದರಿಂದ ಅಲ್ಲಿ ಠಿಕಾಣಿ ಹೋಡುವುದು ಸಾಮಾನ್ಯ ವಾಗಿತ್ತು. ಅವರ ವಿಶಿಷ್ಟ ಗುಣವೇನೆಂದರೆ, ಸಮಸ್ಯೆಗಳಿಗೆ ಪರಿಹಾರಗಳಿದ್ದರೆ ಮಾತ್ರ ಸ್ವಲ್ಪ ಮುತುವರ್ಜಿ ವಹಿಸುತಿದ್ದರು, ಇಲ್ಲದೆ ಇದ್ದರೆ ಉದಾಸೀನ ಮಾಡುತಿದ್ದರು. ಅವರ ಮನೆಹತ್ತಿರ ಯಾವಾಗಲು ಸಾಕಷ್ಟು ಜನಗಳು ನೆರೆದಿರುತಿದ್ದರು. ಗುಂಪು ಗುಂಪುಗಳಲ್ಲಿ ಜನಗಳು  ಬಂಗಲೆ ಯಲ್ಲಿ ಹೋಗಿ ಬರುತಿದ್ದರು. ಒಂದು ಗುಂಪು ಸಮಸ್ಯೆ ಗಳನ್ನು ಒಪ್ಪಿಸಿಬರುವಷ್ಟರಲ್ಲಿ ಇನ್ನೊಂದು ಗುಂಪು ಸಿದ್ದವಾಗಿರುತಿತ್ತು. ಹಾಗಿರುವಾಗ ಆ ದಿನ ಒಂದು ದೊಡ್ಡ ಜನರ ಗುಂಪು ಅವರನ್ನು ಭೇಟಿಮಾಡಲು ಬಂದಿತು.  ಆ ಗುಂಪಿನಲ್ಲಿದ್ದ ಮುಖಂಡನೊಬ್ಬ "ಸಾರ್ ಈ ಸಾರಿ ಗಾಂಧಿ ಜಯಂತಿ ಅಕ್ಟೋಬರ್ ೨ ರಂದು ಮುಸ್ಲಿಮರ ಈದ್ ಹಬ್ಬ ಬಂದಿದೆ. ರಾಷ್ಟ್ರಪಿತರಿಗೆ ಗೌರವ ಕೊಡೊದಿಕ್ಕೆ ಪ್ರತಿ ವರ್ಷನು ಮಾಂಸ ಮಧ್ಯ ಹೇಗೆ ಬಂದ್ ಮಾಡ್ತ ಇದ್ರೊ ಹಾಗೆ ಈ ಸಾರಿ ಸಹ ಬಂದ್ ಮಾಡಬೇಕು. ಆದರೆ ಕೆಲ ಮುಸ್ಲಿಮ್ ಜನರು ಈಗಾಗ್ಲೆ ಕಿರಿಕ್ ಶುರು ಮಾಡಿಕೊಂಡಿದ್ದಾರೆ, ದಯವಿಟ್ಟು ಅವರಿಗೆ ತಿಳುವಳಿಕೆ ಹೇಳಿ ಆ ದಿನದಂದು  ಪ್ರಾಣಿಗಳ ವಧೆ ಮಾಡೊದು ಬೇಡ, ಅದರ ಮುಂದಿನ ದಿನ ಬೇಕಾದ್ರೆ ಮಾಡಿಕೊಳ್ಳೊದಿಕ್ಕೆ ಹೇಳಿ ಸಾರ್, ಅದೂ ಅಲ್ಲದೆ ಅವರಿಗೆ ಪ್ರತಿದಿನಾಲು ಮಾಂಸಾಹಾರ ತಿಂದು ಅಭ್ಯಾಸ ಆಗಿರೊದ್ರಿಂದ, ಒಂದು ದಿನ ತಿನ್ನದೆ ಇದ್ರೆ ಏನು ಆಗಲ್ಲ. ದಯವಿಟ್ಟು ಆದಿನ ಮಾತ್ರ ಮಾಡೊದು ಬೇಡ ಅಂತ ಹೇಳಿ ಸಾರ್. ನಮ್ಮ ಊರಿನಲ್ಲಿ ಶಾಂತಿ ಸೌಹರ್ದತೆ ಕಾಪಡಿಕೊಳ್ಳಲು ಹೇಳಿ. ಒಂದು ವೇಳೆ ಪ್ರಾಣಿವಧೆ ನಮ್ಮ ಕಣ್ಣಿಗೆ ಬಿದ್ರೆ ನಾವಂತು ಕೈಕಟ್ಟಿ ಕುಳಿತುಕೊಳ್ಳಲ್ಲ. ಮುಂದೆ ಆಗೊ ಪರಿಣಾಮ ಗಳಿಗೆ ಅವರೇ ಜವಬ್ದಾರಿಯಾಗುತ್ತಾರೆ" ಎಂದು ಹೇಳಿದನು. ಅದಕ್ಕೆ ಪ್ರತಿಯಾಗಿ ಆ ರಾಜಕಾರಣಿ "ಆಯಿತು ಅದರ ಬಗ್ಗೆ ನೀವೇನು ತಲೆ ಕೆಡಿಸಿಕೊಳ್ಳಬೇಡಿ, ಅವರನ್ನು ಕರೆಸಿ ಅವರ ಹತ್ತಿರ ನಾನು ಇದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ, ನೀವು ತಲೆ ಕೆಡಿಸಿಕೊಳ್ಳಬೇಡಿ ನೀವು ಹೊರಡಿ" ಎಂದು ಸಾಗ ಹಾಕಿದರು. ಈ ವಿಷಯ ಮುಸ್ಲಿಮ್ ಜನರ ಕಿವಿಗೆ ಬಿದ್ದಿತು, ಅವರು ತಮ್ಮ ತಮ್ಮಲ್ಲೆ ಮಾತನಾಡಿ ಕೊಂಡು ತಮ್ಮ ಜನರ ಗುಂಪೊಂದನ್ನು ಸೇರಿಸಿಕೊಂಡು ಒಡನೆಯೆ ಧಾವಿಸಿ ಬಂದರು. ಇವರ ಗುಂಪನ್ನು ನೋಡಿ ರಾಜಕಾರಣಿಗೆ ತಲೆ ಬಿಸಿಯಾಯಿತು. ಏನು ಉತ್ತರ ಕೊಡಬೇಕು ಅಂತ ಸಿದ್ದವಾಗಿರಲಿಲ್ಲ. ಅವರಲ್ಲಿನ ಮುಸ್ಲಿಮ್ ಮುಖಂಡರೊಬ್ಬರು, ತಮ್ಮ ಜನಾಂಗದ ಪರವಾಗಿ ಮಾತನಾಡಲು ಶುರು ಮಾಡಿಕೊಂಡರು. "ಸಾಹೇಬರಿಗೆ ನಮ್ಮೆಲ್ಲರ ಸಲಾಂ, ವಿಶ್ಯ ನಿಮ್ಗೆ ಗೊತ್ತಿದೆ. ಒಂದು ತಿಂಗಳು ಉಪವಾಸ ಮಾಡಿ, ಈ ಈದ್ ಹಬ್ಬದಿಂದ ಉಪವಾಸ ಕೊನೆಗೊಳಿಸಿ ಹಬ್ಬ ಆಚರಣೆ ಮಾಡುತ್ತೇವೆ, ನಾವು ತಲತಲಾಂತರ ದಿಂದ ಈ ಹಬ್ಬ ವನ್ನು ಮಾಡಿಕೊಂಡು ಬಂದಿದ್ದೀವಿ. ನಮ್ಮ ದೇಶದಲ್ಲೊಂದೆ ಅಲ್ಲ, ಬೇರೆ ಎಲ್ಲ ಮುಸ್ಲಿಮ್ ದೇಶಗಳಲ್ಲಿ ಸಹ ಆ ದಿನದಂದೆ ಹಬ್ಬವನ್ನು ಆಚರಿಸುತಿದ್ದಾರೆ. ನಮ್ಮ ಧರ್ಮದ ಆಚರಣೆ ನಾವು ಮಾಡುತಿದ್ದೇವೆ, ಅದಕ್ಕೆ ಯಾವುದೆ ತೊಂದರೆ ಯಾಗದೆ ಅವಕಾಶ ಮಾಡಿಕೊಡಬೇಕು" ಎಂದು ಹೇಳಿದರು. ಆ ರಾಜಕಾರಣಿ ಅದಕ್ಕೆ "ನಿಮಗೆ ನಾವೆಂದಾದರು ತೊಂದರೆ ಕೊಟ್ಟಿದ್ದೆವೆಯೇ, ಆ ಅಲ್ಲಾ ಹೇಗೆ ನಡೆಸಿಕೊಡುತ್ತಾನೊ ಹಾಗೆ ನಡೆದು ಕೊಂಡು ಹೋಗೋಣ, ನಮಗೆ ನಮ್ಮ ಜನರ ಸುಖ ಸಂತೋಷ ಹಿತ ಮುಖ್ಯ.  ಇದರ ಬಗ್ಗೆ ನಾನು ಮುಖ್ಯಮಂತ್ರಿ ಗಳ ಹತ್ತಿರ ಮಾತನಾಡುತ್ತೀನಿ, ಇನ್ನು ನೀವು ಹೊರಡಿ ಮುಂದಿನದ್ದನ್ನು ನಾನು ನೋಡಿ ಕೊಳ್ಳುತ್ತೀನಿ" ಎಂದು ಯಥಾಪ್ರಕಾರ ಅಶ್ವಾಸನೆ ನೀಡಿ ಜನರ ಗುಂಪನ್ನು ಕಳುಹಿಸಿದರು.
ಸಮಸ್ಯೆ ಗಂಭೀರ ಅಂತ ಅನ್ನಿಸಿತು, ಮಾಂಸಹಾರಕ್ಕೆ ಅವಕಾಶಕ್ಕೆ ಕೊಟ್ಟರೆ, ಹಿಂದುಗಳ ವೋಟ್, ವಿದ್ಯಾವಂತ ಯುವಕರ ವೋಟ್ ಸಿಗೋದು ಇಲ್ಲ. ಒಂದು ವೇಳೆ ಅವಕಾಶ ಕೊಡದೆ ಇದ್ದರೆ, ಯಾವ ಮುಸ್ಲಿಂ ವೋಟ್ ಗಳು ಸಿಗುವುದಿಲ್ಲ. ಇದೊಳ್ಳೆ ಸಮಸ್ಯೆ ಬಂತಲ್ಲಪ್ಪ ಅಂತ ಚಿಂತೆಯಿಂದ ಕುಳಿತರು.
ಸ್ವಲ್ಪ ಹೊತ್ತಿನ ನಂತರ, ಅವರ ಭದ್ರತಾ ಸಿಬ್ಬಂದಿಯೊಬ್ಬ ಒಬ್ಬ ಯುವಕನನ್ನು ಅವರಹತ್ತಿರ ಹಿಡಿದು ಕೊಂಡು ಬಂದರು. ಆ ಯುವಕ "ನನ್ನನ್ನು ಬಿಡ್ರಿ, ನನ್ನನ್ನು ಬಿಡ್ರಿ" ಎಂದು ಕೇಳಿಕೊಳ್ಳುತಿದ್ದ. "ಏನ್ರೊ ಅದು ಗಲಾಟೆ, ಯಾರೊ ಅವನು, ಬಿಡ್ರಿ ಅವನನ್ನ, ಏನೊ ತಮ್ಮಾ ಎನು ವಿಷ್ಯ? ಎಂದು ವಿಚಾರಿಸುತ್ತಿರಬೇಕಾದ್ರೆ, ಆ ಭದ್ರತಾ ಸಿಬ್ಬಂದಿ, ಸಾರ್ ಈ ಹುಡುಗನನ್ನ ನಾನು ಮೂರು ದಿನದಿಂದ ಗಮನಿಸುತ್ತಿದ್ದೇನೆ, ಯಾವುದಾದರು ಒಂದು ಜನರ ಗುಂಪು ಬಂದರೆ ಸಾಕು ಅವರ ಜತೆ ಸೇರಿಕೊಂಡು ಒಳಗೆ ಬರ್ತಾನೆ, ಮತ್ತೆ ಇನ್ನೊಂದು  ಗುಂಪು ಬಂದರೆ ಅವರ ಜತೆ ಮತ್ತೆ ಬರ್ತಾನೆ. ಅನುಮಾನ ಬಂತು ಅದಕ್ಕೆ ಎಳೆದು ಕೊಂಡು ಬಂದೆ. ಇದು ಅವನ ಹತ್ತಿರ ಇದ್ದ ಫ಼ೈಲ್, ನಿಮ್ಮ ಬಗ್ಗೆ ಪೇಪರ್ ನಲ್ಲಿ ಬಂದಿದ್ದ ಆರ್ಟಿಕಲ್ಸ್ ಕಟ್ಟಿಂಗ್ಸ್, ನಿಮ್ಮ ಭಾಷಣದ ಪ್ರತಿಗಳು. ನಿಮ್ಮ ಫೋಟೊಸ್ ಇಟ್ಕೊಂಡಿದ್ದಾನೆ, ಕೇಳಿದ್ರೆ ಏನು ಹೆಳ್ತಾಯಿಲ್ಲ ಸಾರ್" ಎಂದು ಹೇಳಿದ. ಇದೆಲ್ಲ ಕಂಡು ರಾಜಕಾರಣಿಗೆ ಸಕತ್ ಆಶ್ಚರ್ಯವಾಯಿತು. ಅವನ ಬಗ್ಗೆ ವಿಪರೀತ ಕುತೂಹಲ ಉಂಟಾಯಿತು. ತನ್ನ ಬಗ್ಗೆ ಇಷ್ಟೊಂದು ಆಸಕ್ತಿ ಯಾಕೆ ವಹಿಸುತಿದ್ದಾನೆ ಅಂತ ಅನ್ನಿಸಿತು. "ಯಾರಪ್ಪ ನೀನು, ಯಾರ ಮನೆ ಹುಡುಗ, ಏನು ಮಾಡ್ತ ಇದ್ದೀಯಾ? ಇದೆಲ್ಲಾ ಯಾಕೆ ಇಟ್ಕೊಂಡಿದ್ದಿಯಾ, ಏನು ವಿಷಯ" ಎಂದು ವಿಚಾರಿಸಿದರು.
ಆ ಹುಡುಗ "ಸಾರ್ ನಾನು ನಿಮ್ಮ ಅಭಿಮಾನಿ, ಪಕ್ಕದ ಊರಿನವನು ಪಟ್ಟಣ ದಲ್ಲಿ ವಿದ್ಯಾಭ್ಯಾಸ ಮಾಡುತಿದ್ದೇನೆ. ರಜಾ ಇತ್ತು ಅದಕ್ಕೆ ಊರಿಗೆ ಬಂದಿದ್ದೆ. ನೀವು ಅಂದರೆ ನನಗೆ ತುಂಬಾ ಇಷ್ಟ, ನಿಮ್ಮ ಮಾತಿನ ಶೈಲಿ, ನಿಮ್ಮ ನಡೆ ನುಡಿ, ನಿಮ್ಮ ರಾಜಕಾರಣ, ನೀವು ಮಾಡುತಕ್ಕಂತ ಸಂಘಟನೆ ಗಳು ನನಗೆ ತುಂಬಾ ಇಷ್ಟ. ದೂರದಲ್ಲಿದ್ದು ಕೊಂಡು ನಿಮ್ಮನ್ನು ಗಮನಿಸುವುದಕ್ಕಿಂತ ಹತ್ತಿರ ದಲ್ಲಿದ್ದುಕೊಂಡು ನಿಮ್ಮನ್ನು ಪೂಜಿಸುವುದು ಒಳ್ಳೇಯದನಿಸಿತು, ನನಗೆ ಕಾಲೇಜ್ ರಜಾ ಇದ್ದುದರಿಂದ ಹಾಗು ತಾವುಗಳು ಊರಲ್ಲಿ ಇದ್ದುದರಿಂದ ಇದೊಂದು ಸದಾವಕಾಶ ಅಂದುಕೊಂಡು. ತಮ್ಮ ಒಡನಾಟ ಬೆಳೆಸಿಕೊಂಡು  ನಾನು ಸಹ ನಿಮ್ಮ ಹಾಗೆ ರಾಜಕಾರಣಿಯಾಗಿ ನಿಮ್ಮ ರಾಜಕಾರಣದ ಕಲೆ ಗಳನ್ನು ಕಲಿತು ಕೊಳ್ಳಬೇಕು ಎಂದು ಈ ಮೂರು ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡಲು ಬರುತಿದ್ದೆ. ಆದರೆ ಪ್ರತಿ ಬಾರಿ ಬಂದಾಗ ತಮ್ಮನ್ನು ಮಾತನಾಡಿಸಲು ಭಯವಾಗುತಿತ್ತು, ಅದಕ್ಕೆ ಸುಮ್ಮನೆ ವಾಪಸು ಹೋಗುತಿದ್ದೆ. ಅದ್ಯಾವ ಗಳಿಗೆ ಯಲ್ಲಿ ಇವರು ನನ್ನನ್ನು ಗಮನಿಸಿದರೊ ಗೊತ್ತಿಲ್ಲ, ನನ್ನನ್ನು ಹಿಡಿದು ಕೊಂಡು ಬಂದು ಬಿಟ್ಟಿದ್ದಾರೆ" ಎಂದು ವಿವರಿಸಿದನು. ಆಶ್ಚರ್ಯ ದಿಂದ ಕಣ್ಣರಳಿಸುತ್ತ ತನ್ನ ಬಗ್ಗೆ ಇಷ್ಟೊಂದು ಅಭಿಮಾನ ಇಟ್ಕೊಂಡಿದ್ದಾನಲ್ಲ ಎಲಾ ಇವನ ಎಂದು "ಸಂತೊಷ ಆಯಿತು ಕಣಪ್ಪ ನಿನ್ನ ವಿಚಾರ ಕೇಳಿ, ಎನಾದ್ರು ತಿಂದಿದ್ದೀಯೊ ಅಥವಾ ಏನು ಇಲ್ವೊ, ಬಾ ನನ್ನ ಜತೆ ಊಟ ಮಾಡುವಿಯಂತೆ". ಎಂದು ಅವನನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಊಟಕ್ಕೆ ಕುಳಿತರು. ಅವನು ಊಟ ಬೇಡ ಎಂದು ಜಪ್ಪಯ್ಯ ಅಂದರೂ ಬಿಡದೆ ಬಲವಂತದಿಂದ ಊಟಕ್ಕೆ ಕುಳ್ಳಿರಿಸಿದರು. ತನ್ನ ಬಗ್ಗೆ ಇಷ್ಟೊಂದು ತಿಳಿದುಕೊಂಡು, ತನ್ನ ಪ್ರತಿಹೆಜ್ಜೆಯನ್ನು ಗಮನಿಸುತ್ತ ಬಂದಿರುವ ಆ ಯುವಕನಬಗ್ಗೆ ತುಂಬಾ ಮೆಚ್ಚುಗೆಯಾಗಿತ್ತು. ಆ ಸಂತೋಷದಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು. "ನೋಡು ರಾಜಕಾರಣ ಅಂದರೆ ಅಷ್ಟು ಸುಲಭದ ವಿದ್ಯೆ ಅಲ್ಲ, ಇದರೊಳಗೆ ತುಂಬಾ ಆಟಗಳನ್ನು ಆಡಬೇಕಾಗುತ್ತೆ. ಬಹಿರಂಗದಲ್ಲಿ ನಾವು ವಿರೊಧಪಕ್ಷದವರನ್ನು ನಾವು ವಿರೋಧಿಸುತ್ತೇವೆ, ಆದರೆ ಸಮಯ ಸಂಧರ್ಭ ಬಂದರೆ ಅವರು ನಮಗೆ ಬೇಕಾಗುತ್ತಾರೆ, ಹಾಗೆ ಅವರಿಗೆ ಸಹ ನಾವು ಬೇಕಾಗುತ್ತಿವಿ. ಆದರೆ ಇದನ್ನೆಲ್ಲ ಹೊರಗಡೆ ತೋರಿಸಿಕ್ಕೊಳ್ಳೊಕ್ಕಾಗಲ್ಲ. ಮೊನ್ನೆ ನಾವೆಲ್ಲ ವಿಧಾನಸಭೆ ಯಲ್ಲಿ ಹೇಗೆಲ್ಲ ಜಗಳ ಆಡಿ ಕಿರುಚಾಡಿದ್ವಿ, ಆಮೇಲೆ ಆ ಫ಼ೈಲ್ ಈ ಫ಼ೈಲ್ ಅಂತ ತಗೊಂಡು ಬಂದು ಸೈನ್ ಮಾಡಿಸಿಕೊಂಡು ಹೋಗ್ತಾರೆ. ಆದರೆ ಜನರಿಗೆ ತಲುಪುವ ವಿಷಯನೇ ಬೇರೆ. ಜನರಿಗೆ ನಾನು ಅದನ್ನು ಮಾಡ್ತೀನಿ ಇದನ್ನು ಮಾಡ್ತೀನಿ ಅಂತ ಅಶ್ವಾಸನೆ ಕೊಡ್ತಿವಿ, ಅದರೆ ಅದನ್ನೆಲ್ಲ ಮಾಡೊಕ್ಕಾಗುತ್ತಾ? ಆದರೆ ತುಂಬಾ ಜಾಗೂರುಕತೆ ಇಂದ ಅದೂ ಇದೂ ಕಾರಣ ಹೇಳಿ ಸಾಗ ಹಾಕಬೇಕಾಗುತ್ತೆ.ಉದಾಹರಣೆ ಗೆ ಬೆಳಿಗ್ಗೆ ಗಾಂಧಿ ಸಂಘದವರು ಬಂದು, ಗಾಂಧಿ ಜಯಂತಿ ಯಂದು ಮಧ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಡಿ, ಅಂತ ಕೇಳಿಕೊಂಡು ಹೋದರು. ಆಮೇಲೆ, ಮುಸ್ಲಿಮ್ ಸಂಘದವರು ಬಂದು ತೊಂದರೆ ಯಾಗದಂಗೆ ಮಾಡಿ ಅಂತ ಕೇಳಿದರು. ಒಂದು ವೇಳೆ ನಾನೇನಾದ್ರು ಇದರಲ್ಲಿ ಕೈ ಹಾಕಿದರೆ, ಮುಂದಿನ ಚುನಾವಣೆಯಲ್ಲಿ ಈ ಜನ ನನಗೆ ವೋಟ್ ಕೊಡಲ್ಲ. ಸೊಲೋದಂತು ಗ್ಯಾರಂಟಿ. ಅದಕ್ಕೆ ನಾನೇನು ಮಾಡ್ಬೆಕು ಅಂತ ಇದ್ದೀನಿ ಗೊತ್ತಾ,
೧. ಹುಷಾರು ಇಲ್ಲ ಅಂತ ಡೆಲ್ಲಿಯಲ್ಲೊ ಅಥವ, ಬಾಂಬೆ ಹಾಸ್ಪಿಟಲ್ ಯಲ್ಲೊ ಅಡ್ಮಿಟ್ ಆಗೊದು, ಒಂದು ವಾರ ಈ ಕಡೆ ತಲೆ ಹಾಕದೆ ಅಂಗೆ ಇರೋದು.
೨. ಯಾವುದಾದರು ಸ್ಟಡಿ ಟೂರ್ ಅಂತ ಹೇಳಿ ಫ಼ಾರಿನ್ ಗೆ ಹೋಗೋದು.
೩. ಸಾರ್ವಜನಿಕ ವಾಗಿ ಉಪವಾಸ ಅಂತ ಕುಳಿತು ಕೊಳ್ಳೊದು, ಶಾಂತಿ ಕಾಪಾಡಿ, ಶಾಂತಿ ಕಾಪಡಿ ಅಂತ ಕಿರುಚ್ತಾ ಇರೋದು.
ಆದರೆ ಇದಕ್ಕೆಲ್ಲ ಪೂರ್ವ ಸಿದ್ಧತೆ ಇರಬೇಕು, ಫ಼ಾರಿನ್ ಟೂರ್ ಗೆ ಅದ್ಯವಾಗ್ಲೊ ಪರ್ಮಿಶನ್ ಸಿಕ್ಕಿತ್ತು. ಆದರೆ ಹೊಗೊದಿಕ್ಕೆ ಆಗಿರಲಿಲ್ಲ. ಇನ್ನು ಹಾಸ್ಪಿಟಲ್ ವಿಚಾರ, ನಮ್ಮ ಸೆಕ್ರೆಟರಿಗೆ ಹೇಳಿದ್ರೆ ಅವನು ಮುಂದಿನದೆಲ್ಲ ನೋಡಿಕೊಳ್ತಾನೆ. ನನ್ನ ಬೆಂಬಲಿಗರು ಜನರನ್ನು ಸೇರಿಸಿ, ನನ್ನ ಮನೆ ಮುಂದೆ ನನಗಾಗಿ ಕಾಯೊ ಏರ್ಪಾಟು ಮಾಡ್ತಾರೆ. ಇದಕ್ಕೆಲ್ಲ ಸ್ವಲ್ಪ ದುಡ್ಡು ಖರ್ಚು ಆಗೊದು ಗ್ಯಾರಂಟಿ. ಅದನ್ನು ಹೇಗೆ ವಾಪಸು ಪಡಿಬೇಕು ಅಂತ ನನಗೆ ಗೊತ್ತು. ರಾಜಕಾರಣ ಅಂದ್ರೆ ಸುಮ್ನೆ ಅಲ್ಲ, ಆಗಿಂದಾಗ್ಗೆ ಯೋಚನೆ ಮಾಡಿ ನಿರ್ಧಾರ ತಗೋ ಬೇಕು, ಕಾಲ ಮಿಂಚಿ ಹೋದರೆ ಅದರ ಲಾಭ ಬೇರೆಯವರು ಪಡಿತಾರೆ. ನಿನಗಿರುವ ಆಸಕ್ತಿ ನೋಡಿ ನನಗೆ ತುಂಬಾ ಖುಷಿ ಯಾಯಿತು, ಸದ್ಯ ನಿನ್ನ ವಿದ್ಯಾಭ್ಯಾಸ ಮುಗಿಸು. ಒಂದು ಒಳ್ಳೆ ಕೆಲಸ ಸಂಪಾದಿಸು, ಆಮೇಲೆ ರಾಜಕಾರಣದ ಬಗ್ಗೆ ಯೋಚನೆ ಮಾಡಿದ್ರೆ ಆಯಿತು. ನನಗೆ ನಿಮ್ಮಂತ ವಿದ್ಯಾವಂತರು ಬೇಕು. ನನ್ನ ಆಶಿರ್ವಾದ ಯಾವಗ್ಲು ಇರುತ್ತೆ, ಮುಂದೆ ನಿನಗೆ ಸಾಧ್ಯವಾದಾಗ ನನ್ನ ಭೇಟಿ ಮಾಡ್ತಾಇರು" ಎಂದು ಹೇಳಿ ಆ ಯುವಕ ನನ್ನು ಕಳುಹಿಸಿದರು. ಹಾಗೆ ಯೋಚಿಸುತ್ತಾ, ಈಗಿನ ಕಾಲದಲ್ಲಿ ರಾಜಕಾರಣ ಅಂದ್ರೆ ಅಸಹ್ಯ ಪಡುತ್ತಿರಬೇಕಾದ್ರೆ, ಇವನೊಬ್ಬ ವಿಚಿತ್ರ ಹುಡುಗ, ರಾಜಕಾರಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಈಗಿನ ಕಾಲದಲ್ಲಿ ಹೊಸಬರಿಗೆ ಅವಕಾಶ ಸಿಗುವುದೇ ಕಮ್ಮಿ, ಬರೀ ನಮ್ಮ ಕುಟುಂಬವೆ ಮುಂದೆ ಬರಬೇಕು ಎಂದು ಆಸೆ ಪಡುವವರು ನೂರಾರು ಮಂದಿ. ಅವರೆಲ್ಲರ ಮಧ್ಯೆ ಇಂತವರನ್ನು ನೆನೆಸಿ ಕೊಂಡರೆ ಅಯ್ಯೊ ಎನಿಸುತ್ತದೆ. ಎಲ್ಲ ಕಾಲದ ಮಹಿಮೆ ಎಂದು ಕೊಂಡು ತಮ್ಮ ಮುಂದಿನ ಕಾರ್ಯಕ್ರಮ ಗಳತ್ತ ಗಮನ ವಹಿಸಿದರು. ತದ ನಂತರ ರಾತ್ರಿ ರಾಜಧಾನಿಗೆ ಕಾರ್ಯನಿಮಿತ್ತ ಪ್ರಯಾಣ ಬೆಳೆಸಿದರು.
ಊರಿನಿಂದ ಬಂದು ಒಂದೆರಡು ದಿನವಾಗಿತ್ತು, ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಹೀಗೆ ಒಂದು ಸಭೆಯಲ್ಲಿ ಭಾಗವಹಿಸಿದ್ದಾಗ ಅವರ ಗೃಹ ಕಾರ್ಯದರ್ಶಿಯಿಂದ ದೂರವಾಣಿ ಕರೆ ಬಂತು. ಅದಕ್ಕೆ ಅವರು ನಾನು ಸಭೆ ಯಲ್ಲಿ ಭಾಗವಹಿಸಿದ್ದಿನಿ ಆಮೆಲೆ ನಾನೆ ಕರೆ ಮಾಡ್ತಿನಿ ಎಂದು ತಿಳಿಸಿದರು. ಆದರೆ ಆ ಕಡೆಯಿಂದ ಇದು ತುಂಬಾ ಗಂಭೀರವಾದ ವಿಷಯ ಈಗಲೆ ಮಾತಾಡಬೇಕು ಅಂದಾಗ, ಆಯಿತು ಏನು ಹೇಳು ವಿಷಯ ಎಂದರು. "ಸಾರ್ ಯಾರೊ ಒಂದು ಸಿಡಿ ಕಳುಹಿಸಿದ್ದಾರೆ, ಅದರ ಜತೆ ಒಂದು ಪತ್ರ ವನ್ನು ಬರೆದು ಕಳುಹಿಸಿದ್ದಾರೆ. ಆ ಪತ್ರದಲ್ಲಿ ಸಿಡಿ ನೋಡಿದ ಮೇಲೆ ವಿಷಯ ಅರ್ಥ ಆಗಿರಬೇಕು ಅನ್ನಿಸುತ್ತೆ, ಆದಷ್ಟು ಬೇಗ ಹಣವನ್ನು ಜೋಡಿಸಿ ಇಟ್ಟುಕೊಳ್ಳಿ ಮುಂದಿನದನ್ನು ನಾನು ತಿಳಿಸುತ್ತೇನೆ ಎಂದು ಬರೆದಿದ್ದಾರೆ". ಇಲ್ಲಿ ಇವರು ಸಿಡಿ, ಪತ್ರ, ಹಣ ಎಂದು ಗೊತ್ತಾದ ಮೇಲೆ ಇದು ಏನೋ ಎಡವಟ್ಟು ಆಗಿರಬೇಕು ಎಂದು ಕೊಂಡು ವಿಚಲಿತ ರಾದರು, ಆದರೆ ಕಾರ್ಯಕ್ರಮ ವನ್ನು ರೆಕಾರ್ಡ್ ಮಾಡುತಿದ್ದ ಒಬ್ಬ ಟಿವಿ ಕ್ಯಾಮೆರಾಮೆನ್ ಇವರ ಮುಖದಲ್ಲಿ ಆಗುತಿದ್ದ ಬದಲಾವಣೆ ಗಳನ್ನು ಗಮನಿಸಿ ಅವರನ್ನೆ ಕ್ಲೊಸ್ ಅಪ್ ಅಲ್ಲಿ ಶೂಟ್ ಮಾಡಲು ಶುರು ಮಾಡಿದ. ಹಾಗೆಯೆ, ಅವರ ವರದಿಗಾರನಿಗೆ ಎನೋ ನಡಿತಾಇದೆ ಅವರನ್ನು ಗಮನಿಸು ಎಂದು ಸೂಚಿಸಿದ. ಮಾನ್ಯ ರಾಜಕಾರಣಿ ಯವರು ಫ಼ೊನ್ ಬಂದಾಗಿನಿಂದ ಚಡಪಡಿಸುತಿದ್ದರು, ಕಾರ್ಯಕ್ರಮ ದಲ್ಲಿ ಕುಳಿತುಕೊಂಡಿರಲು ಮನಸ್ಸಾಗಲಿಲ್ಲ. ಸಭೆಯ ಸಂಘಟಕರಿಗೆ ತುರ್ತು ಕರೆ ಬಂದಿದೆ ನಾನು ಹೊರಡುತ್ತೀನಿ ಎಂದು ಹೇಳಿ ಎಲ್ಲರಿಗು ಕೈ ಮುಗಿದು ಅಲ್ಲಿಂದ ಕಾಲುಕಿತ್ತಿದರು. ಆತುರಾತುರವಾಗಿ ಹೊರಟ ಅವರನ್ನು ಟಿವಿ ಯವರು ಸಹ ಹಿಂಬಾಲಿಸಿಕೊಂಡು ಹೋದರು.
ಅವರ ಮನೆಯ ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ, ರಾಜಕಾರಣಿಯವರು ಒಳಗೆ ಓದ ನಂತರ ಟಿವಿಯವರು ಹೊರಗಡೆಯಿಂದ ಅವರ ಮನೆಯ ಆಗು ಹೋಗು ಗಳನ್ನು ಶೂಟ್ ಮಾಡಲು ಪ್ರಾರಂಭಿಸಿದರು.ಒಳಗೆ ಹೋದ ತಕ್ಷಣ ಸಿಡಿ ಮತ್ತು ಪತ್ರ ವನ್ನು ತೆಗೆದುಕೊಂಡು ಪತ್ರವನ್ನು ಓದಿದರು, ತಕ್ಷಣವೆ ಸಿಡಿ ಯನ್ನು ಪ್ಲೇಯರಲ್ಲಿ ಹಾಕಿ ಟಿವಿ ಆನ್ ಮಾಡಿದರು. ಅದನ್ನು ನೋಡುತಿದ್ದಂತೆ ಅವರ ಎದೆ ಜಲ್ ಎಂದಿತು, ಮೊನ್ನೆ ಅವರು ಊರಿಗೆ ಹೋಗಿದ್ದಾಗ ಗಾಂಧಿ ಅಭಿಮಾನಿ ಸಂಘ ದವರು ಹಾಗು ಮುಸ್ಲಿಮ್ ಸಂಘ ದವರು ಮಾತನಾಡಿದ್ದು ಅದರ ಜತೆಗೆ ಆ ಯುವಕನ ಜತೆ ಈ ವಿಷಯದ ಬಗ್ಗೆ ಉಡಾಫ಼ೆ ಯಾಗಿ ಮಾತನಾಡಿದ್ದು ಎಲ್ಲವು ರೆಕಾರ್ಡ್ ಆಗಿತ್ತು. ಒಂದು ವೇಳೆ ಈ ಸಿಡಿಯಲ್ಲಿರುವ ವಿಷಯ ಹೊರಗಡೆ ಏನಾದ್ರು ಬಹಿರಂಗ ಆಗಿದ್ದಿದ್ದರೆ ಬಹುಷ ಇವರ ರಾಜಕೀಯ ಭವಿಷ್ಯವೇ ಮುಗಿಯುತಿತ್ತು. ಒಂದೆರಡು ನಿಮಿಷ ಕಣ್ಣು ಮುಚ್ಚಿ ಮುಂದೆ ಏನು ಮಾಡಬೇಕು ಅನ್ನುವ ಬಗ್ಗೆ ಚಿಂತೆ ಮಾಡಲಾರಂಭಿಸಿದರು. ಸ್ವಲ್ಪ ಹೊತ್ತಿನ ನಂತರ ಅವರ ಮೊಬೈಲ್ ರಿಂಗಾಯಿತು. ಅವರ ಸ್ನೇಹಿತರೊಬ್ಬರು ಕರೆ ಮಾಡಿದ್ದರು, ಅದನ್ನು ಸ್ವೀಕರಿಸಿದಾಗ ಆ ಕಡೆಯಿಂದ "ಹಲೋ ಏನು ಗುರುವೇ ಹೊಸ ಸ್ಕಾಂಡಲ್ ಏನೊ ಮಾಡಿಕೊಂಡ್ಬಿಟ್ಟಿದ್ದಿಯ, ಏನದು ಸಿಡಿ ವಿಷಯ" ಇವರಿಗೆ ಕರೆಂಟ್ ಶಾಕ್ ಹೊಡೆದಂತಾಯಿತು. ಸಿಡಿ ಬಂದು ಇನ್ನು ಅರ್ಧ ಘಂಟೆ ಸಹ ಆಗಿಲ್ಲ, ಅಷ್ಟರಲ್ಲೆ ಸುದ್ದಿ ಲೀಕ್ ಆಗಿಹೋಯಿತಾ ಎಂದುಕೊಂಡರು, ಸಾವರಿಸಿಕೊಳ್ಳುತ್ತ ಏನು ಗೊತ್ತಿಲ್ಲದವರಂತೆ ಮುಗ್ಧರಾಗಿ ಅವರಿಗೆ ಮರು ಪ್ರಶ್ನೆ ಹಾಕಿ "ನೀವೆ ಏನೋ ಮಾಡಿರಬಹುದು ಸ್ವಾಮಿ, ನಮಗೇನು ಗೊತ್ತು, ಸಭೆ ಯಿಂದ ಈಗ್ತಾನೆ ಬರ್ತಾ ಇದ್ದೀನಿ. ಹೊಸ ವಿಷಯ ಏನಾದ್ರು ಇದ್ರೆ ನೀವೆ ಹೇಳಿ" ಎಂದರು. ಆ ಸ್ನೇಹಿತರು "ಅದೇ ಸ್ವಾಮಿ ಸಭೆ ಯಿಂದ ಯಾಕೆ ದಡಬಡಾಯಿಸಿ ಬಂದ್ರಲ್ಲ ಯಾಕೆ ಅಂತ?", ಇವರಿಗೆ ಗಾಬರಿಯಾಗಿ ಎಲಾ ಇವನ ಇವರಿಗೆ ಹೆಂಗೆ ಗೊತ್ತಾಯಿತು ಎಂದು ಯೋಚಿಸುತ್ತಿರುವಾಗ,  "ಗುರುವೇ ಟಿವಿ ಆನ್ ಮಾಡು, ಫ಼್ಲಾಶ್ ನ್ಯೂಸ್ ಬರ್ತಾಇದೆ" ಎಂದು ಹೇಳಿದರು, ಆಗಲೇ ಟಿವಿಯಲ್ಲಿ ಬರ್ತಾ ಇದೆಯಾ ದೇವರೇ ಎನು ಕರ್ಮ ಕಾದಿದೆಯೊ ಎಂದು ಕೊಂಡು, ಟಿವಿ ನೋಡಿದರು. ಟಿವಿಯಲ್ಲಿ ಬರ್ತಾ ಇದ್ದಿದ್ದು ಅರೆ ಬರೆ ಸುದ್ದಿ. ಕಾರ್ಯಕ್ರಮ ದಲ್ಲಿ ಅವರಿಗೆ ಫೊನ್ ಬಂದಾಗ ಫ಼ೊನಿನಲ್ಲಿ ಮಾತನಾಡುತ್ತ ಮಾತನಾಡುತ್ತ ಮುಖದ ಚಹರೆ ಬದಲಾಗಿದ್ದದ್ದನ್ನು ಪದೇ ಪದೇ ತೊರಿಸುತಿದ್ದರು. ಆಮೇಲೆ ಅಲ್ಲಿಂದ ದಡಬಡಾಯಿಸಿ ಎದ್ದು ಬಂದಿದ್ದನ್ನು ತೋರಿಸುತಿದ್ದರು. ನಂತರ ಮನೆಯೊಳಗೆ ಹೋಗಿದ್ದನ್ನು ತೋರಿಸುತಿದ್ದರು. ತಕ್ಷಣವೇ ಅವರಿಗೆ ಅರಿವಾಗಿ ಯಾರೊ ಟಿವಿ ರಿಪೊರ್ಟರ್ ನನ್ನನ್ನು ಹಿಂಬಾಲಿಸಿದ್ದಾನೆ, ಮನೆಯ ಹತ್ತಿರ ಬಂದು ಇಲ್ಲಿನ ಕೆಲಸಗಾರರಿಂದ ಅರ್ಧಂಬರ್ಧ ವಿಷಯ ತಿಳಿದುಕೊಂಡು ಅದನ್ನೇ ಟಿವಿಯಲ್ಲಿ ಹಸಿಹಸಿಯಾಗಿ ತೋರಿಸುತಿದ್ದಾರೆ ಅಂದು ಕೊಂಡರು.
ಇದನ್ನೆಲ್ಲ ನೋಡಿ ಪಿತ್ತ ನೆತ್ತಿಗೇರಿ ವಾಚ್ಮನ್ ನನ್ನು ಸೇರಿಸಿ ಪ್ರತಿಯೊಬ್ಬರನ್ನು ಕರೆದು ಎಲ್ಲರಿಗು ಬೈಗುಳದ ಸುರಿಮಳೆಗರೆದರು. ಟಿವಿಯವರು ಏನೊ ಎಂಜಲು ಕಾಸು ಬಿಸಾಕಿರ್ತಾರೆ ಅದಕ್ಕೆ ನಿಮಗೆ ಬಾಯಿಗೆ ಬಂದಿದ್ದನ್ನು ಹೇಳಿಬಿಡ್ತೀರಾ? ಏನಾದರು ಹೆಚ್ಚುಕಮ್ಮಿ ಯಾದರೆ ನನ್ನ ಗತಿಯೇನು ಎಂದು ಅವರಿಗೆ ಪ್ರಶ್ನೆ ಮಾಡಿದರು. ಇನ್ನೊಂದು ಸಾರಿ ಮನೆಯೊಳಗೆ ಇರುವ ವಿಷಯ ಎನಾದರು ಹೊರಗಡೆ ಹೋದರೆ ನಿಮ್ಮನ್ನೆಲ್ಲ ಹುಟ್ಟಲಿಲ್ಲ ಅಂತ ಅನ್ನಿಸಿಬಿಡುತ್ತೀನಿ ಎಂದು ಹೂಂಕರಿಸಿದರು. ಆದರೆ ಅಲ್ಲಿ ನಡೆದಿದ್ದು ಏನೆಂದರೆ, ಆ ಟಿವಿ ಚಾನೆಲ್ ನವರು ಅಲ್ಲಿ ಕೆಲಸ ಮಾಡುವ ಒಂದು ಹುಡುಗನಿಗೆ "ಕೈ ಬೆಚ್ಚಗೆ" ಮಾಡಿ ವಿಷಯ ಸಂಗ್ರಹಿಸಿದ್ದರು, ಕಾರ್ಯಕ್ರಮ ದಲ್ಲಿ ಅವರು ದಡಬಡಾಯಿಸಿ ಎದ್ದು ಬಂದಿದ್ದು ಮತ್ತು ದೂರವಾಣಿ ಕರೆ ಬಂದಾಗ ಮುಖ ಬಿಳಿಚಿಕೊಂಡಿದ್ದು ಮತ್ತು ಮನೆಯಲ್ಲಿ ಧೀರ್ಘವಾದ ಚರ್ಚೆ ನಡೆದಿದ್ದರಿಂದ, ಆ ಮನೆ ಕೆಲಸದ ಹುಡುಗನ ಮುಖಾಂತರ ವಿಷಯ ತೆಗೆದು ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಫ಼್ಲಾಶ್ ನ್ಯೂಸ್ ಆಗಿ ಪ್ರಸಾರ ಮಾಡಿಬಿಟ್ಟಿದ್ದರು. ಇನ್ನು ಏನಾದರು ಹೆಚ್ಚಿನ ಮಾಹಿತಿ ಸಿಗಬಹುದು ಅಲ್ಲಿಯೆ ಕಾದು ಕುಳಿತಿದ್ದರು.ಮಾನ್ಯ ರಾಜಕಾರಣಿಯವರು ಮುಂಜಾಗ್ರತೆಯಿಂದ ವಿಷಯ ಗಂಭೀರವಾಗುವುದಕ್ಕಿಂತ ಮುಂಚೆ  ಟಿವಿ ಯವರಿಗೆ ಸಮಜಾಯಿಷಿ ಕೊಟ್ಟರೆ ಮುಂದೆ ಆಗುವ ಅನಾಹುತ ವನ್ನು ತಡೆಗಟ್ಟಬಹುದು ಎಂದು ತೀರ್ಮಾನಿಸಿದರು. ಅದರಂತೆಯೆ, ಹೊರಗಡೆಯಿದ್ದ ಟಿವಿಯವರನ್ನು ಕರೆಸಿ ಮೊದ ಮೊದಲು ಬೈಗುಳ ಸುರಿಮಳೆಗರೆದರು. ಪರಿಪೂರ್ಣವಾದ ವಿಷಯ ಸಂಗ್ರಹ ವಿಲ್ಲದೆ ಸುಮ್ ಸುಮ್ಮನೆ ಮನಸ್ಸಿಗೆ ಬಂದಂತೆ ದೃಶ್ಯಗಳನ್ನು ಪ್ರಸಾರ ಮಾಡೊದು ಸರಿಯಲ್ಲ. ಈಗಲೆ ಪ್ರಸಾರ ಮಾಡೊದು ನಿಲ್ಲಿಸಿ ಇಲ್ಲದೆ ಇದ್ದರೆ ನಿಮ್ಮಮೇಲೆ ಮಾನನಷ್ಟ ಮೊಕದ್ದಮ್ಮೆ ಹಾಕುತ್ತೀನಿ ಎಂದು ಹೆದರಿಸಿ, ನಂತರ ಸಾವರಿಸಿಕೊಂಡು ಕಾರ್ಯಕ್ರಮ ದಿಂದ ಹೊರಬಂದಿದ್ದಕ್ಕೆ ಸಬೂಬು ಹೇಳಿ, ಅನವಶ್ಯಕವಾದ ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡದೆ ಎಂದಿನಂತೆ ಸಹಕರಿಸಿ ಎಂದು ಕೋರಿಕೊಂಡರು. ಇದ್ಯಾಕಿದ್ದಿತು ಸಹವಾಸ ಎಂದು ಟಿವಿಯವರು ಅಲ್ಲಿಂದ ಕಾಲ್ಕಿತ್ತಿದರು.
ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ತಂತ್ರಗಾರಿಕೆ ಹೆಣೆಯಲು ಆಪ್ತಕಾರ್ಯದರ್ಶಿ ಯೊಂದಿಗೆ ಸಮಾಲೋಚನೆಯಲ್ಲಿ ತೊಡಗಿ, ಆ ಯುವಕನ ಬಗ್ಗೆ ಆದಷ್ಟು ಬೇಗ ಮಾಹಿತಿ ಸಂಗ್ರಹಿಸಲು ಊರಿನಲ್ಲಿದ್ದ ತಮ್ಮ ಬೆಂಬಲಿಗರಿಗೆ ಸೂಚಿಸಿದರು. ಅದೇ ಸಮಯದಲ್ಲಿ ಮನೆಯ ಮುಂದೆ ಯಾರೊ ಒಬ್ಬರು ಒಂದು ಪತ್ರ ವನು ಬಿಸಾಡಿ ಯಾರ ಕೈಗೆ ಸಿಗದ ಹಾಗೆ ಓಡಿ ಹೋದರು. ಅಲ್ಲಿದ್ದ ಕಾವಲುಗಾರ ಆ ಪತ್ರವನ್ನು ಕಾರ್ಯದರ್ಶಿ ಮುಖಾಂತರ ಒಳಗಡೆಯಿದ್ದ ಮುಖಂಡರಿಗೆ ತಲುಪಿಸಿದ. ಮುಂದೇನು ಮಾಡಬೇಕು ಎಂದು ಕಾರ್ಯತಂತ್ರ ಹೊಸೆಯುತಿದ್ದ ಮುಖಂಡರಿಗೆ ಹೊಸ ಪತ್ರ ಕೈಗೆ ಸಿಕ್ಕಿದ್ದೆ ತಕ್ಷಣ ಓದಿದರು. ಅದರಲ್ಲಿ, "ಈ ಕೆಳಕಂಡ ವಿಳಾಸದಲ್ಲಿರುವ ಆಸ್ಪತ್ರೆ ಯಲ್ಲಿ ರೂಮ್ ನಂ.೧೦೧ ರ ಕೊಠಡಿಯ ರೋಗಿಯೊಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತಿದ್ದಾರೆ, ಅವರಿಗೀಗ ಅರ್ಜೆಂಟ್ ಆಪರೇಶನ್ ಅಗತ್ಯವಿದೆ. ಆದಷ್ಟು ಬೇಗ ಅಗತ್ಯವಿರುವ ಹಣವನ್ನು ಭರ್ತಿ ಮಾಡಿ ಡಾಕ್ಟರ್ ಗೆ ಆಪರೇಶನ್ ಮಾಡಿ ಮುಗಿಸಲು ಹೇಳಿ. ಆಪರೇಶನ್ ಆಗಿ ಚೇತರಿಸ್ಕೊಳ್ಳೊವರೆಗೂ ಮೆಮೊರಿ ಚಿಪ್ ನಿಮ್ಮ ಕೈಗೆ ಸಿಗಲ್ಲ ಹಾಗು ನನ್ನ ಹುಡುಕುವ ಪ್ರಯತ್ನ ಮಾಡಬೇಡಿ. ಒಂದು ವೇಳೆ ಎನಾದರು ಅಧಿಕ ಪ್ರಸಂಗತನ ನಡೆದರೆ ಮುಂದೆ ಆಗುವ ಅನಾಹುತ ಗಳಿಗೆ ನೀವೆ ಹೊಣೆಯಾಗುತ್ತೀರಿ. ನಿಮ್ಮ ಸಮಯ ಈಗ ಶುರುವಾಗಿದೆ, ಮುಂದೆ ಆಗಬೇಕಾದ ಕೆಲಸವನ್ನು ಗಮನ ಕೊಡಿ. ಇಂತಿ,......." ಪತ್ರ ಓದಿದೊಡನೆ ಒಂದೆರಡು ನಿಮಿಷ ಕಣ್ಮುಚ್ಚಿ ಚಿಂತಾಕ್ರಾಂತರಾಗಿ ಕುಳಿತರು.
ತಮ್ಮ ಧೀರ್ಘ ಅನುಭವದ ರಾಜಕಾರಣವನ್ನೊಮ್ಮೆ ಅವಲೋಕಿಸಿ ಈ ಸಮಸ್ಯೆ ಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂದು ಯೋಚಿಸಲೆತ್ನಿಸಿದರು. ತಮ್ಮ ರಾಜಕೀಯ ವಿರೋಧಿಗಳು ಏನಾದ್ರು ತಂತ್ರ ಹೂಡಿ ಈ ಹುಡುಗನನ್ನು ಬಳಸಿಕೊಂಡಿದ್ದಾರ? ಎನ್ನುವ ಗುಮಾನಿ ಕಾಡಿತ್ತು. ಮೊದಲು ಆ ಹುಡುಗ ಕೈಗೆ ಸಿಕ್ಕಿದ ಮೇಲೆ ಬಾಯಿ ಬಿಡಿಸಿದರಾಯಿತು ಎಂದು ಕೊಂಡು ತಮ್ಮ ಸಹಾಯಕರಿಗೆ ಆಸ್ಪತ್ರೆ ಯಲ್ಲಿ ಆಗಬೇಕಾದ ಕೆಲಸವನ್ನು ಮಾಡಿ ಮುಗಿಸಿ ಎಂದು ಸೂಚನೆ ನೀಡಿದರು. ಇತ್ತ ಆಸ್ಪತ್ರೆ ಯಲ್ಲಿ ಹಣ ಸಂದಾಯವಾದ ತಕ್ಷಣ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ಏರ್ಪಾಟು ಮಾಡಿದರು. ಸತತವಾಗಿ ಎಂಟು ಘಂಟೆಗಳ ಶಸ್ತ್ರಚಿಕಿತ್ಸೆ ನಂತರ ರೋಗಿಯ ಪ್ರಾಣ ಉಳಿಸಿದರು. ಮುಖಂಡರಿಗೆ ವಿಷಯ ತಿಳಿದ  ತಕ್ಷಣ ಆಸ್ಪತ್ರೆಗೆ ಧಾವಿಸಿ ರೋಗಿಯ ಕಾಣಲು ಬಂದರು, ಆದರೆ ಚೇತರಿಕೆಗೆ ಸಮಯ ಬೇಕಾಗಿದ್ದರಿಂದ ವೈದ್ಯರು ಅವಕಾಶ ಕೊಡಲಿಲ್ಲ. ಆ ಯುವಕ ಒಂದು ವೇಳೆ ಇಲ್ಲಿಗೆ ಬಂದರೂ ಬರಬಹುದು ಎಂದು ಆಸ್ಪತ್ರೆಯ ಸುತ್ತಲೂ ತಮ್ಮ ಜನರನ್ನು ಕಾವಲಿಗೆ ಇರಿಸಿದ್ದರು. ರೋಗಿಯ ಹಿನ್ನೆಲೆ ಬಗ್ಗೆ ವಿಚಾರಿಸೊಣವೆಂದರೆ  ಅವರ ಬಗ್ಗೆ ಹೇಳುವವರು ಯಾರು ಇರಲಿಲ್ಲ. ದೂರದ ಊರಿನಿಂದ ಆಸ್ಪತ್ರೆಗೆ ಸೇರಿಸಿದ್ದರು. ಮೊದಮೊದಲಿಗೆ ಸ್ವಲ್ಪ ಜನ ಬರುತಿದ್ದರು, ಹಣದ ಅವಶ್ಯಕತೆ ಕಂಡುಬಂದಿದ್ದರಿಂದ ನಂತರ ಜನ ಬರುವುದೇ ಕಮ್ಮಿಯಾಗಿತ್ತು.  ಈ ಶಸ್ತ್ರ ಚಿಕಿತ್ಸೆ ಒಂದು ವೇಳೆ ನಡೆಯದೆ ಇದ್ದಿದ್ದರೆ ಈ ಮನುಷ್ಯ ಬದುಕುವುದು ಅಸಾಧ್ಯದ ಮಾತಾಗಿತ್ತು. ಅವರು ಚೇತರಿಸಿಕೊಂಡು ಮಾತನಾಡುವಂತಾದ ಮೇಲೆ ಮನೆಗೆ ಹೋದರಾಯಿತು ಎಂದು ಹೇಳಿ, ರಾತ್ರಿಯೆಲ್ಲ ಆಸ್ಪತ್ರೆಯಲ್ಲಿ ಕಾಯುತ್ತ ಕುಳಿತರು. ಮನದ ತುಂಬೆಲ್ಲ ದುಗುಡವೇ ಮನೆ ಮಾಡಿತ್ತು. ಮುಂದೆ ಎನಾಗುತ್ತೊ ಎನ್ನುವ ಆತಂಕ, ಇಷ್ಟು ದಿನ ಉಳಿಸಿಕೊಂಡು ಬಂದಿದ್ದ ಚರಿಶ್ಮಾ ನೀರಿನಲ್ಲಿ ಕೊಚ್ಚಿ ಹೋಗುತ್ತೊ ಎನ್ನುವ ಭಯ, ಯಾರ ಶಾಪವೋ ಏನೊ ನನ್ನ ಹೆಗಲಿಗೆ ಸುತ್ತು ಕೊಂಡಿದೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ತುಂಬಾ ದಣಿವು ಮತ್ತು ಬಳಲಿಕೆ ಕಂಡುಬಂದಿದ್ದರಿಂದ ಹಾಗೆ ಕುಳಿತಲ್ಲಿಯೇ ನಿದ್ರೆಗೆ ಜಾರಿದರು.
ತಡರಾತ್ರಿಯಲ್ಲಿ ಅವರ ಕಾಲಮೇಲೆ ಬಿಸಿ ಬಿಸಿ ನೀರ ಹನಿ ತೊಟ್ಟಿಕ್ಕಿದಂತಾಯಿತು. ತಟ್ಟನೆ ಎದ್ದು ನೋಡಿದರೆ ಕಾಲ ಬಳಿ ಕುಳಿತು ಯಾರೊ ಅಳುತಿದ್ದರು. ಅಳುವ ಸ್ಥಿತಿ ನೋಡಿ ಮನಸ್ಸು ಮಮ್ಮಲ ಮರುಗಿ, "ಅಯ್ಯೊ ಯಾರಪ್ಪ ನೀನು, ಯಾಕೆ ಅಳುತ್ತಾ ಇದ್ದೀಯ, ಬಾ ಕೂತ್ಕೊ, ಏನಾಯ್ತು?" ಎಂದು ಅವನ ಭುಜವನ್ನು ಹಿಡಿದು ತಲೆ ನೇವರಿಸಿದರು. ಮಬ್ಬು ಗತ್ತಲಿನಲ್ಲಿ ಮುಖಕಾಣಲಿಲ್ಲ. ಹಾಗೆ ದಿಟ್ಟಿಸಿ ನೋಡಿದರೆ, ಅದೇ ಯುವಕ, ತನ್ನನ್ನು ಆತಂಕಕ್ಕೀಡು ಮಾಡಿ, ಮಾನಸಿಕ ಹಿಂಸೆ ಕೊಟ್ಟವನು ಮುಂದೆ ಕುಳಿತಿದ್ದಾನೆ. ಆದರೆ ಅವನ ಪರಿಸ್ಥಿತಿ ನೋಡಿ ಅವರ ಕೋಪವೆಲ್ಲ ತಣ್ಣಗೆ ಆಗಿತ್ತು. ತಾಳ್ಮೆಯಿಂದ ಅವನತ್ತ "ಅಲ್ಲಯ್ಯ, ನನ್ನನ್ನು ಒಂದು ದಿನದ ಮಟ್ಟಿಗೆ ಉಸಿರು ಸಿಕ್ಕಿ ಹಾಕಿಕೊಂಡು ಒದ್ದಾಡುವ ಹಾಗೆ ಮಾಡಿ ಈಗ ಬಂದು ಅಳುತ್ತ ತಣ್ಣಗೆ ಕುಳಿತಿದ್ದೀಯಲ್ಲಾ ಏನು ಸಮಾಚಾರ" ಎಂದರು. ಅವನಿಗೆ ಮನಸ್ಸು ಭಾರವಾಗಿತ್ತು, ಮಾತನಾಡಲು ಮಾತುಗಳೆ ಹೊರಡುತ್ತಿರಲಿಲ್ಲ. ಆದರು ಸಾವರಿಸಿಕೊಂಡು "ಸಾರ್ ನನ್ನ ಕ್ಷಮಿಸಿ, ನನಗೆ ಬೇರೆ ದಾರಿಯಿರಲಿಲ್ಲ ನನ್ನ ತಂದೆ ಯನ್ನು ಉಳಿಸಿಕೊಳ್ಳುವುದಕ್ಕೆ, ಈ ತರಹ ಏನಾದರು ನಾನು ಅಡ್ಡದಾರಿ ಹಿಡಿಯಲೇ ಬೇಕಿತ್ತು, ಹಣವನ್ನು ಹೊಂದಿಸುವುದಕ್ಕೆ ತುಂಬಾ ಕಡೆ ಪ್ರಯತ್ನ ಪಟ್ಟೆ ಆದರೆ ಇಷ್ಟೊಂದು ಹಣ ಯಾರು ಕೊಡಲಿಲ್ಲ. ಆಮೇಲೆ ಮನಸ್ಸಿಗೆ ಬಂದದ್ದೆ ಈ ತರಹದ ಕೆಟ್ಟ ಯೋಚನೆಗಳೇ, ಮುಂಚೆಯಿಂದಲೂ ನಿಮ್ಮನ್ನು ನಾನು ನೋಡಿದ್ದರಿಂದ ನಿಮ್ಮನ್ನು ಸುಲಭವಾಗಿ ಬ್ಲಾಕ್ ಮೇಲ್ ಮಾಡಬಹುದು ಎಂದು ಈತರಹ ಮಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಸಾರ್" ಎಂದು ಗೋಗರೆದು ಅವರಿಗೆ ತನ್ನ ಪೆನ್ ಕ್ಯಾಮೆರ ಮತ್ತು ಫ಼್ಲಾಶ್ ಮೆಮೊರಿ ಕಾರ್ಡ್ ಅವರ ಕೈಗೆ ಕೊಟ್ಟನು. ವಸ್ತುಗಳು ಅವರ ಕೈಗೆ ಬಂದಾಗ ದುಗುಡ ತುಂಬಿದ್ದ ಮನಸ್ಸು ನಿರುಮ್ಮಳವಾಯಿತು. ಮತ್ತೆ ಸಮಾಧಾನ ದಿಂದ "ಅಲ್ಲ ಕಣಯ್ಯ, ನಿನ್ನ ಸಮಸ್ಯೆ ಈ ತರಹ ಇದೆ ಎಂದು ನನ್ನತ್ರ ಬಂದು ಹೇಳಿದ್ರೆ ನಾನು ಸಹಾಯ ಮಾಡ್ತ ಇದ್ದೆ.(ಮನಸ್ಸಿನೊಳಗೆ, ನಮ್ಮಪ್ಪನ ಆಣೆಯಾಗು ಇಷ್ಟೊಂದು ದುಡ್ಡನ್ನಂತೂ ನಾನು ಕೊಡುತ್ತಾಇರಲಿಲ್ಲ, ಇಂತಹ ಬ್ಲಾಕ್ಮ್ ಮೇಲ್ ನಿಂದಾನೆ ನಾನು ಬಗ್ಗಿದ್ದು ಎಂದು ಕೊಂಡರು). ಏನೆ ಆಗಲಿ ನಿನಗೆ ಅನುಭವ ಸಾಲದು ಕಣಯ್ಯ, ಇಂತಹ ಒಳ್ಳೆ ಅವಕಾಶವನ್ನು ಉಪಯೊಗಿಸಿಕೊಂಡು ಒಳ್ಳೆ ದುಡ್ಡಿಗೆ ಡಿಮ್ಯಾಂಡ್ ಮಾಡಬಹುದಾಗಿತ್ತು ಎಂದರು, ಆ ಯುವಕ ಅವರ ಮುಖ ವನ್ನೊಮ್ಮೆ ನೋಡಿ, ಅನ್ಯಾಯದ ದುಡ್ಡು ನನಗೆ ಬೇಡ ಸಾರ್, ನನ್ನ ಕಾಲೇಜ್  ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಸ್ವಂತ ಪರಿಶ್ರಮ ದಿಂದ ದುಡಿತೀನಿ (ಸ್ವಗತದಲ್ಲಿ, ಒಂದು ವೇಳೆ ಜಾಸ್ತಿ ದುಡ್ಡೇನಾದರು ತೆಗೆದು ಕೊಂಡಿದ್ದರೆ ಜೀವಂತವಾಗಿ ಇರೊದಿಕ್ಕೆ ಬಿಡುತಿದ್ದರಾ!!!), ಸಾರ್ ನನ್ನದೊಂದು ಸಲಹೆ, ನಿಮ್ಮ ಆಲೋಚನೆ ಗಳು ಸರಿಯಿಲ್ಲ, ಜನರ ಭಾವನೆ ಗಳ ಮೇಲೆ ರಾಜಕಾರಣ ಮಾಡೋದು ಸರಿಯಲ್ಲ. ಮತಕ್ಕಾಗಿ ನಮ್ಮನ್ನು ಬಳಸಿಕೊಂಡು ನಮ್ಮ ಹಿತ ಕಾಯದೆ ನಿಮ್ಮ ಹಿತ ಕಾಪಾಡಿಕೊಳ್ಳೊದು ಯಾವ ಸೀಮೆ ನ್ಯಾಯ ಸಾರ್? ನಿಮ್ಮ ಆತ್ಮ ಸಾಕ್ಷಿಯನ್ನು ಕೇಳಿಕೊಳ್ಳಿ ನೀವು ಮಾಡ್ತ ಇರೊದು ಸರೀನಾ ಅಂತ!. ಯಾವುದಾದರು ಒಂದು ಮೌಲ್ಯಕ್ಕೆ ಕಟ್ಟುಬಿದ್ದು ರಾಜಕಾರಣ ಮಾಡಿ, ಸೀಟ್ ಉಳಿಸಿಕೊಳ್ಳುವುದಕ್ಕೋಸ್ಕರ ವೋಟ್ ಗಾಗಿ ರಾಜಕಾರಣ ಮಾಡಬೇಡಿ, ಜನ ರಾಜಕಾರಣ ಅಂದ್ರೆ ಅಸಹ್ಯ ಪಡುತಿದ್ದಾರೆ. ಮುಂದೆ ದಿನ ಕಳೆದಂತೆಲ್ಲ ವೋಟ್ ಹಾಕುವುದಕ್ಕೆ ಜನಗಳು ಬರದೇ ಇರುವ ತರಹ ಪರಿಸ್ಥಿತಿ ನಿರ್ಮಾಣ ಆದರು ಆಗಬಹುದು. ದಯಮಾಡಿ ನಿಮಗೋಸ್ಕರ ಬದುಕಿದ್ದು ಸಾಕು ಜನಗಳಿಗೋಸ್ಕರ ಬದುಕುವುದನ್ನು ಪ್ರಯತ್ನ ಮಾಡಿ" ಎಂದು ಅನ್ನುತಿದ್ದಂತೆ, "ನೋಡು ಮರಿ ಇದು ಪ್ರತಿಯೊಬ್ಬ ರಾಜಕಾರಣಿಗಳಿಗೆ ಸಾಮಾನ್ಯದ ವಿಷಯ. ಒಮ್ಮೆ ಇತಿಹಾಸವನ್ನು ಅವಲೋಕಿಸಿ ನೋಡು, ಆಗಿನ ಕಾಲದಲ್ಲಿ ಬ್ರಿಟೀಷರು ಮಾಡಿದ್ದು ಏನು? ಇಂದು ಅಮೇರಿಕ, ಬ್ರಿಟನ್ ಮಾಡ್ತಾ ಇರೋದು ಏನು. ಈ ಕುರ್ಚಿಯಲ್ಲಿ ಕುಳಿತುಕೊಂಡ ಮೇಲೆ ಪ್ರತಿಯೊಬ್ಬ ರಾಜಕಾರಣಿ ಸಾಮನ್ಯವಾಗಿ ಮಾಡೋದು ಇದನ್ನೆ, ಮುಂದೆ ಮುಂದೆ ನಿನಗೆ ಅರ್ಥವಾಗುತ್ತೆ" ಮಾತು ನಿಲ್ಲಿಸಿದರು ,..............ಮತ್ತೆ ಗಾಬರಿಯಾಯಿತು, ಕ್ಯಾಮೆರ ಎನಾದರು ಇಟ್ಟುಕೊಂಡಿದ್ದಾನ ಎಂದು ಅವನಕಡೆ ಪರೀಕ್ಷಾರ್ಥಕವಾಗಿ ನೋಡಿ, "ಅದರ ಯೋಚನೆ ಬಿಡು. ನಿನ್ನ ತಂದೆ ಆರೊಗ್ಯ ಚೆನ್ನಾಗಿ ನೋಡಿಕೊ, ನಿನ್ನ ಓದಿನ ಬಗ್ಗೆ ಗಮನ ಕೊಡು. ನಾನು ಹೊರಡುತ್ತೀನಿ. ಏನಾದರು ಸಹಾಯ ಬೇಕಿದ್ರೆ ನನ್ನ ಹತ್ತಿರ ಬಾ ಎಂದು ಹೇಳಿ ನಾನು ಹೊರಡುತ್ತೀನಿ ಎಂದು ಹೊರಡಲು ಅನುವಾದರು. ಕೊನೆಯಲ್ಲಿ "ಅಂದ ಹಾಗೆ, ಸಿಡಿಗಳಲ್ಲಿ ಏನಾದರು ಕಾಪಿ ಮಾಡಿದ್ದಿಯಾ? ಎಂದು ಪ್ರಶ್ನಾರ್ಥಕವಾಗಿ ಅವನನ್ನೊಮ್ಮೆ ನೋಡಿದರು. ಅವನು ಇಲ್ಲವೆಂಬತೆ ತಲೆಯಾಡಿಸಿದ. ಆಯಿತು ಎಂದು ಹೊರಟು ಹೋದರು. ಅವರಿಗೆ ನಾನು ತಪ್ಪು ಮಾಡ್ತ ಇದ್ದೀನಿ ಅಂತ ಅನ್ನಿಸರಲೇ ಇಲ್ಲ, ಇದೆಲ್ಲ ರಾಜಕೀಯದಲ್ಲಿ ಸಾಮಾನ್ಯ ಅಂತ ಅನ್ನಿಸಿತ್ತು. ಅವರು ಹೋದದ್ದನ್ನು ದಿಟ್ಟಿಸಿ ನೋಡಿದ, "ನೀವು ಬದಲಾಗಲ್ಲ ಕಣ್ರೊ, ನಿಮಗೆ ಪಶ್ಚತಾಪ ಅನ್ನೋದೆ ಇಲ್ಲ ಅಂತ ಅನ್ನಿಸುತ್ತೆ, ನಿಮ್ಮಂತ ರಾಜಕೀಯ ವ್ಯಕ್ತಿಗಳ ಜೀವನ ಬರ್ಬಾದ್ ಆಗೊತನಕ ನಾನು ಸುಮ್ಮನಿರಲ್ಲ, ಮೊದಲು ನನ್ನ ತಂದೆ ಹುಷಾರಾಗಲಿ ಮುಂದೆ ನಿಮ್ಮಂತವರನ್ನು ನಾನು ನೋಡಿಕೊಳ್ಳುತ್ತಿನಿ" ಎಂದು ಜೇಬಿ ನೊಳಗೆ ಕೈ ಹಾಕಿ ತಡಕಾಡಿದ, ಅಲ್ಲೊಂದು ಕಾಪಿ ಮಾಡಿಕೊಂಡಿದ್ದ ಮೆಮೊರಿ ಚಿಪ್ ಇತ್ತು.

ನೀತಿ ಕಥೆ: ನಾನು ಯಾರು ಗೊತ್ತ, ಭೀಮ, ಬಲ ಭೀಮ

ಒಂದು ಊರಿನಲ್ಲಿ ಪ್ರಶಾಂತ ಎನ್ನುವ ಓರ್ವ ಯುವ ಬಸ್ ಕಂಡಕ್ಟರ್ ಇದ್ದ. ಅಂದು ಎಂದಿನಂತೆ, ತನ್ನ ಬಸ್ ಸಂಚಾರ ಶುರುವಾಯಿತು. ಪ್ರತಿ ಊರಿನಲ್ಲಿ ಜನರನ್ನು ಹತ್ತಿಸಿಕೊಂಡು ಅವರಿಗೆ ಟಿಕೆಟ್ ನೀಡಿ, ಹಣ ಪಡೆಯುತಿದ್ದ. ಒಂದು ಊರು ಬಂದಿತು, ಒಬ್ಬ ಪ್ರಯಾಣಿಕ, ಧೈತ್ಯ ದೇಹಿ, ಅಜಾನು ಬಾಹು, ಆರುವರೆ ಅಡಿ ಎತ್ತರದ ಮನುಷ್ಯ. ಅವನನ್ನು ನೋಡಿದರೆ ಎಂತಬ್ಬೊರಿಗೆ ಭಯವಾಗುತಿತ್ತು. ಅವನು ಸೀಟಿನಲ್ಲಿ ಆಸೀನನಾದ. ಟಿಕೆಟ್ ತಗೊಳ್ರಿ ಎಂದು ನಡುಕದಿಂದಲೆ ಅವನಿಗೆ ಪ್ರಶಾಂತ ಕೇಳಿದ, ಅದಕ್ಕೆ ಆ ಅಜಾನು ಬಾಹು
" ನಾನು ಯಾರು ಗೊತ್ತ, ಭೀಮ, ಬಲ ಭೀಮ, ನನಗೆ ಟಿಕೆಟ್ ತಗೊಂಡು ಅಭ್ಯಾಸ ಇಲ್ಲ, ತಗೊಳ್ಳೋದು ಇಲ್ಲ". ಅವನ ಆಕಾರಕ್ಕೆ ಭಯಬೀತ ನಾಗಿ ಪ್ರಶಾಂತ ಮರು ಮಾತಾಡದೆ ಸುಮ್ಮನಾಗಿಬಿಟ್ಟ.
ಮತ್ತೆ ಮರುದಿನ, ಎಂದಿನಂತೆ ಬಸ್ ಪ್ರಯಾಣ ಆರಂಭ ವಾಯಿತು. ಅಂದು ಸಹ ಅದೇ ಪ್ರಯಾಣಿಕ ಬಂದಿದ್ದ. ಟಿಕೆಟ್ ಎಂದು ಕೇಳಿದರೆ " ನಾನು ಭೀಮ ಬಲಭೀಮ" ಅನ್ನುತಿದ್ದ.
ಪ್ರಶಾಂತನಿಗೆ ಇದೊಂದು ತಲೆ ನೋವಾಯ್ತು, ತನ್ನ ದಿನನಿತ್ಯದ ಪ್ರಯಾಣ ಸೇವೆಯಲ್ಲಿ ನೂರಾರು ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣ ಪಡೆಯುತಿದ್ದ. ಆದರೆ ಈ ಗಿರಾಕಿ ಟಿಕೆಟ್ ಪಡೆಯದೆ ಸಂಚರಿಸಿ ಪ್ರಶಾಂತನಿಗೆ ತಲೆ ಬಿಸಿ ಮಾಡುತಿದ್ದ. ಯಾರತ್ರ ನಾದ್ರು ಹೇಳಿಕೊಂಡರೆ ನಗೆ ಪಾಟಲಿಗೆ ಈಡಾಗುತ್ತೀನಿ, ಯಾಕಿದ್ದಿತು ಸಹವಾಸ ಎಂದು ಕೊಂಡು ಸುಮ್ಮನಿರುತಿದ್ದ ಯಾಕೆಂದರೆ, ಸಣ್ಣಗೆ, ಕಡ್ಡಿಯಂತಿದ್ದ ಅವನ ದೇಹ ಭೀಮ ನ ಎದುರಿಗೆ ಹುಲು ಕಡ್ಡಿಯಂತೆ ಗೋಚರಿಸುತಿದ್ದ, ಅವನ ಜತೆ ಜಗಳ ಮಾಡಿ ದಕ್ಕಿಸಿ ಕೊಳ್ಳುವ ಸಾಮರ್ಥ್ಯ ಮತ್ತು ಮನೋ ಧೈರ್ಯ ಅವನಲ್ಲಿರಲಿಲ್ಲ. ಪ್ರತಿ ಬಾರಿ ಭೀಮನನ್ನು ನೋಡಿ, ಅವನನ್ನು ಎದುರಿಸಲಾರದೆ ಮಾನಸಿಕವಾಗಿ ಕುಗ್ಗಿ ಹೋಗುತಿದ್ದ. ಒಂದು ರೀತಿಯಲ್ಲಿ ಮಾನಸಿಕ ವ್ಯಾಧಿ ಅಂಟಿಕೊಂಡಿತು. ನಿದ್ರೆ ಅವನಿಂದ ದೂರ ಹೋಯಿತು, ನೆಮ್ಮದಿ ಹಾಳಾಯಿತು.
ಕೊನೆಗೊಮ್ಮೆ ನಿರ್ಧಾರ ಮಾಡಿ, ಒಂದು ತಿಂಗಳು ರಜಾ ಹಾಕಿ ಜಿಮ್ಗೆ ಹೋಗಿ ಕಸರತ್ತು ಮಾಡಿ  ಮತ್ತು ಚೆನ್ನಾಗಿ ತಿಂದುಂಡು ತನ್ನ ದೇಹ ವನ್ನು ಬೆಳೆಸಿಕೊಂಡ. ಒಂದೆರೆಡು ತಿಂಗಳಲ್ಲಿ ಸಂಪೂರ್ಣ ವಾಗಿ ಬದಲಾಗಿ ಹೋಗಿದ್ದ. ಭೀಮನಿಗೆ ಎದುರಾಗಿ ನಿಲ್ಲುವ ಸಾಮರ್ಥ್ಯ ಮತ್ತು ಧೈರ್ಯವನ್ನು ಸಂಪಾದಿಸಿದ್ದ. ಕನ್ನಡಿ ಯಲ್ಲಿ ತನ್ನನ್ನು ತಾನು ನೋಡಿಕೊಂಡು ಒಳೊಗೊಳಗೆ ಖುಷಿ ಪಟ್ಟು ಉಬ್ಬಿ ಹೋಗಿದ್ದ. ನಂತರ ಕೆಲಸಕ್ಕೆ ಹಾಜರಾಗಿ ಎಂದಿನಂತೆ ತನ್ನ ನಿತ್ಯ ಕರ್ತವ್ಯವನ್ನು ನಿಭಾಯಿಸತೊಡಗಿದ್ದ.
ಅಂದು ಅದೇ ಊರಿಗೆ ಭೀಮ ನನ್ನು ಎದುರಿಸಲು ಸನ್ನದ್ದನಾಗಿ ಹೊರಟ. ಎಂದಿನಂತೆ ಭೀಮ ಬಸ್ಸಿನಲ್ಲಿ ಕುಳಿತ.
"ಟಿಕೆಟ್ ತಗೋ" ಎಂದ ಪ್ರಶಾಂತ,
"ನಾನು ಭೀಮ, ಬಲ ಭೀಮ, ಟಿಕೆಟ್ ತಗೊಳಲ್ಲ" ಎಂದ ಭೀಮ
"ಯಾಕೆ, ಯಾಕೆ, ಯಾಕೆ ತಗೊಳಲ್ಲ" ಎಂದು ಏರು ದನಿಯಲ್ಲಿ ಪ್ರಶ್ನಿಸಿದ ಪ್ರಶಾಂತ.
ಭೀಮ ಅವನ ಏರು ದನಿಗೆ ವಿಚಲಿತನಾಗಿ, ಅವನನೊಮ್ಮೆ ಗುರಾಯಿಸಿ, ಜೇಬಿನಿಂದ ಪರ್ಸ್ ಅನ್ನುತೆಗೆಯುತ್ತ ಯಾಕೆಂದರೆ
"ನನ್ನ ಹತ್ತಿರ ಮಾಸಿಕ ಪಾಸ್ ಇದೆ" ಎನ್ನುತ್ತ ಅವನ ಮುಖದೆದುರು ಹಿಡಿದ. ಅದನ್ನು ನೋಡಿ ಪ್ರಶಾಂತ ತನಗೆ ತಾನು ಹಿಡಿ ಶಾಪ ಹಾಕಿಕೊಂಡ.

ನೀತಿ: ಸಮಸ್ಯೆ ಇದೆಯಂದು ಮೊದಲು ಖಚಿತ ಪಡಿಸಿಕೊಂಡು ನಂತರ ಬಗೆಹರಿಸಲು ಪ್ರಯತ್ನಿಸಿ. ಸುಮ್ಮನೆ ಸಮಸ್ಯೆ ಇದೆಯೆಂದು ನಮ್ಮಷ್ಟ ಕ್ಕೆ ನಾವು ಅಂದು ಕೊಂಡು ಕಷ್ಟ ಪಟ್ಟರೆ ಪ್ರಯೋಜನವಿಲ್ಲ.
ಸಂಗ್ರಹ ನೀತಿ ಕಥೆ.

Click below headings