ಶನಿವಾರ, ಜುಲೈ 15, 2023

*"ಕುಬೂಸ್" ಎನ್ನುವ ಅರೇಬಿಕ್ ಬ್ರೆಡ್ ಗಲ್ಫ್ ರಾಷ್ಟ್ರಗಳ "ಅನ್ನಭಾಗ್ಯ"*

 ಬಡವ ಬಲ್ಲಿದ ಎನ್ನದೆ ಹಸಿದ ಹೊಟ್ಟೆ ತುಂಬಿಸುವ  "ಕುಬೂಸ್"

 


ಮೂರು ಹೊತ್ತು ಕುಬೂಸ್ ತಿಂದು ಹಣ ಉಳಿಸಿ ಮನೆ ಕಟ್ಟಿಸಿದ ಎನ್ನುವ ಆಡು ಮಾತು ಗಲ್ಫ್ ರಾಷ್ಟ್ರಗಳಲ್ಲಿ ಚಾಲ್ತಿಯಿದೆ. ಏನಪ್ಪ ಇದು, ಕುಬುಸ್ ತಿಂದರೆ ಹಣ ಉಳಿಯುತ್ತಾ ಅಂತ ಯೋಚಿಸ್ತೀರ? ಹೌದು!!! ಮಧ್ಯಪ್ರಾಚ್ಯಗಳಲ್ಲಿ ಕುಬೂಸ್ ಅಥವ ಕುಪೂಸ್ ಎಂದು ಕರೆಯುವ ಅರೇಬಿಕ್ ರೊಟ್ಟಿ ಲಕ್ಷಾಂತರ ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೊಟ್ಟೆ ತುಂಬಿಸುವ ಅನೇಕ ಅರಬ್ ಮತ್ತು ಏಷ್ಯನ್ ನಾಗರಿಕರ ನೆಚ್ಚಿನ  ಧೈನಂಧಿನ ಆಹಾರ. ಒಂದೆರೆಡು ಬಾಳೆಹಣ್ಣು ಅಥವ ಬೇಳೆ ಸಾರು ಅಥವ ತರಕಾರಿ ಪಲ್ಯ ಅಥವ ಇನ್ಯಾವುದೋ ಸಾರಿನ ಜತೆ ಮೂರ್ನಾಲ್ಕು ಕುಬೂಸ್ ತಿಂದರೆ ದಿನಪೂರ್ತಿ ದುಡಿಯಲು ಶಕ್ತಿ ಸಿಗುವುದು ನಿಶ್ಚಿತ.

 ಗಲ್ಫ್ ರಾಷ್ಟ್ರಗಳಲ್ಲಿ ಕೈತುಂಬಾ ದುಡಿಯಬಹುದು ಎನ್ನುವ ಕಾರಣಕ್ಕೆ ಬಹಳಷ್ಟು ಜನರು ಉದ್ಯೋಗಕ್ಕಾಗಿ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಬರುತ್ತಾರೆ. ಕೇವಲ ಭಾರತ ಮಾತ್ರವಲ್ಲದೆ, ಪಾಕಿಸ್ತಾನ, ಬಾಂಗ್ಲಾದೇಶ್, ಫಿಲಿಫಿನ್ಸ್, ಅಫ್ಘಾನಿಸ್ತಾನ್, ಆಫ್ರಿಕಾ ದೇಶಗಳು ಇತ್ಯಾದಿ ದೇಶಗಳ ಕಡೆಯಿಂದ ಬಂದು ಒಂದಲ್ಲ ಒಂದು ಉದ್ಯೋಗ ಮಾಡುತ್ತಾರೆ. ಇಲ್ಲಿಗೆ ಬರುವ ಒಬ್ಬೊಬ್ಬರದು ಒಂದೊಂದು ಉದ್ದೇಶ, ಊರಿನಲ್ಲಿ ತಮ್ಮ ಮನೆಯವರ ಹೊಟ್ಟೆ ತುಂಬಿಸಲು, ಮನೆಯಲ್ಲಿನ ಸಹೋದರಿಯರು/ ಮಕ್ಕಳ ಮದುವೆಮಕ್ಕಳಿಗೆ ಶಿಕ್ಷಣ ಕೊಡಿಸಲು ಮತ್ತು ಸ್ವಂತಕ್ಕೊಂದು ಸೂರು ಹೀಗೆ ವಿವಿಧ ಕಾರಣ ಹೊತ್ತು ಇಲ್ಲಿಗೆ ಲಗ್ಗೆ ಇಡುವುದು ಸಾಮಾನ್ಯ ಸಂಗತಿ. ಊರಿನಲ್ಲಿ ತಿಂಗಳಿಗೆ ಹತ್ತುಸಾವಿರ ದುಡಿಯಲು ಸಾಧ್ಯವಾಗದವರು, ಇಲ್ಲಿಗೆ ಬಂದು ಇಪ್ಪತ್ತು, ಮೂವತ್ತು ಸಾವಿರಕ್ಕೂ ಹೆಚ್ಚು ದುಡಿಯುತ್ತಾರೆ.

 

ಇಷ್ಟು ದೂರ ಬಂದು, ಇಲ್ಲಿ ದುಡಿದ ಮೇಲೆ ಅನಗತ್ಯ ಖರ್ಚುಮಾಡಿದರೆ ಬಂದ ಉದ್ದೇಶ ಸಾರ್ಥಕವಾಗುವುದಿಲ್ಲವೆಂದು  ಹೆಚ್ಚು ಹೆಚ್ಚು ಉಳಿತಾಯ ಮಾಡಲು ಯೋಚಿಸುತ್ತಾರೆ. ಹೀಗಾಗಿ ಅತ್ಯಂತ ಕಡಿಮೆ ಖರ್ಚಿನ ಊಟ, ಅತಿ ಕಡಿಮೆ ದರದಲ್ಲಿ ದೊರೆಯುವ ವಸತಿ ಸೌಲಭ್ಯ, ಸಾರಿಗೆ ಸೌಲಭ್ಯ ಇತ್ಯಾದಿ, ಹೀಗೆ ವಿವಿಧ ಮಾರ್ಗಗಳನ್ನು ಕಂಡು ಕೊಳ್ಳುವುದು ಸಹಜ. "ಅವನು ಕುಬೂಸ್ ತಿಂದು ದುಡ್ಡು ಉಳಿಸುತ್ತಾನೆ" ಎಂದು ಕೆಲವರು ತಮಾಷೆಗಾಗಿ ಹೇಳುತ್ತಾರೆ, ಅದು ನಿಜ. ಹೆಚ್ಚಿನ ಹಣ ಮತ್ತು ಅಡುಗೆ ತಯಾರಿಸುವ ಸಮಯ ಉಳಿಸಲು ಈ ಕುಬೂಸ್ ನೆರವಾಗುತ್ತದೆ. ಹೋಟೇಲ್ ಗಳಲ್ಲಿ ಒಂದು ಚಪಾತಿಯ ಬೆಲೆ ಹತ್ತು ರುಪಾಯಿಂದ ಇಪ್ಪತ್ತು ರೂಪಾಯಿವರೆಗೆ ಇದ್ದರೆ, ಅದೇ ಹತ್ತುರೂಪಾಯಿಗೆ ಮೂರ್ನಾಲ್ಕು ಕುಬೂಸ್ ಗಳು ಸಿಗುತ್ತವೆ. ಅದಕ್ಕೆ ಜತೆಯಾಗಿ ಮನೆಯಿಂದ ಏನಾದರು ತರಕಾರಿ ಪಲ್ಯತಂದರೆ ಸಾಕು. ಅತ್ಯಂತ ಕಡಿಮೆ ಖರ್ಚಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ವಿಧಾನ ಇದು. ಒಂದೊತ್ತಿನ ಊಟಕ್ಕಾಗಿ ಸುಖಾ ಸುಮ್ಮನೆ ಜಾಸ್ತಿ ಹಣ ಏಕೆ ಖರ್ಚು ಮಾಡುವುದು ಎಂದು ಯೋಚಿಸುವ ಸಾವಿರಾರು ಬಡ ಕಾರ್ಮಿಕರು ಈ ಪದ್ದತಿಯನ್ನು ಅವಲಂಬಿಸಿದ್ದಾರೆ.

 

ತೆಳ್ಳನೆಯ ಮೃದುವಾದ ಲೆಬನೀಸ್ ಕುಬೂಸ್, ದಪ್ಪದಾದ ಬ್ರೆಡ್ ನಂತೆ ಇರುವ ಕುಬೂಸ್, ಗೋದಿಯಿಂದ ಮಾಡಿದ ತರಿತರಿಯಾಗಿರುವ ಕುಬೂಸ್ ಹೀಗೆ ವಿಧವಿಧದ ಕುಬೂಸ್ ಗಳು ಇಲ್ಲಿ ಲಭ್ಯವಿದೆ. ಚಪಾತಿ ಅಥವ ಪೂರಿಮಾಡುವ ರೀತಿಯಲ್ಲಿ  ಮೈದಾ ಅಥವ ಗೋಧಿ ಹಿಟ್ಟನ್ನು ಕಲೆಸಿ, ಚಪಾತಿಯಂತೆ ಉದ್ದಿ ಅದನ್ನು ಓವೆನ್ ನಲ್ಲಿ ಹದವಾಗಿ ಬೇಯಿಸುತ್ತಾರೆ. ಮಶಿನ್ ನಲ್ಲಿ ನಿಮಿಷಕ್ಕೆ ನೂರಾರು ಕುಬೂಸ್ ಗಳು ತಯಾರಾಗುತ್ತವೆ. ಇದಕ್ಕೆ ಬಳಸುವ ಪ್ರಿಸರ್ವೇಟೀವ್ಸ್ ನಿಂದ ಎರಡು ಮೂರು ದಿನಗಳವರೆಗೂ ಈ ಕುಬೂಸ್ ಗಳು ಹಾಳಾಗದೆ ಇರುತ್ತವೆ. ಮನೆಗೆ ಕೊಂಡೋಯ್ದ ಮೇಲೆ ಮತ್ತೊಮ್ಮೆ ಬಿಸಿ ಮಾಡುವ ಅಗತ್ಯವಿರುವುದಿಲ್ಲ. ನೇರವಾಗಿ ಯಾವುದಾದರು ಪಲ್ಯದ ಜತೆ ತಿನ್ನಬಹುದು. ಇವುಗಳನ್ನ ಪ್ಯಾಕೆಟ್ ಮಾಡಿ ಬೇಕರಿ, ಹೋಟೆಲ್, ರೆಸ್ಟಾರೆಂಟ್, ಕ್ಯಾಂಟೀನ್, ಮೆಸ್, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಹೀಗೆ ಎಲ್ಲಾ ಕಡೆ ಸರಬರಾಜು ಮಾಡುತ್ತಾರೆ. ಬಹಳಷ್ಟು ಕಡೆ ಚಪಾತಿ ಸಿಗದಿದ್ದರೂ, ಐದಾರು ಕುಬೂಸ್ ಗಳಿರುವ ಪ್ಯಾಕೆಟ್ ಎಲ್ಲಾ ಕಡೆಗಳಲ್ಲಿ ಲಭ್ಯವಿರುತ್ತದೆ. ಕುಬೂಸ್ ಪ್ಯಾಕೆಟ್ ಮೇಲೆ ತಯಾರಾದ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ನಮೂದು ಮಾಡಿ ಮಾರಾಟ ಮಾಡುವುದು ಕಡ್ಡಾಯ.  ಎಕ್ಸ್ಪೈರಿ ದಿನಾಂಕದೊಳಗೆ ಬಿಕರಿಯಾಗದ ಪ್ಯಾಕೆಟ್ ಗಳನ್ನು ಮಾರುವಂತಿಲ್ಲ ಹೀಗಾಗಿ ಮಿಕ್ಕುಳಿದ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆಯಾ ಕಂಪನಿಗಳಿಗೆ ಮರಳಿಸುತ್ತಾರೆ.

 

ಇನ್ನು, ಅಫ್ಘನಿಸ್ತಾನಿಗಳು, ಪಾಕಿಸ್ತಾನಿಗಳು, ಇರಾನಿಗಳು ನಡೆಸುವ ಮ್ಯಾನುಯಲ್ ಬೇಕರಿಯಲ್ಲಿ ತಯಾರಿಸಲ್ಪಡುವ ತಂದೂರಿ ರೊಟ್ಟಿಗಳು ಸಹ ಇಲ್ಲಿ ಬಹಳ ಪ್ರಸಿದ್ದ. ಗಾತ್ರದಲ್ಲಿ ಚಪಾತಿಯ ಎರಡು ಅಥವ ಮೂರರಷ್ಟಿರುವ ಈ ರೊಟ್ಟಿಗಳು ಸಹ ಅತಿ ಕಡಿಮೆ ದರದಲ್ಲಿ ದೊರೆಯುತ್ತವೆ. ಈ ತಂದೂರಿ ರೊಟ್ಟಿಗಳು ಸಂಜೆಯ ವೇಳೆಯಲ್ಲಿ ಮಾತ್ರ ತಯಾರಿಸಲ್ಪಡುತ್ತವೆ. ಕೊಲ್ಲಿ ರಾಷ್ಟ್ರಗಳಲ್ಲಿ ಕುಬೂಸ್ ಪ್ರಸಿದ್ದವಾದರೆ, ಈಜಿಪ್ಟ್‌ ಮತ್ತು ಇರಾನಿನಲ್ಲಿ "ಪಾಕೆಟ್" ಪಿಟಾ ಬ್ರೆಡ್ ಮತ್ತು ಇರಾಕ್‌ನಲ್ಲಿ ಫ್ಲಾಟ್ ತನ್ನೂರ್ ಬ್ರೆಡ್ ಎಂದು ಕರೆಯಲ್ಪಡುತ್ತವೆ.

 ಕೆಲ ಕಾಫೀ ಶಾಪ್ ಗಳಲ್ಲಿ ಈ ಕುಬೂಸ್ ಅನ್ನು ಉಪಯೋಗಿಸಿ, ವೆಜಿಟೇಬಲ್, ಪಲಾಫಿಲ್, ಚಿಕನ್ ಶವರ್ಮ , ಮೊಟ್ಟೆ ಇತ್ಯಾದಿ ವಿಧದಲ್ಲಿ ಸ್ಯಾಂಡ್ ವಿಚ್ ತಯಾರಿಸಿಕೊಡುತ್ತಾರೆ.  ಕಡಿಮೆ ಬೆಲೆಯಲ್ಲಿ, ಅತಿ ಬೇಗನೇ ತಯಾರಿಸಿಕೊಡುವ ಈ ಸ್ಯಾಂಡ್ ವಿಚ್, ಬೆಳಿಗ್ಗೆ ಮನೆಯಲ್ಲಿ ತಿಂಡಿ ಮಾಡಿಕೊಳ್ಳಲು ಆಗದೆ ಇರುವವರಿಗೆ ಹಾಗೂ ಹೊರಡುವ ಗಡಿಬಿಡಿಯಲ್ಲಿರುವವರಿಗೆ ಒಂದು ವರದಾನ. ನಗರ ಪ್ರದೇಶದಿಂದ ದೂರವಿರುವ ಗುಡ್ಡಗಾಡು, ಮರುಭೂಮಿಗಳಲ್ಲಿ ವಾಸಿಸುವ ಬಡ ಬದ್ದುಗಳು(ಬೆದೋಯಿನ್ಸ್) ಸಹ ಈ ಕುಬೂಸ್ ಅನ್ನು ಇಷ್ಟ ಪಡುತ್ತಾರೆ. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಪ್ರಿಯವಾದ ರೊಟ್ಟಿ ಈ ಕುಬೂಸ್. ಕೆಲ ಪಂಚತಾರ ಹೊಟೇಲ್ ಗಳ ಬಫೆಯಲ್ಲೂ ಈ ಕುಬೂಸ್ ದೊರಕುತ್ತದೆ.

 

ಬಹುತೇಕ ಅರಬ್ ರಾಷ್ಟ್ರಗಳಲ್ಲಿ 'ಕುಬೂಸ್' ಪ್ರಧಾನ ಆಹಾರವಾಗಿದೆ. ತಮ್ಮ ದೇಶದಲ್ಲಿ ಒಬ್ಬ ಬಡಪಾಯಿಯೂ ಹೊಟ್ಟೆ ಹಸಿವಿನಿಂದ ನರಳಬಾರದು ಎನ್ನುವ ಉದ್ದೇಶದಿಂದ ಇಲ್ಲಿನ ಸರ್ಕಾರಗಳು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವಂತಹ ವ್ಯವಸ್ಥೆ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಒಂದೇ ಬೆಲೆಯಿರುವುದು ಇಲ್ಲಿನ ವಿಶೇಷ. ಸರ್ಕಾರಗಳು ಬೆಲೆ ನಿಯಂತ್ರಣದ ಮಾಡುವುದಲ್ಲದೆ, ಬೆಲೆ ಏರಿಕೆ ಬಗ್ಗೆ ಮತ್ತು ತೂಕದ ಬಗ್ಗೆಯೂ ನಿಗಾವಹಿಸುತ್ತಾರೆ.  ಬಹುತೇಕ ಎಲ್ಲಾ ದೇಶಗಳಲ್ಲಿ, ಅಲ್ಲಿನ ಫ್ಲೋರ್ ಮಿಲ್ ಗಳು ಮತ್ತು ದೊಡ್ಡ ದೊಡ್ಡ ಬೇಕರಿಗಳು ಈ ಕುಬೂಸ್ ಅನ್ನು ತಯಾರಿಸುತ್ತವೆ. ಈ ಸಂಸ್ಥೆಗಳಿಗೆ ಲಕ್ಷಾಂತರ ರಿಯಾಲ್ ಗಳ ಸಬ್ಸಿಡಿ, ಅನುದಾನವನ್ನು ಸರಕಾರಗಳು ನೀಡುತ್ತವೆ ಮತ್ತು ಅತಿ ಕಡಿಮೆದರದಲ್ಲಿ ಗೋಧಿ ಹಿಟ್ಟನ್ನು ಪೂರೈಸಲಾಗುತ್ತದೆ. ಆಹಾರ ಭದ್ರತೆಯ ಒಂದು ಒಳ್ಳೆಯ ಉದ್ದೇಶದಿಂದ ಈ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ. ಇಂತಹ ವಿಧಾನವನ್ನು ಭಾರತದಲ್ಲೂ ಸಹ ಜಾರಿಗೆ ತಂದರೆ, ಬಡ ಕೂಲಿ ಕಾರ್ಮಿಕರು, ನಿರ್ಗತಿಕರು, ಅಸಹಾಯಕರಿಗೆ ಬಹಳಷ್ಟು ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಇಲ್ಲಿ ಕಷ್ಟಪಟ್ಟು ದುಡಿಯುವ ಒಬ್ಬ ಅನಿವಾಸಿ ಒಂದೆರೆಡು ವರ್ಷಕ್ಕೊಮ್ಮೆ ಊರಿಗೆ ಹೋದಾಗ, ಅವನ ಆಗಮನ ಮನೆಯವರಲ್ಲದೆ ಸ್ನೇಹಿತರಲ್ಲೂ ಬಹಳಷ್ಟು ನಿರೀಕ್ಷೆ ಇರುತ್ತದೆ.  ಸಾವಿರಾರು ರೂಪಾಯಿ ಹಣಗಳಿಸುತ್ತಾನೆ ಎಂದು ಯೋಚಿಸುತ್ತಾರೆ ವಿನಹ ಇಲ್ಲಿ ಹೇಗೆ ದುಡಿಯುತ್ತಾರೆ? ಎಷ್ಟು ಕಷ್ಟ ಪಡುತ್ತಾರೆ ಎನ್ನುವ ಮಾಹಿತಿಯಿರುವುದಿಲ್ಲ. ಬಂಧು ಬಳಗ, ಸ್ನೇಹಿತರು ಇಲ್ಲದ ದೂರದೂರಿಗೆ ಬಂದು ದುಡಿಮೆಯ ಪ್ರತಿ ರುಪಾಯಿ ಗಳಿಕೆಯ ಹಿಂದೆ ಒಂದೊಂದು ಕಥೆಯಿರುತ್ತದೆ. ಅತಿ ಕಡಿಮೆ ಸಂಭಳಕ್ಕೆ ಕೆಲಸ ಮಾಡುವ ಕಾರ್ಮಿಕರ ಕಥೆಗಳು ಮನಸ್ಸನ್ನು ಭಾರಗೊಳಿಸುತ್ತವೆ. ಕೆಲವು ಕಡೆ ಒಂದೇ ಕೋಣೆಯಲ್ಲಿ ಏಳೆಂಟು ಕಾರ್ಮಿಕರು ಹಂಚಿಕೊಂಡು ವಾಸಿಸುವುದು ಸಾಮಾನ್ಯ. ಕೆಲಸ ಮಾಡುವ ಕಂಪನಿ, ದೊಡ್ಡದಾಗಿದ್ದರೆ ಸೌಲಭ್ಯಗಳು ಪರವಾಯಿಲ್ಲ. ಚಿಕ್ಕ ಪುಟ್ಟ ಕಂಪನಿಗಳಾದರೆ, ಅಲ್ಲಿನ ವ್ಯವಸ್ಥೆಗಳು ಅಷ್ಟಕ್ಕಷ್ಟೆ.  ಮೂರು ಹೊತ್ತು ಒಳ್ಳೆಯ ಊಟ ತಿನ್ನದೆ ತನ್ನವರಿಗಾಗಿ ತಾಯ್ನಾಡನ್ನು ಬಿಟ್ಟು ದೂರದೂರದಲ್ಲಿ ದುಡಿಯುವ ಅನಿವಾಸಿಗಳ ಕರುಣಾಜನಕ ಕಥೆಗಳು ಬಹಳಷ್ಟಿವೆ, ಅವುಗಳ ಬಗ್ಗೆ ಬರೆದರೆ ಒಂದು ಕಾದಂಬರಿಯಾಗಬಹುದು. 

ಪಿ.ಎಸ್.ರಂಗನಾಥ

ಮಸ್ಕತ್-ಒಮಾನ್ ರಾಷ್ಟ್ರ

ಬುಧವಾರ, ಜುಲೈ 12, 2023

ಕಲ್ಲಣೆ ಹೋಗಿ ಕಲ್ಯಾಣಿ ಆಯ್ತು

ನೀರು ಇಲ್ಲದೆ ನಮ್ಮ ಬದುಕು ಇಲ್ಲ, ಮಾನವನ ನಾಗರೀಕತೆ ಬೆಳೆದಿದ್ದೇ ನೀರಿರುವ ಸ್ಥಳಗಳಲ್ಲಿ. ಮನುಷ್ಯನ ಬದುಕು ಅರಳಿದ್ದೇ ಈ ನೀರಿನ ಸೆಲೆಗಳಲ್ಲಿ ಎನ್ನುವುದು ಕಟು ಸತ್ಯ. ಶತ ಶತಮಾನಗಳ ಹಿಂದೆ ನಮ್ಮ ಪೂರ್ವಜರು  ನೀರಿನ ಸಂಗ್ರಹಣೆಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸುತ್ತ ಬಂದರು. ಗ್ರಾಮೀಣ ಪ್ರದೇಶಗಳಲ್ಲಿ ಧೈನಂದಿನ ಬಳಕೆಗಾಗಿ ಅಂದು ನಿರ್ಮಿಸಿದ ನೀರಿನ ಹೊಂಡ ಅಥವ ಕೊಳಗಳು ಇಂದಿಗೂ ಮೂಲಸ್ವರೂಪದಲ್ಲಿ ಇರುವುದನ್ನು ನಾವು ಕಾಣುತಿದ್ದೇವೆ.  ಮಳೆ ನೀರು ಅಥವ ಭೂಮಿಯಿಂದ ಬಸಿಯುವ ನೀರು ಈ ಹೊಂಡಗಳಲ್ಲಿ ಸಂಗ್ರಹವಾಗುತಿತ್ತು. ಬಯಲು ಸೀಮೆಯಲ್ಲಿನ ಊರುಗಳಲ್ಲಿ ಅದರಲ್ಲೂ ನದಿ, ಹಳ್ಳ, ಕೆರೆಗಳು ಇರದೆ ಇರುವ ಊರಿನಲ್ಲಿನ ಈ ಕೊಳದ ನೀರು ಬಹಳಷ್ಟು ಉಪಯೋಗವಾಗುತಿತ್ತು. ಅಲ್ಲದೇ ಹಳ್ಳ, ಕೆರೆಗಳು ಊರಿನಿಂದ ದೂರವಿರುತಿದ್ದರಿಂದ, ಜನರ ಧೈನಂದಿನ ನೀರಿನ ಅಗತ್ಯತೆ ಕಂಡು ಅಂದಿನ ಆಡಳಿತಗಾರರು ಊರಿನೊಳಗೆ ಕೊಳಗಳನ್ನು ನಿರ್ಮಿಸುತಿದ್ದರು. ನೀರಿದ್ದರೆ, ಊರು ಕೇರಿ ಬೆಳೆಯಲು ಸಾಧ್ಯ. ಹಾಗಾಗಿ ಊರಿನ ಜನರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ದೊಡ್ಡದಾದ ಹೊಂಡ ನಿರ್ಮಿಸಿ ಅದರ  ಸುತ್ತಲೂ ಇರುವ ಮಣ್ಣಿನ ಗೋಡೆಯು ಕುಸಿದು ಹೋಗಬಾರದು ಎಂದು ಕಲ್ಲುಗಳನ್ನು ಜೋಡಿಸಿ ಹಾಗೂ ಮೆಟ್ಟಿಲುಗಳನ್ನಿಟ್ಟು ನೋಡಲು ಸುಂದರವಾಗಿ ಆಕರ್ಷಕವಾಗಿರುವಂತೆ ಕಟ್ಟುತಿದ್ದರು. ಈ ನೀರಿನ ಕೊಳಗಳನ್ನು "ಕಲ್ಯಾಣಿ" ಎಂದು ಜನರು ಕರೆಯುತಿದ್ದರು. ರಾಜ್ಯದ ಹಲೆವೆಡೆ ಸುಂದರವಾದ ಕಲ್ಯಾಣಿಗಳನ್ನು ಇಂದೂ ಸಹ ಕಾಣಬಹುದು. ಜನರು ಈ ಮೆಟ್ಟಿಲುಗಳ ಮುಖಾಂತರ ಕಲ್ಯಾಣಿಯೊಳಗೆ ಇಳಿದು ನೀರು ತುಂಬಿಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಬೇಸಿಗೆ ಕಾಲದಲ್ಲಿ ಈ ಕಲ್ಯಾಣಿಗಳು ಜನರಿಗೆ ಬಹಳಷ್ಟು ಉಪಯುಕ್ತವಾಗಿದ್ದವು. ಕೆಲವು ದೇವಸ್ಥಾನಗಳಲ್ಲಿ ಈ ಕಲ್ಯಾಣಿಗಳನ್ನು ನಾವು ಇಂದಿಗೂ ಕಾಣುತ್ತೇವೆ. ಕೆಲೆವೆಡೆ ಪುಷ್ಕರಣಿ, ತೀರ್ಥ ಎನ್ನುವ ಹೆಸರಿನಲ್ಲಿ ಕರೆಯುತ್ತಾರೆ.

 ಈ ನೀರಿನ ಕೊಳಕ್ಕೆ ಕಲ್ಯಾಣಿ ಎನ್ನುವ ಹೆಸರು ಹೇಗೆ ಸೂಕ್ತ ಎಂದು ಯೋಚಿಸುತ್ತಿರುವಾಗ, ಕಲ್ಯಾಣಿ ಶಬ್ದವು "ಕಲ್ಲು" ಮತ್ತು "ಅಣೆ" ಎರಡು ಪದಗಳಿಂದ ಯಾಕೆ ರೂಪುಗೊಂಡಿರಬಾರದು ಎನ್ನು ಆಲೋಚನೆ ಬಂತು. ಯಾಕೆಂದರೆ "ಅಣೆ" ಶಬ್ದದ ಅರ್ಥ ಒಡ್ಡು ಅಥವ ಅಡ್ಡಗಟ್ಟುವುದು. ಅಣೆಕಟ್ಟು ಅಂದರೆ ನೀರಿನ ಹರಿವಿಗೆ ಅಡ್ಡಲಾಗಿ ಹಾಕಿದ ಕಟ್ಟೆ. ಆದ್ದರಿಂದ ಕಲ್ಲುಗಳನ್ನು ಹಾಕಿ ಒಡ್ಡು ಕಟ್ಟಿರುವುದರಿಂದ  ಕಲ್ಲ್+ಅಣೆ= ಕಲ್ಲಣೆಯಾಗಿರಬಹುದು ಎಂದು ಅನಿಸಿತು. ಕಾಲಾನಂತರದಲ್ಲಿ ಜನರ ಆಡುಮಾತಿನಲ್ಲಿ ಕಲ್ಯಾಣಿಯಾಗಿ ಬದಲಾವಣೆಯಾಗಿರುವ ಸಾಧ್ಯತೆಯೂ ಬಲವಾಗಿ ಕಂಡುಬಂತು.

 

ಉತ್ತರ ಮತ್ತು ಮಧ್ಯ ಕರ್ನಾಟಕದ ಗ್ರಾಮೀಣ ಜನತೆ ಹಳ್ಳಿಗಳಲ್ಲಿ ಬಹಳಷ್ಟು ಶಬ್ದಗಳನ್ನು ಮೂಲ ಉಚ್ಚಾರಣೆಯಿಂದ ಭಿನ್ನವಾಗಿ ಬಳಕೆ ಮಾಡುತ್ತಿರುವುದನ್ನು ಗಮನಿಸಬಹುದು. ಉದಾಹರಣೆಗೆ ಬೇಸಾಯ - ಬ್ಯಾಸಾಯ, ಬೇಡ - ಬ್ಯಾಡ, ಬೇಸರ - ಬ್ಯಾಸರ ಎಂದು ಉಪಯೋಗಿಸುತ್ತಾರೆ. ಇಂತಹ ಹಲವಾರು ಶಬ್ದಗಳನ್ನು ನಾವು ಉದಾಹರಿಸಬಹುದು. ಪ್ರತಿ ನೂರಾರು ಕಿ.ಮಿ.ಗೆ ಮಾತನಾಡುವ ಭಾಷೆಯ ಶೈಲಿ, ಆಹಾರ ಪದ್ದತಿ ಹೇಗೆ ಬದಲಾಗುತ್ತವೋ ಹಾಗೆಯೇ ಕೆಲವು ಶಬ್ದಗಳು ಸಹ ಬದಲಾಗುವುದು ಸಾಮಾನ್ಯ. ಇನ್ನು ಹೊರಗಿನವರ ಪ್ರಭಾವ ದಿಂದಲೂ ಸಹ ಕ್ರಮೇಣ ಬದಲಾಗುವುದನ್ನ ಕಂಡಿದ್ದೇವೆ. ಬೆಂಗಳೂರನ್ನು ಆಂಗ್ಲರು ತಮ್ಮ ಉಚ್ಚಾರಣೆಯಲ್ಲಿ ಬ್ಯಾಂಗಲೋರ್ ಎಂದು ಬದಲಾಯಿಸಿದ್ದಲ್ಲದೆ, ಹೊರರಾಜ್ಯದವರು ಸಹ ಇಂದಿಗೂ ಬ್ಯಾಂಗಲೋರ್ ಎಂದು ಕರೆಯುವುದನ್ನ ಕಾಣುತಿದ್ದೇವೆ. ಅದೇ ರಿತಿ ಬಹಳಷ್ಟು ಜನರು ಚಿಕ್ಕಮಗಳೂರನ್ನು, ಚಿಕ್ಕಮಂಗಳೂರು ಎಂದೇ ಕರೆಯುತ್ತಾರೆ. ಮಂಗಳೂರಿನಲ್ಲಿ ಹಂಪನಕಟ್ಟೆ ಎನ್ನುವ ಪ್ರದೇಶವಿದೆ. ಶತಮಾನದ ಹಿಂದೆ ಇದಕ್ಕೆ ಅಪ್ಪಣ್ಣ ಕಟ್ಟೆ ಎನ್ನುವ ಹೆಸರಿತ್ತಂತೆ. ಅಲ್ಲಿನ ಸ್ಥಳೀಯರಾದ ಅಪ್ಪಣ್ಣ ಎನ್ನುವವರು ಅಲ್ಲಿನ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನಗರಕ್ಕೆ ಬಂದ ಜನರಿಗೆ ನೀರನ್ನು ಕೊಡುತಿದ್ದರಂತೆ. ಹಾಗಾಗಿ ಆ ಕಟ್ಟೆಗೆ ಅಪ್ಪಣ್ಣ ಕಟ್ಟೆ ಎನ್ನುವ ಹೆಸರು ಇತ್ತು, ಆದರೆ ವರ್ಷಗಳು ಉರುಳಿದಂತೆ, ತಲೆಮಾರುಗಳು ಬದಲಾದಂತೆ ಅಪ್ಪಣ್ಣಕಟ್ಟೆಯಾಗಿದ್ದ ಪ್ರದೇಶ ಹಂಪನಕಟ್ಟೆ ಎಂದು ಬದಲಾಗಿದೆ. ಕರುನಾಡು, ಕರ್ಣಾಟ, ಕರ್ನಾಟಕ ಆಗಿ ಬದಲಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ, ಶತಶತಮಾನಗಳ ಹಿಂದಿದ್ದ ಕೆಲ ಶಬ್ದಗಳು ಜನರು ಬಳಸುತ್ತ ಇಂದು ಅದರ ಮೂಲ ಸ್ವರೂಪದಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇದೆ.

 

ಜನರಿಗೆ ಧೈನಂದಿನ ಉಪಯೋಗಕ್ಕೆ ಅನುಕೂಲಕರವಾಗಲಿ ಎನ್ನುವ ಉದ್ದೇಶದಿಂದ ಅಂದಿನ ರಾಜಮಹಾರಾಜರು, ಪಾಳೇಗಾರರು ಈ ಕಲ್ಯಾಣಿಗಳನ್ನು ಕಟ್ಟಿಸುತಿದ್ದರು, ಒಂದರ್ಥದಲ್ಲಿ ಜನಕಲ್ಯಾಣಕ್ಕೆ ಉಪಯೋಗವಾಗಿದ್ದರಿಂದ ಕಲ್ಯಾಣಿ ಎಂದು ಹೆಸರಿಟ್ಟಿರುವ ಸಾಧ್ಯತೆಯನ್ನು ಸಹ ಅಲ್ಲಗಳೆಯಲಾಗದು. ಗಿರಿಜೆ, ಪಾರ್ವತಿ, ಜಗನ್ಮಾತೆಯ ಇನ್ನೊಂದು ಹೆಸರೇ ಕಲ್ಯಾಣಿ, ಸಾಮಾನ್ಯವಾಗಿ ನದಿಗಳಿಗೆ ಹೆಣ್ಣಿನ ಹೆಸರನ್ನು ಇಡುತ್ತಾರೆ, ಆದರೆ ನದಿಗೆ ಮತ್ತು ಕೆರೆಗೆ ಹೋಲಿಸಿದರೆ ಚಿಕ್ಕದಾದ ನೀರಿನ ಕೊಳಕ್ಕೆ ದೇವಿಯ ಹೆಸರನ್ನು ಇಟ್ಟಿರುವ ಸಾಧ್ಯತೆಯಿಲ್ಲ. ಹೀಗಾಗಿ ಜನರ ಆಡುಮಾತಿನಿಂದ ಕಲ್ಲಣೆ ಕಲ್ಯಾಣಿಯಾಗಿದೆ ಎಂದು ಹೇಳಬಹುದು.

 ಬರಹ:- ಪಿ.ಎಸ್.ರಂಗನಾಥಮಸ್ಕತ್

 



#Oman #Kannada #Karnataka #kannadiga #Dubai #gulf #Dolphin #Muscat #bengaluru

*ಕೊಲ್ಲಿ ರಾಷ್ಟ್ರಗಳಲ್ಲಿ ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೂ ಬೇಸಿಗೆ!!!*


ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಬೇಸಿಗೆಯ ಸಮಯ. ಮೇ ತಿಂಗಳ ಮೊದಲ ವಾರದಿಂದ ಏರಿಕೆಯಾದ ತಾಪಮಾನ ಸೆಪ್ಟೆಂಬರ್ ವರೆಗೂ ಇಳಿಯುವುದೇ ಇಲ್ಲ. ಜಾಗತಿಕ ಹವಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮವೋ ಗೊತ್ತಿಲ್ಲ, ಈ ಬಾರಿ ಮಾತ್ರ ಭಯಂಕರ ಬಿಸಿಲು.  ಮನೆಯಲ್ಲಿರುವ ಏಸಿಗಳು ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಬಿಸಿಲಿನ ಝಳವಿದೆ.

ಈ ಬಿಸಿಲಿನಿಂದ ಪಾರಾಗಲು ಏಸಿಯ ಮೊರೆ ಹೋಗಲೇ ಬೇಕು, ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ನಾಲ್ಕೈದು ಏಸಿಗಳು ಇರುತ್ತವೆ. ಕಾರ್, ಬಸ್, ಅಂಗಡಿ, ಮಾಲ್ ಗಳು, ರೆಸ್ಟೋರೆಂಟ್ ಗಳು ಎಲ್ಲಿಯೇ ಹೋದರು ಏಸಿ ಖಂಡಿತ ಇರುತ್ತದೆ. ಬೇಸಿಗೆಯಲ್ಲಿ ಏಸಿ ಇಲ್ಲದೆ ಇಲ್ಲಿ ಕೆಲಸಮಾಡಲು ಸಾಧ್ಯವೇ ಇಲ್ಲ. ಆರೇಳು ತಿಂಗಳುಗಳ ಕಾಲ ಏಸಿಯಿಂದ  ಬರುವ ತಂಪಾದ ಗಾಳಿಯೊಂದಿಗೆ ಜೀವನ ನಡೆಸಲೇ ಬೇಕು.

ಭಾರತದಲ್ಲಿ ಬಹಳಷ್ಟು ಜನರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಎಷ್ಟು ಬಿಸಿಲು ಇರುತ್ತೆ? ಅದು ಎಷ್ಟು ತಿಂಗಳುಗಳವರೆಗೂ ಇರುತ್ತೆ, ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಯಾವಾಗ ಪ್ರಾರಂಭ ಎಂದು ಗೊತ್ತಿರುವುದಿಲ್ಲ. ಇಲ್ಲಿರುವುದು ಎರಡೇ ಕಾಲ ಎಂದರೆ ನಂಬ್ತೀರಾ? ಖಂಡಿತಾ ಇಲ್ಲ.

ಅದು ಹೇಗೆ ಸಾಧ್ಯ, ಆಂಗ್ಲರ ಪದ್ಧತಿಯ ಪ್ರಕಾರ ನಾಲ್ಕು ಕಾಲಗಳು ಇರಬೇಕಲ್ಲವೇ? ಎಂದು ನಮ್ಮ ಮೆದುಳು ನಾಲ್ಕು ಕಾಲಗಳ ಬಗ್ಗೆ ಯೋಚಿಸಲಾರಂಬಿಸುತ್ತದೆ. 1) ಸ್ಪ್ರಿಂಗ್ (spring) ಅಥವಾ ವಸಂತ, 2) ಸಮ್ಮರ್ (summer) ಅಥವಾ ಬೇಸಿಗೆ ಕಾಲ, 3) ಆಟಂ (autumn) ಅಥವಾ ಶರದೃತು ಹಾಗೂ 4) ವಿಂಟರ್ (winter) ಅಥವಾ ಚಳಿಗಾಲ. ವಾಸ್ತವವಾಗಿ, ಈ ಗಲ್ಫ್ ರಾಷ್ಟ್ರಗಳಲ್ಲಿ ಇರುವುದು ಒಂದು ಬೇಸಿಗೆ ಕಾಲ ಮತ್ತೊಂದು ಚಳಿಗಾಲ. ಇಲ್ಲಿ ಮಳೆಗಾಲ ಇಲ್ಲವೇ ಇಲ್ಲ.

 

ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲ ಮುಗಿದ ನಂತರ ಮುಂಗಾರು ಶುರುವಾಗುತ್ತದೆ ಮುಂಗಾರು ಮುಗಿದ ನಂತರ ಚಳಿಗಾಲ ನಂತರ ಬೇಸಿಗೆ ಕಾಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಚಳಿಗಾಲದ ನಂತರ ಬೇಸಿಗೆ ಪ್ರಾರಂಭವಾದರೆ, ಅದು ಕೊನೆಗೊಳ್ಳುವುದು ಮತ್ತೊಮ್ಮೆ ಚಳಿಗಾಲ ಪ್ರಾರಂಭವಾಗುವವರೆಗೆ. ಅಂದರೆ ಇಲ್ಲಿ ಮುಂಗಾರು ಇಲ್ಲವೇ ಇಲ್ಲ. ಏಪ್ರಿಲ್ ನಿಂದ ಬೇಸಿಗೆ ಕಾಲ ಶುರುವಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಬೇಸಿಗೆ ಇರುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ರವರೆಗೂ ಭಯಂಕರ ಸುಡು ಬಿಸಿಲು, ದುಬೈ, ಅಬುಧಾಬಿ, ಒಮಾನ್, ಕುವೈತ್, ಇರಾಕ್, ಬಹರೈನ್, ಸೌದಿ ಅರೇಬಿಯಾ, ಯೆಮನ್ ಕತಾರ್ ಮತ್ತಿತರ ರಾಷ್ಟ್ರಗಳಲ್ಲಿ ತಾಪಮಾನ ಒಮ್ಮೊಮ್ಮೆ 50ಡಿಗ್ರಿ  ದಾಟುತ್ತದೆ.

 

ನಮ್ಮ ಕಡೆ ಜೂನ್ ತಿಂಗಳು ಬಂತೆಂದರೆ, ಮಳೆಗಾಲ ಪ್ರಾರಂಭವಾಗುತ್ತದೆ.  ಮಳೆಗಾಲದಲ್ಲಿ ಬಯಲುಸೀಮೆಯಲ್ಲಿ ಒಮ್ಮೊಮ್ಮೆ ಮಳೆ ಬರುವುದು ತಡವಾದರೂ, ವಾತಾವರಣ ತಂಪಾಗಿರುತ್ತದೆ. ಬೇಸಿಗೆಯಲ್ಲಿದ್ದಷ್ಟು ಬಿಸಿಲಿನ ತಾಪಮಾನ ಇರುವುದಿಲ್ಲ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಇದೇ ಸಮಯದಲ್ಲಿ ಭಯಾನಕ ಬಿಸಿಲು. ಸರಿ ಸುಮಾರು ಆರು ತಿಂಗಳುಗಳ ಕಾಲ ಬೇಸಿಗೆಯ ವಾತಾವರಣ ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿಗಾಲವಿರುತ್ತದೆ. ಇನ್ನು ಅಕ್ಟೋಬರ್, ನವೆಂಬರ್, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಂತ ಚಳಿಯೂ ಇಲ್ಲ ಮತ್ತು ಹೆಚ್ಚಿನ ಬಿಸಿಲು ಸಹ ಇರುವುದಿಲ್ಲ. ಆದರೆ ಸೌದಿ ಅರೇಬೀಯಾದ ಕೆಲ ಪ್ರದೇಶ, ಮತ್ತು ಇರಾಕ್ ಕುವೈತ್ ನಂತಹ  ದೇಶಗಳಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಮಡುಗಟ್ಟುವ ಚಳಿಯಿರುತ್ತದೆ. ಈ ಚಳಿಗೆ ಹೋಲಿಸಿದರೆ ಯುಏಇ, ಒಮಾನ್ ಮತ್ತು ಯೆಮನ್ ಮತ್ತಿತರ ದೇಶಗಳಲ್ಲಿ ಅಂತಹ ಚಳಿಯಿರುವುದಿಲ್ಲ.

 ನಮ್ಮ ದೇಶದಲ್ಲಿನ ಕೆಲರಾಜ್ಯಗಳಲ್ಲಿ ಕೆಲವೊಮ್ಮೆ ಮುಂಗಾರಿನಲ್ಲಿ ನಿರೀಕ್ಷಿಸಿದಷ್ಟು ಮಳೆ ಬರದೆ ಇದ್ದಾಗ ಬರಗಾಲ ಘೋಷಿಸುವ ಪದ್ದತಿಯಿದೆ.  ಈ ಗಲ್ಫ್ ರಾಷ್ಟ್ರಗಳಲ್ಲಿ ಅಪರೂಪಕ್ಕೆ ಒಮ್ಮೆ ಮಳೆ ಬರುತ್ತದೆ, ಹಾಗಂತ ಬರಗಾಲ ಅಥವ ಬರ ಪೀಡಿತ ಪ್ರದೇಶ ಎಂದು ಇಲ್ಲಿ ಘೋಷಿಸುವುದಿಲ್ಲ.  ಮಳೆಯಿಂದ ಬೆಳೆ ಬೆಳೆಯುವ ಪದ್ದತಿ ಇಲ್ಲ. ಜನಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಭಾರತ ಸೇರಿದಂತೆ ಇತರೆ ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಆಮದು ಮಾಡಿಕೊಳ್ಳುವುದು ಇಂದು ನಿನ್ನೆಯಿಂದಲ್ಲ, ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.  ಈಗ ಕಾಲ ಬದಲಾಗಿದೆ, ಗಲ್ಫ್ ರಾಷ್ಟ್ರಗಳಲ್ಲಿ ಸಿಗುವ ತೈಲವನ್ನು ಮಾರಿ ಬಂದ ಹಣದಿಂದ ಈ ದೇಶಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಇತರೆ ರಾಷ್ಟ್ರಗಳಿಂದ ಖರೀದಿಸುತ್ತಾರೆ. ವಿಶ್ವದ ಶ್ರೀಮಂತ ಮತ್ತು ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಈ ಅರಬ್ ರಾಷ್ಟ್ರಗಳು ಇವೆ.

 ಮಧ್ಯಪ್ರಾಚ್ಯ ರಾಷ್ಟ್ರಗಳು ಬಹುತೇಕ ಮರುಭೂಮಿ ಪ್ರದೇಶವನ್ನು ಹೊಂದಿವೆ. ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಬಹಳ ಕಡಿಮೆ ಮಳೆ ಬೀಳುತ್ತದೆ. ಇಲ್ಲಿ ಅರಣ್ಯ ಪ್ರದೇಶ ಬಹಳ ಕಡಿಮೆ. ಹಾಗೂ ಈ ಕೊಲ್ಲಿ ಪ್ರದೇಶ ಟ್ರಾಪಿಕ್ ಆಫ್ ಕ್ಯಾನ್ಸರ್ ಅಕ್ಷಾಂಶ ದಲ್ಲಿದೆ, ಇದು ಹೆಚ್ಚಿನ ಒತ್ತಡದ ವಲಯವಾಗಿರುವುದರಿಂದ ಸ್ವಾಭಾವಿಕವಾಗಿ ಮೋಡಗಳ ಕೊರತೆ ಇರುತ್ತದೆ, ಅತಿ ಕಡಿಮೆ ಮೋಡಗಳು ಇರುವುದರಿಂದ ಸೂರ್ಯನ ಶಾಖ ನೇರವಾಗಿ ಇಲ್ಲಿನ ಭೂಭಾಗದಲ್ಲಿ ಬೀಳುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಈ ಸ್ಥಳ ಅತ್ಯಂತ ಬಿಸಿ ಯಾಗಿರುತ್ತದೆ ಎನ್ನುವ ವಾದವಿದೆ. ವಾತಾವರಣದಲ್ಲಿ ಹೆಚ್ಚಿನ ಮಟ್ಟದ ಆರ್ದ್ರತೆಯೂ ಇರುವುದರಿಂದ, ಜನರಿಗೆ ಅತಿಯಾದ ಸೆಖೆಯ ಅನುಭವಾಗುತ್ತದೆ. ಆರ್ದ್ರತೆಯ ಕಾರಣದಿಂದ ಮೈಯಿಂದ  ತುಂಬ ಜಾಸ್ತಿ ಬೆವರು ಹೊರಬರುತ್ತದೆ. ಮಧ್ಯಪ್ರಾಚ್ಯದ ಹೆಚ್ಚಿನ ಭಾಗವು ಮತ್ತು ಮೆಡಿಟರೇನಿಯನ್‌ನ ಪ್ರದೇಶವು ವಿಶಿಷ್ಟವಾದ ಶುಷ್ಕ ಬೇಸಿಗೆಯ ಹವಾಮಾನವನ್ನು ಹೊಂದಿದೆ. ಇದೇ ರೀತಿಯ ಹವಾಮಾನ ಪಶ್ಚಿಮ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಭಾಗಗಳೊಂದಿಗೆ ಮತ್ತು ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಗಳಲ್ಲಿ ಕಾಣಬಹುದು.

ಪಿ.ಎಸ್.ರಂಗನಾಥ

ಮಸ್ಕತ್ಒಮಾನ್ ರಾಷ್ಟ್ರ

#Oman #Kannada #Karnataka #kannadiga #Dubai #gulf #Dolphin #Muscat #bengaluru


ಪ್ರವಾಸಿಗರಿಗೆ ಥ್ರಿಲ್ ನೀಡುವ ಒಮಾನಿನ ಡಾಲ್ಫಿನ್ ಗಳು



ಒಮಾನಿನ ಕಡಲ ತೀರ ಸಾಕಷ್ಟು ಆಕರ್ಷಕ ಸಮುದ್ರ ಜೀವಿಗಳಿಗೆ ನೆಲೆಯಾಗಿದೆ, ಇಲ್ಲಿನ ಅರಬ್ಬಿ ಸಮುದ್ರದಲ್ಲಿ ವೈವಿಧ್ಯಮಯ ಜೀವರಾಶಿಗಳಾದ, ತಿಮಿಂಗಿಲಗಳು, ಡಾಲ್ಫಿನ್‌ಗಳು, ಆಮೆಗಳು, ಎಲ್ಲಾ ರೀತಿಯ ಮೀನುಗಳು ಮತ್ತು ಉಷ್ಣವಲಯದ ಮೀನುಗಳು ಹೇರಳವಾಗಿವೆ. ಆಮೆಗಳು ಮತ್ತು ಡಾಲ್ಫಿನ್‌ಗಳು ನೋಡುವುದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುವುದು ಇಲ್ಲಿನ ವಿಶೇಷ.  ಒಮಾನಿನಲ್ಲಿ ಡಾಲ್ಫಿನ್ ವೀಕ್ಷಣೆ ಮತ್ತು ಆಮೆಗಳ ವೀಕ್ಷಣೆ ಜನಪ್ರಿಯ ಚಟುವಟಿಕೆಯಾಗಿವೆ. ಒಮಾನ್ ರಾಷ್ಟ್ರವು ಸುಂದರವಾದ ಮರುಭೂಮಿ ಭೂಪ್ರದೇಶದ ಹೊಂದಿರುವುದರ ಜತೆಗೆ ಸುಂದರವಾದ ಕಡಲತೀರಗಳನ್ನು ಹೊಂದಿದ್ದು ಕೆಲವೆಡೆ ಸ್ಫಟಿಕದಷ್ಟೆ ಸ್ಪಷ್ಟವಾಗಿ ಕಾಣುವ ನೀರನ್ನು ಹೊಂದಿರುವ ಈ ಸುಂದರ ಕಡಲ ತೀರಗಳು ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತವೆ. ಸುಮಾರು 3165 ಕಿ.ಮಿ (1967 ಮೈಲು) ಉದ್ದದ ಕರಾವಳಿ ಪ್ರದೇಶವನ್ನು ಒಮಾನ್ ರಾಷ್ಟ್ರ ಹೊಂದಿದೆ. ಈ ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ  ಹಂಪ್‌ಬ್ಯಾಕ್ ತಿಮಿಂಗಿಲಗಳ ಜತೆಗೆ ಪಿಗ್ಮಿ ಬ್ಲೂ ವೇಲ್‌ಗಳು, ಬ್ರೈಡ್‌ನ ತಿಮಿಂಗಿಲಗಳು, ಸ್ಪರ್ಮ್ ತಿಮಿಂಗಿಲಗಳು, ಕಿಲ್ಲರ್ ವೇಲ್ಸ್ , ರಿಸ್ಸೋಸ್ ಡಾಲ್ಫಿನ್‌ಗಳು, ಸ್ಪಿನ್ನರ್ ಡಾಲ್ಫಿನ್‌ಗಳು, ಬಾಟಲ್‌ನೋಸ್ ಡಾಲ್ಫಿನ್‌ಗಳು, ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ಡ್ ಡಾಲ್ಫಿನ್‌ಗಳು ಇವೆ.

 

ಒಮಾನ್ ರಾಷ್ಟ್ರಕ್ಕೆ ಪ್ರವಾಸ ಬಂದವರು ಭೇಟಿ ನೀಡುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇಲ್ಲಿನ ಪ್ರಸಿದ್ದ "ಡಾಲ್ಫಿನ್ ವಾಚಿಂಗ್"  ಖಂಡಿತಾ ಇರುತ್ತದೆ. ಪ್ರವಾಸಿಗಳು ಅಷ್ಟೇ ಅಲ್ಲದೆ, ವಲಸೆ ಉದ್ಯೋಗಿಗಳ ಬಂಧು ಬಳಗ ಮತ್ತಿತರ ಅಥಿತಿಗಳು ತಪ್ಪದೇ ಇಲ್ಲಿಗೆ ಭೇಟಿ ನೀಡುವುದು ಇಲ್ಲಿನ ವಿಶೇಷ. ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾದ ಡಾಲ್ಫಿನ್‌ಗಳು ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಯಥೇಚ್ಚವಾಗಿ ಕಂಡುಬರುತ್ತವೆ. ಈ ಡಾಲ್ಫಿನ್‌ಗಳನ್ನು ನೋಡಲು, ಇಲ್ಲಿನ ಕೆಲ ಕಂಪನಿಗಳು ಪ್ರವಾಸಗಳನ್ನು ಆಯೋಜಿಸುತ್ತಾರೆ. ಮುಸಂದಮ್, ಮಸ್ಕತ್ ಮತ್ತು ದಮಾನಿಯತ್ ಪ್ರದೇಶಗಳು ಡಾಲ್ಫಿನ್ ವೀಕ್ಷಣೆಗೆ ಜನಪ್ರಿಯವಾಗಿವೆ. ಈ ಪ್ರವಾಸದ ಸಮಯದಲ್ಲಿ ಡಾಲ್ಫಿನ್‌ಗಳನ್ನು ನೋಡುವುದರ ಜೊತೆಗೆ ಒಮಾನಿನ ಕರಾವಳಿಯ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು.ಡಾಲ್ಫಿನ್ ವೀಕ್ಷಣೆ ಜತೆಗೆ ಸ್ನಾರ್ಕ್ಲಿಂಗ್, ಸರ್ಫಿಂಗ್ ಹೀಗೆ ಹಲವಾರು ವಿವಿಧ ರೀತಿಯ ಆಟಗಳನ್ನು ಇಲ್ಲಿನ ಆಯೋಜಕರು ಆಯೋಜಿಸುತ್ತಾರೆ.

 

ದುಬೈ, ಮಲೇಶಿಯ, ಅಂತಹ ಅಂತರಾಷ್ಟ್ರೀಯ ನಗರಗಳಲ್ಲಿ ಡಾಲ್ಫಿನ್ ಗಳ ವೀಕ್ಷಣೆ ಒಂದು ಚಟುವಟಿಕೆಯಾಗಿದೆDolphinarium ಒಂದು ಸ್ಟೇಡಿಯಂ ಮಾದರಿಯಲ್ಲಿ ದೊಡ್ಡಾದ ಈಜುಕೊಳದಲ್ಲಿ ಸಾಕಿ ಪಳಗಿಸಿರುವ ಡಾಲ್ಫಿನ್ ಗಳ ಜತೆ ವಿವಿಧ ರೀತಿಯ ಆಟಗಳನ್ನು ಪ್ರದರ್ಶಕರು ಪ್ರಸ್ತುತ ಪಡಿಸುತ್ತಾರೆ. ವೀಕ್ಷರನ್ನು ರಂಜಿಸಲು ಈ ಡಾಲ್ಫಿನ್ ಗಳಿಗೆ ಸೂಕ್ತ ತರಬೇತಿಗಳನ್ನು ನೀಡಿರುತ್ತಾರೆ. ಸರ್ಕಸ್ ನಲ್ಲಿ ಕುಳಿತುಕೊಂಡು ನೋಡಿದ ಹಾಗೆ ಈ ಪ್ರದರ್ಶನ ವಿರುತ್ತದೆ. ಆದರೆ ಒಮಾನಿನ ಡಾಲ್ಫಿನ್ ವೀಕ್ಷಣೆ ನೈಸರ್ಗಿಕವಾದದ್ದು, ಇಲ್ಲಿ ಈ ಜೀವಿಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಲಾಗುವುದಿಲ್ಲ. ಅವುಗಳಿರುವೆಡೆಗೆ ಪ್ರವಾಸಿಗರು ಪ್ರಯಾಣಿಸುವ ದೋಣಿ ಸಾಗುತ್ತದೆ. ಅವುಗಳ ಆಟವನ್ನು ನೋಡಿದ ನಂತರ ದೋಣಿಯು ತನ್ನ ಮೂಲಸ್ಥಾನಕ್ಕೆ ಹಿಂತಿರುಗುತ್ತದೆ.

 

ಡಾಲ್ಫಿನ್‌ ವೀಕ್ಷಣೆ ಇಷ್ಟೊಂದು ಪ್ರಖ್ಯಾತಿ ಪಡೆಯಲು ಕಾರಣವೇನೆಂದರೆ, ಒಮಾನಿನ ಸಮುದ್ರದಲ್ಲಿ ಹೇರಳವಾಗಿ ಕಾಣ ಸಿಗುವ ವಿವಿಧ ಪ್ರಾಕಾರದ  ಡಾಲ್ಫಿನ್‌ ಗಳು ಮುಂಜಾನೆ ಹೊತ್ತಿನಲ್ಲಿ ಸಮುದ್ರದ ಮೇಲ್ಭಾಗಕ್ಕೆ ಬಂದು ಎತ್ತರಕ್ಕೆ ನೆಗೆಯುವುದು, ಗುಂಪು ಗುಂಪಾಗಿ ಈಜುವುದು, ಲಾಂಗ್ ಜಂಪ್ ಮಾಡುವುದು ಇತ್ಯಾದಿ, ಹೀಗೆ ತನ್ನ ವಿವಿಧ ಆಟಗಳನ್ನು ನೈಸರ್ಗಿಕವಾಗಿ ಪ್ರದರ್ಶಿಸುವ ಪರಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಸಾಗುವ ದೋಣಿಯ ಪಕ್ಕದಲ್ಲಿಯೇ ಈ ಎಲ್ಲ ಆಟಗಳನ್ನು ನೋಡಬಹುದು. ಅವುಗಳ ಚಮತ್ಕಾರಿಕ ಪ್ರದರ್ಶನಗಳನ್ನು ನೋಡುವುದೇ ಒಂದು ಥ್ರಿಲ್. ಮಕ್ಕಳಿಗೆ ಈ ಡಾಲ್ಫಿನ್ ಗಳ ಆಟ ಬಹಳ ಇಷ್ಟವಾಗುತ್ತವೆ.

 

ಪ್ರವಾಸಿಗಳನ್ನು ಕೊಂಡೋಯ್ಯುವ ದೋಣಿಗಳ ಚಾಲಕರು ಹೇಳುವ ಪ್ರಕಾರ, ಪ್ರವಾಸಿಗರಿಗೆ ಡಾಲ್ಫಿನ್ ನೋಡುವ ಅದೃಷ್ಟ ವಿದ್ದರೆ  ಒಮ್ಮೊಮ್ಮೆ ನೂರಾರು ಡಾಲ್ಫಿನ್ ಗಳನ್ನು ನೋಡಬಹುದು. ಒಂದೊಂದು ಸಾರಿ ಅವುಗಳನ್ನು ಹುಡುಕಲು ನಾವು ಒಂದು ಗಂಟೆಯವರೆಗೆ ಸಮುದ್ರದೊಳಗೆ ಪ್ರಯಾಣಿಸಬೇಕಾಗಬಹುದು. ಕೆಲವೊಮ್ಮೆ ಒಂದು ಡಾಲ್ಫಿನ್ ಸಹ ನೋಡಲು ಸಿಗುವುದಿಲ್ಲ.  ಇದರ ಅರ್ಥ ಡಾಲ್ಫಿನ್ ಗಳು ಇರುವುದಿಲ್ಲ ಅಂತಲ್ಲ, ಆದರೆ ಸಮುದ್ರದ ಮೇಲೆ ಡಾಲ್ಫಿನ್ ಗಳು ಬರುವುದು ಕಡಿಮೆ. ಹೀಗೆ ಗುಂಪು ಗುಂಪಾಗಿ ಸಿಗುವ ಡಾಲ್ಫಿನ್ ಗಳು ಒಂದು ಇದ್ದಕಡೆ ಇನ್ನೊಂದು ದಿನ ಇರುವುದಿಲ್ಲ. ಪ್ರವಾಸ ಆಯೋಜಕರಿಗೆ ಇದು ಸ್ವಲ್ಪ ತಲೆನೋವಿನ ವಿಷಯವಾದರೂ, ದೋಣಿಗಳ ಚಾಲಕರು ತಾವು ಕಂಡ ಡಾಲ್ಫಿನ್ ಗಳು ಇರುವ ಸ್ಥಳವನ್ನು ಬೇರೆ ದೋಣಿಯವರಿಗೆ ತಿಳಿಸುತ್ತಾರೆ, ಪ್ರವಾಸಿಗರನ್ನು ಹೊತ್ತ ದೋಣಿಗಳು ಅವರು ತಿಳಿಸಿದ ಜಾಗಕ್ಕೆ. ಲಗ್ಗೆ ಇಡುತ್ತಾರೆ. ಪ್ರವಾಸ ಹೊರಡುವ ಸಮಯದಲ್ಲಿ, ಮುಂಜಾಗ್ರತೆಗಾಗಿ, ಅದೃಷ್ಟವಿದ್ದರೆ ಡಾಲ್ಫಿನ್ ಗಳನ್ನು ನೋಡಬಹುದು ಅಥವ ಇಲ್ಲ ಎನ್ನುವುದರ ಬಗ್ಗೆ ಮುಂಚೆಯೇ ಪ್ರವಾಸಿಗರಿಗೆ ತಿಳಿಸುತ್ತಾರೆ. ಈ ರೀತಿಯ ಒಂದು ಎಚ್ಚರಿಕೆ ಮಾತುಗಳು ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಭವ ಕಡಿಮೆ. ಡಾಲ್ಫಿನ್ ವೀಕ್ಷಿಸಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮೇ ನಡುವೆ. ಮೋಡ ಕವಿದ ದಿನಗಳಲ್ಲಿ ಅವುಗಳನ್ನು ಗುರುತಿಸುವ ಅಥವಾ ನೀರಿನಿಂದ ಜಿಗಿಯುವ ಸಾಧ್ಯತೆ ಕಡಿಮೆ, ಆದ್ದರಿಂದ ಪ್ರಕಾಶಮಾನವಾದ, ಬಿಸಿಲಿನ ದಿನಗಳಲ್ಲಿ ಡಾಲ್ಫಿನ್ ವೀಕ್ಷಿಸಲು ಶಿಫಾರಸು ಮಾಡಲಾಗುತ್ತದೆ.  ಬಿಬಿಸಿ ನ್ಯೂಸ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಚಾನೆಲ್ ಗಳು ಈ ಡಾಲ್ಫಿನ್ ಗಳ ಕುರಿತು ಡಾಕ್ಯುಮೆಂಟರಿಗಳನ್ನು ಮಾಡಿವೆ.

 

ಒಮಾನಿನ ಸಮುದ್ರ ತೀರದಲ್ಲಿ ಕಾಣ ಸಿಗುವ ಡಾಲ್ಫಿನ್‌ಗಳ ಪ್ರಕಾರಗಳು:

೧) ಹಿಂದೂ ಮಹಾಸಾಗರದ ಡಾಲ್ಫಿನ್‌ಗಳು,

೨) ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು,

೩) ರಿಸ್ಸೋಸ್ ಡಾಲ್ಫಿನ್‌ಗಳು,

೪) ಬಾಟಲ್‌ ನೋಸ್ ಡಾಲ್ಫಿನ್‌ಗಳು,

೫) ಇಂಡೋ-ಪೆಸಿಫಿಕ್ ಬಾಟಲ್‌ನೋಸ್ ಡಾಲ್ಫಿನ್‌ಗಳು,

೬) ಒರಟಾದ-ಹಲ್ಲಿನ ಡಾಲ್ಫಿನ್‌ಗಳು,

೭) ಪ್ಯಾಂಟ್ರೊಪಿಕಲ್ ಸ್ಪಾಟೆಡ್ ಡಾಲ್ಫಿನ್‌ಗಳು,

೮) ಸ್ಟ್ರೈಪ್ದ್ ಡಾಲ್ಫಿನ್ ಗಳು

೯) ಸ್ಪಿನ್ನರ್ ಡಾಲ್ಫಿನ್ ಗಳು ಮತ್ತು

೧೦)ಉದ್ದ ಕೊಕ್ಕಿನ ಸಾಮಾನ್ಯ ಡಾಲ್ಫಿನ್ ಗಳು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

#Oman #Kannada #Karnataka #kannadiga #Dubai #gulf #Dolphin #Muscat #bengaluru

Click below headings