ಸೋಮವಾರ, ಜೂನ್ 14, 2021

ಅರಬ್ಬರ ಮಲೆನಾಡು.

ಲೇಖನ: ಪಿ.ಎಸ್.ರಂಗನಾಥ ಮಸ್ಕತ್.

 


ಎಲ್ಲರಿಗೂ ಗೊತ್ತಿರುವಂತೆ, ಅರಬ್ಬರು ವಾಸಿಸುವ ಅರೇಬಿಯಾ ಸುತ್ತಮುತ್ತಲೂ, ಬಹುತೇಕ ಭೂ ಪ್ರದೇಶ ಮರುಭೂಮಿಯಿಂದ ಕೂಡಿದೆ, ಇಲ್ಲಿ ತೈಲ ನಿಕ್ಷೇಪ ಗಳಿವೆ, ಯಥೇಚ್ಚವಾಗಿ ಬೆಳೆಯುವ ಖರ್ಜೂರದ ಮರಗಳಿವೆ,  ಅತಿ ಹೆಚ್ಚು ಬಿಸಿಲು ಮತ್ತು  ಮಳೆ ಕಡಿಮೆ ಇರುವ ಜಾಗ ಸಹ ಇದು. ಸ್ವಾಭಾವಿಕವಾಗಿ ನೀರಿನ ಕೊರತೆ ಇಲ್ಲಿದೆ ಎನ್ನುವುದು ಗೊತ್ತಿದೆ. ಭಾರತದಂತೆ ವೈವಿಧ್ಯಮಯವಾದ ವಾತಾವರಣವಿಲ್ಲ ಎನ್ನುವುದು ತಿಳಿದಿರುವಂತಹದ್ದೆ. ಇಲ್ಲಿ ನಾವು ಕಾಣುವುದು ಒಂದು ಬೇಸಿಗೆ ಕಾಲ ಇನ್ನೊಂದು ಚಳಿಗಾಲ (ಕಡಿಮೆ ಬೇಸಿಗೆ ಕಾಲ ಅಂತನೂ ಕರಿಯಬಹುದು). ಈ ಬೇಸಿಗೆ ಸಮಯದಲ್ಲಿ (ಏಪ್ರಿಲ್ ರಿಂದ ಸೆಪ್ಟೆಂಬರ್) ಅತ್ಯಧಿಕ ತಾಪಮಾನ ಇಲ್ಲಿ ದಾಖಲಾಗುತ್ತದೆ. ಹಲವಾರು ಬಾರಿ ಐವತ್ತು ಡಿಗ್ರಿ ಸೆಲ್ಶಿಯಸ್ ಅನ್ನು ದಾಟಿ ಬಿಡುತ್ತದೆ. ಭಾರತದಲ್ಲಿ, ಮಾರ್ಚ್ ನಿಂದ ಮೇ ವರೆಗೂ ಬೇಸಿಗೆಕಾಲವಿದ್ದರೆ,  ಇಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಕಡು ಬೇಸಿಗೆ ಯಿರುತ್ತದೆ, ಅಕ್ಟೋಬರ್ ತಿಂಗಳಿನಿಂದ ತಾಪಮಾನ ಕಡಿಮೆಯಾಗುತ್ತ ಬರುತ್ತದೆ. ಇಲ್ಲಿ ಮಳೆ ಬಹಳ ಅಪರೂಪ. ಇಂತಹ ಬಿರುಬಿಸಿಲಿನ ಜಾಗದಲ್ಲಿ ಇರುವ ಗಿಡ ಮರಗಳಿಗೆ ಸಾಕಷ್ಟು ನೀರನ್ನು ಕೊಡದೆ ಹೋದರೆ, ಅವು ಒಣಗಿ ಹೋಗುತ್ತವೆ.

 

ವಸ್ತು ಸ್ಥಿತಿ ಹೀಗಿರುವಾಗ ಇಲ್ಲಿ ಹೇಗೆ ಮಲೆನಾಡು ಸೃಷ್ಟಿಯಾಗುತ್ತದೆ? ಅದು ಹೇಗೆ ಸಾಧ್ಯ? ಎಲ್ಲೋ ಒಂದು ಕಡೆ ಕೃತಕ ಅರಣ್ಯ ಸೃಷ್ಟಿಸಿ ಅದನ್ನ ಮಲೆನಾಡು ಅಂತ ತಮಾಷೆ ಮಾಡ್ತಿದ್ದೀರಿ, ಎಂದು ನಿಮಗನಿಸಬಹುದು. ಯಾಕೆಂದರೆ, ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮಘಟ್ಟ, ಹಲವಾರು ನದಿಗಳು, ನೂರಾರು ಜಲಪಾತಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿಗಳು, ದಟ್ಟ ಕಾನನಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿಂದೆತ್ತಣ ಸಂಬಂಧ?

 

ಅಂತಹ ನೈಸರ್ಗಿಕ ನಿರ್ಮಿತ ಮಲೆನಾಡಿನಂತಹ ರಮ್ಯ ರಮಣೀಯ ಪ್ರದೇಶ ಒಮಾನ್ ದೇಶದ ದೋಫಾರ್ ಪ್ರಾಂತ್ಯದಲ್ಲಿದೆ. ಇದು ಅರಬ್ಬರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಜೂನ್ ತಿಂಗಳಿಂದ ಆಗಸ್ಟ್ ಕೊನೆಯವರೆಗೂ ಮುಂಗಾರು ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಸುಮಾರು 10,000 ಚದರ ಕಿ.ಮಿ. ಕ್ಕೂ ಹೆಚ್ಚು ಜಾಗ  ನಮ್ಮ ಕರ್ನಾಟಕ ಕುದುರೆಮುಖದ ಬೆಟ್ಟಗಳ ಶ್ರೇಣಿಯಂತೆ ಹಚ್ಚ ಹಸಿರಿನಿಂದ ಆವೃತ್ತವಾಗುತ್ತದೆ. ಆ ಸ್ಥಳಗಳನ್ನ ನೋಡುತಿದ್ದಾಗ ನಾವು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ಅಥವ ಕೊಡಗಿನಲ್ಲಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಬೆಟ್ಟಗಳ ರಾಶಿಯಲ್ಲಿ, ಎಲ್ಲೆಲ್ಲೂ ಹಚ್ಚ ಹಸಿರು. ಬೆಟ್ಟಗಳ ಬದಿಯಲ್ಲಿಯೇ ಇರುವ ವಿಶ್ವದರ್ಜೆಯ ಕಡಲ ತೀರಗಳು. ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಪುಟ್ಟ ಜಲಪಾತಗಳು, ನದಿ ತೊರೆಗಳು, ಮುಂತಾದವೆಲ್ಲವೂ ನಮ್ಮ ಕರಾವಳಿ ಮತ್ತು ಮಲೆನಾಡನ್ನು ಜ್ಞಾಪಿಸುತ್ತವೆ.  

 

ದೋಫರ್ ಪ್ರಾಂತ್ಯದ ಪ್ರಮುಖ ಪಟ್ಟಣ ಸಲಾಲ್ಹ ಎನ್ನುವ ನಗರ. ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ರಾಜಧಾನಿ ಮಸ್ಕತ್ ನಿಂದ 1,000 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ ಸೌದಿ ಅರೇಬಿಯ, ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಬೇಸಿಗೆಯಲ್ಲಿ, ಅಂದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೂ, ಅಲ್ಲಿನ ಬಿಸಿ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹದಲ್ಲಿನ ತಂಪಾದ ಹವೆ ಮತ್ತು ವಾತಾವರಣವನ್ನು ಸವಿಯಲು  ಭೇಟಿಯಿಡುತ್ತಾರೆ. ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನ್ಮೆಂಟ್ ಆಫ್ ಸಲಾಲ ಉತ್ಸವ ನಡೆಸಿ  ಸಂಗೀತ , ನೃತ್ಯ , ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ದೂರದೂರುಗಳಿಂದ ಪ್ರವಾಸಿಗರು ಇಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು ತಿಂಗಳುಗಳ ಕಾಲ ಇಲ್ಲಿ ವಾಸಿಸುತ್ತ, ಸುತ್ತಮುತ್ತಲಿನ ಎಲ್ಲ ಪ್ರವಾಸಿತಾಣಗಳಿಗೆ ಭೇಟಿ ನೀಡಿ ತಮ್ಮ ರಜಾದಿನಗಳನ್ನ ಕಳೆಯುತ್ತಾರೆ. ಈ ಮೂರುನಾಲ್ಕು ತಿಂಗಳುಗಳು ಇಲ್ಲಿನ ಪ್ರವಾಸಿಗರಿಗೆ ಇದು ಸ್ವರ್ಗವೇ ಸರಿ.

 

ಒಮಾನ್ ದೇಶದ ದಕ್ಷಿಣ ಭೂಭಾಗದಲ್ಲಿ ಹಿಂದೂ ಮಹಾಸಾಗರಕ್ಕಂಟಿಕೊಂಡಿರುವ ಈ ಪ್ರದೇಶ, ನಮ್ಮ ಭಾರತದಲ್ಲಿ ಮುಂಗಾರು ಪ್ರಾರಂಭಗೊಳ್ಳುವ  ಸಮಯದಲ್ಲಿ ಇಲ್ಲೂ ಸಹ ಮುಂಗಾರು ಪ್ರಾರಂಭವಾಗುತ್ತದೆ. ಮುಂಗಾರು ಮಾರುತಗಳು ಈ ಪ್ರದೇಶದ ಮೂಲಕ ಹಾದುಹೋಗುವುದರಿಂದ, ಇಲ್ಲಿನ ಮರಗಿಡಗಳೆಲ್ಲವೂ ಜೀವಕಳೆ ಪಡೆಯುತ್ತವೆ. ಮೋಡ ಮುಚ್ಚಿದ ವಾತಾವರಣ. ಸತತವಾಗಿ ಬೀಳುವ ಇಬ್ಬನಿ, ತಂಪಾದ ಗಾಳಿ. ಇವೆಲ್ಲವೂ ಸೇರಿ ಈ ಭೂ ಪ್ರದೇಶದ ಎಲ್ಲ ಗಿಡಮರಗಳನ್ನ ಹಚ್ಚ ಹಸಿರಾಗಿಸುತ್ತದೆ.  ಪ್ರತಿ ವರ್ಷ ಮಳೆಯಾಗುತ್ತದೆ ಎನ್ನುವ ಭರವಸೆ ಇಲ್ಲ.

ಮುಂಗಾರು ಕಳೆದ ನಂತರ ಈ ಹಚ್ಚ ಹಸಿರಿನ ಗಿಡ ಮರಗಳು, ಹುಲ್ಲು ಎಲ್ಲವೂ ಒಣಗಿಹೋಗುತ್ತವೆ. ಕರೀಫ್ ಸೀಸನ್ ನಲ್ಲಿ ನೋಡಿದ ಹಸಿರು ಪ್ರದೇಶ ಒಮ್ಮೆಲೆ ಅಕ್ಟೋಬರ್ ತಿಂಗಳಲ್ಲಿ ಒಣ ಹುಲ್ಲಿನಂತಾಗುತ್ತದೆ. ಯಾವಾಗಲು ಮಂಜು ಕವಿತಿದ್ದ ರಸ್ತೆಗಳು ಇದ್ದಕ್ಕಿದ್ದ ಹಾಗೆ ಬಟಾ ಬಯಲಿನಂತೆ ಕಾಣತೊಡಗುತ್ತದೆ. ಅಲ್ಲಲ್ಲಿ ಹರಿಯುತಿದ್ದ ಚಿಕ್ಕ ಚಿಕ್ಕ ಝರಿಗಳು ಬತ್ತತೊಡಗುತ್ತವೆ.  ಎಲ್ಲ ಗಿರಿಶಿಖಿರಗಳು ಬೋಳು ಗುಡ್ಡದಂತೆ ಕಾಣುತ್ತವೆ. ಅಲ್ಲಿಗೆ ಕರೀಫ್ ಸೀಸನ್ ಮುಗಿಯುತ್ತದೆ. ಮುಂದಿನ ಜೂನ್ ತಿಂಗಳುವರೆಗೂ ಪ್ರವಾಸಿಗರು ಇತ್ತ ತಲೆ ಹಾಕುವುದು ಕಡಿಮೆ.

 

ಕರೀಫ್ ಸಮಯದಲ್ಲಿ ಬೆಟ್ಟ ಗುಡ್ಡಗಳ ಮೇಲೆ, ಘಟ್ಟ ಪ್ರದೇಶದಲ್ಲಿ 8 - 10 ಡಿಗ್ರಿ ಉಷ್ಣಾಂಶ ವಿದ್ದರೆ, ಬೆಟ್ಟ ಇಳಿದು ಸಲಾಲಃ ನಗರಕ್ಕೆ ಬಂದರೆ, 20 -28 ಡಿಗ್ರಿಯಷ್ಟು ತಾಪಮಾನದ ಅನುಭವ ವಾಗುತ್ತದೆ. ಇದೇ ಸಮಯದಲ್ಲಿ ಒಮಾನ್ ದೇಶ ಮತ್ತು ಇತರೆ ಅರಬ್ ದೇಶಗಳಲ್ಲಿ 45-50 ಡಿಗ್ರಿ ತಾಪಮಾನವಿರುತ್ತದೆ.

ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸಲಾಲಃ ಪಟ್ಟಣ ನಮ್ಮ ಪಶ್ಚಿಮ ಘಟ್ಟದ ಕೆಳಗಿನ ಒಂದು ನಗರದಂತೆ ಇದೆ. ಇಲ್ಲಿನ ತೋಟಗಳು, ಹೊಲಗಳು, ಮಂಡ್ಯ ಜಿಲ್ಲೆಯಲ್ಲಿರುವಂತೆ  ಕಾಣುತ್ತದೆ. ಸಲಾಲಃ ಬಾಳೆಹಣ್ಣು, ಎಳೆನೀರು, ಹಾಗೂ ಇನ್ನಿತರೆ ತರಕಾರಿಗಳು ಇಲ್ಲಿ ಪ್ರಸಿದ್ದ. ತೆಂಗಿನ ಮರಗಳು ಮತ್ತು ಬಾಳೆಗಿಡಗಳನ್ನ ಯಥೇಚ್ಚವಾಗಿ ಕಾಣ ಬಹುದು. ಈ ಪ್ರದೇಶ ದಲ್ಲಿ ಬೋರ್ವೆಲ್ ಪಂಪ್ ಗಳಿಂದ ವ್ಯವಸಾಯ ಮಾಡುವುದರಿಂದ ವರ್ಷ ಪೂರ್ತಿ ಸಲಾಲಃ ಭಾಗದಲ್ಲಿ ಹಚ್ಚ ಹಸಿರನ್ನ ಕಾಣಬಹುದು

 

ಸಲಾಲಃ ಬಳಿಯಿರುವ ವಾದಿ ದರ್ಬಾತ್ ನಲ್ಲಿ ಜಲಪಾತವನ್ನ ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ, ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನೀರನ್ನು ನಾವು  ಕಾಣಬಹುದು. ಸಾಮನ್ಯವಾಗಿ "ಕರೀಫ್ ಸೀಸನ್" ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಮಾತ್ರ ಕೆಲ ದಿನಗಳ ಮಟ್ಟಿಗೆ, ಮಳೆ ಬಂದಾಗ ಈ ಜಲಪಾತವನ್ನು ಕಾಣಬಹುದು.

ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ.ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್  ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ.

 

ಸಲಾಲಃ ಸುತ್ತ ಮುತ್ತಲು ಹಲವಾರು ಪ್ರವಾಸಿ ಸ್ಥಳಗಳಿವೆ, ಅವುಗಳಲ್ಲಿ ಪ್ರಮುಖವಾದವು, ಮಗಸೇಲ್ ಕಡಲ ತೀರ, ವಾದಿ ದರ್ಬಾತ್, ಸುಮರಂ, ಅಲ್ ಬಲೀದ್ ಪುರಾತತ್ವ ಉದ್ಯಾನವನ, ತವಿ ಅಟ್ಟೈರ್ ಸಿಂಕ್ ಹೋಲ್, Anti Gravity Point,  ತಾಖಾ ಕ್ಯಾಸೆಲ್,   ದಾಲ್ಖೂಟ್, ರಾಯ್ಖೂಟ್,  ಇನ್ನು ಹಲವಾರು ನಯನ ಮನೋಹರ ಸ್ಥಳಗಳು ಇಲ್ಲಿವೆ.

 

ಒಮಾನ್ ಗೆ ಭೇಟಿ ನೀಡಿದಾಗ, ಕರೀಫ಼್ ಸೀಸನ್ ನಲ್ಲಿ ಸಲಾಲಃಕ್ಕೆ ಭೇಟಿ ನೀಡುವುದನ್ನ ಮರೆಯಬೇಡಿ.

 













ಮೈಸೂರು ಸಂಸ್ಥಾನದ 18ನೇ ಶತಮಾನದಲ್ಲಿನ ಇಬ್ಬರು ರಾಜಮಾತೆಯರು. ಭಾಗ-1



 ಮೈಸೂರು ಸಂಸ್ಥಾನದ ೧೮ನೇ ಶತಮಾನದಲ್ಲಿನ ಇಬ್ಬರು ರಾಜಮಾತೆಯರು. ಭಾಗ-1

- ಪಿ.ಎಸ್.ರಂಗನಾಥ. 


ಮೈಸೂರು ಸಂಸ್ಥಾನದಲ್ಲಿ 18ನೇ ಶತಮಾನದಲ್ಲಿ ಇಬ್ಬರು ರಾಜಮಾತೆಯರು ಬಹಳ ಪ್ರಸಿದ್ದರು. ಅವರ ಕುರಿತು ಹಲವಾರು ವಿಷಯಗಳು ದಾಖಲಾಗಿವೆ. ಇಬ್ಬರು ಕಠಿಣ ಸವಾಲುಗಳನ್ನು ಎದುರಿಸಿದವರು. ಮೈಸೂರು ರಾಜ್ಯದ ಹಿತ ಕಾಪಾಡುವ ದಿಟ್ಟಿಯಲ್ಲಿ ಕಾಲದಿಂದ ಕಾಲಕ್ಕೆ ಎದುರಾದ ಎಲ್ಲ ರೀತಿಯ ಅಡೆ ತಡೆಗಳನ್ನು ನಿಭಾಯಿಸುವಲ್ಲಿ ತೆರೆಮರೆಯಲ್ಲಿ ಅಹಿರ್ನಿಶಿ ದುಡಿದ ರಾಜಮಾತೆಯರು ಇವರು. 


1. ಮಹಾರಾಣಿ ದೇವಾಜಮ್ಮಣ್ಣಿ ದೊಡ್ಡ ಕೃಷ್ಣರಾಜ ಒಡೆಯರ್ ಪತ್ನಿ 

2. ಮಹಾರಾಣಿ ಲಕ್ಷ್ಮಿಅಮ್ಮಣ್ಣಿ ಎರಡನೇ ಕೃಷ್ಣರಾಜ ಒಡೆಯರ ಪತ್ನಿ 


ಒಂದು ಸಂಸ್ಥಾನವನ್ನ ಉಳಿಸಿ, ಬೆಳೆಸುವುದು ಬಹಳ ಕಷ್ಟದ ಕೆಲಸ.  ಅತ್ಯಂತ ಪ್ರಬಲವಾಗಿದ್ದ ವಿಜಯನಗರ ಸಾಮ್ರಾಜ್ಯ ಹೇಗೆ ನಾಶ ಹೊಂದಿತು ಎನ್ನುವುದು ನಮಗೆಲ್ಲ ತಿಳಿದಿದೆ. ಅದೇ ರೀತಿ ಮೈಸೂರು ಸಂಸ್ಥಾನವು ಸಹ ವಿನಾಶ ಹೊಂದುವುದರಲ್ಲಿತ್ತು. ಆದರೆ  ಕೆಲ ಪ್ರಾರ್ಥಸ್ಮರಣೀಯರ ಸತತ ಪರಿಶ್ರಮದಿಂದ ರಾಜ್ಯವನ್ನ ರಕ್ಷಿಸಿದ್ದರಿಂದ ಇಂದು ಸಮೃದ್ದವಾಗಿ ಬೆಳೆದಿರುವ ಮೈಸೂರು ಪ್ರಾಂತ್ಯವನ್ನ ನಾವು ಕಾಣುತಿದ್ದೇವೆ. ಅವರಲ್ಲಿ ಈ ರಾಜಮಾತೆಯರ ಪಾಲು ಸಹ ಇದೆ.


ರಾಜಮಾತೆಯರ ವಿಚಾರಕ್ಕೆ ಬರುವ ಮುನ್ನ ಕೆಲವಿಷಯಗಳನ್ನ ನಿಮ್ಮಲ್ಲಿ ಹೇಳಬೇಕಿದೆ. ಮೈಸೂರಿನ ಅರಸರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಂತೆ ಕಾರ್ಯನಿರ್ವಹಿಸಿದ್ದರು, ಯಾವಾಗ  ವಿಜಯನಗರ ಸಾಮ್ರಾಜ್ಯ (1565) ಪತನವಾಯಿತೋ ಅಂದಿನಿಂದ ಇವರು ಸ್ವತಂತ್ರವಾಗಿ ಆಳ್ವಿಕೆ ನಡೆಸಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ, ಅತ್ಯಂತ ಪರಾಕ್ರಮಿ, ವೀರಾಗ್ರಣಿಗಳಾದ ರಣಧೀರ ಕಂಠೀರವ ನರಸರಾಜ ಒಡೆಯರ್ ಮತ್ತು ಚಿಕ್ಕದೇವರಾಜ ಒಡೆಯರ್ ಅವರ ಆಡಳಿತಾವಧಿ ಸಮಯದಲ್ಲಿ ಮೈಸೂರು ರಾಜ್ಯ ಕೀರ್ತಿ ಪ್ರತಿಷ್ಟೆಯಲ್ಲಿ ಉತ್ತುಂಗಕ್ಕೇರಿತ್ತು.


ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: 1638-1659) ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತ್ತು. ಇನ್ನು ಚಿಕ್ಕದೇವರಾಜ ಒಡೆಯರ್ (ಆಡಳಿತ:1673-1704) ಕಾಲದಲ್ಲಿ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತ ಪ್ರಬಲ ರಾಜ್ಯವಾಗಿ ಬೆಳೆದಿತ್ತು. ಈ ಅವಧಿಯಲ್ಲಿ ಮೈಸೂರು ಒಡೆಯರ ವೈಭವ ವಿಕ್ರಮ, ಕೀರ್ತಿ ಪ್ರತಿಷ್ಠೆ, ಶಿಖರಾವಸ್ಥೆ ತಲುಪಿತ್ತು. ಇತಿಹಾಸಕಾರರ ಪ್ರಕಾರ ಈ ಇಬ್ಬರು ಅರಸರು ತಮ್ಮ ಶೌರ್ಯ ಹೋರಾಟಗಳಿಂದ ಹೆಸರುವಾಸಿಯಾಗಿದ್ದರು.  


ಸುಮಾರು ಅರವತ್ತು ವರ್ಷಗಳ ಕಾಲ ಒಬ್ಬರ ನಂತರ ಒಬ್ಬರು ತಮ್ಮ ಶೌರ್ಯ ಪರಾಕ್ರಮಗಳಿಂದ ರಾಜ್ಯವನ್ನ ಸಂರಕ್ಷಿಸಿ, ಗಡಿಯನ್ನು ವಿಸ್ತರಿಸಿ, ಹಲವಾರು ಜನಮೆಚ್ಚುವ ಕೆಲಸಗಳನ್ನ ಮಾಡಿ, ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸಿದ್ದ ಚಿಕ್ಕದೇವರಾಜ ಒಡೆಯರ ಕಾಲಾನಂತರ ಇಂತಹ ಪ್ರಬಲ ಸಶಕ್ತ ರಾಜಮನೆತನ, ನಶಿಸಿ ಹೋಗುವ ಅಂಚಿನಲ್ಲಿತ್ತು.  ಒಡೆಯರ ವಾರಸುದಾರ ಕಂಠೀರವ ನರಸರಾಜ ಒಡೆಯರ್ II  (1704-1714) ಇನ್ನೂ ಬಾಲಕ. ಇವರಿಗೆ ಮಾತು ಬರುತ್ತಿರಲಿಲ್ಲ ಹಾಗೂ ಕಿವಿ ಕೇಳಿಸುತ್ತಿರಲಿಲ್ಲ. ಅವರನ್ನ ಮೂಕ ಅರಸರು ಎಂದು ಕರೆಯುತಿದ್ದರು. ವಾರಸುದಾರ ಆದ್ದರಿಂದ ಅವರು ಪಟ್ಟಕ್ಕೇರಬೇಕಾಗುತ್ತದೆ. ಹಾಗೂ ಹೀಗೂ ತಾಯಿ ಮತ್ತು ಮಂತ್ರಿಗಳ ಸಹಕಾರದೊಂದಿಗೆ ಅಧಿಕಾರಕ್ಕೇರುತ್ತಾರೆ. ಇದೇ ಸಂದರ್ಭದಲ್ಲಿ ಅಂದಿನ ದಳವಾಯಿಗಳು ಮೈಸೂರಿನ ಆಡಳಿತವನ್ನು ಕೈಗೆತ್ತಿಕೊಂಡು ಮೈಸೂರಿನ ಅಧಃಪತನಕ್ಕೆ ಅಲ್ಲಿಂದ ಮುನ್ನುಡಿ ಬರೆಯುತ್ತಾರೆ. ಹೆಸರಿಗೆ ಮಾತ್ರ ರಾಜರಿದ್ದರು. ಅಧಿಕಾರವು ದಳವಾಯಿಗಳ ಕೈಯಲ್ಲಿತ್ತು. ಆಗ ನೋಡಿ, ದಳವಾಯಿಗಳ ಆಟ ಶುರುವಾಗುತ್ತದೆ. ಅವರದೇ ಮೇಲಾಟ.  ಕಂಠೀರವ ನರಸರಾಜ ಒಡೆಯರ್ II ಅವರು ಜಾಸ್ತಿ ದಿನ ಆಡಳಿತ ನಡೆಸಲಾಗಲಿಲ್ಲ. ಇವರ ಎರಡನೇ ಪತ್ನಿ ಚೆಲ್ವಜ ಅಮ್ಮಣಿ ಅವರ ಹಿರಿಯ ಪುತ್ರ  ದೊಡ್ಡ ಕೃಷ್ಣರಾಜ ಒಡೆಯರ್ (1714-1732)ರವರು ತಮ್ಮ ಹತ್ತನೇ ಹುಟ್ಟುಹಬ್ಬದ ಒಂದು ತಿಂಗಳ ಮುಂಚೆ ಮೈಸೂರು ಸಿಂಹಾಸನವನ್ನು ಏರಿದರು. 


ದೊಡ್ಡ ಕೃಷ್ಣರಾಜ ಒಡೆಯರ್ 1714 ರಿಂದ 1732ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ನಿಜಾಂ, ಆರ್ಕಾಟ್ ನವಾಬ್, ಸಿರಾ ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದುಕೋಟಿ ಕಾಣಿಕೆ ನೀಡಿ ಸಂಧಾನ ಮಾಡಿಕೊಳ್ಳಲಾಯಿತು.  ಚಿಕ್ಕ ವಯಸ್ಸು ಅಂದರೆ 29 ವರ್ಷದಲ್ಲಿ ಇವರು ಸಾವನ್ನಪ್ಪಿದರು. ಸುಮಾರು 18 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದರೂ ಸಹ ದಳವಾಯಿಗಳ ಪ್ರಬಲ ಹಿಡಿತದಿಂದ ಮುಕ್ತರಾಗುವುದು ಇವರಿಗೆ ಸಾಧ್ಯವಾಗಿರಲಿಲ್ಲ. 


ಪುತ್ರಸಂತಾನವಿಲ್ಲದ ದೊಡ್ಡ ಕೃಷ್ಣರಾಜ ಒಡೆಯರ್ ಕ್ರಿ.ಶ. 1732ರಲ್ಲಿ ನಿಧನರಾದ ನಂತರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವವಾಯಿತು. ಆಗ ದೊಡ್ಡಕೃಷ್ಣರಾಜ ಒಡೆಯರ್ ಪತ್ನಿ ಮಹಾರಾಣಿ ದೇವಾಜಮ್ಮಣ್ಣಿ ಅವರು ತಮ್ಮ ಸಮೀಪದ ಸಂಬಂಧಿ ಅಂಕನಹಳ್ಳಿ ದೇವರಾಜ ಅರಸ್ ಅವರ ಪುತ್ರ  ಚಾಮರಾಜ ಒಡೆಯರ್ VII  (1732-1734) ಬಹದ್ದೂರ್  ಅವರನ್ನು ದತ್ತು ತೆಗೆದು ಕೊಳ್ಳಲು ನಿರ್ಧರಿಸುತ್ತಾರೆ. ಮೈಸೂರು ರಾಜ್ಯದ ಆಡಳಿತದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದ ದಳವಾಯಿಗಳು ಮಹಾರಾಣಿಯವರ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಆದರೆ ಅವರ ಪ್ರತಿರೋಧವನ್ನು ಲೆಕ್ಕಿಸದೆ ದತ್ತುಪುತ್ರ ಏಳನೇ ಚಾಮರಾಜ ಒಡೆಯರ್ VII  ಅವರಿಗೆ ಪಟ್ಟ ಕಟ್ಟುವಲ್ಲಿ ಮಹಾರಾಣಿ ದೇವಾಜಮ್ಮಣ್ಣಿ ಯಶಸ್ವಿಯಾಗುತ್ತಾರೆ. ಅವರನ್ನ ಪಟ್ಟಾಭಿಷೇಕ ಮಾಡಿ ಅಧಿಕಾರ ನಡೆಸುತ್ತಾರೆ.  ಈ ಸಮಯದಲ್ಲಿ, ದೇವಾಜಮ್ಮಣ್ಣಿಯವರು ತೆಗೆದುಕೊಂಡ ಹಲವಾರು ನಿರ್ಧಾರಗಳು, ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ. ನಾಲ್ಕನೇ ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳುತ್ತಾರೆ. ಪಟ್ಟಾಭಿಷೇಕ ಮಾಡಿದ ಯಶಸ್ಸು ಬಹುಕಾಲ ಉಳಿಯುವುದಿಲ್ಲ.


ಚಾಮರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ಅನಂತರ ಹಲವು ತಿಂಗಳ ಕಾಲ ದಳವಾಯಿಗಳ ಪ್ರಾಬಲ್ಯವನ್ನು ಸಹಿಸಿಕೊಂಡಿದ್ದರು. ಆ ವೇಳೆಗೆ ಆಡಳಿತವೆಲ್ಲವೂ ಕಳಲೆ ಕುಟುಂಬದವರಾದ ದೇವರಾಜಯ್ಯ ಮತ್ತು ಕರಾಚೂರಿ ನಂಜರಾಜಯ್ಯ ಸರ್ವಾಧಿಕಾರಿ ನಂಜರಾಜಯ್ಯ ಇವರ ಕರಗತವಾಗಿತ್ತು. ರಾಜ್ಯದ ಆಡಳಿತ ಮತ್ತು ಹಣಕಾಸಿನ ವ್ಯವಹಾರದ ಜೊತೆಗೆ ಅರಮನೆಯ ಆಡಳಿತ ಹಾಗೂ ರಾಜನಿಗೆ ಸೇರಿದ ಜಮೀನುಗಳ ಉತ್ಪತ್ತಿ ಮೊದಲಾದ ಎಲ್ಲಾ ವಿಷಯಗಳ ಮೇಲ್ವಿಚಾರಣೆಯನ್ನೂ ದಳವಾಯಿಗಳೇ ನಿರ್ವಹಿಸುತ್ತಿದ್ದರು.


 ದಳವಾಯಿಗಳು ಏಳನೇ ಚಾಮರಾಜ ಒಡೆಯರ್ ಅವರನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳುವ ಸರ್ವ ಪ್ರಯತ್ನವನ್ನು ನಡೆಸುತ್ತಾರೆ. ಇಂತಹ ಪ್ರಯತ್ನಗಳಿಗೆ ಮಣಿಯದ ಚಾಮರಾಜ ಒಡೆಯರ್ ರಾಜಮಾತೆ ದೇವಾಜಮ್ಮಣ್ಣಿ ಯವರ ಮಾರ್ಗದರ್ಶನದಲ್ಲಿ ತಮ್ಮ ಸ್ವತಂತ್ರ ಅಸ್ತಿತ್ವ ಪ್ರದರ್ಶಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಆಕ್ರೋಶಗೊಂಡ ದಳವಾಯಿ ಸಹೋದರರು ಪಿತೂರಿ ನಡೆಸಿ ಏಳನೇ ಚಾಮರಾಜ ಒಡೆಯರ್‌ರನ್ನು ಬಂಧಿಸಿ ಕಬ್ಬಾಳು ದುರ್ಗದಲ್ಲಿ ಸೆರೆಯಾಗಿಡುತ್ತಾರೆ. ಚಾಮರಾಜರು ಅಲ್ಲಿಯೇ ನಿಧನ ಹೊಂದುತ್ತಾರೆ.


ದಳವಾಯಿಗಳ ದುರಾಕ್ರಮಣವನ್ನು ತೀವ್ರವಾಗಿ ಪ್ರತಿರೋಧಿಸಿದ ದೇವಾಜಮ್ಮಣ್ಣಿಯವರು ಅರಸು ಪರಂಪರೆಯ ಮತ್ತೊಬ್ಬ ಯುವಕನನ್ನು ದತ್ತು ಪಡೆದು ಅವನಿಗೆ ಪಟ್ಟಕಟ್ಟುತ್ತಾರೆ.  ಅವರೇ ಇಮ್ಮಡಿ ಕೃಷ್ಣರಾಜ ಒಡೆಯರ್ (1735-1766). 


ಇವರು ರಾಜ್ಯಭಾರ ಆರಂಭಿಸಿದ ಮೇಲೆ ಅವರಿಗೂ ದಳವಾಯಿಗಳಿಂದ ಕಿರುಕುಳ ಆರಂಭವಾಗುತ್ತದೆ. ಮತ್ತೆ ದಳವಾಯಿಗಳಿಂದ ಅರಸರಿಗೆ ಸಂಕಟ ಒದಗಬಹುದೆಂದು ಲೆಕ್ಕ ಹಾಕಿದ ದೇವಾಜಮ್ಮಣ್ಣಿಯವರು ಈ ಬಾರಿ ಮೈಸೂರು ರಾಜಪರಂಪರೆಗೆ ನಿಷ್ಠರಾಗಿದ್ದ ಪ್ರಜೆಗಳು ಹಾಗೂ ಸೇನೆಯ ಮೂಲಕ ದಳವಾಯಿಗಳಾದ ದೇವರಾಜಯ್ಯ ಹಾಗೂ ನಂಜರಾಜಯ್ಯನವರ ಸರ್ವಾಧಿಕಾರವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಾರೆ. ಇದನ್ನರಿತ ದಳವಾಯಿ ಸಹೋದರರು ಮೈಸೂರು ಅರಸರ ನಿಷ್ಠರನ್ನು ಬಗ್ಗುಬಡಿಯಲು ಪ್ರತಿತಂತ್ರ ರೂಪಿಸುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ದಳವಾಯಿಗಳ ದರ್ಬಾರನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ ಪ್ರಜೆಗಳು ಹಾಗೂ ದಂಗೆ ಎದ್ದ ಸೇನಾಪಡೆಯ ಪ್ರಮುಖರನ್ನು ಬಂಧಿಸಿ ಅವರ ಕಿವಿಮೂಗುಗಳನ್ನು ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರ್ ಎದುರೇ ಕತ್ತರಿಸಿ ಹಾಕುವ ಕ್ರೌರ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ಇದರಿಂದ ಎದೆಗುಂದದ ನಿಷ್ಠಾವಂತ ಪ್ರಜೆಗಳು ಹಾಗೂ ಸೇನಾಪಡೆಗಳು ದಳವಾಯಿಗಳ ದರ್ಪ ಕೊನೆಗಾಣಿಸುವ ನಿಟ್ಟಿನಲ್ಲಿ ಮತ್ತೆ ದಂಗೆ ಏಳುವ ಪ್ರಯತ್ನದಲ್ಲಿರುತ್ತಾರೆ. ಈ ಸಮಯದಲ್ಲಿ ದಳವಾಯಿಗಳು ಮೈಸೂರು ಸೇನಾಪಡೆಯಲ್ಲಿಯೇ ಇದ್ದ ಯುವಕನಾಗಿದ್ದ ಹೈದರಾಲಿಗೆ  ಈ ದಂಗೆಯನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ವಹಿಸುತ್ತಾರೆ


ಈ ಅವಕಾಶವನ್ನು ಸದುಪಯೋಗಿಸಿಕೊಂಡ ಹೈದರಾಲಿ ಸೇನೆಯಲ್ಲಿ ಎದ್ದ ದಂಗೆಯನ್ನು ಸದೆಬಡಿದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾನೆ. ಈ ಮೂಲಕ ಮೈಸೂರು ರಾಜ್ಯದಲ್ಲಿ ಹೈದರಾಲಿ-ಟಿಪ್ಪು ಸುಲ್ತಾನ್ ಪರ್ವ ಆರಂಭವಾಗುತ್ತದೆ. ಇದರಿಂದ ರಾಜ ಪರಂಪರೆಗೆ ಗ್ರಹಣ ಬಡಿಯುತ್ತದೆ. ದಳವಾಯಿಗಳ ವಿರುದ್ಧ ಹೀಗೆ ನಿರಂತರ ಹೋರಾಟ ನಡೆಸುತ್ತಲೇ ದೇವಾಜಮ್ಮಣ್ಣಿ ನಿಧನ ಹೊಂದುತ್ತಾರೆ. 

ಸಂಗ್ರಹ ಮಾಹಿತಿ .

ಮುಂದುವರಿಯುವುದು.


ಮಂಗಳವಾರ, ಜೂನ್ 1, 2021

ಒಮಾನ್ ಪ್ರಜೆಗಳಲ್ಲಿನ ಸ್ನೇಹ, ಆತ್ಮೀಯತೆ ಮತ್ತು ಬಂಧುತ್ವದ ಬಗೆಗಿನ ಕಾಳಜಿಯ ಕಿರು ನೋಟ

 ಒಮಾನ್ ಪ್ರಜೆಗಳಲ್ಲಿನ ಸ್ನೇಹ, ಆತ್ಮೀಯತೆ ಮತ್ತು ಬಂಧುತ್ವದ ಬಗೆಗಿನ ಕಾಳಜಿಯ ಕಿರು ನೋಟ

ಬರಹ:- ಪಿ.ಎಸ್.ರಂಗನಾಥ.


ನಮ್ಮ ಕಡೆ, ಹಬ್ಬ ಹರಿದಿನ, ಜಾತ್ರೆ, ಮದುವೆ, ಮುಂಜಿ, ನಾಮಕರಣ, ಮುಂತಾದ ಕಾರ್ಯಕ್ರಮಗಳಲ್ಲಿ ಬಂಧು ಬಳಗ ಮತ್ತು ಸ್ನೇಹಿತರು ಎಲ್ಲರೂ ಒಟ್ಟಾಗಿ ಸೇರುವುದನ್ನ ನಾವು ಕಾಣುತ್ತೇವೆ. ಕಳೆದ ಎರಡು ಮೂರು ದಶಕಗಳಿಂದ, ಕುಟುಂಬ ಸಮೇತ ಎಲ್ಲರೂ ಪ್ರವಾಸಕ್ಕೆ ಹೋಗಿಬರುವುದು ಮತ್ತು ಟೆಂಪಲ್ ಟೂರ್ ಅಂತ, ಧರ್ಮಸ್ಥಳ, ತಿರುಪತಿ ಮಂತ್ರಾಲಯ, ಶ್ರೀಶೈಲ ಹೀಗೆ ದೇವಸ್ಥಾನಗಳಿಗೆ ಹೋಗಿ ಬರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.
ಹಾಗೇಯೇ, ಇತ್ತಿಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿನ ಜನರು ಕುಟುಂಬ ಸಮೇತ ಎಲ್ಲರೂ ಮನೆಯಿಂದ ಹೊರಗಡೆ ಹೋಗಿ, ಅದು ಪಾರ್ಕ್, ಬೀಚ್, ಹೋಟೆಲ್, ಸಿನಿಮಾ ಅಥವ ಮಾಲ್ ಗಳಲ್ಲಿ ಸಮಯ ಕಳೆಯುತ್ತಾರೆ. ಸಾಮಾನ್ಯವಾಗಿ ಜನರು ಕೆಲಸಕ್ಕೆ ಹೊರಗಡೆ ಹೋದರೆ ಮತ್ತೆ ಮನೆಗೆ ಬರುವುದು ಸಂಜೆಯಾಗುತ್ತದೆ, ಹೀಗೆ ವಾರ ಪೂರ್ತಿ ಮಡದಿ ಮಕ್ಕಳು ಮನೆಯಲ್ಲಿ ಇರುತ್ತಾರೆ, ಧೈನಂಧಿನ ಬದುಕಿನ ಏಕಾತಾನತೆಯಿಂದ ಬದಲಾವಣೆ ಇರಲಿ ಎನ್ನುವ ಉದ್ದೇಶದಿಂದ, ಜನರು ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಹೊರಗಡೆ ಕಳೆಯಲು ಇಷ್ಟಪಡುತ್ತಾರೆ.
ಅದೇ ರೀತಿ ನಾವಿರುವ ಒಮಾನ್ ದೇಶದಲ್ಲಿ, ಒಮಾನಿ ಪ್ರಜೆಗಳು ಸಹ ಈ ಏಕತಾನತೆಯಿಂದ ಬದಲಾವಣೆ ಇರಲಿ ಎನ್ನುವ ಉದ್ದೇಶದಿಂದ ವಾರಕ್ಕೊಮ್ಮೆ ಕುಟುಂಬದೊಂದಿಗೆ ಬೀಚ್ ಅಥವ ಪಾರ್ಕ್ ಗಳಲ್ಲಿ ಎಲ್ಲರೂ ಮನೆಯಿಂದ ಹೊರಗಡೆ ಸೇರುತ್ತಾರೆ.
ಗುರುವಾರ ಸಂಜೆ, ಶುಕ್ರವಾರ ಮತ್ತು ಶನಿವಾರ ದಿನಗಳಂದು ಅದಲ್ಲದೆ ರಜಾದಿನಗಳಂದು ಸಹ ಗುಂಪು ಗುಂಪಾಗಿ ಜನ ಸೇರುವುದನ್ನ ನಾವು ಕಾಣುತ್ತೇವೆ. ಮೊದ ಮೊದಲಿಗೆ ಒಮಾನ್ ಗೆ ಬಂದಾಗ ನನಗೆ ಇದೆಂತಹ ಸೋಜಿಗ ಅನ್ನಿಸುತಿತ್ತು.
ನಾನು ಕಛೇರಿಯಿಂದ ನಮ್ಮ ಹಳೆಯ ಮಸ್ಕತ್, ಸಿದಾಬ್, ಅಲ್ ಭುಸ್ತಾನ್ ರಸ್ತೆ ಮೂಲಕವಾಗಿ ವಾದಿ ಕಬೀರ್ ತಲುಪುವಾಗ, ಇಲ್ಲಿ ಕೆಲ ಪಾರ್ಕ್ ಗಳು ಬರುತ್ತವೆ ಜತೆಗೆ ಸಮುದ್ರವನ್ನ ನೋಡುವ ವೀವ್ ಪಾಯಿಂಟ್ ಗಳು ಇವೆ ಅದರ ಜತೆಗೆ ರಸ್ತೆ ಬದಿಯಲ್ಲಿ ದೊಡ್ಡದಾದ ಹಸಿರು ನೆಲಹಾಸು ಹೊದಿಸಿದಂತಿರುವ ತುಂಬಾ ದೊಡ್ಡ ದೊಡ್ಡ ಜಾಗಗಳಿವೆ ಈ ಜಾಗಗಳಲ್ಲಿ, ಗುರುವಾರ ಸಂಜೆ, ಶುಕ್ರವಾರ ಮತ್ತು ಶನಿವಾರ ದಿನಗಳಂದು ಒಮಾನಿಗಳಂತೆ, ಮಿಕ್ಕ ಅನಿವಾಸಿ ಪ್ರಜೆಗಳು ಸಹ ಗುಂಪು ಗುಂಪಾಗಿ ಕುಳಿತು ಸಮಯ ಕಳೆಯುತ್ತಾರೆ. ನನಗೆ ಹೀಗೆಲ್ಲ ರಸ್ತೆ ಬದಿಯಲ್ಲಿ, ಕುಳಿತು ಕೊಳ್ಳುವುದು ವಿಚಿತ್ರ ವೆನಿಸುತಿತ್ತು. ಹೀಗೇಕೆ ಎಂದು ಕೇಳಿದರೆ, ದಿನಾಲು ಮನೆಯಲ್ಲಿ ಕೂಳಿತು ಊಟ ಮಾಡುವುದು ಸಾಮಾನ್ಯ, ಆದರೆ ಹೊರಗೆ ಬಂದು ಕುಳಿತು ಸಮಯ ಕಳೆಯುವುದು ಚೆನ್ನಾಗಿರುತ್ತದೆ. ಒಂದು ಬದಲಾವಣೆಯನ್ನು ನಾವು ಕಾಣಬಹುದು ಎನ್ನುತ್ತಾರೆ. ಇದು ಮಸ್ಕತ್ ಮಾತ್ರವಲ್ಲ, ಒಮಾನ್ ನ ಎಲ್ಲ ನಗರಗಳಲ್ಲಿ ಈ ತರಹ ಪದ್ದತಿಯಿದೆ,
ಇನ್ನೂ ಗ್ರಾಮೀಣಭಾಗದಲ್ಲಿ ಇನ್ನೂ ವಿಶೇಷವಾಗಿರುತ್ತದೆ ಎನ್ನುತ್ತಾರೆ. ಒಮಾನ್ ನಲ್ಲಿ ಹಲವಾರು ಉತ್ತಮವಾದ ಜಾಗಗಳು ಮಸ್ಕತ್, ಸೋಹಾರ್, ಸಲಾಲ್ಹ ನಿಜ್ವ ಸೂರ್ ಮುಂತಾದ ಪ್ರದೇಶಗಳಲ್ಲಿ ಇವೆ. ಒಮಾನ್ ನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯೇನಿಲ್ಲ. ಲೆಕ್ಕ ವಿಲ್ಲದಷ್ಟು ಬೀಚ್ ಗಳು, ಪಾರ್ಕ್, ನಿಸರ್ಗ ನಿರ್ಮಿತ ರಮ್ಯತಾಣಗಳು ಒಂದೇ ಎರಡೇ... ಹೀಗೆ ವಾರದ ಕೊನೆಯಲ್ಲಿ, ಈ ಎಲ್ಲ ಜಾಗಗಳು ಪ್ರವಾಸಿಗರಿಂದ ತುಂಬಿರುತ್ತವೆ.
ಇದೆಲ್ಲ ಸಾಮಾನ್ಯ ವಿಷಯವಾದರೆ, ಒಮಾನ್ ನಲ್ಲಿ ಮತ್ತೊಂದು ವಿಶಿಷ್ಟ ಆಚರಣೆಯೊಂದಿದೆ. ನಗರ ಪ್ರದೇಶದಲ್ಲಿ ಕೆಲಸದ ಸಲುವಾಗಿ ವಾಸ ಮಾಡುವ ಒಮಾನಿಗಳು, ವಾರದ ಕೊನೆಯಲ್ಲಿ ತಪ್ಪದೇ ತಮ್ಮ ತಮ್ಮ ಊರುಗಳಿಗೆ ಎರಡು ದಿನಗಳ ಮರಳುತ್ತಾರೆ. ಆ ದಿನಗಳಲ್ಲಿ ಎಲ್ಲರನ್ನು ಭೇಟಿ ಮಾಡುತ್ತಾರೆ, ನಂತರ ವಾಪಾಸ್ಸು ಕೆಲಸಕ್ಕೆ ಮರಳುತ್ತಾರೆ. ತಮ್ಮ ನೆರೆಹೊರೆಯವರು, ಸ್ನೇಹಿತರು ಮತ್ತು ಕುಟುಂಬದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯಲು ಪ್ರತಿ ಬಾರಿ ಸ್ವಯಂಪ್ರೇರಿತರಾಗಿ ಅವರನ್ನು ಭೇಟಿ ಮಾಡುತ್ತಾರೆ. ಹೀಗೆ ಯಾರನ್ನಾದರು ಬೇಟಿ ಮಾಡಲು ಸಾಧ್ಯವಾಗದೆ ಇದ್ದರೆ, ಅಯ್ಯೋ ಈ ಸಾರಿ ಅವರನ್ನ ಭೇಟಿ ಮಾಡಲಾಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಮುಂದಿನ ಸಾರಿ ಅದಕ್ಕಾಗಿ ಸಮಯವನ್ನ ಮೀಸಲಿಡುತ್ತಾರೆ. ಇನ್ನು ನಗರಗಳಲ್ಲಿ ವಾಸಿಸುವ ಒಮಾನಿಗಳು, ಅಲ್ಲಿಯೇ ಇರುವ ತಮ್ಮ ಬಂಧು ಬಳಗದವರೊಂದಿಗೆ ಸಮಯ ಕಳೆಯಲು ಇಚ್ಚಿಸುತ್ತಾರೆ.
ಇಲ್ಲಿನ ಒಮಾನಿಗಳು ಧಾರ್ಮಿಕ ಆಚರಣೆಯಿರಲಿ ಅಥವಾ ಬೇರೆ ಯಾವುದೇ ಕಾರ್ಯಕ್ರಮ ಇರಲಿ, ತಮ್ಮ ಆತ್ಮೀಯರು, ಬಂಧು ಬಳಗದವರೊಂದಿಗೆ, ತಮ್ಮ ಮನೆಯಲ್ಲಿ ತಯಾರಿಸಿದ ವಿಶೇಷ ಆಹಾರ ಮತ್ತು ಸಿಹಿತಿಂಡಿ ಗಳೊಂದಿಗೆ ಆಚರಿಸಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ, ನೆರೆಹೊರೆಯವರೊಂದಿಗೆ ಎಲ್ಲ ರೀತಿಯ ವಿಶೇಷ ಆಹಾರಗಳನ್ನಹಂಚಿಕೊಳ್ಳುವುದನ್ನ ಸಹ ಇಚ್ಚಿಸುತ್ತಾರೆ. ಇನ್ನೂ ಪವಿತ್ರ ತಿಂಗಳು ರಂಜಾನ್ ಸಮಯದಲ್ಲಿ ಹಾಗೂ ಮುಸ್ಲಿಮರು ಮಾಡುವ ಉಪವಾಸದ ನಂತರ ಬರುವ ಈದ್ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸಿ ಅದನ್ನು ಸುತ್ತಮುತ್ತಲಿನ ಎಲ್ಲ ಜನರಿಗೆ ಮತ್ತು ಮುಸ್ಲಿಮೇತರರಿಗೂ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
ಒಮಾನಿಗಳಲ್ಲಿ ಖಾವಾ ಗೆ ವಿಶಿಷ್ಟ ಸ್ಥಾನ ವಿದೆ. ಖಾವಾ ಎಂದರೆ ಅರೇಬಿಕ್ ಭಾಷೆಯಲ್ಲಿ ಕಾಫಿ., ನಮ್ಮಕಡೆ ಹಾಲು ಸಕ್ಕರೆ ಬೆರೆಸಿದ ಕಾಫಿಯಲ್ಲ. ಡಿಕಾಕ್ಷನ್ ತರಹ ಇರುತ್ತದೆ, ಅದರ ಜತೆಗೆ, ಖರ್ಜೂರ ವನ್ನು ತಪ್ಪದೆ ಸೇವಿಸುತ್ತಾರೆ. ಒಮಾನಿಗಳು ಅಥಿತಿಗಳು ಮನೆಗೆ ಆಹ್ವಾನಿಸಿದರೆ, ಖಾವ, ಖರ್ಜೂರ, ಹಣ್ಣುಗಳು ಮತ್ತು ಒಮಾನಿ ಹಲ್ವ ನೀಡಿ ತಪ್ಪದೆ ಸತ್ಕರಿಸುತ್ತಾರೆ. ತಮ್ಮ ಮನೆಯಲ್ಲಿರುವ ಅತ್ಯುತ್ತಮ ಆಹಾರವನ್ನು ನೀಡಿ ಅಥಿತಿಗಳನ್ನು ಸತ್ಕರಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ.
ಇಲ್ಲಿನ ಪ್ರಾದೇಶಿಕ ರಿಟೈಲ್ ಕಂಪನಿಯೊಂದು ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಸುಮಾರು 94 ಪ್ರತಿಶತದಷ್ಟು ಜನರು ತಮ್ಮ ಪ್ರೀತಿಪಾತ್ರರೊಡನೆ ಗುಣಮಟ್ಟದ ಸಮಯವನ್ನು ಕಳೆಯುವಾಗ ಸಂತೋಷದಿಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಶೇ. 77 ರಷ್ಟು ಜನ ತಮ್ಮ ಕುಟುಂಬ, ಬಂಧು ಬಳಗ ಮತ್ತು ಸ್ನೇಹಿತರ ಜತೆ ಸಮಯ ಕಳೆಯಲು ಇಚ್ಚಿಸುತ್ತಾರೆ. ಹೆತ್ತವರಿಂದ ಮಕ್ಕಳು ದೂರವಿದ್ದರೆ, ಅಂತಹವರು ಕನಿಷ್ಟ ಪಕ್ಷ ತಿಂಗಳಿಗೆ ಎರಡು ಸಾರಿಯಾದರು ಹೆತ್ತವರು, ಸಹೋದರ ಮತ್ತು ಸಹೋದರಿಯರನ್ನ ಕಾಣಲು ಬರುತ್ತಾರೆ ಅಂತ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಭೇಟಿಗಳಲ್ಲಿ, ಊಟ, ಮಾತು, ಹರಟೆ ಇರುತ್ತದೆ. ಅದು ಬಿಟ್ಟರೆ ಯಾವುದೇ ರೀತಿಯ ದುರಭ್ಯಾಸದ ಅಥವ ನಿಷಿದ್ದ ಚಟುವಟಿಕೆಗಳು ಅಲ್ಲಿ ನಡೆಯುವುದಿಲ್ಲ. ಹಳೆಯ ಒಮಾನಿ ಮನೆಗಳು, ಕ್ಯಾಸೆಲ್ ಗಳು, ಮುಂತಾದ ಪ್ರದೇಶಗಳಲ್ಲಿ, ಹತ್ತಾರು ಜನರು ಕೂತುಕೊಳ್ಳುವುದಿಕ್ಕೆ ಒಂದು ಕಾರ್ಪೆಟ್ ಅಥವ ಚಾಪೆ ಹಾಸಿರುತ್ತಾರೆ, ಸುತ್ತಲೂ ತಲೆ ದಿಂಬುಗಳು ಮತ್ತು ಕುಶನ್ ಇರುವ ಚಿಕ್ಕ ಬೆಡ್ ಮಾದರಿಯ ಹಾಸಿಗೆ ಗಳನ್ನು ಹಾಕಿರುತ್ತಾರೆ. ಇನ್ನು ಕೆಲವು ಕಡೆ ನಮ್ಮಲ್ಲಿರುವಂತೆ ಜಗುಲಿ ಕಟ್ಟೆಗಳ ಮಾದರಿಯಲ್ಲಿ ನಿರ್ಮಿಸಿ ಜನ ಕೂತು ಕೊಳ್ಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಅವುಗಳನ್ನ "ಬರ್ಜ" ಎಂದು ಕರೆಯುತ್ತಾರೆ. ಈ ಸ್ಥಳಗಳಲ್ಲಿ, ಹಿರಿಯರು ಕಿರಿಯರು ಸೇರಿ, ಮಾತು, ಹಾಡು, ಹರಟೆ ಮತ್ತು ಧಾರ್ಮಿಕ ಬೋಧನೆಯನ್ನು ಮಾಡುತ್ತಾರೆ. ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕಷ್ಟ ಸುಖ ಮಾತನಾಡಿಕೊಳ್ಳುತ್ತಾರೆ.
ಊರಿನ ಹಿರಿಯರು ಮತ್ತು ಕುಟುಂಬದ ಸದಸ್ಯರು ಇಲ್ಲಿ ಕುಳಿತುಕೊಂಡು ಸಮಾಜದ ಆಗು ಹೋಗುಗಳನ್ನ, ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು, ಆಗಬೇಕಿರುವ ಕೆಲಸಗಳನ್ನ ಚರ್ಚಿಸುತ್ತಾರೆ. ಇಂತಹ ಸ್ಥಳಗಳಲ್ಲಿ ಈ ಪದ್ದತಿಯನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಹೀಗೆ ತಲೆಮಾರುಗಳಿಂದ ಮುಂದಿನ ಪೀಳಿಗೆಗೆ ಈ ಸಂಪ್ರದಾಯ ಬೆಳೆದುಕೊಂಡು ಬರುತ್ತಿದೆ. ಒಟ್ಟಿನಲ್ಲಿ ಎಲ್ಲರೊಂದಿಗೆ ಸಂಪರ್ಕದಿಂದಿರಲು ಈ ವ್ಯವಸ್ಥೆಯನ್ನು ರೂಡಿಸಿಕೊಂಡಿದ್ದಾರೆ. ಇಂತಹ ಪದ್ದತಿ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿದೆ. ಇದರ ಮುಂದುವರಿದ ಭಾಗವಾಗಿ, ನಗರ ಪ್ರದೇಶಗಳು ಮತ್ತು ಪಟ್ಟಣಗಳಲ್ಲಿ, ತಮ್ಮ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯುತ್ತಾರೆ. ನೂರಾರು ವರ್ಷಗಳ ಹಿಂದೆ ಮೊದ ಮೊದಲಿಗೆ ಷುರ ಎನ್ನುವ ಪ್ರಾಂತ್ಯದಲ್ಲಿ ಈ ಪದ್ದತಿ ಶುರುವಾಗಿತ್ತಂತೆ, ನಂತರ ಅದು ಎಲ್ಲ ಕಡೆ ಪ್ರಚಾರಗೊಂಡು, ಇಂದು ಮನೆ ಮನೆಗೂ ತಲುಪಿದೆ.
ಲೇಖನ ವನ್ನು ಪ್ರಕಟಿಸಿದ ಕನ್ನಡಪ್ರಭ ದಿನಪತ್ರಿಕೆಯವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏

Click below headings