ಶುಕ್ರವಾರ, ನವೆಂಬರ್ 16, 2012

ಒಮಾನಿನಲ್ಲಿ ರಜೆ ಘೋಷಣೆ ಪದ್ದತಿ

ರಜೆಗಳು ಯಾರಿಗೆ ಬೇಡ ಹೇಳಿ. ಯಾವುದಾದರೊಂದು ಕಾರಣಕ್ಕೆ ರಜೆ ಕೊಟ್ಟರೆ ಸಾಕು ಅಂತ ಕಾಯುತ್ತ ಇರುವ ಜನ ಬಹಳಷ್ಟಿದ್ದಾರೆ.  ಒಂದು ವೇಳೆ, ಆಗಸ್ಟ್ ೧೫ ಭಾನುವಾರ ಬಂದರೆ, ಬಹಳಷ್ಟು ಜನ ಅದರಲ್ಲೂ ಸರ್ಕಾರಿ ನೌಕರರು ಗೋಳಾಡದೆ ಇರುತ್ತಾರೆಯೆ? ಇಂತಹ ಸಂಧರ್ಭದಲ್ಲಿ ಶನಿವಾರ ಧ್ವಜಾರೋಹಣ ಮಾಡಿ ಛೀಮಾರಿ ಹಾಕಿಸಿ ಕೊಂಡವರು ಇದ್ದಾರೆ. ನೌಕರರ ಇಚ್ಚೆ ಯನ್ನರಿತು ಸರ್ಕಾರ ಒಂದುವೇಳೆ ಶನಿವಾರ ರಜೆ ಕೊಟ್ಟರೆ ಮಾಧ್ಯಮ ಗಳು ಮತ್ತು ಪ್ರತಿಪಕ್ಷದವರು ಸುಮ್ಮನೆ ಬಿಡುತ್ತಾರೆಯೆ? ಯಾವುದನ್ನು ಎಂದು ಆಚರಣೆ ಮಾಡಬೇಕೋ ಅಂದೇ ಆಚರಣೆ ಮಾಡಿದರೆ ಅದಕ್ಕೊಂದು ಅರ್ಥವಿದೆ ವಾದ ಮಂಡಿಸುವವರಿಗೇನು ಕಡಿಮೆ ಇಲ್ಲ.





ಉದಾಹರಣೆಗೆ ಗಣೇಶ ಹಬ್ಬ ಆಚರಣೆ ಬೆಂಗಳೂರಿನ ಗಲ್ಲಿ ಗಲ್ಲಿ ಗಳಲ್ಲಿ ಗಣೇಶ ಉತ್ಸವ ಸಮಿತಿಯವರ ಅನುಕೂಲಕ್ಕೆ ತಕ್ಕಂತೆ ಯಾವುದಾದೊರೊಂದು ದಿನ ಆಚರಿಸುತ್ತಾರೆ. ಕೆಲವೊಂದು ಕಡೆ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಗಣೇಶೋತ್ಸವವನ್ನು ಒಂದೇ ಸಾರಿ ಆಚರಿಸಿರುವ ಇದೆ.


ಗಂಗಾವತಿ ಬೀಚಿ ಎಂದೇ ಪ್ರಸಿದ್ದರಾದ ಪ್ರಾಣೇಶ್ ರವರು ಬೆಂಗಳೂರಿನ ಗಣೇಶೋತ್ಸವ ಆಚರಣೆ ಬಗ್ಗೆ ಹಲವಾರು ಬಾರಿ ಹಾಸ್ಯದ ಮೂಲಕ ಹೇಳಿದ್ದಾರೆ.

ಒಂದು ಸಾರಿ ಟಿವಿಯಲ್ಲಿ ಬ್ರಹ್ಮಾಂಡ ಖ್ಯಾತಿಯ ಜ್ಯೋತಿಷಿ ಹುಟ್ಟು ಹಬ್ಬ ಬಗ್ಗೆ ವಿವರಣೆ ಕೊಡುತಿದ್ದರು, "ಬ್ರೀಟೀಷರ ಆಳ್ವಿಕೆಯ ಫಲದಿಂದ ಈಗ ನಾವೆಲ್ಲ ಕ್ರಿಶ್ಚಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತಿದ್ದೇವೆ. ಆದ್ದರಿಂದ ನಮ್ಮ ಜನ ತಮ್ಮ ತಮ್ಮ ಹುಟ್ಟು ಹಬ್ಬ ಆಚರಣೇ ಮಾಡಿಕೊಳ್ಳೊ ದಿನ ಬೇರೆಯವರು ಹುಟ್ಟಿದ ದಿನದಂದು ತಮ್ಮ ಹುಟ್ಟು ಹಬ್ಬ ವನ್ನು ಆಚರಣೆ ಮಾಡಿಕೊಳ್ತಾಯಿದ್ದಾರೆ. ನಾವು ಹುಟ್ಟಿದ ಗಳಿಗೆ ಪ್ರಕಾರ, ಜನ್ಮ ನಕ್ಷತ್ರ, ಜನ್ಮ ರಾಶಿ ಇನ್ನು ಮುಂತಾದವುಗಳನ್ನು ಬರೆದಿಡುತ್ತೇವೆ. ಆದರೆ ಮುಂದಿನ ವರ್ಷ ಹುಟ್ಟಿದ ದಿನ ಬಂದರೆ ಆ ದಿನದ ನಕ್ಷತ್ರ, ರಾಶಿ, ತಿಥಿ ಗಳು ಹೊಂದಾಣಿಕೆ ಯಾಗಲ್ಲ. ಈಗ ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ ಹಬ್ಬ, ದೀಪಾವಳಿ ಹಬ್ಬ ಇನ್ನು ಮುಂತಾದುವುಗಳು ಪ್ರತಿ ವರ್ಷ ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಕಾರ ಬೇರೆಬೇರೆ ದಿನಾಂಕ ಗಳಂದು ಬರುತ್ತೆ ಆದರೆ ಒಂದೇ ದಿನದಂದು ಮಾತ್ರ ಬರೋದಿಲ್ಲ. ವಿಷಯ ಹೀಗಿರಬೇಕಾದ್ರೆ, ಮುಂಡೇವು ಯಾರ್ಯರನ್ನೋ ಅನುಕರಣೆ ಮಾಡೋಕೆ ಹೋಗಿ ಎಡಬಿಡಂಗಿಗಳಂಗೆ ಆ ಕಡೇಗೂ ಇಲ್ಲ ಕೊನೇಗೆ ಈ ಕಡೆಗೂ ಇಲ್ಲ ಅನ್ನೋ ಪರಿಸ್ಥಿತಿನ ತಂದ್ಕೊಳ್ತಾವೆ. " ಎಂದು ಹೀಗೆ ಅವರ ಮನಸ್ಸಿಗೆ ಬಂದಂತೆ ಬೈತಾ ಇದ್ದರು.

ಸಾಮನ್ಯವಾಗಿ ನಮ್ಮ ಕರ್ನಾಟಕ ಸರ್ಕಾರ ಸಾರ್ವಜನಿಕ ರಜೆಗಳ ಪಟ್ಟಿ ಯನ್ನು ಹೊಸ ವರ್ಷ ಶುರುವಾಗುವ ಮುಂಚೇನೆ ಬಿಡುಗಡೆ ಮಾಡುತ್ತೆ. ಈ ರಜಾ ದಿನಗಳ ಆಯ್ಕೆ ಯಲ್ಲಿ ತಪ್ಪಾಗಿದ್ದರೆ, ಈ ಬದಲಾವಣೆಯನ್ನು ಆ ಸಂಧರ್ಭಗಳ ತಕ್ಕಂತೆ ಕೆಲವೊಮ್ಮೆ ಮಾಡಲಾಗಿದೆ. ಆದರೆ ಈ ರಜೆಗಳು ಭಾನುವಾರ ದಿನದಂದು ಬಂದಿವೆ ಯಂದು ಆ ಕಾರಣಕ್ಕಾಗಿ ಅದನ್ನು ಶನಿವಾರ ಅಥವ ಸೋಮವಾರ ದಿನದಂದು ಬದಲಾಯಿಸಿ ಕೊಡಲಾಗಿಲ್ಲ.
ಪ್ರಸಕ್ತ ಸಾಲಿನ ಸಾರ್ವಜನಿಕ ರಜೆ ಯಾದಿಯಲ್ಲಿ ಬಕ್ರೀದ್ ರಜೆಯನ್ನು ಅಕ್ಟೋಬರ್ 26 ಎಂದು ಘೋಷಿಸಲಾಗಿತ್ತು.  ರಾಜ್ಯ ವಕ್ಫ್ ಮಂಡಳಿ ಕೋರಿಕೆ ಮೇರೆಗೆ ಬಕ್ರೀದ್ ಅಂಗವಾಗಿ ಅಕ್ಟೋಬರ್ 26ರ ಬದಲಿಗೆ 27 ರಂದು ಸಾರ್ವಜನಿಕ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿತ್ತು.


ನಾವಿರುವ ಒಮಾನಿನಲ್ಲಿ, ರಜೆಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಬೇರೆದಿನಗಳಂದು ಬದಲಾಯಿಸಿ ಕೊಡಲಾಗುತ್ತೆ. ಉದಾ: Prophet Mohammed’s Ascension anniversary 17 June 2012 ರಂದು ಘೋಷಣೆ ಯಾಗಿತ್ತು. ಆದರೆ ರಜೆ ಕೊಟ್ಟಿದ್ದು ೧೬ ರಂದು ಖಾಸಗಿ ಕಂಪನಿಗಳಿಗೆ ಹಾಗು ೧೬ ಮತ್ತು ೧೭ ರಂದು ಸರಕಾರಿ ಕಛೇರಿಗಳಿಗೆ ರಜೆ ಕೊಡಲಾಗಿತ್ತು. ಕಾರಣ ವೇನೆಂದರೆ, ಒಮಾನಿ ನಲ್ಲಿ ವಾರದ ರಜೆ ಗುರುವಾರ ಮತ್ತು ಶುಕ್ರವಾರ ರಂದು ಇರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇಸಾರಿ ಮೂರು ದಿನಗಳ ರಜೆ ಯನ್ನು ಅನುಭವಿಸಲು ಈ ಬದಲಾವಣೆ ಮಾಡಲಾಗಿತ್ತು.

೧೫ ನವೆಂಬರ್ ೨೦೧೨, ಇಸ್ಲಾಮಿಕ್ ಹೊಸ ವರುಷ ದಿನಾಚರಣೆ ಮತ್ತು ೧೮ ನವೆಂಬರ್ ೨೦೧೨ ಒಮಾನ್ ರಾಷ್ಟ್ರೀಯ ದಿನಾಚರಣೆ ಮತ್ತು ಸುಲ್ತಾನ್ ಕಾಬೂಸ್ ರವರ ಹುಟ್ಟುಹಬ್ಬದ ದಿನ, ಆದರೆ ರಜೆ ಕೊಟ್ಟಿದ್ದು ಮಾತ್ರ ೧೭ನವೆಂಬರ್ ೨೦೧೨ ಶನಿವಾರದಂದು, ಕಾರಣ ಗುರುವಾರದಿಂದ ಶನಿವಾರ ದವರೆಗೆ ರಜೆಯ ಪ್ರಯೋಜನ ಸಾರ್ವಜನಿಕರಿಗೆ ದೊರಕಲಿ ಎನ್ನುವ ಉದ್ದೇಶ ದಿಂದ. ಈ ರಜೆ ಘೋಷಣೆ ಯಾಗಿದ್ದು ಅದೂ ಕೊನೆ ಘಳಿಗೆ ಯಲ್ಲಿ.   ಇನ್ನೂ ೨೭ ಮತ್ತು ೨೮ ರಂದು ಒಮಾನ್ ರಾಷ್ಟ್ರೀಯ ದಿನಾಚರಣೆ ಗಾಗಿ ಮೀಸಲಿಟ್ಟಿದ್ದಾರೆ ಆದರೆ ಅದು ಇನ್ನೂ ಘೋಷಣೆ ಯಾಗಿಲ್ಲ. ಇದು ಈ ವರ್ಷದ ಕೆಲ ಬದಲಾವಣೆಗಳಷ್ಟೆ, ಪ್ರತಿ ವರ್ಷವೂ ಇಂತಹ ಹಲವಾರು ಬದಲಾವಣೆಗಳಿದ್ದು, ಒಮಾನಿನ ಸರ್ಕಾರ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳ ಅನುಕೂಲಕ್ಕೆ ತಕ್ಕಂತೆ ಆಗಿದ್ದಾಂಗೆ ಮಾರ್ಪಾಡುಗಳನ್ನು ಮಾಡುತ್ತಲೆ ಇರುತ್ತದೆ. ದುಬೈ ಒಮಾನಿನಿಂದ ಕೇವಲ ೧೫೦ ಕಿ.ಮಿ ದೂರದಲ್ಲಿದೆ, ಆದರೆ ಒಮಾನಿನ ರಜೆಯ ವಿಚಾರವಾಗಿ ನನ್ನ ಕೆಲ ದುಬೈ ಗೆಳೆಯರು ನಮ್ಮ ರಜೆ ಘೋಷಣೆ ಪದ್ದತಿ ಬಗ್ಗೆ ಅಸೂಯೆ ಪಟ್ಟಿದ್ದುಂಟು. :)

ಶುಕ್ರವಾರ, ನವೆಂಬರ್ 2, 2012

ಕನ್ನಡಿಗರೇ ಕನ್ನಡಿಗರನ್ನು ಅವಮಾನ ಮಾಡಬೇಡಿ.




ಮತ್ತೊಂದು ನವೆಂಬರ್ ೧ ಬಂದು ಹೋಯಿತು,  ಕೆಲ ನವೆಂಬರ್ ಕನ್ನಡ ವೀರರಿಗೆ, ಕನ್ನಡ ಮತ್ತು ಕರ್ನಾಟಕ ದ ಬಗ್ಗೆ ಎಷ್ಟು ಅರಿವಿದೆಯೋ ಗೊತ್ತಿಲ್ಲ, ಆದರೆ ರಾಜ್ಯೋತ್ಸವ ಆಚರಣೆ ಬಗ್ಗೆ ಅವರ ಉತ್ಸಾಹ ಹೇಳತೀರದು. ಆದರೆ ಬರೀ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಾಲದು, ಕರ್ನಾಟಕ ರಾಜ್ಯದ ಬಗ್ಗೆ,  ಕನ್ನಡದ ನುಡಿ, ವಿವಿಧ ಪ್ರಾಂತ್ಯದ ಆಡುನುಡಿ ಗಳ ಬಗ್ಗೆ ಅರಿವುಗಳು ಇರುವುದು ಅಷ್ಟೇ ಮುಖ್ಯ. ನಮ್ಮ ನಡುವೆ ಯಿರುವ ಬೇರೆ ಬೇರೆ ಜಿಲ್ಲೆ ಯವರನ್ನು ನಾವು ಹೇಗೆ  ನಡೆಸಿಕೊಂಡಿದ್ದೀವಿ, ನಮ್ಮ ರಾಜ್ಯದಲ್ಲಿ ರುವ ವಿವಿದ ಭಾಗಗಳ ಆಚಾರ ವಿಚಾರ, ಆಹಾರ, ಉಡುಗೆ ತೊಡುಗೆ ಮತ್ತು ಅಲ್ಲಿನ ಭಾಷೆ ಗಳಿಗೆ  ನಾವೆಲ್ಲರು ಎಷ್ಟು ಬೆಲೆ ಕೊಟ್ಟಿದ್ದೀವಿ ಎಂದು ಚಿಂತಿಸುವುದು ಮುಖ್ಯ ವಾಗಿದೆ.

ಈ ಮಾತು ಯಾಕೆ ಹೇಳ್ತಾಯಿದೀನಿ ಅಂದ್ರೆ, ಮೂರು ವರ್ಷಗಳ ಹಿಂದೆ ನಾನು ಕುವೈತ್ ನಲ್ಲಿರುವಾಗ ಒಂದು ರಜಾ ದಿನದಂದು ನನ್ನ ಕಂಪನಿಯ  ಒಬ್ಬ ತೆಲುಗು ಸ್ನೇಹಿತ ನ ಮನೆಗೆ ಹೋಗಿದ್ದೆ. ಅವರ ಜತೆಯಲ್ಲಿ ಮಂಗಳೂರಿನವರೊಬ್ಬರು ರೂಮ್ ಷೇರ್ ಮಾಡಿಕೊಂಡಿದ್ದರು. ನನಗೆ ನಮ್ಮ ಕರ್ನಾಟಕದ ವರನ್ನು ಕಂಡ ಮೇಲೆ ತುಂಬಾ ಖುಷಿ ಯಾಯಿತು, ಅತಿ ಉತ್ಸಾಹದಿಂದ ಮಾತನಾಡತೊಡಗಿದ್ದೆ. ಆದರೆ ಆ ಮನುಷ್ಯ ನಿಗೆ ನಾನು ಕರ್ನಾಟಕದವ್ರು, ಕನ್ನಡದವರು ಮತ್ತು ಬೆಂಗಳೂರಿನಲ್ಲಿ ವಾಸವಿರುವವರು ಅಂತ ಗೊತ್ತಾದರು ಅಷ್ಟೊಂದು ಮಾತನಾಡಲು ಆಸಕ್ತಿ ತೋರಲಿಲ್ಲ. ನಾನು ಸುಮ್ಮನಾದೆ. ನನ್ನ ತೆಲುಗು ಸ್ನೇಹಿತನ ಜತೆ ಹಾಗೆ ಸುಮ್ಮನೆ ಹರಟುತ್ತ ಇದ್ದೆ. ತದ ನಂತರ ಆ ಮನುಷ್ಯ ನನ್ನ ಸ್ವಂತ ಊರು ಕೇಳಿದ, ನಾನು ನಮ್ಮ ಊರು ಚಿತ್ರದುರ್ಗ ಜಿಲ್ಲೆ ಯಲ್ಲಿ ಅಂತ ಹೇಳಿದೆ. ಆಮೇಲೆ ಅವರು ನನ್ನ ಜತೆ ಮಾತನಾಡಲು ಶುರು ಮಾಡಿದರು.

ಕುವೈತ್ ಗೆ ಬರುವ ಮುಂಚೆ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ರಂತೆ. ಹಾಗೆ ಸುಮ್ಮನೆ ನಾನು ಕೇಳಿದೆ ಬೆಂಗಳೂರಿನಲ್ಲಿ ಮನೆ ಅಥವ ಸೈಟ್ ಏನಾದರು ಮಾಡಿದ್ದೀರ ಎಂದಿದ್ದಕ್ಕೆ. ಅದಕ್ಕೆ ಅವರು ಇಲ್ಲ ಸಾರ್ "ಬೆಂಗಳೂರಿನಲ್ಲಿ ಅಂತ ಯೋಚನೆ ನಾನು ಎಂದಿಗೂ ಮಾಡುವುದಿಲ್ಲ" ಅಂತ ಅಂದರು. ಆಶ್ಚರ್ಯದಿಂದ ನಾನು ಯಾಕೆ ಅಂತ ಕೇಳಿದೆ. ಬೆಂಗಳೂರೂ ಮೈಸೂರಿನಲ್ಲಿ ಜನ ಬೇರೆ ಜಿಲ್ಲೆ ಯವರಿಗೆ ಮರ್ಯಾದೆ ಕೊಡಲ್ಲ, ಹಂಗಿಸೋದು, ಆಡಿಕೊಳ್ಳೋದು ಇಲ್ಲವೆ ಅವಹೇಳನ ಮಾಡೋದು ಜಾಸ್ತಿ ಅಂತ ಅಂದರು. ಅದಕ್ಕೆ ನಾನು ಇಲ್ಲವಲ್ಲ ಹಾಗೇನು ಇಲ್ಲ, ನಾನು ೧೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೀನಿ ಅಂತಹದ್ದು ಏನು ನಡೆದಿಲ್ಲ, ಒಂದು ವೇಳೆ ತಮಾಷೆ ಅಂತ ಮಾಡಿದರು ಸಹ ಅದು ಆ ಹೊತ್ತಿಗೆ ತಮಾಷೆಗೆ ಮಾತ್ರ, ಅದನ್ನು ಗಂಭೀರ ವಾಗಿ ಬೆಳೆಸೋದು ಇಲ್ಲ. ಇದೇ ಮೊದಲ ಬಾರಿಗೆ ನಿಮ್ಮ ಬಾಯಿಂದ ಕೇಳಿದ್ದು ಅಂತ ಹೇಳಿದೆ. ಅವರು ಇಲ್ಲ ಸಾರ್ ನಾನು ಮುಂಚೆ ೧೯೯೫ ರಲ್ಲಿ ಪೀಣ್ಯ ದಲ್ಲಿ ಕೆಲಸ ಮಾಡ್ತಾಯಿದ್ದೆ, ಮಹಾಲಕ್ಷ್ಮಿ ಲೈಔಟಿನಲ್ಲಿ ರೂಮ್ ಮಾಡಿಕೊಂಡಿದ್ದೆ. ಅಲ್ಲಿಯೇ ಹತ್ತಿರದಲ್ಲಿ ನಮ್ಮ ಮಂಗಳೂರಿನವರ ಒಂದು ಬೇಕರಿ ಯಿತ್ತು, ರಾತ್ರಿ  ಸ್ವಲ್ಪ ಹೊತ್ತು ಅಲ್ಲಿ ಇದ್ದು ಹರಟೆ ಹೊಡೆದು ಮತ್ತೆ ಮನೆಗೆ ಹಿಂತಿರುಗುತಿದ್ದೆ. ಅಲ್ಲಿನ ಒಂದು ಹುಡುಗರ ಗುಂಪಿಗೆ ನಮ್ಮ ಬೇಕರಿ ಒಂದು ಅಡ್ಡೆ ಯಾಗಿತ್ತು, ಹೀಗೆ ಒಂದು ಸಾರಿ ಆ ಗುಂಪಿನ ಜತೆಗೆ ನಮ್ಮ ಭಾಷೆ ಬಗ್ಗೆ ವಾಗ್ವಾದ ನಡೆಯಿತು, ತದ ನಂತರ ನಮ್ಮ ನ್ನು ಆಡಿ ಕೊಳ್ಳೋದಿಕ್ಕೆ ಶುರು ಮಾಡಿದರು. ಬರ್ತಾ ಬರ್ತಾ ಜಗಳ ಜಾಸ್ತಿ ಮಾಡಿ  ಕೊನೆಗೆ ನಮ್ಮನ್ನ ಆ ಮನೆಯಿಂದ ಖಾಲಿ ಮಾಡಿಸಿದರು. ಆ ಅವಮಾನಕ್ಕೆ ನಾನು ವಾಪಾಸ್ಸು ಊರಿಗೆ ಹೋಗಿ ನಂತರ ಮುಂಬಯಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ತದನಂತ ಕುವೈತ್ ಗೆ ಬಂದೆ. ಅದಕ್ಕೆ ಈ ಬಗ್ಗೆ ನನಗೆ ಸ್ವಲ್ಪ ಬೇಜಾರು, ಅಷ್ಟೇ.

ಅವರು ಹೇಳಿದ ಈ ಮಾತು ಗಳು, ನಾನು ಕಣ್ಣಾರೆ ಕಂಡ ಕೆಲ ಘಟನೆ ಗಳು ಮತ್ತು ನನ್ನ ಕೆಲ ಸ್ನೇಹಿತರು ಹೇಳಿದ ಕೆಲ ಘಟನೆಗಳು ನನ್ನನ್ನು ಇಂದಿಗೂ ಚಿಂತಿಸುವಂತೆ ಮಾಡಿವೆ. ರಾಜ್ಯದ ಒಂದು ಪ್ರದೇಶಕ್ಕೆ ಸೇರಿದ ನಾವುಗಳು ನಮ್ಮ ರಾಜ್ಯದ ಇನ್ನೊಂದು ಪ್ರದೇಶಕ್ಕೆ ಸೇರಿದವರನ್ನು ಹೇಗೆ ನಡೆಸಿಕೊಂಡಿದ್ದೀವಿ ಅಂತ ಯೋಚಿಸಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರು ಪ್ರದೇಶಕ್ಕೆ ಪ್ರವಾಸ ಕ್ಕೆ ಹೋದಾಗ, ಕೀಟಲೆಗಂತಲೆ ಕೆಲವರು ಆಟೋ ಗಳು, ಅಂಗಡಿಗಳಲ್ಲಿ ಮತ್ತು ಹೋಟೆಲ್ ಗಳಲ್ಲಿ ತಮಗೆ ಬಂದಂಥ "ಮಂಗಳೂರಿನ ಮಾರಾಯ್ರೆ" ಭಾಷೆ ಯನ್ನು ಉಪಯೋಗಿಸಿ ಅವರಿಂದ ಬೈಸಿಕೊಳ್ಳುವುದನ್ನು ಕಣ್ಣಾರೆ ನಾನು ಕಂಡಿದ್ದೇನೆ. ಇನ್ನು ಉತ್ತರದ ಕಡೆ ಹೊರಟಾಗ ಬೇಕು ಅಂತಲೆ ಆ ಊರಿನ ಭಾಷೆ ಉಪಯೋಗಿಸುವುದಕ್ಕೆ ಪ್ರಯತ್ನಿಸುತ್ತಾರೆ, ಅದನ್ನು ಗುರುತಿಸುವ ಕೆಲವರು ಸ್ವಾಮಿ "ನೀವು ನಿಮ್ಮ "ಅಲ್ವಾ" ಭಾಷೆ ಉಪಯೋಗಿಸ್ರಿ, ನಮಗೆ ಹಲ್ವ ಭಾಷೆ ಅರ್ಥ ಆಗುತ್ತೆ. ಅಂತಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು ಕಡೆ "ಸೂ.. ಮಗನೆ" ಸ್ವಲ್ಪ ಜಾಸ್ತಿ ಉಪಯೋಗಿಸುತ್ತಾರೆ, ಆದರೆ ಅಲ್ಲಿನವರ ಪ್ರಕಾರ ಅದು ಒಂದು ಪ್ರೀತಿಯ ಬೈಗುಳ.  ಬೆಂಗಳೂರಿನಲ್ಲಿ ಕೆಲ ಶಬ್ದಗಳನ್ನು ಉಪಯೋಗಿಸಿದರೆ ನಗೋದಂತು ಗ್ಯಾರಂಟಿ.
" ಮೈ ತಿಂಡಿ ಆಗ್ತಿದೆ -ಅಂದ್ರೆ, ಮೈಯಲ್ಲಿ ತಿಂಡಿ ಹೆಂಗೋ ಆಗುತ್ತೆ? ಸ್ಟವ್ ಮೇಲೆ ತಾನೆ ಆಗೋದು"
" ಹನ್ನೆರಡುನೂರು ಅಥವ ಹದಿಮೂರುನೂರು ಆಗ್ತದೆರಿ - ಅಂದ್ರೆ ರೀ ಅದನ್ನೆ ಸರಿಯಾಗಿ ಸಾವಿರದ ಇನ್ನೂರು ಅಥವ ಮುನ್ನೂರು ಅನ್ನೋಕಾಲ್ವೇ"
"ಎಂಥ ಹಲ್ಕಟ್ ನನ್ಮಗ ಇದ್ದೀ ನೋಡೂ - ಲೋ ಅವನು ಹಲ್ಲು ಕಟ್ಟೋನು ಅಲ್ಲ ಕಣೋ"




ಇನ್ನೂ ಮಂಡ್ಯ ಜಿಲ್ಲೆ ಯ ಆಡು ಭಾಷೆ ಯ ಬಗ್ಗೆ ಯೂ ಕೆಲವರು ಆಡಿಕೊಳ್ಳುವುದನ್ನು ಕಂಡಿದ್ದೇನೆ. ಇನ್ನೂ ಸ್ವಲ್ಪ ಪೆದ್ದಾಗಿ ನಡೆದು ಕೊಂಡಾಗ, ಒಳ್ಳೆ ಕುಣಿಗಲ್ ಕಣೋ ಅಂತ ಹೇಳೋದನ್ನು ಕೇಳಿದ್ದೇನೆ. ಬಳ್ಳಾರಿಯ ಆಡು ಭಾಷೆ ಕೇಳಿದವರಿಗೆ ಒರಟು ಎನಿಸ ಬಹುದು, ಆದರೆ ಅದು ಏಕವಚನವಾದರು ಪ್ರೀತಿ ತುಂಬಿದ ಮಾತುಗಳು ಅವು. ಪ್ರತಿಯೊಂದು ಜಿಲ್ಲೆ ಯ ಪ್ರತಿಯೊಂದು ಊರಿನ ಅಲ್ಲಿನ ಆಡುಭಾಷೆ ಅಲ್ಲಿನವರಿಗೆ ಅದು ಹೆಚ್ಚು ಅದು ಅವರ ಅಗ್ಗಳಿಕೆ. ಅದಕ್ಕೆ ಅವಮಾನವಾದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಸಹ ಕನ್ನಡಿಗನನ್ನು ಈ ರೀತಿ ಹಂಗಿಸಿ, ಅವಮಾನಿಸಿದರೆ ಕೀಳರಿಮೆ ಉಂಟಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಯಲ್ಲಿ ವ್ಯವಹರಿಸಿದರೆ ಅದಕ್ಕೆ ಹೊಣೆ ನಾವಾಗುತ್ತೇವೆ. ಎಲ್ಲರಿಗೂ ತಮ್ಮದೇ ಶ್ರೇಷ್ಟ ಅನ್ನುವ ಭಾವನೆ.

ದೂರದ ಬೀದರ್, ಬಿಜಾಪುರ ಅಥವ ಇನ್ಯಾವುದೋ ಉತ್ತರಕರ್ನಾಟಕದ ಜನರು ಯಾವುದಾದರು ಕಾರ್ಯನಿಮಿತ್ತ ಬೆಂಗಳೂರು ಮೈಸೂರು ಅಥವ ದಕ್ಷಿಣ ಕನ್ನಡ ಯಾತ್ರ ಸ್ಥಳಗಳಿಗೆ ಪ್ರವಾಸಕ್ಕಾದರು ಬಂದಿರುತ್ತಾರೆ, ಬರುವಾಗ ಅವರ ಊರಿನಿಂದ ಇಲ್ಲಿಯವರೆಗೆ ಅವರ ಮನದಲ್ಲಿ ಒಂದು ಬೌಗೋಳಿಕ ಚಿತ್ರಣ ಮೂಡಿರುತ್ತೆ. ಆದರೆ ಕೆಲ ದಕ್ಷಿಣ ಜಿಲ್ಲೆಗಳ ಜನರಿಗೆ ದೂರದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹೋಗುವ ಅವಕಾಶ ಕಡಿಮೆ ಇರುತ್ತೆ ಆದ್ದರಿಂದ ಆ ಊರುಗಳ ಬೌಗೋಳಿಕ ಚಿತ್ರಣ ಅವರ ಮನದಲ್ಲಿ ಮೂಡುವುದು ಕಷ್ಟ. ಹೀಗೆ ಒಂದು ಸಾರಿ ಮಂಡ್ಯದ ಬನ್ನೂರಿನ ಕೆಲ ರೈತ ರೊಂದಿಗೆ ವ್ಯವಹರಿಸುತ್ತಿರುವಾಗ ನಮ್ಮ ಊರಿನ ಬಗ್ಗೆ ಹೇಳುತ್ತಿದ್ದೆ. ಆದರೆ ಆದರೆ ನಮ್ಮ ಊರನ್ನು ಅವರು ಗುರುತಿಸಿಕೊಂಡಿದ್ದು ಬಾಗಲಕೋಟೆ ಯತ್ತಿರ,  ಹಾಗೆ ನೋಡಿದರೆ ನಮ್ಮ ಊರಿನಿಂದ ಬಾಗಲಕೋಟೆ ಸುಮಾರು ೩೫೦ - ೪೦೦ ಕಿ.ಮಿ ದೂರದಲ್ಲಿದೆ, ಆದರೆ ಬೆಂಗಳೂರು ಕೇವಲ ೨೫೦ ಕಿ.ಮಿ. ದೂರ, ಎಷ್ಟೊಂದು ಅಜಗಜಾಂತರ, ಇದಕ್ಕೆ ಕಾರಣ ಕರ್ನಾಟಕದ ಬೌಗೋಳಿಕ ಚಿತ್ರಣದ ಅರಿವಿನ ಕೊರತೆ.

ಈಟಿವಿಯಲ್ಲಿ ಪ್ರಸಾರವಾದ ಒಂದು ಮೂಡಲ ಮನೆ ಧಾರವಾಹಿ, ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ವಾಗುವ ಚಹಾಚೂಡ ಸುದ್ದಿ ನೋಡ ಅಲ್ಲಿನ ಪ್ರಾಂತ್ಯದವರಿಗೆ, ನಮ್ಮೂರ ಭಾಷೆ ಟಿವಿ ನಾಗ್ ಬರ್ತದ ಅನ್ನುವ ಖುಷಿ. ಇತ್ತೀಚಿಗೆ ಬರುತ್ತಿರುವ ಕೆಲ ಧಾರವಾಹಿಗಳಲ್ಲಿ, ಕುಂದಗನ್ನಡ, ಮಂಗಳೂರಿನ ಕನ್ನಡ ಮತ್ತು ಉತ್ತರ ಕರ್ನಾಟಕ ಭಾಷೆಯ ಸಂಭಾಷಣೆ ಗಳು ಅಲ್ಲಲ್ಲಿ ಕಾಣುತ್ತಿವೆ.



ಸಿನಿಮಾಗಳಲ್ಲಿ ಉತ್ತರ ಕರ್ನಾಟಕ ಮತ್ತು ಮಂಗಳೂರಿನ ಭಾಷೆ ಯನ್ನು ಕೇವಲ ಹಾಸ್ಯಕ್ಕೆ ಉಪಯೋಗಿಸಿಕೊಂಡಿದ್ದೀವಿ, ಆ ಹಾಸ್ಯವನ್ನಾದರು ಸರಿಯಾಗಿ ಮಾಡ್ತಾರಾ, ಅದೂ ಇಲ್ಲ.

ಬಳ್ಳಾರಿ ನಾಗ ಚಿತ್ರದಲ್ಲಿ ಬಳ್ಳಾರಿ ಬಾಷೆ ಯನ್ನು ಚೆನ್ನಾಗಿ ಬಳಸುವ ಅವಕಾಶವಿತ್ತು ಆದರೆ ಅಲ್ಲಿನವರಿಗೆ ಅದು ನಮ್ಮೂರಿನ ಭಾಷೆ ಎಂದು ಅನಿಸಲೇ ಇಲ್ಲ. ಪ್ರಾದೇಶಿಕ ಆಡು ಭಾಷೆಗೆ ಯಾರು ಬೆಲೆ ಕೊಟ್ಟಿದ್ದಾರೆ?  ಒಂದು ವರ್ಷಕ್ಕೆ ಬಿಡುಗಡೆಯಾಗುವ ೧೦೦ ರಿಂದ ೧೫೦ ಸಿನಿಮಾಗಳಲ್ಲಿ, ಒಂದೆರಡಾದರು ಆ ಪ್ರಾಂತೀಯ ಭಾಷೆ ಯ ಸೊಗಡಿನಲ್ಲಿವೆಯ? ಎಲ್ಲೋ ಒಂದು ಹುಲಿಯಾ, ನಾಗಮಂಡಲ, ಇತ್ತೀಚಿಗೆ ಬಂದ ಭೀಮಾ ತೀರದಲ್ಲಿ  ಹುಬ್ಬಳ್ಳಿ ಭಾಷೆ, ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಉತ್ತರ ಕನ್ನಡ ಆಡುನುಡಿ , ಗುಲಾಬಿ ಟಾಕೀಸಿನ ಕುಂದ ಗನ್ನಡ, ಎಷ್ಟು ಚಂದದ  ಆ ಪ್ರಾಂತೀಯ ಆಡು ಭಾಷೆಯಲ್ಲಿ ಈ ಸಿನಿಮಾಗಳು ಅಲ್ಲಿನ ಸುಂದರ ಪರಿಸರದೊಂದಿಗೆ ಮೂಡಿ ಬಂದಿವೆ. ನೋಡುವುದಕ್ಕೆ ಖುಶಿ ಕೊಡುತ್ತವೆ. ಇಂತಹ ಪ್ರಯತ್ನ ಗಳು ಪ್ರೇಕ್ಷಕರಿಗೆ  ಹೊಸ ಅನುಭವ ಕಟ್ಟಿಕೊಡುವಲ್ಲಿ  ಮತ್ತು ಹೊಸ ಅರಿವು ಮೂಡಿಸುವಲ್ಲಿ ಸಫಲವಾಗುವುದರಲ್ಲಿ ಖಂಡಿತ ಅನುಮಾನವಿಲ್ಲ. ಸಿನಿಮಾ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ. ಇಂತಹ ಪ್ರಯತ್ನ ಗಳ ಮೂಲಕ ಆ ಪ್ರದೇಶಗಳ ಭಾಷೆಗೂ ಮೌಲ್ಯ ಮತ್ತು ಘನತೆ ಯನ್ನು ಒದಗಿಸಿಕೊಟ್ಟಂತೆ ಆಗುತ್ತದೆ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ  ಆಚಿತ್ರದ ನಿರ್ದೇಶಕ, ನಿರ್ಮಾಪಕ ಪಡೆಯುತ್ತಾನೆ. ಇತ್ತೀಚಿಗಿನ ಚಿತ್ರ ಗಳಲ್ಲಿನ ಭಾಷ ಪ್ರಯೋಗ, ಮಚ್ಚಾ, ಲಾಂಗ್, ಅಮ್ಮನ್, ಅಕ್ಕನ್, ಕುರ್ಪು, ಪೊರ್ಕಿ ಈ ಶಬ್ದಗಳಿಂದ ಇವರು ಯಾರನ್ನು ಮೆಚ್ಚಿಸಲು ಪ್ರಯತ್ನಿಸುತಿದ್ದಾರೆ? ಭಿನ್ನ ಸಂಸ್ಕೃತಿ, ವಿಭಿನ್ನ ಆಚರಣೆ ಕನ್ನಡ ಬಾಷಾ ಚಿತ್ರರಂಗ ತನ್ನದೆಂದು ಯಾವತ್ತಿಗೂ ಪರಿಗಣಿಸಿಲ್ಲ, ಆ ನಿಟ್ಟಿನಲ್ಲಿ ಮೊದಲು ಕೆಲಸ ಆಗಬೇಕಿದೆ.

ಇತ್ತೀಚಿಗೆ ಉಮೇಶ್ ಕತ್ತಿ ಯವರು ಕೊಟ್ಟ ಹೇಳಿಕೆಗೆ ಎಲ್ಲ ಕಡೆಯಿಂದ ಬಹಳ ಪ್ರತಿಭಟನೆ ವ್ಯಕ್ತ ವಾಯಿತು. ಉಮೇಶ ಕತ್ತಿಯವರ ಹೇಳಿಕೆಯಲ್ಲಿ ಸದುದ್ದೇಶ ಎಷ್ಟಿತ್ತೊ ಇಲ್ವೋ ಅದು ಅವರಿಗೆ ಗೊತ್ತು. ನಮ್ಮ ಕನ್ನಡ, ನಮ್ಮ ಅಖಂಡ ಕರ್ನಾಟಕ ಅಂತ ಗಂಟಲು ಹರಕೊಂಡು ಕೂಗಾಡಿದರೆ ಸಾಲದು, ಪ್ರತಿಯೊಬ್ಬರು ಪ್ರತಿಯೊಬ್ಬರ ಆಡುನುಡಿ ಯನ್ನು ಗೌರವಿಸಿ ಅದಕ್ಕೆ ಸಲ್ಲಬೇಕಾದ ಗೌರವವನ್ನು ಕೊಟ್ಟರೆ ಸಾಕು ಕನ್ನಡ ಭಾಷೆ ತನ್ನಷ್ಟಕ್ಕೆ ತಾನೆ ಬೆಳೆಯುತ್ತೆ.

Photo courtesy: Internet

ಬುಧವಾರ, ಅಕ್ಟೋಬರ್ 31, 2012

"ಅಮ್ಮಾ!!!!!!!, ಅಪ್ಪಾ ಯಾವಾಗ ಸಾಯ್ತಾರೆ?"



ಬಹಳದಿನಗಳಿಂದ ಕಾಯಿಲೆ ಬಿದ್ದಿದ್ದ ಪಾರ್ವತವ್ವ ಮನೆಯ ಒಂದು ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದಳು, ಸುಸ್ತಾಗಿ ಮಲಗಿದ್ದರಿಂದ ಹಾಗು ಸಾಯಂಕಾಲದ ಹೊತ್ತು ಕಾಫಿ ಕುಡಿಯುವ ಅಭ್ಯಾಸ ವಿದ್ದುದ್ದರಿಂದ ತನ್ನ ಸೊಸೆಯನ್ನು "ಸ್ವಲ್ಪ ಕಾಫಿ ಕೊಡವ್ವ" ಅಂತ ಒಂದೆರಡು ಬಾರಿ ಕೇಳಿದ್ದಳು.  ಆದರೆ ಟಿವಿ ನೋಡುವುದರಲ್ಲಿ ಮುಳುಗಿ ಹೋಗಿದ್ದ ಸೊಸೆ ರಾಧಿಕಾಳಿಗೆ ಅತ್ತೆಯ ಮಾತನ್ನು ಕಿವಿಗೆ ಹಾಕಿ ಕೊಳ್ಳಲಿಲ್ಲ. ಆದರೆ ರೋಸಿಹೋದ ಅತ್ತೆ , ಏನ್ ಕಾಲ ಬಂತಪ್ಪ, ಸಂಜೆ ಹೊತ್ತಾದ್ರು ದೇವರಿಗೆ ದೀಪ ಹಚ್ಚೋದಿಲ್ಲ, ಊದುಬತ್ತಿ ಹಚ್ಚೋದಿಲ್ಲ, ಅಡಿಗೆ ತಯಾರಿ ಮಾಡೋದಿಲ್ಲ. ಮಧ್ಹ್ಯಾನ ಮಾಡಿದ್ದೆ ರಾತ್ರಿಗೆ ಊಟಕ್ಕೆ ಇಡುತ್ತಾರಲ್ಲಪ್ಪ. ಈ ಪರಿ ಸೋಂಬೇರಿತನ ಬೆಳೆಸಿಕೊಂಡರೆ ಮನೆಯಲ್ಲಿ ದರಿದ್ರ ತುಂಬಿಕೊಳ್ಳದೆ ಇನ್ನೇನಾಗುತ್ತೆ ಅಂತ ಬೈಯೋದಿಕ್ಕೆ ಶುರು ಮಾಡಿದಳು. ದಿನಾಲು ಅತ್ತೆಯ ಬೈಗುಳ ಕೇಳಿದ್ದ ಸೊಸೆ ಅದಕ್ಕೆ ಪ್ರತ್ಯುತ್ತರ ವಾಗಿ "ನಿನ್ನಂತ ಕಾಯಿಲೆ ಬಿದ್ದವರು ಮನೇಲಿ ಇದ್ರೆ, ಇರೋ ಬರೋ ದುಡ್ಡನ್ನು ತಗೊಂಡೋಗಿ ಆಸ್ಪತ್ರೆಗೆ ಇಟ್ರೆ ಮನೇಲಿ ದರಿದ್ರ ಬರದೆ ಇನ್ನೇನಾಗುತ್ತೆ? ನಿನ್ನ ಗೋಳು ನೋಡಿ ನೋಡಿ ಸಾಕಾಗಿದೆ, ಕುಂತ್ರೂ ತಪ್ಪು, ನಿಂತ್ರೂ ತಪ್ಪು, ಏನು ಮಾಡಿದ್ರು ತಪ್ಪು ಯಾವಾಗ ನೆಗೆದು ಬಿದ್ದು ಸಾಯ್ತಿಯೋ" ಎಂದು ಬಡಬಡಿಸುತಿದ್ದಳು. ಅಲ್ಲಿಯೆ ಆಟ ವಾಡುತಿದ್ದ ಮಗ ಗೋಕುಲ್ ಗೆ ತನ್ನ ತಾಯಿ ಮತ್ತು ಅಜ್ಜಿ ಯ ಮಾತುಗಳನ್ನು ಪ್ರತಿನಿತ್ಯ ಕೇಳಿ ಕೇಳಿ ಅವನಿಗೆ ಕಂಠಪಾಟ ವಾಗಿಬಿಟ್ಟಿದ್ದವು.

ಅಂದು ಭಾನುವಾರವಾದ್ದರಿಂದ ವಸಂತ್ ಬಹಳ ಹೊತ್ತಿನ ತನಕ ಮಲಗಿದ್ದ, ಮಗ ಗೋಕುಲ್ ತಾಯಿಯೊಂದಿಗೆ ಜಗಳವಾಡುತ್ತ ಅಳುತಿದ್ದ, ಅವನ ಗಲಾಟೆ ಕೇಳಿ ವಸಂತ್ "ಏನದು, ಯಾಕೆ ಗಲಾಟೆ ಮಾಡ್ತಾಯಿದ್ದೀರ, ಇವತ್ತು ಭಾನುವಾರ ಆದರು ಸ್ವಲ್ಪ ನೆಮ್ಮದಿ ಯಾಗಿ ನಿದ್ದೆ ಮಾಡೋಕೆ ಬಿಡೋದಿಲ್ಲೇನು?" ಎಂದು ಗದರಿದ. ರಾಧಿಕ ಗಂಡನ ಮಾತು ಕೇಳಿ ಮಗನಿಗೆ "ನೋಡು ಕಂದ ಜೋರಾಗಿ ಅಳಬೇಡ, ಅಪ್ಪ ಎದ್ದು ಬಂದರೆ ಹೊಡಿತಾರೆ ಆದ್ದರಿಂದ ಸುಮ್ನೆ ಇರು ಅಂತ ಹೇಳಿದಳು"

ಸ್ವಲ್ಪ ಹೊತ್ತಿನ ನಂತರ ಅವನ ಗಲಾಟೆ ಕಡಿಮೆ ಯಾಗಿ ಆಟ ಆಡೊದಿಕ್ಕೆ ಶುರು ಮಾಡಿದ. ಹಾಗೆ ಆಟದ ಸಾಮಾನು ಜೋಡಿಸೋದು ಮತ್ತೆ ಬೀಳಿಸೋದು ಸಾಮನುಗಳು ಬಿದ್ದದ್ದು ನೋಡಿ ಖುಶಿ ಯಿಂದ ಜೋರಾಗಿ ಕಿರುಚಿ ಸಂತೋಷ ಪಡ್ತಾಯಿದ್ದ. 

ಅಡಿಗೆ ಮನೆಯಲ್ಲಿದ್ದ ರಾಧಿಕಾಳಿಗೆ ಮಗ ಕಿರುಚಿ ಗಲಾಟೆ ಮಾಡೋದು ನೋಡಿ "ಗೋಕುಲ್, ಜಾಸ್ತಿ ಕಿರುಚಬೇಡ ಕಣಪ್ಪ ಅಪ್ಪ ಮಲಗಿದ್ದಾರೆ ಅವರಿಗೆ ತೊಂದರೆ ಯಾಗುತ್ತೆ" ಎಂದಾಗ. "ಹೌದಾ ಹಾಗಾದರೆ ಟಿವಿ ಆನ್ ಮಾಡ್ಕೊಡು, ಟಿವಿ ನೋಡ್ತಿನಿ". "ಆದರೆ ಜಾಸ್ತಿ ಸೌಂಡ್  ಹಾಕಬಾರದು" ಅಂತ ಹೇಳಿ ಟಿವಿ ಆನ್ ಮಾಡಿ ಕೊಟ್ಟಳು. ಹಾಗೆ ಟಿವಿ ನೋಡುತ್ತ ಇರುವಾಗ ಕೆಲ ದೃಶ್ಯಗಳು ಅವನನ್ನು ನಗೆ ಗಡಲಿನಲ್ಲಿ ತೇಲಿಸಿದವು. ಅವುಗಳನ್ನು ನೋಡಿ ಜೋರಾಗಿ ನಗತೊಡಗಿದ್ದ.

ನಿರ್ಮಲ ಮನಸ್ಸಿನ ಮಕ್ಕಳಿಗೆ ಪ್ರತಿ ವಿಷಯದಲ್ಲೂ ಖುಷಿ ಯನ್ನು ಕಾಣುತ್ತಾರೆ. ಆ ಗಳಿಗೆ ಯನ್ನು ಸಂತೋಷದಿಂದ ಅನುಭವಿಸುತ್ತಾರೆ. ಮಕ್ಕಳೇ ಹಾಗೆ ಅಲ್ಲವೆ? ಟಿವಿಯ ಶಬ್ದ ಮತ್ತು ಮತ್ತೆ ಮಗನ ಗಲಾಟೆ ಕೇಳಿದ ವಸಂತ್ "ಏನೇ ಮತ್ತೆ ಶಬ್ದ?" ಗಂಡನ ಧ್ವನಿ ಕೇಳಿದ ರಾಧಿಕ ಸರ್ರನೆ ಬಂದು ಟಿವಿ ಬಂದ್ ಮಾಡಿ "ಎಷ್ಟು ಸಾರಿ ನಿಂಗೆ ಹೇಳೋದು ಸುಮ್ನೆ ಮನೇಲಿ ಇರಲ್ಲ ಏನಾದ್ರು ಗಲಾಟೆ ಮಾಡ್ತಾಯಿರ್ತಿಯ, ಅಪ್ಪನಿಗೆ ನಿದ್ರೆ ಮಾಡೋದಿಕ್ಕೆ ತೊಂದರೆಯಾಗುತ್ತೆ ಅಂತ ಆಗಿನಿಂದ ಹೇಳ್ತಾಯಿದೀನಿ ಆದರೆ ನೀನು ನನ್ನ ಮಾತೇ ಕೇಳ್ತಾಯಿಲ್ಲ" ಎಂದಳು.

ಟಿವಿ ಆಫ್ ಮಾಡಿದ್ದರಿಂದ, ಮಗನ ಮುಖ ಕಪ್ಪಿಟ್ಟಿತು. " ಏನಮ್ಮ ನೀನು, ಆಗಿನಿಂದ ಗಲಾಟೆ ಮಾಡಬೇಡ, ಆಟ ಆಟಬೇಡ, ಶಬ್ದ ಮಾಡ ಬೇಡ, ಅಪ್ಪ ನಿಗೆ ತೊಂದರೆ ಯಾಗುತ್ತೆ ಅಂತ ಹೇಳ್ತಿಯಾ, ಈ ಅಪ್ಪ ನಿಂದ, ಸಂತೋಷವಾಗಿ ನಾನು ಏನು ಮಾಡೋಕೂ ನೀನು ಬಿಡಲ್ಲ.
ಅಮ್ಮಾ!!!!!!!, ಅಪ್ಪಾ ಯಾವಾಗ ಸಾಯ್ತಾರೆ?
ಮಗನ ಮಾತು ಕೇಳಿ ರಾಧಿಕಾಳ ಕೈಯಲ್ಲಿದ್ದ ಸೌಟು ಕೆಳಗೆ ಬಿದ್ದಿತ್ತು. ಗರ ಬಡಿದಳಂತೆ ಕೆಳಗೆ ಬಿದ್ದಳು. ಮಲಗಿದ್ದ ವಸಂತ ಮಗನ ಮಾತು ಕೇಳಿ ದಡಾರನೆ ಎದ್ದು ಕುಳಿತ.


Click below headings