ಗುರುವಾರ, ಏಪ್ರಿಲ್ 11, 2024

ಆಗಿದ್ದೆಲ್ಲ ಒಳ್ಳೆಯದಕ್ಕೆ ಎನ್ನುವ ಆಶಾಭಾವನೆ ಇರಲಿ


ನಾವು ಮನುಷ್ಯರು ಭಾವುಕ ಜೀವಿಗಳು, ನಮ್ಮ ಮನಸ್ಸು ಪ್ರತಿಯೊಂದು ಕ್ರಿಯೆಗೂ ಸ್ಪಂದಿಸುತ್ತದೆ. ನಮ್ಮಲ್ಲಿ ರಾಗ ದ್ವೇಷ ಅಸೂಯೆ ದುಃಖ ಸುಖ ಶಾಂತಿ ಸಂತೋಷ ಎಲ್ಲವೂ ಇವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ  ನಮ್ಮ ಮನಸ್ಸನ್ನ ಹೇಗೆ ನಿಯಂತ್ರಿಸಬೇಕು ಎನ್ನುವ ಚಿಂತನೆ ನಮ್ಮಲ್ಲಿ ಬಹಳ ಕಡಿಮೆ. ನಮ್ಮ ಧೈನಂಧಿನ ಬದುಕಿನ ಜಂಜಾಟದಲ್ಲಿ ಮುಳುಗಿರುವಾಗ ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ ಮಾಡುತ್ತೀವಿ. ಹೀಗಾಗಿ ಏನಾದರು ಸಂಕಷ್ಟ, ಬಂದಾಗ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಾವು ಕಲಿತಿಲ್ಲ. ಗೆಲುವು, ಯಶಸ್ಸು, ಇತ್ಯಾದಿ ನಾವು ಬಯಸಿದ್ದು ಸಿಗದಿದ್ದಾಗ ನಿರಾಶರಾಗಿ ದುಃಖ, ಖಿನ್ನತೆ, ಮಾನಸಿಕ ಒತ್ತಡಗಳಿಂದ ಜರ್ಝರಿತರಾಗುತ್ತೇವೆ. ಯಾವುದೋ ಒಂದು ಸನ್ನಿವೇಶದಲ್ಲಿ ಆದ ಅವಮಾನವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಮನೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾರದೆ ಒದ್ದಾಡ್ತಿವಿ, ಬಿಜಿನೆಸ್ ಅನ್ನು ನಿಭಾಯಿಸಲಾಗದೆ ಒದ್ದಾಡ್ತಿವಿ. ಹೀಗೆ ಮನಸ್ಸು ದುರ್ಬಲವಾಗಿದ್ದಾಗ ಯಾವುದೋ ಒಂದು ಕೆಟ್ಟಗಳಿಗೆಯಲ್ಲಿ ಆತ್ಮಹತ್ಯೆ ಎನ್ನುವ ನಿರ್ಧಾರಕ್ಕೆ ಬಂದು ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ.

     ಒಂದು ವಿಷಯ ನಮ್ಮ ಮನಸ್ಸಿನಲ್ಲಿ ಯಾವತ್ತೂ ನೆನಪಿಟ್ಟುಕೊಳ್ಳಬೇಕು, ನಮಗಿಂತ ಬಲಹೀನರು, ಬಡವರು, ಸಮಸ್ಯೆಗಳಿಂದ ನರಳುವವರು, ಖಂಡಿತಾ ಇರ್ತಾರೆ. ಅಂತಹವರನ್ನ ನೆನಪಿಸಿಕೊಂಡು ನಮ್ಮ ಸಮಸ್ಯೆ ಅವರ ಮುಂದೆ ಏನೂ ಅಲ್ಲ ಎಂದುಕೊಂಡು ಡಿಪ್ರೆಶನ್ ನಿಂದ ಹೊರಬರಲು  ಪ್ರಯತ್ನಿಸಬೇಕು. ಜಗತ್ತಿನಲ್ಲಿ ಜನರಿಗೆ ನೂರೆಂಟು ಸಮಸ್ಯೆಗಳಿರ್ತಾವೆ,  ಪ್ರಾಣಕ್ಕೆ ಸಂಚಕಾರ ಬಂದರೂ ಏನೂ ಆಗಿಲ್ಲ ಎಂಬಂತೆ ಕೆಲವರು ಇರ್ತಾರೆ, ಮಾರಣಾಂತಿಕ ಕಾಯಿಲೆ ಇದ್ದರೂ ಕೆಲವರು ಹಾಯಾಗಿರ್ತಾರೆ, ಲಕ್ಷಾಂತರ ಸಾಲ ಮಾಡಿಕೊಂಡು ದಿವಾಳಿಯಾದರೂ ಚಿಕ್ಕ ಆಶಾವಾದದಿಂದ ಬದುಕ್ತಿರ್ತಾರೆ, ದೊಡ್ಡ ಗಂಡಾಂತರ ಸಿಲುಕಿದ್ದೀವಿ ಅಂತ ಗೊತ್ತಿದ್ರೂ ಕೆಲವರು ಆರಾಮಾಗಿರ್ತಾರೆ, ಇಂತಹದ್ದೆಲ್ಲವನ್ನು ಕೇಳಿರ್ತೀವಿ, ನೋಡಿರ್ತೀವಿ, ಆದರೆ ನಮಗೆ ಸಮಸ್ಯೆ ಬಂದಾಗ ಮಾತ್ರ ಇದೆಲ್ಲವನ್ನು ನಾವು ಮರೆತು ಬಿಡ್ತೀವಿ. ಕೆಲ ಘಟನೆಗಳನ್ನು ಇಲ್ಲಿ ಪ್ರಸ್ತುತ ಪಡಿಸ್ತಿದ್ದೀನಿ, ಇವರೆಲ್ಲರೂ ಸಮಸ್ಯೆಗಳು ಬಂದಾಗ ಧೃತಿಗೆಡದೆ, ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದೆ ಬಂದವರು.

 

ಉತ್ತರಪ್ರದೇಶದ ಶಾಲಿನಿ ಸಿಂಗ್ ಎನ್ನುವವರು, 19ನೇ ವಯಸ್ಸಿಗೇ ಎರಡನೇ ವರ್ಷದ ಪದವಿ ಓದುತ್ತಿರುವಾಗ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಅವಿನಾಶ್‌ಸಿಂಗ್ ಬಡೇರಿಯಾ ಎನ್ನುವವರೊಂದಿಗೆ ವಿವಾಹವಾಗುತ್ತದೆ. ಪತಿ ಕಾಶ್ಮೀರದ ಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲಿನಿಗೆ ಆಗ ಬರೀ 23 ವರ್ಷ ವಯಸ್ಸು. ಜೀವನದ ವಿವಿಧ ಮಜಲುಗಳನ್ನು ನೋಡುವ ಆಸೆ, ಆದರೆ ದುರ್ವಿಧಿ ಸುಮ್ಮನಿರಲಿಲ್ಲ, ಪತಿ ಅವಿನಾಶ್ ಅವರು ಒಮ್ಮೆ ಉಗ್ರಗಾಮಿಗಳೊಂದಿಗೆ ಸೆಣೆಸಾಡುವಾಗ ಗುಂಡೇಟಿನಿಂದ ಸಾವನಪ್ಪುತ್ತಾರೆ. ಆ ಚಿಕ್ಕ ವಯಸ್ಸಿಗೆ ವಿಧವೆಯಾಗುತ್ತಾಳೆ. ಬರಸಿಡಿಲಿನಂತೆ ಬಂದ ಗಂಡನ ಸಾವು ಅವಳನ್ನ ಧಿಕ್ಕೆಟ್ಟಿಸಿತ್ತು. ಎರಡು ವರ್ಷದ ಮಗು ಕೈಯಲ್ಲಿತ್ತು.  ಆದರೆ ಈಕೆ ಕೊರಗುತ್ತ ಸುಮ್ಮನೆ ಇರಲಿಲ್ಲ. ಗಂಡ ಮೃತ ಪಟ್ಟ ಮೂರು ತಿಂಗಳಿಗೆ ಮಿಲ್ಟ್ರಿ ಟ್ರೈನಿಂಗ್ ಗೆ ಸೇರುತ್ತಾಳೆ. ತರಬೇತಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಭಯಂಕರ ಕಷ್ಟ, ಆದರೂ ಅದೆಲ್ಲವನ್ನು ಮೆಟ್ಟಿ ನಿಂತು ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಾಳೆ. ಮುಂದೆ ವಿಆರ್‌ಎಸ್ ಪಡೆದು, ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸುತ್ತಾರೆ.

 


ಪಂಜಾಬ್ ನ ಜಲಂಧರ್ ನ ಜಂಗ್ ಜಸ್ವಾಲ್ ಎಂಬಾತ, ಪದವಿ ಮುಗಿಸಿದ ನಂತರ ಫಿಜಿ ದೇಶದ ಕಾಲೇಜೊಂದರಲ್ಲಿ ಪ್ರೊಫೆಸರಾಗಿ ಕೆಲಸಕ್ಕೆ ಸೇರುತ್ತಾನೆ. ನಂತರ ಅಮೇರಿಕಾದಲ್ಲೊಂದು ಉದ್ಯೋಗವಾಕಾಶ ದೊರೆಯುತ್ತದೆ. ಇರುವ ಕೆಲಸ ಬಿಟ್ಟು ಅಮೇರಿಕಕ್ಕೆ ಹಾರುತ್ತಾನೆ. ಆದರೆ ಅಲ್ಲಿ ಕೆಲಸ ಪಕ್ಕ ಆಗುವುದಿಲ್ಲ, ಮರಳಿ ಭಾರತಕ್ಕೆ ಬರದೆ, ಹೊಟ್ಟೆಪಾಡಿಗಾಗಿ ಲಾರಿ ಡ್ರೈವರ್ ಆಗಿ ಕೆಲಸ ಸೇರುತ್ತಾನೆ. ಆಗ ಕಲಿತ ದುಶ್ಚಟಗಳು ಒಂದಲ್ಲ ಎರಡಲ್ಲ, ವಿಪರೀತ ಸಿಗರೇಟು, ಮದ್ಯಸೇವನೆ, ಸರಿಯಾದ ಸಮಯದಲ್ಲಿ ಊಟ ಮಾಡದೆ ಇರುವುದುಹೀಗೆ ಎಲ್ಲವೂ ಹದ್ದು ಮೀರಿದಾಗ ಆರೋಗ್ಯ ಕೈ ಕೊಡುತ್ತದೆ. ಒಮ್ಮೆ ಹೃದಯಾಘಾತವಾಗುತ್ತದೆ. ಇದು ಇಲ್ಲಿಗೆ ನಿಲ್ಲಲಿಲ್ಲ, ಮುಂದಿನ ಕೆಲವರ್ಷಗಳಲ್ಲಿ 8 ಬಾರಿ ಹೃದಯಾಘಾತವಾಗುತ್ತದೆ. ಇಲ್ಲೀವರೆಗೆ ಮೂರು ಬಾರಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ಸ್ಟೆಂಟುಗಳನ್ನು ಅಳವಡಿಸಲಾಗಿದೆ. ಹೃದಯದ ಸಮಸ್ಯೆಯ ಜತೆಗೆ ಮೂತ್ರಪಿಂಡಗಳ ವೈಫಲ್ಯ ಕಾಣಿಸಿಕೊಂಡಿದೆ. ಎರಡುಬಾರಿ ಪಾರ್ಶ್ವವಾಯು ಆಗಿದೆ. ಇಷ್ಟು ಸಾಲದೆಂಬಂತೆ ಹೃದಯ ಮತ್ತು ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯೂ ಆಗಿದೆ. ಇಷ್ಟೆಲ್ಲ ಆದಮೇಲೂ ಈ ಮಹರಾಯ, ಆರಾಮವಾಗಿ ಬದುಕುತ್ತಿದ್ದಾನೆ!

 


ಕೋಲಾರದ K.M ವಿಶ್ವಾಸ್ ಎನ್ನುವವರು, ವಿದ್ಯುತ್ ಅವಘಡ ಒಂದರಲ್ಲಿ ಎರಡು ಕೈ ಕಳೆದುಕೊಳ್ತಾರೆ, ಮುಂದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿರುವ ಇವರ ಕಥೆ ಕೇಳಿದರೆ, ನಮ್ಮ ಸಮಸ್ಯೇ ಏನೂ ಅಲ್ಲ ಬಿಡಿ. ಇವರ ತಂದೆ ಕೋಲಾರದಲ್ಲಿ ಹೊಸಮನೆ ಕಟ್ಟಿಸುತ್ತಿದ್ದರು, ಆಗಿನ್ನು ಇವರಿಗೆ ಚಿಕ್ಕವಯಸ್ಸು. ನಿರ್ಮಾಣ ಹಂತದಲ್ಲಿದ್ದ ಗೋಡೆಗಳಿಗೆ ನೀರು ಹಾಕುವಾಗ, ಆಯತಪ್ಪಿ ಕರೆಂಟ್ ವೈರ್ ಗಳ ಮೇಲೆ ಬಿದ್ದುಬಿಡ್ತಾರೆ.  ಆ ಕರೆಂಟಿನ ತೀವ್ರತೆಗೆ ದೇಹದ ಬಹುಭಾಗ ಸುಟ್ಟುಹೋಗುತ್ತದೆ. ಬರೋಬ್ಬರಿ ಎರಡು ತಿಂಗಳು ಕೋಮಾಗೆ ಹೋಗುತ್ತಾರೆ. ಎಚ್ಚರವಾದಾಗ ನೋಡಿದರೆ, ಎರಡೂ ಕೈಗಳನ್ನು ಭುಜದವರೆಗೂ, ಕತ್ತರಿಸಿಹಾಕಿರುತ್ತಾರೆ. ಆಮೇಲೆ ಇನ್ನೊಂದು ವಿಷಯ ಗೊತ್ತಾಗುತ್ತದೆ, ಇವರನ್ನು ಉಳಿಸಲು ಹೋಗಿ ಇವರ ತಂದೆ ಅಸುನೀಗಿದರಂತೆ. ಮುಂದೆ ಅನಾರೋಗ್ಯದಿಂದ ತಾಯಿಯೂ ಮೃತಪಡುತ್ತಾರೆ. ಹೀಗೆ ನಿರಂತರವಾಗಿ ನೋವುಂಡರೂ, ಧೃತಿಗೆಡದೆ ಸ್ನೇಹಿತರ ಸಹಾಯದಿಂದ ಬಿಕಾಮ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವಿ ಪಡೆಯುತ್ತಾರೆ, ಇವರ ಅಂಗವಿಕಲತೆ ನೋಡಿ ಯಾರೂ ಕೆಲಸ ಕೊಡುವುದಿಲ್ಲ. ಕೆಲ ಹೃದಯವಂತರ ಮಾರ್ಗದರ್ಶನದಲ್ಲಿ ಈಜು ಕಲಿತರು. ವರ್ಷಗಳ ಸತತ ಪರಿಶ್ರಮದಿಂದ ಪ್ಯಾರಾಓಲಂಪಿಕ್ಸ್  ಈಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಪದಕಗಳ ಭೇಟೆ ಶುರುವಾಗುತ್ತದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮುನ್ನೆಲೆಗೆ ಬರುತ್ತದೆ. ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದೆ ಡ್ಯಾನ್ಸ್ ಕಲಿತು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾರೆ, ಮದುವೆಯೂ ಆಗುತ್ತೆ ಜತೆಗೆ ಒಂದು ಮಗು ಸಹ ಹುಟ್ಟುತ್ತದೆ.

 


ಸಂದೀಪ್ ಸಿಂಗ್ ಅಂತರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ. ಆಗ ಅವರ ಕ್ರೀಡಾ ಜೀವನದಲ್ಲಿ ಉತ್ತುಂಗದಲ್ಲಿದ್ದ ಸಮಯ. ಜರ್ಮನಿಯಲ್ಲಿ ನಡೆಯಲಿದ್ದ ವಿಶ್ವಕಪ್‌ ಗಾಗಿ ಆಡಬೇಕಿತ್ತು, ಒಮ್ಮೆ ಶತಾಬ್ದಿ ರೈಲಿನಲ್ಲಿ ಸಂಚರಿಸುತ್ತಿರುವಾಗ ಆಕಸ್ಮಿಕವಾಗಿ ಗುಂಡೇಟಿಗೆ ಸಿಲುಕಿದ ಸಿಂಗ್ ಗಂಭೀರವಾಗಿ ಗಾಯಗೊಂಡರುಜೀವನದ ಪ್ರಮುಖ ಘಟ್ಟದಲ್ಲಿ ಅಚಾನಕ್ಕಾಗಿ ಈ ಘಟನೆ ನಡೆದೇ ಹೋಯಿತು. ಪಾರ್ಶ್ವವಾಯುವಿಗೆ ತುತ್ತಾದರು. ಎರಡು ವರ್ಷಗಳ ಕಾಲ ಗಾಲಿಕುರ್ಚಿಯ ಮೇಲೆ ಇದ್ದರು. ಮುಂದೇನು ಎಂದು ದಿಕ್ಕೇ ತೋಚದಾಯಿತು. ಛಲ ಬಿಡಲಿಲ್ಲ. ಸೋಲನ್ನು ಒಪ್ಪಿಕೊಳ್ಳಲಿಲ್ಲ. ಮುಂದೆ ಗಂಭೀರವಾದ ಗಾಯದಿಂದ ಚೇತರಿಸಿಕೊಂಡಿದ್ದು ಮಾತ್ರವಲ್ಲದೆ, ಪುನಃ ಹಾಕಿ ತಂಡದಲ್ಲಿ ಪ್ರವೇಶ ಪಡೆದರು. ತದನಂತರ ಹಲವಾರು ಹಾಕಿ ಕ್ಲಬ್ ಗಳ ನಾಯಕತ್ವ ವಹಿಸಿಕೊಂಡರು, ಮತ್ತೆ ಕೋಟಿಗಟ್ಟಲೆ ದುಡಿಯಲು ಶುರುಮಾಡಿದರು. ಇಷ್ಟಕ್ಕೆ ಸುಮ್ಮನಾಗದೆ, ರಾಜಕೀಯಕ್ಕೆ ಕಾಲಿಟ್ಟು, ಶಾಸಕನಾಗಿ ಆಯ್ಕೆಯಾದರು, ಮುಂದೆ ಮಂತ್ರಿಯೂ ಆದರು.



ಪ್ರೇಮ್ ಗಣಪತಿ ಎನ್ನುವ ಒಬ್ಬ ತಮಿಳಿಗ, ಯಾವುದಾದರೊಂದು ಕೆಲಸ ಮಾಡಿಕೊಂಡು ಜೀವನ ರೂಪಿಸೋಣ ಅಂತ ಮುಂಬೈಗೆ ಬರ್ತಾನೆ. ಬಾಂದ್ರ ರೈಲ್ವೇ ಸ್ಟೇಶನ್ ನಲ್ಲಿ ಸ್ನೇಹಿತ ಬಂದು ಕರೆದುಕೊಂಡು ಹೋಗ್ತಾನೆ ಅಂತ ಕಾಯ್ತಿರ್ತಾನೆ. ಆದರೆ ಅವನು ಬರುವುದೇ ಇಲ್ಲ. ವಿಳಾಸ ಗೊತ್ತಿಲ್ಲ, ಕೈಯಲ್ಲಿ ಹಣವಿಲ್ಲ, ತಮಿಳು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಮುಂದೇನು ಮಾಡುವುದು ಎಂದು ದಿಕ್ಕೆಟ್ಟು ಕೂತಿದ್ದಾಗ, ದಾರಿಹೋಕರು ಒಬ್ಬರು ಅವನನ್ನು ಊರಿಗೆ ಹಿಂತಿರುಗಿಸಲು ಸಹಾಯ ಮಾಡ್ತಾರೆ, ಆದರೆ ಊರಿಗೆ ಹೋಗುವುದು ಬೇಡ ಇಲ್ಲಿಯೇ ಕೆಲಸ ಮಾಡಿಕೊಂಡು ಜೀವನ ಮಾಡ್ತೀನಿ ಅಂತ ಹೋಟೇಲೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರ್ತಾನೆ, ಕೆಲ ತಿಂಗಳುಗಳು ಕಳೆದ ನಂತರ ವೈಟರ್/ಸರ್ವರ್ ಕೆಲಸ ಕೊಡಿ ಅಂತ ಓನರ್ ಅನ್ನು ಕೇಳ್ತಾನೆ. ಓನರ್ ಒಪ್ಪುವುದಿಲ್ಲ, ಅದೇ ಸಮಯದಲ್ಲಿ ಪಕ್ಕದಲ್ಲಿಯೇ ಹೊಸ ಹೋಟೆಲ್ ಶುರುವಾಗುತ್ತದೆ, ಅಲ್ಲಿ ಟೀ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾನೆ. ಸಂಭಳ ಜಾಸ್ತಿಯಾಗುತ್ತದೆ, ಚೆನ್ನಾಗಿ ಕೆಲಸ ಮಾಡ್ತಾನೆ, ಒಳ್ಳೆಯ ಹೆಸರು ಪಡೆಯುತ್ತಾನೆ.  ಕೆಲಸಮಯದ ನಂತರ ಗ್ರಾಹಕರೊಬ್ಬರು, ನನ್ನ ಜತೆ ಬಾ  ಹೋಟೆಲ್ ಬಿಜಿನೆಸ್ ಶುರುಮಾಡೋಣ, ಬಂದ ಲಾಭದಲ್ಲಿ 50:50 ಅಂತ ಹೇಳಿ, ಹೋಟೆಲ್ ಪ್ರಾರಂಭಿಸುತ್ತಾರೆ. ವ್ಯಾಪಾರ ಜಾಸ್ತಿಯಾಗುತ್ತಲೆ ಆ ಮಾಲೀಕ ವರಸೆ ಬದಲಾಯಿಸುತ್ತಾನೆ. ಇವನನ್ನ ಹೋಟೆಲ್ಲಿನಿಂದ ಆಚೆ ಹಾಕುತ್ತಾನೆ. ಮತ್ತೆ ಬೀದಿಗೆ ಬಿದ್ದ ಪ್ರೇಮ್, ಈ ಬಾರಿ ತನ್ನ ಸಂಭಂಧಿಕರಿಂದ ಸಹಾಯಪಡೆದು, ತಳ್ಳುವ ಕೈಗಾಡಿಯಲ್ಲಿ ದೋಸೇ ಕ್ಯಾಂಪ್ ಶುರುಮಾಡುತ್ತಾನೆ. ಅದಕ್ಕೂ ಹಲವಾರು ಅಡಚಣೆಗಳು ಬರುತ್ತವೆ, ಆದರೂ ಛಲದಂಕಮಲ್ಲನಂತೆ ಹಠಬಿಡದೆ, ಮುನ್ನೆಡೆಸುತ್ತಾನೆ, ನಂತರ ಸ್ವಂತದೊಂದು ಚಿಕ್ಕ ಹೋಟೆಲ್ ಶುರುಮಾಡುತ್ತಾನೆ, ಮುಂದಿದ್ದು ಮಾತ್ರ ಊಹಿಸಲಾಗದ್ದು. ಈವತ್ತು ಅವನ ಉದ್ಯಮ ಚೈನ್ ಆಫ್ ರೆಸ್ಟೋರೆಂಟ್ ಮಾದರಿಯಲ್ಲಿ ಬೆಳೆದಿದೆ.  26 ಕಡೆ ಬ್ರಾಂಚ್ ತೆಗೆದಿದ್ದಾನೆ, 150 ಜನ ಕೆಲಸ ಮಾಡ್ತಿದ್ದಾರೆ. ವಾರ್ಷಿಕವಾಗಿ 5 ಕೋಟಿ ವ್ಯವಹಾರ ನಡಿತಾಯಿದೆ. 

 

ಸವಾಲುಗಳನ್ನ ಎದುರಿಸಿ ನಿಂತು ಜೀವನದಲ್ಲಿ ಗೆದ್ದ ಸಾವಿರಾರು ಜನರಿದ್ದಾರೆ, ಇಂತಹವರು ನಮಗೆ ಸ್ಪೂರ್ತಿದಾಯಕರಾಗಬೇಕು. ಇವತ್ತು ಸೋತುಹೋದೆವು ಎಂದು ಚಿಂತಿಸದೆ, ನಾಳೆ ಹೇಗೆ ಗೆಲ್ಲಬೇಕು ಎಂದು ಹೊಸರೀತಿಯಲ್ಲಿ ಆಲೋಚಿಸಬೇಕು. ಕೆಲವರು ಹೇಳ್ತಿರ್ತಾರೆ, ಎಷ್ಟೊಂದು ಬಾರಿ ಪ್ರಯತ್ನಿಸಿದ್ದೇನೆ ಆದರೆ ಯಶಸ್ಸು ಸಿಗಲಿಲ್ಲ ಅಂತ!. ಒಂದೇ ರೀತಿ ನೂರು ಬಾರಿ ಪ್ರಯತ್ನ ಮಾಡಿದರು ಸಹ ಗೆಲುವು ಸಿಗುವುದಿಲ್ಲ. ಒಂದು ಪ್ರಯತ್ನದಲ್ಲಿ ಸೋಲಾದಾಗ, ಅದರ ವಿಮರ್ಶೆ ಮಾಡಿ ಮುಂದಿನಬಾರಿ ವಿಭಿನ್ನರೀತಿಯಲ್ಲಿ ಪ್ರಯತ್ನಿಸಬೇಕು. ಪತ್ರಕರ್ತರೊಬ್ಬರು ಒಮ್ಮೆ ಎಡಿಸನ್ ಅವರನ್ನು ಕೇಳ್ತಾರೆ, "ನೀವು ಸಾವಿರ ಬಾರಿ ವಿಫಲವಾದಾಗ ಹೇಗೆ ಅನಿಸಿತು?" ಎಡಿಸನ್ ಅವರ ತುಂಬಾ ಸರಳವಾಗಿತ್ತು  “ನಾನು ಸಾವಿರ ಬಾರಿ ವಿಫಲವಾಗಲಿಲ್ಲ. ಬಲ್ಬ್  ಆವಿಷ್ಕಾರಕ್ಕಾಗಿ 1000 ಪ್ರಯತ್ನಗಳ ಅಗತ್ಯವಿತ್ತು ಎಂದು ಮನಗಂಡೆ". ಎಡಿಸನ್ ಅವರಂತೆಯೇ, ವೈಫಲ್ಯ ಅಥವ ಸೋಲು ಎನ್ನುವುದು ಗೆಲುವಿನ ಮೆಟ್ಟಿಲು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

 ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವುದು ಇದು ಒಂದು ನಿದರ್ಶನ. ಸಮಸ್ಯೆಗಳು ಬಂದಾಗ ಕೊರಗಿ ಫಲವಿಲ್ಲ, ಪರಿಹರಿಸುವ ಮಾರ್ಗೋಪಾಯಗಳ ಕಂಡುಹಿಡಿಯುವುದರ ಬಗ್ಗೆ ಗಮನವಹಿಸಬೇಕು. ಎಂಥದೇ  ಸಮಸ್ಯೆ ಬರಲಿ, ಅಡಚಣೆಯಾಗಲಿ, ಏನೇ ಆಗಲಿ, ಆಗಿದ್ದೆಲ್ಲ ಒಳ್ಳೆಯದಕ್ಕೆ ಎನ್ನುವ ಆಶಾಭಾವನೆ ಇರಲಿ.

 ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

------------------ *********** -----------------

ಭಾನುವಾರ, ಮಾರ್ಚ್ 24, 2024

ಅನ್ಯಗ್ರಹ ದಂತೆ ಇರುವ ಸೊಕೊಟ್ರಾ ದ್ವೀಪ (Socotra, Yemen)

ಪ್ರಪಂಚದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿರುತ್ತದೆ. ಕೆಲ ಜಾಗದಲ್ಲಿನ ವಿಶಿಷ್ಟತೆ ಬೇರೆಲ್ಲಿಯೂ ಇರುವುದಿಲ್ಲ. ಇಂತಹ ಹಲವಾರು ಪ್ರದೇಶಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ ಸೊಕೊಟ್ರಾ ದ್ವೀಪವು  ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಭೂಮಿಯ ಮೇಲಿನ ಅನ್ಯಲೋಕದ ಸ್ಥಳದಂತೆ ಮತ್ತು ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ಈ ಪ್ರದೇಶವಿರುವುದು ವಿಶೇಷ. ಭೂಮಿಯ ಮೇಲೆ ಈ ತರಹದ ಸ್ಥಳ ಇದೆಯಾ ಎಂದು ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದಾರೆ.  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಅರೇಬಿಕ್ ಪ್ರಕಾರ ಸೊಕೋಟ್ರಾ ಶಬ್ದವು ಎರಡು ಪದಗಳಿಂದ ರೂಪುಗೊಂಡಿದೆ. ಒಂದು ಸೂಕ್ ಮತ್ತೊಂದು ಕೊಟ್ರಾ. ಸೂಕ್ ಎಂದರೆ ಬಜಾರ್. ಕೊಟ್ರಾ ಎಂದರೆ, ಡ್ರಾಗನ್ ಬ್ಲಡ್ ಟ್ರೀಯಿಂದ ತೊಟ್ಟಿಕ್ಕುವ ಅಂಟು ಅಥವ ರಸ ಎನ್ನುವ ಅರ್ಥವಿದೆ.

 


ಭೌಗೋಳಿಕ ವಿವರ:

ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು ಸರಿಸುಮಾರು 132 ಕಿಲೋಮೀಟರ್ ಉದ್ದ ಮತ್ತು 49.7 ಕಿಲೋಮೀಟರ್ ಅಗಲವನ್ನು ಹೊಂದಿದೆ.  ಒಟ್ಟು 3796 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಭೌಗೋಳಿಕವಾಗಿ ಈ ಸ್ಥಳವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು, ಕರಾವಳಿ ಬಯಲು ಪ್ರದೇಶ, ಸುಣ್ಣಕಲ್ಲಿನ ಪ್ರಸ್ಥಭೂಮಿ (limestone plateau) ಮತ್ತು ಹಜೀರ್ / ಹಗ್ಗಿಯರ್ ಪರ್ವತಗಳು (Hajhir / Hagghier mountains). ಯಮೆನ್, ಒಮಾನ್, ಸೌದಿ ಅರೇಬಿಯಾದ ದೇಶಗಳು ಹತ್ತಿರದಲ್ಲಿರುವುದರಿಂದ ಈ ದ್ವೀಪ ಅರೆ ಮರುಭೂಮಿಯ ಹವಾಮಾನವನ್ನು ಹೊಂದಿದೆ ಮತ್ತು ಸರಾಸರಿ ತಾಪಮಾನವು 25 ಡಿಗ್ರಿಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಇಲ್ಲಿ ಬೀಳುತ್ತದೆ. ಭಾರತದಂತೆ, ಜೂನ್ ನಿಂದ ಸೆಪ್ಟೆಂಬರ್ ರವರೆಗೂ ಇಲ್ಲಿ ಮುಂಗಾರು ಇರುತ್ತದೆ.

 


ಇಲ್ಲಿನ ಮೂಲನಿವಾಸಿಗಳು ಸೊಕೋಟ್ರಿ ಎನ್ನುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತಿದ್ದಾರೆ. ಅಂದಾಜು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಈ ಭಾಷೆಗೆ ಇದೆ. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇಲ್ಲಿನ ಪ್ರಮುಖ ಪಟ್ಟಣ "ಹದಿಬು". ಜನಸಂಖ್ಯೆ 60000. ಇಲ್ಲಿನ ಜನಾಂಗದ ಬಗ್ಗೆ ಹೇಳುವುದಾದರೆ, ಪ್ರಧಾನವಾಗಿ ಸೊಕೊಟ್ರಿ ಗಳು ಬಹುಸಂಖ್ಯಾತರು, ಮಿಕ್ಕುಳಿದಂತೆ ಅಲ್ಪಸಂಖ್ಯಾತ ಯೆಮೆನಿಗಳು, ಹದರೆಮ್ ಮತ್ತು ಮೆಹ್ರಿಸ್ ಜನಾಂಗದ ಜನರು ಇಲ್ಲಿದ್ದಾರೆ. ಈ ದ್ವೀಪವು ಗಲ್ಫ್ ಆಫ್ ಏಡೆನ್ ಬಳಿ ಆಯಕಟ್ಟಿನ ಸ್ಥಳದಲ್ಲಿದ್ದರೂ, ಸಮುದ್ರ ಪ್ರಯಾಣದ ನ್ಯಾವಿಗೇಶನ್ ಗೆ ಸಂಭಂಧಿಸಿದ ಸಮಸ್ಯೆಗಳಿಂದ ಸೊಕೊಟ್ರಾ ಎಂದಿಗೂ ಪ್ರಮುಖ ವ್ಯಾಪಾರ ಕೇಂದ್ರವಾಗಲಿಲ್ಲ. ಮುಂಗಾರಿನಲ್ಲಿ ಕಡಲ ತೀರಕ್ಕೆ ಅಪ್ಪಳಿಸುವ ರಭಸದ ಅಲೆಗಳಿಂದಾಗಿ ಇಲ್ಲಿನ ಸಮುದ್ರ ತೀರಗಳು ಹಡಗುಗಳನ್ನು ಲಂಗರು ಹಾಕುವುದಿಕ್ಕೆ ಯೋಗ್ಯವಾಗಿರಲಿಲ್ಲ.

 


* ಇಲ್ಲಿನ ವಿಶೇಷ:* ಸೊಕೊಟ್ರಾವು ಕಠಿಣ ಹವಾಮಾನವನ್ನು ಹೊಂದಿದೆ. ಅತ್ಯಂತ ಬಿಸಿ ಮತ್ತು ಶುಷ್ಕ ವಾತಾವರಣವಿರುವುದರಿಂದ ಈ ದ್ವೀಪವು ತುಂಬಾ ವಿಶಿಷ್ಟ ವಾಗಿದೆ. ಇಲ್ಲಿ ಕಂಡು ಬರುವ  ವಿಭಿನ್ನ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿಧ್ಯಗಳ ಕಾರಣದಿಂದಾಗಿ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಇದನ್ನು ಗುರುತಿಸಲಾಗಿದ್ದು, ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ  ಹೂಗಳು ಮತ್ತು ಇಲ್ಲಿರುವ ಸಸ್ಯ ರಾಶಿಗಳ ಮೂರನೇ ಒಂದು ಭಾಗವು  ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಜಾಗ 825 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 308 (37%) ಸ್ಥಳೀಯವಾಗಿವೆ. ಈ ಜಾತಿಯ ಗಿಡಗಳು ಭೂಮಿಯ ಮೇಲೆ ಎಲ್ಲಿಯೂ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅನ್ಯಲೋಕದ ಸ್ಥಳವೆಂದೇ ಇದನ್ನು ಗುರುತಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಅಲೋವೇರ, ಅಂಬರ್, ಕಸ್ತೂರಿ, ಮುತ್ತುಗಳು ಮತ್ತಿತರ ವಸ್ತುಗಳು ಇಲ್ಲಿ ದೊರಕುತ್ತವೆ.  ಕ್ರಿ.ಪೂ 2400 ವರ್ಶಗಳ  ಹಿಂದಿನಿಂದಲೂ  ಸೊಕೊಟ್ರಾ ದ್ವೀಪವು ಸುಗಂಧ ದ್ರವ್ಯ, ಮಿರ್ಹ್ ಮತ್ತು ಅಲೋವೇರ ಮಾತ್ರವಲ್ಲದೆ ಡ್ರ್ಯಾಗನ್‌ ಬ್ಲಡ್ ಮರ ದಿಂದ ಒಸರುವ ಅಂಟನ್ನು ರಫ್ತು ಮಾಡುತಿದ್ದ ಬಗ್ಗೆ ದಾಖಲೆಗಳು ಲಭ್ಯವಿದೆ.  ಡ್ರ್ಯಾಗನ್‌ ಬ್ಲಡ್ ಟ್ರೀ ಮತ್ತು ಸೊಕೊಟ್ರಾದ ಮರುಭೂಮಿ ಗುಲಾಬಿ ಸೇರಿದಂತೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಈ ದ್ವೀಪವು ನೆಲೆಯಾಗಿದೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುವ ಉತ್ತಮ ಗುಣಮಟ್ಟದ ಅಲೋ ವೆರಾ ಗಿಡಗಳು ನೈಸರ್ಗಿಕವಾಗಿ ಇಲ್ಲಿ ಬೆಳೆಯುತ್ತಿವೆ. ಭೂಮಿಯ ಮೇಲೆ ಕೆಲವೇ ಕೆಲವು ದ್ವೀಪಗಳು ಮಾತ್ರ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರಭೇದಗಳನ್ನು ಹೊಂದಿವೆ, ಅವು, "ಸೊಕೋಟ್ರ",  "ಹವಾಯಿ" ಮತ್ತು "ಗ್ಯಾಲಪಗೋಸ್" ದ್ವೀಪಗಳು.

 




ಡ್ರ್ಯಾಗನ್‌ ಬ್ಲಡ್ ಟ್ರೀ:- ಗೇಮ್ ಆಫ್ ಥ್ರೋನ್ಸ್ ನಲ್ಲಿ ಕಂಡು ಬರುವ ಮರಗಳು ಇವೆಯಲ್ಲ, ಅದೇ ತರಹ ಮರಗಳು ಈ ದ್ವೀಪದಲ್ಲಿವೆ. ಅದನ್ನ ಡ್ರ್ಯಾಗನ್‌ ಬ್ಲಡ್ ಟ್ರೀ  ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರದ ವೈಜ್ನಾನಿಕ ಹೆಸರು Dracaena cinnabari ಎನ್ನುತ್ತಾರೆ. ಈ ಜಾತಿಯ ಮರ ಬೇರೆಲ್ಲಿಯೂ ಬೆಳೆಯುವುದಿಲ್ಲ.  ಈ ಗಿಡದಿಂದ ತೊಗಟೆಯಿಂದ ಒಸರುವ ರಸವು ಔಷದೀಯ ಗುಣ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ.  ಮಧ್ಯ ಪ್ರಾಚೀನಯುಗದಲ್ಲಿ ಡ್ರಾಗನ್ ಮರದ ರಕ್ತದಂತಹ ಕೆಂಪು ರಸವನ್ನು ಮಾಂತ್ರಿಕ ಮತ್ತು ರಸಾಯನ ಶಾಸ್ತ್ರದ ವಿದ್ಯೆಯಲ್ಲಿ ಬಳಸಲಾಗುತ್ತಿತ್ತು. ಇಲ್ಲಿನ ದಂತಕಥೆಯ ಪ್ರಕಾರ, ಯುದ್ದದಲ್ಲಿ ಆಗುವ ಗಾಯಗಳನ್ನು ಅತಿ ಬೇಗ ವಾಸಿಮಾಡಿಕೊಳ್ಳುವುದಕ್ಕಾಗಿ ಡ್ರಾಗನ್ ಮರದಿಂದ ಒಸರುವ ಈ ಅಂಟಿನಂತಹ ರಾಳವನ್ನು ಗ್ಲಾಡಿಯೇಟರ್ ಗಳು ಮೈಮೇಲೆ ಉಜ್ಜಿಕೊಳ್ಳುತಿದ್ದರಂತೆ. ಹಿಂದಿನ ಕಾಲದಿಂದಲೂ ಈ ಮರಕ್ಕೆ ಅಮೂಲ್ಯವಾದ ಸ್ಥಾನವಿದ್ದು, ಇಂದಿಗೂ ಇದು ಪ್ರಾಶಸ್ತ್ಯವನ್ನು ಪಡೆದಿದೆ. ಈ ಮರಗಳಲ್ಲಿ ದೊರಕುವ ಅಂಟು, ಹಡಗು ನಿರ್ಮಾಣಕ್ಕೆ ಉಪಯೋಗಿಸಲಾಗುತಿತ್ತಂತೆ, ಈ ಅಂಟಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಬೇಡಿಕೆಯಿತ್ತು.

 

ಸಾಂಭ್ರಾಣಿ: ಈ ಪ್ರದೇಶದಲ್ಲಿ ಸಾಂಭ್ರಾಣಿ ಮರಗಳು ಇವೆ. ನಮ್ಮ ಲೋಭಾನದ ಅಂಟು ಈ ಮರಗಳಿಂದ ಉತ್ಪತ್ತಿಯಾಗುತ್ತದೆ. ಅದನ್ನು ಇಲ್ಲಿನ ಜನರು ಸಂಗ್ರಹಿಸಿ ಮಾರುತಿದ್ದರಂತೆ. ದೇಶ ವಿದೇಶಗಳಿಂದ ಈ ಪ್ರದೇಶ ದಿಂದ ಹಾದು ಹೋಗುವಾಗ, ಇಲ್ಲಿ ಉತ್ತಮ ದರ್ಜೆಯ ಲೋಭಾನ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ಇಲ್ಲಿ ನಡೆಯುತಿತ್ತು.

 

UNESCO ವಿಶ್ವ ಪರಂಪರೆಯ ತಾಣ: ಈ ದ್ವೀಪದಲ್ಲಿರುವ ವಿಶಿಷ್ಟ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು  2008 ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. 

 


ಭಾರತದೊಂದಿಗಿನ ನಂಟು:

ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ, ಕಾಲಕ್ರಮೇಣ ಬಳಕೆಯಲ್ಲಿ ಇಂದು ಅಪಭ್ರಂಶವಾಗಿ ಸೊಕೋಟ್ರಾ ವಾಗಿದೆ. ಸಂಶೋಧಕ ಪೀಟರ್ ಡಿ ಗೀಸ್ಟ್ ನೇತೃತ್ವದಲ್ಲಿ, ಇಲ್ಲಿ ಸಂಶೋದನೆ ನಡೆಸಿದಾಗ ಪ್ರಾಚೀನ ಭಾರತೀಯ ಬ್ರಾಹ್ಮಿ ಮತ್ತು ಖರೋಷ್ಟಿ ಲಿಪಿಗಳಲ್ಲಿನ  ಬರಹಗಳುಳ್ಳ ವಸ್ತುಗಳು ಇಲ್ಲಿ ದೊರೆತಿವೆ.  ಇವು ಎರಡನೇ ಶತಮಾನದಿಂದ ನಾಲ್ಕನೇ ಶತಮಾನದವರೆಗಿನ ಹಿಂದಿನ ಅವಧಿಯವು ಎಂದು ಹೇಳಲಾಗುತ್ತಿದೆ. ಅವರ ಸಂಶೋಧನೆಯ ಪ್ರಕಾರ, ದ್ವೀಪಕ್ಕೆ ಭೇಟಿ ನೀಡಿದ ವಸಾಹತುಗಾರರು, ನಾವಿಕರು ಮತ್ತು ವ್ಯಾಪಾರಿಗಳು ಇಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಗಳಿವೆ  ಎನ್ನಲಾಗಿದೆ. ಈ ಬರಹಗಳಲ್ಲಿ ಗುಹೆಯಲ್ಲಿ ಆಶ್ರಯ ಪಡೆದಿದ್ದ ವಿವಿಧ ನಾವಿಕರು ಮತ್ತು ವಸಾಹತುಗಾರರ ಹೆಸರುಗಳನ್ನು ಒಳಗೊಂಡಿವೆ ಎಂದು ಅನ್ವೇಷಿಸಿದ್ದಾರೆ. ಇವರೆಲ್ಲರ ಹೆಸರು ಮತ್ತು ಊರು ಅಖಂಡ ಭಾರತ ದೇಶಕ್ಕೆ ಸಂಭಂಧಿಸಿದಾಗಿದೆ. ಇಲ್ಲಿನ ಕ್ಯಾಂಬೆ ಕೊಲ್ಲಿಯಲ್ಲಿ ದೊರೆತ ಒಂದು ಬರಹದಲ್ಲಿ,  ಹಸ್ತಕವಪ್ರದ ವಿಷ್ಣುಸೇನ ಎನ್ನುವ ಹೆಸರನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಬರಹದಲ್ಲಿ ಉಪಶೀಲ ಎನ್ನುವ ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ವ್ಯಕ್ತಿಯ ಹೆಸರನ್ನು ಖರೋಷ್ಟಿ ಲಿಪಿಯಲ್ಲಿ ಕೆತ್ತಲಾಗಿದೆ.

 


ಭಾರತ, ಆಫ್ರಿಕ ಮತ್ತು ಅರೇಬಿಯಾದ ಕಡಲು ಮಾರ್ಗದ ಆಯಕಟ್ಟಿನ ಜಾಗದಲ್ಲಿ ಈ ಪ್ರದೇಶವಿದ್ದಿದ್ದರಿಂದ ಇಲ್ಲಿ ಭಾರತೀಯ ವ್ಯಾಪಾರಿಗಳು ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರದೇಶದ ಮುಖಾಂತರ ಹಾದು ಹೋಗುತಿದ್ದರು ಮತ್ತು ಕೆಲವರು ಇಲ್ಲಿ ನೆಲೆಸಲು ಪ್ರಾರಂಭಿಸಿದ್ದರು. ಹಾಗೆಯೇ, ಭಾರತೀಯ ವ್ಯಾಪಾರಿಗಳು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅಂದಿನ ಅಖಂಡ ಭಾರತದ ಉತ್ತರದ ವ್ಯಾಪಾರಿಗಳು ಒಳನಾಡಿನಿಂದ ಗುಜರಾತಿನ ಕರಾವಳಿಯಲ್ಲಿರುವ ಭರೂಚ್ ನಗರದಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಪಯಣಿಸುತಿದ್ದರೆನ್ನುವುದಕ್ಕೆ ಇಲ್ಲಿ ದೊರೆತ ದಾಖಲೆಗಳು ಬಲವಾದ ಪುರಾವೆ ನೀಡುತ್ತವೆ. ಇದಕ್ಕೆ ಪೂರಕವೆಂಬಂತೆ ಹರಪ್ಪ ಮೆಹಂಜಾದಾರೋ ಸಮಯದಿಂದಲೂ ಅರಬ್ ರಾಷ್ಟ್ರಗಳೊಂದಿಗೆ ಭಾರತೀಯರು ವ್ಯಾಪಾರ ವಹಿವಾಟು ನಡೆಸುತಿದ್ದ ದಾಖಲೆಗಳು ಒಮಾನ್ ನಲ್ಲಿ ದೊರೆತಿವೆ.

 


ದ್ವೀಪದಲ್ಲಿನ ಹೋಕ್ ಗುಹೆಯಲ್ಲಿ 4 ನೇ ಶತಮಾನದ ವಿಗ್ರಹಗಳು ದೊರೆತಿವೆ. ಈ ಗುಹೆಯಲ್ಲಿ ಸಿಕೋಟ್ರಿ ಮಾತ ಎನ್ನುವ ದೇವರನ್ನು ಪೂಜಿಸುತಿದ್ದರು. ಭಾರತೀಯ ನಾವಿಕರು ಮತ್ತು ವ್ಯಾಪಾರಿಗಳು, ಸಮುದ್ರ ಮಾರ್ಗದಿಂದ ಹಾದು ಹೋಗುವಾಗ, ಯಾವುದೇ ಅಡಚಣೆಗಳು ಎದುರಾಗದಿರಲಿ ಎಂದು ಇಲ್ಲಿ ಪ್ರಾರ್ಥಿಸುತಿದ್ದರು. ಚಿಕ್ಕದಾದ ಮರದ ಹಡಗನ್ನು ಪೂಜಿಸಿ ದೇವತೆಯ ಪಾದದಲ್ಲಿಟ್ಟು ನಮಸ್ಕರಿಸುತಿದ್ದರಂತೆ. ಈಗ ಗುಜರಾತಿನಲ್ಲಿ ಕಂಡು ಬರುವ ಸಿಕೋಟ್ರಿ ಮಾತಾ ಎನ್ನುವ ದೇವಸ್ಥಾನಗಳು ಈ ಸೊಕೋಟ್ರಾ ದಲ್ಲಿ ಪ್ರಾರಂಭಿಸಿದ ನಂಬಿಕೆಯಿಂದ ಪೂಜಿಸಲ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇವತೆ, ನಾವಿಕರು ಮತ್ತು ವ್ಯಾಪಾರಿಗಳಿಗೆ ರಕ್ಷಣೆ ನೀಡುತಿದ್ದಳಂತೆ.

 

ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದೊಂದಿಗಿನ ಸಂಭಂದದ ಕುರಿತಾಗಿ ಹೇಳುವಾಗ, ಒಂದು ಮಹತ್ವದ ವಿಷಯ ಪ್ರಸ್ತಾಪಿಸಬೇಕು. ನಾವು ಧೈನಂದಿನ ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು. ಇಂದು ಅತಿ ಹೆಚ್ಚು, ಉತ್ಕೃಷ್ಟ ಮಟ್ಟದ ತುಪ್ಪ ಇಲ್ಲಿ ತಯಾರಾಗಿ ಪಕ್ಕದ ರಾಷ್ಟ್ರಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

 


ಪೋರ್ಚೂಗೀಸರ ಆಕ್ರಮಣ:  ಭಾರತದ ಸಂಪತ್ತಿನ ಬಗ್ಗೆ ಇದ್ದ ರೋಚಕ ವಿಷಯಗಳಿಂದ ಆಕರ್ಷಿತರಾಗಿದ್ದ ಪೋರ್ಚುಗೀಸರು, ನಾವಿಕ ವಾಸ್ಕೋಡಗಾಮನ ಮುಖಾಂತರ ಭಾರತಕ್ಕೆ ಸಮುದ್ರ ಮಾರ್ಗವನ್ನ ಕಂಡುಹಿಡಿಯುತ್ತಾರೆ, ನಂತರ, ತಮ್ಮ ದೊಡ್ಡ ಸೈನ್ಯದೊಂದಿಗೆ ಆಫ್ರಿಕಾದಿಂದ ಹಿಡಿದು, ಯಮೆನ್, ಒಮಾನ್, ಪಾಕಿಸ್ತಾನ್, ಭಾರತದ ಕರಾವಳಿ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯುತ್ತ ಹೋಗುತ್ತಾರೆ. ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಕಡಲುಮಾರ್ಗಗಳ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದುತ್ತಾರೆ.

     1507 ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್ ಅವರೊಂದಿಗೆ ಟ್ರಿಸ್ಟಾವೊ ಡ ಕುನ್ಹಾ ನೇತೃತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯು ಸೊಕೊಟ್ರಾ ದಲ್ಲಿ ಇಳಿದು ಅಲ್ಲಿ ಆಳ್ವಿಕೆ ನಡೆಸುತಿದ್ದ ಮೆಹರಾ ಸುಲ್ತಾನರ ವಿರುದ್ಧ ಯುದ್ಧ ಮಾಡಿ ಜಯಿಸಿದ ನಂತರ ಆ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಭಾರತಕ್ಕೆ ಹೋಗುವ ಮಾರ್ಗದಲ್ಲಿ ಈ ಆಯಕಟ್ಟಿನ ಸ್ಥಳದಲ್ಲಿ ತಮ್ಮ ರಕ್ಷಣಾ ನೆಲೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿನ ಸೂಕ್ತ ಬಂದರಿನ ಕೊರತೆ, ಕಠಿಣ ಹವಮಾನ ಮತ್ತು ಬರಡು ಭೂಮಿಯಂತಹ ಪ್ರದೇಶ, ಇವೆಲ್ಲದರ ಕಾರಣದಿಂದ ಇವರ ರಕ್ಷಣಾ ಪಡೆಯು ಕ್ಷಾಮ ಮತ್ತು ಅನಾರೋಗ್ಯಕ್ಕೆ ತುತ್ತಾಯಿತು. ಇಲ್ಲಿ ಲಾಭಕ್ಕಿಂತ, ನಷ್ಟವೇ ಜಾಸ್ತಿಯೆಂದು, ಪೋರ್ಚುಗೀಸರು 1511 ರಲ್ಲಿ ದ್ವೀಪವನ್ನು ತ್ಯಜಿಸುತ್ತಾರೆ.  ಆಗ ಮೆಹರಾ ಸುಲ್ತಾನರು, ದ್ವೀಪದ ನಿಯಂತ್ರಣವನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.

     ಬ್ರಿಟೀಷರ ಆಳ್ವಿಕೆ: ಭಾರತವನ್ನು ವಸಾಹತುವನ್ನಾಗಿ ಬ್ರಿಟೀಷರು ತಮ್ಮ ಕೈವಶ ಮಾಡಿಕೊಂಡಿದ್ದಾಗ, ಹಲವು ಬಾರಿ ಈ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು 1834 ರಲ್ಲಿ ಬ್ರಿಟಿಷರು ದ್ವೀಪವನ್ನು ಖರೀದಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಲ್ಲಿನ ಸುಲ್ತಾನ ಮಾರಾಟಕ್ಕೆ ಒಪ್ಪುವುದಿಲ್ಲ. ಕೊನೆಗೆ 1880 ರ ದಶಕದಲ್ಲಿ, ಇಲ್ಲಿನ ಸುಲ್ತಾನನು, ಬ್ರಿಟಿಷ್ ರಕ್ಷಣೆಯನ್ನು ಪಡೆಯಲು  ಒಪ್ಪಿ ಕರಾರು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮಾನಕ್ಕೂ ಮೊದಲು, ಭಾರತ, ಫೂರ್ವ ಆಫ್ರಿಕ ದೇಶಗಳು ಮತ್ತು ಅರಬ್ ರಾಷ್ಟ್ರಗಳನ್ನು ಸಂಪರ್ಕಿಸಲು ಆಫ್ರಿಕಾ ಖಂಡವನ್ನು ಸುತ್ತಿ ಬಳಸಿ ಭಾರತವನ್ನು ತಲುಪಬೇಕಾಗುತಿತ್ತು. ಕಡಿಮೆ ಸಮಯ ಮತ್ತು ಇಂಧನವನ್ನು ಉಳಿಸುವ ನಿಟ್ಟಿನಲ್ಲಿ  ಈಜಿಪ್ಟ್ ರಾಷ್ಟ್ರದ ಬಳಿ ಸೂಯೆಜ್ ಕಾಲುವೆಯನ್ನು ನಿರ್ಮಿಸಲಾಯಿತು. ಯಾವಾಗ ಸೂಯೇಜ್ ಕಾಲುವೆ ನಿರ್ಮಾಣವಾಯಿತೋ, ಆಗ ಈ ಸೊಕೊಟ್ರಾ  ದ್ವೀಪದ ಮೇಲೆ ಬ್ರಿಟೀಷರು ಹಿಡಿತ ಸಾಧಿಸಿದರು. ಭಾರತಕ್ಕೆ ಸಮುದ್ರ ಮಾರ್ಗವಾಗಿ ತೆರಳುವ ಹಡಗುಗಳನ್ನು ನಿಯಂತ್ರಿಸಲು ದ್ವೀಪವು ನಿರ್ಣಾಯಕ ಪಾತ್ರವಹಿತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಬಯಿ ಪಟ್ಟಣ ಪ್ರಮುಖ ಲ್ಯಾಂಡಿಂಗ್ ಬಂದರು ಆಗಿದ್ದರಿಂದ, ಸೊಕೊಟ್ರಾ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು ಮತ್ತು ಅಲ್ಲಿಂದ ಬ್ರಿಟಿಷ್ ಭಾರತದ ಭಾಗವಾಗಿ ಆಡಳಿತ ನಡೆಸಲಾಯಿತು. ಇದು 1937 ರವರೆಗೂ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ತದ ನಂತರ, ಈ ದ್ವೀಪವನ್ನು  ಪ್ರತ್ಯೇಕಿಸಿ ಗಲ್ಫ್ ಆಫ್ ಏಡೆನ್ ಪ್ರೊಟೆಕ್ಟರೇಟ್ ಅಡಿಯಲ್ಲಿ ಇರಿಸಲಾಯಿತು. ಭಾರತದಿಂದ ಬ್ರಿಟೀಷರು ಹೊರಟು ಹೋದ ಮೇಲೆ, ಈ ದ್ವೀಪವು ಸಹ ಸ್ವತಂತ್ರಗೊಂಡಿತು.

     ರಷಿಯನ್ನರ ಪ್ರಾಬಲ್ಯ: ಬ್ರಿಟಿಷ್ ಆಳ್ವಿಕೆಯ ಅಂತ್ಯವಾದ ನಂತರ, ಯೆಮನ್ ರಾಷ್ಟ್ರದಲ್ಲಿ ಶೀತಲ ಸಮರ ಪ್ರಾರಂಭ ವಾಯಿತು. ಕೊರಿಯಾ ದೇಶದಂತೆ, ಇಲ್ಲಿಯೂ ದೇಶ ಉತ್ತರ ಯಮೆನ್ ಮತ್ತು ದಕ್ಷಿಣ ಯಮೆನ್ ಎಂದು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು. ಎರಡು ಕಡೆಯೂ ವಿಭಿನ್ನ ರಾಜಕೀಯ ಶಕ್ತಿಗಳು ಅಧಿಕಾರ ಪಡೆದವು. . ದಕ್ಷಿಣ ಯೆಮೆನ್, ಸೊಕೊಟ್ರಾ ದ್ವೀಪದ ಜೊತೆಗೆ ಸೋವಿಯತ್ ಪ್ರಭಾವಕ್ಕೆ ಒಳಪಟ್ಟಿತು. ಮಾರ್ಕ್ಸ್‌ವಾದಿಗಳು ಅಧಿಕಾರ ವಹಿಸಿಕೊಂಡಂತೆ, ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಯೆಮೆನ್ ಅನ್ನು ಘೋಷಿಸಲಾಯಿತು - ವಿಶ್ವದ ಏಕೈಕ ಅರಬ್ ಕಮ್ಯುನಿಸ್ಟ್ ರಾಜ್ಯ ವೆನ್ನುವ ಹೆಸರು ಪಡೆಯಿತು. ರಷಿಯನ್ ರು ಇಲ್ಲಿಗೆ ಬರಲು ಪ್ರಮುಖ ಕಾರಣ, ಈ ಪ್ರದೇಶದಲ್ಲಿದ್ದ ತೈಲ ನಿಕ್ಷೇಪಗಳು ಹಾಗೂ ಪ್ರಪಂಚದ ಪ್ರಮುಖ ಸಮುದ್ರ ಮಾರ್ಗವೆಂದು ಗುರುತಿಸಿದ್ದ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕಣ್ಣಿಡಲು ತಮ್ಮ ರಕ್ಷಣಾ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. ತದನಂತರ ದ್ವೀಪವನ್ನು ಮುಕ್ತ ಜಗತ್ತಿಗೆ ನಿರ್ಭಂದ ಹೇರಿ, ಇದರ ಬಳಕೆಯನ್ನು ಕೇವಲ ಸೋವಿಯತ್ ಮತ್ತು ದಕ್ಷಿಣ ಯೆಮೆನ್ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

 


ಯಮೆನ್ ಗಣ ರಾಜ್ಯ:

ಈ ಮೊದಲು ವಿಭಜನೆಗೊಂಡಿದ್ದ  ಯೆಮೆನ್ ರಾಷ್ಟ್ರ, 1990 ರಲ್ಲಿ ಸೋವಿಯತ್ ರಾಷ್ಟ್ರಗಳ ಒಕ್ಕೂಟದ ಪತನದ ನಂತರ,  ಪುನರ್ ಏಕೀಕರಣ ಗೊಂಡಿತು. ಪುನರೇಕೀಕರಣದ ನಂತರ ಮಾತ್ರ ದ್ವೀಪವನ್ನು ಮತ್ತೊಮ್ಮೆ ಜಗತ್ತಿಗೆ ತೆರೆಯಲಾಯಿತು. ಅಂದಿನಿಂದ ಈ ದ್ವೀಪ, ಪ್ರವಾಸಿಗರನ್ನು,  ಸಂಶೋಧಕರು ಮತ್ತು ಮಾನವಶಾಸ್ತ್ರಜ್ಞರು ಭೇಟಿ ನೀಡಿ ಸಂಶೋಧನೆ ನಡೆಸುತಿದ್ದಾರೆ. ಅದ್ಭುತವಾದ ಸಮುದ್ರ ತೀರಗಳು, ವಿಶಿಷ್ಟ ಜಾತಿಯ ಗಿಡಮರಗಳು ಮತ್ತು ದೊಡ್ಡ ದಾದ ಅತಿ ಸುಂದರ ಕಣಿವೆ ಪ್ರದೇಶಗಳು ಇಲ್ಲಿದ್ದರೂ, ಯಮೆನ್ ನಲ್ಲಿನ ರಾಜಕೀಯ ಅನಿಶ್ಚಿತತೆ, ಆಂತರಿಕ ಯುದ್ದಗಳು  ಮತ್ತು ಪಕ್ಕದ ಸೋಮಾಲಿಯಾ ಕಡಲ್ಗಳ್ಲರ ಹಾವಳಿಯಿಂದ ಪ್ರವಾಸೋಧ್ಯಮದಿಂದ ಈ ದ್ವೀಪವು ಜನರಿಂದ ದೂರವೇ ಉಳಿದಿದೆ. ಅಭಿವೃದ್ದಿಯು ಮರೀಚಿಕೆಯಾಗಿದೆ.






ಬರಹ:-

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Credit:  Original Owners, Google

Article is just for knowledge sharing only.

#socotra #oman #muscat #kannada #PSR #PS_Ranganatha #ಸೊಕೊಟ್ರಾ #Bangalore #Karnataka #India #Yemen #muscat #sohar #salalah #sur #nizwa #sanaa  

ಭಾನುವಾರ, ಮಾರ್ಚ್ 3, 2024

ಪ್ರಾಮಾಣಿಕತೆ ಮೆರೆದಿದ್ದ ನನ್ನ ಅವ್ವ ತಾತ



ನಮ್ಮ ತಾತ ದಿ. ನೆಟ್ಟಕಲ್ಲಪ್ಪ ಮತ್ತು ದಿ.ನಾಗಮ್ಮ ನವರು ಪ್ರಾತಃ ಸ್ಮರಣೀಯರು. ನಮ್ಮ ಇಡೀ ಜೀವಮಾನವೇ ನೆನೆಪಿಸಿಕೊಳ್ಳುವಂತಹ ಆದರ್ಶ  ಗುಣಗಳುಳ್ಳ, ಯಾವುದೇ ಸ್ವಾರ್ಥವಿಲ್ಲದೆ ಜೀವನ ನಡೆಸಿದ ಪುಣ್ಯಾತ್ಮರು. ಕಾಯಿಲೆ ಬಂದು ಹಾಸಿಗೆ ಹಿಡಿಯುವವರೆಗೂ ಕಷ್ಟಪಟ್ಟು ದುಡಿದು ಅನ್ನ ಉಂಡವರು. ಇನ್ನೊಬ್ಬರ ಹಣಕ್ಕೆ ಎಂದೂ ಆಸೆ ಪಡಲಿಲ್ಲ, ಬೇರೊಬ್ಬರ ಆಸ್ತಿ ಅಂತಸ್ತು ನೋಡಿ ಅಸೂಯೆ ಪಟ್ಟುಕೊಳ್ಳಲಿಲ್ಲ. ಇನ್ನೊಬ್ಬರಿಂದ ಕಿತ್ತುಕೊಂಡು ತಿನ್ನುವ ಗುಣ ಇಬ್ಬರಲ್ಲೂ ಇರಲಿಲ್ಲ. ತಮ್ಮ ಬಡತನದಲ್ಲಿಯೂ ದೊಡ್ಡ ಕುಟುಂಬವನ್ನು ಸಾಕಿ ಬೆಳೆಸಿದ್ದಲ್ಲದೆ, ನನ್ನನ್ನೂ ಸೇರಿ ಹೆಣ್ಣುಮಕ್ಕಳ ಮೂರು ಮೊಮ್ಮಕ್ಕಳನ್ನು ಸಾಕಿ ಬೆಳೆಸಿದವರು. ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡುವಾಗ ಯಾವುದೇ ವರದಕ್ಷಿಣೆಗಾಗಿ ಆಸೆ ಪಡಲಿಲ್ಲ, ಅಷ್ಟೇ ಅಲ್ಲದೆ ತಮ್ಮ ಸ್ವಂತ ದುಡ್ಡಿನಲ್ಲಿಯೇ ಮನೆ ಮುಂದೆ ಮಕ್ಕಳಿಗೆ ಮಾಡಿದವರು. ಇವರ ಉತ್ತಮ ಗುಣಗಳಿಗೇನು ಕೊರತೆಯೇ ಇಲ್ಲ. 

ಈವತ್ತಿನ ಕಾಲದಲ್ಲಿ, ಕಂಡವರ ದುಡ್ಡಿಗೆ ಮತ್ತು ಅನಾಯಾಸವಾಗಿ ಬರುವ ದುಡ್ಡಿಗೆ ಆಸೆ ಪಡದೆ ಇರುವವರು ಬಹಳ ಕಡಿಮೆ. ಇನ್ನೊಬ್ಬರ ಸ್ವತ್ತಿನ ಮೇಲೆ, ಸಂಪಾದನೆ ಮೇಲೆ ಕಣ್ಣು ಹಾಕುವವರು ಅನೇಕರು. ಉಚಿತವಾಗಿ ಸಿಕ್ಕರೆ, ನನಗೂ ಇರಲಿ, ನಮ್ಮಪ್ಪಂಗೂ ಇರಲಿ ಎನ್ನುವವರೇ ಅಧಿಕ.  ಸ್ವಂತ ಬಲದ ಮೇಲೆ ಶಕ್ತಿಮೀರಿ ದುಡಿದು ಹಣ ಸಂಪಾದಿಸು ಎಂದು ಬುದ್ದಿ ಹೇಳಿಕೊಡುವುದರ ಬದಲು, ಇನ್ನೊಬ್ಬರಿಂದ ಹಣ ಹೇಗೆ ಕಿತ್ತುಕೊಳ್ಳುವ ಐಡಿಯಾ ಕೊಡುವವರಿಗೇನು ಕಮ್ಮಿಯಿಲ್ಲ. ನಾಟಕ ಮಾಡಿ, ಅನುಕಂಪ ಹುಟ್ಟಿಸಿ ಹಣ ಪೀಕುವವರು ನಮ್ಮ ಮಧ್ಯೆ ಇದ್ದಾರೆ.  ಕೆಲವರು ಯಾವಾಗಲು ದುಡ್ಡು ದುಡ್ಡು ಎಂದು ಬಾಯಿ ಬಿಡುವವರು, ಅವನೇನು ಕೊಟ್ಟ, ನಮಗೇನು ಮಾಡಿದ ಎಂದು ಗೊಣಗಾಡುವ ಸ್ವಭಾವದವರು. 

ಇಂದಿನ ಗ್ಯಾರಂಟಿ ಯುಗದಲ್ಲಿ ಗ್ಯಾರಂಟಿಯ ಲಾಭ ಪಡೆಯುವವರೇನು ಕಡಿಮೆಯೇ. ಗ್ರಾಮಾಂತರ ಭಾಗದಲ್ಲಿ ಮತ್ತು ನಗರದಲ್ಲಿಯೂ ಸಹ ಉತ್ತಮ ಸ್ಥಿತಿಯಲ್ಲಿರುವವರು, ಕಾರ್ ಹೊಂದಿರುವ ಲಕ್ಷುರಿ ಜೀವನ ನಡೆಸುವವರು, ಮೂರ್ನಾಲ್ಕು ಮನೆ, ಸೈಟುಗಳು ಇರುವವರು, ಸಾವಿರಾರು ರೂಪಾಯಿ ಸಂಪಾದನೆ ಮಾಡುವವರು ಸಹ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಕೊರೋನಾ ಅವಧಿಯಲ್ಲಿ ಉಚಿತವಾಗಿ ಫುಡ್ ಪ್ಯಾಕೆಟ್ ನೀಡುವಾಗ, ಉಳ್ಳವರು ಸಹ ಸರದಿ ಸಾಲಿನಲ್ಲಿ ನಿಂತಿದ್ದರು. ಒಟ್ಟಿನಲ್ಲಿ, ಸುಲಭವಾಗಿ ಸಿಗುವ ಹಣಕ್ಕೂ ಹೆಣವೂ ಬಾಯಿಬಿಡುತ್ತದೆ ಎನ್ನುತ್ತಾರೆ.



1970 ರ ದಶಕದಿಂದಲೂ ನಮ್ಮ ಅಂಗಡಿಯಿದ್ದಿದ್ದು ಬಸ್ಟಾಂಡ್ ನಲ್ಲಿ, ಅಂದಿನ ಕಾಲದಲ್ಲಿ ರಾಂಪುರ ಬಸ್ಟಾಂಡ್ ಬಹಳ ಚಿಕ್ಕದು. ಸೋಡಾ ನೆಟ್ಟಕಲ್ಲಪ್ಪ ಎಂದರೆ ರಾಂಪುರ ಮಾತ್ರವಲ್ಲದೆ, ಸುತ್ತಮುತ್ತಲಿನ ಊರಿನ ಜನರಿಗೂ ಪರಿಚಯ. ನೂರಾರು ಜನರ ಪರಿಚಯವಿತ್ತು. ದಡಗೂರು, ಬುಡ್ಡೇನಹಳ್ಳಿ, ಪಕ್ಕುರ್ತಿ, ಮೇಗಳಕಣಿವೆ ಮುಂತಾದ ಹಳ್ಳಿಗಳ ಪರಿಚಯಸ್ಥ ಜನರು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮುಂತಾದ ಊರುಗಳಿಗೆ ಹೋಗುವಾಗ, ತಮ್ಮ ಊರಿಂದ ಸ್ಕೂಟರ್, ಎಜ಼ಿಡಿ ಬೈಕ್, ಸೈಕಲ್ ಇತ್ಯಾದಿಗಳಲ್ಲಿ ರಾಂಪುರಕ್ಕೆ ಬಂದು ನಮ್ಮ ಅಂಗಡಿಯ ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸುತಿದ್ದರು. ಅವರು ಮರಳಿ ಬರುವವರೆಗೂ ನಾವು ಜೋಪಾನವಾಗಿ ಕಾಯುತಿದ್ದೆವು. 

ಒಂದು ದಿನ ರಾತ್ರಿ, ತಾತ ಅವ್ವ ಮಲಗಿರುವಾಗ, ರಾತ್ರಿ ಒಂದು ಗಂಟೆಯ ಸಮಯ ವಿರಬಹುದು, ಹತ್ತಿರದ ಹಳ್ಳಿಯ ಪರಿಚಯಸ್ತರೊಬ್ಬರು ಯಾವುದೋ ಬಸ್ಸಿನಿಂದ ಇಳಿದು ಅವಸರವಸರವಾಗಿ ಅಂಗಡಿ ಬಳಿಗೆ ಬಂದು, ಮಲಗಿದ್ದ ತಾತನನ್ನ ಎಬ್ಬಿಸಿದರು. ಅವರ ಕೈಯಲ್ಲಿದ್ದ ಒಂದು ಬ್ಯಾಗ್ ಅನ್ನು ತಾತನ ಬಳಿಕೊಟ್ಟು, ಈ ಬ್ಯಾಗ್ ಜೋಪಾನವಾಗಿ ನೋಡಿಕೊಳ್ಳಿ. ಸ್ವಲ್ಪ ಕೆಲಸ ಇದೆ ಬಳ್ಳಾರಿಗೆ ಹೋಗಿ ಬರ್ತೀನಿ, ನಾಳೆ ಬಂದು ಈ ಬ್ಯಾಗ್ ತೆಗೆದುಕೊಂಡು ಹೋಗ್ತೀನಿ ಅಂತ ಹೇಳಿ, ಅರ್ಜೆಂಟಾಗಿ ಹೊರಟು ಹೋದರು.  ಅವರ ಬಂದ ಗಡಿಬಿಡಿ, ಅವರ ಅವಸರ ಎಲ್ಲವನ್ನು ನೋಡಿ ನಮ್ಮ ತಾತನಿಗೆ ಗಾಬರಿಯಾಯಿತು. ಮಧ್ಯರಾತ್ರಿ ಬೇರೆ,  ಜನಸಂಚಾರವೇ ಇಲ್ಲದ ಇಷ್ಟೊತ್ತಿನಲ್ಲಿ ಈ ಬ್ಯಾಗ್ ತಂದುಕೊಡುವ ಅವಶ್ಯಕತೆ ಏನಿತ್ತು ಎಂದು ಯೋಚಿಸಿದರು. ರೆಕ್ಸಿನ್ ಬ್ಯಾಗ್ ಹಣ ಮತ್ತು ಕಾಗದ ಪತ್ರಗಳನ್ನ ಇಡುವ ಬ್ಯಾಗ್. ಅದನ್ನ ನೋಡಿದೊಡನೆ ಅನುಮಾನ ಬಂತು, ಏನೋ ಬೆಲೆಬಾಳುವ ವಸ್ತುವೇ ಇದೆ. ಜೋಪಾನವಾಗಿ ಇಟ್ಟುಕೊಳ್ಳೋಣ ಎಂದು, ಸೀಮೇ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ, ಬ್ಯಾಗ್ ಒಪೆನ್ ಮಾಡಿ ನೋಡಿದರೆ, ಕಂತೆ ಕಂತೆ ನೋಟು. ಜೀವ ಬಾಯಿಗೆ ಬಂದಂತಹ ಪರಿಸ್ಥಿತಿ. ಒಳ್ಳೆ ನಿದ್ರೆ ಮಾಯವಾಯಿತು. ನೋಟಿನ ಕಂತೆ ಕಂತೆ ನೋಡಿದರೆ ಎದೆ ಡವ ಡವ ಎಂದು ಹೊಡೆದುಕೊಳ್ಳಲಾರಂಬಿಸಿತು. ಅಷ್ಟೊತ್ತಿನಲ್ಲಿ ಯಾರಾದರು ಕಳ್ಳಕಾಕರು ಬಂದು ಹೆದರಿಸಿ ಬೆದರಿಸಿ ದುಡ್ಡು ತೆಗೆದುಕೊಂಡು ಹೋದರೆ ಏನು ಗತಿ ಎನ್ನುವ ಆಲೋಚನೆ. 

ಅಂಗಡಿಯಿಂದ ಹೊರಬಂದು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರು, ಗಾಡಕತ್ತಲು. ಒಂದು ನರ ಪಿಳ್ಳೆಯ ಸುಳಿವು ಇಲ್ಲ. ಯಾವಗಲಾದರು ಒಮ್ಮೆ, ಒಂದು ಬಸ್ಸೋ, ಲಾರಿಯೋ ಬಂದು ಹೋಗುವುದು ಬಿಟ್ಟರೆ ಬೇರೆ ಚಲನವಲನಗಳೇ ಇಲ್ಲ. ಆ ನಮ್ಮ ಅಂಗಡಿ ಗುಡಿಸಲಿನಂತಹದ್ದು, ಸುತ್ತಲೂ ಬಿದಿರಿನ ತಡಿಕೆ, ಜಾಡಿಸಿ ಕಾಲಿನಿಂದ ಒದ್ದರೆ ತಡಿಕೆ ಬಿದ್ದು ಹೋಗುತಿತ್ತು, ಯಾವುದೇ ಭದ್ರತೆ ಇರಲಿಲ್ಲ. ಬಿಸಿಲಿನ ಸೆಖೆಗೆ, ಆ ಅಂಗಡಿಯಲ್ಲಿ ತಂಪಾಗಿರುತ್ತದೆ ಎನ್ನುವ ಒಂದು ಆಲೋಚನೆ ಒಂದು ಕಡೆ, ಇನ್ನೊಂದು ಸೋಡ ಮಶಿನ್ ಸೋಡ ಗ್ಯಾಸ್ ಸಿಲಿಂಡರ್, ಮತ್ತಿತರ ವಸ್ತುಗಳು ಕಳುವು ಆಗಬಾರದು ಎನ್ನುವ ಉದ್ದೇಶ ಇನ್ನೊಂದು ಕಡೆ. ಆಗ ಬಸ್ಟಾಂಡ್ ನಲ್ಲಿ ಇದ್ದ ಅಂಗಡಿಗಳು ಕೆಲವೇ ಕೆಲವು. ಅದೂ ಬೆರಳೆಣಿಕೆಯಷ್ಟು. ಜನರ ಓಡಾಟ ಇಲ್ಲವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಹಣವನ್ನು ಕಾಯಬೇಕಾದ ಒತ್ತಡದ ಪರಿಸ್ಥಿತಿ. 

ಅಷ್ಟೊಂದು ದುಡ್ಡು ನೋಡಿದೊಡನೇ, ಯಾರ ಮನಸ್ಸಿನಲ್ಲಿಯಾದರೂ ಹಲವಾರು ಆಲೋಚನೆಗಳು ಬುಗಿಲೇಳುತಿದ್ದವು. ಉದಾ:- ಅವರು ಬ್ಯಾಗ್ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ.  ಅದರಲ್ಲಿ ಎಷ್ಟು ಹಣ ಇತ್ತು ಅಂತ ಹೇಳಿರಲಿಲ್ಲ. ಆ ದಿನಗಳಲ್ಲಿನ ಕಷ್ಟದ ಪರಿಸ್ಥಿತಿಗೆ  ಆ ಬ್ಯಾಗಿನಲ್ಲಿದ್ದ ಒಂದು ಕಂತೆ ನೋಟು ಎತ್ತಿಕೊಂಡಿದ್ದರೂ ಅಥವ ಕೆಲವು ನೋಟುಗಳನ್ನು ಸಾಕಿತ್ತು, ಆದರೆ ಅದರಲ್ಲಿನ ಒಂದು ರೂಪಾಯಿಯನ್ನ ಮುಟ್ಟಲಿಲ್ಲ. ಸ್ವಯಾರ್ಜಿತ ವಲ್ಲದ ದುಡ್ಡು ನಮ್ಮದು ಅಲ್ಲ ಎನ್ನುವ ಅವರ ಆದರ್ಶ, ಯಾವುದೇ ಕೆಟ್ಟ ಆಲೋಚನೆ ಮಾಡಲಿಲ್ಲ. ಬದಲಿಗೆ, ಅಲ್ಲಿರುವ ಎಲ್ಲ ದುಡ್ಡನ್ನು ಜೋಪಾನವಾಗಿಡಬೇಕು ಎನ್ನುವ ಧೃಡ ಮನಸ್ಸಿನೊಂದಿಗೆ, ಅಂಗಡಿಯ ಒಳಗೆ ಸುತ್ತಲೂ ಕಣ್ಣಾಡಿಸಿದರು. ಯಾವುದೇ ರೀತಿಯ ಪೆಟ್ಟಿಗೆ ಟ್ರಂಕ್ ಯಾವುದೂ ಇರಲಿಲ್ಲ. ಒಂದು ವೇಳೆ ಇದ್ದರೂ ಸಹ, ಕಳ್ಳ ಬಂದರೆ ಮೊದಲು ಕಣ್ಣು ಹಾಕುವುದು ಪೆಟ್ಟಿಗೆಯ ಮೇಲೆ. ಅದಕ್ಕಾಗಿ ಅವರು ಮಲಗಿದ್ದ ಹಾಸಿಗೆಯನ್ನ ಎತ್ತಿ, ಕೆಳಗೆ ಗೋಣೀಚೀಲ ಹಾಕಿ ಅದರ ಮೇಲೆ ನೋಟಿನ ಕಂತೆಗಳನ್ನ ಒಂದೊಂದಾಗಿ ಜೋಡಿಸಿಟ್ಟರು. ಅದರ ಮೇಲೆ ಮತ್ತೊಂದು ಗೋಣಿ ಚೀಲ ಹಾಕಿ, ಮೇಲೆ ಅವರು ಮಲಗುತಿದ್ದ ಕೌದಿಯಂತಹ ಬಟ್ಟೆಯನ್ನ ಹಾಕಿ ಅದರ ಮೇಲೆ ಮಲಗಿದರು. ಬೆಳಿಗ್ಗೆ ಎದ್ದ ಮೇಲೆ, ಮನೆಗೆ ತೆಗೆದುಕೊಂಡು ಹೋಗಿ ಜೋಪಾನವಾಗಿಟ್ಟಿದ್ದರು. ಎರಡು ದಿನ ಹೀಗೆ ಕಷ್ಟ ಪಟ್ಟು ಅದನ್ನ ಕಾದಿಟ್ಟುಕೊಂಡಿದ್ದರು.

ಮೂರನೇ ದಿನ ಆ ವ್ಯಕ್ತಿ ಬಂದರು. ಬಂದೊಡನೆ ಬ್ಯಾಗ್ ಕೇಳಿದರು. ತಾತನಿಗೆ ಒಂದು ಕಡೆ ಕೋಪ, ಏನಪ್ಪ ನೀನು ನಮ್ಮ ಪ್ರಾಣಕ್ಕೆ ಸಂಚಕಾರ ತಂದುಬಿಡ್ತಿದ್ದಿಯಲ್ಲ? ಅಕಸ್ಮಾತ್ ಆಗಿ ಯಾರಾದರು ಕಳ್ಳನೋ, ಕೊಲೆಗಾರನೋ ಬಂದಿದ್ದರೆ ಏನು ಗತಿ? ಈ ಗುಡಿಸಲಿನಂತಹ ಅಂಗಡಿಯಲ್ಲಿ ಇಷ್ಟು ದುಡ್ಡನ್ನ ಹೇಗೆ ಜೋಪಾನವಾಗಿಟ್ಟುಕೊಳ್ಳುವುದು, ಎರಡು ದಿನ ನಮಗೆ ನಿದ್ರೆಯೇ ಇರಲಿಲ್ಲ ಕಣಪ್ಪ ಅಂತ ತಮ್ಮ ಬೇಗುದಿಯನ್ನ ಹೊರಹಾಕಿದರು. ನೀನು ಕೊಟ್ಟ ಹಣ ಸರಿಯಿದೆಯಾ ಅಂತ ಚೆಕ್ ಮಾಡ್ಕೊಳ್ಳಪ್ಪ. ನಾವಂತು ಒಂದು ರೂಪಾಯಿಯನ್ನ ಮುಟ್ಟಿಲ್ಲ. ಒಮ್ಮೆ ನೋಡಿಕೊಂಡುಬಿಡು ಎಂದು ಪ್ರಾಮಾಣಿಕತೆಯಿಂದ ಹೇಳಿದರು. 

ಆಗ ಅವರು, ಬಳ್ಳಾರಿ, ಹೊಸಪೇಟೆ ಆ ಕಡೆ ಕೆಲಸ ಇತ್ತು. ಇಷ್ಟೊಂದು ದುಡ್ಡು ಜತೆಯಲ್ಲಿ ಇಟ್ಕೊಂಡು ತಿರುಗಾಡುವುದು ಒಳ್ಳೆಯದಲ್ಲ ಎಂದು ನಿನ್ನ ಮೇಲಿನ ನಂಬಿಕೆಯಿಂದಲೇ ಈ ಬ್ಯಾಗ್ ಇಲ್ಲಿ ಬಿಟ್ಟು ಹೋಗಿದ್ದು, ಇಲ್ಲದೆ ಇದ್ದಿದ್ದರೆ ನನ್ನ ಜತೆಗೆ ತೆಗೆದುಕೊಂಡು ಹೋಗ್ತಿದ್ದೆ ಎಂದು ಧನ್ಯವಾದಗಳನ್ನ ಹೇಳಿ ಆ ಹಣವನ್ನು ಪಡೆದುಕೊಂಡು ಹೋದರು.

ಮನಸ್ಸು ಮಾಡಿದ್ದರೆ, ಸ್ವಲ್ಪ ಹಣವನ್ನು ಕೇಳಿ ಪಡೆಯಬಹುದಿತ್ತು. ಆದರೆ ತಾತ ಮಾತ್ರ, ಒಂದು ರೂಪಾಯಿಯನ್ನ ಪಡೆಯಲಿಲ್ಲ. ಕಷ್ಟಪಟ್ಟು ದುಡಿದ ಹಣ ನಮ್ಮ ಬಳಿಯಿರುವುದಿಲ್ಲ ಅಂತಹದರಲ್ಲಿ, ಬೇರೆಯವರ ಹಣದಿಂದ ಎಷ್ಟು ದಿನ ಬದುಕಲು ಸಾಧ್ಯ. ಇಂತಹ ಪ್ರಾಮಾಣಿಕತೆಯ ಕೆಲಸವನ್ನ ನಮ್ಮ ತಾತ ಅವ್ವ ಮಾಡಿದರು ಎಂದು ಹೇಳಿಕೊಳ್ಳಲು ನನಗೆ ಯಾವಾಗಲು ಹೆಮ್ಮೆ ಎನಿಸುತ್ತದೆ. ಇಂತಹ ಹಲವಾರು ನಿಯತ್ತಿನ ಘಟನೆಗಳು ಅವರ ಜೀವನದಲ್ಲಿ ನಡೆದಿವೆ. 


ಭಾನುವಾರ, ಡಿಸೆಂಬರ್ 3, 2023

ಜರ್ಮನಿಯ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

 ಜರ್ಮನಿಯ ಸುಂದರ ಪ್ರವಾಸಿ ತಾಣಗಳಾದ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

Photo Courtesy: Google
ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಜರ್ಮನಿಯ ಸುಂದರ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಫ್ರಾಂಕ್ ಫರ್ಟ್ ಗೆ ಭೇಟಿ ನೀಡಿದವರು ಒಂದು ದಿನ ಬಿಡುವು ಮಾಡಿಕೊಂಡು ಈ ಪ್ರದೇಶಗಳಿಗೆ ಹೋಗಿಬರುವುದು ಸಾಮಾನ್ಯ. ಫ್ರಾಂಕ್ ಫರ್ಟ್  ನಗರದಿಂದ  ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಅಷ್ಟೇ. ಒಮ್ಮೆ ನಮ್ಮ ಒಮಾನ್ ಕಂಪನಿಯ ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದೆ. ಪ್ರತಿ ಬಾರಿ ಜರ್ಮನಿಯ  ಟ್ರಿಪ್ ನಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ. ಫ್ರಾಂಕ್ ಫರ್ಟ್ ನಿಂದ ಒಂದು ದಿನದೊಳಗೆ ಪ್ರವಾಸಕ್ಕಾಗಿ ಹೋಗಿ ಬರುವ ಸ್ಥಳಗಳನ್ನು ಹುಡುಕುತಿದ್ದಾಗ ಕಂಡಿದ್ದೇ ಈ ಹೈಡೆಲ್ಬರ್ಗ್ ಮತ್ತು ರೀನ್ ವ್ಯಾಲಿ. ಈ ಸ್ಥಳಗಳ ಕುರಿತು ಮಾಹಿತಿ ಪಡೆದಿದ್ದ ನಾನು, ಇವುಗಳನ್ನು ನೋಡುವ ಸಲುವಾಗಿಯೇ ಎರಡು ದಿನ ಹೆಚ್ಚುವರಿಯಾಗಿ ತಂಗಿದ್ದೆ. ಫ್ರಾಂಕ್ ಫರ್ಟ್ ನ ರೈಲ್ವೇ ನಿಲ್ದಾಣದ ಬಳಿ ಬಹಳಷ್ಟು ಟೂರ್ ಆಪರೇಟರ್ ಗಳು ಇದ್ದಾರೆ, ಅವರ ಬಳಿ ಮಾತನಾಡಿ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಟೂರ್ ಗೆ  ಬುಕ್ ಮಾಡಿದ್ದೆ. ಮೊದಲ ದಿನ ಹೈಡೆಲ್ ಬರ್ಗ್ ಟೂರ್ ಎರಡನೇ ದಿನ ರೀನ್ ವ್ಯಾಲಿ.  ಒಂದು ಮಿನಿ ಬಸ್ ನಲ್ಲಿ ಸುಮಾರು ಹದಿನೈದು ಜನ  ವಿವಿಧ ದೇಶಗಳ ಪ್ರವಾಸಿಗರೊಟ್ಟಿಗೆ ಈ ಸ್ಥಳಗಳನ್ನು ನೋಡಿದೆ. ತುಂಬಾ ಸುಂದರವಾದ ಕಣ್ಮನ ಸೆಳೆಯುವ ದೃಶ್ಯಗಳು ಈ ಸ್ಥಳದಲ್ಲಿವೆ. 
Photo Courtesy: Google

ಹೈಡೆಲ್ಬರ್ಗ್ ಪ್ರದೇಶ ಜರ್ಮನಿಯ ಪುರಾತನವಾದ ಸ್ಥಳ. ನೈಋತ್ಯ ಜರ್ಮನಿಯ ನೆಕರ್ ನದಿಯ ಬದಿಯಲ್ಲಿದೆ ಈ ನಗರ.  ಈ ನಗರಕ್ಕೆ ರೊಮ್ಯಾಂಟಿಕ್ ನಗರ, ಸಾಹಿತ್ಯಕ ನಗರ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ, ನೂರಾರು ಪ್ರೇಮಿಗಳು ಸುಂದರ ಸಂಜೆಯನ್ನು ಇಲ್ಲಿ ಕಳೆಯಲು ಬಯಸುತ್ತಾರೆ. 1386 ರಲ್ಲಿ ಪ್ರಾರಂಭವಾದ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಹಾಗೂ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಇಲ್ಲಿದೆ. ಶೈಕ್ಷಣಿಕ ನಗರವಾದದ್ದರಿಂದ ಯುರೋಪಿನ ವಿವಿಧ ನಗರಗಳಿಂದ ಇಲ್ಲಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಇಂದಿಗೂ ಬರುತ್ತಾರೆ. 

Photo Courtesy: Google

ರಮಣೀಯ ಪ್ರದೇಶವಾದ ಈ ಕಣಿವೆ ಜಾಗದಲ್ಲಿ ಹರಿಯುವ ನೆಕ್ಟರ್ ನದಿಯ ಮೇಲೆ ನಿರ್ಮಿಸಿರುವ ಹಳೆಯ ಬ್ರಿಡ್ಜ್ ನೋಡಲು ತುಂಬಾ ಸುಂದರವಾಗಿದೆ. ನದಿ ದಂಡೆಯ ಎರಡು ಬದಿಯಿರುವ ನಗರ, ಕ್ಯಾಸೆಲ್, ಎರಡು ಕಡೆ ಬೆಟ್ಟಗಳನ್ನು ಮತ್ತು  ಈ ನದಿಯಲ್ಲಿ ಸಂಚರಿಸುವ ಬೋಟ್ ಗಳನ್ನು ನೋಡಬಹುದು. ಈ ಪ್ರದೇಶ ಒಮ್ಮೆಗೆ ನಮ್ಮನ್ನ ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಡ್ಜ್ ನಿಂದ ಇಳಿದು ನಗರದ ಪುರಾತನ ಹಾಗೂ ಹೃದಯಭಾಗಕ್ಕೆ ಬೇಟಿ ನೀಡಬಹುದು. ಅಲ್ಲಿ ಕ್ಯಾಸೆಲ್, ಹಳೆಯ ಚರ್ಚ್, ನೂರಾರು ವರ್ಷಗಳ ಪುರಾತನ ಕಟ್ಟಡಗಳು, ಸುಂದರವಾದ ಬೀದಿಗಳು, ಮರದ ಚೌಕಟ್ಟಿನ ಮನೆಗಳು ಹೀಗೆ  ಎಲ್ಲವನ್ನು ನೋಡಬಹುದು. 

Photo Courtesy: Google

ಈ ನಗರದ ಕಾಲು ಭಾಗ ಜನಸಂಖ್ಯೆ ವಿದ್ಯಾರ್ಥಿಗಳಿಂದ ತುಂಬಿದೆ. ವಿಶ್ವದ ಅತಿದೊಡ್ಡ ವೈನ್ ಸಂಗ್ರಹಿಸುವ ಬ್ಯಾರೆಲ್ ಒಂದು ಇಲ್ಲಿನ ಸಂಗ್ರಹಾಲಯದಲ್ಲಿದ್ದು, 130 ಓಕ್ ಮರಗಳಿಂದ ಇದನ್ನು ತಯಾರಿಸಲಾಗಿದೆ ನಿಖರವಾಗಿ 221,726 ಲೀಟರ್ ವೈನ್ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಟ್ಲರ್ ನ ನಾಜಿ ಪಕ್ಷದ ಕಾರ್ಯ ಚಟುವಟಿಕೆ ಈ ಭಾಗದಲ್ಲಿ ಹೆಚ್ಚಾಗಿತ್ತು ಎಂದು ಹೇಳುತ್ತಾರೆ, ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ಜರ್ಮನಿಯ ವಿವಿಧ ನಗರಗಳು ಬಾಂಬ್ ದಾಳಿಯಿಂದ ದ್ವಂಸಗೊಂಡರೂ ಇಲ್ಲಿ ಹೆಚ್ಚಿನ ಅನಾಹುತ ಆಗಿರಲಿಲ್ಲ, ಇದು ಕಣಿವೆ ಪ್ರದೇಶವಾಗಿದ್ದು, ಇಲ್ಲಿಂದ ಹೊರ ಹೋಗುವುದು ಮತ್ತು ಬರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳುತ್ತಾರೆ. ಈ ನಗರ ಕೇವಲ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ನಗರ ವಾಗಿರದೆ,  ಕೈಗಾರಿಕ ನಗರವಾಗಿಯೂ ಬೆಳೆದಿದೆ. ಅಂತರಾಷ್ಟ್ರೀಯ ಕಂಪನಿಗಳು ಇಲ್ಲಿವೆ. ಈ ಸುಂದರವಾದ ನಗರದ ವಿವಿಧ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡು ಸಂಜೆ ವೇಳೆ ವಾಪಾಸು ಫ್ರಾಂಕ್ ಫರ್ಟ್ ಗೆ ಮರಳಿದೆವು.

Photo Courtesy: Google

ಮರುದಿನ ಮತ್ತೊಂದು ಪ್ರವಾಸಿತಾಣ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನಪಡೆದಿರುವ ವಿಶ್ವಪ್ರಸಿದ್ದ ರೀನ್ ಕಣಿವೆಗೆ ಭೇಟಿ ನೀಡಿದ್ದೆವು. ಈ ಸ್ಥಳವಂತೂ ತುಂಬಾ ಸುಂದರ. ಇಲ್ಲಿ ಬೆಟ್ಟಗಳ ನಡುವೆ ಪ್ರಶಾಂತವಾಗಿ ರೀನ್ ನದಿ ಹರಿಯುತ್ತದೆ. ರೀನ್ ಅಥವ ರೈನ್ ನದಿ ಯುರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಆಗ್ನೇಯ ಸ್ವಿಜರ್ ಲ್ಯಾಂಡ್ ನ ಆಲ್ಪ್ಸ್‌ನಲ್ಲಿರುವ ಗ್ರಾಬುಂಡೆನ್‌ನ ಸ್ವಿಸ್ ಕ್ಯಾಂಟನ್‌ನಲ್ಲಿ ನದಿಯು ಹುಟ್ಟುತ್ತದೆ.  ಅದರ ನಂತರ ಅದು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ ದೇಶಗಳಲ್ಲಿ ಹರಿಯುತ್ತದೆ. ತನ್ನ ಹರಿವಿನ ಗುಂಟ ಹಲವಾರು ನದಿಗಳು ಇದರೊಳಗೆ ಸೇರಿಕೊಳ್ಳುತ್ತವೆ, ತನ್ನ ವ್ಯಾಪ್ತಿ ಮತ್ತು ಪಾತ್ರವು ದೊಡ್ಡದಾಗುತ್ತ ಹೋಗುತ್ತದೆ. ಸಮುದ್ರ ಮಾರ್ಗದ ಮುಖಾಂತರ ಸರಕು ಸರಂಜಾಮುಗಳನ್ನು ಹೊತ್ತ ಹಡಗು ಗಳು ಸಂಚಾರ ಮಾಡುವುದನ್ನು ನಾವು ಕಂಡಿದ್ದೇವೆ, ಆದರೆ ಈ ರೀನ್ ನದಿಯಲ್ಲಿ ನೂರಾರು ಮೀಟರ್ ಉದ್ದದ ಹಡಗು ಗಳಲ್ಲಿ ದೊಡ್ಡ ಪ್ರಮಾಣದ ಕಂಟೈನರ್ ಗಳು, ಕಲ್ಲಿದ್ದಲು, ಸ್ಟೀಲ್ ಮುಂತಾದ  ಸರಕು ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಈ ನದಿಯಲ್ಲಿ ಸರಕು ಸಾಗಾಣಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಯುರೋಪಿನ ವಾಣಿಜ್ಯ ಚಟುವಟಿಕೆಗಳಿಗೆ ಈ ನದಿ ಪ್ರಮುಖ ಪಾತ್ರವಹಿಸುತ್ತದೆ. ವಿವಿಧ ನಗರಗಳಲ್ಲಿ ದೊಡ್ಡ ದೊಡ್ಡ ಹಡಗುಗಳು ಈ ನದಿಯಲ್ಲಿ ಸಂಚರಿಸುತ್ತವೆ. 

Photo Courtesy: Google

ಈ ಕಣಿವೆ ಪ್ರದೇಶದಲ್ಲಿ ನೂರಾರು ದ್ರಾಕ್ಷಿತೋಟಗಳು ಇವೆ,  ಸುಂದರವಾದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಇಲ್ಲಿವೆ. ನೂರಾರು ವರ್ಷಗಳ ಹಿಂದಿನ ಕೋಟೆ ಮತ್ತು ಕ್ಯಾಸೆಲ್ ಗಳನ್ನು ಇಲ್ಲಿ ನೋಡಬಹುದು. ವೈನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳ, ಸ್ಥಳೀಯವಾಗಿ ತಯಾರಾಗುವ ವಿವಿಧ ವೈನ್‌ಗಳ ರುಚಿ ನೋಡಬಹುದು. ಈ ರೀನ್ ನದಿಯಲ್ಲಿ ಪ್ರವಾಸಿಗರ ದೋಣಿ ವಿಹಾರಕ್ಕಾಗಿಯೇ ಸಿದ್ದಪಡಿಸಿದ ಆಧುನಿಕ ಮತ್ತು ಸುಸಜ್ಜಿತ ದೋಣಿಗಳು ಇಲ್ಲಿವೆ.  ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ದೋಣಿಯಲ್ಲಿ ಸುತ್ತಾಡಿ ಕಣಿವೆಯ ನಯನ ಮನೋಹರ ದೃಶ್ಯಗಳನ್ನು ಸವಿಯಬಹುದು. ನಮ್ಮ ಪ್ರವಾಸಿ ಗೈಡ್, ಇಲ್ಲಿನ ಹಲವಾರು ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮ್ಮನ್ನು ಸುತ್ತಾಡಿಸಿದ. ಎರಡು ದಿನದಲ್ಲಿ, ಎಷ್ಟು ಸಾಧ್ಯವಾಗಬಹುದೋ ಅಷ್ಟು ಸ್ಥಳಗಳನ್ನ ನೋಡಿ, ಸುಂದರವಾದ ನೆನಪುಗಳನ್ನು ಹೊತ್ತು  ಜರ್ಮನಿಯಿಂದ ಮರಳಿದೆ.

ಬರಹ:- ಪಿ.ಎಸ್.ರಂಗನಾಥ,

ಮಸ್ಕತ್ - ಒಮಾನ್ ರಾಷ್ಟ್ರ.

https://epaper.udayavani.com/3796056/Desi-Swara/02-Dec-2023#page/1/1

#oman #germany # hiderlberg #rheinvalley #kannada # bangalore #muscat #karnataka






ಭಾನುವಾರ, ನವೆಂಬರ್ 5, 2023

ಭಕ್ತಿಪರವಶಗೊಳಿಸಿದ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೃತ್ಯರೂಪಕ

 ಕಲೆ ಮತ್ತು ಸಾಹಿತ್ಯಕ್ಕೆ ಅತಿ ಹೆಚ್ಚಿನ ಮನ್ನಣೆಯನ್ನು ನಮ್ಮ ಕನ್ನಡ ನಾಡು  ಹಿಂದಿನಿಂದಲೂ ನೀಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿಯ ಪ್ರೋತ್ಸಾಹ ಬೆಂಬಲ ಇಂದಿಗೂ ಮುಂದುವರೆದಿರುವುದು ಈ ನಾಡಿನ ವಿಶೇಷ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ, ಕಲಾ ಪೋಷಕರು ಮತ್ತು ಕಲಾಸಕ್ತರ ಸಂಖ್ಯೆಯೂ ದ್ವಿಗುಣಗೊಳ್ಳುತಿದೆ ಜತೆಗೆ ಶಾಸ್ತ್ರೀಯ ನೃತ್ಯ ಮತ್ತು ಸಂಗೀತವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿರುವುದು ಗಮನಾರ್ಹ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರು, ಮೈಸೂರು ನಗರ ಸೇರಿದಂತೆ ರಾಜ್ಯದ ಒಂದಲ್ಲ ಒಂದು ಕಡೆ ಕಲೆ ಮತ್ತು ಸಾಹಿತ್ಯಕ್ಕೆ ಸಂಭಂಧಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿರುವುದನ್ನ ನಾವು ಕಾಣಬಹುದು.

        ಇತ್ತೀಚೆಗೆ ಬೆಂಗಳೂರಿನ ಜಯನಗರದ ಶಿವರಾತ್ರೀಶ್ವರ ಜೆ ಎಸ್ ಎಸ್ ಸಭಾಂಗಣದಲ್ಲಿ ನಡೆದ  ಶ್ರೀಮತಿ ಸುಮಾ ರಾಜೇಶ್ ರವರ  ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶಾಸ್ತ್ರೀಯ ನೃತ್ಯರೂಪಕವನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿ ಬಂದಿತ್ತು. ಪರಿಚಿತರ ಆಹ್ವಾನದ ಕರೆಗೆ ಓಗೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು.   ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ನೃತ್ಯ ರೂಪಕವನ್ನಾಗಿ ಸಂಯೋಜಿಸಿ, ಅದಕ್ಕೆ ಸೂಕ್ತವಾದ ಸಂಗೀತ ನೀಡಿ ಮತ್ತು ಸಾಹಿತ್ಯವನ್ನು ರಚಿಸಿ, ವೇದಿಕೆ ಮೇಲೆ ಪ್ರಸ್ತುತ ಪಡಿಸಿದ ರೀತಿ ಮಾತ್ರ ಅದ್ಭುತ ಮತ್ತು ಅನನ್ಯ. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ದೃಶ್ಯಕಾವ್ಯವನ್ನ ನೋಡಲು ಸಭಾಂಗಣವು ಕಿಕ್ಕಿರಿದು ತುಂಬಿತ್ತು. ಕಳೆದ ಬಾರಿ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿಯೂ ಇದೇ ರೀತಿ ಜನ ಕಿಕ್ಕಿರಿದು ಸೇರಿದ್ದರು. ಇದನ್ನೆಲ್ಲ ನೋಡಿದಾಗ ಕಲೆಗೆ ನಮ್ಮ ಕರುನಾಡಿನ ಜನ ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹ ಕಂಡು ಬಹಳ ಖುಷಿಯಾಗುತ್ತಿದೆ.

            ಈ ನೃತ್ಯ ರೂಪಕದಲ್ಲಿ ನೃತ್ಯಶಾಲೆಯ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿಭಿನ್ನ ಪಾತ್ರಧಾರಿಗಳಿದ್ದರು, ಇವರೆಲ್ಲರೂ ಪ್ರತಿಯೊಂದು ದೃಶ್ಯವನ್ನು ಪ್ರಸ್ತುತ ಪಡಿಸಿದ ರೀತಿ ಮಾತ್ರ ಶ್ಲಾಘನೀಯ. ಪಾತ್ರಧಾರಿಗಳು ತಾವು ಧರಿಸಿದ ವೇಷಭೂಷಣಗಳ ಜತೆಗೆ ಸನ್ನಿವೇಶಕ್ಕೆ ತಕ್ಕಂತೆ ಮುಖದ ಭಾವನೆಗಳನ್ನು ವ್ಯಕ್ತಪಡಿಸುತ್ತ ನೃತ್ಯ ಮಾಡುವುದು ಒಂದು ಸವಾಲಿನ ಕೆಲಸ. ಆದರೆ ನೃತ್ಯಶಾಲೆಯ ವಿಧ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸಿ ರೂಪಕವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಇವರ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಪ್ರತಿ ದೃಶ್ಯಕ್ಕೆ ಚಪ್ಪಾಳೆ ಯೊಡೆದು ವಿದ್ಯಾರ್ಥಿಗಳನ್ನ ಹುರಿದುಂಬಿಸುತಿದ್ದದು ಕಂಡುಬಂತು. ಜನರ ಚಪ್ಪಾಳೆ ಮತ್ತು ಮೆಚ್ಚುಗೆಯೇ ಕಲಾವಿದರಿಗೆ ಬಹುದೊಡ್ಡ ಪಾರಿತೋಷಕವೆನ್ನಬಹುದು. ಇಲ್ಲದೆ ಇದ್ದರೆ ಕಾರ್ಯಕ್ರಮ ನೀರಸ.

        ಪಾತ್ರಗಳಿಗೆ ಪಾತ್ರಧಾರಿಯ ಆಯ್ಕೆಯೂ ತುಂಬಾ ಚೆನ್ನಾಗಿಯೇ ನಡೆದಿತ್ತು.  ಶ್ರೀನಿವಾಸ, ಪದ್ಮಾವತಿ, ಈಶ್ವರ, ಪಾರ್ವತಿ, ಭೃಗು ಮಹರ್ಷಿ, ಆಕಾಶರಾಜ, ಧರಣಿದೇವಿ ಹೀಗೆ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ನ್ಯಾಯ ಒದಗಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕೆಲೆವೆಡೆ ಚಿಕ್ಕ ಅಚಾತುರ್ಯಗಳು ನಡೆದವು ಆದರೂ, ಆ ಕಲಾವಿದರು ಅದನ್ನು ಸಂಭಾಳಿಸಿದ ರೀತಿ ಮಾತ್ರ ಅದ್ಭುತ.  ವಿದೂಷಿ ಶ್ರೀಮತಿ ಸುಮಾ ರಾಜೇಶ್ ಅವರು, ವಿಧ್ಯಾರ್ಥಿಗಳಿಗೆ ವೇದಿಕೆಯ ನಡಾವಳಿಗಳ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದ್ದಾರೆ ಎಂದೇ ಹೇಳಬಹುದು.

        ಈ ಸುಂದರವಾದ ನೃತ್ಯಕ್ಕೆ ಕೊಳಲು, ತಂಬೂರ, ತಬಲ, ವೀಣೆ ಇತ್ಯಾದಿ ವಾದ್ಯಗಳನ್ನು ಸುಮಧುರವಾಗಿ ನುಡಿಸಿ ನೋಡುಗರ ಕಿವಿಯನ್ನು ಇಂಪಾಗಿಸಿ ಒಟ್ಟಾರೆ ನೃತ್ಯರೂಪಕವನ್ನು ಮನಸೂರೆಗೊಳಿಸಿದ ವಾದ್ಯತಂಡ ವೀಕ್ಷರನ್ನು ಭಕ್ತಿಪರವಶರಾಗುವಂತೆ ಮಾಡಿತ್ತು.  ಹಾಗೆಯೇ ಈ ನೃತ್ಯಕ್ಕೆ ಪೂರಕವಾಗಿ ಸಾಥ್ ನೀಡಿದ್ದು ಬೆಳಕು ಮತ್ತು ಧ್ವನಿ ನೀಡಿದ ತಂತ್ರಜ್ನರು. ಅವರ ಕೈಚಳಕದಿಂದ ಪ್ರತಿ ದೃಶ್ಯಕ್ಕೂ ಬಣ್ಣ ಬಣ್ಣದ ಬೆಳಕನ್ನ ನೀಡಿ, ನೃತ್ಯ ರೂಪಕವನ್ನು ವರ್ಣರಂಜಿತವನ್ನಾಗಿ ಮಾಡಿದ ಕೀರ್ತಿ ತಂತ್ರಜ್ನರಿಗೆ ಸಲ್ಲುತ್ತದೆ. 

        ಕಾರ್ಯಕ್ರಮದ ಹೈಲೈಟ್ ಏನೇಂದರೆ ಶ್ರೀನಿವಾಸ ಕಲ್ಯಾಣದ ಕಟ್ಟ ಕಡೆಯ ದೃಶ್ಯಾವಳಿ, ಪಾತ್ರಧಾರಿಗಳೆಲ್ಲರೂ ವೇದಿಕೆಯ ಮೇಲೆ ಒಟ್ಟಾಗಿ ನಿಂತು ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವ ದೃಶ್ಯ ತುಂಬಾ ಸುಂದರವಾಗಿ ಮತ್ತು ಮನತಟ್ಟುವಂತೆ ಮೂಡಿಬಂತು. ಭಕ್ತಿಭಾವದಲ್ಲಿ ಮಿಂದೆದ್ದ ವೀಕ್ಷಕರು ಸತತವಾಗಿ ಚಪ್ಪಾಳೆ ತಟ್ಟುವುದರ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದಲ್ಲದೆ, ಬಹುತೇಕರು ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷವಾಗಿತ್ತು. 

        ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ನಂತಹ ಕಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು  ಉತ್ತಮ ನೃತ್ಯಗಾರ್ತಿಯರನ್ನಾಗಿ ಮಾಡುತ್ತಿರುವ ಕೆಲಸ ಅಭಿನಂದನೀಯ. ಇದೇ ರೀತಿಯ ಕೆಲಸವನ್ನು ಶಾಸ್ತ್ರೀಯ ನೃತ್ಯ ಕಲಿಸುತ್ತಿರುವ ಎಲ್ಲಾ ನೃತ್ಯಶಾಲೆಗಳು ಮಾಡುತ್ತ ಬಂದರೆ, ಇನ್ನು ಹಲವಾರು ಶತಮಾನಗಳವರೆಗೆ ನಮ್ಮ ಶಾಸ್ತ್ರೀಯ ನೃತ್ಯ ಪರಂಪರೆ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


Click below headings