ಗುರುವಾರ, ಆಗಸ್ಟ್ 24, 2023

ತ್ರಿವಿಕ್ರಮನ ಚಂದ್ರಯಾನಕ್ಕೆ ಅರಬ್ ರಾಷ್ಟ್ರಗಳಿಂದಲೂ ಅಭಿನಂದನೆಗಳ ಸುರಿಮಳೆ








ಚಂದ್ರಯಾನ - 3 ಯೋಜನೆಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್‌ ಮತ್ತು  ರೋವರ್‌ ಪ್ರಗ್ಯಾನ್ ಯಶಸ್ವಿಯಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ದೇಶ ವಿದೇಶಗಳಾದ್ಯಾಂತ ಕೋಟ್ಯಾಂತರ ಜನರು ಬುಧವಾರದಂದು ಟೀವಿ ಪರದೆಗಳಿಗೆ ಅಂಟಿ ಕುಳಿತಿದ್ದರು. ಯಾವಾಗ ಚಂದ್ರನ ಮೇಲೆ ವಿಕ್ರಮ್ ಸೇಫಾಗಿ ಲ್ಯಾಂಡ್ ಆಯಿತೋ ನೋಡಿ ಭಾರತ ದೇಶವು  ಇತಿಹಾಸ ನಿರ್ಮಿಸಿದ್ದಲ್ಲದೆ, ಇಡೀ ಜಗತ್ತೇ ಭಾರತದ ಇಸ್ರೋ ವಿಜ್ನಾನಿಗಳ ಸಾಧನೆಯನ್ನ ಸಂಭ್ರಮಿಸಿ ಕೊಂಡಾಡಿದ್ದಲ್ಲದೆ, ವಿಶ್ವದಾದ್ಯಂತದಿಂದ ಭಾರತಕ್ಕೆ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. #congratulationsindia ಎನ್ನುವ ಹ್ಯಾಶ್ ಟ್ಯಾಗ್ ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  


ಅರಬ್ ರಾಷ್ಟ್ರಗಳಲ್ಲಿ, ಪ್ರಮುಖ ವಾಗಿ ಯುನೈಟೆಡ್ ಅರಬ್ ಸಂಸ್ಥಾನದ ಇಲ್ಲಿನ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮತ್ತು ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಒಮಾನಿನ ವಿದೇಶಾಂಗ ಸಚಿವರು ಸೇರಿದಂತೆ ಬಹುತೇಕರು ಭಾರತದ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ದುಬೈ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು "ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಭಾರತದ ನಮ್ಮ ಸ್ನೇಹಿತರಿಗೆ ಅಭಿನಂದನೆಗಳು. ಸತತ ಪರಿಶ್ರಮಗಳ ಮೂಲಕ ಸಶಕ್ತ  ರಾಷ್ಟ್ರಗಳನ್ನು ಕಟ್ಟಲಾಗುತ್ತಿದೆ, ಯಾವಾಗಲೂ ಭಾರತವು ಇತಿಹಾಸವನ್ನು ನಿರ್ಮಿಸುತ್ತಲೇ ಇದೆ" ಎಂದು ಕೊಂಡಾಡಿದ್ದಾರೆ.


ಯುಏಇ ಯ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು

ಚಂದ್ರನ ಮೇಲೆ ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಯಶಸ್ವಿ ಲ್ಯಾಂಡಿಂಗ್ ಸಾಮೂಹಿಕ ವೈಜ್ಞಾನಿಕ ಪ್ರಗತಿಯ ಮಹತ್ವವನ್ನು ಪ್ರತಿನಿಧಿಸುತ್ತದೆ. ಮನುಕುಲದ ಸೇವೆಯಲ್ಲಿನ ಈ ಐತಿಹಾಸಿಕ ಸಾಧನೆಗಾಗಿ ನಾನು ಪ್ರಧಾನ ಮಂತ್ರಿ @ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.


ಒಮಾನ್  ರಾಷ್ಟ್ರದ ವಿದೇಶಾಂಗ ಸಚಿವರು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಭಾರತವನ್ನು ಅಭಿನಂದಿಸಿದ್ದಾರೆ. “ಚಂದ್ರನ ಮೇಲೆ ಯಶಸ್ವಿಯಾದ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಭಾರತಕ್ಕೆ ಅಭಿನಂದನೆಗಳು. ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಮೈಲಿಗಲ್ಲು. ಹೊಸ ಆವಿಷ್ಕಾರಗಳು ಮತ್ತು ವೈಜ್ಞಾನಿಕ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ತಮ್ಮ ತಿಳಿಸಿದ್ದಾರೆ.


ಗಲ್ಫ್ ರಾಷ್ಟ್ರಗಳಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡುವುವರಿಂದ ಹಿಡಿದು ಕೋಟ್ಯಾಂತರ ಆಸ್ತಿ ಹೊಂದಿರುವ ವಿವಿಧ ವರ್ಗದ ಐವತ್ತು ಲಕ್ಷಕ್ಕೂ ಹೆಚ್ಚಿನ ವಿವಿಧ ರಾಜ್ಯಗಳ  ಭಾರತೀಯ ಪ್ರಜೆಗಳಿದ್ದಾರೆ.  ಚಂದ್ರಯಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಅತೀವ ಸಂತಸವನ್ನುಂಟು ಮಾಡಿದ್ದಲ್ಲದೆ, ಭಾರತೀಯರ ಮೇಲಿನ ಗೌರವವನ್ನು ಇಮ್ಮಡಿ ಗೊಳಿಸಿದೆ. ಭಾರತಕ್ಕೆ ಮತ್ತು ವಿಶ್ವಕ್ಕೆ ಮಹತ್ವದ ದಿನ. ಈ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ನಮ್ಮದು. ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ನಿರ್ಣಾಯಕ ಮತ್ತು ಕಷ್ಟಕರವಾದ ಮಿಷನ್ ಅನ್ನು ಸಾಕಾರ ಗೊಳಿಸಿದಿದ್ದಕ್ಕಾಗಿ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಇಸ್ರೋಗೆ ಹ್ಯಾಟ್ಸ್ ಆಫ್ ಎಂದು ಪ್ರತಿಯೊಬ್ಬರು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸಪ್ ಗ್ರೂಪ್ ಗಳು, ಫೇಸ್ ಬುಕ್ ಗಳು ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮೆಸ್ಸೇಜ್ ಗಳು ತುಂಬಿ ತುಳುಕಾಡುತ್ತಿವೆ. ಭಾರತೀಯರಂತೆ ವಿವಿಧ ದೇಶಗಳ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಕೆಲಸ ಮಾಡುತಿದ್ದಾರೆ, ಅದರಲ್ಲಿ ವಿಶೇಷವಾಗಿ ಪಾಕಿಸ್ತಾನಿಗಳು ಸಹ ಭಾರತೀಯರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನ ನಡೆಸಿದವು. ಬಹುತೇಕರು ಡಿಪಿಗಳಲ್ಲಿ ತಮ್ಮ ಫೋಟೋವನ್ನ ಇಸ್ರೋ ಗೆ ಅಭಿನಂದಿಸುವ ಮೂಲಕ ಬದಲಾಯಿಸಿಕೊಂಡಿದ್ದರು. 


ವಿದೇಶಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲೂ ಸಹ ಚಂದ್ರಯಾನ ಕುರಿತು ಸತತವಾಗಿ ವಿವಿದ ಬಗೆಯ ಪೋಸ್ಟ್ ಗಳನ್ನ ಹಾಕುತಿದ್ದರು. ಸಾಮಾನ್ಯವಾಗಿ ಭಾರತದ ಬಗೆಗಿನ ಋಣಾತ್ಮಕ ಸುದ್ದಿಗಳನ್ನ ಪೋಸ್ಟ್ ಮಾಡುತಿದ್ದ ಇವರು, ಇಂದು ಚಂದ್ರಯಾನ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ನ್ಯೂಸ್ ವೀವರ್ಸ್ ಅನ್ನು ಹೆಚ್ಚಿಸಿಕೊಂಡಿದ್ದನ್ನ ಕಾಣಬಹುದಾಗಿತ್ತು. ಬಿಬಿಸಿ ನ್ಯೂಸ್  ನ ವೆಬ್ ಪೇಜ್ ನಲ್ಲೂ ಕಾಮೆಂಟ್ ಸೆಕ್ಶನ್ ನಲ್ಲಿ ಕೆಲವರು, ಭಾರತದಲ್ಲಿ ಊಟವಿಲ್ಲದೆ ನರಳುತ್ತಿರುವ ಲಕ್ಷಾಂತರ ಜನರಿರುವಾಗ ಈ ತರಹದ ಶೋಕಿ ಭಾರತಕ್ಕೆ ಬೇಕಿತ್ತ ಎಂದು ಕೆಟ್ಟ ಕಾಮೆಂಟ್ ಮಾಡುತಿದ್ದವರಿಗೆ, ನಮ್ಮ ಭಾರತೀಯರು ಸರಿಯಾಗಿಯೇ ಗುನ್ನ ಇಡುತ್ತಿರುವುದು ಕಂಡು ಬಂತು. ನೀವು ಬ್ರಿಟೀಷರು, ಮುನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದು ಬಡ ರಾಷ್ಟ್ರವನ್ನಾಗಿ ಮಾಡಿ ಹೋದಿರಿ, ಅದರಿಂದ ನಿಮಗೆ ನಾಚಿಕೆಯಾಗಬೇಕಿದೆ ಹೊರತು ನಮಗಲ್ಲ. ಅಂತಹ ಬಡತನದ ಸ್ಥಿತಿಯಿಂದ ದೇಶ ಈವತ್ತು ಪ್ರಪಂಚದ ಪ್ರಮುಖ ಆರ್ಥಿಕ ಶಕ್ತಿಯಾಗುವ ಮಟ್ಟಕ್ಕೆ ಭಾರತ ಬೆಳೆದು ನಿಂತಿದೆ, ಅದಕ್ಕೆ ಹೊಟ್ಟೆಕಿಚ್ಚು ಪಡದೆ ಸಂಭ್ರಮಿಸಿ ಎಂದು ಹಲವರು ಕಾಮೆಂಟಿಸುತಿದ್ದರು.  ಅದೇ ಇರಲಿ ಭಾರತ ರಾಷ್ಟ್ರಕ್ಕೂ ಮತ್ತು ಎಲ್ಲ ಭಾರತೀಯರಿಗೂ ಇದೊಂದು ಹೆಮ್ಮೆಯ ಕ್ಷಣ. 


ಬರಹ :- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ





ಗುರುವಾರ, ಆಗಸ್ಟ್ 17, 2023

ಯುಏಇ ರಾಷ್ಟ್ರದ ಒಳಗೆ ಒಮಾನ್, ಒಮಾನ್ ಒಳಗೆ ಯುಏಇ


ನಮ್ಮ ಕರ್ನಾಟಕದ ಹಳ್ಳಿಯೊಂದು ಮಹಾರಾಷ್ಟ್ರದ ರಾಜ್ಯದ ಒಳಗೆ ಇದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದಲ್ಲವೆ. ಅದು ಹೇಗೆ ಎಂದರೆ, ಹಳ್ಳಿ ಕರ್ನಾಟಕದ್ದೇ ಆದರೂ ಹಳ್ಳಿಯ ಸುತ್ತಮುತ್ತಲಿನ ಭೂಪ್ರದೇಶ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು. ವಿದ್ಯುತ್ ಸೌಲಭ್ಯ ಸಹ ಮಹಾರಾಷ್ಟ್ರ ನೀಡುತ್ತದೆ. ಆದರೆ ಆ ಹಳ್ಳಿ ಮಾತ್ರ ಕರ್ನಾಟಕ ರಾಜ್ಯದ ನಿಯಂತ್ರಣದಲ್ಲಿದೆ. ರಾಜ್ಯಗಳ ಗಡಿ ಗುರುತಿಸುವ ಸಂಧರ್ಭದಲ್ಲಿ ಅಲ್ಲಿನ ಜನ ಕರ್ನಾಟಕದೊಂದಿಗೆ ಇರಲು ಬಯಸಿದ್ದರಿಂದ ಅಂದಿನಿಂದ ಆ ಹಳ್ಳಿ ಕರ್ನಾಟಕದಲ್ಲಿದೆ. ಆ ಹಳ್ಳಿಯ ಹೆಸರೇ ಚೋಂಡೀ ಮುಖೇಡ್. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಇದನ್ನು ಕರ್ನಾಟಕದ ಭೂಪ್ರದೇಶ ದ್ವೀಪ ಎಂದು ಕರೆಯುತ್ತಾರೆ.

 

ಇಂತಹದೇ ಇನ್ನೊಂದು ವಿಶೇಷ ಸಂಗತಿ ಅರಬ್ ರಾಷ್ಟ್ರಗಳಾದ ಒಮಾನ್ ಮತ್ತು ಯುನೈಟೆಡ್ ಅರಬ್ ಸಂಸ್ಥಾನ (ಯುಏಇ) ದಲ್ಲಿದೆ. ಆದರೆ ಇಲ್ಲಿ ವಿಷಯ ಸ್ವಲ್ಪ ಸಂಕೀರ್ಣ. ಅದು ಏನಪ್ಪ ಎಂದರೆ, ಯುಏಇ ದೇಶದೊಳಗೆ ಒಮಾನ್ ದೇಶದ ಪ್ರದೇಶ, ಆ ಪ್ರದೇಶದೊಳಗೆ ಮತ್ತೆ ಯುಏಇ ಯ ಒಂದು ಗ್ರಾಮ. ಇಲ್ಲಿನ ಆ ಎರಡು ಪ್ರದೇಶಗಳ ಜನರ ಭಾವನೆಗಳು ಮತ್ತು ನಿರ್ಧಾರಕ್ಕೆ ಬೆಲೆ ಕೊಟ್ಟು ಎರಡು ದೇಶಗಳ ಸರ್ಕಾರಗಳು ಆ ಎರಡು ಹಳ್ಳಿಗಳ ಜನರನ್ನು ಅವರ ಇಚ್ಚೆಯಂತೆಯೇ ಇರಲು ಅವರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ತರಹದ ಅಂತರಾಷ್ಟ್ರಿಯ ಗಡಿಗಳು ಇಲ್ಲ. ಪ್ರಪಂಚದಲ್ಲಿ ಈ ತರಹದ ಭೂ ಪ್ರದೇಶದ ದ್ವೀಪಗಳು ಬಹಳ ಅಪರೂಪ. ನೆದರ್ಲ್ಯಾಂಡ್ ಮತ್ತು ಬೆಲ್ಜಿಯಮ್ ರಾಷ್ಟ್ರಗಳಲ್ಲಿ ಸಹ ಈ ತರಹದ ಪ್ರದೇಶವಿದೆ. ಒಂದು ದೇಶದ ಭೂಭಾಗವನ್ನು ಇನ್ನೊಂದು ದೇಶವು ಸುತ್ತುವರಿದಿದ್ದರೆ ಮತ್ತು ಆ ಭಾಗವನ್ನು ಮತ್ತೊಂದು ದೇಶವು ಸುತ್ತುವರಿದಿದ್ದರೆ ಅದನ್ನು ಎಕ್ಸ್‌ಕ್ಲೇವ್‌ ಮತ್ತು ಎನ್‌ಕ್ಲೇವ್‌ ಎಂದು ಕರೆಯುತ್ತಾರೆ.

     ಇಂತಹ ವಿಶಿಷ್ಟವಾದ ಪ್ರದೇಶಗಳ ಹೆಸರು  "ಮಾಧಾ" ಮತ್ತು "ನಹ್ವಾ". ಮಾಧಾ ಒಮಾನ್ ರಾಷ್ಟ್ರಕ್ಕೆ ಸೇರಿದ್ದಾದರೆ, ನಹ್ವಾ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸೇರಿದೆ. ಇನ್ನು ಮಾದಾ ಪ್ರದೇಶದ ಜನರು ತಮ್ಮ ರಾಷ್ಟ್ರವಾದ ಒಮಾನಿನ ರಾಜಧಾನಿಯನ್ನು ಸಂಪರ್ಕಿಸಲು ಯುಏಇ ನ ಮುಖಾಂತರ ಹೋಗಬೇಕು. ಅದೇ ರೀತಿ  "ನಹ್ವಾ" ಪ್ರದೇಶದ ಜನರು ಯುಏಇಯನ್ನು ಸಂಪರ್ಕಿಸಲು ಒಮಾನಿನ ಮುಖಾಂತರ ಸಂಚರಿಸಬೇಕು.

     ಈ ತರಹ ಜನ ಯಾಕೆ ಆಯ್ದುಕೊಂಡರು ಎನ್ನುವ ಹಿನ್ನೆಲೆ ಹೀಗಿದೆ; 1930 ರ ದಶಕದ ಕೊನೆಯಲ್ಲಿ ಅಥವಾ 1940 ರ ದಶಕದ ಆರಂಭದಲ್ಲಿ, ಮುಸಂದಮ್ ಪರ್ಯಾಯದ್ವೀಪವನ್ನು ಆಳಿದ ನಾಲ್ಕು ಪ್ರಮುಖ ಕುಟುಂಬಗಳ ನಾಯಕರು (ರಾಸ್ ಅಲ್ ಖೈಮಾದ ಅಲ್ ಖಾಸಿಮಿ, ಶಾರ್ಜಾದ ಅಲ್ ಖಾಸಿಮಿ, ಫುಜೈರಾದ ಅಲ್ ಶಾರ್ಕಿ ಮತ್ತು ಒಮಾನ್‌ನ ಬು ಸೈದ್ ಮನೆತನ) ಒಂದು ದಿನ ಇಲ್ಲಿನ ಹಲವಾರು ಹಳ್ಳಿಗಳ ಜನರನ್ನು ಸಬೆಗೆ ಕರೆದು ನೀವು ಯಾವ ಶೇಖ್‌ ಪ್ರಭುತ್ವ ದ ಆಳ್ವಿಕೆಯಲ್ಲಿ ಇರಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಮಾಧಾ ಸುತ್ತಲಿನ ಎಲ್ಲಾ ಇತರ ಹಳ್ಳಿಗಳು ಮತ್ತು ಪಟ್ಟಣಗಳು  ಶಾರ್ಜಾ, ಫುಜೈರಾ ಮತ್ತು ರಾಸ್ ಅಲ್ ಖೈಮಾದ ಆಡಳಿತ ಕುಟುಂಬಗಳ ಜತೆ ಇರಲು ಇಚ್ಚಿಸಿದರು, ಆದರೆ ಮಾಧಾ ಪ್ರದೇಶದ ಜನರು ಒಮಾನಿನ ಸುಲ್ತಾನರ ಜತೆ ಇರಲು ಒಪ್ಪಿಗೆ ಸೂಚಿಸಿದರು. ಆ ದಿನಗಳಲ್ಲಿ ಒಮಾನ್ ಶ್ರೀಮಂತ ರಾಷ್ಟ್ರವಾಗಿತ್ತು, ಆಫ್ರಿಕದ ಜಂಜೀಬಾರ್ ಸೇರಿದಂತೆ ಅರಬ್ಬಿ ಸಮುದ್ರದ ಬಹುತೇಕ ಬಂದರುಗಳು ಒಮಾನಿ ಸುಲ್ತಾನರ ವಶದಲ್ಲಿತ್ತು. ಹೀಗಾಗಿ ಸಶಕ್ತ ಸರ್ಕಾರವನ್ನು ಹೊಂದಿರುವ ಒಮಾನ್ ಸುಲ್ತಾನರು ಇಲ್ಲಿಯ ಜನರಿಗೆ ಅಗತ್ಯವಾದ ರಕ್ಷಣೆ ಜತೆಗೆ ನೀರಿನ ಸೌಕರ್ಯವನ್ನು ನೀಡುವರು ಎನ್ನುವ ದೃಢ ನಂಬಿಕೆಯಿಂದ ಮಾಧಾ ಜನತೆ ಒಮಾನ್ ಅನ್ನು ಆಯ್ಕೆ ಮಾಡಿದರು. ಇನ್ನು ಇದೇ ಪ್ರಾಂತ್ಯದ ಒಳಗಿರುವ ಇನ್ನೊಂದು ಗ್ರಾಮ "ನಹ್ವಾ" ದ ಜನತೆಯು ಯುಏಇಯ ಜತೆಗೆ ಇರಲು ಇಷ್ಟಪಟ್ಟರು, ಅದರಂತೆ ಶಾರ್ಜಾದ ಅಲ್ ಖಾಸಿಮಿಯವರ ಆಡಳಿತಕ್ಕೆ ಈ ಗ್ರಾಮವು ಒಳಪಟ್ಟಿತು.

 

ಸುಮಾರು ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಪ್ರತಿನಿಧಿಯಾದ ಜೂಲಿಯನ್ ಎಫ್. ವಾಕರ್  ಈ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು, ಸ್ಥಳೀಯ ಬುಡಕಟ್ಟು ಪ್ರದೇಶದ ಜನರು ಮತ್ತು ನಡುವಿನ ಧೀರ್ಘವಾದ ಸಮಾಲೋಚನೆಗಳ ನಂತರ 1969 ರಲ್ಲಿ ಅಂತರಾಷ್ಟ್ರೀಯ ಗಡಿಯನ್ನು ನಿರ್ಧರಿಸಲಾಯಿತು. ಅಂದಿನಿಂದ ಈ ಎಲ್ಲಾ ಪ್ರಾಂತ್ಯಗಳನ್ನು ಆ ರಾಷ್ಟ್ರಗಳು ಅಭಿವೃದ್ದಿ ಪಡಿಸುತ್ತಿವೆ. ಈ ಪ್ರದೇಶಗಳ ಪ್ರವೇಶದ ಸ್ಥಳದಲ್ಲಿ ಆಯಾ ರಾಷ್ಟ್ರಗಳ ಪೋಲೀಸ್ ಚೆಕ್ಪೋಸ್ಟ್ ಗಳಿವೆ. ಒಮಾನ್ ರಾಷ್ಟ್ರವು, "ನ್ಯೂ ಮಾಧಾ" ಎನ್ನುವ ಒಂದು ಪಟ್ಟಣವನ್ನು ನಿರ್ಮಿಸಿ ಅಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನ ಕೈಗೊಂಡಿದೆ. ರಸ್ತೆಗಳು, ಶಾಲೆ, ಅಂಚೆ ಕಛೇರಿ, ಈದ್ ಮೈದಾನ, ಪೋಲೀಸ್ ಸ್ಟೇಷನ್, ಒಮಾನಿ ಬ್ಯಾಂಕ್, ವಿದ್ಯುತ್ ಮತ್ತು ನೀರು ಸರಬರಾಜು, ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದೆ. ಅಂದಾಜು 3000 ರಷ್ಟು ಜನಸಂಖ್ಯೆ ಇದೆ.ಮಾಧಾ ಒಳಗಿನ ಯುಏಇ ನಿಯಂತ್ರಣದಲ್ಲಿರುವ ನಹ್ವಾ ಪ್ರದೇಶದಲ್ಲಿ ಜನಸಂಖ್ಯೆ ಆಸುಪಾಸು 500 ರಷ್ಟಿದೆ. ಅಲ್ಲಿ ಯುಏಇ ರಾಷ್ಟ್ರವು ಅಲ್ಲಿನ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನ ನೀಡಿದೆ

     ಈ ವಿಶಿಷ್ಟವಾದ "ಮಾಧಾ ಮತ್ತು ನಹ್ವ" ಪ್ರದೇಶಕ್ಕೆ ವಾರಾಂತ್ಯಗಳಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಟ್ಟಗಳಿಂದ ಆವೃತ್ತವಾದ ಒಮಾನಿನ ಮಾಧಾ ಪ್ರದೇಶದಲ್ಲಿ ಹೇರಳವಾದ ಖರ್ಜೂರದ ತೋಟಗಳಿವೆ. ಇಲ್ಲಿ ಕೆಲವು ನೀರಿನ ಬುಗ್ಗೆಗಳಿವೆ, ದಿನಪೂರ್ತಿ ನೈಸರ್ಗಿಕವಾಗಿ ಭೂಮಿಯಿಂದ ನೀರು ಹೊರಬರುತ್ತಿರುತ್ತದೆ. ಹದಿನೇಳನೇ ಶತಮಾನದಲ್ಲಿ ಒಮಾನಿ ಯಾರುಬಿ ಸುಲ್ತಾನಿಗಳು ನಿರ್ಮಿಸಿದ ಕೋಟೆ ಯೊಂದಿದೆ. ಸರೂಜ್ ಅಣೆಕಟ್ಟೆಯು ಈ ಪ್ರದೇಶದ ಪ್ರಮುಖ ಆಕರ್ಷಣೆ.

     ಇಲ್ಲಿನ ಪ್ರಮುಖ ನಾಯಕರಾಗಿದ್ದ ಮುಹಮ್ಮದ್ ಬಿನ್ ಸಲೇಮ್ ಅಲ್ ಮದನಿಯವರು ನಿರ್ಮಿಸಿದ ವಸ್ತುಸಂಗ್ರಹಾಲಯವು ಇದ್ದು, ಇದರಲ್ಲಿ ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಹತ್ತನೇ ಶತಮಾನದ AD ವರೆಗಿನ ಹಲವಾರು ದಾಖಲೆಗಳು, ಹಸ್ತಪ್ರತಿಗಳು ಅಲೆಕ್ಸಾಂಡರ್ ದಿ ಗ್ರೇಟ್ ಆಳ್ವಿಕೆಯಲ್ಲಿ ಬಳಸಲಾದ ಗ್ರೀಕ್ ಬೆಳ್ಳಿ ನಾಣ್ಯ, ಎರಡೂ ಬದಿಗಳಲ್ಲಿ ಕಲ್ಲಿನಿಂದ ಮಾಡಿದ ನಕ್ಷತ್ರವನ್ನು ಹೊಂದಿರುವ ಅತ್ಯಂತ ಚಿಕ್ಕ ನಾಣ್ಯ , ಮತ್ತು ಉಮಯ್ಯದ್ ಮತ್ತು ರಾಜ್ಯ ಯುಗಗಳಲ್ಲಿ ಮುದ್ರಿಸಲಾದ ನಾಣ್ಯಗಳು, ಶಿಲಾ ಶಾಸನಗಳು, ಬಾಣಗಳ ತುಣುಕುಗಳು, ಈಟಿಗಳು, ಇತರ ಪುರಾತನ ಆಯುಧಗಳು, ಗಡಿಯಾರಗಳು, ಕುಂಬಾರಿಕೆಯ ಮಡಿಕೆ ಬಿಂದಿಗೆ, ನಾಣ್ಯ ಮತ್ತು ಕೃಷಿ ಉಪಕರಣಗಳನ್ನು ಒಳಗೊಂಡಂತೆ ಕ್ರಿಸ್ತ ಪೂರ್ವಕಾಲದ ಹಿಂದಿನ ಹಲವಾರು ವಸ್ತುಗಳು ಮತ್ತು ಪ್ರಾಚೀನ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.


 ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಶುಕ್ರವಾರ, ಆಗಸ್ಟ್ 4, 2023

ಅರಬ್ ರಾಷ್ಟ್ರ ಒಮಾನ್ ನಲ್ಲಿ ಕಂಡು ಬಂದ ಹರಪ್ಪ ನಾಗರೀಕತೆಯ ಕುರುಹುಗಳು



ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಯ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪ ಮತ್ತು ಮೆಹೆಂಜೋದಾರೋ ನಾಗರೀಕತೆ ಬಗ್ಗೆ ಭಾರತೀಯರಾದ ನಮಗೆ ಬಹಳಷ್ಟು ಹೆಮ್ಮೆ ಯಿದೆ. ಕಾರಣ ಏನೆಂದರೆ ಕ್ರಿ.ಪೂ 3000 ವರ್ಷಗಳ ಹಿಂದಿನ ಆ ಕಾಲದಲ್ಲಿಯೇ ಯೋಜನಾಬದ್ದವಾಗಿ  ನಿರ್ಮಾಣಗೊಂಡ ನಗರಗಳು, ರಕ್ಷಣಾ ಕೋಟೆಗಳು, ರಸ್ತೆಗಳು, ಕುಡಿಯುವ ನೀರಿನ ಬಾವಿಗಳು, ಒಳಚರಂಡಿ ವ್ಯವಸ್ಥೆ. ಸ್ನಾನಗೃಹಗಳು. ಇತ್ಯಾದಿ. ಆಗಿನ ಜನರ ಉತ್ತಮ ಸಾಮಾಜಿಕ ಜೀವನ, ಆರ್ಥಿಕ ಜೀವನ, ಕಲೆ, ಧಾರ್ಮಿಕ ಆಚರಣೆ, ಬರಹಗಳು, ಇವೆಲ್ಲವೂ ಹರಪ್ಪ ಸಂಸ್ಕೃತಿಯ ವಿಶಿಷ್ಟತೆಯನ್ನು ಎತ್ತಿ ಹಿಡಿಯುತ್ತವೆ. ಸಿಂಧೂ ಮತ್ತು ಅದರ ಉಪನದಿಗಳ ಬಯಲಿನಲ್ಲಿ ಈ ನಾಗರೀಕತೆ ಪ್ರಸ್ತುತದಲ್ಲಿದ್ದರಿಂದ ಇದನ್ನು  ಸಿಂಧೂ ಬಯಲಿನ ನಾಗರೀಕತೆ ಎಂದು ಕರೆಯಲಾಗುತ್ತದೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕಿ ಈ ಜನ ಜೀವನ ಕಣ್ಮರೆಯಾಗಿದ್ದುದು ಬಹಳ ವಿಷಾದದ ಸಂಗತಿ. ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬರ ಇತ್ಯಾದಿಗಳ ಕಾರಣದಿಂದ ಇಲ್ಲಿನ ಜನರು ಈ ನಗರಗಳನ್ನು ತೊರೆದಿರಬಹುದು ಇಲ್ಲವೇ ಬೇರೆಡೆ ವಲಸೆ ಹೋಗಿರಬಹುದು ಎಂದು ಪುರಾತತ್ವ ಸಂಶೋಧಕರು ಊಹಿಸಿದ್ದಾರೆ.


ಒಂದು ಶತಮಾನದ ಹಿಂದೆ ಬ್ರಿಟೀಷರು, ಈ ಹರಪ್ಪ ನಾಗರಿಕತೆ ಬಗ್ಗೆ ಸಂಶೋಧನೆಗಳನ್ನು ಆರಂಭಿಸಿದ್ದರು. ಅಂದು ಶುರುವಾದ ಸಂಶೊಧನೆಗಳು ಇಂದಿಗೂ ವಿವಿಧ ದೇಶಗಳ ಪ್ರಖ್ಯಾತ ಪುರಾತತ್ವ ಸಂಶೋಧಕರು ಅನ್ವೇಷಣೆ ನಡೆಸುತಿದ್ದಾರೆ. ಈ ಸಂಶೋಧನೆಗಳಲ್ಲಿ ಸಿಂಧೂ ನದಿಬಯಲಿನ ಆಚೆಗೂ ಈ ನಾಗರೀಕತೆಯ ನೆಲೆಗಳು ಹರಡಿದ್ದವು ಎಂದು ತಿಳಿಯಲಾಯಿತು. ಅದೇ ರೀತಿ ಕಳೆದ ಒಂದು ದಶಕದಲ್ಲಿ ಒಮಾನಿನ ಒಳನಾಡಿನಲ್ಲಿ ಉತ್ಖನನ ನಡೆಸಿದ ಕೆಲಸ್ಥಳಗಳಲ್ಲಿ ದೊರೆತ ಪುರಾವೆಗಳಿಂದ ಅರಬ್ ರಾಷ್ಟ್ರವಾದ ಒಮಾನ್ ದೇಶದಲ್ಲೂ ಸಹ ಹರಪ್ಪ ನಾಗರೀಕತೆ ಹರಡಿತ್ತು ಎಂದು ಗೊತ್ತಾಗಿದೆ.

 ಒಮಾನ್ ದೇಶ (ಅಧಿಕೃತ ಹೆಸರು ಸುಲ್ತಾನೇಟ್ ಆಫ್ ಒಮಾನ್), ಇದು ಪಶ್ಚಿಮ ಏಷ್ಯಾದಲ್ಲಿನ ಅರಬ್  ರಾಷ್ಟ್ರ.  ಈ ದೇಶವು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಪರ್ಶಿಯನ್ ಕೊಲ್ಲಿ, ಪೂರ್ವಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾ ಸಾಗರವಿದೆ, ಇರಾನ್ ಮತ್ತು ಪಾಕಿಸ್ತಾನದೊಂದಿಗೆ ಸಮುದ್ರದ ಗಡಿಗಳನ್ನು ಹಂಚಿಕೊಂಡಿವೆ. 

 

ಭೌಗೋಳಿಕವಾಗಿ, ಒಮಾನ್ ರಾಷ್ಟ್ರವು ಭಾರತದಿಂದ ಅಷ್ಟೇನು ದೂರದಲ್ಲಿಲ್ಲ. ಸಮುದ್ರ ಮಾರ್ಗದ ಮುಖಾಂತರ ಗುಜರಾತಿನ ಬಂದರಿನಿಂದ ಒಮಾನಿನ ಮಸ್ಕತ್ ಪೋರ್ಟ್ ಗೆ ಕೇವಲ 1000 ನಾಟಿಕಲ್ ಮೈಲಿ ಮಾತ್ರ. ಹೀಗಾಗಿ ಹರಪ್ಪರು, ಕಡಲಾಚೆಗೂ ಇರುವ  ಅರಬ್ ರಾಷ್ಟ್ರಗಳಾದ ಒಮಾನ್, ಯುಏಇ ಮತ್ತಿತರ ದೇಶಗಳೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವುದಕ್ಕೆ ಸಾಕಷ್ಟು ಸಾಧ್ಯತೆಗಳಿವೆ.

 

ಒಮಾನ್ ರಾಷ್ಟ್ರದ ಅಲ್ ವತ್ತಾಯ ಪ್ರದೇಶದಲ್ಲಿ ಕ್ರಿ.ಪೂ. 10000  ವರ್ಷಗಳ ಹಿಂದೆಯೇ ಜನವಸತಿಯಿತ್ತು ಎಂದು ಪುರಾತತ್ವ ಸಂಶೋಧನೆಗಳಿಂದ ತಿಳಿದು ಬಂದಿದೆ.  ಕ್ರಿ.ಪೂ 3000 ವರ್ಷಗಳ ಹಿಂದೆ ಗ್ರೀಕ್ ರೊಂದಿಗೆ ಎರಿಥ್ರಿಯನ್ ಸಮುದ್ರದಲ್ಲಿ ಕಡಲ ಮಾರ್ಗದ ಮೂಲಕ ವ್ಯಾವಹಾರಿಕ ಸಂಭಂದ ಕುರಿತು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೆ ಕ್ರಿ.ಪೂ 3000 ವರ್ಷಗಳ ಹಿಂದೆಯೂ ಜನಜೀವನ ಇದ್ದ ಕೆಲ ಕುರುಹುಗಳು ಕಂಡಿವೆ. ಹೀಗೆಯೇ ಮುಂದುವರಿದ ಇತ್ತೀಚಿನ ಹಲವು ಸಂಶೋಧನೆಗಳು ಹರಪ್ಪ ನಾಗರೀಕತೆಯು ಇಲ್ಲಿಯವರೆಗೂ ಹರಡಿದ್ದ ಪ್ರಮುಖ  ಸುಳಿವನ್ನು ನೀಡಿದೆ. ಒಮಾನ್ ಮತ್ತು ಭಾರತದ ಮಧ್ಯೆಯಿದ್ದ ವ್ಯವಾಹಾರಿಕ, ಧಾರ್ಮಿಕ, ಕಲೆ, ಸಾಮಾಜಿಕ ಸಂಭಂಧಗಳ ಬಗ್ಗೆ ಈ ಪುರಾವೆಗಳು ಮತ್ತಷ್ಟು ಬೆಳಕು ಚೆಲ್ಲಲಿವೆ.

 

 ಸಿಂಧೂ ಬಯಲಿನಿಂದ ಹರಪ್ಪ ಮತ್ತು ಮೆಹೆಂದಾಜಾರೋ ನಗರದ ಜನರು ಸಮುದ್ರದಾಚೇಗೂ  ಸಂಪರ್ಕ ಸಾಧಿಸಿದ್ದರು ಎಂದರೆ ಅವರಲ್ಲಿದ್ದ ವ್ಯಾವಹಾರಿಕ ಜ್ಞಾನದ ಕುರಿತು ತಲೆದೂಗಲೇಬೇಕು. ಜತೆಗೆ ಒಮಾನಿ ನ ಪ್ರಜೆಗಳೊಂದಿಗೆ ವ್ಯಾವಹಾರಿಕ ಸಂಪರ್ಕವನ್ನು ಹೊಂದಿದ್ದರು ಎಂದರೆ, ಈ ಅರಬ್ ರಾಷ್ಟ್ರಗಳಲ್ಲಿ ಜನಜೀವನ ಅಸ್ತಿತ್ವದಲ್ಲಿತ್ತು ಎಂದು ವಿಷ್ಲೇಶಿಸಬಹುದು. ಹೀಗಾಗಿ ಆ ಹಿಂದಿನ ಜನಜೀವನ ಪದ್ದತಿಯ ಕುರಿತು ಸಹ ಅನ್ವೇಷಣೆ ನಡೆಯುತ್ತಿದೆ.

 

ಇದುವರೆಗೂ ಒಮಾನಿನ ಹಲೆವೆಡೆ ಹರಪ್ಪರ ಕಾಲದ ಹಲವಾರು ವಸ್ತುಗಳು ದೊರೆತಿವೆ.  ಪುರಾತತ್ತ್ವ ಶಾಸ್ತ್ರದ ಸ್ಥಳ ಎಂದು ಗುರುತಿಸಿರುವ ಉತ್ತರ ಅಲ್ ಬತಿನಾದಲ್ಲಿರುವ ದಹ್ವಾ, ಒಮಾನ್‌ನಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ವಸಾಹತು. ಇದು ಹಜಾರ್ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ಸಹಮ್‌ನ ವಿಲಾಯತ್‌ನ ಪಶ್ಚಿಮಕ್ಕೆ 24 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ತಾಣವು ಕಂಚಿನ ಯುಗದ ನಾಗರೀಕತೆಯ ಉಮ್ ಅಲ್ ನಾರ್ ನ ನಾಗರೀಕತೆಗಿಂತ ಹಿಂದಿನದು (ಸುಮಾರು 2500 ರಿಂದ 2000 BC). ಈ ಸ್ಥಳದಲ್ಲಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಕ್ರಿ,ಪೂ ಮೂರನೇ ಸಹಸ್ರಮಾನದಲ್ಲಿನ ಮಜಾನ್ ನಾಗರೀಕತೆ ಮತ್ತು ಹರಪ್ಪನ್ ಅಥವಾ  ಸಿಂಧೂ ಕಣಿವೆಯ ನಾಗರೀಕತೆಯ ನಿವಾಸಿಗಳ ನಡುವಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಮಹತ್ವದ ಸಾಕ್ಷಿಗಳನ್ನು ಒದಗಿಸಿವೆ. ಈ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಮಣ್ಣಿನ ಜಾಡಿ, ಮಣಿಗಳುಕಲ್ಲಿನ ಒಲೆಗಳು ಇತ್ಯಾದಿ ದೊರೆತಿವೆ, ಇವೆಲ್ಲವೂ ಹರಪ್ಪನ ನಾಗರೀಕತೆಯಲ್ಲಿ ಬಳಕೆಯಲ್ಲಿದ್ದ ವಸ್ತುಗಳು. ಈ ಜಾಡಿಗಳು ಸಿಂಧೂ ನದಿಯಾಚೆಗಿನ ಜನರಿಂದ ಇಲ್ಲಿಗೆ ಸರಬರಾಜಿಗೆ ಎಂದು ಅನ್ವೇಷಿಸಲಾಗಿದೆ.

 

ಸಾಲುಟ್ ಪ್ರದೇಶದಲ್ಲಿ ಹರಪ್ಪ ಮಾದರಿಯಲ್ಲಿ ಕುಂಬಾರಿಕೆ ನಡೆಸುತಿದ್ದ ಜಾಗ ಪತ್ತೆಯಾಗಿದೆ. ಇಲ್ಲಿ ಮಣ್ಣಿನ ಮಡಿಕೆಗಳು, ಜಾಡಿಗಳು, ಇತ್ಯಾದಿಗಳು ಪತ್ತೆಯಾಗಿವೆ. ಇವೆಲ್ಲವೂ ಜೇಡಿ ಮಣ್ಣಿನಿಂದ ಮಾಡಲಾಗಿದೆ.

 

ಇನ್ನೊಂದು ಪುರಾತತ್ತ್ವ ಶಾಸ್ತ್ರದ ಸ್ಥಳ ರಾಸ್ ಅಲ್ ಹದ್‌ನಲ್ಲಿ ಪತ್ತೆಯಾದ ಮಣ್ಣಿನ ಮಡಿಕೆ, ಜಾಡಿ, ಆಭರಣಗಳು ಮತ್ತು 5000 ವರ್ಷಗಳಷ್ಟು ಹಳೆಯದಾದ ಬುಟ್ಟಿಗಳು, ಹಗ್ಗಗಳು, ಬಲೆಗಳು ಮತ್ತು ಈ ಪ್ರದೇಶದ ಜನರು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಇತರೆ ವಸ್ತುಗಳನ್ನು ಈ ಪ್ರದೇಶದಲ್ಲಿ ಕಂಡುಹಿಡಿಯಲಾಗಿದೆ. ಇವುಗಳು ಕ್ರಿ.ಪೂ 3100 BC ಮತ್ತು 2400 BC ವರ್ಷಗಳ ನಡುವಿನ ಆರಂಭಿಕ ಕಂಚಿನ ಯುಗದ ಹಿಂದಿನವು ಎಂದು ಹೇಳಲಾಗುತ್ತದೆ.

 

ಇನ್ನು ಕಲ್ಹಟ್ ಮತ್ತು ದಿಲ್ಮುನ್ ಪ್ರದೇಶದಲ್ಲಿಯೂ ಸಹ ಹರಪ್ಪರ ಲಿಪಿಯ ನಾಣ್ಯಗಳು, ಜಾಡಿಗಳು ಅಲಂಕಾರಿಕ ಒಡವೆಗಳು ಇತ್ಯಾದಿ ದೊರೆತಿವೆ.  ಈ ಪ್ರದೇಶವೂ ಸಹ ಪ್ರಮುಖ ಪುರಾತತ್ತ್ವ ಶಾಸ್ತ್ರದ ಸ್ಥಳ ವಾಗಿದೆ.

 

ರಾಸ್ ಅಲ್ ಜಿಂಜ್ ಪ್ರದೇಶದಲ್ಲಿ, ಕೆಲವು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಕೊಡಲಿ, ಈಟಿ ಗಳು ದೊರೆತಿವೆ, ಅಷ್ಟೇ ಅಲ್ಲದೆ ಬಾಚಣಿಕೆ ಕೂಡ ಪತ್ತೆಯಾಗಿದೆ. ಕೆಲವಸ್ತುಗಳ ಮೇಲೆ ಹರಪ್ಪರ ಲಿಪಿಗಳು ಇವೆ.

 

ಒಮಾನಿನಲ್ಲಿ ದೊರೆತ ಹರಪ್ಪನ್ ನಾಗರೀಕತೆಯ ಈ ವಸ್ತುಗಳು  ಆರಂಭಿಕ ಕಂಚಿನ ಯುಗದಲ್ಲಿ ಒಮಾನ್ ಮತ್ತು ಸಿಂಧ್ ನಡುವೆ ಚಾಲ್ತಿಯಲ್ಲಿದ್ದ ವ್ಯಾಪಾರ ಚಟುವಟಿಕೆಯ ವ್ಯಾಪ್ತಿಯನ್ನು ಸೂಚಿಸುತ್ತದೆ.  ಸಿಂಧ್‌ನಿಂದ ಏನನ್ನು ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಈ ಜಾಡಿಗಳಲ್ಲಿ ಸಾಗಿಸಲಾದ ವಸ್ತುಗಳ ಸ್ವರೂಪವನ್ನು ಇನ್ನೂ ಗುರುತಿಸಲಾಗಿಲ್ಲ. ಮಣ್ಣಿನ ಜಾಡಿಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಹರಪ್ಪರ ಕಾಲದ ಜನರು ಭಾರತದಿಂದ ಒಮಾನಿಗೆ ಕೆಲ ಪ್ರಮುಖ ವಸ್ತುಗಳನ್ನು ಕಳುಹಿಸಲು ಈ ಜಾಡಿಗಳನ್ನು ಬಳಸಿದ್ದರು ಎನ್ನಲಾಗಿದೆ.

 

ಒಮಾನ್ ಮತ್ತು ವಾಯುವ್ಯ ಭಾರತದ ಸಿಂಧೂ ಬಯಲಿನ ಮಧ್ಯೆ ನೇರವಾದ ಯಾವುದೇ ರಸ್ತೆ ಮಾರ್ಗಗಳಿಲ್ಲ.  ಅರಬ್ಬಿ ಸಮುದ್ರ, ನಂತರ ಇಂದಿನ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ನಂತರ ದೊಡ್ಡದಾದ ಸಿಂಧೂ ನದಿ ಮತ್ತು ಕಣಿವೆಮಾರ್ಗಗಳು. ಇವೆಲ್ಲವೂಗಳ ಮಧ್ಯೆ ಸಾವಿರಾರು ಕಿ.ಮಿ.ಗಳ ಅಂತರವಿದೆ. ಇಂತಹ ಕಷ್ಟಕರವಾದ ಮಾರ್ಗವನ್ನು ಹೇಗೆ ತಲುಪಿರಬಹುದು ಎಂದು ವಿಷ್ಲೇಶಿಸಿದಾಗ, ಮೊದಲು ಸಿಂಧೂ ನದಿಯನ್ನು ದಾಟಲು ಮೊದಲಿಗೆ ಚಿಕ್ಕ ಚಿಕ್ಕ ದೋಣಿಗಳನ್ನು ಬಳಸಿ ನದಿಯನ್ನು ದಾಟಿ ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದರನ್ನು ತಲುಪುತಿದ್ದರು. ಅಲ್ಲಿಂದ ಒಮಾನಿನ ಸಮುದ್ರದ ಬಂದರುಗಳನ್ನು ತಲುಪುತಿದ್ದರು ಎನ್ನಲಾಗಿದೆ.

 

ಭಾರತದ ಪಶ್ಚಿಮ ಕರಾವಳಿ ಮತ್ತು ಒಮಾನ್ ಸಮುದ್ರದ ಉದ್ದಕ್ಕೂ ಇರುವ ಪಟ್ಟಣಗಳು ಮತ್ತು ವ್ಯಾಪಾರ ಬಂದರುಗಳ ನಡುವೆ ಪ್ರಯಾಣಿಕರು, ವ್ಯಾಪಾರಸ್ಥರು ಸಂಚರಿಸುತಿದ್ದರು ಎನ್ನುವುದಿಕ್ಕೆ ಹಲವಾರು ಸಾಕ್ಷಾಧಾರಗಳು ದೊರೆತಿವೆ. ಕೊಲ್ಲಿ ರಾಷ್ಟ್ರಗಳ ಸಮುದ್ರತೀರಗಳು ಮತ್ತು ಭಾರತೀಯ ಕರಾವಳಿ ತೀರಗಳು  ಸಾವಿರಾರು ವರ್ಷಗಳಿಂದ  ಸಂಪರ್ಕದಲ್ಲಿದ್ದರಿಂದ ಇಂದಿನ ಒಮಾನ್‌ನ ಉತ್ತರ ಕರಾವಳಿಯ ಬಂದರುಗಳಿಗೆ ಮೊದಲು ಸರಕು ಸರಂಜಾಮುಗಳು ರವಾನೆಯಾಗುತಿದ್ದವು. ಅಲ್ಲಿಂದ ಮರುಭೂಮಿಯ ಒಳಭಾಗಕ್ಕೆ, ಹಾಗೆಯೇ ಮುಂದೆ ಆಫ್ರಿಕಾ ಮತ್ತು ಮೆಡಿಟರೇನಿಯನ್‌ಗೆ ಸಮುದ್ರಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತಿದ್ದರಿಂದ ಅರಬ್ಬರ ನಾಡಿಗೆ ಒಮಾನಿನ ಬಂದರುಗಳು ಪ್ರವೇಶದ್ವಾರವಾಗಿದ್ದವು ಎನ್ನಬಹುದು.

 

ಐದಾರು ಸಾವಿರ ವರ್ಷಗಳ ಹಿಂದಿನಿಂದಲೂ ಇದ್ದ ಆ ವ್ಯಾವಹಾರಿಕ ಸಂಭಂಧಗಳು ಇಂದಿಗೂ ಅಷ್ಟೇ ಸೌಹಾರ್ದತೆಯಿಂದ ಮುಂದುವರಿದಿರುವುದು ವಿಶೇಷ.  ಅರಬ್ ರಾಷ್ಟ್ರಗಳಿಗೆ ವಿವಿಧ ದೇಶಗಳಿಂದ ಆಮದಾಗುವ ಸರಕು ಸರಂಜಾಮುಗಳಿಗೆ ಹೋಲಿಸಿದರೆ ಭಾರತ ದೇಶವು ಅಗ್ರಸ್ಥಾನದಲ್ಲಿದೆ.




ಬುಧವಾರ, ಆಗಸ್ಟ್ 2, 2023

ಜೋರ್ಡಾನ್‌ನಲ್ಲಿ ಪತ್ತೆಯಾದ 14400 ವರ್ಷಗಳ ಹಿಂದಿನ ಬ್ರೆಡ್‌(ರೊಟ್ಟಿ)

 




ನಮ್ಮ ಪೂರ್ವ ಇತಿಹಾಸವನ್ನು ಶಿಲಾಯುಗ, ನವ ಶಿಲಾಯುಗ, ಕಂಚಿನ ಯುಗ, ತಾಮ್ರಯುಗ, ಕಬ್ಬಿಣದ ಯುಗ ಹೀಗೆ ಸಾವಿರಾರು ವರ್ಷಗಳ ಇತಿಹಾಸವನ್ನು ವಿಂಗಡಿಸಲಾಗಿದೆ. ಯುಗ ಬದಲಾದಂತೆ ನಾಗರಿಕತೆ ಸಹ ಬೆಳೆದು ಸಾಕಷ್ಟು ಬದಲಾವಣೆಯನ್ನು ನಮ್ಮ ಪ್ರಪಂಚ ಕಂಡಿದೆ. ಇತಿಹಾಸಕಾರರ ಪ್ರಕಾರ ಮಾನವ ತನ್ನ ಧೈನಂಧಿನ ಆಹಾರಕ್ಕಾಗಿ ವಿವಿಧ ಮಾರ್ಗಗಳನ್ನು ಅಳವಡಿಸಿಕೊಂಡಿದ್ದ. ಬೇಟೆಯಾಡುವುದರಿಂದ ಹಿಡಿದು, ಬೆಳೆ ಬೆಳೆದು ಆಹಾರವನ್ನು ಬೇಯಿಸಿಕೊಳ್ಳುವವರೆಗೂ  ಸಾವಿರಾರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿ ಕೊಂಡಿದ್ದ ಎಂದು ಸಂಶೋಧಕರು ಹೇಳುತ್ತಾರೆ. ಇದಕ್ಕೆಲ್ಲ ಪುರಾವೆಗಳು ಎಂದರೆ, ವಿವಿಧ ದೇಶಗಳಲ್ಲಿರುವ ಆರ್ಕಿಯಾಲಜಿ (ಪುರಾತತ್ವ) ಇಲಾಖೆಯವರ ಸಂಶೋಧನೆ. ನಿಖರವಾಗಿ ಇಷ್ಟು ವರ್ಷಗಳ ಹಳೆಯದು ಎಂದು ಹೇಳುವಷ್ಟರ ಮಟ್ಟಿಗೆ ಇತ್ತೀಚಿಗಿನ ತಂತ್ರಜ್ನಾನ ಈ ಕೆಲಸವನ್ನು ಸುಲಭಮಾಡಿದೆ.

 


"ಹೊಸ ಶಿಲಾಯುಗ"ಎಂದರೆ "ನಿಯೋಲಿಥಿಕ್" , ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಸುಮಾರು 11200 BCE ಯಿಂದ, ನಂತರ ಪ್ರಪಂಚದ ಇತರ ಭಾಗಗಳಲ್ಲಿ, 4500 ಮತ್ತು 2000 BCE ನಡುವೆ ಈ ಯುಗ ಕೊನೆಗೊಂಡಿತು. ಇದು ತಾಂತ್ರಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ಅವಧಿಯಾಗಿದ್ದು, ಬೆಳೆ ಬೆಳೆಯುವುದು ಮತ್ತು ಪ್ರಾಣಿಗಳ ಪಳಗಿಸುವಿಕೆ ಯಂತಹ ಚಟುವಟಿಕೆಗಳು ಈ ಯುಗದಲ್ಲಿ ಪ್ರಾರಂಭವಾಯಿತು. ಈ ರಾಷ್ಟ್ರಗಳಲ್ಲಿ ಉತ್ಖನನ ಮಾಡಿದಾಗ ದೊರೆತ ಪುರಾವೆಗಳ ಆಧಾರದ ಮೇಲೆ ಆಹಾರಕ್ಕಾಗಿ ಕೃಷಿಯ ಅವಲಂಬನೆ ಹೊಸ ಶಿಲಾಯುಗದಲ್ಲಿ ಆರಂಭವಾಗಿತ್ತು ಎಂದು ಊಹಿಸಲಾಗಿತ್ತು.

 










ಜೋರ್ಡಾನ್ ರಾಷ್ಟ್ರ, ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಸಹಸ್ರಾರು ವರ್ಷಗಳ ಹಿಂದಿನ ಜೀವನ ಪದ್ದತಿ, ಮಾನವನ ನಾಗರಿಕತೆ ಬೆಳವಣಿಗೆ ಕುರಿತು ಇಂದಿಗೂ ಉತ್ಕನನ ನಡೆಯುತ್ತಿದೆ. ಇತಿಹಾಸಕಾರರಿಗೆ, ಪುರಾತತ್ವ ಸಂಶೋಧಕರಿಗೆ ದೊರೆಯುವ ಈ ಪುರಾವೆಗಳು   ಅತ್ಯಮೂಲ್ಯ. ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಸಮಯದಲ್ಲಿ ಹಲವಾರು ನಾಗರಿಕತೆ ಅಥವಾ ಸಮುದಾಯಗಳು ನಶಿಸಿಹೋಗಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯಲ್ಲಿ ಅದೆಷ್ಟು ಸತ್ಯಗಳು ಹುದುಗಿವೆಯೋ ಗೊತ್ತಿಲ್ಲ. ಆದರೆ ಭೂಮಿಯನ್ನು ಬಗೆದಷ್ಟು ಸತ್ಯಗಳು ಹೊರಬರುತ್ತಿರುವುದನ್ನ ನಾವು ಇಂದಿಗೂ ಕಾಣುತಿದ್ದೇವೆ.

 


ಜೋರ್ಡಾನ್ ರಾಷ್ಟ್ರ  ಪಶ್ಚಿಮ ಏಷ್ಯಾದ ಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಕ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ.  ಮಧ್ಯ ಪ್ರಾಚ್ಯದ ಈ ರಾಷ್ಟ್ರವು ಸೇರಿದಂತೆ ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಶಿಲಾಯುಗದ ಕಾಲದ ಅವಶೇಷಗಳು ಪತ್ತೆಯಾಗುತ್ತಲೇ ಇವೆ. ಹತ್ತಾರು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಈ ಪುರಾವೆಗಳು ಒದಗಿಸುತ್ತಿವೆ. ಜನ ಜೀವನವಿಧಾನಗಳಲ್ಲಿ ಉಂಟಾಗುತ್ತಿದ್ದ ಸುಧಾರಣೆಗಳ ಪರಿಚಯ ಈ ಎಲ್ಲ ನೆಲೆಗಳಲ್ಲೂ ನಡೆಸಿದ ಉತ್ಖನನಗಳಿಂದ ದೊರಕುತ್ತದೆ. ಈ ಪ್ರದೇಶದಲ್ಲಿ ಪ್ರಾರಂಭಕಾಲದಿಂದಲೂ ಆದಿ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.

 

ಉತ್ತರ ಅಫ್ರಿಕದಲ್ಲಿ ರೂಢಿಯಲ್ಲಿದ್ದ ಪೂರ್ವಶಿಲಾಯುಗ ಸಂಸ್ಕಂತಿಗಳು ಈಜಿಪ್ಟಿನ ಮಾರ್ಗವಾಗಿ ಜೋರ್ಡನ್ ಪ್ರದೇಶವನ್ನು ಪ್ರವೇಶಿಸಿದ್ದವು. ಇಲ್ಲಿಯ ಅಲ್-ಉಬೇದಿಯ ಎಂಬಲ್ಲಿ ಆಸ್ಟ್ರಲೊ-ಪಿತಿಕಲ್ ವರ್ಗಕ್ಕೆ ಸೇರಿದ ಆದಿಮಾನವನ ದೇಹದ ಪಳೆಯುಳಿಕೆಗಳೂ ಆಗಿನ ಕಲ್ಲಿನಾಯುಧಗಳೂ ದೊರಕಿವೆ. ಜಾರ್ಡನಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮರಳ್ಗಾಡು ಪ್ರದೇಶದಲ್ಲಿ ಪೂರ್ವಶಿಲಾಯುಗದ ಬೇಟೆಗಾರರು ಅಲೆದಾಡುತ್ತಿದ್ದುದಕ್ಕೆ ಆಧಾರಗಳಿವೆ.

 


ಮಧ್ಯಪ್ರಾಚ್ಯದ ಪಶ್ಚಿಮ ಏಶಿಯಾದ ರಾಷ್ಟ್ರಗಳಲ್ಲಿ ಆಗಿನ ಮಧ್ಯ ಶಿಲಾಯುಗದ ಬೇಟೆಗಾರರು ಬದಲಾಗುತ್ತಿದ್ದ ಹವಮಾನ ಮತ್ತು ವಾಯುಗುಣಗಳಿಂದಾಗಿ ಅಲೆಮಾರಿ ಜೀವನ ಮತ್ತು ಆಹಾರಸಂಗ್ರಹದ ಹಂತದಿಂದ ಮುಂದುವರಿದು, ಒಂದೆಡೆಯಲ್ಲಿ ನೆಲೆ ನಿಂತು ಆಹಾರ ಉತ್ಪಾದಿಸುವ ಹಂತವನ್ನು ಕ್ರಮೇಣ ತಲುಪಿದರೆಂದು ಗ್ರಾಮೀಣ ಜೀವನವನ್ನು ರೂಢಿಸಿಕೊಂಡರೆಂದೂ ಈ ಶೋಧನೆಗಳಿಂದ ತಿಳಿದುಬರುತ್ತದೆ. ಗುಡಿಸಲು ಮಾದರಿಯ ಕಲ್ಲಿನ ರಕ್ಷಣಾ ಕೋಟೆಗಳನ್ನು ನಿರ್ಮಿಸಿಕೊಂಡು ಅದರಲ್ಲಿ ವಾಸಿಸುತಿದ್ದರು ಮತ್ತು ಆಹಾರ ಸಂರಕ್ಷಣೆಯನ್ನೂ ಸಹ ಮಾಡಿಕೊಳ್ಳುತಿದ್ದರು. ಮೊದಲಿಗೆ ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಪಾತ್ರೆಗಳನ್ನು ಬಳಸಿದ ಪುರಾವೆಗಳು ದೊರೆತಿವೆ. ಕಾಲಕ್ರಮೇಣ  ಗ್ರಾಮೀಣ ಜೀವನದಲ್ಲಿ ಹಲವು ಸುಧಾರಣೆಗಳಾದುವು. ಜೇಡಿಮಣ್ಣಿನಲ್ಲಿ ಮಾಡಿ ಸುಟ್ಟ ಮಡಕೆಗಳ ಉಪಯೋಗ ಪ್ರಾರಂಭವಾಯಿತು. ಕೃಷಿ ಚಟುವಟಿಕೆಗಳು ಕ್ರಿ.ಪೂ 9000 ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಲಾಗಿತ್ತು.

 

ಆದರೆ ಇತ್ತೀಚಿಗೆ ಈಶಾನ್ಯ ಜೋರ್ಡಾನ್‌ನ ಕಪ್ಪು ಮರುಭೂಮಿಯಲ್ಲಿ ಪುರಾತತ್ತ್ವಜ್ಞರು ಸಂಶೋಧನೆಗಾಗಿ ಉತ್ಖನನ ಮಾಡಿದಾಗ ದೊರೆತ ಬ್ರೆಡ್‌ನ (ರೊಟ್ಟಿ) ಪುರಾವೆ ಇದುವರೆವಿಗೂ ಬರೆದಿದ್ದ ಇತಿಹಾಸವನ್ನು ತಿದ್ದಬೇಕಾಗಿದೆ ಎನ್ನಬಹುದು. ಈ ಸಂಶೊಧನೆಯಲ್ಲಿ 14400 ವರ್ಷಗಳ ಹಿಂದೆ ಬೇಯಿಸಿದ ರೊಟ್ಟಿಯ ಸುಟ್ಟ ಅವಶೇಷಗಳನ್ನು ಕಂಡುಹಿಡಿಯಲಾಗಿದೆ, ಅಂದರೆ ಕೃಷಿಯ ಆಗಮನಕ್ಕೆ 4000 ವರ್ಷಗಳ ಹಿಂದೆ ಈ ಭಾಗದಲ್ಲಿ ಜನರು ರೊಟ್ಟಿಯನ್ನ ಬೇಯಿಸಿಕೊಂಡು ತಿನ್ನುತಿದ್ದರು ಎನ್ನುವುದು ವಿಶೇಷ.  ರೊಟ್ಟಿಯನ್ನು ಬೇಯಿಸಿಕೊಂಡು ತಿನ್ನುವ ಮಟ್ಟಿಗಿನ ಬುದ್ದಿಶಕ್ತಿ ಇರಬೇಕಾದರೆ, ಧಾನ್ಯಬೆಳೆಯುವ ಕಲೆಯೂ ಗೊತ್ತಿರಬೇಕಲ್ಲವೇ?

 


ಜೋರ್ಡಾನಿನ ಶುಬಾಯ್ಕಾ 1 ಎಂದು ಕರೆಯಲ್ಪಡುವ ನ್ಯಾಟುಫಿಯನ್ ಬೇಟೆಗಾರ-ಸಂಗ್ರಾಹಕ ಸೈಟ್‌ನಲ್ಲಿ ಎರಡು ಬೆಂಕಿಗೂಡುಗಳಲ್ಲಿ 24 (ಇಪ್ಪತ್ತನಾಲ್ಕು) ಪಿಜ್ಜಾ ಬ್ರೆಡ್ ಮಾದರಿಯ ರೊಟ್ಟಿ ಗಳು ದೊರೆತಿವೆ. ಕೇವಲ ಒಂದು ರೊಟ್ಟಿ ಸಿಕ್ಕಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು ಆದರೆ, 24 ರೊಟ್ಟಿಗಳು, ಅದನ್ನು ಸುಡುವ ಒಲೆ, ಹಿಟ್ಟನ್ನು ಮಾಡಲು ಉಪಯೋಗಿಸುವ ರುಬ್ಬುವ ಕಲ್ಲುಗಳು ಇತ್ಯಾದಿ ದೊರಕಿವೆ. ಅಲ್ಲಿ ದೊರೆತ ರೊಟ್ಟಿಯನ್ನು ಪರೀಕ್ಷೀಸಿದಾಗ ಗೋಧಿಯಂತಹ ಕಾಳುಗಳನ್ನು ಉಪಯೋಗಿಸಿ ಬೀಸುವ ಕಲ್ಲಿನಲ್ಲಿ ಹಿಟ್ಟನ್ನು ಮಾಡಲಾಗಿದೆ, ಅದಕ್ಕೆ ನೀರನ್ನು ಬೆರೆಸಿ, ಚಪಾತಿ ಮಾದರಿ ಹಿಟ್ಟಿನ ಉಂಡೆಗಳಂತೆ ಮಾಡಿ ಕೈಯಿಂದ ಅದನ್ನು ತಟ್ಟಿ ನಂತರ ಅದನ್ನು ತೆರೆದ ಬೆಂಕಿಯಲ್ಲಿ ಬೇಯಿಸಲಾಗಿದೆ.

 


ಸಾಮಾನ್ಯವಾಗಿ ಆಗಿನಕಾಲದಲ್ಲಿ, ಬೇಟೆಯಾಡಿ ಆಹಾರ ಸೇವಿಸುತಿದ್ದರಿಂದ ಏಕದಳ ಆಧಾರಿತ ಆಹಾರ ಪದಾರ್ಥಗಳನ್ನು ತಯಾರಿಸುವುದು ಕಷ್ಟ ಎಂದು ಆಗಿನ ಜನರಿಗೆ ತಿಳಿದಿತ್ತು ಎಂದು ಕಾಣುತ್ತದೆ. ಹೊಸ ಆಹಾರ, ರುಚಿ ಎಲ್ಲವನ್ನು ಮನಗಂಡು ಆಹಾರ ಪದ್ದತಿ ಬದಲಾಗಿರುವ ಸಂಭವವೂ ಇದೆ. ಜೋರ್ಡಾನಿನಲ್ಲಿ ದೊರೆತಿರುವ ಅವಶೇಷಗಳ ಪ್ರಕಾರ, ಅಥಿತಿಗಳು ಕುಳಿತುಕೊಳ್ಳುವ ಆಸನ, ಅಥಿತಿಗಳಿಗೆ ಆತಿಥ್ಯ ನೀಡಲು  ಈ ಬ್ರೆಡ್ ಅನ್ನು ತಯಾರಿಸುತಿದ್ದುದು ಇತ್ಯಾದಿಗಳನ್ನು ನೋಡಿದರೆ, ಬಹುಷಃ ಆ ಸಮಯದಲ್ಲಿಯೇ ಅಲ್ಲೊಂದು ನಾಗರೀಕತೆ ಬೆಳೆದಿರುವ ಸಂಭವವಿದೆ. ಬಹುಶಃ ಆಗಿನ ಕಾಲದ ರೊಟ್ಟಿತಯಾರಿಕೆಯು ನವಶಿಲಾಯುಗದ ಕೃಷಿ ಕ್ರಾಂತಿಗೆ ಕೊಡುಗೆ ನೀಡಿರಬಹುದು.  ಈ ಹಿಂದೆ, ಬ್ರೆಡ್ ಉತ್ಪಾದನೆಯ ಪುರಾವೆಗಳು ಟರ್ಕಿ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನವಶಿಲಾಯುಗದ ಕೊನೆಯ ಸ್ಥಳಗಳಲ್ಲಿ ಕಂಡುಬಂದಿವೆ. ಜೋರ್ಡಾನ್‌ನಲ್ಲಿ ಸುಟ್ಟ ಅವಶೇಷಗಳು ಬ್ರೆಡ್ ಉತ್ಪಾದನೆಯು ಕೃಷಿಗೆ ಮುಂಚಿತವಾಗಿರುವುದಕ್ಕೆ ಮೊದಲ ನೇರ ಸಾಕ್ಷಿಯಾಗಿದೆ.

 

ಜೋರ್ಡಾನಿನ ಈ ಸ್ಥಳದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಣೆ ಮಾಡಿದಾಗ, ಆಗಿನ ಸ್ಥಳೀಯರು ಸುಮಾರು 95 ವಿವಿಧ ಸಸ್ಯಗಳನ್ನು ಬಳಸಿರುವುದನ್ನು ಕಂಡು ಕೊಳ್ಳಲಾಗಿದೆ. ಹೆಚ್ಚಾಗಿ ಖಾದ್ಯ ಬೇರುಗಳು, ಚಿಗುರುಗಳು, ಬಾರ್ಲಿ, ಓಟ್ಸ್ ಮತ್ತು ಗೋಧಿಯನ್ನು ಸಹ ದೊರಕಿವೆ. ಆದಾಗ್ಯೂ, ಈ ಪ್ರಾಚೀನ ಜನರು ಉದ್ದೇಶಪೂರ್ವಕವಾಗಿ ಧಾನ್ಯಗಳನ್ನು ಬೆಳೆದಿದ್ದಾರೋ ಅಥವಾ ಸಂಗ್ರಹಿಸಿದ್ದರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಈ ರೊಟ್ಟಿಯ ಮಾಡುವ ವಿಧಾನವನ್ನು ಅವರು 14000 ವರ್ಷಗಳ ಹಿಂದೆಯೇ ಕಲಿತು ರೂಡಿಸಿಕೊಂಡಿದ್ದರೆ, ಕೃಷಿ ಚಟುವಟಿಕೆ ಖಂಡಿತವಾಗಿ ಅದಕ್ಕಿಂತ ಹಿಂದೆಯೇ ಇರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು. ಇಸ್ರೇಲ್ ನಲ್ಲಿ 23000 ವರ್ಷಗಳ ಹಿಂದೆಯೇ ಕೃಷಿ ಚಟುವಟಿಕೆ ಆರಂಭವಾಗಿತ್ತು ಎಂದು ಇನ್ನೊಂದು ಸಂಶೋಧನೆ ಹೇಳುತ್ತದೆ. ವಿಜ್ನಾನ ಮುಂದುವರೆದಂತೆ ಸಂಶೋಧನೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಚಾರಗಳು ಜಗತ್ತಿಗೆ ತಿಳಿಯುತ್ತಿವೆ. ಮುಂಬರುವ ಕಾಲದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಪ್ರಪಂಚಕ್ಕೆ ಸಿಕ್ಕರೂ ಸಿಗಬಹುದು.

ಸಾವಿರಾರು ವರ್ಷಗಳ ಹಿಂದೆ ಕಂಡು ಹಿಡಿದ ಈ ಪ್ರಕ್ರಿಯೆಯನ್ನು ನಾವು ಇಂದಿನ ಆಧುನಿಕ ಯುಗದಲ್ಲೂ ಅದೇ ರೀತಿ ಬಳಸುತಿದ್ದೇವೆ. ನಗರದಲ್ಲಿ ರೊಟ್ಟಿ ಮಾಡುವ ವಿಧಾನ ಬದಲಾಗಿರಬಹುದುಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಅಫ್ಘನಿಸ್ತಾನಪಾಕಿಸ್ತಾನಉತ್ತರ ಭಾರತದ ಹಳ್ಳಿಗಳ ಕಡೆ ಇನ್ನೂ ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


 

 


Click below headings