ಭಾನುವಾರ, ಡಿಸೆಂಬರ್ 3, 2023

ಜರ್ಮನಿಯ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

 ಜರ್ಮನಿಯ ಸುಂದರ ಪ್ರವಾಸಿ ತಾಣಗಳಾದ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

Photo Courtesy: Google
ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಜರ್ಮನಿಯ ಸುಂದರ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಫ್ರಾಂಕ್ ಫರ್ಟ್ ಗೆ ಭೇಟಿ ನೀಡಿದವರು ಒಂದು ದಿನ ಬಿಡುವು ಮಾಡಿಕೊಂಡು ಈ ಪ್ರದೇಶಗಳಿಗೆ ಹೋಗಿಬರುವುದು ಸಾಮಾನ್ಯ. ಫ್ರಾಂಕ್ ಫರ್ಟ್  ನಗರದಿಂದ  ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಅಷ್ಟೇ. ಒಮ್ಮೆ ನಮ್ಮ ಒಮಾನ್ ಕಂಪನಿಯ ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದೆ. ಪ್ರತಿ ಬಾರಿ ಜರ್ಮನಿಯ  ಟ್ರಿಪ್ ನಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ. ಫ್ರಾಂಕ್ ಫರ್ಟ್ ನಿಂದ ಒಂದು ದಿನದೊಳಗೆ ಪ್ರವಾಸಕ್ಕಾಗಿ ಹೋಗಿ ಬರುವ ಸ್ಥಳಗಳನ್ನು ಹುಡುಕುತಿದ್ದಾಗ ಕಂಡಿದ್ದೇ ಈ ಹೈಡೆಲ್ಬರ್ಗ್ ಮತ್ತು ರೀನ್ ವ್ಯಾಲಿ. ಈ ಸ್ಥಳಗಳ ಕುರಿತು ಮಾಹಿತಿ ಪಡೆದಿದ್ದ ನಾನು, ಇವುಗಳನ್ನು ನೋಡುವ ಸಲುವಾಗಿಯೇ ಎರಡು ದಿನ ಹೆಚ್ಚುವರಿಯಾಗಿ ತಂಗಿದ್ದೆ. ಫ್ರಾಂಕ್ ಫರ್ಟ್ ನ ರೈಲ್ವೇ ನಿಲ್ದಾಣದ ಬಳಿ ಬಹಳಷ್ಟು ಟೂರ್ ಆಪರೇಟರ್ ಗಳು ಇದ್ದಾರೆ, ಅವರ ಬಳಿ ಮಾತನಾಡಿ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಟೂರ್ ಗೆ  ಬುಕ್ ಮಾಡಿದ್ದೆ. ಮೊದಲ ದಿನ ಹೈಡೆಲ್ ಬರ್ಗ್ ಟೂರ್ ಎರಡನೇ ದಿನ ರೀನ್ ವ್ಯಾಲಿ.  ಒಂದು ಮಿನಿ ಬಸ್ ನಲ್ಲಿ ಸುಮಾರು ಹದಿನೈದು ಜನ  ವಿವಿಧ ದೇಶಗಳ ಪ್ರವಾಸಿಗರೊಟ್ಟಿಗೆ ಈ ಸ್ಥಳಗಳನ್ನು ನೋಡಿದೆ. ತುಂಬಾ ಸುಂದರವಾದ ಕಣ್ಮನ ಸೆಳೆಯುವ ದೃಶ್ಯಗಳು ಈ ಸ್ಥಳದಲ್ಲಿವೆ. 
Photo Courtesy: Google

ಹೈಡೆಲ್ಬರ್ಗ್ ಪ್ರದೇಶ ಜರ್ಮನಿಯ ಪುರಾತನವಾದ ಸ್ಥಳ. ನೈಋತ್ಯ ಜರ್ಮನಿಯ ನೆಕರ್ ನದಿಯ ಬದಿಯಲ್ಲಿದೆ ಈ ನಗರ.  ಈ ನಗರಕ್ಕೆ ರೊಮ್ಯಾಂಟಿಕ್ ನಗರ, ಸಾಹಿತ್ಯಕ ನಗರ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ, ನೂರಾರು ಪ್ರೇಮಿಗಳು ಸುಂದರ ಸಂಜೆಯನ್ನು ಇಲ್ಲಿ ಕಳೆಯಲು ಬಯಸುತ್ತಾರೆ. 1386 ರಲ್ಲಿ ಪ್ರಾರಂಭವಾದ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಹಾಗೂ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಇಲ್ಲಿದೆ. ಶೈಕ್ಷಣಿಕ ನಗರವಾದದ್ದರಿಂದ ಯುರೋಪಿನ ವಿವಿಧ ನಗರಗಳಿಂದ ಇಲ್ಲಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಇಂದಿಗೂ ಬರುತ್ತಾರೆ. 

Photo Courtesy: Google

ರಮಣೀಯ ಪ್ರದೇಶವಾದ ಈ ಕಣಿವೆ ಜಾಗದಲ್ಲಿ ಹರಿಯುವ ನೆಕ್ಟರ್ ನದಿಯ ಮೇಲೆ ನಿರ್ಮಿಸಿರುವ ಹಳೆಯ ಬ್ರಿಡ್ಜ್ ನೋಡಲು ತುಂಬಾ ಸುಂದರವಾಗಿದೆ. ನದಿ ದಂಡೆಯ ಎರಡು ಬದಿಯಿರುವ ನಗರ, ಕ್ಯಾಸೆಲ್, ಎರಡು ಕಡೆ ಬೆಟ್ಟಗಳನ್ನು ಮತ್ತು  ಈ ನದಿಯಲ್ಲಿ ಸಂಚರಿಸುವ ಬೋಟ್ ಗಳನ್ನು ನೋಡಬಹುದು. ಈ ಪ್ರದೇಶ ಒಮ್ಮೆಗೆ ನಮ್ಮನ್ನ ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಡ್ಜ್ ನಿಂದ ಇಳಿದು ನಗರದ ಪುರಾತನ ಹಾಗೂ ಹೃದಯಭಾಗಕ್ಕೆ ಬೇಟಿ ನೀಡಬಹುದು. ಅಲ್ಲಿ ಕ್ಯಾಸೆಲ್, ಹಳೆಯ ಚರ್ಚ್, ನೂರಾರು ವರ್ಷಗಳ ಪುರಾತನ ಕಟ್ಟಡಗಳು, ಸುಂದರವಾದ ಬೀದಿಗಳು, ಮರದ ಚೌಕಟ್ಟಿನ ಮನೆಗಳು ಹೀಗೆ  ಎಲ್ಲವನ್ನು ನೋಡಬಹುದು. 

Photo Courtesy: Google

ಈ ನಗರದ ಕಾಲು ಭಾಗ ಜನಸಂಖ್ಯೆ ವಿದ್ಯಾರ್ಥಿಗಳಿಂದ ತುಂಬಿದೆ. ವಿಶ್ವದ ಅತಿದೊಡ್ಡ ವೈನ್ ಸಂಗ್ರಹಿಸುವ ಬ್ಯಾರೆಲ್ ಒಂದು ಇಲ್ಲಿನ ಸಂಗ್ರಹಾಲಯದಲ್ಲಿದ್ದು, 130 ಓಕ್ ಮರಗಳಿಂದ ಇದನ್ನು ತಯಾರಿಸಲಾಗಿದೆ ನಿಖರವಾಗಿ 221,726 ಲೀಟರ್ ವೈನ್ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಟ್ಲರ್ ನ ನಾಜಿ ಪಕ್ಷದ ಕಾರ್ಯ ಚಟುವಟಿಕೆ ಈ ಭಾಗದಲ್ಲಿ ಹೆಚ್ಚಾಗಿತ್ತು ಎಂದು ಹೇಳುತ್ತಾರೆ, ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ಜರ್ಮನಿಯ ವಿವಿಧ ನಗರಗಳು ಬಾಂಬ್ ದಾಳಿಯಿಂದ ದ್ವಂಸಗೊಂಡರೂ ಇಲ್ಲಿ ಹೆಚ್ಚಿನ ಅನಾಹುತ ಆಗಿರಲಿಲ್ಲ, ಇದು ಕಣಿವೆ ಪ್ರದೇಶವಾಗಿದ್ದು, ಇಲ್ಲಿಂದ ಹೊರ ಹೋಗುವುದು ಮತ್ತು ಬರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳುತ್ತಾರೆ. ಈ ನಗರ ಕೇವಲ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ನಗರ ವಾಗಿರದೆ,  ಕೈಗಾರಿಕ ನಗರವಾಗಿಯೂ ಬೆಳೆದಿದೆ. ಅಂತರಾಷ್ಟ್ರೀಯ ಕಂಪನಿಗಳು ಇಲ್ಲಿವೆ. ಈ ಸುಂದರವಾದ ನಗರದ ವಿವಿಧ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡು ಸಂಜೆ ವೇಳೆ ವಾಪಾಸು ಫ್ರಾಂಕ್ ಫರ್ಟ್ ಗೆ ಮರಳಿದೆವು.

Photo Courtesy: Google

ಮರುದಿನ ಮತ್ತೊಂದು ಪ್ರವಾಸಿತಾಣ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನಪಡೆದಿರುವ ವಿಶ್ವಪ್ರಸಿದ್ದ ರೀನ್ ಕಣಿವೆಗೆ ಭೇಟಿ ನೀಡಿದ್ದೆವು. ಈ ಸ್ಥಳವಂತೂ ತುಂಬಾ ಸುಂದರ. ಇಲ್ಲಿ ಬೆಟ್ಟಗಳ ನಡುವೆ ಪ್ರಶಾಂತವಾಗಿ ರೀನ್ ನದಿ ಹರಿಯುತ್ತದೆ. ರೀನ್ ಅಥವ ರೈನ್ ನದಿ ಯುರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಆಗ್ನೇಯ ಸ್ವಿಜರ್ ಲ್ಯಾಂಡ್ ನ ಆಲ್ಪ್ಸ್‌ನಲ್ಲಿರುವ ಗ್ರಾಬುಂಡೆನ್‌ನ ಸ್ವಿಸ್ ಕ್ಯಾಂಟನ್‌ನಲ್ಲಿ ನದಿಯು ಹುಟ್ಟುತ್ತದೆ.  ಅದರ ನಂತರ ಅದು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ ದೇಶಗಳಲ್ಲಿ ಹರಿಯುತ್ತದೆ. ತನ್ನ ಹರಿವಿನ ಗುಂಟ ಹಲವಾರು ನದಿಗಳು ಇದರೊಳಗೆ ಸೇರಿಕೊಳ್ಳುತ್ತವೆ, ತನ್ನ ವ್ಯಾಪ್ತಿ ಮತ್ತು ಪಾತ್ರವು ದೊಡ್ಡದಾಗುತ್ತ ಹೋಗುತ್ತದೆ. ಸಮುದ್ರ ಮಾರ್ಗದ ಮುಖಾಂತರ ಸರಕು ಸರಂಜಾಮುಗಳನ್ನು ಹೊತ್ತ ಹಡಗು ಗಳು ಸಂಚಾರ ಮಾಡುವುದನ್ನು ನಾವು ಕಂಡಿದ್ದೇವೆ, ಆದರೆ ಈ ರೀನ್ ನದಿಯಲ್ಲಿ ನೂರಾರು ಮೀಟರ್ ಉದ್ದದ ಹಡಗು ಗಳಲ್ಲಿ ದೊಡ್ಡ ಪ್ರಮಾಣದ ಕಂಟೈನರ್ ಗಳು, ಕಲ್ಲಿದ್ದಲು, ಸ್ಟೀಲ್ ಮುಂತಾದ  ಸರಕು ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಈ ನದಿಯಲ್ಲಿ ಸರಕು ಸಾಗಾಣಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಯುರೋಪಿನ ವಾಣಿಜ್ಯ ಚಟುವಟಿಕೆಗಳಿಗೆ ಈ ನದಿ ಪ್ರಮುಖ ಪಾತ್ರವಹಿಸುತ್ತದೆ. ವಿವಿಧ ನಗರಗಳಲ್ಲಿ ದೊಡ್ಡ ದೊಡ್ಡ ಹಡಗುಗಳು ಈ ನದಿಯಲ್ಲಿ ಸಂಚರಿಸುತ್ತವೆ. 

Photo Courtesy: Google

ಈ ಕಣಿವೆ ಪ್ರದೇಶದಲ್ಲಿ ನೂರಾರು ದ್ರಾಕ್ಷಿತೋಟಗಳು ಇವೆ,  ಸುಂದರವಾದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಇಲ್ಲಿವೆ. ನೂರಾರು ವರ್ಷಗಳ ಹಿಂದಿನ ಕೋಟೆ ಮತ್ತು ಕ್ಯಾಸೆಲ್ ಗಳನ್ನು ಇಲ್ಲಿ ನೋಡಬಹುದು. ವೈನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳ, ಸ್ಥಳೀಯವಾಗಿ ತಯಾರಾಗುವ ವಿವಿಧ ವೈನ್‌ಗಳ ರುಚಿ ನೋಡಬಹುದು. ಈ ರೀನ್ ನದಿಯಲ್ಲಿ ಪ್ರವಾಸಿಗರ ದೋಣಿ ವಿಹಾರಕ್ಕಾಗಿಯೇ ಸಿದ್ದಪಡಿಸಿದ ಆಧುನಿಕ ಮತ್ತು ಸುಸಜ್ಜಿತ ದೋಣಿಗಳು ಇಲ್ಲಿವೆ.  ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ದೋಣಿಯಲ್ಲಿ ಸುತ್ತಾಡಿ ಕಣಿವೆಯ ನಯನ ಮನೋಹರ ದೃಶ್ಯಗಳನ್ನು ಸವಿಯಬಹುದು. ನಮ್ಮ ಪ್ರವಾಸಿ ಗೈಡ್, ಇಲ್ಲಿನ ಹಲವಾರು ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮ್ಮನ್ನು ಸುತ್ತಾಡಿಸಿದ. ಎರಡು ದಿನದಲ್ಲಿ, ಎಷ್ಟು ಸಾಧ್ಯವಾಗಬಹುದೋ ಅಷ್ಟು ಸ್ಥಳಗಳನ್ನ ನೋಡಿ, ಸುಂದರವಾದ ನೆನಪುಗಳನ್ನು ಹೊತ್ತು  ಜರ್ಮನಿಯಿಂದ ಮರಳಿದೆ.

ಬರಹ:- ಪಿ.ಎಸ್.ರಂಗನಾಥ,

ಮಸ್ಕತ್ - ಒಮಾನ್ ರಾಷ್ಟ್ರ.

https://epaper.udayavani.com/3796056/Desi-Swara/02-Dec-2023#page/1/1

#oman #germany # hiderlberg #rheinvalley #kannada # bangalore #muscat #karnataka






ಭಾನುವಾರ, ನವೆಂಬರ್ 5, 2023

ಭಕ್ತಿಪರವಶಗೊಳಿಸಿದ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೃತ್ಯರೂಪಕ

 ಕಲೆ ಮತ್ತು ಸಾಹಿತ್ಯಕ್ಕೆ ಅತಿ ಹೆಚ್ಚಿನ ಮನ್ನಣೆಯನ್ನು ನಮ್ಮ ಕನ್ನಡ ನಾಡು  ಹಿಂದಿನಿಂದಲೂ ನೀಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿಯ ಪ್ರೋತ್ಸಾಹ ಬೆಂಬಲ ಇಂದಿಗೂ ಮುಂದುವರೆದಿರುವುದು ಈ ನಾಡಿನ ವಿಶೇಷ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ, ಕಲಾ ಪೋಷಕರು ಮತ್ತು ಕಲಾಸಕ್ತರ ಸಂಖ್ಯೆಯೂ ದ್ವಿಗುಣಗೊಳ್ಳುತಿದೆ ಜತೆಗೆ ಶಾಸ್ತ್ರೀಯ ನೃತ್ಯ ಮತ್ತು ಸಂಗೀತವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿರುವುದು ಗಮನಾರ್ಹ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರು, ಮೈಸೂರು ನಗರ ಸೇರಿದಂತೆ ರಾಜ್ಯದ ಒಂದಲ್ಲ ಒಂದು ಕಡೆ ಕಲೆ ಮತ್ತು ಸಾಹಿತ್ಯಕ್ಕೆ ಸಂಭಂಧಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿರುವುದನ್ನ ನಾವು ಕಾಣಬಹುದು.

        ಇತ್ತೀಚೆಗೆ ಬೆಂಗಳೂರಿನ ಜಯನಗರದ ಶಿವರಾತ್ರೀಶ್ವರ ಜೆ ಎಸ್ ಎಸ್ ಸಭಾಂಗಣದಲ್ಲಿ ನಡೆದ  ಶ್ರೀಮತಿ ಸುಮಾ ರಾಜೇಶ್ ರವರ  ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶಾಸ್ತ್ರೀಯ ನೃತ್ಯರೂಪಕವನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿ ಬಂದಿತ್ತು. ಪರಿಚಿತರ ಆಹ್ವಾನದ ಕರೆಗೆ ಓಗೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು.   ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ನೃತ್ಯ ರೂಪಕವನ್ನಾಗಿ ಸಂಯೋಜಿಸಿ, ಅದಕ್ಕೆ ಸೂಕ್ತವಾದ ಸಂಗೀತ ನೀಡಿ ಮತ್ತು ಸಾಹಿತ್ಯವನ್ನು ರಚಿಸಿ, ವೇದಿಕೆ ಮೇಲೆ ಪ್ರಸ್ತುತ ಪಡಿಸಿದ ರೀತಿ ಮಾತ್ರ ಅದ್ಭುತ ಮತ್ತು ಅನನ್ಯ. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ದೃಶ್ಯಕಾವ್ಯವನ್ನ ನೋಡಲು ಸಭಾಂಗಣವು ಕಿಕ್ಕಿರಿದು ತುಂಬಿತ್ತು. ಕಳೆದ ಬಾರಿ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿಯೂ ಇದೇ ರೀತಿ ಜನ ಕಿಕ್ಕಿರಿದು ಸೇರಿದ್ದರು. ಇದನ್ನೆಲ್ಲ ನೋಡಿದಾಗ ಕಲೆಗೆ ನಮ್ಮ ಕರುನಾಡಿನ ಜನ ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹ ಕಂಡು ಬಹಳ ಖುಷಿಯಾಗುತ್ತಿದೆ.

            ಈ ನೃತ್ಯ ರೂಪಕದಲ್ಲಿ ನೃತ್ಯಶಾಲೆಯ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿಭಿನ್ನ ಪಾತ್ರಧಾರಿಗಳಿದ್ದರು, ಇವರೆಲ್ಲರೂ ಪ್ರತಿಯೊಂದು ದೃಶ್ಯವನ್ನು ಪ್ರಸ್ತುತ ಪಡಿಸಿದ ರೀತಿ ಮಾತ್ರ ಶ್ಲಾಘನೀಯ. ಪಾತ್ರಧಾರಿಗಳು ತಾವು ಧರಿಸಿದ ವೇಷಭೂಷಣಗಳ ಜತೆಗೆ ಸನ್ನಿವೇಶಕ್ಕೆ ತಕ್ಕಂತೆ ಮುಖದ ಭಾವನೆಗಳನ್ನು ವ್ಯಕ್ತಪಡಿಸುತ್ತ ನೃತ್ಯ ಮಾಡುವುದು ಒಂದು ಸವಾಲಿನ ಕೆಲಸ. ಆದರೆ ನೃತ್ಯಶಾಲೆಯ ವಿಧ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸಿ ರೂಪಕವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಇವರ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಪ್ರತಿ ದೃಶ್ಯಕ್ಕೆ ಚಪ್ಪಾಳೆ ಯೊಡೆದು ವಿದ್ಯಾರ್ಥಿಗಳನ್ನ ಹುರಿದುಂಬಿಸುತಿದ್ದದು ಕಂಡುಬಂತು. ಜನರ ಚಪ್ಪಾಳೆ ಮತ್ತು ಮೆಚ್ಚುಗೆಯೇ ಕಲಾವಿದರಿಗೆ ಬಹುದೊಡ್ಡ ಪಾರಿತೋಷಕವೆನ್ನಬಹುದು. ಇಲ್ಲದೆ ಇದ್ದರೆ ಕಾರ್ಯಕ್ರಮ ನೀರಸ.

        ಪಾತ್ರಗಳಿಗೆ ಪಾತ್ರಧಾರಿಯ ಆಯ್ಕೆಯೂ ತುಂಬಾ ಚೆನ್ನಾಗಿಯೇ ನಡೆದಿತ್ತು.  ಶ್ರೀನಿವಾಸ, ಪದ್ಮಾವತಿ, ಈಶ್ವರ, ಪಾರ್ವತಿ, ಭೃಗು ಮಹರ್ಷಿ, ಆಕಾಶರಾಜ, ಧರಣಿದೇವಿ ಹೀಗೆ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ನ್ಯಾಯ ಒದಗಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕೆಲೆವೆಡೆ ಚಿಕ್ಕ ಅಚಾತುರ್ಯಗಳು ನಡೆದವು ಆದರೂ, ಆ ಕಲಾವಿದರು ಅದನ್ನು ಸಂಭಾಳಿಸಿದ ರೀತಿ ಮಾತ್ರ ಅದ್ಭುತ.  ವಿದೂಷಿ ಶ್ರೀಮತಿ ಸುಮಾ ರಾಜೇಶ್ ಅವರು, ವಿಧ್ಯಾರ್ಥಿಗಳಿಗೆ ವೇದಿಕೆಯ ನಡಾವಳಿಗಳ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದ್ದಾರೆ ಎಂದೇ ಹೇಳಬಹುದು.

        ಈ ಸುಂದರವಾದ ನೃತ್ಯಕ್ಕೆ ಕೊಳಲು, ತಂಬೂರ, ತಬಲ, ವೀಣೆ ಇತ್ಯಾದಿ ವಾದ್ಯಗಳನ್ನು ಸುಮಧುರವಾಗಿ ನುಡಿಸಿ ನೋಡುಗರ ಕಿವಿಯನ್ನು ಇಂಪಾಗಿಸಿ ಒಟ್ಟಾರೆ ನೃತ್ಯರೂಪಕವನ್ನು ಮನಸೂರೆಗೊಳಿಸಿದ ವಾದ್ಯತಂಡ ವೀಕ್ಷರನ್ನು ಭಕ್ತಿಪರವಶರಾಗುವಂತೆ ಮಾಡಿತ್ತು.  ಹಾಗೆಯೇ ಈ ನೃತ್ಯಕ್ಕೆ ಪೂರಕವಾಗಿ ಸಾಥ್ ನೀಡಿದ್ದು ಬೆಳಕು ಮತ್ತು ಧ್ವನಿ ನೀಡಿದ ತಂತ್ರಜ್ನರು. ಅವರ ಕೈಚಳಕದಿಂದ ಪ್ರತಿ ದೃಶ್ಯಕ್ಕೂ ಬಣ್ಣ ಬಣ್ಣದ ಬೆಳಕನ್ನ ನೀಡಿ, ನೃತ್ಯ ರೂಪಕವನ್ನು ವರ್ಣರಂಜಿತವನ್ನಾಗಿ ಮಾಡಿದ ಕೀರ್ತಿ ತಂತ್ರಜ್ನರಿಗೆ ಸಲ್ಲುತ್ತದೆ. 

        ಕಾರ್ಯಕ್ರಮದ ಹೈಲೈಟ್ ಏನೇಂದರೆ ಶ್ರೀನಿವಾಸ ಕಲ್ಯಾಣದ ಕಟ್ಟ ಕಡೆಯ ದೃಶ್ಯಾವಳಿ, ಪಾತ್ರಧಾರಿಗಳೆಲ್ಲರೂ ವೇದಿಕೆಯ ಮೇಲೆ ಒಟ್ಟಾಗಿ ನಿಂತು ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವ ದೃಶ್ಯ ತುಂಬಾ ಸುಂದರವಾಗಿ ಮತ್ತು ಮನತಟ್ಟುವಂತೆ ಮೂಡಿಬಂತು. ಭಕ್ತಿಭಾವದಲ್ಲಿ ಮಿಂದೆದ್ದ ವೀಕ್ಷಕರು ಸತತವಾಗಿ ಚಪ್ಪಾಳೆ ತಟ್ಟುವುದರ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದಲ್ಲದೆ, ಬಹುತೇಕರು ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷವಾಗಿತ್ತು. 

        ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ನಂತಹ ಕಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು  ಉತ್ತಮ ನೃತ್ಯಗಾರ್ತಿಯರನ್ನಾಗಿ ಮಾಡುತ್ತಿರುವ ಕೆಲಸ ಅಭಿನಂದನೀಯ. ಇದೇ ರೀತಿಯ ಕೆಲಸವನ್ನು ಶಾಸ್ತ್ರೀಯ ನೃತ್ಯ ಕಲಿಸುತ್ತಿರುವ ಎಲ್ಲಾ ನೃತ್ಯಶಾಲೆಗಳು ಮಾಡುತ್ತ ಬಂದರೆ, ಇನ್ನು ಹಲವಾರು ಶತಮಾನಗಳವರೆಗೆ ನಮ್ಮ ಶಾಸ್ತ್ರೀಯ ನೃತ್ಯ ಪರಂಪರೆ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


ಬುಧವಾರ, ನವೆಂಬರ್ 1, 2023

ನಾ ಕಂಡ ಐತಿಹಾಸಿಕ ಜರ್ಮನಿಯ ಡ್ರೆಸ್ಡೆನ್ ನಗರ

ನನ್ನ ಮೊದಲ ಯುರೋಪ್ ಪ್ರವಾಸ ಪ್ರಾರಂಭವಾಗಿದ್ದು 2014 ರಲ್ಲಿ, ಅಲ್ಲಿಂದ ಇಲ್ಲಿವರೆಗೂ ಮೂರು ಬಾರಿ ಜರ್ಮನಿ, ಫ್ರಾನ್ಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಇದಕ್ಕೂ ಮೊದಲು ಮಧ್ಯಪ್ರಾಚ್ಯರಾಷ್ಟಗಳನ್ನು ಹೊರತು ಪಡಿಸಿ ಕೆನಡಾ, ತೈವಾನ್, ಚೈನಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಹೆಚ್ಚಾಗಿ ನನ್ನನ್ನ ಆಕರ್ಷಿಸಿದ್ದು ಯುರೋಪ್ ರಾಷ್ಟಗಳು. ಯಾಕೆಂದರೆ ಅಲ್ಲಿನ ಐತಿಹಾಸಿಕ ನಗರಗಳು, ಅಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನಗಳು, ಈ ಹಿಂದೆ ನಡೆದಿದ್ದ ಯುದ್ಧಗಳು, ಶತಮಾನಗಳ ಹಿಂದೆ ನಡೆದ ಕೈಗಾರಿಕಾ ಕ್ರಾಂತಿಯ ಕುರುಹುಗಳು, ಆ ನಗರಗಳಲ್ಲಿರುವ ಪಾರಂಪಾರಿಕ ಕಟ್ಟಡಗಳು ಅದರ ಹಿಂದಿರುವ  ಇತಿಹಾಸದ ಹಿನ್ನೆಲೆ, ಹೀಗೆ ಎಲ್ಲವನ್ನು ಅರಿಯುವ ಒಂದು ಕುತೂಹಲ. ಈ ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ಜರ್ಮನಿಯ ಹಲವು ನಗರಗಳ ಮೇಲೆ ಹೆಚ್ಚಿನ ಬಾಂಬ್ ದಾಳಿ ನಡೆಸಿದ್ದರು. ಅದರಲ್ಲಿ ಪ್ರಮುಖವಾದ ಒಂದು ನಗರ ಈ ಡ್ರೆಸ್ಡೆನ್ ನಗರ, ಈ ಹಿಂದೆ  ಜರ್ಮನಿ ರಾಷ್ಟ್ರ ಏಕೀಕರಣದ ಮುಂಚೆ ಪೂರ್ವ ಜರ್ಮನಿಯ ಭಾಗವಾಗಿತ್ತು. ಈ ಕಾರಣದಿಂದ ಒಮ್ಮೆ ಪೂರ್ವ ಜರ್ಮನಿಯ ಸಾಕ್ಸೋನಿ ರಾಜ್ಯದ ರಾಜಧಾನಿ ಡ್ರೆಸ್ಡೆನ್  ಪ್ರವಾಸ ಕೈಗೊಂಡಿದ್ದೆ. ಎಲ್ಬೆ ನದಿಯ ದಂಡೆಯ ಮೇಲೆ ಈ ನಗರ ಹರಡಿಕೊಂಡಿದೆ, ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ಜೆಕ್ ಗಣರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶವು ಸಾಕ್ಸೋನ್ ಪ್ರಾಂತ್ಯದ ಆಡಳಿತಗಾರರ ಅಧಿಕಾರ ಕೇಂದ್ರವಾಗಿತ್ತು. ಯುರೋಪಿನ ನಗರಗಳಲ್ಲಿ ಸುಂದರವಾದ ಒಂದು ಪಟ್ಟಣ ಇದು. ಸಾಕ್ಸೋನ್ ಪ್ರಾಂತ್ಯದ ಆಡಳಿತಗಾರರು ನದಿ ತೀರದಲ್ಲಿ ಅರಮನೆಗಳು ಮತ್ತು ಗಗನ ಚುಂಬಿ ಚರ್ಚು ಕಟ್ಟಡಗಳನ್ನು ನಿರ್ಮಿಸುವುದರತ್ತ ತಮ್ಮ ಹೆಚ್ಚಿನ ಗಮನವನ್ನು ಹರಿಸಿದ್ದರು. ಇವರ ಕಾಲದಲ್ಲಿ ಈ ಪ್ರಾಂತ್ಯ ಸುಂದರವಾದ ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು  ಪ್ರಾಚೀನ ವಸ್ತುಗಳ ಸಂಗ್ರಹಗಳ ಬೀಡಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ

2ನೇ ಪ್ರಪಂಚ ಯುದ್ದದ ದಾಳಿಯಿಂದ ಅಪಾರವಾದ ಹಾನಿಗೊಳಗಾದರೂ, ದೂಳಿನಿಂದ ಎದ್ದು ನಿಂತ ಜರ್ಮನಿಯ ಡ್ರೆಸ್ಡೆನ್ ನಗರ

ಎರಡನೇ ಪ್ರಪಂಚ ಯುದ್ದದ ವೇಳೆ ಜರ್ಮನಿಯ ಬಹುತೇಕ ನಗರಗಳು ತೀವ್ರವಾದ ಬಾಂಬ್ ದಾಳಿಗೆ ಒಳಗಾಗಿದ್ದವು. ಡ್ರೆಸ್ಡೆನ್ ನಗರ ಒಂದರ ಮೇಲೆಯೇ ಸುಮಾರು 800 RAF ಬ್ರಿಟಿಷ್ ವಿಮಾನಗಳು 1800 ಟನ್‌ಗಳಿಗಿಂತ ಹೆಚ್ಚು ಬಾಂಬ್‌ಗಳನ್ನು ಎಸೆದಿದ್ದವು ನಂತರದ ದಿನಗಳಲ್ಲಿ 520 ಕ್ಕೂ ಹೆಚ್ಚು USAAF ಬಾಂಬರ್‌ಗಳು ವಿವಿಧ ಪ್ರದೇಶಗಳಲ್ಲಿ ಬಾಂಬ್ ದಾಳಿ ಮಾಡಿದ್ದರು. ಇಂತಹ ಭಯಂಕರ ದಾಳಿಯಲ್ಲಿ ಅಂದಾಜು 25 ಸಾವಿರ ಜನರು ಅಸುನೀಗಿದ್ದಲ್ಲದೆ ಹಲವಾರು ಪಾರಂಪಾರಿಕ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿದ್ದವು. ಹಿಟ್ಲರ್ ಸಾವಿನವರೆಗೂ ಜರ್ಮನಿಯ ವಿವಿಧ ಪ್ರದೇಶಗಳ ಮೇಲೆ ಬ್ರಿಟೀಷ್ ಮಿತ್ರಪಡೆಗಳಿಂದ ತೀವ್ರವಾದ ದಾಳಿ ನಡೆದಿತ್ತು. ಈ ದಾಳಿಯಿಂದ ಹಾನಿಗೊಳಗಾಗಿದ್ದ ಕಟ್ಟಡಗಳು ದಶಕಗಳ ಕಾಲ ಹಾಗೆಯೇ ಉಳಿದಿದ್ದವು. ಯುದ್ದದ ನಂತರ ಜರ್ಮನಿ ರಾಷ್ಟ್ರ ಪೂರ್ವ ಮತ್ತು ಪಶ್ಚಿಮ ಜರ್ಮನಿ ಎಂದು ವಿಭಜನೆಯಾಯಿತು.  ಹಿಟ್ಲರ್ ಸಾವಿನ ನಂತರ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ಈ ಮೂರು ಮಿತ್ರರಾಷ್ಟ್ರಗಳ ಸಹಯೋಗದಲ್ಲಿ 12 ರಾಜ್ಯಗಳಿರುವ ಪಶ್ಚಿಮ ಜರ್ಮನಿ  ಅಥವ Federal Republic of Germany (FRG) ಎನ್ನುವ ರಾಷ್ಟ್ರವನ್ನಾಗಿ 23 May 1949 ರಲ್ಲಿ ಸ್ಥಾಪಿಸಿದ್ದರು. ಇತ್ತ ಪೂರ್ವ ಜರ್ಮನಿಯಲ್ಲಿ  ಕಮ್ಯುನಿಸ್ಟ್ ಪರ ಒಲವಿದ್ದ ಸ್ಥಳೀಯ ನಾಯಕರ ಸಹಾಯದಿಂದ ಸೋವಿಯತ್ ರಷ್ಯಾದ ಪಡೆಗಳು ಪೂರ್ವದ ರಾಜ್ಯಗಳನ್ನ ನಿಯಂತ್ರಣದಲ್ಲಿಟ್ಟುಕೊಂಡು ಪೂರ್ವ ಜರ್ಮನಿಯೆನ್ನುವ ಇನ್ನೊಂದು ರಾಷ್ಟವನ್ನು 7 October 1949ರಲ್ಲಿ ಕಟ್ಟಿದ್ದರು.  ಈ ವಿಭಜನೆಯ ನಂತರ ಪಶ್ಚಿಮ ಜರ್ಮನಿ ಆಗಾಧವಾದ ಬೆಳವಣಿಗೆಯನ್ನು ಕಂಡರೆ, ಕಮ್ಯುನಿಸ್ಟ್ ಆಡಳಿತವಿದ್ದ ಪೂರ್ವ ಜರ್ಮನಿ, ಅಭಿವೃದ್ದಿಯಲ್ಲಿ ಹಿಂದುಳಿದಿತ್ತು. ಪೂರ್ವ ಜರ್ಮನಿಯ ಸರ್ಕಾರ ದಾಳಿಗೊಳಗಾಗಿದ್ದ ನಗರಗಳನ್ನು ಪುನರ್ ನಿರ್ಮಾಣಮಾಡಲು ಆಮೆಗತಿಯಲ್ಲಿ ಸಾಗುತಿತ್ತು. ಹಣಕಾಸಿನ ಕೊರತೆ, ನಿರುದ್ಯೋಗ ಸಮಸ್ಯೆ ಆ ಸರ್ಕಾರವನ್ನು ಕಾಡುತಿತ್ತು. ಬದಲಾಗಿ ಕಮ್ಯುನಿಸ್ಟ್ ಸರ್ಕಾರದ ನೀತಿಗಳು ಪೂರ್ವ ಜರ್ಮನಿಯ ಅಭಿವೃದ್ದಿಗೆ ಅಡ್ಡಗಾಲು ಹಾಕಿತ್ತು.  ಕಾಲಕ್ರಮೇಣ ಪೂರ್ವ ಜರ್ಮನಿಯ ಬಹುತೇಕ ಜನರು ಪಶ್ಚಿಮಕ್ಕೆ ವಲಸೆ ಹೋಗಲು ಶುರು ಮಾಡಿದರು. ಈ ವಲಸೆ ದಿನೇ ದಿನೇ ಹೆಚ್ಚುತಿತ್ತು.  ಕ್ರಮೇಣ ಪೂರ್ವ ಜರ್ಮನಿಯ ಜನರು ಏಕೀಕರಣದತ್ತ ಒಲವು ತೋರಿದರು. ಬಹಳಷ್ಟು ಕಡೆ ಪ್ರತಿಭಟನೆಗಳು ನಡೆದವು, ಈ ಬಗ್ಗೆ ನ್ಯಾಟೋ ಮತ್ತು ಸೋವಿಯಟ್ ಒಕ್ಕೂಟದ ನಡೆದ ಹಲವಾರು ಮಾತುಕತೆಗಳು ವಿಫಲಕಂಡವು. ಸೋವಿಯಟ್ ಒಕ್ಕೂಟ ಯಾವಾಗ ಕುಸಿತ ಕಾಣಲು ಪ್ರಾರಂಭಿಸಿತೋ ಆಗ ಮತ್ತೊಮ್ಮೆ ಮಾತುಕತೆಗಳು ಶುರುವಾಗಿ ಕೊನೆಗೆ ವಿಭಜಿತ ಜರ್ಮನಿಯು 3 October 1990ರಂದು ಪುನರ್ ಏಕೀಕರಣಗೊಂಡಿತು.  

ಈ ನಲವತ್ತು ವರ್ಷಗಳ ಅವಧಿಯಲ್ಲಿ ಪೂರ್ವ ಜರ್ಮನಿ ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿತ್ತು. ಆ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಪಶ್ಚಿಮ ಜರ್ಮನಿಯ ಜನರು ಹೆಚ್ಚಿನ ತೆರಿಗೆಯನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತಂದು ಆ ಆದಾಯವನ್ನೆಲ್ಲ ಪೂರ್ವ ಜರ್ಮನಿಯ ಪುನರ್ ನಿರ್ಮಾಣಕ್ಕೆ ವಿನಿಯೋಗಿಸಿದರು. ತಮ್ಮದೇ ಜರ್ಮನ್ನರ ಅಭಿವೃದ್ದಿಗಾಗಿ ಆ ಜನರು ಯಾವುದೇ ಅಡ್ಡಿ ಆಂತಂಕ ವ್ಯಕ್ತಪಡಿಸದೆ ಸಂಪೂರ್ಣ ಸಹಕಾರ ನೀಡಿ ದೇಶದ ಪೂರ್ವಭಾಗವನ್ನು ಪುನರ್ ನಿರ್ಮಾಣ ಮಾಡಲು ಕೈಜೋಡಿಸಿದ್ದರು. ಯಾವಾಗ ಪಶ್ಚಿಮ ಜರ್ಮನಿಯ ಜನರ ತೆರಿಗೆ ಹಣ ಇದಕ್ಕೆ ವಿನಿಯೋಗವಾಯಿತೋ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಜರ್ಮನಿಯ ಆ ಗತ ವೈಭವವನ್ನು ಮರಳಿ ಬರುವಂತೆ ಮಾಡಲಾಯಿತು. ನಮ್ಮ ಪ್ರವಾಸಿ ಗೈಡ್, ಬಾಂಬ್ ದಾಳಿಯಿಂದ ಹಾನಿಗೊಳಗಾಗಿದ್ದ ಆ ನಗರದ ಹಳೇ ಫೋಟೋ ಗಳನ್ನು ತೋರಿಸಿ ನಂತರ, ಮತ್ತೆ ಪುನರ್ ನಿರ್ಮಾಣ ಗೊಂಡ ಪಾರಂಪಾರಿಕ ಕಟ್ಟಡಗಳನ್ನು ತೋರಿಸುತಿದ್ದ, ನಮಗೆ ಬಹಳ ಆಶ್ಚರ್ಯವಾಗುತಿತ್ತು. ಜರ್ಮನ್ನರು ತುಂಬಾ ಆಸ್ಥೆಯಿಂದ ತಮ್ಮ ನಗರಗಳನ್ನು ಮತ್ತೆ ಕಟ್ಟಿದ್ದರು. ಬಹಳಷ್ಟು ವಿವರಣೆ ನೀಡುತ್ತಾ ನಮ್ಮನ್ನ ಡ್ರೆಸ್ಡೆನ್ ನಗರದ ಪ್ರಮುಖ ಸ್ಥಳಗಳಿಗೆ ಕರೆದೋಯ್ದಿದ್ದ. 

ಈ ನಗರದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ. ಅವುಗಳಲ್ಲಿ ಪ್ರಮುಖವಾದ ಸ್ಥಳಗಳು ಈ ಕೆಳಗಿನಂತಿವೆ.  

1. ಫ್ರೌನ್‌ಕಿರ್ಚೆ ಮತ್ತು ನ್ಯೂಮಾರ್ಕ್ ಸ್ಕ್ವೇರ್ (Frauenkirche and Neumarkt Square):

ಪ್ರೊಟೆಸ್ಟಂಟ್ ಚರ್ಚ್ ಅನ್ನು 1726 ಮತ್ತು 1743 ರ ನಡುವೆ ನಿರ್ಮಿಸಲಾಯಿತು, 1945 ರಂದು ನಡೆದ ದಾಳಿಗೆ ತೀವ್ರವಾಗಿ ಹಾನಿಗೊಳಗಾಗಿತ್ತು. 1990 ರಿಂದ ಪುನರ್ನಿರ್ಮಾಣ ಕಾರ್ಯರಂಭ ಮಾಡಲಾಯಿತು. ಸುತ್ತಮುತ್ತಲಿನ ನ್ಯೂಮಾರ್ಕ್ ಚೌಕದಲ್ಲಿ, ವಿಶಿಷ್ಟವಾದ ಬರೊಕ್ ಗೇಬಲ್ಡ್ ಮನೆಗಳನ್ನು ವಿಭಾಗವಾರು ಪುನರ್ನಿರ್ಮಿಸಲಾಯಿತು. ಅರ್ಧ ಶತಮಾನಕ್ಕೂ ಹೆಚ್ಚು ಸಮಯದ ನಂತರ, ನಗರ ಪುರಾತನ ಕೇಂದ್ರ ಪ್ರದೇಶಕ್ಕೆ ಗತವೈಭವ ಮರಳಿ ದೊರೆಯಿತು. 

2. ಪ್ರೊಸೆಶನ್ ಆಫ್ ಪ್ರಿನ್ಸೆಸ್: (Procession of Princes):

ಅರಮನೆಯ ಹಿಂದಿನ ಪ್ರದೇಶದಿಂದ ನ್ಯೂಮಾರ್ಕ್ಟ್ ಮತ್ತು ಸ್ಕ್ಲೋಸ್ಪ್ಲ್ಯಾಟ್ಜ್ ಚೌಕಗಳನ್ನು ಸಂಪರ್ಕಿಸುವ ಈ ಒಂದು ರಸ್ತೆಯಿದೆ.  ಜಾಗವಿದೆ ಸಂಪರ್ಕಿಸುತ್ತದೆ ಇಲ್ಲಿನ 101-ಮೀಟರ್ ಭಿತ್ತಿಚಿತ್ರವು ಹೌಸ್ ಆಫ್ ವೆಟ್ಟಿನ್‌ನ ಆಡಳಿತಗಾರರನ್ನು ಆರೋಹಿತವಾದ ಮೆರವಣಿಗೆಯಲ್ಲಿ ಹೋಗುತ್ತಿರುವುದನ್ನು ತೋರಿಸುತ್ತದೆ. ಈ ಭಿತ್ತಿಚಿತ್ರವನ್ನು ಮ್ಯೂರೆಲ್ ಕಲೆಗಾರಿಕೆಯಿಂದ ಮೀಸೆನ್ ಪಿಂಗಾಣಿಯ ತುಣುಕುಗಳನ್ನು ಗೋಡೆಗೆ ಟೈಲ್ಸ್ ನಂತೆ ಅಂಟಿಸಲಾಗಿದೆ. ಈ ಒಂದು ಭಿತ್ತಿಚಿತ್ರ ನೋಡಲು ತುಂಬಾ ಸುಂದರವಾಗಿದೆ

3. ರಾಯಲ್ ಪ್ಯಾಲೇಸ್ (Royal Palce):

 ಈ ನವೋದಯ ಕಟ್ಟಡವನ್ನು 15 ನೇ ಶತಮಾನದಲ್ಲಿ ಸ್ಯಾಕ್ಸನ್ ಪ್ರಾಂತ್ಯದ ರಾಜಕುಮಾರರು ಮತ್ತು ರಾಜರ ಅಧಿಕಾರದ ಹೊಸ ಕೇಂದ್ರವಾಗಿ ನಿರ್ಮಿಸಲಾಯಿತು. ಎರಡನೆಯ ಮಹಾಯುದ್ಧದ ದಾಳಿಯಲ್ಲಿ, ಹಾನಿಗೊಳಗಾದ  ನಂತರ, 1985 ರಲ್ಲಿ ಕಟ್ಟಡವನ್ನು  ವಸ್ತುಸಂಗ್ರಹಾಲಯ ಸಂಕೀರ್ಣವಾಗಿ ಪುನರ್ನಿರ್ಮಿಸಿ ಪ್ರಾರಂಭಿಸಲಾಯಿತು.


4. ಸ್ಯಾನ್ಕಿಸ್ಸಿಮೇ ಟ್ರಿನಿಟಾಟಿಸ್ ಕ್ಯಾಥೆಡ್ರಲ್ (Sanctissimae Trinitatis Cathedral):-

ಕ್ಯಾಥೋಲಿಕ್ ಕೋರ್ಟ್ ಚರ್ಚ್ ಎಂದೂ ಕರೆಯಲ್ಪಡುವ ಈ ಕ್ಯಾಥೆಡ್ರಲ್ ಪಾರಂಪಾರಿಕ ಕಟ್ಟಡ ಸ್ಕ್ಲೋಸ್‌ಪ್ಲಾಟ್ಜ್ ಮತ್ತು ಥಿಯೇಟರ್‌ಪ್ಲಾಟ್ಜ್ ನಡುವೆ ಇದೆ ಮತ್ತು ಇದು ಸ್ಯಾಕ್ಸೋನಿಯ ಅತಿದೊಡ್ಡ ಚರ್ಚ್ ಕಟ್ಟಡವಾಗಿದೆ. ಇದನ್ನು 1738 ಮತ್ತು 1754 ರ ನಡುವೆ ಬರೊಕ್ ಶೈಲಿಯಲ್ಲಿ ಚಿಯಾವೆರಿ ನಿರ್ಮಿಸಿದರು. 1980 ರಿಂದ ಇದು ಡ್ರೆಸ್ಡೆನ್-ಮಿಸೆನ್ ಡಯಾಸಿಸ್ನ ಕ್ಯಾಥೆಡ್ರಲ್ ಆಗಿದೆ.

5. ಸೆಂಪರ್ ಒಪೇರಾ ಹೌಸ್ (Semper Opera and Theaterplatz)

1838 ಮತ್ತು 1841 ರ ನಡುವೆ ಈ ಒಪೆರಾ ಹೌಸ್ ಅನ್ನು ನಿರ್ಮಿಸಲಾಯಿತು. 1945 ರಲ್ಲಿ ಡ್ರೆಸ್ಡೆನ್ ಬಾಂಬ್ ದಾಳಿಗೆ ಬಲಿಯಾಯಿತು. ಸೆಂಪರ್ ಒಪೇರಾ ಹೌಸ್ ಅನ್ನು ವಿಶ್ವದ ಅತ್ಯಂತ ಸುಂದರವಾದದ್ದು ಎಂದು ಪರಿಗಣಿಸಲಾಗಿದೆ ಮತ್ತು ಡ್ರೆಸ್ಡೆನ್‌ನ ಮುಖ್ಯ ಸ್ಥಳಗಳಲ್ಲಿ ಇದು ಒಂದಾಗಿದೆ.



6. ಜ್ವಿಂಗರ್ ಅರಮನೆ (Zwinger and Old Masters Picture Gallery)

ಬರೊಕ್ ಅವಧಿಯ ಅಂತ್ಯದ ಅತ್ಯಂತ ಮಹತ್ವದ ಕಟ್ಟಡ. ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳು ಎಲ್ಲವೂ ಸಮ್ಮಿಳಿನಗೊಂಡ ಸುಂದರವಾದ ಕಟ್ಟಡ. 1710 ಮತ್ತು 1728 ರ ನಡುವೆ ಈ ಅರಮನೆಯನ್ನು ಕಟ್ಟಲಾಗಿದೆ.  

ಇಂದು ಈ  ಕಟ್ಟಡವು ಓಲ್ಡ್ ಮಾಸ್ಟರ್ಸ್ ಪಿಕ್ಚರ್ ಗ್ಯಾಲರಿ, ರಾಯಲ್ ಕ್ಯಾಬಿನೆಟ್ ಆಫ್ ಮ್ಯಾಥಮೆಟಿಕಲ್ ಮತ್ತು ಫಿಸಿಕಲ್ ಇನ್ಸ್ಟ್ರುಮೆಂಟ್ಸ್ ಮತ್ತು ಪಿಂಗಾಣಿ ಸಾಮಗ್ರಿಗಳ ಸಂಗ್ರಹವನ್ನು ಹೊಂದಿದೆ.

7. ಬ್ರೂಲ್ಸ್ ಟೆರೇಸ್ (Stroll along Brühl's Terrace) 

ಡ್ರೆಸ್ಡೆನ್‌ನಲ್ಲಿರುವ ಎಲ್ಬೆ ನದಿಯ ದಂಡೆಗಳ ಮೇಲೆ 1739 ಮತ್ತು 1748 ರ ನಡುವೆ ಅತ್ಯಂತ ವಾಸ್ತುಶಿಲ್ಪೀಯವಾಗಿ ಸುಂದರವಾದ ಈ ಭಾಗವನ್ನು ಖಾಸಗಿ ಉದ್ಯಾನಗಳಾಗಿ ನಿರ್ಮಿಸಲಾಯಿತು. ಇದನ್ನು "ಯುರೋಪ್‌ನ ಬಾಲ್ಕನಿ" ಎಂದು ಕರೆಯಲಾಗುತ್ತದೆ. ಮತ್ತು ಟೆರೇಸ್ನಿಂದ ಆರ್ಟ್ ಅಕಾಡೆಮಿ, ಡ್ರೆಸ್ಡೆನ್ ಕೋಟೆ ಮತ್ತು ಆಲ್ಬರ್ಟಿನಮ್ ಅನ್ನು ಪ್ರವೇಶಿಸಬಹುದು.

8. ಗೋಲ್ಡನ್ ಹಾರ್ಸ್ಮನ್ (Golden Horseman)

ಡ್ರೆಸ್ಡೆನ್‌ನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕವನ್ನು 1732-1734 ರ ನಡುವೆ  ನಿರ್ಮಿಸಲಾಯಿತು. ಅಗಸ್ಟಸ್ ದಿ ಸ್ಟ್ರಾಂಗ್ ಎಂದು ಕರೆಯಲ್ಪಡುವ ಎಲೆಕ್ಟರ್ ಫ್ರೆಡ್ರಿಕ್ ಆಗಸ್ಟ್ I, ಪುರಾತನ ವಸ್ತ್ರವನ್ನು ಧರಿಸಿ ಕುದುರೆಯ ಮೇಲೆ  ಸವಾರಿ ಮಾಡುವುದನ್ನು ತೋರಿಸುತ್ತದೆ. ಈ ಪ್ರತಿಮೆಯನ್ನು ಸ್ಮಿತ್ ಲುಡ್ವಿಗ್ ವೈಡೆಮನ್ ಎನ್ನುವವರು ತಯಾರಿಸಿದ್ದರಂತೆ. ಗೋಲ್ಡನ್ ಹಾರ್ಸ್‌ಮ್ಯಾನ್ ಅನ್ನು ಹಲವಾರು ಬಾರಿ ಪುನಃಸ್ಥಾಪಿಸಲಾಗಿದೆ. ಈ ವಿಗ್ರಹವು ಸರಿಸುಮಾರು 500 ಗ್ರಾಂ ಚಿನ್ನದ ಲೇಪನವನ್ನು ಹೊಂದಿದೆ. 

9. ಗ್ರಾಸರ್ ಗಾರ್ಟನ್ (Grosser Garten) 

ಥಿಯೇಟರ್‌ಪ್ಲಾಟ್ಜ್‌ನ ಆಗ್ನೇಯಕ್ಕೆ 3.5 ಕಿಮೀ ದೂರದಲ್ಲಿರುವ ಗ್ರಾಸರ್ ಗಾರ್ಟನ್, ಡ್ರೆಸ್ಡೆನ್‌ನಲ್ಲಿನ ಅತಿದೊಡ್ಡ ಹಸಿರು ಉದ್ಯಾನವನ. 17 ನೇ ಶತಮಾನದಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿತ್ತು. ಬೇಸಿಗೆ ಕಾಲದಲ್ಲಿ ಈಗ ಸಂಗೀತ ಕಚೇರಿಗಳು, ವಿವಿಧ ಪ್ರದರ್ಶನಗಳು ಮತ್ತು ಪಟಾಕಿ ಪ್ರದರ್ಶನಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ.


ಈ ನಗರದಲ್ಲಿ ಇನ್ನು ಹಲವಾರು ವೈಶಿಷ್ಟ್ಯವಿರುವ ಸ್ಮಾರಕಗಳು, ಪಾರಂಪಾರಿಕ ಕಟ್ಟಡಗಳು ಐತಿಹಾಸಿಕ ಸ್ಮಾರಕಗಳು ಸುಂದರವಾದ ಎಲ್ಬೆ ನದಿ ಇತ್ಯಾದಿ ಇದೆ. ಜರ್ಮನಿಯ ಪ್ರವಾಸಕ್ಕೆ ಹೋದರೆ ಒಂದೆರೆಡು ದಿನ ಆರಾಮವಾಗಿ ಇಲ್ಲಿ ಸಮಯ ಕಳೆಯಬಹುದು. 





ಬುಧವಾರ, ಸೆಪ್ಟೆಂಬರ್ 27, 2023

ಸುಝೋ: ಚೀನಾದ ವೆನಿಸ್

ನಾನು ಕೆಲಸ ಮಾಡುವ ಒಮಾನ್ ರಾಷ್ಟ್ರದ ಆಫೀಸಿನ ಬಿಜಿನೆಸ್ ಗೆ ಸಂಭಂದ ಪಟ್ಟಂತೆ ಒಮ್ಮೆ ಚೈನಾ ಪ್ರವಾಸಕ್ಕೆ ಹೋಗಿದ್ದೆ. ಈ ಪ್ರವಾಸದಲ್ಲಿ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ಮತ್ತು ಸುಝೋ ನಗರಗಳಲ್ಲಿ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಒಟ್ಟು ಒಂದು ವಾರದ ಕೆಲಸ. ಮಸ್ಕತ್ ಗೆ ವಾಪಾಸು ಹಿಂದಿರುಗುವ ದಿನ ನಮ್ಮ ಆಥಿತೇಯ ಕಂಪನಿಯವರು ಪ್ರಾಚೀನ ಐತಿಹಾಸಿಕ ನಗರವಾದ ಸುಝೋ ನಗರದ ಪ್ರವಾಸವನ್ನು ಆಯೋಜಿಸಿದ್ದರು. ಸುಝೋ ನಗರ ಚೀನಾದ ಅತಿ ಪುರಾತನವಾದ ಸಾಂಸ್ಕೃತಿಕ ನಗರ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ನಗರವಿದೆ. ಕ್ರಿ.ಪೂ.514ರಲ್ಲಿ ಈ ನಗರವನ್ನು ನಿರ್ಮಾಣಮಾಡಿದ್ದರು ಎಂದು ಹೇಳಲಾಗುತ್ತಿದೆ. 15ನೇ ಶತಮಾನದ ಅಂತ್ಯದಿಂದ 19 ನೇ ಶತಮಾನದವರೆಗೆ, ಸುಝೋ ನಗರ ಚೀನಾದ ಆರ್ಥಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಐತಿಹಾಸಿಕ ಪುರಾತನ ನೀರಿನ ಕಾಲುವೆಗಳು, ಕಲ್ಲಿನ ಸೇತುವೆಗಳು, ಪಗೋಡಗಳು ಮತ್ತು ಸುಂದರ  ಉದ್ಯಾನವನಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳು.

 

ಈ ನಗರವನ್ನು ಸಾಮಾನ್ಯವಾಗಿ "ವೆನಿಸ್ ಆಫ್ ದಿ ಈಸ್ಟ್" ಅಥವಾ "ವೆನಿಸ್ ಆಫ್ ಚೀನಾ" ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಯುರೋಪಿನ ವೆನೀಸ್ ನಗರದಲ್ಲಿರುವಂತೆ ಇಲ್ಲಿಯೂ ಸಹ ಭಾಗಶಃ ನಗರ ನೀರಿನೊಳಗೆ ಇದೆ. ಇಲ್ಲಿನ ಕಾಲುವೆಗಳಲ್ಲಿ  ಸಂಚರಿಸಲು ದೋಣಿಗಳ ವ್ಯವಸ್ಥೆಯಿದೆ. ಕಾಲುವೆಯ ಇಕ್ಕೆಲಗಳಲ್ಲಿ ಮನೆಗಳಿವೆ, ಅಂಗಡಿಗಳಿವೆ, ಹೋಟೇಲ್ ರೆಸ್ಟಾರೆಂಟ್ ಗಳಿವೆ. ಈ ಪ್ರದೇಶದ ಸೌಂದರ್ಯವನ್ನು ಅನುಭವಿಸಲು  ದೋಣಿಯಲ್ಲಿಯೇ ಪ್ರಯಾಣಿಸಬೇಕು. ನಮ್ಮ ಪ್ರವಾಸದ ಸಮಯದಲ್ಲಿ ಈ ಕಾಲುವೆಯಲ್ಲಿ ನಾವು ಪ್ರಯಾಣಿಸುವಾಗ, ಇದರ ಕುರಿತು ಹಲವಾರು ಕುತುಹಲಕಾರಿ ವಿಷಯಗಳನ್ನು ತಿಳಿದುಕೊಂಡೆವು. ಈ ಕಾಲುವೆಗಳೆಲ್ಲ ದೊಡ್ಡದಾದ ಗ್ರ್ಯಾಂಡ್ ಕೆನಾಲ್ ಅನ್ನು ಸಂಪರ್ಕಿಸುತ್ತವೆ. ಸುಝೋ ನಗರದ ಕೆಲ ಭಾಗ ಈ ಬೃಹತ್ ನೀರಿನ ಕಾಲುವೆ ಆಕ್ರಮಿಸಿದೆ. ಈ ಕಾಲುವೆಗೆ ಸುಧೀರ್ಘವಾದ ಇತಿಹಾಸವಿದೆ. ಶತಶತಮಾನಗಳ ಹಿಂದೆ ಸುಲಭವಾಗಿ ಸರಕು ಸರಂಜಾಮುಗಳನ್ನು ಸರಬರಾಜು ಮಾಡಲು ಈ ಕಾಲುವೆಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಅಂದಿನ ರಾಜಪರಿವಾರದವರಿಗೆ ನೂರಾರು ಕಿ.ಮಿ. ದೂರದ ಊರುಗಳಿಗೆ ರಸ್ತೆ ಮೂಲಕ ಪ್ರಯಾಣದಲ್ಲಿ ಕುದುರೆ, ಎತ್ತಿನಗಾಡಿ ಮುಂತಾದವುಗಳಲ್ಲಿ ಪ್ರಯಾಣಿಸಿದರೆ ವಿಪರೀತವಾದ ಮೈ ನೋವು ಬರುತಿತ್ತು, ಸುಸ್ತಾಗುತಿತ್ತು. ಇಂತಹ  ಧೀರ್ಘವಾದ ಪ್ರಯಾಣವನ್ನು ರಾಜಪರಿವಾರದ ಅದರಲ್ಲೂ ರಾಜ, ರಾಣಿ, ರಾಜಕುಮಾರಿ ಮತ್ತಿತರು ಕಾಲುವೆ ಮುಖಾಂತರ ಸುಲಭವಾಗಿ ಪ್ರಯಾಣ ಮಾಡಲು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಅದೇನೆ ಇರಲಿ, ಈ ಕಾಲುವೆಯ ಉಪಯೋಗದಿಂದ ಚೀನಾದ ಆರ್ಥಿಕ ಪರಿಸ್ಥಿತಿ ತುಂಬಾ ಬಲಗೊಂಡಿತ್ತು ಎಂದು ಹಲವಾರು ಕಾಲಘಟ್ಟದಲ್ಲಿ ದಾಖಲಾಗಿದೆ.

 

ಈ ಕಾಲುವೆಯ ಉದ್ದ ಸುಮಾರು 1776 km (ಕಿ.ಮಿ) ನಷ್ಟು (ಬೀಜಿಂಗ್‌ನಿಂದ ಝೆಜಿಯಾಂಗ್ ಪ್ರಾಂತ್ಯದವರೆಗೆ), ಉದ್ದವಿದೆ. ಇದು ವಿಶ್ವದ ಅತಿ ಉದ್ದದ ದೊಡ್ಡ ಕಾಲುವೆಯಾಗಿದ್ದು, ಮಾನವ ನಿರ್ಮಿತ ಕೃತಕ ನದಿಯಾಗಿದೆ. ಬೀಜಿಂಗ್‌ನಿಂದ ಪ್ರಾರಂಭಿಸಿಟಿಯಾಂಜಿನ್ ಮತ್ತು ಹೆಬೈ, ಶಾಂಡೊಂಗ್, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳ ಮೂಲಕ ಹಾಂಗ್‌ಝೌ ನಗರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲಿ ಇದನ್ನು ಮೊದಲು ಕಟ್ಟಲು ಪ್ರಾರಂಭಿಸಿದರು, ನಂತರ ಕ್ರಿ.ಶ. 581–618 ರಲ್ಲಿ ಮತ್ತು ಕ್ರಿ.ಶ. 1271–1633, ಹೀಗೆ ವಿವಿಧ ಕಾಲಘಟ್ಟದಲ್ಲಿ ಇಲ್ಲಿನ ರಾಜಮನೆತನಗಳು ಇದನ್ನು ವಿಸ್ತರಿಸುತ್ತ ಬಂದಿದ್ದಾರೆ.  ಈ ಕಾಲುವೆ  ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಈ ಕಾಲುವೆಯಲ್ಲಿ ಪ್ರಮುಖವಾಗಿ ಆಹಾರಧಾನ್ಯಗಳನ್ನು ಸಾಗಿಸಲಾಗುತಿತ್ತು. ಸೇನಾ ತುಕಡಿಗಳನ್ನು ಒಂದುಕಡೆ ಇನ್ನೊಂದು ಕಡೆಗೆ ಸಾಗಿಸಲು ಸಹ ಇದನ್ನ ಬಳಸುತಿದ್ದರು.  ಈ ಕಾಲುವೆಯಲ್ಲಿ ಸಂಚರಿಸಲು, ಅಂದಿನ ಕಾಲದಲ್ಲಿಯೇ ತಂತ್ರಜ್ನಾನವನ್ನು ಉಪಯೋಗಿಸಿ ಪ್ರಯಾಣಕ್ಕೆ ಸೂಕ್ತವಾದ ದೋಣಿಗಳನ್ನು ನಿರ್ಮಿಸುತಿದ್ದರು. ಸಾಗಾಣೆದಾರರು ಅಂದಿನ ಆಡಳಿತಗಾರರಿಗೆ, ಸುಂಕವನ್ನ ನೀಡಬೇಕಿತ್ತು. ಇದೊಂದು ಉತ್ತಮವಾದ ಆದಾಯವಾಗಿತ್ತು. ಈ ಸಾಗಾಟದ ಸಮಯದಲ್ಲಿ ದರೋಡೆಕೋರರು, ಲೂಟಿಕೋರರು ದಾಳಿಯಿಡುತಿದ್ದರಂತೆ, ಅವರಿಂದ ರಕ್ಷಿಸಲು ಅಲ್ಲಲ್ಲಿ ಸೈನಿಕರ ತುಕಡಿಗಳನ್ನ ನಿಯೋಜಿಸುತಿದ್ದರು. ಆದರೂ ಸಂಧರ್ಭ ನೋಡಿ, ಈ ದಾಳಿಕೋರರು ಆಹಾರಧಾನ್ಯಗಳು ಸೇರಿದಂತೆ ಮತ್ತಿತರ ವಸ್ತುಗಳನ್ನ ದರೋಡೆ ಮಾಡುತಿದ್ದರು.

 

ಒಂದು ಕಾಲದಲ್ಲಿ ಪ್ರತಿವರ್ಷ 8000 ಕ್ಕೂ ಹೆಚ್ಚಿನ ದೋಣಿಗಳು ಸಂಚರಿಸುತಿದ್ದ 1776 km (ಕಿ.ಮಿ) ಉದ್ದದ ಈ ಐತಿಹಾಸಿಕ ಕಾಲುವೆ ಕಾಲನ ಹೊಡೆತಕ್ಕೆ ಸಿಕ್ಕಿ, ಇಂದು ಹಾಳಾಗಿದೆ. ಕೆಲೆವೆಡೆ ಇದರ ಗುರುತುಗಳೇ ನಾಶವಾಗಿವೆ. ಕೆಲೆವೆಡೆ ಕಾಲುವೆ ಮುಚ್ಚಿ ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ರಸ್ತೆ ರೈಲು ಮಾರ್ಗವನ್ನು ಯಥೇಚ್ಚವಾಗಿ ಉಪಯೋಗಿಸುತ್ತಿರುವುದರಿಂದ, ಎಲ್ಲೆಲ್ಲಿ ಅತಿ ಹೆಚ್ಚು ನೀರು ಇದೆಯೋ ಮತ್ತು ಸಂಪರ್ಕಯೋಗ್ಯವಿದೆಯೋ ಆ ಕಾಲುವೆ/ನದಿ ಮಾತ್ರ ಬಳಕೆಯಲ್ಲಿದೆ, ಮಿಕ್ಕಿದ್ದು ಹೂಳು ತುಂಬಿ ಮುಚ್ಚಿ ಹೋಗಿದೆ. ಕೆಲೆವೆಡೆ ಗುರುತೇ ಸಿಗದಷ್ಟು ಹಾಳಾಗಿದೆ. 12ನೇ ಶತಮಾನದ ಪ್ರಸಿದ್ದ ಪ್ರವಾಸಿಗ ಮಾರ್ಕೋಪೋಲೋ ಸೇರಿದಂತೆ ವಿವಿಧ ವಿದೇಶಿ ಪ್ರವಾಸಿಗರು ಈ ಐತಿಹಾಸಿಕ ಕಾಲುವೆ ಕುರಿತು ದಾಖಲಿಸಿದ್ದಾರೆ.

 

ಸುಝೋದಲ್ಲಿ, ಈ ಕಾಲುವೆ ಪ್ರಯಾಣದ ನಂತರ ವಿವಿಧ ಪ್ರವಾಸಿತಾಣಗಳಿಗೆ ನಮ್ಮ ಕರೆದುಕೊಂಡು ಹೋದರು. ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಈ ಎಲ್ಲಾ ಸ್ಥಳಗಳು ನೂರಾರು ವರ್ಷಗಳ ಹಿಂದೆ ಕಟ್ಟಿದಂತಹವು. ಅವುಗಳನ್ನ ಇಂದಿಗೂ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ. ಸುಝೋ ನಗರದ ಈ ಸ್ಥಳಗಳನ್ನ ನೋಡಿದೊಡನೆ, ಪುರಾತನ ಚೀನಾದ ನಗರವೊಂದನ್ನು ನೋಡಿದಂತಹ ಅನುಭವವಾಗುತ್ತದೆ.

 

*ಪ್ಯಾನ್ಮೆನ್ (ಪ್ಯಾನ್ ಗೇಟ್)*. ಪ್ಯಾನ್ಮೆನ್ ಎನ್ನುವ ಈ ರಮಣೀಯ ಪ್ರದೇಶವನ್ನು ಶಾಸ್ತ್ರೀಯ ಉದ್ಯಾನಗಳ ವಾಸ್ತುಶಿಲ್ಪದ ರಚನೆಯನ್ನು ಬಳಸಿಕೊಂಡು ಕೆಲವು ಐತಿಹಾಸಿಕ ತಾಣಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ  "ಮೂರು ಸುಂದರ ದೃಶ್ಯಾವಳಿಗಳನ್ನು" ನೋಡಬಹುದು. 1) ಪನ್ಮೆನ್ ಗೇಟ್, 2) ವೂ ಮೆನ್ ಸೇತುವೆ ಮತ್ತು 3) ರುಯಿಗುವಾಂಗ್ ಪಗೋಡಾ. ಪ್ಯಾನ್ಮೆನ್ ಗೇಟ್ ಸುಝೌನಲ್ಲಿ 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ ಹೆಗ್ಗುರುತಾಗಿದೆ. ಇಂದಿಗೂ ಪ್ರಾಚೀನ ಕೋಟೆಗಳಲ್ಲಿ ಒಂದಾಗಿ ಇದು ಉಳಿದಿದೆ.  ಆಕರ್ಷಕವಾದ "ವು ಮೆನ್" ಸೇತುವೆಯು ಸುಝೌದಲ್ಲಿ ಅತಿ ಎತ್ತರವಾದ ಪುರಾತನ ಸೇತುವೆಯಾಗಿದೆ.  ಇದು ಸಾಂಗ್ ರಾಜವಂಶದ (ಕ್ರಿ.ಶ. 960-1279) ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಏಳು ಅಂತಸ್ತಿನ ಪಗೋಡವನ್ನು ಮರದ ವೇದಿಕೆಗಳೊಂದಿಗೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಿರಿದಾದ ಮೆಟ್ಟಿಲುಗಳ ಮೇಲೆ ಹತ್ತಿದ ನಂತರ, ಸುಝೋ ನಗರದ ಹೃದಯಭಾಗವನ್ನು ನೋಡಬಹುದು. ಹಚ್ಚ ಹಸಿರಿನ ಸುಂದರವಾದ ಉದ್ಯಾನವನಗಳು, ನೀರಿನ ಕಾಲುವೆಗಳು ಇತ್ಯಾದಿಗಳನ್ನ ಕಣ್ತುಂಬಿಕೊಳ್ಳಬಹುದು.

 

*ಟೈಗರ್ ಹಿಲ್:* ಟೈಗರ್ ಹಿಲ್ ಸುಝೋ ನಗರದ ಒಂದು  ಪ್ರವಾಸಿಗರ ಆಕರ್ಷಣೆಯಾಗಿದೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಇಲ್ಲಿಯೂ ಸಾಕಷ್ಟು  ಪುರಾತನ ವಾಸ್ತುಶಿಲ್ಪಗಳನ್ನು ನೋಡಬಹುದು. 2500 ವರ್ಷಗಳ ಹಿಂದೆ ಇಲ್ಲಿನ ಒಂದು ಯುದ್ದದಲ್ಲಿ ಈ ಪ್ರಾಂತ್ಯದ ರಾಜನೊಬ್ಬ  ಮರಣಹೊಂದುತ್ತಾನೆ. ಅವನ ಮಗ "ಫೂ ಚಾಯ್"ಅವನನ್ನು ಸರ್ಜಿಂಗ್ ಸೀ ಹಿಲ್‌ ಎನ್ನುವ ಈ ಪ್ರದೇಶದಲ್ಲಿ ಸಮಾಧಿ ಮಾಡುತ್ತಾನೆ. ಮೂರು ದಿನಗಳ ನಂತರ ಇಲ್ಲಿಗೆ  ಬಿಳಿ ಹುಲಿಯೊಂದು  ಬಂದಿತು ಎಂಬ ಐತಿಹ್ಯವಿದೆ. ಆದ್ದರಿಂದ ಜನರು ಅಂದಿನಿಂದ ಅದನ್ನು ಟೈಗರ್ ಹಿಲ್ ಎಂದು ಮರುನಾಮಕರಣ ಮಾಡಿದ್ದಾರೆ.

 



*ಹನ್ಶನ್ ದೇವಾಲಯ:* ಹನ್ಶನ್ ದೇವಾಲಯ, ಸುಝೌನಲ್ಲಿರುವ ಬೌದ್ಧ ದೇವಾಲಯವಾಗಿದೆ. ಲಿಯಾಂಗ್ ರಾಜವಂಶದಲ್ಲಿ (A.D. 502-557) ಮೊದಲು ನಿರ್ಮಿಸಲಾದ ದೇವಾಲಯಕ್ಕೆ ಟ್ಯಾಂಗ್ ರಾಜವಂಶದ ಕವಿ-ಸನ್ಯಾಸಿಯ ಹೆಸರನ್ನು ಇಡಲಾಗಿದೆ. ಇಲ್ಲಿ ಹಿಂದೂ ಧರ್ಮದ ಪದ್ದತಿಯಂತೆ ಮೂರ್ತಿ ಪೂಜೆಯನ್ನ ಕಾಣಬಹುದು. ಬುದ್ದನಿಗೆ ದೂಪಫಲ ಪುಷ್ಫ ಇತ್ಯಾದಿಗಳನ್ನ ಅರ್ಪಿಸುತ್ತಾರೆ. ದೇವಾಲಯದ ಪ್ರಾಂಗಣ, ಗಂಟೆ, ಗರ್ಭಗುಡಿ, ಎಲ್ಲವೂ ಭಾರತದಲ್ಲಿನ ದೇವಾಲಯದಂತೆ ಚೈನೀಸ್ ಶೈಲಿಯಲ್ಲಿ ಕಟ್ಟಿರುವುದು ವಿಶೇಷ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದಾಗ, ಈ ಪುರಾತನ ದೇವಾಲಯ ಸೇರಿದಂತೆ ದೇಶದ ಎಲ್ಲಾ ದೇವಾಲಯ, ಚರ್ಚ್ ಮತ್ತು ಮಸೀದಿಗಳನ್ನ 1950 ರಿಂದ 1979ರವರೆಗೆ ಕಾಲ ಮುಚ್ಚಿದ್ದರು.

 

ಸುಝೌವನ್ನು *"ಉದ್ಯಾನಗಳ ನಗರ"* ಎಂದು ಸಹ ಕರೆಯಲಾಗುತ್ತದೆ. 16ನೇ ಶತಮಾನದಲ್ಲಿ 170 ಉದ್ಯಾನಗಳು ಈ ನಗರದಲ್ಲಿವಂತೆ. ಈಗ ಅಂದಾಜು 50 ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕೆಯ ವಿಶ್ವ ಇತಿಹಾಸದಲ್ಲಿ ಶ್ರೇಷ್ಠ ಮೇರುಕೃತಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂಬತ್ತು ಉದ್ಯಾನವನಗಳನ್ನು ವಿಶ್ವ ಸಾಂಸ್ಕೃತಿಕ ಪರಂಪರೆಗಳಲ್ಲಿ ಪಟ್ಟಿ ಮಾಡಲಾಗಿದೆ. ಚೀನೀ ಉದ್ಯಾನ ಸಂಸ್ಕೃತಿಯ ಹೆಮ್ಮೆಯೆಂದು ಗುರುತಿಸಲ್ಪಡುವ  ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ ಮತ್ತು ಲಿಂಗರಿಂಗ್ ಗಾರ್ಡನ್  ಇಂದಿಗೂ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ.

 

*ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್* ಅನ್ನು ಕ್ರಿ.ಶ 1509 ರಲ್ಲಿ ನಿರ್ಮಿಸಲಾಯಿತು.  ಇದು ಸುಝೋದಲ್ಲಿನ ಅತಿದೊಡ್ಡ ಶಾಸ್ತ್ರೀಯ ಸಾಂಪ್ರದಾಯಿಕ ಉದ್ಯಾನವನವಾಗಿದೆ. ಇಡೀ ಉದ್ಯಾನವು ನೀರಿನ ಕೊಳ, ಕಾಲುವೆಗಳಿಂದೆ, ಆಕರ್ಷಕ ಕಲ್ಲು ಬಂಡೆಗಳು, ಮಂಟಪಗಳು, ವಿವಿಧ ರೀತಿಯ ಸುಂದರವಾದ ಹೂವಿನ ಗಿಡಗಳು, ಆಕರ್ಷಕ ಮರಗಿಡಗಳಿಂದ ಕೂಡಿದ ಇಲ್ಲಿನ ದೃಶ್ಯಾವಳಿ ಮನಸ್ಸಿಗೆ ಮುದ ನೀಡುತ್ತವೆ. ಅಂಕುಡೊಂಕಾದ ಹಾದಿಯಲ್ಲಿ ನಡೆಯುತ್ತಾ ಮುಂದೆ ಹೋದಂತೆ , ಪ್ರತಿಯೊಂದು ಹೆಜ್ಜೆಗೂ ವಿಭಿನ್ನ ದೃಶ್ಯಾವಳಿಗಳು ಗೋಚರಿಸುತ್ತವೆ.  ರಮಣೀಯ ಮತ್ತು ಶಾಂತಿಯುತ, ಉದ್ಯಾನದಲ್ಲಿ  ಪ್ರತಿಯೊಂದು ವಸ್ತುವೂ  ಹಿಂದಿನ ಕಥೆಯನ್ನು ಹೇಳುತ್ತದೆ.

 

*ಲಿಂಗರಿಂಗ್ ಗಾರ್ಡನ್* (ಲಿಯುವಾನ್ ಗಾರ್ಡನ್) ಚೀನಾದಲ್ಲಿ ಅತಿ ದೊಡ್ಡ ಪ್ರಮಾಣದ ಕ್ಲಾಸಿಕಲ್ ಖಾಸಗಿ ಉದ್ಯಾನವಾಗಿದ್ದು, 23300 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಇದು ಕ್ವಿಂಗ್ ರಾಜವಂಶದ ಶೈಲಿಯ ವಿನ್ಯಾಸವನ್ನು ಪ್ರತಿನಿಧಿಸುತ್ತದೆ.  ಸೊಗಸಾದ ವಾಸ್ತುಶಿಲ್ಪ ಕಲೆ, ಭವ್ಯವಾದ ಸಭಾಂಗಣಗಳು ಮತ್ತು ಸುಂದರವಾದ ಗಾರ್ಡೆನ್ ಅಂಗಳಗಳಿಗೆ ಹೆಸರುವಾಸಿಯಾಗಿದೆ. ಈ ಗಾರ್ಡನ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರ್ವದಲ್ಲಿ ಮುಖ್ಯವಾಗಿ ವಾಸ್ತುಶಿಲ್ಪ, ಮಧ್ಯದಲ್ಲಿ ವಿಶಾಲವಾದ ಉದ್ಯಾನವನ, ಪಶ್ಚಿಮವು ಕಲ್ಲು ಬಂಡೆಗಳಿಂದ ಕೂಡಿದ ಮತ್ತು ಉತ್ತರಕ್ಕೆ ಗ್ರಾಮೀಣ ದೃಶ್ಯಾವಳಿಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

 

*ರೇಷ್ಮೆ ನಗರಿ:-* ಸಾವಿರಾರು ವರ್ಷಗಳಿಂದ, ಸುಝೋ ನಗರದ ಜನರು ಅದ್ಭುತವಾದ ರೇಷ್ಮೆಬಟ್ಟೆಗಳನ್ನುತಯಾರಿಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 4700 ವರ್ಷಗಳ ಹಿಂದೆ ಇಲ್ಲಿ ರೇಷ್ಮೆ ಉಪಯೋಗದಲ್ಲಿತ್ತು ಎಂದು ಉತ್ಖನನದ ವೇಳೇ ದೊರೆತ ಅವಶೇಷಗಳಿಂದ ಸಾಬೀತು ಪಡಿಸಲಾಗಿದೆ. ಹೀಗಾಗಿ ಸುಝೋ ನಗರವನ್ನು ಸಿಲ್ಕ್ ಸಿಟಿ ಎಂದು ಕರೆಯುವುದಲ್ಲದೆ ಇಲ್ಲಿ ಸಿಲ್ಕ್ ರೋಡ್ ಇತ್ತು ಎಂದು ಹೇಳಲಾಗುತ್ತಿದೆ. 1991 ರಲ್ಲಿ ನಿರ್ಮಿಸಲಾದ ಸುಝೋ ಸಿಲ್ಕ್ ಮ್ಯೂಸಿಯಂ ಚೀನಾದಲ್ಲಿ ರೇಷ್ಮೆಯ ಕುರಿತಾದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಚೀನಾದ 7000 ವರ್ಷಗಳ ರೇಷ್ಮೆ ಇತಿಹಾಸವನ್ನು ತಿಳಿದುಕೊಳ್ಳಬಹುದು, ರೇಷ್ಮೆ ಹುಳುಗಳ ಜೀವನ, ಸಾಂಪ್ರದಾಯಿಕ ರೇಷ್ಮೆ ನೇಯ್ಗೆ ಕೌಶಲ್ಯವನ್ನು ವೀಕ್ಷಿಸಬಹುದು.

 

ಹೀಗೆ ಚೀನಾದ ಪ್ರವಾಸದ ವೇಳೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ನಮಗೆ ಒದಗಿಬಂತು.  ಚೀನಾದ ಹಳೆಯ ಚಲನ ಚಿತ್ರಗಳಲ್ಲಿ ಚೈನಾದ ಸಾಂಪ್ರದಾಯಿಕ  ಊರುಗಳು, ಕಟ್ಟಡಗಳನ್ನು ನೋಡಿದ್ದ ನಮಗೆ ಪ್ರತ್ಯಕ್ಷವಾಗಿ ಸುಝೋದಲ್ಲಿ ಅಂತಹ ಸ್ಥಳಗಳನ್ನು ಕಾಣುವಂತಾಯಿತು. ಒಂದೆಡೆ ಗಗನಚುಂಬಿ ಆಧುನಿಕ ಕಟ್ಟಡಗಳು, ಮೆಟ್ರೋ ಟ್ರೈನ್, ಮೋನೋ ರೈಲ್, ಎಕ್ಸ್ಪ್ರೆಸ್ ಹೆದ್ದಾರಿ, ದೊಡ್ಡದಾದ ಫ್ಲೈ ಓವರ್ ಗಳು ಮತ್ತೊಂದೆಡೆ ಸಾಂಪ್ರದಾಯಿಕ ಶೈಲಿಯ ಪುರಾತನ ನಗರ ಜೀವನವನ್ನು ಕಣ್ತುಂಬಿಕೊಳ್ಳುವ ಅನುಭವಾಯಿತು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

 

 

 































ಕೃಷಿ ಸ್ವಾವಲಂಬನೆಯತ್ತ ಅರಬ್ ರಾಷ್ಟ್ರಗಳು



ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್, ಬಹರೈನ್, ಯುಏಇ ಮತ್ತಿತರ ರಾಷ್ಟ್ರಗಳು ನಮ್ಮ ಭಾರತದಂತೆ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿಲ್ಲ ಇಲ್ಲಿನ ಬಹುತೇಕ ಜಾಗ ಮರುಭೂಮಿಯಿಂದ ಆವೃತವಾಗಿದೆ, ಮಳೆ ಬಹಳ ವಿರಳ, ನದಿ ಸರೋವರಗಳು ಇಲ್ಲಿ ಬಹಳ ಕಡಿಮೆ.  ಏಳೆಂಟು ತಿಂಗಳು ಬೇಸಿಗೆ ಕಾಲ, ಆ ಸಮಯದಲ್ಲಿ ಅತಿ ಹೆಚ್ಚು ಎಂದರೆ 40-55 ಡಿಗ್ರಿ .ಸೆಲ್ಶಿಯಸ್ ನಷ್ಟು ತೀಕ್ಷ್ಣವಾದ ಬಿಸಿಲು. ಇಂತಹ ವೈರುಧ್ಯಮಯವಾದ ವಾತಾವರಣದಲ್ಲಿ ಬೆಳೆ ಬೆಳೆಯುವುದು ಬಹಳ ಕಷ್ಟ. ಇಲ್ಲಿ ತೈಲ ಆವಿಷ್ಕಾರ ವಾಗುವವರೆಗೂ ನೂರಾರು ವರ್ಷಗಳಿಂದ ಇಲ್ಲಿನ ಜನರು ಭಾರತದಂತಹ ರಾಷ್ಟ್ರಗಳನ್ನ ಅಗತ್ಯ ವಸ್ತುಗಳಿಗಾಗಿ  ಅವಲಂಬಿಸಿದ್ದರು. ಆದರೆ, ಇಪ್ಪತ್ತನೇ ಶತಮಾನದಲ್ಲಿ ತೈಲದ ಆವಿಷ್ಕಾರದ ನಂತರ ಇಲ್ಲಿಯ ಬದುಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ತೈಲದ ಬೇಡಿಕೆ ದಿನೇ ದಿನೇ ಹೆಚ್ಚಿದಂತೆಲ್ಲ ತೈಲ ಉತ್ಪಾದನೆ ಹೆಚ್ಚಾಯಿತು. ಈ ತೈಲ ಮಾರಿ ಬಂದ ಹಣದಲ್ಲಿ ಇಲ್ಲಿನ ಮೂಲ ಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸಿದ್ದಲ್ಲದೆ, ದೇಶಕ್ಕೆ ಬೇಕಾದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನ ನಿರ್ಮಿಸಿ ಕೊಳ್ಳುತ್ತ ಬಂದಿದ್ದಾರೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಉತ್ಪನ್ನಗಳನ್ನು  ಪ್ರಪಂಚದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೇರಿಕ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳ ಉತ್ತಮ ಗುಣಮಟ್ಟದ ಹಣ್ಣು ತರಕಾರಿ, ದಿನಸಿ ವಸ್ತುಗಳನ್ನು ಆಮದು ಮಾಡಿಕೊಳ್ಳುತಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳಲ್ಲಿ ದೇಶ ವಿದೇಶಗಳ ವಸ್ತುಗಳು ದೊರೆಯುತ್ತಿವೆ.

 

ಅರಬ್ ರಾಷ್ಟ್ರಗಳಲ್ಲಿ ಕೇವಲ ಮರುಭೂಮಿ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲದೆ ಕೆಲ ಪ್ರದೇಶಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ಸಹ ಇವೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳನ್ನು ಬೆಳೆಯುತಿದ್ದಾರೆ. ಕೆಲೆವೆಡೆ ಕೃಷಿ ಭೂಮಿ ಸೇರಿದಂತೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಅತ್ಯುನ್ನತ ತಂತ್ರಜ್ನಾನವನ್ನು ಉಪಯೋಗಿಸುತಿದ್ದಾರೆ. ಇವೆಲ್ಲವನ್ನ ಕಣ್ಣಾರೆ ನೋಡಿದಾಗ ಕೃಷಿಯನ್ನು ಹೀಗೂ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.

 ಮರುಭೂಮಿಯಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಭೂಪ್ರದೇಶದ ಸುಮಾರು 1.5% ಮಾತ್ರ ಕೃಷಿ ಮಾಡಲು ಯೋಗ್ಯವಾಗಿದೆ. ಹೀಗಾಗಿ ದೇಶದ ಅಗತ್ಯ ಆಹಾರ ಪೂರೈಕೆಯ 80% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಂದೊಂದು ದಿನ ಜಾಗತಿಕ ಆಹಾರ ಪೂರೈಕೆ ಜಾಲದಲ್ಲಿ ಏನಾದರು ಕುಸಿತ ಕಂಡರೆ ದೇಶ ಅಪಾಯಕ್ಕೆ ಸಿಲುಕುವ ಸಂಭವನೀಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆ ಜಾಲದ ಸಂಭವನೀಯ ಅಪಾಯಗಳನ್ನು ಮನಗಂಡು ಆಹಾರ ಭದ್ರತೆ ಗಾಗಿ ಅತ್ಯುನ್ನತ ವಿದೇಶಿ ತಂತ್ರಜ್ನಾನವನ್ನು ಉಪಯೋಗಿಸಿ ಮರುಭೂಮಿಯನ್ನು ಕೃಷಿಭೂಮಿಯನ್ನಾಗಿ ಸೌದಿ ಅರೇಬಿಯಾ ಪರಿವರ್ತಿಸುತ್ತಿದೆ.  ಇದರ ಪರಿಣಾಮ ಕೆಲೆವೆಡೆ ನೂರಾರು ಕಿ.ಮಿ.ಗಳಷ್ಟು ಉದ್ದಕ್ಕೂ ಕೃಷಿ ಚಟುವಟಿಕೆಯನ್ನು ಇಂದು ಕಾಣಬಹುದಾಗಿದೆ. ಇದರಿಂದಾಗಿ ಆಹಾರಕ್ಕಾಗಿ ಸಂಪೂರ್ಣ ಸುಸ್ಥಿರ ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತಿದೆ.

 

ತುಬರ್ಜಲ್  ಎನ್ನುವ ಪ್ರದೇಶದಲ್ಲಿ ಲಕ್ಷಾಂತರ ಎಕರೆ ಮರುಭೂಮಿ ಇಂದು ಕೃಷಿಭೂಮಿಯಾಗಿ ಪರಿವರ್ತಿತ ಗೊಂಡಿದೆ. 300 ರಿಂದ 500 ಮೀಟರ್ ತ್ರಿಜ್ಯದ ವೃತ್ತಾಕಾರದಲ್ಲಿ ಈ ಕೃಷಿ ಭೂಮಿಗಳಿವೆ. ಗೂಗಲ್ ಮ್ಯಾಪ್ ನಲ್ಲಿ ನೋಡಿದರೆ ಚುಕ್ಕಿಗಳಂತೆ ಕಾಣುವ ಈ ಪ್ರದೇಶ ಸಾವಿರಾರು ಚದರ ಕಿ.ಮಿ. ನಷ್ಟು ಹರಡಿಕೊಂಡಿದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಇದರಿಂದ ಭೂಮಿಯ ಆಳದಲ್ಲಿರುವ ನೀರನ್ನು ತೆಗೆದು 300 ಮೀಟರ್ ರಿಂದ 500 ಮೀಟರ್ ತ್ರಿಜ್ಯದಲ್ಲಿ ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಮುಖಾಂತರ ಅಥವಾ ಸೆಂಟರ್-ಪಿವೋಟ್ ನೀರಾವರಿ ಪದ್ದತಿಯಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲದೆ ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಇನ್ನು ಮುಂತಾದ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸುತಿದ್ದಾರೆ. ಬಹುತೇಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಉಪಯೋಗಿಸುವುದರಿಂದ ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯತೆ ಕಂಡು ಬರುತ್ತಿಲ್ಲ. ನೀರಿನ ಬಳಕೆಯೂ ಇಲ್ಲಿ ಕಡಿಮೆ. ಇಲ್ಲಿ, ವಿವಿಧ ರೀತಿಯ ಹಣ್ಣು, ಹೂವು ತರಕಾರಿ, ಖರ್ಜೂರ, ಧವಸ ಧಾನ್ಯಗಳಾದ ಗೋಧಿ, ಬಾರ್ಲಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ 100% ಎಲ್ಲಾ ಕೃಷಿ ಉತ್ಪನ್ನಗಳು ದೇಶದೊಳಗೆ ಸರಬರಾಜಾಗುತಿದ್ದು, ಹೆಚ್ಚುವರಿ ಉತ್ಪನ್ನಗಳನ್ನ ಪಕ್ಕದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ಜತೆಗೆ, ನೂತನ ತಂತ್ರಜ್ನಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ಅನ್ನು ಕೆಲೆವೆಡೆ ಅಳವಡಿಸಿಕೊಂಡು ಕೃಷಿಮಾಡಲಾಗುತ್ತಿದೆ.

 ಒಮಾನ್ ರಾಷ್ಟ್ರವೂ ಸಹ ಕೃಷಿ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿದೆ.

 ಒಮಾನ್ ನಲ್ಲಿಯೂ ಸಹ ವಿವಿಧ ತರಹದ ಹೂ, ಹಣ್ಣು ಸೊಪ್ಪುಗಳನ್ನ ಬೆಳೆಯಲಾಗುತ್ತಿದೆ. ಇಲ್ಲಿಯೂ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಿದೆ. ಈ ತೋಟಗಳಲ್ಲಿ ಗೋಧಿ, ಬಾರ್ಲಿ, ಖರ್ಜೂರ, ಬಾಳೆಹಣ್ಣು, ಮಾವಿನಹಣ್ಣು, ಸೀಬೆ ಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಭೂಜ, ಸೋರೆಕಾಯಿ, ಕುಂಬಳ್ಕಾಯಿತೆಂಗಿನಕಾಯಿ, ಕೊತ್ತಂಬರಿ, ಪುದಿನ, ಲೆಟ್ಟ್ಯೂಸ್, ಬದನೆಕಾಯಿ, ಟೊಮಾಟೋ, ಕ್ಯಾಪ್ಸಿಕಮ್, ನಿಂಬೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ ಮುಂತಾದವಗಳನ್ನು ಇಲ್ಲಿ ಬೆಳೆಯುತ್ತಾರೆ. ಉತ್ಸಾಹಿ ಒಮಾನಿ ಕೃಷಿಕರು ವಿವಿಧ ರೀತಿಯ ಪ್ರಯೋಗಗಳನ್ನ ನಡೆಸುತ್ತಿರುವುದು ವಿಶೇಷ. ಮಲೆನಾಡಿನಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಹ ಇಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂಜೂರದ ಹಣ್ಣುಗಳು, ಏಪ್ರಿಕಾಟ್ಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಬೆಳೆಯುತ್ತಿರುವುದು ವಿಶೇಷವಾಗಿದೆ, ಯಾಕೆಂದರೆ ಇಲ್ಲಿನ ವಾತಾವರಣ ಅತಿ ಬಿಸಿಲಿನಿಂದ ಕೂಡಿದ್ದು, ಇಂತಹ ಅತಿ ಕಡಿಮೆ ಮಳೆ ಪ್ರದೇಶದಲ್ಲಿ ಇಂತಹವುಗಳನ್ನ ಬೆಳೆಯಲು ಸಾಧ್ಯವಾಗಿದ್ದೆ ವಿಶೇಷವೆಂದೇ ಹೇಳಬೇಕು.

 

ಕೆಲೆವೆಡೆ ಹನಿ ನಿರಾವರಿ ಪದ್ದತಿ, ಸ್ಪ್ರಿಂಕ್ಲರ್ ವ್ಯವಸ್ಥೆ, ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಜತೆಗೆ ಕೆಲೆವೆಡೆ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ನಂತಹ ತಂತ್ರಜ್ನಾನಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ತಂತ್ರಜ್ನಾನವನ್ನು ಉಪಯೋಗಿಸಿ ಈ ರಾಷ್ಟ್ರಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ.

 

ಒಮಾನ್ ರಾಷ್ಟ್ರದ ಬೆಟ್ಟ ಗುಡ್ಡಗಾಡು ಪ್ರದೇಶಗಳ ಬುಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ಸಾವಿರಾರು ನೀರಿನ ಝರಿಗಳಿವೆ, ಈ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದ್ದು, ಮಿಕ್ಕ ಕೆಲೆವೆಡೆ ಬೋರ್ ವೆಲ್ ಗಳನ್ನು ಕೊರೆದು ಕೃಷಿಗಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ದುಬೈ ನಿಂದ ಒಮಾನ್ ರಾಷ್ಟ್ರದ ಮಸ್ಕತ್ ಗೆ ರಸ್ತೆಯಲ್ಲಿ ಪ್ರಯಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಕಿ.ಮಿ. ದೂರದಷ್ಟು ಹಚ್ಚ ಹಸಿರಿನಿನ ತೋಟಗಳನ್ನು ಕಾಣಬಹುದು, ಇದೇ ರೀತಿ ಸಲಾಲ್ಹ, ಸೂರ್, ನಿಜ್ವ ಮುಂತಾದ ಪ್ರದೇಶಗಳಲ್ಲಿಯೂ ಸಹ ಹೊಲಗದ್ದೆಗಳಿವೆ. ಸಲಾಲ್ಹ ಪ್ರದೇಶವಂತೂ ನಮ್ಮ ಸಹ್ಯಾದ್ರಿ ತಪ್ಪಲಿನ ಒಂದು ಪಟ್ಟಣದಂತೆ ಇದೆ. ರಾಜಧಾನಿ ಮಸ್ಕತ್ ಸೇರಿದಂತೆ ಇತರೆ ನಗರಗಳಾದ ಸಲಾಲ್ಹ, ಸೋಹಾರ್, ಸೂರ್ ಮುಂತಾದೆಡೆ ಮುಖ್ಯರಸ್ತೆ ಬದಿಯಲ್ಲಿರುವ ಹಚ್ಚ ಹಸಿರಿನ ಉದ್ಯಾನವನಗಳು, ಕೈತೋಟಗಳು, ಗಿಡ ಮರಗಳನ್ನು ನೋಡಿದೊಡನೆ, ಪ್ರವಾಸಿಗರಿಗೆ ಆಶ್ಚಯವಾಗುವುದು ಖಂಡಿತ. ಒಮಾನಿನ ಕೆಲೆವೆಡೆ ಮಣ್ಣು ಫಲವತ್ತಾಗಿದೆ, ಇಲ್ಲಿನ ಗಿಡ ಮರಗಳಿಗೆ ಸೂಕ್ತ ಪ್ರಮಾಣದ ನೀರನ್ನು ಪೂರೈಸಿದರೆ, ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ. ಮನೆಮುಂದಿನ ಜಾಗಗಳಲ್ಲಿ ಬಹುತೇಕ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದಲ್ಲದೆ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಾರೆ.

 

ಈ ಅರಬ್ ರಾಷ್ಟ್ರಗಳಲ್ಲಿ ತ್ಯಾಜ್ಯನೀರನ್ನ ಸಂಸ್ಕರಿಸಿ ಆ ನೀರನ್ನು ಈ ಉದ್ಯಾನವನಗಳಿಗೆ ಸರಬರಾಜು ಮಾಡಲಾಗುತ್ತದೆ. ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಪದ್ದತಿ ಮುಖಾಂತರ ಗಿಡಗಳಿಗೆ ಅಗತ್ಯವಾದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ.

 

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯುವುದರ ಜತೆಗೆ ಕೃಷಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುವುದು ಮಾತ್ರವಲ್ಲದೆ, ಕೃಷಿಯನ್ನು ಸಹ ಒಂದು ಉದ್ಯಮವನ್ನಾಗಿ ಪರಿಗಣಿಸಿ, ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯವಾದ ಸೌಕರ್ಯಗಳನ್ನು ಅರಬ್ ರಾಷ್ಟ್ರಗಳು ಕಲ್ಪಿಸಿಕೊಡುತ್ತಿವೆ.  ಕೃಷಿ ವಲಯದಲ್ಲಿ ಹೂಡಿಕೆ ಮಾಡುವ ಸಲುವಾಗಿ ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಕೃಷಿ ಉಪಕರಣಗಳ ಆಮದು ಸುಂಕ  ವಿನಾಯಿತಿ, ಕಡಿಮೆ ಬಡ್ಡಿದರದ ಸಾಲ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಕೃಷಿಯ ಜತೆಗೆ ಅತ್ಯಾಧುನಿಕ ತಂತ್ರಜ್ನಾನದ ಸುಸಜ್ಜಿತ ಹೈನುಗಾರಿಕೆ ಫಾರಂಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಸಾಕಷ್ಟಿವೆ. ಇಲ್ಲಿ ಉತ್ಪಾದನೆಯಾಗುವ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ದೇಶದೆಲ್ಲೆಡೆ ಬಳಕೆಯಾಗುವುದಲ್ಲದೆ ಇತರೆ ರಾಷ್ಟ್ರಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

 ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಜತೆಗೆ ನಾಗರೀಕರ ಅಗತ್ಯಕ್ಕೆ ತಕ್ಕಂತೆ ಬೇಕಾದ ಕುರಿ ಕೋಳಿ ಮುಂತಾದವುಗಳನ್ನ ಇಲ್ಲಿ ಬೆಳೆಸಿ  ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯಾವುದೇ ಒಂದು ರಾಷ್ಟ್ರ, ಆಹಾರದಂತಹ ವಿಷಯದಲ್ಲಿ ಬೇರೆಯವರ ಅವಲಂಬನೆಯಲ್ಲಿರುವುದು ಸರಿಯಲ್ಲ. ಈಗ ಸಾಕಷ್ಟು ಹಣ ಇದೆ ಎಂದು ಬೇಕಾದದ್ದನ್ನು ರಫ್ತು ಮಾಡಿಕೊಂಡು ಜೀವಿಸುವುದು ಸಹ ಉತ್ತಮ ನಿರ್ಧಾರವಲ್ಲ, ಮುಂದಿನ ಕನಿಷ್ಟ ಐವತ್ತು ವರ್ಷಗಳಿಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಸೂಕ್ತ ಯೋಜನೆಗಳನ್ನ ಹಾಕಿಕೊಂಡು ಮುಂದಡಿಯಿಡುವುದು ಉತ್ತಮ ಲಕ್ಷಣ. ಆ ನಿಟ್ಟಿನಲ್ಲಿ, ಅರಬ್ ರಾಷ್ಟ್ರಗಳು ಮುಂದಾಲೋಚನೆಯಿಂದ ಸ್ವಾವಲಂಬನೆಯತ್ತ ಎಚ್ಚರಿಕೆಯ ಹೆಜ್ಜೆಇಡುತ್ತಿರುವುದು ಇತರೆ ರಾಷ್ಟ್ರಗಳಿಗೆ ಒಂದು ಪಾಠ ಎಂದು ಹೇಳಬೇಕು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Click below headings