ಶುಕ್ರವಾರ, ಜೂನ್ 13, 2025

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಬರಹ:- ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್ ರಾಷ್ಟ್ರ.


ಸೌದಿ ಅರೇಬಿಯಾದ ಹೆಚ್ಚಿನ ಭಾಗ ಮರುಭೂಮಿಯಿಂದ ಕೂಡಿದ್ದು ಇಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನವಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಪ್ರಪಂಚದ ಅತ್ಯಂತ ದೊಡ್ಡದಾದ ರಬ್ ಅಲ್ ಖಾಲಿ (ಎಂಪ್ಟಿ ಕ್ವಾರ್ಟರ್) ಎಂದು ಕರೆಯಲ್ಪಡುವ ಮರುಭೂಮಿ ಈ ದೇಶದಲ್ಲಿದೆ. ಈ ವಿಶಾಲವಾದ ಮರುಭೂಮಿಯು ದೇಶದ ಹವಾಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ದೇಶವು ಅತ್ಯಂತ ಧೀರ್ಘವಾದ, ಬೇಸಿಗೆಕಾಲ ಮತ್ತು ಅತಿ ಕಡಿಮೆ ಅವಧಿಯ ತಂಪಾದ ಮತ್ತು ಸ್ವಲ್ಪ ಆರ್ದ್ರ ಚಳಿಗಾಲದ ಕಠಿಣ ಮರುಭೂಮಿ ಹವಾಮಾನವನ್ನು ಹೊಂದಿದೆ.  ಇಂತಹ ಕಠಿಣ ಹವಮಾನದಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು, ಇಲ್ಲಿನ ಸರ್ಕಾರವು ಅರಣ್ಯೀಕರಣ, ಸುಧಾರಿತ ಭೂ ನಿರ್ವಹಣಾ ಪದ್ಧತಿಗಳು ಅಳವಡಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಶನರ್ ಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಭೀಕರ ಮರಳುಗಾಡಿನ ಪ್ರದೇಶದಲ್ಲೂ ತಂಪಾದ ಹವಮಾನ ಪ್ರದೇಶಗಳಿರುವುದು ಇಲ್ಲಿನ ವಿಶೇಷ. ಆದರೆ ಇಲ್ಲಿಯೂ ಸಹ ತಂಪಾಗಿರುವ ಪ್ರದೇಶಗಳಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಲ್ಲಿನ ತಂಪಾದ ಹವಮಾನವನ್ನು ಅನುಭವಿಸಲು ಬೇಸಿಗೆ ಸೇರಿದಂತೆ, ವಿವಿಧ ರಜಾದಿನಗಳಲ್ಲಿ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ.

 ತುರೈಫ಼್, ಬ್ಲಾಹಮ್ರ್,  ಬಿಲ್ಸಮ್ರ್ ಕೇಂದ್ರ, ಅಲ್ ಬಹಾ, ಅಭಾ, ಅಸೀರ್ ಪ್ರಾಂತ್ಯ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ಹಿಮಪಾತವಾಗಿದೆ ಎಂದರೆ ನಂಬಲಾಗದು. ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳು ಪಕ್ಕದಲ್ಲಿ ಸಾಗುವಂತಹ ಅದ್ಭುತ ವಿಹಂಗಮ ದೃಶ್ಯವನ್ನು, ಇಲ್ಲಿ ಸ್ವತಃ ಕಾಣಬಹುದು. ಪಶ್ಚಿಮ ಘಟ್ಟದಲ್ಲಿನ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವ ಅನುಭವ, ಕೇಬಲ್ ಕಾರ್ ಪ್ರಯಾಣ, ಸುಂದರ ಉಧ್ಯಾನವನಗಳು,  ಒಂದಾ ಎರಡಾ!  ಅಲ್ಲ, ಹತ್ತು ಹಲವಾರು ಅದ್ಭುತ ಪ್ರವಾಸಿತಾಣಗಳು ಇಲ್ಲಿವೆ.  ಈ ಎಲ್ಲಾ ಸ್ಥಳಗಳು ಬೇಸಿಗೆ ವಿಶ್ರಾಂತಿ ಧಾಮಗಳಾಗಿ ಅದ್ಭುತವಾಗಿ ಅಭಿವೃದ್ದಿ ಹೊಂದಿದ್ದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬೇಟಿ ನೀಡುತ್ತಾರೆ. 

ಈ ಲೇಖನದಲ್ಲಿ ಸೌದಿ ಅರೇಬಿಯಾದಲ್ಲಿನ ತಂಪಾದ ಪ್ರದೇಶಗಳ ಕುರಿತು ಒಂದು ಒಳನೋಟ ಇಲ್ಲಿದೆ. 

*1). ಅಭಾ(Abha) - ಆಸಿರ್ ಪ್ರಾಂತ್ಯ(Aseer Region):* 

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಅಭಾ ಪ್ರದೇಶವು ಆಸಿರ್ ಪ್ರಾಂತ್ಯದಲ್ಲಿದೆ. ಇದು ಅಲ್-ಹಿಜಾಜ್ ಪರ್ವತದ ಮೇಲಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಬೇಸಿಗೆಯಲ್ಲಿಯೂ ಸಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಾಂತ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. 

.

*ಆಸೀರ್ ಪ್ರಾಂತ್ಯದಲ್ಲಿನ ಪ್ರಮುಖ ಆಕರ್ಷಣೆಗಳು:*

ಅಭಾ: ಅಸೀರ್ ಪ್ರಾಂತ್ಯದ ರಾಜಧಾನಿ, ಈ ನಗರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದರೂ, ಪುರಾತನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. 

ಅಭಾ ಸರೋವರ(Abha Dam Lake): ಈ ಸರೋವರದಲ್ಲಿ ದೋಣಿ ವಿಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ, ಇದೊಂದು ಪ್ರಶಾಂತ ಸರೋವರವಾಗಿದ್ದು ವಿಶ್ರಾಂತಿ ಸಮಯವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು.

ಅಭಾ ಕೇಬಲ್ ಕಾರ್ (New Abha Cable Car):  ಈ ಕೇಬಲ್ ಕಾರ್ ಮೂಲಕ ಸಂಚರಿಸುತ್ತ, ಇಲ್ಲಿಯ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅಲ್ ಮುಫ್ತಾಹಾ ಕಲಾ ಗ್ರಾಮ(Al Muftaha Art Village): ಈ ಸ್ಥಳದಲ್ಲಿ ಇಲ್ಲಿನ ಸ್ಥಳೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಸೌದಿ ಅರೇಬಿಯಾದ ಪುರಾತನ ಮನೆಗಳನ್ನ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ನೋಡುತಿದ್ದರೆ,  ಯುರೋಪಿನ ಪುರಾತನ ಶೈಲಿಯ ಸಂಗ್ರಹಾಲಯವನ್ನು ನೋಡುತಿದ್ದೇವೆಯಾ ಎನ್ನುವುದು ಭಾಸವಾಗುತ್ತದೆ.

ಆಸೀರ್ ರಾಷ್ಟ್ರೀಯ ಉದ್ಯಾನವನ (Asir National Park): ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ವನ್ಯಜೀವಿ ವೀಕ್ಷಣೆ,  ಟ್ರೆಕಿಂಗ್ ಕ್ಯಾಂಪಿಂಗ್, ಬೆಟ್ಟಗಳ ನಡುವೆ ಹಾದುಹೋಗುವ ಮೋಡಗಳ ವೀಕ್ಷಣೆ ಗಾಗಿ ಈ ಸ್ಥಳ ಪ್ರಸಿದ್ದ.  ಪರ್ವತಗಳ ಕಣಿವೆಗಳ ಮಧ್ಯೆಯಿರುವ ಅರಣ್ಯದಲ್ಲಿನ ಟ್ರೆಕಿಂಗ್ ಗಾಗಿರುವ ಕಾಲ್ನಡಿಗೆಯ ಹಾದಿಗಳು ಅದ್ಭುತ ಅನುಭವವನ್ನು ನೀಡುತ್ತವೆ. 



ರಿಜಲ್ ಅಲ್ಮಾ ಗ್ರಾಮ (Rijal Almaa Village): ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಶೈಲಿಗೆ ಈ ಗ್ರಾಮ ಹೆಸರುವಾಸಿಯಾಗಿದೆ. ಅಭಾದಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 900 ವರ್ಷಗಳಿಗೂ ಹಳೆಯದಾಗಿದೆ. 


ಅಲ್ ಹಬಾಲಾ ಗ್ರಾಮ (Al Habala Village Hanging Village): ಈ ಸ್ಥಳದಲ್ಲಿನ ಬೆಟ್ಟಗಳು, ವಿಶಿಷ್ಟವಾದ ಬಂಡೆಗಳು, ಕಣಿವೆಗಳ ರಮ್ಯ ನೋಟವನ್ನು ಅನುಭವಿಸುತ್ತ  ಈ ಸ್ಥಳವನ್ನು ಕೇಬಲ್ ಕಾರ್ ಮೂಲಕ ಪ್ರವೇಶಿಸಬಹುದು.  ಇಲ್ಲಿನ ಪ್ರಕೃತಿಯ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ.

ಜಬಲ್ ಸಾವ್ಡಾ (Jabal Sawda):  ಆಸಿರ್ ಪರ್ವತ ಶ್ರೇಣಿಯಲ್ಲಿನ ವಿಹಂಗಮ ನೋಟಗಳನ್ನು ಅನುಭವಿಸಲು ಈ ಸ್ಥಳವು ಸೂಕ್ತವಾಗಿದೆ. ಟ್ರೆಕಿಂಗ್ ಮಾಡಲು ಇಲ್ಲಿ ಅವಕಾಶವಿದೆ. 

ವಾಟರ್ ಫಾಲ್ ಪಾರ್ಕ್ (Waterfall Park): ಇದೊಂದು ಸುಂದರವಾದ ಉದ್ಯಾನವನವಾಗಿದ್ದು, ಕೃತಕ  ಜಲಪಾತ,  ಕಾರಂಜಿಗಳು ಮತ್ತು ಮಕ್ಕಳು ಆಟವಾಡಲು ಈ ಉದ್ಯಾನವನ ಸೂಕ್ತವಾಗಿದೆ.

ಮೇಲಿನ ಸ್ಥಳಗಳ ಜತೆಗೆ ಇಲ್ಲಿನ, ಐತಿಹಾಸಿಕ ಶಾದಾ ಅರಮನೆ, ಅಸೀರ್ ಪ್ರಾದೇಶಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು, ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಈ ಸ್ಥಳ ಸೂಕ್ತವಾಗಿದೆ.



*2). ತೈಫ್* :- ಈ ತೈಫ್ ನಗರವನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ.

ಸರಾವತ್ ಪರ್ವತಗಳ ಇಳಿಜಾರುಗಳಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ಗುಲಾಬಿ ತೋಟಗಳು, ತಾಜಾ ಗಾಳಿ ಮತ್ತು ಪರ್ವತ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಬೇಸಿಗೆಯ ವಿಹಾರ ತಾಣವಾಗಿದೆ. ಈ ಪ್ರಾಂತ್ಯವು ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು, ಸೌದಿ ಅರೇಬಿಯಾದ ಇತರೆ ಪ್ರದೇಶಗಳಲ್ಲಿನ ಜನರು ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳಲು ಈ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡುತ್ತಾರೆ.  ಸೌದಿ ಅರೇಬಿಯಾದ ಬೇಸಿಗೆಯ ತಾಣವೆಂದು ಗುರುತಿಸಲಾಗಿದೆ.

ತೈಫ್ ನಗರವು ಜೆದ್ದಾ ದಿಂದ 175 ಕಿಲೋಮೀಟರ್ ಮತ್ತು ರಿಯಾದ್ ನಿಂದ 785 ಕಿಲೋಮೀಟರ್ ದೂರವಿದೆ. ತೈಫ್ ತನ್ನ ಪರಿಮಳಯುಕ್ತ ಗುಲಾಬಿಗಳು ಮತ್ತು ಸುಗಂಧ ದ್ರವ್ಯ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡುವುದಾದರೆ, ಅಲ್ ಹದಾ ಪರ್ವತ, ಅದರ ಉದ್ದವಾದ ಕೇಬಲ್ ಕಾರ್ ಸವಾರಿ, ಗುಲಾಬಿ ತೋಟಗಳು ಮತ್ತು ಕಾಲ್ನಡಿಗೆಯ ಹಾದಿಗಳು, ಜೊತೆಗೆ ವಾಟರ್ ಪಾರ್ಕ್ ಮತ್ತು ಟೊಬೊಗನ್ ಸ್ಲೈಡ್ ಅನ್ನು ಹೊಂದಿರುವ ಅಲ್ ಕರ್ ಪ್ರವಾಸಿ ಗ್ರಾಮ ಇಲ್ಲಿವೆ. 

*3). ತುರೈಫ್* : ಐತಿಹಾಸಿಕ  ಅತ್-ತುರೈಫ್ ಸೌದಿಯ ಉತ್ತರ ಭಾಗದ ಈ ಪ್ರದೇಶ ಅತ್ಯಂತ ತಂಪಾದ ಪ್ರದೇಶವಾಗಿದೆ. ಜೋರ್ಡಾನ್ ದೇಶದ  ಉತ್ತರ ಗಡಿ ಪ್ರಾಂತ್ಯದ ಗಡಿಯ ಬಳಿಯಿದೆ. ಜೆದ್ದಾದಿಂದ 1600 ಕಿಲೋಮೀಟರ್ ಮತ್ತು ರಿಯಾದ್ 1400 ಕಿಲೋಮೀಟರ್ ದೂರವಿದೆ.  ಈ ಪ್ರದೇಶವನ್ನು ಮೊದಲ ಸೌದಿ ರಾಜ್ಯ (1727-1818)  ಎಂದು ಗುರುತಿಸಲಾಗುತ್ತಿದೆ. ಸಾಂಪ್ರದಾಯಿಕ ನಜ್ದಿ ಶೈಲಿಯಲ್ಲಿ ಮಣ್ಣಿನ ಇಟ್ಟಿಗೆಯಿಂದ ರಚಿಸಲಾದ ಇಲ್ಲಿರುವ ರಾಜಮನೆತನದ ಕೋಟೆಯು ಪ್ರಮುಖ ಆಕರ್ಷಣೆಯಾಗಿದೆ. 2010 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿತು, ಚಳಿಗಾಲದ ಅತಿ ಕಡಿಮೆ (−12.0 °C (10.4 °F)) ತಾಪಮಾನವನ್ನು ಈ ಪಟ್ಟಣದಲ್ಲಿ ಕಾಣಬಹುದು.  




*4). ಅಲ್ ಬಹಾ (Al Baha)*:

 ಅಲ್ ಬಹಾ ವನ್ನು ಸೌದಿ ಅರೇಬಿಯಾದ ಹಿಡನ್ ಪ್ಯಾರಡೈಸ್ (hidden paradise)  ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಸುಂದರ ಉಧ್ಯಾನವನಗಳಿವೆ. ಕಾಡುಗಳು, ಕಣಿವೆಗಳು, ಹಳ್ಳಕೊಳ್ಳಗಳು,  ಪ್ರಾಚೀನ ಹಳ್ಳಿಗಳು, ಈ ಪ್ರದೇಶದಲ್ಲಿವೆ. ಕೆಲವೊಮ್ಮೆ ಇಲ್ಲಿ ಹಿಮಪಾತವು ಆಗುತ್ತದೆ. ವಿಶೇಷವೇನೆಂದರೆ ವರ್ಷಪೂರ್ತಿ ತಂಪಾದ ಹವಮಾನ ಇಲ್ಲಿರುರುತ್ತದೆ. ಹೀಗಾಗಿ ಎಲ್ಲೆಲ್ಲೀ ಹಚ್ಚ ಹಸಿರನ್ನಕಾಣಬಹುದು. 

ಪ್ರವಾಸಿಗಳು ನೋಡಲು ಹಲವಾರು ಸ್ಥಳಗಳಿವೆ. ರಘದನ್ ಫಾರೆಸ್ಟ್ ಪಾರ್ಕ್, ಐನ್ ವಿಲೇಜ್, ಖೈರಾ ಫಾರೆಸ್ಟ್, ಹಲವಾರು ಉದ್ಯಾನವನಗಳು, ಪಿಕ್ನಿಕ್ ತಾಣಗಳು ಮತ್ತು ನಯನ ಮನೋಹರ ಹಚ್ಚ ಹಸಿರಿನ ಅರಣ್ಯ ಪ್ರದೇಶಗಳು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಹೀಗೆ ವಿವಿಧ ರೀತಿಯ ಪ್ರವಾಸಿ ಸ್ಥಳಗಳು ಇಲ್ಲಿವೆ.




5). ಅಲ್ ಜೌಫ್ - ಆಲಿವ್ ರಾಜಧಾನಿ (Al Jouf – The Olive Capital)

ಉತ್ತರ ಸೌದಿ ಅರೇಬಿಯಾದಲ್ಲಿರುವ ಅಲ್ ಜೌಫ್ ಸ್ಥಳವು, ಆಲಿವ್ ತೋಟಗಳು, ಹಸಿರಿನ ವಾತಾವರಣ ಮತ್ತು ತಂಪಾದ ಹವಮಾನಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿನ ಸಕಾಕಾ ನಗರ, ಕೃಷಿ ತೋಟಗಳಿಂದ ಆವೃತವಾಗಿದ್ದು, ಬೇರೆಲ್ಲೆಡೆಗಿಂತ ತಂಪಾದ ಹವಾಮಾನ ಇಲ್ಲಿರುತ್ತದೆ.

ಇಲ್ಲಿ ಆಲೀವ್ ಅನ್ನು ಹೆಚ್ಚಾಗಿ ಬೆಳೆಯುವದರಿಂದ ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಆಲಿವ್ ಉತ್ಸವವನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲಿ ನಡೆಯುವ ಅತಿದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಪುರಾತನ ಜಾಬಲ್ ಕೋಟೆ (Zaabal Castle) ಯಿಂದ ಸುತ್ತಮುತ್ತಲಿನ ಹಸಿರು ತುಂಬಿದ ಸುಂದರವಾದ ತೋಟಗಳನ್ನು ನೋಡಬಹುದು



6.) ತಬೂಕ್  (Tabuk):- ಸೌದಿ ಅರೇಬಿಯಾದ ವಾಯುವ್ಯ ಭಾಗದ ಜೋರ್ಡಾನ್ ಗಡಿಯಲ್ಲಿದೆ. ಈ ಪ್ರದೇಶಕ್ಕೆ  ಸುಮಾರು ಐದು ಸಾವಿರವರ್ಷಗಳ ಇತಿಹಾಸವಿದೆ. ಇದೊಂದು ಪುರಾತನ ನಗರವಾಗಿದೆ.  ಚಳಿಗಾಲದಲ್ಲಿ ಮೈಕೊರೆಯುವ ಚಳಿ ಈ ಭಾಗದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಬೆಳಿಗ್ಗೆ ಸುಡು ಬಿಸಿ ವಾತಾವಾರಣವಿದ್ದರೂ, ಸಂಜೆಯ ವಾತಾವರಣ ಹಿತದಾಯಕವಾಗಿರುತ್ತದೆ. 

 ಅತ್ಯಂತ ಧೀರ್ಘ ಇತಿಹಾಸವಿರುವ ಈ ತಾಣ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಹೊಂದಿದೆ. ಪ್ರವಾದಿ ಮೋಸೆಸ್ ಅವರು ಹತ್ತಾರು ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸಿದ್ದರೆಂದು ಹೇಳಲಾಗಿದೆ. ಈ ಪ್ರಾಂತ್ಯವು ಕೆಂಪು ಸಮುದ್ರದ ಕರಾವಳಿ ತೀರವನ್ನು ಹೊಂದಿದೆ. ಹಲವಾರು ಸುಂದರವಾದ ಪಟ್ಟಣಗಳು ಈ ಪ್ರಾಂತ್ಯದಲ್ಲಿದೆ. ಕರಾವಳೀ ತೀರ ಮಾತ್ರವಲ್ಲದೆ, ಮರುಭೂಮಿ, ಎತ್ತರದ ಪರ್ವತಗಳು ಈ ಪ್ರಾಂತ್ಯದಲ್ಲಿವೆ. ತಬೂಕ್ ಪಟ್ಟಣದ ಮಧ್ಯಭಾಗದಲ್ಲಿರುವ ತಬೂಕ್ ಕೋಟೆಯು,  ಕ್ರಿ.ಪೂ 3500 ರ ಹಿಂದಿನ ಕೋಟೆಯಾಗಿದೆ ಎಂದು ಹೇಳುತ್ತಾರೆ.



 7). ಜಜಾನ್ ಹೈಲ್ಯಾಂಡ್ಸ್ (Jazan highlands) :

ಯೆಮೆನ್ ಗಡಿಯ ಸಮೀಪವಿರುವ ಈ ಪ್ರದೇಶವು ಆಶ್ಚರ್ಯಗಳಿಂದ ತುಂಬಿದೆ. ಕರಾವಳಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದರೂ, ಜಜಾನ್ ಹೈಲ್ಯಾಂಡ್ಸ್, ವಿಶೇಷವಾಗಿ ಫೈಫಾ ಪರ್ವತಗಳು ಮುಂಗಾರಿನಲ್ಲಿ ಹಸಿರಿನಿಂದ ಮೈದುಂಬಿ ಕೊಂಡಿರುತ್ತವೆ ಅಷ್ಟೇ ಅಲ್ಲದೆ ಮಳೆಗಾಲದ ಮಂಜನ್ನೂ  ಇಲ್ಲಿ ನೋಡಬಹುದು. ಇಲ್ಲಿರುವ ತೋಟಗಳನ್ನು ನೋಡುತಿದ್ದರೆ, ಇದೇನಿದು ಅರೇಬಿಯಾ ದೇಶವೋ, ಅಥವಾ ಆಗ್ನೇಯ ಏಷ್ಯಾದ ಒಂದು ಪ್ರಾಂತ್ಯವೋ ಎನ್ನುವಂತೆ  ಭಾಸವಾಗುತ್ತದೆ.

ಬನಿ ಮಲಿಕ್ ಮತ್ತು ಅಲ್-ಡೇಯರ್ ಇಲ್ಲಿರುವ ಹಚ್ಚ ಹಸಿರಿನ ಪರ್ವತ ಪ್ರದೇಶದ ಹಳ್ಳಿಗಳು, ಕಾಫಿ ತೋಟಗಳು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಹೆಸರುವಾಸಿಯಾಗಿವೆ.  ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತವೆ.

8) ಹೇಲ್ (Hail):-  ಇದು ವಾಯುವ್ಯ ಸೌದಿ ಅರೇಬಿಯಾದಲ್ಲಿರುವ ಶಮ್ಮಾರ್ ಪರ್ವತಗಳಾದ ಅಜಾ ಮತ್ತು ಸಲ್ಮಾ ನಡುವೆ ಇರುವ ಒಂದು ನಗರ. ರಿಯಾದ್ ನಿಂದ ಸುಮಾರಿ 571 ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣದ ಎತ್ತರದ ಪ್ರದೇಶಗಳು ಅಥವಾ ಉತ್ತರದ ಗಡಿಗಳಷ್ಟು ತಂಪಾಗಿಲ್ಲದಿದ್ದರೂ, ಉತ್ತರದಲ್ಲಿ ನೆಲೆಗೊಂಡಿರುವ ಹೈಲ್, ಇತರ ಮರುಭೂಮಿ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಮಶೀತೋಷ್ಣ ಹವಾಮಾನ ಇಲ್ಲಿರುತ್ತದೆ.


ಈ ತಾಣವು,  ಐತಿಹಾಸಿಕ, ನೈಸರ್ಗಿಕ ಮತ್ತು ಆಧುನಿಕ ಆಕರ್ಷಣೆಗಳ ಮಿಶ್ರಣದ ಅನುಭವನ್ನು ನೀಡುತ್ತದೆ. ಪ್ರಮುಖ ತಾಣಗಳಲ್ಲಿ ಅಲ್-ಕಿಶ್ಲಾ ಅರಮನೆ, ಆರಿಫ್ ಕೋಟೆ, ಅಲ್-ರಾಜಿ ಮಸೀದಿ ಮತ್ತು ಲವೇರಾ ಥೀಮ್ ಪಾರ್ಕ್ ಸೇರಿವೆ. ಪ್ರಕೃತಿ ಪ್ರಿಯರು ಅಲ್ ಸಮ್ರಾ ಪರ್ವತ, ಹತಿಮಾ ಜ್ವಾಲಾಮುಖಿ ಕುಳಿ ಮತ್ತು ಹತ್ತಿರದ ಅಲ್ ನಫುದ್ ಮರುಭೂಮಿಯನ್ನು ಅನ್ವೇಷಿಸಬಹುದು.

9) ಅಲ್ ಉಲಾ (AlUla):


ಅಲ್ಉಲಾ ನಗರವು, ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿರುವ ಒಂದು ಪ್ರಾಚೀನ ಅರೇಬಿಯನ್ ಓಯಸಿಸ್ ನಗರ ಮತ್ತು ಗವರ್ನರೇಟ್ ಆಗಿದ್ದು, ಇದು ಮದೀನಾ ನಗರದ ವಾಯುವ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಈ ಪ್ರಾಂತ್ಯವು, ಇಲ್ಲಿನ ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಿಮೆ ತಾಪಮಾನ ದಿಂದಾಗಿ, ಚಳಿಗಾಲದಲ್ಲಿ ನಡೆಯುವ ಹಲವಾರು ವಿಶಿಷ್ಟ ಹಬ್ಬಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಿಂದಾಗಿ ಈ ತಾಣವು ಜನಪ್ರಿಯವಾಗಿದೆ.

ಅಲ್ ಉಲಾ ಐತಿಹಾಸಿಕ ತಾಣಗಳಿಂದ ಹಿಡಿದು ನೈಸರ್ಗಿಕ ಅದ್ಭುತಗಳು ಮತ್ತು ಆಧುನಿಕ ವಾಸ್ತುಶಿಲ್ಪದ ಅದ್ಭುತಗಳವರೆಗೆ ವೈವಿಧ್ಯಮಯ ಆಕರ್ಷಣೆಗಳನ್ನು ಇಲ್ಲಿ ನೋಡಬಹುದು



ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾ, ಪ್ರಾಚೀನ ಸಮಾಧಿಗಳು, ಎಲಿಫೆಂಟ್ ರಾಕ್, ಆನೆಯನ್ನು ಹೋಲುವ ಮರಳುಗಲ್ಲಿನ ರಚನೆ, ಮತ್ತು ಬೃಹತ್ ಮರುಭೂಮಿ ಬಂಡೆಯ ಮುಖದಲ್ಲಿ ನಿರ್ಮಿಸಲಾದ ಸಂಗೀತ ಕಚೇರಿ ಸಭಾಂಗಣವಾದ ಮರಾಯಾ, ಇವೆಲ್ಲವೂ ಪ್ರವಾಸಿಗರು ಭೇಟಿ ಮಾಡಬಹುದಾದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇದಲ್ಲದೆ, ಪುರಾತನ ನಗರ, ಶರಾನ್ ನೇಚರ್ ರಿಸರ್ವ್ ಮತ್ತು ಜಬಲ್ ಇಕ್ಮಾ ಗೆ ಸಹ ಭೇಟಿ ನೀಡಬಹುದು.


ಶನಿವಾರ, ಮಾರ್ಚ್ 29, 2025

ಯುಗಾದಿ ಹಬ್ಬ ಎಲ್ಲಾ ಹಿಂದೂಗಳಿಗೆ ಹೊಸವರ್ಷವೇ?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಪ್ರತಿ ವರ್ಷ ಯುಗಾದಿ ಬಂತೆಂದರೆ ಎಲ್ಲರ ಮನೆಮನದಲ್ಲೂ ಹರುಷ  ತುಂಬಿ ತುಳುಕಾಡುತ್ತದೆ. ಮರಗಿಡಗಳಲ್ಲಿ ಹಣ್ಣೆಲೆಗಳು ಉದುರಿ, ಹೊಸ ಎಲೆಗಳು ಚಿಗುರುತ್ತವೆ. ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಎಣ್ಣೆಸ್ನಾನ ಮಾಡಿ, ಹೊಸ ಬಟ್ಟೆ ಉಟ್ಟು, ದೇವರ ಪೂಜೆ ಮಾಡಿ, ಹೋಳಿಗೆ ಊಟ ಮಾಡಿ, ಬಂಧುಗಳು ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತೇವೆ. ಸುಖ ದುಃಖಗಳನ್ನ ಸಮನಾಗಿ ಹಂಚಿಕೊಂಡು ಬಾಳಬೇಕು ಎನ್ನುತ್ತ ಬೆವು ಬೆಲ್ಲವನ್ನು ತಿಂದು ಒಟ್ಟಿಗೆ ತಿಂದು ಹಬ್ಬವನ್ನು ಆಚರಿಸುತ್ತೇವೆ, ದಿನಪೂರ್ತಿ ಸಂಭ್ರಮದಿಂದ ಕಳೆಯುತ್ತೇವೆ. ಇಂದು ಜಗತ್ತಿನಾದ್ಯಂತ ಹೊಸವರ್ಷವನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಆದರೆ, ಅಂದು ಪ್ರಕೃತಿಯಲ್ಲಿ ಬದಲಾವಣೆಯೇನು ಆಗುವುದಿಲ್ಲ. ಆದರೆ, ಚೈತ್ರಮಾಸದ ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುತ್ತವೆ, ಈ ಸಮಯದಲ್ಲಿ ಪ್ರಕೃತಿಯನ್ನು ಕಣ್ತುಂಬಾ ನೋಡಲು ಬಲುಹಿತವೆನಿಸುತ್ತದೆ. ಯುಗಾದಿ ಸಮಯವೆಂದರೆ ಪ್ರಕೃತಿಯಲ್ಲಿ ಬದಲಾವಣೆ ಎಂದೇ ಅರ್ಥೈಸುತ್ತೇವೆ.  ಆದರೆ ಯುಗಾದಿ ಹಬ್ಬ, ಎಲ್ಲಾ ಹಿಂದೂಗಳಿಗೆ ಹೊಸವರ್ಷವೇ? ಉತ್ತರ ಮಾತ್ರ ಖಂಡಿತಾವಾಗಿಯೂ ಅಲ್ಲ!!

ಯುಗಾದಿ ಹಬ್ಬವನ್ನು ಬಹಳಷ್ಟು ಜನ ಭಾರತದೇಶದ ಎಲ್ಲಾ ಹಿಂದೂಗಳ ಹೊಸ ವರ್ಷವೆಂದು ತಿಳಿದುಕೊಂಡಿದ್ದಾರೆ. ಕೆಲ ರಾಜ್ಯಗಳಲ್ಲಿ ಮಾತ್ರ ನಾವು ಕನ್ನಡಿಗರು ಆಚರಿಸುವ ಯುಗಾದಿಯಂದು ಹೊಸ ವರ್ಷವೆಂದು ಆಚರಿಸಿದರೆ, ಭಾರತದ ವಿವಿಧ ಭಾಗಗಳಲ್ಲಿ ವಿವಿಧ ದಿನಗಳಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನಮ್ಮ ಭಾರತದಲ್ಲಿ ಎಲ್ಲಾ ಹಿಂದೂಗಳು ಒಂದೇ ದಿನ ಹೊಸವರ್ಷವನ್ನು ಆಚರಿಸುವುದಿಲ್ಲ. ಕನ್ನಡಿಗರಿಗೆ ಯುಗಾದಿ ಹಬ್ಬ ದೊಡ್ಡ ಹಬ್ಬವಾದರೆ, ಕೆಲ ರಾಜ್ಯಗಳಲ್ಲಿ ಹಿಂದೂ ಹೊಸವರ್ಷಕ್ಕೆ ಅಷ್ಟೊಂದು ಮಹತ್ವವೂ ಇಲ್ಲ ಮತ್ತು ಹೊಸವರ್ಷವನ್ನು ಆಚರಿಸುವುದೂ ಇಲ್ಲ ಎನ್ನುವುದು ಗಮನಾರ್ಹ ಅಂಶ.   

ಭಾರತದಲ್ಲಿ ಹಲವಾರು ಕ್ಯಾಲೆಂಡರ್ ಪದ್ದತಿಗಳನ್ನು ಅನುಸರಿಸಲಾಗುತ್ತಿದೆ. ರೋಮನ್ನರ ಹಾಗೂ ಕ್ರೈಸ್ತರ ಕಾಲಗಣನೆಯಂತೆ ಈವತ್ತು ನಾವೆಲ್ಲರೂ ಉಪಯೋಗಿಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ಪದ್ದತಿಯನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎಂದು ಕರೆಯುತ್ತಾರೆ.  ಮುಸ್ಲಿಮರು ಧಾರ್ಮಿಕ ವಿಷಯಗಳಿಗಾಗಿ ಬಳಸುವ ಕ್ಯಾಲೆಂಡರ್ ಅನ್ನು ಹಿಜರಿ ಕ್ಯಾಲೆಂಡರ್ ಎನ್ನುತ್ತಾರೆ. ಹಿಂದೂಗಳು ಉಪಯೋಗಿಸುವ ಹಿಂದೂ ಪಂಚಾಗ ಪದ್ದತಿಯಲ್ಲಿ ಎರಡು ಕಾಲಮಾನಗಳಿವೆ, ಒಂದು ಸೌರಮಾನ ಮತ್ತೊಂದು ಚಾಂದ್ರಮಾನ. ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಾಚಾರ ಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಚಾಂದ್ರಮಾನವೆಂಬ ಹೆಸರಿದ್ದರೂ, ಅದು ನಿಜವಾಗಿ ಸೂರ್ಯ ಮತ್ತು ಚಂದ್ರ, ಇಬ್ಬರ ಚಲನೆಯನ್ನೂ ಅವಲಂಬಿಸಿದೆ.  ಭೂಮಿಯ ಚಲನೆಗೆ ಸಂಬಂಧಿಸಿದಂತೆ ಸೂರ್ಯ ತನ್ನ ಸ್ಥಾನವನ್ನು ಅನುಸರಿಸುವುದನ್ನು ಸೌರಮಾನ ಎಂದು ಕರೆಯಲಾಗುತ್ತದೆ.



ಚಾಂದ್ರಮಾನ ಪದ್ದತಿಯಂತೆ ಪ್ರತಿ ವರ್ಷ ಚೈತ್ರ ಮಾಸ, ಶುಕ್ಲ ಪಕ್ಷದ ಪಾಡ್ಯದ ತಿಥಿಯಂದು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ,  ಮಹಾರಾಷ್ಟ್ರ  ಮಧ್ಯಪ್ರದೇಶ, ಹಾಗೆಯೇ ದಾದ್ರಾ ಮತ್ತು ನಗರ ಹವೇಲಿ ಗೋವಾ ದಮನ್ ಮತ್ತು ಡಿಯು, ತಮಿಳುನಾಡಿನ ಉತ್ತರ ಭಾಗದ ಕೆಲ ತಾಲೂಕುಗಳಲ್ಲಿ (ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ) ಹೊಸವರ್ಷವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಮತ್ತು ಕರ್ನಾಟಕದಲ್ಲಿನ ಜನರು ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ, ಇನ್ನು ಮಹಾರಾಷ್ಟ್ರದ ಜನರು ಇದೇ ಹಬ್ಬವನ್ನು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ.  ಇದಕ್ಕೊಂದು ಹಿನ್ನೆಲೆಯೂ ಇದೆ.  ಕ್ರಿ ಪೂ .230 ರಿಂದ ಕ್ರಿ.ಶ 220 ರ ತನಕ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳನ್ನು ಶಾತವಾಹನರು ಆಳುತ್ತಾರೆ. ಶಾತವಾಹನರ ರಾಜನಾಗಿದ್ದ ಗೌತಮಿಪುತ್ರ ಶಾತಕರ್ಣಿ ಕ್ರಿ.ಶ. 78 ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸುತ್ತಾನೆ.  ಹೀಗಾಗಿ ಶಾತವಾಹನರು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಶಾಲಿವಾಹನ ಶಕೆ ಎನ್ನುವ ಪಂಚಾಂಗ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಈ ಕಾರಣದಿಂದಲೇ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚೈತ್ರಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಿಸುತಿದ್ದೇವೆ. ರಾಜ ಶಾಲಿವಾಹನ ಮತ್ತು ಶಕ ಯುಗದ ನಡುವಿನ ಸಂಬಂಧದ ಕುರಿತಾಗಿ ಸೋಮರಾಜನ ಕನ್ನಡ ಕೃತಿ ಉದ್ಭಟಕಾವ್ಯದಲ್ಲಿ ದಾಖಲಾಗಿದೆ. 

ನಮ್ಮ ಯುಗಾದಿಯ ದಿನದಂದೇ ಹೊಸವರ್ಷವನ್ನು ಭಾರತದ ಕೆಲಭಾಗಳಲ್ಲಿ ಮತ್ತು ವಿದೇಶದಲ್ಲಿಯೂ ಆಚರಿಸುತ್ತಾರೆ. ಇಂಡೋನೇಶಿಯಾದ ಜಾವಾ  ಮತ್ತು ಬಾಲಿಯಲ್ಲಿರುವ ಹಿಂದುಗಳು ಯುಗಾದಿಯಂದೇ ಹೊಸವರ್ಷವನ್ನು ಆಚರಿಸುವುದು ವಿಶೇಷ. ಉತ್ತರ ಭಾರತದ ಸಿಂಧಿ ಜನರು ಯುಗಾದಿಯ ದಿನವನ್ನು ಚೇತಿ ಚಂದ್ ಎಂದು ಆಚರಿಸುತ್ತಾರೆ. ಕೊಂಕಣಿ ಸಮುದಾಯದ ಹಿಂದುಗಳು ವರ್ಷದ ಮೊದಲ ದಿನವನ್ನು "ಸಂವತ್ಸರ ಪಾಡ್ವೋ" ಎಂದು, ಜಮ್ಮು ಕಾಶ್ಮಿರದ ಹಿಂದೂಗಳು ನವ್ರೆಃ ಎಂದು ಆಚರಿಸುತ್ತಾರೆ. ಭಾರತದ ಮಿಕ್ಕ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು  ಹೊಸವರ್ಷವನ್ನು ಆಚರಿಸಲಾಗುತ್ತದೆ. 

ಸೌರಮಾನ ಪದ್ದತಿಯಂತೆ ಪ್ರತಿವರ್ಷ  ಏಪ್ರಿಲ್‌ 14 ರಂದು, ಕರ್ನಾಟಕದ ಕರಾವಳಿಯ ಭಾಗ ಸೇರಿದಂತೆ, ತಮಿಳುನಾಡು, ಕೇರಳ, ಪುದುಚೆರಿ, ಒರಿಸ್ಸಾ, ಅಸ್ಸಾಂ, ನೇಪಾಳ, ಪಂಜಾಬ್ ರಾಜ್ಯಗಳಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಮಂಗಳೂರು ಮತ್ತು ಉಡುಪಿಯಲ್ಲಿ  ಬಿಸು ಪರ್ಬ ಎಂದು ಆಚರಿಸಲಾಗುವುದು.  ಅದೇ ರೀತಿ ಏಪ್ರಿಲ್‌ 14 ರಂದು ತಮಿಳುನಾಡಿನಲ್ಲಿ 'ವರುಷ ಪಿರಪ್ಪು', 'ಚಿತಿರೈವಿಶು', 'ಪುತಂಡು' ಎಂದು,  ಕೇರಳದಲ್ಲಿ  ಹೊಸ ವರ್ಷವನ್ನು 'ವಿಷು' ಎಂದು. ಬಂಗಾಳದಲ್ಲಿ 'ಪೊಹೆಲಾ ಬೋಯ್ಷಾಕ್' ಮತ್ತು 'ನಬಾ ಬರ್ಷ' ಎಂದು, ಒರಿಸ್ಸಾದಲ್ಲಿ, 'ಮಹಾ ವಿಷುಬ ಸಂಕ್ರಾಂತಿ' (ಪನ ಸಂಕ್ರಾಂತಿ) ಎಂದು, ಅಸ್ಸಾಂ ನವರು 'ಬೊಹಾಗ್ ಬಿಹು' ಅಥವಾ 'ರೊಂಗಾಲಿ ಬಿಹು' ಎಂದು, ಪಂಜಾಬ್ ನಲ್ಲಿ ಬೈಸಾಖಿ ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನೇಪಾಳದಲ್ಲೂ ಸಹ ಪ್ರತಿವರ್ಷ ಏಪ್ರಿಲ್‌ 14 ರಂದು ಹೊಸವರ್ಷವನ್ನು ಆಚರಿಸುತ್ತಾರೆ. 

ದೀಪಾವಳಿಯಂದು ಹೊಸವರ್ಷ:  ಗುಜರಾತ್‌ ಮತ್ತು ರಾಜಸ್ಥಾನಗಳಲ್ಲಿ ದೀಪಾವಳಿಯ ನಂತರದ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಗುಜರಾತಿಗೆ ಹೊಂದಿಕೊಂಡಂತೆ ಇರುವ ಮಹಾರಾಷ್ಟ್ರ ಕೆಲ ಜಿಲ್ಲೆಗಳಲ್ಲಿ ದೀಪಾವಳಿಯ ಸಮಯದಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. 

ಮಾರ್ಚ 20 ಪಾರ್ಸಿಗಳ ಹೊಸವರ್ಷ: ಭಾರತದಲ್ಲಿ ನೆಲೆಗೊಂಡಿರುವ ಪಾರ್ಸಿಗಳು ನೌರುಜ್  ಎಂದು ಕರೆಯುವ ಹೊಸವರ್ಷವನ್ನು ಮಾರ್ಚ 20 ರಂದು ಆಚರಿಸುತ್ತಾರೆ. ಮಧ್ಯ ಏಷ್ಯಾದ ದೇಶಗಳಾದ ಇರಾನ್ (ಪರ್ಶಿಯಾ) ಇರಾಕ್, ಸಿರಿಯಾ ಮತ್ತು ಟರ್ಕಿಯಲ್ಲಿ ಕುರ್ದಿಗಳು ಅಫ್ಘಾನಿಸ್ತಾನ, ಅಜೆರ್ಬೈಜಾನ್, ಕಝಾಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್ ಮತ್ತು ತುರ್ಕಮೆನಿಸ್ತಾನದಂತಹ ದೇಶಗಳಲ್ಲಿ ಬಹಳಷ್ಟು ಜನರು ಮಾರ್ಚ ೨೦ರಂದು  ಹೊಸವರ್ಷವನ್ನು (ನೌರುಜ್) ಆಚರಿಸುತ್ತಾರೆ.

ಈಶಾನ್ಯ ರಾಜ್ಯಗಳಲ್ಲಿ ಹೊಸ ವರ್ಷ: ಇಲ್ಲಿನ ಸಪ್ತ ರಾಜ್ಯಗಳಲ್ಲಿ ಬೇರೆ ಬೇರೆ ದಿನಗಳಂದು ಹೊಸವರ್ಷ ಆಚರಿಸುತ್ತಾರೆ. ಕ್ರಿಶ್ಚಿಯನ್ನರು, ಜನವರಿ ಒಂದನೇ ತಾರೀಖಿನಂದು, ಟಿಬೇಟಿಯನ್ ಬೌದ್ದ ಸಂಪ್ರದಾಯವಾದಿಗಳು  ಲೋಸರ್ ಎಂದು ಕರೆಯಲ್ಪಡುವ ಹೊಸವರ್ಷವನ್ನು ಫೆಬ್ರವರಿ ತಿಂಗಳಿನಲ್ಲಿ,  ಏಪ್ರಿಲ್‌ 14ರಂದು, ತ್ರಿಪುರಾ,  ಅಸ್ಸಾಂನವರು 'ಬೊಹಾಗ್ ಬಿಹು' ಹಬ್ಬವನ್ನು ಆಚರಿಸುತ್ತಾರೆ. ಆದರೆ ಮಣಿಪುರಿಗಳು ಚೈರೋಬ ಎಂದು ಕರೆಯಲ್ಪಡುವ ಹಬ್ಬವನ್ನು ನಮ್ಮ ಕನ್ನಡಿಗರ ಯುಗಾದಿಯ ದಿನದಂದು ಆಚರಿಸುತ್ತಾರೆ. 

ಭಾರತದ ಪ್ರಾಚೀನ ಪರಂಪರೆ, ನೂರಾರು ಭಾಷೆಗಳು, ತರಹೇವಾರಿ ಆಹಾರಗಳು, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ವಿಭಿನ್ನ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಭಾರತ ವೈವಿಧ್ಯಮಯ ದೇಶವೆನ್ನುವುದಕ್ಕೆ ಇಂತಹ ಹಲವಾರು ವಿಷಯಗಳಿವೆ. ಬಹುಶಃ ಪ್ರಪಂಚದ ಇತರೆ ಯಾವುದೇ ದೇಶಗಳಲ್ಲಿ ಇಂತಹ ವೈವಿಧ್ಯತೆಗಳು ಅಪರೂಪ. ಭಾರತದಲ್ಲಿರುವ ನಮಗೆ ಇಂತಹ ಹಲವಾರು ವಿಭಿನ್ನ ವಿಷಯಗಳು ಆಶ್ಚರ್ಯ ಎನಿಸಿದರೆ, ಇನ್ನು ವಿದೇಶಿಯರಿಗೆ ನಮ್ಮ ಭಾರತದ ಕುರಿತು ಇನ್ನೆಷ್ಟು ಕೌತಕ ಎನಿಸಬಹುದು ಅಲ್ಲವೇ?


ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ.





ಶುಕ್ರವಾರ, ಜನವರಿ 17, 2025

ಗ್ಯಾಂಬಿಯಾ ಎನ್ನುವ ಎನ್ ಕ್ಲೇವ್ ರಾಷ್ಟ್ರ


ಕೆಲದಿನಗಳ ಹಿಂದೆ ನಮ್ಮ ಆಫೀಸಿನ ಕೆಲಸಕ್ಕೆ ಸಂಭಂಧಿಸಿದಂತೆ  ಆಫ್ರಿಕಾದ ಗ್ಯಾಂಬಿಯಾ ದೇಶದಿಂದ ಅಥಿತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು.  ಬಿಜಿನೆಸ್ ಗೆ ಸಂಭಂಧಿಸಿದಂತೆ ಮಾತುಕತೆಗಳು ಮುಗಿದಾದ ಮೇಲೆ, ಅವರ ಗ್ಯಾಂಬಿಯಾ ದೇಶದ ಕುರಿತಾಗಿ ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿದೆ. ಅ ಸಂವಾದದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.

ಯೂರೋಪಿನ ವಸಾಹತುಶಾಹಿಗಳು ಪ್ರಪಂಚದ ಹಲವು ದೇಶಗಳನ್ನ ವಸಾಹತುಗಳನ್ನಾಗಿ ಮಾಡಿಕೊಂಡು, ಅಲ್ಲಿ ಸಾರ್ವಭೌಮತ್ವ ಸ್ಥಾಪಿಸಿ, ಅಧಿಕಾರ ನಡೆಸಿದ್ದಲ್ಲದೆ, ಸ್ಥಳೀಯವಾಗಿ ದೊರೆಯುವ ಹೇರಳವಾದ ಸಂಪತ್ತನ್ನ ತಮ್ಮ ದೇಶಗಳಿಗೆ ಸಾಧಿಸಿದ್ದಲ್ಲದೆ, ತಮ್ಮ ಭಾಷೆ, ವಿಚಾರ, ಸಂಸ್ಕೃತಿ ಇತ್ಯಾದಿಗಳನ್ನ ಈ ದೇಶಗಳಲ್ಲಿ ಹೇರಿದ್ದು ನಮಗೆಲ್ಲ ಗೊತ್ತಿರುವ ಇತಿಹಾಸ. ಇದೆಲ್ಲದರ ಜತೆಗೆ ಬ್ರಿಟೀಷರು ಮತ್ತು ಐರೋಪಿನ ರಾಷ್ಟ್ರಗಳ ಕುತಂತ್ರಿತನಕ್ಕೆ ಹಲವಾರು ದೇಶಗಳು ಒಡೆದು ಚೂರಾಗಿವೆ.


ಗ್ಯಾಂಬಿಯಾ ಎನ್ನುವ ರಾಷ್ಟ್ರ ಪಶ್ಚಿಮ ಆಫ್ರಿಕಾದ ಸೆನೆಗಲ್ ಬಳಿ ಇದೆ, ಇದೊಂದು ಚಿಕ್ಕ ಎನ್ ಕ್ಲೇವ್ ರಾಷ್ಟ್ರ, ಈ ದೇಶದ ಸುತ್ತಲೂ ಮತ್ತೊಂದು ದೇಶವಾದ ಸೆನೆಗಲ್ ಆವರಿಸಿದೆ ಎಂದು ಅಥಿತಿಗಳು ಹೇಳಿದರು. ಕುತೂಹಲ ಜಾಸ್ತಿಯಾಯಿತು. ಮಾತುಕತೆ ಮುಂದುವರಿಸಿದೆವು, ಹಲವಾರು ಕುತೂಹಲಕಾರಿ ವಿಷಯಗಳು ಈ ಮಾತುಕತೆಯಲ್ಲಿ ತಿಳಿದುಬಂತು. ಗ್ಯಾಂಬಿಯ ಎಷ್ಟು ಚಿಕ್ಕ ದೇಶ ಎಂದರೆ, ಇದರ ಅಗಲ ಕೇವಲ 30 ಕಿಲೋಮೀಟರ್ ಗಳು ಇದ್ದರೆ, ಉದ್ದ 300 ಕಿಲೋಮೀಟರ್ ಗಳು ಮಾತ್ರ. ಇವರ ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಲ್ ದೇಶದಿಂದ ಸುತ್ತವರಿದಿದ್ದು ಪಶ್ಚಿಮಕ್ಕೆಅಟ್ಲಾಂಟಿಕ್ ಮಹಾಸಾಗರವಿದೆ. 

ಈ ರಾಷ್ಟ್ರ ಎನ್ಕ್ಲೇವ್ ಹೇಗಾಯ್ತು ಅಂತ ಕೇಳಿದ್ದಕ್ಕೆ, ಈ ಪ್ರದೇಶವನ್ನು ಬ್ರಿಟೀಷರು ಆಳಿದ್ದರಂತೆ,  ಸುತ್ತುವರೆದಿರುವ ಸೆನೆಗಲ್ ರಾಷ್ಟ್ರವನ್ನು ಫ್ರೆಂಚರು ಆಳಿದ್ದರು. 1960 ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರ ವಾಯಿತು ನಂತರ 1965ರಲ್ಲಿ ಗ್ಯಾಂಬಿಯಾ ದೇಶ ಬ್ರಿಟಿಷರ ಆಡಳಿತದಿಂದ  ಸ್ವತಂತ್ರ ವಾಯಿತು. ಹೀಗಾಗಿ ಅವೆರೆಡು ಬೇರೆ ಬೇರೆ ದೇಶಗಳಾಗಿ ಹಾಗೆಯೇ ಉಳಿದು ಹೋಗಿವೆ.  ಎರಡು ದೇಶ ಒಂದುಗೂಡಲು ಸಾಧ್ಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ, 1981 ರಲ್ಲಿ ಆ ಪ್ರಯತ್ನ ನಡೆಯಿತು ಆದರೆ ಅದು ಸಫಲವಾಗಲಿಲ್ಲ ಎಂದರು. 

ಬ್ರಿಟೀಷರು ಮತ್ತು ಫ್ರೆಂಚರ ಆಳ್ವಿಕೆಯಿಂದಾಗಿ ಎರಡು ಬೇರೆ ದೇಶಗಳಾಗಿವೆಯೇ ವಿನಃ, ಮೂಲತಃ ಗ್ಯಾಂಬಿಯಾ ಮತ್ತು ಸೆನೆಗಲ್ ದೇಶದ ಜನರುಗಳು ಒಂದೇ ಬುಡಕಟ್ಟಿನವರು, ಸಾಂಸ್ಕೃತಿಕವಾಗಿ ಒಂದೇ ರೀತಿ ಇದ್ದಾರೆ. ಆಚಾರ ವಿಚಾರ ಎಲ್ಲದರಲ್ಲೂ ಹೋಲಿಕೆಯಿದೆ. ಎರಡೂ ಕಡೆ ಸಂಭಂದಿಕರು ಇದ್ದಾರೆ. ಎರಡು ದೇಶಗಳು ಒಂದಾಗಲು, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.ವಿದೆ. ಎರಡು ದೇಶಗಳ ನಡುವೆ ಅಧಿಕೃತ ಭಾಷೆಗಳನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸವಿಲ್ಲ. ಸೆನೆಗಲ್‌ನಲ್ಲಿ ಫ್ರೆಂಚ್ ಮತ್ತು ಗ್ಯಾಂಬಿಯಾದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿದೆ. ಜನರು ಒಂದೇ, ದೇಶೀಯ ಭಾಷೆ ಒಂದೇ, ಆಹಾರವೂ ಒಂದೇ, ಧರ್ಮಗಳು ಒಂದೇ, ಆಚಾರವಿಚಾರವು ಒಂದೇ.
ಈ ದೇಶದ ಮಧ್ಯಭಾಗದಲ್ಲಿ ಗ್ಯಾಂಬಿಯಾ ನದಿ ಹರಿಯುತ್ತದೆ.  ಇಂಗ್ಲಿಷ್ ಇಲ್ಲಿನ ಭಾಷೆ. ಕೃಷಿ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.  ನೆಲಗಡಲೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದನ್ನು ಅತಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಬಂಜುಲ್ (Banjul) ಈ ದೇಶದ ರಾಜಧಾನಿ. 96.4% ಜನ ಇಸ್ಲಾಂ ಅನ್ನು, (Islam) 3.5% ಕ್ರಿಶ್ಚಿಯಾನಿಟಿ (Christianity) ಯನ್ನು ಮತ್ತು 0.1% ಜನರು ಇತರೆ ಧರ್ಮವನ್ನು ಅನುಸರಿಸುತ್ತಾರೆ.

ಇಂಗ್ಲಿಷ್ ಗ್ಯಾಂಬಿಯಾದ ಅಧಿಕೃತ ಭಾಷೆಯಾಗಿದ್ದು ಇದನ್ನು  ಶಿಕ್ಷಣ ಮತ್ತು ಸರ್ಕಾರದ ದಾಖಲೆಗಳಲ್ಲಿ ಬಳಸಲಾಗುತ್ತದೆ. ಇತರ ಭಾಷೆಗಳಲ್ಲಿ ಮಂಡಿಂಕಾ, ವೋಲೋಫ್, ಫುಲಾ, ಸೇರರ್, ಸೋನಿಂಕೆ, ಕ್ರಿಯೋ, ಜೋಲಾ ಮತ್ತು ಇತರ ಸ್ಥಳೀಯ ಭಾಷೆಗಳು ಸಹ ಇಲ್ಲಿ ಉಪಯೋಗದಲ್ಲಿವೆ. ಆಫ್ರೀಕಾದ ಇತರೆ ದೇಶಗಳಲ್ಲಿದ್ದಂತೆ ಫ್ರೆಂಚ್ ಭಾಷೆಯ ಜ್ಞಾನವು ಸಹ ಜನರಿಗೆ ಇದೆ. ದೇಶದ 38% ಜನರು ಮಂಡಿಂಕಾವನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, 21% ಪುಲಾರ್, 18% ವೊಲೊಫ್, 9% ಸೋನಿಂಕೆ, 4.5% ಜೊಲಾ, 2.4% ಸೆರೆರ್, 1.6% ಮಂಜಾಕ್ ಮತ್ತು ಬೈನೌಕ್, ಪೋರ್ಚುಗೀಸ್ ಕ್ರಿಯೋಲ್ 1%, ಮತ್ತು ಇಂಗ್ಲಿಷ್ 0.5%. ಹಲವು ಇತರೆ ಭಾಷೆಗಳನ್ನು ಸಹ ಜನರು  ಮಾತನಾಡುತ್ತಾರೆ.

ಇಲ್ಲಿನ ಸರಾಸರಿ ತಾಪಮಾನವು 29 ° C ಮತ್ತು 34 ° C ನಡುವೆ ಇರುತ್ತದೆ. ವರ್ಷಪೂರ್ತಿ ಇಲ್ಲಿ ಬೇಸಿಗೆ ಅಂತ ಹೇಳಬಹುದು. ಸೂರ್ಯನ ಬಿಸಿಲು ವರ್ಷಪೂರ್ತಿ ಇರುತ್ತದೆ. ಬೇಸಿಗೆಯ  ತಿಂಗಳುಗಳಲ್ಲಿ, ಸೆಖೆ ಜಾಸ್ತಿ, ಆರ್ದ್ರತೆಯ ವಾತಾವರಣ ಜಾಸ್ತಿ. ಮಳೆ ಮತ್ತು ಚಳಿಗಾಲದಲ್ಲಿ,  ಆರ್ದ್ರತೆ ಕಡಿಮೆ ಇರುತ್ತದೆ, ಮಳೆ ಬಂದರೆ ಬಂತು ಇಲ್ಲದೆ ಇದ್ರೆ ಇಲ್ಲ ಎನ್ನಬಹುದು. ಪ್ರವಾಸಿಗರು ಭೇಟಿ ನೀಡಲು ಚಳಿಗಾಲದ ಸಮಯ ಸೂಕ್ತವಾಗಿದೆ. 
ಯುರೋಪಿಯನ್ನರ ಪ್ರಾಬಲ್ಯ:
ಯುರೋಪಿಯನ್ನರು ಇಲ್ಲಿಗೆ ಆಗಮಿಸುವ ಮುಂಚೆ, ಸ್ಥಳೀಯ ರಾಜವಂಶಗಳು ಇಲ್ಲಿ ಆಡಳಿತ ನಡೆಸುತಿದ್ದವು. ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಇಸ್ಲಾಂ ಆಗಮನವಾಗುತ್ತದೆ. ಅಂದಿನ ತಕ್ರೂರ್ ರಾಜ ವಂಶ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಪ್ರಜೆಗಳನ್ನು ಮತಾಂತರಿಸುತ್ತಾರೆ. ಅರೇಬಿಕ್ ಶಾಲೆಗಳನ್ನು ತೆರೆಯಲಾಗುತ್ತದೆ. ಶರಿಯಾ ಕಾನೂನು ಜಾರಿಗೆ ಬಂದು ಇಲ್ಲಿ ಶರಿಯಾ ನ್ಯಾಯಾಲಯ ಆರಂಭಗೊಳ್ಳುತ್ತವೆ. ಕ್ರಿ.ಶ. 1455 ರಲ್ಲಿ, ಪೋರ್ಚುಗೀಸರು ಗ್ಯಾಂಬಿಯಾವನ್ನು ಆಕ್ರಮಿಸುತ್ತಾರೆ. ಇಲ್ಲಿನ ಕಡಲತೀರದಲ್ಲಿ ನೆಲೆ ನಿಂತು ಸಮುದ್ರ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೋರ್ಚುಗೀಸರು ಗ್ಯಾಂಬಿಯಾಗೆ ಪ್ರವೇಶಿಸಿದ ಮೊದಲ ಯುರೋಪಿಯನ್ನರಾಗಿದ್ದರು ಸಹ, ಅಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹವಾದ ವ್ಯಾಪಾರ ವಹಿವಾಟು ಅವರಿಗೆ ನಡೆಸಲಾಗಲಿಲ್ಲ. ಪರಿಣಾಮವಾಗಿ ಇಲ್ಲಿ ಹರಿಯುವ ಗ್ಯಾಂಬಿಯಾ ನದಿಯ ಮೇಲಿನ ವ್ಯಾಪಾರ ವಹಿವಾಟು ನಡೆಸುವ ಹಕ್ಕುಗಳನ್ನು ಇಂಗ್ಲಿಷ್ ವ್ಯಾಪಾರಿಗಳಿಗೆ ಮಾರುತ್ತಾರೆ. ತದನಂತರ ಇಲ್ಲಿನ ಕೆಲ ದ್ವೀಪಗಳನ್ನು ಯುರೋಪಿನ ಕೆಲ ರಾಷ್ಟ್ರಗಳು ಖರೀದಿಸುತ್ತವೆ. 

17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದುದ್ದಕ್ಕೂ, ಸೆನೆಗಲ್ ನದಿ ಮತ್ತು ಗ್ಯಾಂಬಿಯಾ ನದಿಯ ಪ್ರದೇಶಗಳಲ್ಲಿ ರಾಜಕೀಯ ಮತ್ತು ವಾಣಿಜ್ಯ ಪ್ರಾಬಲ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಫ್ರೆಂಚ್ ಸಾಮ್ರಾಜ್ಯವು ನಿರಂತರವಾಗಿ ಹೋರಾಟ ನಡೆಸಿದವು. 1758 ರಲ್ಲಿ ಸೆನೆಗಲ್ ಅನ್ನು ವಶಪಡಿಸಿಕೊಂಡ ನಂತರ ಅಗಸ್ಟಸ್ ಕೆಪ್ಪೆಲ್ ನೇತೃತ್ವದ ಪಡೆ ಗ್ಯಾಂಬಿಯಾವನ್ನು ಆಕ್ರಮಿಸಿತು. 1783ರಲ್ಲಿ ನಡೆದ  ವರ್ಸೈಲ್ಸ್ ಒಪ್ಪಂದ ಪ್ರಕಾರ,  ಗ್ರೇಟ್ ಬ್ರಿಟನ್‌ ಗ್ಯಾಂಬಿಯಾ ನದಿ ಮತ್ತು ಸುತ್ತಲಿನ ಭೂಪ್ರದೇಶ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತದೆ. ಗ್ಯಾಂಬಿಯಾ ನದಿಯ ಉತ್ತರದಲ್ಲಿರುವ ಅಲ್ಬ್ರೆಡಾದಲ್ಲಿ ಒಂದು ಸಣ್ಣ ಎನ್‌ಕ್ಲೇವ್ ಅನ್ನು ಫ್ರೆಂಚರು ಉಳಿಸಿಕೊಳ್ಳುತ್ತಾರೆ.  ಅಂತಿಮವಾಗಿ ಈ ದ್ವೀಪ ಒಳನಾಡನ್ನು 1856 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ನೀಡಲಾಗುತ್ತದೆ.


ಆಫ್ರಿಕಾದ ಗುಲಾಮ ವ್ಯಾಪಾರ:
ಯುರೋಪಿಯನ್ನರು ಆಫ್ರಿಕಾ ಮತ್ತು ಇಂಡಿಯಾ ದಂತಹ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಬಂದವರು ಇಲ್ಲಿ ಮಾಲೀಕರಾಗಿದ್ದಲ್ಲದೆ ಸ್ಥಳೀಯರನ್ನು ತಮ್ಮ ಫಿರಂಗಿ ಮತ್ತು ಬಂದೂಕುಗಳನ್ನು ಜನರ ಮುಂದಿರಿಸಿ ಆಳ್ವಿಕೆ ನಡೆಸಲು ಪ್ರಾರಂಭಿಸಿತ್ತಾರೆ.  ಮೂರ್ನಾಲ್ಕು ದಶಕಗಳ ಅಲ್ಪ ಸಮಯದಲ್ಲಿ ಇಡೀ ಆಫ್ರಿಕಾಖಂಡ ಯೂರೋಪಿಯನ್ನರ ವಸಾಹತುಗಳಾಗಿಬಿಟ್ಟಿತು. ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ವಸಾಹತುಶಾಹಿಗಳು ಆಫ್ರಿಕಾ ದೇಶದ ಅಗಾಧ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಮುಖ್ಯವಾಗಿ ತಾಮ್ರ, ಹತ್ತಿ, ರಬರ್, ಪಾಮ್ ಎಣ್ಣೆ, ಕೋಕೋ, ವಜ್ರ, ಟೀ ಮತ್ತು ಟಿನ್ ಲೋಹ, ಚಿನ್ನ - ಇವುಗಳ ನಿಧಿಯಾಗಿತ್ತು ಆಫ್ರಿಕಾ ಖಂಡ. ಒಂದು ಕೋಟಿಗೂ ಹೆಚ್ಚು ಆಫ್ರಿಕನ್ನರು ಅಲ್ಲೇ ಗುಲಾಮರಾಗಿ ದುಡಿದರು. ಸುಮಾರು ಅಷ್ಟೇ ಜನರು ಬೇರೆ ದೇಶಗಳಿಗೆ ಗುಲಾಮರಾಗಿ ಮಾರಲ್ಪಟ್ಟರು! ಗ್ಯಾಂಬಿಯಾ, ಸೆನೆಗಲ್ ನಂತಹ ರಾಷ್ಟ್ರಗಳು ಸಹ ಹೊರತಾಗಿರಲಿಲ್ಲ. ಸ್ಥಳೀಯರನ್ನು ಯುರೋಪ್ ಅಮೇರಿಕ ಮುಂತಾದ ರಾಷ್ಟ್ರಗಳಿಗೆ ಮಾರಲಾಯಿತು. ಲಕ್ಷಾಂತರ ಜನರನ್ನ ಸ್ಥಳೀಯವಾಗಿ ದುಡಿಸಿಕೊಂಡರು. 

1807 ರಲ್ಲಿ, ಬ್ರಿಟೀಷರು ತಮ್ಮ  ಸಾಮ್ರಾಜ್ಯದಾದ್ಯಂತ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿದರು. ಆದರೂ ವ್ಯಾಪಾರಿಗಳು ಕದ್ದು ಮುಚ್ಚಿ ಗುಲಾಮರ ವ್ಯಾಪಾರವನ್ನು ಮಾಡುತಿದ್ದರು. ಅಟ್ಲಾಂಟಿಕ್‌ ಸಮುದ್ರದಲ್ಲಿ ಹಡಗುಗಳಲ್ಲಿ  ಜನರನ್ನು ಸಾಗಿಸುತಿದ್ದರು. ಇಂತಹ ಹಡಗುಗಳನ್ನ ಬ್ರಿಟೀಷರ ರಾಯಲ್ ನೇವಿಯವರು ತಡೆದು, ತಪಾಸಣೆ ನಡೆಸಿ  ಗುಲಾಮರ ಹಡಗುಗಳನ್ನು ಗ್ಯಾಂಬಿಯಾಕ್ಕೆ ಮರಳಿ ಕಳುಹಿಸುತಿದ್ದರಂತೆ. ಬ್ರಿಟಿಷರು 1816 ರಲ್ಲಿ ಬಾಥರ್ಸ್ಟ್ (ಈಗ ಬಂಜುಲ್)ನಲ್ಲಿ ಮಿಲಿಟರಿ ಪೋಸ್ಟ್ ಅನ್ನು ಸ್ಥಾಪಿಸಿ, ಗುಲಾಮರ ಸಾಗಾಟವನ್ನು ತಡೆಹಿಡಿಯಲು ಪ್ರಯತ್ನಿಸಿದರು. ಹಡಗುಗಳಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿ ಮ್ಯಾಕ್‌ಕಾರ್ಥಿ ಎನ್ನುವ ದ್ವೀಪದಲ್ಲಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು.

ಗ್ಯಾಂಬಿಯಾಗೇ 1965ರಲ್ಲಿ ಸ್ವಾತಂತ್ರ್ಯ:
1960ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರವಾಗಿತ್ತು,  ಹೀಗಾಗಿ, ಬ್ರಿಟೀಷರು ತಾವು ಆಳುತಿದ್ದ ಗ್ಯಾಂಬಿಯಾ ದೇಶಕ್ಕೂ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯವನ್ನು ನೀಡುತ್ತಾರೆ. 1965 ರಿಂದ 1994 ರವರೆಗೆ, ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ದವ್ಡಾ ಜವರ (Dawda Jawara) ಅವರು ದೇಶವನ್ನು ಆಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಪಕ್ಷವಿಲ್ಲದೆ ಎಲ್ಲಾ ಪಕ್ಷದವರು ಸೇರಿ (multi-party liberal democracy) ಆಳ್ವಿಕೆ ನಡೆಸುತ್ತಾರೆ. ಈ ಸಮಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. 

1981 ಆಂತರಿಕ ದಂಗೆ:
ಪ್ರಮುಖ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ದೇಶದಲ್ಲಿ ದುರ್ಬಲಗೊಂಡ ಆರ್ಥಿಕತೆ ಇದರಿಂದ ಬೇಸತ್ತ ಜನತೆಯಿಂದ 29 ಜುಲೈ 1981 ರಂದು ಆಂತರಿಕ ದಂಗೆ ನಡೆಯುತ್ತದೆ.  ಅಧ್ಯಕ್ಷ ಜವಾರಾ ಅವರು ಪಕ್ಕದ ರಾಷ್ಟ್ರ ವಾದ ಸೆನೆಗಲ್ ನ ಮಿಲಿಟರಿ ಸಹಾಯವನ್ನು ಕೋರುತ್ತಾರೆ. ಆಗಸ್ಟ್ 6 1981ರಲ್ಲಿ , ಸುಮಾರು 2,700 ಸೆನೆಗಲೀಸ್ ಸೈನಿಕರನ್ನು  ನಿಯೋಜಿಸಲಾಗುತ್ತದೆ, ಬಂಡಾಯವೆದ್ದ ಪಡೆಯನ್ನು ಸೆನೆಗಲ್ ಸೈನಿಕರ ಜತೆಗೂಡಿ ಸೋಲಿಸಲಾಗುತ್ತದೆ, ದಂಗೆ ಮತ್ತು ನಂತರದ ಹಿಂಸಾಚಾರದ ಸಮಯದಲ್ಲಿ 500 ರಿಂದ 800 ಜನರು ಕೊಲ್ಲಲ್ಪಡುತ್ತಾರೆ.  ನಂತರ, ಸೆನೆಗಲ್ ಮತ್ತು ದಿ ಗ್ಯಾಂಬಿಯಾ ರಾಷ್ಟ್ರಗಳು, ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕುತ್ತವೆ. ಸೆನೆಗಾಂಬಿಯಾ ಒಕ್ಕೂಟ ವೇರ್ಪಡುತ್ತದೆ. ಒಂದೇ ಮಿಲಿಟರಿ ಆರ್ಮಿ, ದೇಶದ ಆರ್ಥಿಕತೆ ಬಲನೀಡುವುದು, ಎರಡು ರಾಷ್ಟ್ರಗಳಿಗೂ ಒಂದೇ ಕರೆನ್ಸಿ ನೋಟು ಮತ್ತು ನಾಣ್ಯ ಬಳಸುವ, ಹೀಗೆ ಹಲವಾರು ವಿಷಯಗಳ ಕುರಿತು ಒಪ್ಪಂದ ವೇರ್ಪಡುತ್ತದೆ.  ಕೇವಲ ಏಳು ವರ್ಷಗಳ ನಂತರ, ಗ್ಯಾಂಬಿಯಾ 1989 ರಲ್ಲಿ ಒಕ್ಕೂಟದಿಂದ ಶಾಶ್ವತವಾಗಿ ಹೊರಬಂದು, ಉಭಯ ರಾಷ್ಟ್ರಗಳ ಒಪ್ಪಂದ ಮುರಿದು ಬೀಳುತ್ತದೆ..

1994 ಮಿಲಿಟರಿ ದಂಗೆ:
1994 ರಲ್ಲಿ, ಮಿಲಿಟರಿ ದಂಗೆ ನಡೆಯುತ್ತದೆ. ಆರ್ಮ್ಡ್ ಫೋರ್ಸಸ್ ಪ್ರಾವಿಶನಲ್ ರೂಲಿಂಗ್ ಕೌನ್ಸಿಲ್ (AFPRC) ಎಂದು ಕರೆಯಲಾಗುವ "ಮಿಲಿಟರಿ ಅಧಿಕಾರಿಗಳ ಆಯೋಗ" ಅಧಿಕಾರಕ್ಕೆ ಬರುತ್ತದೆ.  ಎರಡು ವರ್ಷಗಳ ನೇರ ಆಡಳಿತದ ನಂತರ, ಹೊಸ ಸಂವಿಧಾನವನ್ನು ಬರೆಯಲಾಯಿತು.  1996 ರಲ್ಲಿ, AFPRC ನ ನಾಯಕ ಯಾಹ್ಯಾ ಜಮ್ಮೆ (Yahya Jammeh) ಅಧ್ಯಕ್ಷರಾಗಿ ಆಯ್ಕೆಯಾಗಿ 2016 ರ ಚುನಾವಣೆಯವರೆಗೂ ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಚುನಾವಣೆಯಲ್ಲಿ ಆಡಮಾ ಬಾರೋ (Adama Barrow) ವಿಜಯಿಯಾಗಿ ಇಲ್ಲಿಯವರೆಗೂ (2024) ಅವರೇ ಅಧಿಕಾರ ನಡೆಸುತಿದ್ದಾರೆ.  

ಪ್ರಮುಖ ಪ್ರವಾಸಿ ತಾಣಗಳು:
1. ಬಂಜುಲ್ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ (Banjul Roman Catholic Cathedral), 2. ಕಚಿಕಲ್ಲಿ ಕ್ರೊಕೊಡೈಲ್ ಪೂಲ್ (Kachikally Crocodile Pool): ಮೊಸಳೆ ಕೊಳ, 3. ಬಿಜಿಲೋ ರಾಷ್ಟ್ರೀಯ ಉದ್ಯಾನವನ (Bijilo National Park), 4. ಬಿಜಿಲೋ ಮಂಕಿ ಪಾರ್ಕ್ (Bijilo Monkey Park), 5. ಗ್ಯಾಂಬಿ ನದಿ (River Gambie), 6. ಬಿಜಿಲೋ ಫಾರೆಸ್ಟ್ ಪಾರ್ಕ್ (Bijilo Forest Park), 7. ಸ್ಟೋನ್ ಸರ್ಕಲ್ಸ್ ಆಫ್ ಗ್ಯಾಂಬಿಯಾ (Stone Circles of Gambia), 8. ಗ್ಯಾಂಬಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum of the Gambia), 9. ಆರ್ಕ್  22 (Arch 22) ಕಮಾನು, 10. ಬಕೌ ಕ್ರಾಫ್ಟ್ ಮಾರುಕಟ್ಟೆ (Bakau craft market)


ಭಾರತದೊಂದಿಗಿನ ಭಾಂದವ್ಯ:
ಗ್ಯಾಂಬಿಯಾ ಮತ್ತು ಭಾರತದೊಂದಿಗಿನ ಭಾಂದವ್ಯ ಉತ್ತಮವಾಗಿದೆ. ಎರಡೂ ರಾಷ್ಟ್ರಗಳು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಭಾವನಾತ್ಮಕವಾಗಿ ಭಾರತೀಯರ ಕುರಿತು ಇಲ್ಲಿನ ಜನರಿಗೆ ಒಲವಿದೆ. ಭಾರತದಿಂದ ಹಲವಾರು ಸಾಮಗ್ರಿಗಳನ್ನು ಇಲ್ಲಿಗೆ ರಫ್ತು ಮಾಡಲಾಗುತ್ತಿದೆ. ಗ್ಯಾಂಬಿಯಾಕ್ಕೆ ಭಾರತ ಆರ್ಥಿಕ ಸಹಾಯ ಸಹ ನೀಡಿದೆ. 

ಗಾಂಬಿಯಾಕ್ಕೆ ಭಾರತವು ರಫ್ತು ಮಾಡುವ ಪ್ರಮುಖ ಸರಕುಗಳೆಂದರೆ ಹತ್ತಿ ನೂಲು, ಬಟ್ಟೆಗಳು, ಮೇಕಪ್‌ ಸಾಧನಗಳು , ಸೌಂದರ್ಯವರ್ಧಕಗಳು, ಶೌಚಾಲಯ ಸಾಮಗ್ರಿಗಳು, ಔಷಧಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಗ್ಯಾಂಬಿಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳೆಂದರೆ ಕಚ್ಚಾ ಗೋಡಂಬಿ ಮತ್ತು ಹತ್ತಿ.

ಸುಮಾರು 3000 ಭಾರತೀಯ ನಾಗರಿಕರು (2023 ರ ಹೊತ್ತಿಗೆ, ) ಗ್ಯಾಂಬಿಯಾದಲ್ಲಿ ವಾಸಿಸುತಿದ್ದು, ಅವರು ಪ್ರಾಥಮಿಕವಾಗಿ ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರ ಸೇರಿದಂತೆ ಖಾಸಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶಕ್ಕೆ ನಮ್ಮ ಭಾರತದ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾದಿಂದ ಸರಬರಾಜು ಮಾಡಲಾಗಿದ್ದ ಕೆಮ್ಮು-ಶೀತ ಸಿರಪ್ ಸೇವಿಸಿದ  66 ಮಕ್ಕಳ ಸಾವಾಗಿತ್ತು. ಆಗ ಗ್ಯಾಂಬಿಯಾ ದೇಶದ ಬಗ್ಗೆ ನಮ್ಮ ಭಾರತದ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. 

ಭಾರತದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 700ಕ್ಕೂ ಹೆಚ್ಚು ಗ್ಯಾಂಬಿಯನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿರುವ ಗ್ಯಾಂಬಿಯಾದ ಹೈ ಕಮಿಷನರ್ H.E ಮುಸ್ತಫಾ ಜವಾರ ಅವರು ಇತ್ತೀಚೆಗೆ, ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದೊಂದಿಗೆ ಎಂಒಯುಗೆ ಸಹಿ ಹಾಕಿದರು. 28 ​​ಗ್ಯಾಂಬಿಯನ್ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲಿದ್ದಾರೆ.




Click below headings