ಶನಿವಾರ, ಫೆಬ್ರವರಿ 7, 2026

ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

    ವಿದೇಶದಲ್ಲಿ ಉದ್ಯೋಗಕ್ಕಾಗಿ ನೆಲೆನಿಂತಾಗ, ಮಕ್ಕಳು ಮಾತೃಭಾಷೆ ಕಲಿಕೆಯಿಂದ ವಂಚಿತರಾಗುವುದು ಸಹಜ. ಮನೆಯಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೆ, ಕನ್ನಡ ಮಾತನಾಡುವುದನ್ನ ಸಹಜವಾಗಿ ಕಲಿಯಬಹುದು, ಆದರೂ  ಕನ್ನಡ ಓದುವುದು ಮತ್ತು ಬರೆಯುವುದರಿಂದ ಮಕ್ಕಳು ವಂಚಿತರಾಗುವ ಅವಕಾಶವೇ ಹೆಚ್ಚು. ಇಂತಹ ಸಂಧರ್ಭಗಳಲ್ಲಿ ಹೆತ್ತವರು ಆಸಕ್ತಿಯಿಂದ ಮಕ್ಕಳಿಗೆ ಕನ್ನಡ ಓದುವುದು ಮತ್ತು ಬರೆಯುವುದನ್ನ ಕಲಿಸಿದರೆ ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನೆಲೆನಿಂತಾಗ ಕನ್ನಡ ಉಪಯೋಗಕ್ಕೆ ಬರುವ ಸಾದ್ಯತೆ ಇರುತ್ತದೆ.

    ಮಸ್ಕತ್ ನ  ಶಾಲೆಗಳಲ್ಲಿ ಇಂಗ್ಲೀಶ್, ಹಿಂದಿ, ಸಂಸ್ಕೃತ ಮತ್ತು ಅರೇಬಿಕ್ ಭಾಷೆಯ ಜತೆಗೆ ಕೆಲವೆಡೆ, ಫ್ರೆಂಚ್ ಮತ್ತು ಸ್ಪಾನಿಶ್ ಭಾಷೆಯನ್ನು ಕಲಿಸುತ್ತಾರೆ. ಆದರೆ ಮಸ್ಕತ್ ನಲ್ಲಿರುವ ಭಾರತೀಯ ಶಾಲೆಗಳಲ್ಲಿ ಕನ್ನಡಿಗ ವಿಧ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಿರುವುದರಿಂದ, ಇಲ್ಲಿನ ಶಾಲೆಗಳಲ್ಲಿ ಕನ್ನಡ ಕಲಿಸಲು ಆಡಳಿತ ಮಂಡಳಿಗಳು ಆಸಕ್ತಿ ತೋರುವುದಿಲ್ಲ. ಈ ಸಮಸ್ಯೆಯನ್ನು ಮನಗಂಡ ಆಸಕ್ತ ಕನ್ನಡ ಅಭಿಮಾನಿಗಳು ಸುಮಾರು 2006 ನೇ ಇಸವಿಯಲ್ಲಿ ಕನ್ನಡ ಶಾಲೆಯೊಂದನ್ನು ಪ್ರಾರಂಭಿಸಿ  ಮಕ್ಕಳಿಗಾಗಿ ಕನ್ನಡ ಕಲಿಸುವ ತರಗತಿಗಳನ್ನು ನಡೆಸುತಿದ್ದಾರೆ. ಇಲ್ಲಿ ಪೋಷಕರೇ ಶಿಕ್ಷಕರು. ಯಾವುದೇ ಶುಲ್ಕ ಮತ್ತು ಸಂಭಾವನೆಯಿಲ್ಲದೆ ಕೇವಲ ಸೇವಾ ಮನೋಭಾವನೆ ಯಿಂದ ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ಕನ್ನಡ ಕಲಿಸುತಿದ್ದಾರೆ. ಈ ವ್ಯವಸ್ಥೆಯಿಂದ ಕನ್ನಡ ಕಲಿತ ಮಕ್ಕಳು, ಮುಂದಿನ ದಿನಗಳಲ್ಲಿ ಕನ್ನಡನಾಡಿನಲ್ಲಿ ಭಾಷಾ ಸಮಸ್ಯೆಯನ್ನು ಎದುರಿಸುವುದಿಲ್ಲ, 

    2006 ನೇ ಇಸವಿಯಲ್ಲಿ ಶ್ರೀ ಯೋಗಾನಂದ ಹೊಳಲ್ಕೆರೆ ಇವರ ಮುಂದಾಳತ್ವದಲ್ಲಿ ಕನ್ನಡ ತರಗತಿಗಳಿಗೆ ಚಾಲನೆ ನೀಡಲಾಯಿತು. ಪ್ರಥಮ ವರ್ಷ ಸುಮಾರು ನೂರು ವಿದ್ಯಾರ್ಥಿಗಳು ಕನ್ನಡ ಕಲಿಯಲು ನೊಂದಾಯಿಸಿದ್ದರು. ಅಂದು ಪ್ರಾರಂಭಿಸಲಾಗಿದ್ದ ಶಾಲೆಯಲ್ಲಿ ಇಂದಿಗೆ ಸಾವಿರಾರು ಮಕ್ಕಳು ಕನ್ನಡ ಕಲಿತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. 

    ಕಡಲಾಚೆಯ ಮಸ್ಕತ್‌ನಲ್ಲಿ ಕನ್ನಡದ ದೀಪವನ್ನು ಬೆಳಗಿಸುತ್ತಿರುವ ನಮ್ಮ ಹೆಮ್ಮೆಯ ಶಿಕ್ಷಕಿಯರ ಸೇವೆಯನ್ನು ಗುರುತಿಸಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ‘ಗಡಿನಾಡ ಚೇತನ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅತ್ಯಂತ ಶ್ಲಾಘನೀಯ. "ಎಲ್ಲೆ ಇರು ಹೇಗೆ ಇರು  ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ಅಕ್ಷರಶಃ ಪಾಲಿಸುತ್ತಿರುವ ಮಸ್ಕತ್‌ನ ಅನಿವಾಸಿ ಕನ್ನಡಿಗರ ಸಾಧನೆ ಇಂದು ಸಮಸ್ತ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ. 


*ಎರಡು ದಶಕಗಳ ಅವಿರತ ಕಾಯಕ*

ತಾಯ್ನಾಡಿನಿಂದ ಸಾವಿರಾರು ಮೈಲಿ ದೂರವಿದ್ದರೂ, ಕನ್ನಡದ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಮಸ್ಕತ್‌ನ ಕನ್ನಡ ಶಾಲೆಯೇ ಸಾಕ್ಷಿ. ಕಳೆದ ಎರಡು ದಶಕಗಳಿಂದ ಯಾವುದೇ ಅಡೆತಡೆಯಿಲ್ಲದೆ, ನಿರಂತರವಾಗಿ ಇಲ್ಲಿನ ಅನಿವಾಸಿ ಕನ್ನಡಿಗ ಮಕ್ಕಳಿಗೆ ಕನ್ನಡವನ್ನು ಕಲಿಸಲಾಗುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ಮಾತೃಭಾಷೆ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಪರದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ 'ಅ ಆ ಇ ಈ' ಕಲಿಸಿ, ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುವ ಈ ಕಾರ್ಯ ನಿಜಕ್ಕೂ ಒಂದು ತಪಸ್ಸು.


*ಪ್ರಚಾರದ ಹಂಗಿಲ್ಲದ ನಿಸ್ವಾರ್ಥ ಸೇವೆ.*

ಈ ಶಾಲೆಯ ಮತ್ತು ಇಲ್ಲಿನ ಶಿಕ್ಷಕವೃಂದದ ವಿಶೇಷತೆಯೆಂದರೆ ಅವರ 'ನಿಸ್ವಾರ್ಥ ಮನೋಭಾವ'. ಯಾವುದೇ ಪ್ರಚಾರದ ಹಂಗಿಲ್ಲದೆ, ಹಣದ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ಕೇವಲ ಕನ್ನಡದ ಮೇಲಿನ ಪ್ರೀತಿಯಿಂದ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಸ್ಕತ್‌ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೇ ಸ್ವಯಂಪ್ರೇರಿತರಾಗಿ ಶಿಕ್ಷಕರಾಗಿ ದುಡಿಯುತ್ತಿರುವುದು ಅವರ ಭಾಷಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ.


*ಗಡಿನಾಡ ಚೇತನ ಪ್ರಶಸ್ತಿಯ ಮೆರುಗು*

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಇಂತಹ ಎಲೆಮರೆ ಕಾಯಿಯಂತಿದ್ದ ಸಾಧನೆಯನ್ನು ಗುರುತಿಸಿರುವುದು ಸ್ವಾಗತಾರ್ಹ. ಶಿಕ್ಷಕಿಯರಿಗೆ ನೀಡಿರುವ  *‘ಗಡಿನಾಡ ಚೇತನ ಪ್ರಶಸ್ತಿ’* ಯು ಕೇವಲ ಒಬ್ಬ ವ್ಯಕ್ತಿಗೆ ಸಿಕ್ಕ ಗೌರವವಲ್ಲ, ಬದಲಾಗಿ ಇದು ಇಡೀ ಮಸ್ಕತ್ ಕನ್ನಡಿಗರ ಸಮುದಾಯಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕನ್ನಡ ಸೇವೆಯನ್ನು ಮಾಡಲು ಪ್ರೇರಣೆ ನೀಡಲಿದೆ.

✍️ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings