ಶನಿವಾರ, ಮಾರ್ಚ್ 4, 2023

ವ್ಲಾಡ್ ದ ಇಂಪೇಲರ್"



ಕೆಲ ರಾಜ ಮಹಾರಾಜರುಗಳು ಪ್ರಜೆಗಳ ಯೋಗಕ್ಷೇಮಕ್ಕಾಗಿ ಅವರು ನೀಡಿದ ಒಳ್ಳೆಯ ಆಡಳಿತದಿಂದ ಇತಿಹಾಸದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದರೆ, ಕೆಲವರು ಪ್ರಜೆಗಳು ಸೇರಿದಂತೆ ವೈರಿಗಳನ್ನು ಕ್ರೂರವಾಗಿ ನಡೆಸಿಕೊಂಡಿದ್ದಕ್ಕೆ ಸಹ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ಕ್ರೂರತೆ ಎನ್ನುವುದು ಅಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಶತ್ರುಗಳ ಸಂಹಾರ ಮಾಡುವುದಕ್ಕೆ ಮುಂಚೆ ಚಿತ್ರ ಹಿಂಸೆ ನೀಡಿ ಅವರನ್ನು ಕೊಲ್ಲುವುದರಿಂದ, ತಮ್ಮ ವಿರೋಧಿಗಳಿಗೆ ಸಂದೇಶವನ್ನು ಕೊಡುತಿದ್ದರು. ಮತ್ತೊಮ್ಮೆ ನಮ್ಮ ತಂಟೆಗೆ ಯಾರೂ ಬರಬಾರದು ಎನ್ನುವುದು ಅವರ ಉದ್ದೇಶವಾಗಿರುತಿತ್ತು.

 

ಮಧುರೈ ಯನ್ನು ಆಳುತಿದ್ದ ಸುಲ್ತಾನ್ ಜಿಯಾಸುದ್ದೀನ್, ಹೊಯ್ಸಳರ ಕೊನೆಯ ದೊರೆ 80 ವರ್ಷದ ಮೂರನೇ ವೀರ ಬಲ್ಲಾಳರನ್ನು ಬಂಧಿಸಿ ಮಧುರೈ ಮೀನಾಕ್ಷಿ ದೇವಸ್ಥಾನದ ಹೊರಗಿನ ಕಂಬಕ್ಕೆ ನೇತು ಹಾಕಿ ಜೀವಂತವಾಗಿರುವಾಗಲೇ ಮೈಮೇಲಿನ ಚರ್ಮಸುಲಿದಿದ್ದರಂತೆ, ಅದೇ ಸ್ಥಿತಿಯಲ್ಲಿ ಮರಣ ಹೊಂದಿದ ನಂತರ ಶವವನ್ನು ತಿಂಗಳುಗಳವರೆಗೂ ನೇತು ಹಾಕಿದ್ದರೆಂದು ಅರಬ್ ಪ್ರವಾಸಿ ಇಬಿನ್ ಬಟೂಟ ದಾಖಲಿಸಿದ್ದಾನೆ.  ಇನ್ನೊಂದು ಘೋರ ಘಟನೆ ಶಿವಾಜಿಯ ಪುತ್ರ ಸಂಭಾಜಿಯದ್ದು. ಔರಂಗ ಜೇಬ್, ಸಂಭಾಜಿಯನ್ನು ಸೆರೆ ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಿ ಅವನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಯಲ್ಲಿ ಬಿಸಾಕುತ್ತಾನೆ. ಇಂತಹ ಹಲವಾರು ಘಟನೆಗಳು ಭಾರತದಲ್ಲಿ ನಡೆದಿವೆ.

 

ಆದರೆ ರೊಮೇನಿಯಾದ ದೊರೆ ಪ್ರಿನ್ಸ್ ವ್ಲಾಡ್ -3 ನಷ್ಟು ಕ್ರೂರತನವನ್ನು, ಪ್ರಪಂಚದ ಯಾವ ದೊರೆಯೂ ಬಹುಶಃ ಮೆರೆದಿರಲಾರ. ಅಷ್ಟೊಂದು ಕ್ರೂರಿಯಾಗಿದ್ದ ಅವನು. ಸುಮಾರು 80000 ರಿಂದ 100000 ಜನರನ್ನು ಅವನು ಸಾಯಿಸಿದ ಎಂದು ಹೇಳಲಾಗುತ್ತಿದೆ. "Vlad the Impaler" ಎನ್ನುವ ಅನ್ವರ್ಥನಾಮ ಅವನಿಗೆ ನೀಡಲಾಗಿತ್ತು. ಹಾಗೆಯೇ ಡ್ರಾಕುಲಾ ಎನ್ನುವ ಹೆಸರು ಸಹ ಜನಜನಿತವಾಗಿತ್ತು. Impaler ಅಂದರೆ ಶೂಲಕ್ಕೇರಿಸುವವ ಎಂದು ಅರ್ಥ. ಅಂತಿಂಥ ಶೂಲ ಅಲ್ಲ ಅದು, ನಮ್ಮ ಕ್ರಿಕೆಟ್ ಆಟದಲ್ಲಿ ಬಳಸುವ ವಿಕೆಟ್ ಮಾದರಿಯದ್ದು. ವಿಕೆಟ್ ಗಿಂತ ದಪ್ಪ ಮತ್ತು ಎತ್ತರ ಆರು ಅಡಿಗಿಂತಲೂ ಜಾಸ್ತಿಯಿರುತಿತ್ತು. ಶತ್ರುಗಳನ್ನ ಕೈಕಾಲು ಕಟ್ಟಿ ಮೇಜಿನ ಮೇಲೆ ಬೋರಲಾಗಿ ಮಲಗಿಸಿ ಅವರ ಗುದದ್ವಾರದಲ್ಲಿ ಈ ಶೂಲವನ್ನು ಏರಿಸಿ ಎದೆಯ ಭಾಗದಿಂದ ಆಚೆ ಬರುವಂತೆ ಹಿಂಬದಿಯಿಂದ ಹೊಡೆಯುತಿದ್ದರು. ನಂತರ ಆ ದೇಹದ ಸಮೇತ ಶೂಲವನ್ನು ರಸ್ತೆಯ ಬದಿಗಳಲ್ಲಿ ನೆಡುತಿದ್ದರು. ರಸ್ತೆಯಲ್ಲಿ ಓಡಾಡುವವರು, ಆ ದೇಹಗಳನ್ನು ನೋಡಿ ದೊರೆ ವ್ಲಾಡ್ ನನ್ನು ಕೆಣಕುವ ಪ್ರಯತ್ನವನ್ನು ಯಾರು ಮಾಡಬಾರದು ಎನ್ನುವ ಸಂದೇಶವನ್ನು ರವಾನಿಸುತಿದ್ದ.

 


ವ್ಲಾಡ್ ಹುಟ್ಟಿದ್ದು ರೊಮೇನಿಯಾದ ದೇಶದ ಅಂದಿನ ವಲ್ಲಾಚಿಯಾದಲ್ಲಿ. ಈ ವಲ್ಲಾಚಿಯಾ ಪ್ರಾಂತ್ಯದ ಉತ್ತರಕ್ಕೆ ಕ್ರಿಶ್ಚಿಯನ್ನರು ಆಳುತಿದ್ದ ಯುರೋಪ್ ರಾಷ್ಟ್ರಗಳಿದ್ದವು. ಇದರ ದಕ್ಷಿಣಕ್ಕೆ ಮುಸ್ಲಿಂ ಒಟ್ಟೋಮನ್ ಗಳು ಆಳುತಿದ್ದ ತುರ್ಕಿರಾಷ್ಟ್ರವಿತ್ತು. ಈ ವಲ್ಲಾಚಿಯಾ ಪ್ರಾಂತ್ಯವು ಮಧ್ಯದಲ್ಲಿದ್ದರಿಂದ ಪದೇ ಪದೇ ಯುದ್ದಗಳಾಗುತಿದ್ದವು. ಒಟ್ಟೋಮನ್ ಸಾಮ್ರಾಜ್ಯವನ್ನು ಯುರೋಪ್ ನವರೆಗೂ ವಿಸ್ತರಿಸುವ ಆಕಾಂಕ್ಷೆಗೆ ವಲ್ಲಾಚಿಯಾದಲ್ಲಿನ ಆಡಳಿತಗಾರರು ಅಡ್ಡಿಯಾಗುತಿದ್ದರು. ವಲ್ಲಾಚಿಯಾದ ಆಡಳಿತಗಾರರಿಗೆ ಯುರೋಪ್ ನ ಹಲವಾರು ರಾಜ ಮನೆತನಗಳು ಬೆಂಬಲಕ್ಕೆ ನಿಲ್ಲುತಿದ್ದರು. 

ತುರ್ಕಿಯ ಒಟ್ಟೋಮನ್ ಸುಲ್ತಾನ್, ವಲ್ಲಾಚಿಯ ಸೇರಿದಂತೆ ಕಾನ್ ಸ್ಟಾಂಟಿನೋಪಲ್ ಮೇಲೆ ನಿಯಂತ್ರಣ ಹೊಂದಲು ಬಯಸಿದ್ದ. ಒಟ್ಟೋಮನ್ ಸೈನ್ಯ ಬಹಳ ದೊಡ್ಡದಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅವರು ಹೊಂದಿದ್ದರು. ಪ್ರಬಲರಾಗಿದ್ದ ಅವರು ದಿನೇ ದಿನೇ ಪ್ರವರ್ಧಮಾನಕ್ಕೆ ಬರುತಿದ್ದರು. ಇಂತಹ ಬಲಾಡ್ಯ ತುರ್ಕಿ ಸೈನ್ಯದ ಮುಂದೆ ವಲ್ಲಾಚಿಯಾ ಏನೂ ಅಲ್ಲ. ಕ್ರಿ.ಶ 1442 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ್ ಮುರಾದ್ II ರೊಂದಿಗಿನ ರಾಜತಾಂತ್ರಿಕ ಸಭೆಗೆ ವ್ಲಾಡ್ II ಅವರನ್ನು ಕರೆಯುತ್ತಾರೆ. ಮಾತುಕತೆಗೆ ಅವರು ತಮ್ಮ ಚಿಕ್ಕ ಮಕ್ಕಳಾದ ವ್ಲಾಡ್ III ಮತ್ತು ರಾಡು ಅವರನ್ನು ಕರೆದು ಕೊಂಡು ಹೋಗುತ್ತಾರೆ. ಆದರೆ ಹೆಸರಿಗೆ ಮಾತ್ರ ರಾಜತಾಂತ್ರಿಕ ಸಭೆ. ವಾಸ್ತವವಾಗಿ ಅದೊಂದು ವ್ಯೂಹ ವಾಗಿತ್ತು. ಮಾತುಕತೆ ಫಲಪ್ರದವಾಗುವುದಿಲ್ಲ. ಈ ಸಂಧರ್ಭದಲ್ಲಿ ಸಭೆಗೆ ಬಂದ ಮೂವರನ್ನು ಸುಲ್ತಾನ್ ಬಂಧಿಸುತ್ತಾನೆ.

ಬಿಡುಗಡೆ ಯಾಗಬೇಕೆಂದರೆ, ತಮ್ಮ ಅಡಿಯಾಳಾಗಿರಬೇಕೆಂದು ಷರತ್ತು ವಿಧಿಸಲಾಗುತ್ತದೆ. ಷರತ್ತಿಗೆ ಬದ್ದರಾಗಿರಬೇಕೆಂದರೆ, ತನ್ನ ಮಕ್ಕಳನ್ನು ಒತ್ತೆಯಾಳಾಗಿಡಬೇಕು. ಇತ್ತ ಬೇರೆ ವಿಧಿಯಿಲ್ಲದೆ ಹಿರಿಯ ವ್ಲಾಡ್ II ತನ್ನ ಮಕ್ಕಳನ್ನು ಒತ್ತೆಇಟ್ಟು ಷರತ್ತಿನಡಿಯಲ್ಲಿ ತಾನು ಬಿಡುಗಡೆಯಾಗಿ ವಲ್ಲಾಚಿಯಾಗೆ ಮರಳುತ್ತಾನೆ.

 

ಒಟ್ಟೋಮನ್ನರ ಒತ್ತೆಯಾಳಾಗಿ ಯುವರಾಜ ವ್ಲಾಡ್ III ಮತ್ತು ಅವನ ಕಿರಿಯ ಸಹೋದರ ರಾಡು ಇರುತ್ತಾರೆ. ಸುಲ್ತಾನರು ಅವರನ್ನು ಕೇವಲ ಬಂಧಿಸುವುದಷ್ಟೇ ಅಲ್ಲ ಅವರಿಗೆ ಸೂಕ್ತ ಶಿಕ್ಷಣವನ್ನು ಕೊಡುತ್ತಾರೆ. ಕಿರಿಯ ಸಹೋದರ ರಾಡುವಿಗೆ ವಿಜ್ಞಾನ, ತತ್ವಶಾಸ್ತ್ರ ಮತ್ತು ಕಲೆಯನ್ನು ಕಲಿಸುತ್ತಾರೆ  ವ್ಲಾಡ್ III ಗೆ ಕುದುರೆ ಸವಾರಿ, ಯುದ್ದದ ರಣತಂತ್ರಗಳು, ಸೈನ್ಯದಲ್ಲಿ ಹೋರಾಡುವ ವಿಧಾನಗಳನ್ನು ಕಲಿಸುತ್ತಾರೆ.

 

ಆದರೆ ವಲ್ಲಾಚಿಯಾದಲ್ಲಿನ ನಂತರದ ಪರಿಸ್ಥಿತಿ ಭಯಂಕರವಾಗುತ್ತದೆ. ಸ್ಥಳೀಯ ಸೇನಾಧಿಕಾರಿಗಳು  (ಬೋಯಾರ್‌ಗಳು) ದುರ್ಬಲನಾಗಿದ್ದ ವ್ಲಾಡ್ II ರನ್ನು ವಲ್ಲಾಚಿಯಾದ ಆಡಳಿತದದಿಂದ ಕಿತ್ತೊಗೆಯುವುದಷ್ಟೇ ಅಲ್ಲದೆ ಕ್ರಿ.ಶ. 1447 ರಲ್ಲಿ ವಲ್ಲಾಚಿಯಾದ ಬಾಲ್ಟೆನಿ ಬಳಿ ಅವರನ್ನು ಕೊಲ್ಲುತ್ತಾರೆ.  ವ್ಲಾಡ್‌ನ III ಹಿರಿಯ ಸಹೋದರ ಮಿರ್ಸಿಯಾ ರನ್ನು ಚಿತ್ರಹಿಂಸೆಗೊಳಗಾಗಿಸಿ, ಎರಡು ಕಣ್ಣುಗಳನ್ನು ಕಿತ್ತು ಕುರುಡರನ್ನಾಗಿ ಮಾಡಿ ಜೀವಂತ ಸಮಾಧಿ ಮಾಡುತ್ತಾರೆ. ಈ ವಿಷಯ ವ್ಲಾಡ್‌ನ III ಕಿವಿಗೆ ಬಿದ್ದೊಡನೆ, ಅವನು ವ್ಯಾಘ್ರನಾಗುತ್ತಾನೆ. ಬಹುಶಃ ಈ ಘಟನೆಗಳು ಅವನ ಮನಸ್ಥಿತಿಯನ್ನು ಬದಲಾಯಿಸಿರುವ ಸಾಧ್ಯವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

 

ಅತಂತ್ರವಾದ ವಲ್ಲಾಚಿಯಾವನ್ನು ಮುನ್ನೆಡೆಸಲು ವ್ಲಾಡ್‌ನ III ಗೆ ಅವಕಾಶ ನೀಡಲು ಒಟ್ಟೋಮನ್ ಸುಲ್ತಾನ್ ಯೋಚಿಸುತ್ತಾನೆ. ತನ್ನ ಅಧಿಪತ್ಯದ ಅಡಿಯಲ್ಲಿ ವಲ್ಲಾಚಿಯಾವನ್ನು ಆಳಬೇಕು ಮತ್ತು ನಮ್ಮ ಮಾತುಗಳನ್ನು ಮೀರಬಾರದು, ಪ್ರತಿವರ್ಷ ಕಪ್ಪವನ್ನು ಕೊಡಬೇಕು ಎನ್ನುವ ಷರತ್ತಿನೊಂದಿಗೆ ಕ್ರಿ.ಶ.1448 ರಲ್ಲಿ ವ್ಲಾಡ್‌ನ III ಯನ್ನು ಬಂಧಮುಕ್ತಗೊಳಿಸಿ ವಲ್ಲಾಚಿಯಾದ ದೊರೆಯಾಗಿ ನೇಮಿಸುತ್ತಾರೆ. ಆದರೆ ವ್ಲಾಡ್ III ಒಟ್ಟೋಮನ್ ಗಳ ಮೇಲಿನ ದ್ವೇಷದಿಂದ  ಅವರ ವಿರುದ್ದ ಹೋರಾಡಲು ಒಟ್ಟೋಮನ್ ಗಳ ವೈರಿಗಳೊಂದಿಗೆ ಸ್ನೇಹ ಬೆಳೆಸುತ್ತಾನೆ. ಪದೇ ಪದೇ ಯುದ್ದಗಳಿಗೆ ಒಳಗಾಗುತಿದ್ದ ವಲ್ಲಾಚಿಯಾವನ್ನು ಸಂರಕ್ಷಿಸಿಕೊಳ್ಳಲು ತನ್ನ ಸೈನ್ಯವನ್ನು ಇನ್ನೂ ದೊಡ್ಡದಾಗಿಸಿಕೊಳ್ಳುತ್ತಾನೆ. ಯುರೋಪಿನ ಹಲವಾರು ರಾಜರು ಸಹಾಯ ಹಸ್ತ ಚಾಚುತ್ತಾರೆ.

 


ಈ ಮಧ್ಯೆ, ತನ್ನ ಕುಟುಂಬದವರ ಸಾವಿಗೆ ಕಾರಣರಾಗಿದ್ದ ಬೋಯಾರ್ ಗಳನ್ನು ಔತಣ ಕೂಟಕ್ಕೆ ಆಹ್ವಾನಿಸುತ್ತಾನೆ. ಎಲ್ಲರಿಗೂ ಔತಣ ನೀಡುವ ಸಮಯದಲ್ಲಿ ತನ್ನ ಯೋಧರಿಂದ ಎಲ್ಲಾ ಪುರುಷರನ್ನು ಬಂಧಿಸುತ್ತಾನೆ, ಕೆಲವರನ್ನು ಅಲ್ಲಿಯೇ ತುಂಡು ತುಂಡಾಗಿ ಕೊಚ್ಚಿ ಹಾಕುತ್ತಾನೆ, ಇನ್ನೂ ಕೆಲವರನ್ನು ಶೂಲಕ್ಕೇರಿಸುತ್ತಾನೆ. ವಲ್ಲಾಚಿಯಾದ ಹೊರಪ್ರದೇಶಗಳಲ್ಲಿ ನೂರಾರು ಜನರನ್ನು ರಸ್ತೆಯುದ್ದಕ್ಕೂ ನೇತು ಹಾಕುತ್ತಾನೆ. ಈ ದೃಶ್ಯಗಳು, ತುರ್ಕಿ ಸೇರಿದಂತೆ ಯುರೋಪಿನ ಹಲವು ಸಾಮ್ರಾಜ್ಯಗಳ ಮೈ ನಡುಗಿಸುತ್ತದೆ. ಡ್ರಾಕುಲಾ ವ್ಲಾಡ್ಎಂದಾಗ ಜನ ಭಯಭೀತಗೊಳ್ಳುತ್ತಿರುತ್ತಾರೆ. ಇಂತಹ ವಿಕೃತಿಯಿಂದ ತನ್ನ ಶತ್ರುಗಳ ಎದೆ ಝಲ್ಲೆನಿಸುತ್ತಿರುತ್ತಾನೆ. ಜನರು ಒಮ್ಮೆಗೆ ಪ್ರಾಣ ಬಿಡಬಾರದಂತೆ  ಶೂಲಕ್ಕೇರಿಸುತಿದ್ದನಂತೆ, ರಕ್ತವು ಮೈಯಿಂದ ಹೊರಬಂದು ನಿಧಾನವಾಗಿ ದೇಹದ ಅಂಗಾಂಗಗಳು ನಿಷ್ಕ್ರಿಯವಾಗಿ ಪ್ರಾಣ ಹೋಗುವಂತೆ ಮಾಡುತಿದ್ದನಂತೆ. ಹಲವಾರು ದಿನಗಳವರೆಗೆ ಜೀವಂತ ಸ್ಥಿತಿಯಲ್ಲಿದ್ದು ನಂತರ ಜನರು ಸಾಯುತಿದ್ದರಂತೆ. ಈ ರೀತಿ ಚಿತ್ರಹಿಂಸೆ ನೀಡುವುದನ್ನು ತುರ್ಕಿಯಲ್ಲಿದ್ದಾಗ ಕಲಿತಿರಬಹುದು ಎಂದು ಹೇಳಲಾಗುತ್ತಿದೆ. ಒಟ್ಟೋಮನ್ ಗಳು ಸಹ ತಮ್ಮ ವೈರಿಗಳನ್ನು ಶೂಲಕ್ಕೇರಿಸುತಿದ್ದರಂತೆ.

 

ಈ ಮಧ್ಯೆ 1453ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ತುರ್ಕರು ತಮ್ಮ ವಶಮಾಡಿಕೊಳ್ಳುತ್ತಾರೆ. ಈ ಘಟನೆಯಿಂದ ವ್ಲಾಡ್‌ನ III ಚಿಂತಾಕ್ರಾಂತನಾಗುತ್ತಾನೆ. ತುರ್ಕಿಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿಕ್ಕೊಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾನೆ. ಪ್ರತಿ ವರ್ಷ ಕಪ್ಪ ಕೊಡುತಿದ್ದ ವ್ಲಾಡ್, ಮೂರ್ನಾಲ್ಕು ವರ್ಷಗಳಿಂದ ಕಪ್ಪ ಕೊಟ್ಟಿರುವುದಿಲ್ಲ. ಮಾತುಕತೆಗೆ ಬನ್ನಿಯೆಂದು ತುರ್ಕಿಯ ಸುಲ್ತಾನ ಕರೆಕೊಟ್ಟಿರುತ್ತಾನೆ. ತನ್ನ ತಂದೆಗಾದ ಅನ್ಯಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಅಲ್ಲಿಗೆ ಹೋಗುವುದಿಲ್ಲ. ಸಂಧಾನಕ್ಕೆಂದು ಬಂದಿದ್ದ ಒಟ್ಟೋಮನ್ ಸಂಧಾನಕಾರರನ್ನು ಯಾವುದೇ ಮುಲಾಜಿಲ್ಲದೆ ಶೂಲಕ್ಕೇರಿಸುತ್ತಾನೆ. ಈ ಮೂಲಕ ತುರುಕರ ವಿರುದ್ದ ಹೋರಾಡಲು ನಾನು ಸಿದ್ದ ಎನ್ನುವ ಸಂದೇಶ ರವಾನಿಸುತ್ತಾನೆ. ತುರ್ಕಿಯ ವಿರುದ್ದ ಹಲವಾರು ಯುದ್ದಗಳನ್ನು ನಡೆಸುತ್ತಾನೆ. ಬಹುತೇಕ ಯುದ್ದಗಳಲ್ಲಿ ಯಶಸ್ವಿಯಾಗುತ್ತಾನೆ. ತನ್ನ ವಿಜಯದ ಬಗ್ಗೆ ಒಂದು ಪತ್ರದಲ್ಲಿ ಹೀಗೆ ದಾಖಲಿಸುತ್ತಾನೆ.  "ಡ್ಯಾನ್ಯೂಬ್ ನದಿ ಸಮುದ್ರಕ್ಕೆ ಸೇರುವ ಜಾಗದಲ್ಲಿನ ಒಬ್ಲುಸಿಟ್ಜಾ ಮತ್ತು ನೊವೊಸೆಲೊದಲ್ಲಿ ವಾಸಿಸುತ್ತಿದ್ದ ರೈತರು,  ಮಹಿಳೆಯರು ವೃದ್ದರು ಮತ್ತು ಮಕ್ಕಳು ಎಲ್ಲರನ್ನೂ ನಾನು ಕೊಂದಿದ್ದೇನೆ. ಯುದ್ದದಲ್ಲಿ ನಮ್ಮ ಸೈನ್ಯ  23884 ತುರ್ಕರನ್ನುಕೊಂದಿದೆ. ಮನೆಗಳಲ್ಲಿ ಜೀವಂತವಾಗಿ ಸುಟ್ಟುಹಾಕಿದ್ದೇವೆ, ಯುದ್ದದಲ್ಲಿ ರುಂಡ ಚೆಂಡಾಡಿದ್ದೇವೆ.  ಮಹಾಶಯರೇ, ನಾನು ಶಾಂತಿಯನ್ನು ಮುರಿದಿದ್ದೇನೆ ಎಂದು ನೀವು ತಿಳಿದಿರಬೇಕು." ಈ ಪತ್ರ ವ್ಲಾಡ್‌ III ನ ಪೈಶಾಚಿಕತೆಯನ್ನು ಎತ್ತಿ ತೋರಿಸುತ್ತದೆ. ಆಕ್ರಮಣಕಾರಿ ಒಟ್ಟೋಮನ್‌ಗಳ ಮೇಲಿನ ವ್ಲಾಡ್‌ನ ವಿಜಯಗಳನ್ನು ವಲ್ಲಾಚಿಯಾ, ಟ್ರಾನ್ಸಿಲ್ವೇನಿಯಾ ಮತ್ತು ಇತರ ಯುರೋಪ್‌ನಾದ್ಯಂತ ಆಚರಿಸಲಾಗುತ್ತದೆ. ಅಂದಿನ ಪೋಪ್ ಪಯಸ್ II ಸಹ ಈ ವಿಜಯದ ಕುರಿತು ಸಂತೋಷಿಸಿದ್ದರು.

 

ವ್ಲಾಡ್ ನ ಆಡಳಿತದ ಸಮಯದಲ್ಲಿ ತನ್ನ ವಿರೋಧಿಗಳು ಸೇರಿದಂತೆ  ಸುಮಾರು 80,000 ಜನರನ್ನು ಕೊಂದಿದ್ದಾನೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 20,000 ಜನರನ್ನು ಶೂಲಕ್ಕೇರಿಸಲಾಯಿತು ಮತ್ತು ಟಾರ್ಗೋವಿಸ್ಟ್ ನಗರದ ಹೊರಗೆ ಪ್ರದರ್ಶನಕ್ಕೆ ಇಡಲಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ಒಮ್ಮೆ ವಲ್ಲಾಚಿಯಾದ ಮೇಲೆ ಆಕ್ರಮಣ ಮಾಡುವುದಕ್ಕಾಗಿ ಒಟ್ಟೋಮನ್ ಸುಲ್ತಾನ್ ಮೆಹ್ಮದ್ II ದಂಡೆತ್ತಿ ಬಂದಾಗ, ಶೂಲಕ್ಕೇರಿಸಿದ್ದ ದೇಹಗಳನ್ನು  ಸ್ವತಹ  ಈ ಅಸಹ್ಯ ನೋಡಿ ಕಾನ್ಸ್ಟಾಂಟಿನೋಪಲ್ಗೆ ಹಿಂತಿರುಗಿದ ಎಂದು ಹೇಳಲಾಗಿದೆ. ಈ ದೃಶ್ಯವು ಎಷ್ಟು ಅಸಹ್ಯಕರವಾಗಿತ್ತು ಎಂದರೆ ಸಾವಿರಾರು ಕೊಳೆಯುತ್ತಿರುವ ದೇಹಗಳಿಂದ ಕಾಗೆಗಳು ಮಾಂಸವನ್ನು ಆಹಾರಕ್ಕಾಗಿ ಕಿತ್ತು ತಿನ್ನುವುದನ್ನು ನೋಡುತಿದ್ದರೆ,  ವಲ್ಲಾಚಿಯಾದ ಕಡೆ ತಲೆ ಹಾಕಲೇ ಬಾರದು ಎನ್ನುವ ಸಂದೇಶ ಹೋಗುತಿತ್ತು.

 

ಸರಿ ಸುಮಾರು ಎರಡು ದಶಕಗಳಕಾಲ ಒಟ್ಟೋಮನ್ನರು ಮತ್ತು  ವ್ಲಾಡ್ III ಮಧ್ಯೆ ಯುದ್ದ ನಡೆಯುತ್ತದೆ. ಒಂದು ಹಂತದಲ್ಲಿ ವಲ್ಲಾಚಿಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಒಟ್ಟೋಮನ್ ಗಳು ವ್ಲಾಡ್ III ತಮ್ಮನಾದ ಯುವರಾಜ ರಾಡು ನನ್ನು ಸಿಂಹಾಸನದ ಮೇಲೆ ಕೂರಿಸುತ್ತಾರೆ. ಇತ್ತ ವ್ಲಾಡ್ III ಭೂಗತನಾಗುತ್ತಾನೆ. ಆಗಾಗ್ಗೆ ಹೊರಬಂದು ಒಟ್ಟೋಮನ್ನರ ಮೇಲೆ ಆಕ್ರಮಣ ನಡೆಸುತ್ತಿರುತ್ತಾನೆ. ಹಲವಾರು ಬಾರಿ ರಾತ್ರಿ ಹೊತ್ತಿನಲ್ಲಿ ಆಕ್ರಮಣ ಮಾಡಿ ನೂರಾರು ಸೈನಿಕರನ್ನು ಕೊಂದು ಹಾಕುತ್ತಾನೆ. ಯಾವ ಹೊತ್ತಿನಲ್ಲಿ ಎಲ್ಲಿ ಬರುತ್ತಾನೆ ಎನ್ನುವ ಸುಳಿವು ಕೂಡ ಇರುವುದಿಲ್ಲ. ಇತ್ತ ವಲ್ಲಾಚಿಯಾ ಕೈತಪ್ಪಿ ಹೋದಮೇಲೆ, ಯುರೋಪಿನ ಕೆಲ ಆಡಳಿತಗಾರರು ವ್ಲಾಡ್ ಗೆ ಬೆಂಬಲನೀಡುವುದಿಲ್ಲ.

 

ಒಮ್ಮೆ 1476 ರಲ್ಲಿ, ಒಟ್ಟೋಮನ್ನರೊಂದಿಗೆ ಯುದ್ಧ ನಡೆಯುತ್ತಿರುವಾಗ, ವ್ಲಾಡ್ III ನನ್ನು ಹೊಂಚು ಹಾಕಿ ತುರ್ಕಿಯ ಸೈನಿಕರು ಸೆರೆ ಹಿಡಿಯುತ್ತಾರೆ. ಆದರೆ, ಜೀವಂತವಾಗಿಟ್ಟರೆ ಮತ್ತೆ ತಮಗೆ ಆಪತ್ತು ತಪ್ಪಿದ್ದಲ್ಲ ಎಂದು ಅವನನ್ನು ಕೊಂದು ಹಾಕುತ್ತಾರೆ. ಅವನ ಶಿರಚ್ಛೇದ ಮಾಡಿ,  ತಲೆಯನ್ನು ಕಾನ್ಸ್ಟಾಂಟಿನೋಪಲ್ನಲ್ಲಿದ್ದ ಸುಲ್ತಾನ್ ಮೆಹ್ಮದ್ II ಗೆ ಕಳಿಸುತ್ತಾರೆ. ವ್ಲಾಡ್ ನ ತಲೆಯನ್ನು ಶೂಲಕ್ಕೇರಿಸಿ ನಗರದ ಮುಖ್ಯದ್ವಾರದಲ್ಲಿ ವಿಜಯದ ಸಂಕೇತವಾಗಿ ಇಡಲಾಗುತ್ತದೆ. ಇಲ್ಲಿಗೆ ಡ್ರಾಕುಲ ವ್ಲಾಡ್ ನ ರಕ್ತ ಸಿಕ್ತ ಅಧ್ಯಾಯ ಕೊನೆಯಾಗುತ್ತದೆ.

 ಬರಹ:- ಪಿ.ಎಸ್.ರಂಗನಾಥ.

ಮಸ್ಕತ್. ಒಮಾನ್ ರಾಷ್ಟ್ರ

 

 


 

 

 

 

 

ಬುಧವಾರ, ಅಕ್ಟೋಬರ್ 12, 2022

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

 

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

ಬರಹ:- ಪಿ.ಎಸ್.ರಂಗನಾಥ. ಮಸ್ಕತ್

 



ಶತಶತಮಾನಗಳ ಇತಿಹಾಸವನ್ನ ನಾವು ಇಂದು ಅರಿಯಲು ಸಾಧ್ಯವಾಗಿದ್ದು, ಅಂದಿನ ರಾಜ ಮಹರಾಜರು, ಮಹಾರಾಣಿಯರು ಕಟ್ಟಿಸಿದ ಅರಮನೆಗಳು, ಪಾರಂಪಾರಿಕ ಕಟ್ಟಡಗಳು, ಸ್ಮಾರಕಗಳು, ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳು, ಶಿಲಾಶಾಸನ, ತಾಮ್ರ ಪತ್ರ ಮತ್ತು ತಾಳೆಗರಿ ಪತ್ರಗಳು, ಮೌಖಿಕ ಸಾಹಿತ್ಯ, ಮಹಾಕಾವ್ಯಗಳು, ನಾಟಕ ಇನ್ನು ಮುಂತಾದವುಗಳ ಮುಖಾಂತರ ನಾವು ನೂರಾರು ವರ್ಷಗಳ ಇತಿಹಾಸವನ್ನ ಇಂದು ತಿಳಿಯುತಿದ್ದೇವೆ. ಈ ಲೇಖನದಲ್ಲಿ ಪ್ರಸ್ತುತ ಪಡಿಸಿರುವ ಮಹಾರಾಣಿಯ ಮೈನಾಳದೇವಿಯವರ ಒಂಬೈನೂರು ವರ್ಷಗಳ ಹಿಂದಿನ ಮಾಹಿತಿ ದೊರೆಯಲು ಕಾರಣವಾಗಿದ್ದು ಅವರು ಆಡಳಿತ ನಡೆಸಿದ ಸಮಯದಲ್ಲಿ ಕಟ್ಟಿಸಿದ ಕೆಲ ಸರೋವರಗಳು, ಗುಡಿ ಗೋಪುರಗಳು ಮತ್ತು ಅವರ ಆಸ್ಥಾನದಲ್ಲಿದ್ದ ಕೆಲ ಕವಿಗಳು ರಚಿಸಿದ ಸಾಹಿತ್ಯದಿಂದ ಅವರ ಬಗೆಗಿನ ಮಾಹಿತಿ ಜನರಿಗೆ ಲಭ್ಯವಾಯಿತು.

ಗುಜರಾತಿನಲ್ಲಿ ಈಗಲೂ ಒಂದು ಮಾತು ಜನಜನಿತವಾಗಿದೆ. ನಿಮಗೆ "ನ್ಯಾಯ ಅಂದರೆ ಏನು ಅಂತ ನೋಡಬೇಕೆಂದರೆ, ಧೋಲ್ಕಾಗೆ ಹೋಗಿ ಮಾಲ್ವಾ ತಲಾವ್ (ಮಾಲ್ವ ಸರೋವರ) ಅನ್ನು ನೋಡಿ" ಎಂದು ಹೇಳುತ್ತಾರೆ. ಈ ಮಾತಿಗೆ, ಹನ್ನೊಂದನೇ ಶತಮಾನದಲ್ಲಿ ನಡೆದ ಒಂದು ಕುತುಹಲಕಾರಿ ಘಟನೆ ಕಾರಣವಾಯಿತು. ಗುಜರಾತ್ ರಾಜ್ಯ ಬಹಳಷ್ಟು ಭಾಗ ಒಣ ಭೂಮಿಯನ್ನು ಹೊಂದಿರುವ ಪ್ರದೇಶ. ಬಿರು ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿರುತ್ತದೆ. ಜನಕಲ್ಯಾಣದಲ್ಲಿ ನಂಬಿಕೆ ಇಟ್ಟಿದ್ದ ರಾಜಮಾತೆ ಆ ಭಾಗದಲ್ಲಿ ಆಳ್ವಿಕೆ ನಡೆಸುತಿದ್ದ ಚಾಲುಕ್ಯ ರಾಜಮನೆತನ ಕೆರೆ ಕಟ್ಟೆಗಳನ್ನ ಕಟ್ಟುವ ಯೋಜನೆ ಯೊಂದನ್ನ ರೂಪಿಸುತ್ತಾರೆ.



ಮಾಲ್ವಾ ತಲಾವ್

ಸೂಕ್ತ ಪ್ರದೇಶವನ್ನ ನೋಡಿ ಅಲ್ಲಲ್ಲಿ ಕೆರೆ, ಸರೋವರಗಳನ್ನ ಕಟ್ಟಲು ಪ್ರಾರಂಭಿಸುತ್ತಾರೆ. ಈ ಸರೋವರ, ಬಾವಿ, ಕೊಳಗಳನ್ನ ಕಟ್ಟುವಾಗ ಒಂದು ಸುಂದರ ರೂಪವನ್ನ ಕೊಟ್ಟು ಕಟ್ಟಿಸಲು ಯೋಜನೆ ಹಾಕುತ್ತಾರೆ. ಅದರಂತೆ ದೋಲ್ಕಾ ಪ್ರದೇಶದಲ್ಲಿನ ಮಾಲ್ವಾ ಊರಿನಲ್ಲಿ ವರ್ತುಲಾಕಾರದಲ್ಲಿ ಸರೋವರ ಕಟ್ಟಲು ತಯಾರಿ ನಡೆಸುತ್ತಾರೆ. ಆ ಸ್ಥಳದಲ್ಲೊಂದು ಒಬ್ಬ ಮಹಿಳೆಯ ಮನೆಯಿರುತ್ತದೆ.  ಆ ಕೊಳಕ್ಕೆ ವರ್ತುಲಾಕಾರದ ಆಕಾರ  ಬರಬೇಕಾದರೆ, ಆ ಮನೆಯನ್ನು ತೆರವು ಗೊಳಿಸಬೇಕಾಗಿರುತ್ತದೆ. ಆದ ಕಾರಣ ಆ ಮಹಿಳೆಗೆ ಮನೆ ತೆರವು ಮಾಡಲು ಸೂಚಿಸುತ್ತಾರೆ. ಆದರೆ ಆ ಮಹಿಳೆ ಅಲ್ಲಿಂದ ಸ್ಥಳ ಖಾಲಿ ಮಾಡಲು ಒಪ್ಪುವುದಿಲ್ಲ. ಪರಿಹಾರವಾಗಿ ಆ ಮಹಿಳೆಗೆ ದೊಡ್ಡ ಮೊತ್ತದ ಹಣವನ್ನು ನೀಡಲು ರಾಣಿಯು  ಮುಂದಾಗುತ್ತಾಳೆ.  ಆ ಮಹಿಳೆ ಆ ಹಣವನ್ನ ನಿರಾಕರಿಸಿ, ನಿಮ್ಮ ಹಣ ನನಗೆ ಬೇಡವೇ ಬೇಡ. ಒತ್ತಡದಿಂದ ನನ್ನ ಮನೆಯನ್ನು ತೆರವು ಮಾಡಿಸಲು ಯತ್ನಿಸಿದರೆ ನನ್ನ ಪ್ರಾಣವನ್ನು ತ್ಯಾಗ ಮಾಡುವೆ, ಇದರಿಂದ. "ನೀವು ಕಟ್ಟುತ್ತಿರುವ ಕೆರೆ ನನ್ನ ಹೆಸರಿನಿಂದ ಪ್ರಸಿದ್ಧವಾಗಲಿ" ಎಂದು ಬೆದರಿಕೆ ಹಾಕುತ್ತಾಳೆ.


Malav Talav Google Map View

ಮಹಾರಾಣಿ ಆ ಮಹಿಳೆಯನ್ನು ಬಲವಂತ ಮಾಡಲಿಕ್ಕೆ ಹೋಗುವುದಿಲ್ಲ. ಆದರೆ ಆ ಮನೆಗೆ ಸೂಕ್ತ ಜಾಗವನ್ನ ಬಿಟ್ಟು, ಅದಕ್ಕೊಂದು ಸುಂದರ ರೂಪ ಕೊಟ್ಟು, ಸರೋವರವನ್ನ ನಿರ್ಮಾಣ ಮಾಡುತ್ತಾರೆ. ಈ ಘಟನೆ ಗುಜರಾತಿನೆಲ್ಲೆಡೆ ಸುದ್ದಿಯಾಗುತ್ತದೆ. ಈ ಕಾರ್ಯದಿಂದ ಮಹಾರಾಣಿ ನ್ಯಾಯಯುತ ಆಡಳಿತಗಾರಳು ಎಂದು ಗುಜರಾತಿನಲ್ಲೆಡೆ ಪ್ರಸಿದ್ದಿಯಾಗುತ್ತಾಳೆ.  "ನಿಮಗೆ ನ್ಯಾಯ ಅಂದರೆ ಏನು ಅಂತ ನೋಡಬೆಕೆಂದರೆ ಧೋಲ್ಕಾಗೆ ಹೋಗಿ ಮಾಲ್ವಾ ಸರೋವರವನ್ನು ನೋಡಿ", ಎನ್ನುವ ಮಾತು ಸುಪ್ರಸಿದ್ದವಾಗುತ್ತದೆ. ಇದು ಹನ್ನೊಂದನೇ ಶತಮಾನದ ಘಟನೆ, ಇಂದಿಗೂ ಆ ಕೆರೆ ಉಳಿದಿದೆ, ಅಲ್ಲಿ ನಿರ್ಮಿಸಿದ ಚಾಲುಕ್ಯರ ವಾಸ್ತುಶೈಲಿಯಲ್ಲಿನ ಮಂಟಪವೂ ಹಾಗೆಯೇ ಇದೆ. ಸುಮಾರು ಒಂಬೈನೂರು ವರ್ಷಗಳ ಹಿಂದಿನ ಘಟನೆ, ಆ ಮಹಾರಾಣಿಯ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದರೆ ಅವರು ಯಾವ ಮಟ್ಟಕ್ಕೆ ಜನಪರ ಕೆಲಸ ಕಾರ್ಯಗಳು ಮಾಡಿದ್ದಿರಬಹುದು ಅಲ್ಲವೇ? ಮುನ್ಸಾರ್ ಲೇಕ್ ಎನ್ನುವ ಇನ್ನೊಂದು ಸುಂದರವಾದ ಕೊಳವನ್ನ ಅಹಮದಾಬಾದಿನ ವಿರಂಗಂ ನಲ್ಲಿ ಅವರು ನಿರ್ಮಿಸಿದ್ದಾರೆ. ಅದಕ್ಕೆ ಮಾನ್ ಸರೋವರ ಎನ್ನುವ ಹೆಸರಿದೆ. ಅದರ ಸುತ್ತಲೂ ಮುನ್ನೂರಕ್ಕೂ ಹೆಚ್ಚಿನ ಚಿಕ್ಕ ಚಿಕ್ಕ ದೇವಸ್ಥಾನಗಳು ನಿರ್ಮಾಣವಾಗಿವೆ.

 

Munsar Lake

 ಬನವಾಸಿ ಕದಂಬರ ಉಪಶಾಖೆ: ಅಂದಹಾಗೆ, ಆ ಮಹಾರಾಣಿಯ ಹೆಸರು "ಮೈನಾಳ ದೇವಿ(ಮಿನಾಲ್ ದೇವಿ)". ಇವರು ಕರ್ನಾಟಕ ಮೂಲದವರು ಎನ್ನುವುದು ವಿಶೇಷ ಸಂಗತಿ.  ಹನ್ನೊಂದನೇ ಶತಮಾನದಲ್ಲಿ ಗೋವಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗವನ್ನ ಆಳುತಿದ್ದ ಗೋವಾ ಕದಂಬ ವಂಶದ ರಾಜಾ ಒಂದನೆ ಜಯಕೇಶಿಯ ಮಗಳು ಇವರು. ಮೈನಾಳ ಎನ್ನುವ ಗ್ರಾಮ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿದೆ. ಈ ಗೋವಾ ಕದಂಬರು ಬೇರೆ ಯಾರೂ ಅಲ್ಲ, ಬನವಾಸಿ ಕದಂಬ ಮನೆತನದ ಒಂದು ಟಿಸಿಲು(ಉಪ ಶಾಖೆ). ಇವರ ಆಡಳಿತ ಹೇಗೆ ಶುರುವಾಯಿತೆಂದರೆ, ಹತ್ತನೇ ಶತಮಾನದಲ್ಲಿ  ರಾಷ್ಟ್ರಕೂಟರು ಕೊಂಕಣಿ ಪ್ರದೇಶವನ್ನ ಆಳುತಿದ್ದರು. ಈ ಪ್ರದೇಶವನ್ನ ತಮ್ಮ ತೆಕ್ಕೆಗೆ ಪಡೆಯಲು ಬಾದಾಮಿ ಚಾಲುಕ್ಯರು ಸರಿಯಾದ ಸಮಯಕ್ಕಾಗಿ ಕಾಯುತಿದ್ದರು. ಅದು ರಾಷ್ಟ್ರಕೂಟ ಸಾಮ್ರಾಜ್ಯದ ಅಂತಿಮ ದಿನಗಳು. ಆಗ ಕದಂಬರ ಕುಡಿ ಷಷ್ಟದೇವನ ಸಹಾಯದಿಂದ ರಾಷ್ಟ್ರಕೂಟರನ್ನ ಕೊಂಕಣ ಪ್ರದೇಶದಲ್ಲಿ ಮಣಿಸಿ ಅಲ್ಲಿ ಷಷ್ಟದೇವನನ್ನ ಗೋವಾದ ಮಹಾಮಂಡಳೇಶ್ವರನನ್ನಾಗಿ ಸ್ಥಾಪಿಸುತ್ತಾರೆ (960CE). ಆಗಿನಿಂದ ಗೋವಾ ಕದಂಬ ಮನೆತನ ಆ ಪ್ರದೇಶವನ್ನ ಆಳುತ್ತಾರೆ. ಇವರ ಆಡಳಿತ ಭಾಷೆ ಸಂಸ್ಕೃತ ಮತ್ತು ಕನ್ನಡವಾಗಿತ್ತು. ಗೋವದ ಕದಂಬ ಮನೆತನ ಬನವಾಸಿ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು ಎಂದು ತಿಳಿದು ಬರುತ್ತದೆ

 


ಗೋವ ಕದಂಬ ವಂಶದ ನಾಲ್ಕನೇ ತಲೆಮಾರಿನ ರಾಜ ಒಂದನೇ ಜಯಕೇಶಿ. ಈತ ಪರಾಕ್ರಮಿಯೂ,  ದೂರ ದೃಷ್ಟಿಯ ವಿಚಾರವಂತನೂ ಆಗಿದ್ದನು, ಆಗಿನ ಕಾಲದಲ್ಲಿ ನಡೆಯುತಿದ್ದ ರಾಜಮನೆತನಗಳ ನಡುವಿನ ಕಾಳಗಗಳನ್ನ, ರಕ್ತಪಾತಗಳನ್ನ ತಪ್ಪಿಸಿ ಶಾಂತಿ ನೆಲೆಸುವ ಬಗ್ಗೆಯೇ ಬಹಳ ಯೋಚಿಸುತಿದ್ದನು. ಆತನಿಗೆ ಶಾಂತಿ, ನೆಮ್ಮದಿ, ರಾಜ್ಯಾಭಿವೃದ್ದಿ, ಪ್ರಜೆಗಳ ಕ್ಷೇಮಾಭಿವೃದ್ದಿಯೇ ಮುಖ್ಯವಾಗಿತ್ತು. ತನ್ನ ಚಿಕ್ಕದಾದ ಗೋವಾ ಸಾಮ್ರಾಜ್ಯಕ್ಕೆ  ಮುಂದೆ ಚಾಲುಕ್ಯರಿಂದ ಯಾವುದೇ ತೊಂದರೆ ಬರಬಾರದು ಎನ್ನುವ ದೂರಾಲೋಚನೆಯಿಂದ, ಕದಂಬ ಮತ್ತು ಚಾಲುಕ್ಯ ರಾಜಮನೆತನಗಳ ಭಾಂದವ್ಯ ಬೆಳೆಸುವ ಬಗ್ಗೆ ಯೋಚಿಸಿ  ತನ್ನ ಇಬ್ಬರ ಮಕ್ಕಳಲ್ಲಿ ಒಬ್ಬ ಮಗಳನ್ನ ಕಲ್ಯಾಣಿ ಚಾಳುಕ್ಯ ವಿಕ್ರಮಾದಿತ್ಯನಿಗೆ ಮತ್ತು ಇನ್ನೊಬ್ಬ ಮಗಳನ್ನೂ ಗುಜರಾತಿನ ಅನಿಲ್ವಾಡದ (ಈಗಿನ ಪಾಠಣ್) ಚಾಲುಕ್ಯ ಒಂದನೇ ಕರ್ಣ ದೇವನಿಗೆ ಕೊಟ್ಟು ವಿವಾಹ ಮಾಡಿಕೊಡುತ್ತಾನೆ. ಗುಜರಾತಿನ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯವನ್ನ ಗುಜರಾತಿನ ಚಾಲುಕ್ಯರು ( ಅಲ್ಲಿ ಸೋಳಂಕಿ ಎಂದು ಗುರುತಿಸುತ್ತಾರೆ) ಆಳುತ್ತಿರುತ್ತಾರೆ. ಹೀಗೆ ರಾಜ ಒಂದನೆ ಜಯಕೇಶಿ ಕದಂಬ ಸಂತತಿಯ ಪ್ರಭಾವವನ್ನು ವಿಸ್ತರಿಸುತ್ತಾನೆ.

 ಮೈನಾಳ ದೇವಿ ಮದುವೆಯಾಗಿ ಗುಜರಾತಿಗೆ ಬರುತ್ತಾರೆ. ಅಲ್ಲಿ ಮಿನಾಲ್ ದೇವಿ ಎಂದು ಹೆಸರು ಬದಲಾವಣೆಯಾಗುತ್ತದೆ. ರಾಜ ಕರ್ಣ ದೇವ(1064–1092), ಒಮ್ಮೆ ಮಾಳವರು ಕರ್ಣದೇವನ ಮೇಲೆ ಯುದ್ದ ಮಾಡುತ್ತಾರೆ. ಆ ಯುದ್ದದಲ್ಲಿ ಕರ್ಣದೇವ ತೀವ್ರವಾಗಿ ಗಾಯಗೊಳ್ಳುತ್ತಾನೆ. ಯುದ್ದವನ್ನ ಗೆದ್ದನಂತರ, ಗಾಯಗಳಿಂದ ಚೇತರಿಸಿಕೊಳ್ಳದೆ ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಕೇವಲ ಇಪ್ಪತ್ತೆಂಟು ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದುತ್ತಾನೆ. ಮಗನಾದ ರಾಜ ಜಯಸಿಂಹ ಸಿದ್ದರಾಜ ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಈ ಸಂಧರ್ಭದಲ್ಲಿ, ಮಗನ ಪರವಾಗಿ ಮೈನಾಳ್ ದೇವಿ ರಾಜ್ಯಭಾರ ನಡೆಸಬೇಕಾಗುತ್ತದೆ. ಪಕ್ಕದಲ್ಲಿದ್ದ ಮಾಳವರು. ರಜಪೂತರು ಮತ್ತಿತರ ಸಂಸ್ಥಾನಗಳು ಒಬ್ಬರನ್ನೊಬ್ಬರು ಆಕ್ರಮಿಸಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಇಂತಹ ಸಂಧರ್ಭದಲ್ಲಿ, ರಾಣಿ ತನ್ನ ಧೈರ್ಯ, ಶೌರ್ಯ, ಆಡಳಿತದಲ್ಲಿನ ಅಸಾಧಾರಣ ಸಾಮರ್ಥ್ಯ ಚಾಲುಕ್ಯರ ರಾಜ್ಯವನ್ನ ಕಾಪಾಡಿಕೊಳ್ಳುತ್ತಾಳೆ.  ಮುಂದೆ  ಜನಪರ ಕಾರ್ಯಕ್ರಮಗಳಿಂದ ಉತ್ತಮ ಹೆಸರನ್ನ ಸಹ ಸಂಪಾದಿಸುತ್ತಾಳೆ. ಇದಕ್ಕೆಲ್ಲ ಕಾರಣ ತಂದೆ ಒಂದನೇ ಜಯಕೇಶಿ.  ಯಾಕೆಂದರೆ ಒಂದನೆಯ ಜಯಕೇಶಿಯ ಆಳ್ವಿಕೆಯಲ್ಲಿ ತನ್ನ ರಾಜ್ಯ ಸರ್ವತೋಮುಖವಾದ ಅಭಿವೃದ್ಧಿ ಹೊಂದಿ ನೆಮ್ಮದಿಯ ಬೀಡಾಗಿತ್ತು. ತಂದೆಯ ಮಾರ್ಗದರ್ಶನ ಮಗಳು ಉತ್ತಮ ಆಡಳಿತ ನೀಡುವಲ್ಲಿ ಸಹಕಾರಿಯಾಯಿತು.

 ಸೋಮನಾಥ ಯಾತ್ರೆಯ ಒಂದು ಪ್ರಸಿದ್ಧ ಕಥೆ ಗುಜರಾತಿನಲ್ಲಿ ಪ್ರಚಲಿತದಲ್ಲಿದೆ. ಒಮ್ಮೆ ರಾಣಿ, ಸೋಮೇಶ್ವರ ದೇವಸ್ಥಾನಕ್ಕೆ ಹೋಗುವಾಗ ದಾರಿ ಮಧ್ಯ ವಿಶ್ರಾಂತಿ ಪಡೆಯುತ್ತಿರುತ್ತಾಳೆ. ಆಗ ಕೆಲವು ಸಾಧು-ಸಂತರು-ಸನ್ಯಾಸಿಗಳು ಮತ್ತು ಬಡ ಯಾತ್ರಿಕರರು ಅಲ್ಲಿಗೆ ಬಂದು ಬೇಟಿಯಾಗುತ್ತಾರೆ. ಹೇಗಿದ್ದೀಯಪ್ಪ ಸಾಧು ? ಎಲ್ಲಾ ಸೌಖ್ಯವೇ ಎಂದು ಕಷ್ಟ ಸುಖ ಕೇಳುತ್ತಾಳೆ. ಆಗ ಆ ಸಾಧು, ತಾಯಿ ನಮ್ಮಂತವರು ಸೋಮೇಶ್ವರನ ದರ್ಶನ ಮಾಡಲು ಹಣವನ್ನ ಎಲ್ಲಿಂದ ತರಬೇಕು ತಾಯಿ? ಎಂದು ಪ್ರಶ್ನಿಸುತ್ತಾನೆ.  ಯಾತ್ರಿಕರ ತೆರಿಗೆಯನ್ನು ಪಾವತಿಸಲು ಸಾಧ್ಯವಾಗದ ಕಾರಣ ಸೋಮನಾಥ ದೇವರನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ರಾಜಮಾತೆ ಮೀನಾಲ್ದೇವಿಗೆ ದೂರು ನೀಡುತ್ತಾರೆ. 


ಆಗಿನ ಕಾಲದಲ್ಲಿ ಸೋಮನಾಥನ ದರ್ಶನ ಪಡೆಯಲು ಹಣವನ್ನ ನೀಡ ಬೇಕಾಗಿರುತ್ತದೆ. ರಾಜಮಾತೆ ಮೀನಾಲ್ ದೇವಿ ಇದನ್ನು ಸಹಿಸಲಾರದೆ ಯೂ ಸೋಮನಾಥನನ್ನು ನೋಡದೆ ಹಿಂದಿರುಗುತ್ತಾಳೆ. ಅರಮನೆಗೆ ಬಂದು ತನ್ನ ಮಗ ಮತ್ತು ರಾಜ ಜೈ ಸಿಂಗ್‌ಗೆ ನಡೆದ ಘಟನೆಯನ್ನ ವಿವರಿಸುತ್ತಾಳೆ. ತಾಯಿಯ ಕೋರಿಕೆಯ ಮೇರೆಗೆ, ಮಹಾರಾಜ್ ಸಿದ್ಧರಾಜ್ ಜೈ ಸಿಂಗ್ ಅವರು ಸೋಮನಾಥ ಯಾತ್ರೆಗೆ ಯಾತ್ರಿಕರ ತೆರಿಗೆಯನ್ನು ರದ್ದುಗೊಳಿಸುತ್ತಾರೆ. ಈ ಯಾತ್ರಿ ತೆರಿಗೆಯಿಂದ ಸುಮಾರು ವಾರ್ಷಿಕ 72 ಲಕ್ಷ ರೂಪಾಯಿಗಳ ಆದಾಯವು ಸ್ಥಗಿತಗೊಳ್ಳುತ್ತದೆ.  ಸೋಮೇಶ್ವರ ದೇವಸ್ಥಾನವನ್ನ ಜೀರ್ಣೋದ್ದಾರವನ್ನ ಸಹ ರಾಣಿ ಮಾಡಿಸುತ್ತಾಳೆ. ಹೀಗೆ ಅನೇಕ ಸುಧಾರಣೆಗಳಿಗೆ, ನ್ಯಾಯಪರ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ರಾಣಿ ಮೈನಾಳ ದೇವಿ ಇಂದಿಗೂ ಜನ ಮಾನಸದಲ್ಲಿ ನೆಲೆಸಿದ್ದಾಳೆ.  1946 ನೇ ಇಸವಿಯಲ್ಲಿ "ಮಹಾರಾಣಿ ಮಿನಾಲ್ ದೇವಿ" ಎನ್ನುವ ಗುಜರಾತಿ ಚಲನಚಿತ್ರವೂ ಬಿಡುಗಡೆಯಾಗಿದೆ. 

 


Gujarati Movie Maharani Minal Devi

ರಾಣಿಯ ಬಗ್ಗೆ ಹಲವಾರು ಸಂಸ್ಕೃತ ಸಾಹಿತ್ಯ ಮತ್ತು ನಾಟಕಗಳಲ್ಲಿ ಉಲ್ಲೇಖಿಸಿದ್ದಾರೆಸಂಸ್ಕೃತ ಕವಿ ಭಿಲ್ಹಣ ಬರೆದ ಕರ್ಣ ಸುಂದರಿ ಎಂಬ ನಾಟಕದಲ್ಲಿ ಪತಿ ರಾಜ ಒಂದನೇ ಕರ್ಣದೇವ ಮತ್ತು ರಾಣಿಯ ಬಗ್ಗೆ ಪ್ರಸಂಗಗಳಿವೆ. ಇನ್ನೊಂದು ಪ್ರಮುಖವಾದ ಮುದ್ರಿತ ಕುಮುದ ಚಂದ್ರ ಪ್ರಕರಣ ಎಂಬ ಶೀರ್ಷಿಕೆಯ ಸಂಸ್ಕೃತ ನಾಟಕವು ಎರಡು ಪ್ರಮುಖ ಜೈನ ಪಂಥಗಳಾದ ದಿಗಂಬರ ಮತ್ತು ಶ್ವೇತಾಂಬರರ ನಡುವಿನ ವಿವಾದದ ಚಿತ್ರಣವನ್ನ ಹೊಂದಿದೆ. ಈ ವಿವಾದದ ಒಂದು ವಿಷಯವೆಂದರೆ ಮಹಿಳೆ ಮೋಕ್ಷವನ್ನು ಸಾಧಿಸಬಹುದೇ ಎಂಬುದು. ಇಲ್ಲಿರುವ ಶ್ವೇತಾಂಬರರು "ಅಂತರಂಗ ಹಾಗೂ ಬಹಿರಂಗದಲ್ಲಿ ಉತ್ತಮವಾದ ಮನೋಗುಣವನ್ನ ಹೊಂದಿರುವ ಮಹಿಳೆಯರು ಮೋಕ್ಷವನ್ನು ಪಡೆಯಬಹುದು" ಎಂದು ಪ್ರತಿಪಾದಿಸುತ್ತಾರೆ.  ರಾಮಾಯಣದ  ಸೀತಾ ಮಾತೆ ಮತ್ತು ಮಹಾರಾಣಿ ಮಿನಾಲ್ ದೇವಿಯವರನ್ನು ಉದಾಹರಣೆಗಳಾಗಿ ಉಲ್ಲೇಖಿಸುತ್ತಾರೆ.

 


ನಮ್ಮ ಕೋಲಾಟ, ಗರ್ಭಾ ಮತ್ತು ದಾಂಡಿಯ ನೃತ್ಯವಾಗಿದ್ದು: ಮೈನಾಳ್ ದೇವಿ ಸ್ವತಃ ನೃತ್ಯಗಾರ್ತಿಯಾಗಿದ್ದು, ನಾಟ್ಯದಲ್ಲಿ ಆಸಕ್ತಿ ಹೊಂದಿದ್ದಳು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಮದುವೆಯ ಸಂಧರ್ಭದಲ್ಲಿ ಶಾಸ್ತ್ರೀಯ ಜಾನಪದ ನೃತ್ಯಗಾರರನ್ನ  ಗುಜರಾತಿಗೆ ಕರೆತಂದಿದ್ದಳು ಎಂದು ಹೇಳಲಾಗುತ್ತದೆ. ಆಗ ಕರ್ನಾಟಕದ ಕೋಲಾಟ ವನ್ನು ಗುಜರಾತ್ ಗೆ ಪರಿಚಯಿಸಿ ಮುಂದೆ  ದಾಂಡಿಯಾ ರಾಸ್ ಮತ್ತು ಗರ್ಭಾ ನೃತ್ಯ ವಾಗಿ ರೂಪುಗೊಂಡಿತು ಎನ್ನಲಾಗುತ್ತದೆ.

 

ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್: ಮೊಹಮ್ಮದ್ ಘೋರಿ ವಿರುದ್ಧ ಹೋರಾಡಿದ ರಜಪೂತ ದೊರೆ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಇತಿಹಾಸದಲ್ಲಿ ಮರೆಯಲಾರದ ಈ ವೀರ ಸೇನಾನಿ ಬಗ್ಗೆ ಬಹಳಷ್ಟು ಕಥೆಗಳು ಇವೆ. ಸಿನಿಮಾಗಳು ಬಂದಿವೆ. ನಾಟಕಗಳು, ಕಾದಂಬರಿಗಳು. ಇಂದಿಗೂ ಜನರ ಮನಸಲ್ಲಿ ನೆಲೆಸಿದ್ದಾನೆ ಈ ಕೆಚ್ಚೆದೆ ವೀರ. ಈತ ಮೈನಾಳ್ ದೇವಿಯ ಮರಿ ಮೊಮ್ಮಗ ಎನ್ನುವುದು ವಿಶೇಷ.  ಅದು ಹೇಗೆಂದರೆ, ಮೈನಾಳ್ ದೇವಿಯ ಮಗ ರಾಜ ಜಯಸಿಂಹ ಸಿದ್ದರಾಜ ಅವರ ಮಗಳಾದ ಕಾಂಚನದೇವಿ ಯವರನ್ನ ರಜಪೂತ ದೊರೆ ಅರ್ನೋರಾಜ ನಿಗೆ ಮದುವೆ ಮಾಡಿಕೊಡುತ್ತಾರೆ. ಅವರಿಗೆ ಸೋಮೇಶ್ವರ ಎನ್ನುವ ಮಗ ಹುಟ್ಟುತ್ತಾನೆ.  ಈ ಸೋಮೇಶ್ವರ ರವರ ಮಗನೇ ಈ ವೀರ ಕೇಸರಿ ಪರಾಕ್ರಮಿ ಪೃಥ್ವಿರಾಜ್ ಚೌಹಾಣ್ (III).

 

ಸಂಸ್ಕೃತ ಕವಿ ಭಿಲ್ಹಣ: ಮೈನಾಳ್ ದೇವಿಯವರ ಕಥಾನಕದಲ್ಲಿ ಕವಿ ಭಿಲ್ಹಣರ ಪ್ರಸ್ತುತತೆ ಬಹು ಮುಖ್ಯವಾಗುತ್ತದೆ. ಇವರ ಮುಖಾಂತರವೇ ನಮಗೆ ಗುಜರಾತಿನ ಚಾಲುಕ್ಯರು ಮತ್ತು  ಕರ್ನಾಟಕದ ಚಾಲುಕ್ಯರ ನಡುವಿನ ಭಾಂಧವ್ಯದ ಬಗ್ಗೆ ಪರಿಚಯವಾಗುವುದು. ಇವರು ಕಾಶ್ಮೀರದ ಕವಿ. ತಮ್ಮ ವಿಧ್ಯಾಭ್ಯಾಸದ ಬಳಿಕ ಪಾಂಡಿತ್ಯ ಪ್ರದರ್ಶನಕ್ಕಾಗಿ ಭಾರತ ಯಾತ್ರೆ ಮಾಡುತ್ತಾರೆ.  ಕಾಶ್ಮೀರ, ಬೃಂದಾವನ, ಮಥುರಾ, ಕಾಶಿ, ಕನ್ಯಾಕುಬ್ಜ, ಧಾರಾ, ಗುಜರಾತ್ ಮುಂತಾದ ಊರುಗಳಲ್ಲಿ ಸುತ್ತಿ ದಕ್ಷಿಣ ಭಾರತದ ಕಲ್ಯಾಣ ಚಾಲುಕ್ಯ ವಂಶದ ಹೆಸರಾಂತ ದೊರೆ ಆರನೆಯ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾರೆ. ಇದಕ್ಕೂ ಮೊದಲು ಮೈನಾಳ್ ದೇವಿಯ ಆಸ್ಥಾನದಲ್ಲಿ ಕವಿಯಾಗಿ "ಕರ್ಣ ಸುಂದರಿ" ಎನ್ನುವ ನಾಲ್ಕು ಅಂಕಗಳ ಐತಿಹಾಸಿಕ ನಾಟಕವನ್ನ ಬರೆದಿರುತ್ತಾರೆ. ರಾಜಾ ಜಯಸಿಂಹ ಇವರನ್ನ ಸತ್ಕರಿಸಿ ದಕ್ಷಿಣದೆಡೆಗೆ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿ, ಕವಿಯ ಪಾಂಡಿತ್ಯವನ್ನ ಗಮನಿಸಿದ ರಾಜ ವಿಕ್ರಮಾದಿತ್ಯ ಈತನನ್ನು ಸತ್ಕರಿಸಿ ವಿದ್ಯಾಪತಿ ಎಂಬ ಉಪಾಧಿ ಕೋಡುತ್ತಾನೆ. ಆಗ ಅಲ್ಲಿ ನೆಲೆನಿಂತು ವಿಕ್ರಮಾಂಕದೇವ-ಚರಿತ ಎನ್ನುವ ಐತಿಹಾಸಿಕ ಕಾವ್ಯವನ್ನ ಕವಿ ರಚಿಸುತ್ತಾರೆ. ಚಾಲುಕ್ಯರಿಂದ ಅತು ಹೆಚ್ಚು ಮಾನ್ಯತೆ ಪಡೆದಿದ್ದ ಭಿಲ್ಹಣನಿಗೆ ಚಾಲುಕ್ಯ ರಾಜವಂಶದ ಯುದ್ದಗಳು, ಕಲ್ಯಾಣ ಕಾರ್ಯಕ್ರಮಗಳು ಅವನ ಕಾವ್ಯದ ವಸ್ತುಗಳಾಗಿದ್ದವು.

 


ಅಂದಾಜು ಒಂಬೈನೂರು ವರ್ಷಗಳಿಗೂ ಹೆಚ್ಚಿನ ಈ ಐತಿಹಾಸಿಕ ಸತ್ಯ ಸಂಗತಿಗಳು ಕನ್ನಡಿಗರಿಗೆ ಹೆಮ್ಮೆ ತರುವ ವಿಷಯಗಳು, ಇಂತಹ ವಿಷಯಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ  ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.

 #ಮೈನಾಳದೇವಿ #maynala #minaldevi #mynaldevi #ಮಿನಾಲ್ದೇವಿ #ಮಿನಾಲ್_ದೇವಿ

ಗುರುವಾರ, ಸೆಪ್ಟೆಂಬರ್ 8, 2022

ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ

 ಉದಯವಾಣಿ NRI Edition ನಲ್ಲಿ ನಾನು ಬರೆದ ಪ್ರವಾಸಿ ಲೇಖನ ಇಂದು ಪ್ರಕಟವಾಗಿದೆ.



Thanks to Udayavani 🙏
ಪ್ರವಾಸಿ ಕಥನ: ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ (Battle of Leipzig)
ಬರಹ:- ಪಿ.ಎಸ್.ರಂಗನಾಥ.
ಮಸ್ಕತ್. ಒಮಾನ್ ರಾಷ್ಟ್ರ.
ಕಛೇರಿಯ ಕೆಲಸದ ನಿಮಿತ್ತ ಜರ್ಮನಿಗೆ ಇದುವರೆವಿಗೂ ಮೂರು ಬಾರಿ ಭೇಟಿ ನೀಡಿದ್ದೇನೆ, ಪ್ರತಿ ಬಾರಿ ಭೇಟಿ ನೀಡಿದಾಗಲೂ ಒಂದಿಲ್ಲೊಂದು ಪ್ರವಾಸಿ ತಾಣಗಳನ್ನ ನೋಡುವುದು ಹವ್ಯಾಸ. ಈ ಬಾರಿ ನಾನು ಪ್ರಯಾಣಿಸಿದ್ದು ಜರ್ಮನಿಯ ಲೈಪ್ ಜ಼ಿಗ್ ಎನ್ನುವ ನಗರಕ್ಕೆ. ಇದು ಫ್ರಾಂಕ್ ಫರ್ಟ್ ನಿಂದ ಸುಮಾರು 395 ಕಿ.ಮಿ. ದೂರದಲ್ಲಿದೆ. ಇದು ಒಂದು ವಾಣಿಜ್ಯ ನಗರವಾಗಿದ್ದರೂ ಸಹ ಜರ್ಮನಿಯ ಇತಿಹಾಸದ ಪುಟದಲ್ಲಿ ಈ ನಗರಕ್ಕೆ ಒಂದು ಪ್ರಮುಖ ಸ್ಥಾನ ಇದೆ. ಫ್ರೆಂಚ್ ಸಾಮ್ರ್ಯಾಜ್ಯಕ್ಕೆ ಮಣ್ಣು ಮುಕ್ಕಿಸಿದ ಖ್ಯಾತಿ ಈ ನಗರಕ್ಕಿದೆ. ಅಲ್ಲೊಂದು ದೊಡ್ಡದಾದ ಯುದ್ದ ಸ್ಮಾರಕವಿತ್ತು, ಅದನ್ನ ನೋಡೋಣ ಎಂದು ಅಂದು ಸಂಜೆ ಅಲ್ಲಿಗೆ ಹೋಗಿದ್ದೆವು. ಆ ಸ್ಥಳಕ್ಕೆ ಹೋದ ಮೇಲೆ, ಆ ನಗರದಲ್ಲಿ ನಡೆದ ಭೀಕರ ಯುದ್ದವೊಂದರ ಮಾಹಿತಿ ದೊರೆಯಿತು.
ನಮ್ಮ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಬಂದಾಗ ಫ್ರೆಂಚ್ ಸೈನ್ಯ, ನೆಪೋಲಿಯನ್ ವಿಚಾರ ಕುರಿತು ಚರ್ಚೆಯಾಗುವುದು ನಾವು ಗಮನಿಸಿರಬಹುದು. ಟಿಪ್ಪು ಸುಲ್ತಾನ್ ಫ್ರೆಂಚ್ ಕ್ರಾಂತಿಯ ವಿಚಾರಗಳು ಮತ್ತು ತತ್ವಶಾಸ್ತ್ರಗಳನ್ನು ಓದಿಕೊಂಡಿದ್ದರಿಂದ ಫ್ರೆಂಚ್ ಕ್ರಾಂತಿಯ ಬಗ್ಗೆ ಪ್ರಭಾವಿತನಾಗಿದ್ದನಂತೆ. ಅಷ್ಟೇ ಅಲ್ಲದೆ ಬ್ರಿಟೀಷರಿಗೆ ಪ್ರಬಲ ಪೈಪೋಟಿ ಒಡ್ಡಿದ್ದ ಫ್ರೆಂಚ್ ಆಡಳಿತಗಾರರು ಮತ್ತು ಸೈನ್ಯಾಧಿಕಾರಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿದ್ದ ಹಾಗೂ ಅವರ ಮೂಲಕ ತನ್ನ ಸೈನ್ಯಕ್ಕೆ ತರಬೇತಿಯನ್ನೂ ಕೊಡಿಸಿದ್ದ ಹೀಗೆ ಹಲವಾರು ವಿಷಯಗಳನ್ನ ನಮ್ಮ ಇತಿಹಾಸಕಾರರು ದಾಖಲಿಸಿದ್ದಾರೆ. ಇತಿಹಾಸ ಅರಿತಿರುವ ಎಲ್ಲರಿಗೂ, ಫ್ರೆಂಚ್ ಸಾಮ್ರ್ಯಾಜ್ಯ, ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ ಬಗ್ಗೆ ಗೊತ್ತಿರಬಹುದು. ಮೈಸೂರು ಆಂಗ್ಲೋ ಯುದ್ದದ ಸಮಯದಲ್ಲಿ ಫ್ರೆಂಚ್ ಸೈನ್ಯದ ನೆರವು ಪಡೆಯಲು ಟಿಪ್ಪು ಸುಲ್ತಾನ್ ಸಹ ನೆಪೋಲಿಯನ್ ನನ್ನ ಸಂಪರ್ಕಿಸಿದ್ದ ವಿಷಯವನ್ನ ಕೇಳಿದ್ದೇವೆ.
ಅಸಾಧರಣ ಬುದ್ದಿಮತ್ತೆ, ಯುದ್ದಗಳನ್ನ ಗೆಲ್ಲುವ ಕೌಶಲ್ಯತೆಯನ್ನ ಹೊಂದಿದ್ದ, ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಹೊಂದಿದ್ದ ನೆಪೋಲಿಯನ್, ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದರಿಂದ, ಅವನು ಫ್ರಾನ್ಸ್‌ನ ಇತಿಹಾಸದಲ್ಲಿ ಅಧಿಪತಿಯಾಗಿ ತುಂಬಾ ಹೆಸರು ಗಳಿಸಿದ್ದ. ಅಷ್ಟೇ ಅಲ್ಲದೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನ ನೀಡಲಾಗಿದೆ.
ಜನಪರ ಆಡಳಿತಗಾರನಾಗಿದ್ದ ಆತ, ತನ್ನ ಆಳ್ವಿಕೆಯಲ್ಲಿ ಪ್ರಗತಿಪರ ಚಿಂತನೆಗಳನ್ನು ಫ್ರಾನ್ಸ್ ಸೇರಿದಂತೆ ಯೂರೋಪಿನಾದ್ಯಂತ ಹರಡಿದ. ಇದರ ಫಲವಾಗಿ, ಯೂರೋಪಿನ ಅನೇಕ ರಾಷ್ಟ್ರಗಳು ಹಲವು ಸುಧಾರಣೆಗಳನ್ನು ಕಂಡವು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಲ್ಲದೆ, ಮಧ್ಯಮ ವರ್ಗದ ಹಿತ ಕಾಯುವುದಕ್ಕಾಗಿ ಕಾಯಿದೆಗಳನ್ನು ರೂಪಿಸಿ, ಜಾರಿಗೆ ತಂದನು. ಧಾರ್ಮಿಕ ಅಲ್ಪಸಂಖ್ಯಾತರಾದಂತ ಯಹೂದಿಗಳು ಮತ್ತಿತರನ್ನ ಗುಲಾಮಗಿರಿಯಿಂದ ಬಿಡುಗಡೆ ಮಾಡಿದ್ದಲ್ಲದೆ, ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ, ಅವಕಾಶಗಳನ್ನ ಕಲ್ಪಿಸಿಕೊಟ್ಟನು. ಯೂರೋಪಿನಾದ್ಯಂತ ಬೇರುಬಿಟ್ಟಿದ್ದ ಊಳಿಗಮಾನ್ಯ ವ್ಯವಸ್ಥೆಯನ್ನು ಕಿತ್ತೊಗೆಯಲು ಅವನ ಆಡಳಿತ ಪ್ರೇರಣೆ ನೀಡಿತು. ನ್ಯಾಯಾಂಗ ವ್ಯವಸ್ಥೆಯಲ್ಲೂ ಅಪಾರ ಸುಧಾರಣೆಗಳನ್ನು ತಂದಿದ್ದಲ್ಲದೇ, ಇಂದಿಗೂ ಆತನ ನ್ಯಾಯ ಸುಧಾರಣೆಗಳನ್ನು ನೆಪೋಲಿಯನಿಕ್ ಕೋಡ್’ ಎಂದು ಫ್ರಾನ್ಸ್ ನಲ್ಲಿ ಕರೆಯಲಾಗುತ್ತದೆ. ಈ ನ್ಯಾಯಾಂಗ ಸುಧಾರಣೆಗಳನ್ನು ಜಗತ್ತಿನಾದ್ಯಂತ ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ.
ನೆಪೋಲಿಯನ್ ಬೋನಾಪಾರ್ಟೆ 1804 ರಿಂದ 1814 ರವರೆಗೆ ಫ್ರಾನ್ಸ್ ನ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದ್ದನು. ಫ್ರೆಂಚ್ ಚಕ್ರವರ್ತಿಯಾಗುವ ಮೊದಲು ಫ್ರೆಂಚರ ಸೈನ್ಯದಲ್ಲಿ ಅತಿ ದೊಡ್ಡದಾದ ಸ್ಥಾನವನ್ನ ಹೊಂದಿದ್ದ. ಆ ಸ್ಥಾನಮಾನ ಸುಮ್ಮನೆ ಸಿಕ್ಕಿದ್ದಲ್ಲ. ಅವನಿಗೆ ಫ್ರೆಂಚ್ ರಾಜಮನೆತನದ ಹಿನ್ನೆಲೆ ಯಿರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನೆಪೋಲಿಯನ್, ಹಂತ ಹಂತವಾಗಿ ಬೆಳೆದು ಯುರೋಪಿನಲ್ಲಿ ಫ್ರೆಂಚ್ ಸಾಮ್ರಾಜ್ಯವನ್ನ ಉತ್ತುಂಗಕ್ಕೆ ಕೊಂಡೋಯ್ದಿದ್ದಲ್ಲದೇ, ಫ್ರಾನ್ಸ್ ನಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣೀ ಭೂತನಾಗಿದ್ದ. ಯುರೋಪ್ ರಾಷ್ಟ್ರಗಳನ್ನು ಹಲವಾರು ಯುದ್ದದಲ್ಲಿ ಗೆದ್ದು ಚಕ್ರವರ್ತಿ ಯಾಗಿ ಬೀಗಿದ್ದ. ಅಂತಹ ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಆದರೆ, ಸೋಲು ಎನ್ನುವುದು ಅವನಿಗೂ ತಪ್ಪಿರಲಿಲ್ಲ. ಜರ್ಮನ್ನರು, ರಷಿಯನ್ನರು, ಸ್ವೀಡನ್ನರು, ಆಸ್ಟ್ರಿಯನ್ನರ ಒಕ್ಕೂಟದ ಎದುರು 16 ಮತ್ತು19ರ ಅಕ್ಟೋಬರ್ 1813 ರಲ್ಲಿ ನಡೆದ ಮಹಾಯುದ್ದ ದಲ್ಲಿ (Battle of Leipzig) ಅವನು ಸೋತು ಶರಣಾಗಿದ್ದ. ಪ್ರಪಂಚ ಗೆಲ್ಲಬೇಕೆನ್ನುವ ನೆಪೋಲಿಯನ್ ಆಸೆ ಪೂರ್ಣವಾಗಲು, ಒಂದು ಯುದ್ಧ ತಡೆಯಾಯಿತು. ಅದು ಜರ್ಮನ್ ದೇಶದ ಲೈಪ್ಜಿಗ್ ನಲ್ಲಿ ನಡೆದ ಮಹಾಯುದ್ದ. ನೆಪೋಲಿಯನ್ ಯುದ್ದ ದಾಹದಿಂದ ತೊಂದರೆಗೀಡಾಗಿದ್ದ ಜರ್ಮನ್ ಮತ್ತು ಸುತ್ತ ಮುತ್ತಲಿನ ದೇಶಗಳು ಒಂದಾಗಿ ಫ್ರೆಂಚ್ ರ ವಿರುದ್ದ ಸೆಣೆಸಿದ್ದವು.
ನೆಪೋಲಿಯನ್ ನ ಮೊದಲನೇ ಸೋಲನ್ನು ನೋಡಿ ಅವನನ್ನು ಕ್ರೋಶಿಯಾ ಮತ್ತು ಇಟಲಿಯ ಮಧ್ಯೆ ಇರುವ ಎಲ್ಬಾ ಎನ್ನುವ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿ ಕೆಲ ತಿಂಗಳುಗಳ ಕಾಲ ಜೀವಿಸಿದ್ದ. ಆದರೆ ಆ ಯುದ್ದದ ಸೋಲನ್ನು ಅವನು ಅರಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಮತ್ತೊಮ್ಮೆ ಪ್ರಪಂಚವನ್ನ ಗೆಲ್ಲಬೇಕು ಎನ್ನುವ ಅವನ ಆಸೆ ಮತ್ತೆ ಮತ್ತೆ ಚಿಗುರುತಿತ್ತು. ಹೀಗಾಗಿ ಅಲ್ಲಿಂದ ತಪ್ಪಿಸಿಕೊಂಡು ಮರಳಿ ಪ್ರಾನ್ಸ್ಗೆ ವಾಪಸ್ ಬಂದನು. ಮತ್ತೊಮ್ಮೆ ಫ್ರೆಂಚ್ ಸಾಮ್ರಾಜ್ಯವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 100 ದಿನಗಳ ಕಾಲ ಫ್ರಾನ್ಸ್ ದೇಶವನ್ನ ಮತ್ತೊಮ್ಮೆ ಆಳಿದನು. ಈ ಬಾರಿ ಎಲ್ಲ ದೇಶಗಳು ಏಳನೇ ಬಾರಿಗೆ ಒಕ್ಕೂಟವನ್ನ ರಚಿಸಿಕೊಂಡು, ವಾಟರ್ಲೂ ನಲ್ಲಿ ಮತ್ತೊಮ್ಮೆ ಯುದ್ದ ನಡೆಯಿತು. ಆ ಯುದ್ಧದಲ್ಲಿ ಮಗದೊಮ್ಮೆ ನೆಪೋಲಿಯನ್ ಭಾರಿ ಸೋಲನ್ನೇ ಅನುಭವಿಸಿದ. ಈ ಬಾರಿ ಬ್ರಿಟೀಷರು ನೆಪೋಲಿಯನ್ ನನ್ನ ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ವಾಟರ್ಲೂ ಅವನ ಕೊನೆಯ ಯುದ್ಧ. ಸೈಂಟ್ ಹೆಲೆನ ದ್ವೀಪದಲ್ಲಿ ಆರು ವರ್ಷಗಳ ಕಾಲ ಕಳೆಯುತ್ತಾನೆ ನಂತರ ಮೇ 5 1821 ರಂದು ಹೊಟ್ಟೆಯ ಕ್ಯಾನ್ಸರ್ ನಿಂದಾಗಿ ನೆಪೋಲಿಯನ್ ಮರಣ ಹೊಂದುತ್ತಾನೆ. ನೆಪೋಲಿಯನ್ ಬದುಕಿದ್ದು ಕೇವಲ 51 ವರ್ಷಗಳು ಮಾತ್ರ. ಅದರಲ್ಲಿ, ಆರು ವರ್ಷಗಳ ಕಾಲ ಗಡಿಪಾರು ಜೀವನ. ಒಬ್ಬ ಸಾಮಾನ್ಯ ಯುವಕ ಕೇವಲ ನಲವತ್ತೈದು ವರ್ಷಗಳ ಜೀವನದಲ್ಲಿ ಚಕ್ರವರ್ತಿಯಾಗುವ ಹಂತಕ್ಕೆ ಬೆಳೆದಿದ್ದು ಕಡಿಮೆ ಸಾಧನೆ ಏನಲ್ಲ. ಯುದ್ದಗಳ ಗೆಲುವಿನಿಂದ ಬೀಗಿ ಫ್ರೆಂಚ್ ಚಕ್ರವರ್ತಿಯಾದ ನೆಪೋಲಿಯನ್, ಒಂದೆರೆಡು ಯುದ್ದಗಳ ಸೋಲಿನ ಬಳಿಕ ಗಡಿಪಾರಾಗಿ ಮರಣ ಹೊಂದಿದ್ದು ದುರದೃಷ್ಟಕರವಾದ ಸಂಗತಿ.
ಜರ್ಮನ್ ಮತ್ತು ಇತರೆ ಸ್ನೇಹಿತ ರಾಷ್ಟ್ರಗಳಿಗೆ ಇದು ಮರೆಯಲಾರದ ನೆನಪು. ಅವರೆಲ್ಲರೂ ನೆಪೋಲಿಯನ್ ವಿರುದ್ದ ಯುದ್ದ ಗೆದ್ದ ನೆನಪಿಗಾಗಿ ಸ್ಮಾರಕ ವೊಂದನ್ನು ಜರ್ಮನ್ ದೇಶದ ಲೈಪ್ಜಿಗ್ ನಗರದಲ್ಲಿ ನಿರ್ಮಿಸಿದ್ದಾರೆ. ನೂರು ವರ್ಷಗಳ ನಂತರ, ತುಂಬ ವಿಶಾಲವಾದ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಉದ್ದ 80 metres (260 ft), ಅಗಲ, 70 metres (230 ft), ಎತ್ತರ 91 metres (299 ft). 18 October 1898 ರಂದು ಕಟ್ಟಲು ಶುರುಮಾಡಿ, ಹನ್ನೆರೆಡು ವರ್ಷಗಳಲ್ಲಿ ಸ್ಮಾರಕ ಪೂರ್ಣಗೊಂಡು 18 October 1913 ರಂದು ಉದ್ಘಾಟನೆ ಗೊಂಡಿತು.
ಜರ್ಮನಿಯ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇತಿಹಾಸದ ಆ ಘಟನೆಗಳು ಕಣ್ ಮುಂದೆ ಬಂದಂತೆ ಭಾಸವಾಯಿತು. ಜರ್ಮನಿಯಲ್ಲಿ ಯುರೋಪಿಯನ್ನರ ನಡುವೆ ಹಲವಾರು ಯುದ್ದಗಳು ನಡೆದಿವೆ. ಒಂದಲ್ಲ ಒಂದು ನಗರವು ಯಾವುದಾದರೊಂದು ಯುದ್ದವನ್ನ ಕಂಡಿದೆ.

ಬದುಕಿಗೊಂದು ಪಾಠ. ಚೋಲುಟೇಕ ಸೇತುವೆ.

ಬದುಕಿಗೊಂದು ಪಾಠ. ಚೋಲುಟೇಕ ಸೇತುವೆ.

ಬಿರುಗಾಳಿಗೂ ಜಗ್ಗದ, ಪ್ರವಾಹಕ್ಕೂ ಬಗ್ಗದ ಸೇತುವೆ ಕಥೆ,
ಉದಯವಾಣಿ ದೇಸಿಸ್ವರದ 49ನೇ ಸಂಚಿಕೆ, NRI Edition. 04/09/2022 ನಲ್ಲಿ ಲೇಖನ ಪ್ರಕಟವಾಗಿದೆ.

https://bit.ly/3KUaD3t

Thanks to Udayavani for publishing Article.




 

ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್

 UNESCO ಯಿಂದ ಪಾರಂಪಾರಿಕ ತಾಣ ಎಂದು ಗುರುತಿಸಲ್ಪಟ್ಟಿರುವ ಒಮಾನಿನ ಸಲಾಲಃ ಪ್ರಾಂತ್ಯದ ವಿಶೇಷವಾದ ಲೋಭಾನ/ಸಾಂಭ್ರಾಣಿ ಕುರಿತ ಮಾಹಿತಿ ಇಂದಿನ ಕನ್ನಡ ಪ್ರಭದ NRI ಅಂಕಣದಲ್ಲಿ ಪ್ರಕಟವಾಗಿದೆ.

Thanks to Kannadaprabha.
01/09/2022.




ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್
ಬರಹ: ಪಿ.ಎಸ್.ರಂಗನಾಥ
ಮಸ್ಕತ್- ಒಮಾನ್ ರಾಷ್ಟ್ರ.
ಒಮ್ಮೆ ಒಮಾನ್ ದೇಶದ ಸಲಾಲಃದ ಬೆಟ್ಟ ಪ್ರದೇಶದಲ್ಲಿ ಸ್ನೇಹಿತನ ಜತೆ ಹೋಗುತ್ತಿರುವಾಗ, ಅವರು ಫ್ರಾಂಕಿನ್ಸೆನ್ಸ್ ಮರವೊಂದನ್ನ ತೋರಿಸಿ, ಈ ಮರದ ವಿಶೇಷ ಏನು ಗೊತ್ತ ಅಂತ ಕೇಳಿದರು. ನಾನು ಹೌದು, ಈ ಫ್ರಾಂಕಿನ್ಸೆನ್ಸ್ ಮರಗಳಿಂದ ಈ ಸುಗಂಧದ್ರವ್ಯಗಳನ್ನ (ಸೆಂಟ್ ಮತ್ತು ಅತ್ತರ್) ತಯಾರಿಸುತ್ತಾರೆ ಅಂತ ಹೇಳಿದೆ. ಆಗ ಅವರು, ಆ ಮರದ ತೊಗಟೆಯಿಂದ ಬರುವ ಅಂಟನ್ನ ತೋರಿಸುತ್ತ ಇದನ್ನ ಸಾಂಭ್ರಾಣಿ ಅಥವ ಲೋಬಾನ ಎನ್ನುತ್ತಾರೆ ಎಂದು ಹೇಳಿದರು. ಮೊಟ್ಟ ಮೊದಲ ಬಾರಿಗೆ ಕಣ್ಣು ಮುಂದೆ ಲೋಬಾನ ವನ್ನ ಗಿಡದಲ್ಲಿ ನೋಡಿದಾಗ ಆಶ್ಚರ್ಯ ಆಯಿತು, ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಕಾಲೇಜಿನ ದಿನಗಳಲ್ಲಿ ನಮ್ಮ ಲೆಕ್ಚರರ್ ಒಬ್ಬರು ಈ ಲೋಬಾನ ಹೇಗೆ ತಯಾರಿಸುತ್ತಾರೆ ಎಂದು ಕೇಳಿದ್ದರು. ಅಂಗಡಿಯಲ್ಲಿ ದುಡ್ಡು ಕೊಟ್ಟು ದೂಪ ಹಾಕುವಾಗ ಬಳಸುವ ಈ ಲೋಬಾನವನ್ನ ಅಂಗಡಿಯಲ್ಲಿ ಖರೀದಿಸಿ ತರುತಿದ್ದ ನಾವು ಉತ್ತರ ಗೊತ್ತಿಲ್ಲದೆ ಸುಮ್ಮನಾಗಿದ್ದೆವು.
ಲೋಬಾನ ಅಥವ ಸಾಂಭ್ರಾಣಿ ಬಹುಶಃ ಎಲ್ಲರಿಗೂ ಗೊತ್ತಿರುವುದಂತಹದ್ದು. ಬಹುಶಃ ತಿಳಿಯದ ಜನರಿರುವುದು ಬಹಳ ವಿರಳ. ಈ ಲೋಬಾನವನ್ನು ಹಸುವಿನ ಬೆರಣಿಯ ಮೇಲೆ ಅಥವಾ ಉರಿಯುವ ಕೆಂಡದ ಮೇಲಿಟ್ಟು ಸುಡುವುದನ್ನ ದೂಪ ಹಾಕುವುದು ಎನ್ನುತ್ತಾರೆ. ಆ ಸಮಯದಲ್ಲಿ ಬರುವ ಹೊಗೆಯಿಂದ ಬಹಳಷ್ಟು ಉಪಯೋಗಗಳಿವೆ ಎಂದು ಎಲ್ಲರಿಗೂ ಗೊತ್ತಿರುವಂತಹದ್ದು.
ಸಾಮಾನ್ಯವಾಗಿ ಪೂಜೆ ಮಾಡುವ ಸಮಯದಲ್ಲಿ, ಧೂಪದಲ್ಲಿ ಸಾಂಬ್ರಾಣಿ ಹಾಕುವುದು ವಾಡಿಕೆ. ಆಗ ಹೊರಬರುವ ಸುಗಂಧ ಭರಿತವಾದ ವಾಸನೆ ಪೂಜೆಯಲ್ಲಿ ನಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಅವನ್ನು ಹಚ್ಚಲಾಗುತ್ತದೆ. ಅದೇ ರೀತಿ ದರ್ಗಾಗಳಲ್ಲಿ ಸಹ ಸಾಂಭ್ರಾಣಿ ಹಾಕುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣ ವೇನೆಂದರೆ, ನಾವು ಅದರ ಸುಗಂಧವನ್ನು ಆಸ್ವಾದಿಸಿದಾಗ, TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಇದರಿಂದ ನಮ್ಮ ಇಂದ್ರಿಯಗಳೆಲ್ಲ ಸಡಿಲಗೊಂಡು, ಒತ್ತಡ ಕಡಿಮೆಯಾಗುತ್ತದೆ. ವಾಸ್ತು ಪ್ರಕಾರ ಸಹ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಿಸಲು ದೂಪ ಹಾಕುವುದಕ್ಕೆ ಹೇಳುತ್ತಾರೆ. ಧೂಪದ್ರವ್ಯಗಳು ಗಾಳಿಯಲ್ಲಿರುವ ಹಾನಿಕಾರಕ ಕಂಪನಗಳನ್ನು ತಟಸ್ಥಗೊಳಿಸುವ ಮೂಲಕ ಸಕಾರಾತ್ಮಕತೆಯನ್ನು ಹರಡುತ್ತವೆ. ಜೊತೆಗೆ ಹಾನಿಕಾರಕ ಕೀಟಾಣುಗಳೂ ನಾಶವಾಗಲಿ ಎನ್ನುವ ಉದ್ದೇಶದಿಂದ ಮನೆಯಲ್ಲಿ ದೂಪ ಹಾಕುವ ಪದ್ದತಿ ನಮ್ಮ ಭಾರತೀಯರಲ್ಲಿದೆ. ಅಷ್ಟೇ ಅಲ್ಲದೆ ಎಳೆಕೂಸಿಗೆ ಎಣ್ಣೆಹಚ್ಚಿ ಸುಡುನೀರಲಿ ಮೀಯಿಸಿ ಲೋಬಾನ ಹಾಕಿ, ಕಾಡಿಗೆ ಹಚ್ಚಿ ಬಿಸಿಲಿಗೆ ಮೈಯನೊಡ್ಡುವುದು ಹಾಗೂ ಕೆಲವೆಡೆ ಬಾಣಂತಿಯರಿಗೂ ಸ್ನಾನದ ನಂತರ ಕಡಾಯಿಯಲ್ಲಿ ಕಾಯಿಸಿದ ಬೆಂಕಿಯ ಕೆಂಡದ ಮೇಲೆ ಲೋಬಾನ ಹಾಕುವುದು ಇಂದಿಗೂ ಹಳ್ಳಿಗಳಲ್ಲಿ ರೂಡಿಯಲ್ಲಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಒಮಾನ್ ಒಂದು ಅಚ್ಚರಿಯ ಮತ್ತು ವಿಭಿನ್ನ ದೇಶ, ಭೌಗೋಳಿಕವಾಗಿ ಕರ್ನಾಟಕಕ್ಕಿಂತ ಒಂದೂವರೆ ಪಟ್ಟು ಮಾತ್ರ ದೊಡ್ಡದು ಅಷ್ಟೇ. ಆದರೆ ಇಲ್ಲಿ ಅಚ್ಚರಿಯ ಸಂಗತಿಗಳಿಗೆ ಕೊರತೆ ಏನಿಲ್ಲ. ಒಮಾನಿನ ಪ್ರವಾಸೋಧ್ಯಮ ಇಲಾಖೆ ಒಮಾನಿನಲ್ಲಿರುವ ವಿಶೇಷ ಸ್ಥಳಗಳನ್ನ ಗುರುತಿಸಿ ಅದನ್ನ ಅಚ್ಚುಕಟ್ಟಾಗಿ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ನಾವು ಇಲ್ಲಿ ಕಾಣಬಹುದು. ಮಿಕ್ಕ ಅರಬ್ ರಾಷ್ಟ್ರಗಳು ಮರುಭೂಮಿಯಂತೆ ಗೋಚರಿಸಿದರೆ, ಒಮಾನ್ ನಲ್ಲಿ ಮಾತ್ರ ಪ್ರಕೃತಿ ನಿರ್ಮಿತ ಪ್ರವಾಸಿ ತಾಣಗಳಿಂದ ಹಿಡಿದು ಹಲವಾರು ವಿಷಯಗಳಲ್ಲಿ ವಿಶೇಷವಾದ ಸಂಗತಿಗಳನ್ನ ನಾವು ಇಲ್ಲಿ ಕಾಣುತ್ತೇವೆ. ಇಡೀ ಒಮಾನ್ ನ 25% ಭಾಗ ಮರುಭೂಮಿಯಂತಿದ್ದರೆ, 25% ಜಾಗ ಕಲ್ಲು ಗುಡ್ಡ, ಮತ್ತು ಬೆಟ್ಟಗಳ ಸಾಲು, ಸುಣ್ಣದಕಲ್ಲಿನ ಪ್ರದೇಶವನ್ನ ಹೊಂದಿದೆ 30% ಜಾಗ ಸಮತಟ್ಟಾಗಿದೆ ಇನ್ನುಳಿದ ಪ್ರದೇಶ ಒಮಾನ್ ನ ದಕ್ಷಿಣದ ಭಾಗವಾದ ದೋಫಾರ್ ಪ್ರಾಂತ್ಯ ನಮ್ಮ ಕರಾವಳಿ ಹಾಗು ಪಶ್ಚಿಮ ಘಟ್ಟದ ಪ್ರದೇಶ ದಂತಿದೆ. ಈ ಸ್ಥಳದಲ್ಲಿ, ಸಾವಿರಾರು ಎಕರೆಯ ಪ್ರದೇಶದಲ್ಲಿ ತೆಂಗಿನ ತೋಟಗಳು, ಬಾಳೆಗಿಡಗಳು ಹಾಗು ತರಕಾರಿ ಬೆಳೆಯುವ ತೋಟಗಳಿವೆ. ಘಟ್ಟ ಪ್ರದೇಶ ಮತ್ತು ಕರಾವಳಿಯ ಕೆಲ ಭಾಗದಲ್ಲಿ ಫ್ರಾಂಕಿನ್ಸೆನ್ಸ್ ಅಥವಾ ಬೋಸ್ವೆಲಿಯಾ ಸ್ಯಾಕ್ರ ಎಂದು ಕರೆಯಲ್ಪಡುವ ಈ ಸುಗಂಧ ಜಾತಿಯ ಫ್ರಾಂಕಿನ್ಸೆನ್ಸ್ ಮರಗಳನ್ನ ಕಾಣ ಬಹುದು.
ದೋಫಾರ್ ಪ್ರಾಂತ್ಯದ ಸಲಾಲಃ ನಗರದ ಉತ್ತರ ಭಾಗದಲ್ಲಿನ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತವೆ. ಈ ಭಾಗವನ್ನ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಕರೆಯುತ್ತಾರೆ. ಈ ಸ್ಥಳವನ್ನು 2000 ಇಸವಿಯಲ್ಲಿ ಫ್ರಾಂಕಿನ್ಸೆನ್ಸ್ ಟ್ರಯಲ್ ಎಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು ಮತ್ತು 2005 ರಲ್ಲಿ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಇಷ್ಟೇ ಅಲ್ಲದೆ, ಇಲ್ಲೊಂದು ದೊಡ್ಡದಾದ ಮ್ಯೂಸಿಯಂ ಕೂಡ ಇದೆ. ಒಮಾನ್ ದೇಶದ ಸರ್ಕಾರವು, ಅಲ್-ಬಲೀದ್ ಪುರಾತತ್ವ ಉದ್ಯಾನವನದ ಸಹಯೋಗದೊಂದಿಗೆ ಮ್ಯೂಸಿಯಂ ಆಫ್ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಅನ್ನು ಅಭಿವೃದ್ದಿ ಪಡಿಸಿದೆ. ವಿದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡದೆ ಮರಳುವುದಿಲ್ಲ.
ಪ್ರಾಚೀನ ಕರಾವಳಿ ನಗರವಾದ ಸುಮ್ಹುರಾಮ್‌ನಲ್ಲಿ (ಈಗ ಖೋರ್ ರೋರಿ) ಈ ಫ್ರಾಂಕಿನ್ಸೆನ್ಸ್ ನ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದ ಈ ಜಾಗ ಇಂದು ಅಳಿದು ಹೋಗಿದೆ. ಆದರೂ ಅಂದು ವಾಣಿಜ್ಯ ವಹಿವಾಟು ನಡೆಯುತಿದ್ದ ಪ್ರದೇಶದ ಕುರುಹುಗಳನ್ನ ನಾವು ಇಂದಿಗೂ ಕಾಣ ಬಹುದು. ಈಗ ವಾಣಿಜ್ಯ ವಹಿವಾಟಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಲವಾರು ಬಂದರು ಪ್ರದೇಶಗಳು ಒಮಾನ್ ನಲ್ಲಿವೆ. ಹಲವಾರು ವಾಣಿಜ್ಯ ಕೇಂದ್ರಗಳು ಸರ್ಕಾರಿ ಮತು ಖಾಸಗಿ ಸಂಸ್ಥೆಗಳ ಮುಖಾಂತರ ಇಲ್ಲಿನ ಉತ್ಪನ್ನಗಳನ್ನ ವಿವಿಧರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಅರಬ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಯತೇಚ್ಚವಾಗಿ ಲೋಬಾನವನ್ನ ಬಳಸಲಾಗುತ್ತದೆ. ಫ್ರಾಂಕಿನ್ಸೆನ್ಸ್ ಗಿಡಗಳಿಂದ ಉತ್ಪತ್ತಿಯಾಗುವ ಈ ಅಂಟನ್ನು ಸುಗಂಧದ್ರವ್ಯಗಳು, ಕೆಲವು ಬಗೆಯ ಧೂಪದ್ರವ್ಯಗಳು, ಮತ್ತು ಔಷಧಿಯಲ್ಲಿ ಬಳಸಲಾಗುತ್ತದೆ. ಕೇವಲ ಒಮಾನ್ ಮಾತ್ರವಲ್ಲ ಇತರೆ ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ಹಾಗೂ ಪರ್ಶಿಯನ್ ಕೊಲ್ಲಿಯಲ್ಲಿ ಈ ಸಾಂಭ್ರಾಣಿಯನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ಇನ್ನು ಫ್ರಾಂಕಿನ್ಸೆನ್ಸ್ ಮರಗಳು ಹವಾಮಾನ ಮತ್ತು ವಾತಾವರಣಕ್ಕೆ ತಕ್ಕಂತೆ ವಿವಿಧ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ. ಅಷ್ಟೇ ಅಲ್ಲದೆ ಅಂಟನ್ನ ತೆಗೆಯುವ ಋತು, ಸಮಯ ಮತ್ತು ಕೃಷಿಕನ ಕೌಶಲ್ಯಗಳನ್ನು ಅವಲಂಬಿಸುತ್ತದೆ. ಮುಂಗಾರು ಸಮಯದಲ್ಲಿ ಬೀಸುವ ತಂಪಾದ ಗಾಳಿಯು ಧೋಫರ್‌ನ ಮಾನ್ಸೂನ್ ಪರ್ವತಗಳ ಹಿಂದೆ ಹಾದು ಹೋಗುತ್ತದೆ. ಅಲ್ಲಿರುವ ಎತ್ತರದ ಶುಷ್ಕ ಪ್ರದೇಶದಲ್ಲಿ ಮತ್ತು ಸುಣ್ಣದ ಕಲ್ಲುಗಳಿಂದ ಸಮೃದ್ಧವಾಗಿರುವ ಕಲ್ಲಿನ ಮಣ್ಣು ವ್ಯಾಪ್ತಿಯಲ್ಲಿರುವ ಈ ಗಿಡಗಳು ಈ ವಾತಾವರಣಕ್ಕೆ ಒಗ್ಗಿ ಕೊಂಡಿರುವುದರಿಂದ ಉತ್ತಮ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ.
ಈ ಸುಗಂಧ ದ್ರವ್ಯಕ್ಕೆ ಬಳಸುವ ಈ ಸಾಂಬ್ರಾಣಿ ಅಥವ ಲೋಬಾನದಲ್ಲಿ ವಿವಿಧ ಗುಣಮಟ್ಟದ ನಾಲ್ಕು ವಿಧಗಳಿವೆ. ಅತ್ಯುತ್ತಮ ಗುಣಮಟ್ಟದ ಸಾಂಬ್ರಾಣಿಯನ್ನ"ಅಲ್-ಹೊಜಾರಿ" , ಇದನ್ನ ಬೇಸಿಗೆ ಕಾಲದಲ್ಲಿ ಕೋಯ್ಲು ಮಾಡುತ್ತಾರೆ."ಅನ್ನಜ್ಡಿ" ಎನ್ನುವ ವಿಧವನ್ನ ಮಾನ್ಸೂನ್ ನಂತರದ ತಿಂಗಳುಗಳಲ್ಲಿ ಕೋಯ್ಲು ಮಾಡುತ್ತಾರೆ.
ಕೋಯ್ಲು ಆರಂಭಿಸುವ ಋತುವಿನ ಮೊದಲ ಬಾರಿಗೆ ಕಟಾವು ಮಾಡುವುದನ್ನ"ಅಶಾಜ್ರಿ" ಎನ್ನುತ್ತಾರೆ. ಕೊನೆಯ ಬಾರಿಗೆ ಕಟಾವು ಮಾಡುವುದನ್ನ ಅಶಾಬಿ" ಇದನ್ನು "ಅಸ್ಸಾಹಿಲಿ" ಎಂದೂ ಕರೆಯುತ್ತಾರೆ, ಇದನ್ನು ಚಳಿಗಾಲದಲ್ಲಿ ಕೊಯ್ಲು ಮಾಡಲಾಗುತ್ತದೆ.
ಕರಾವಳಿ ಪ್ರದೇಶದಿಂದ ಅತಿ ದೂರದಲ್ಲಿ ರುವ ಅತಿ ಎತ್ತರದ ಬೆಟ್ಟ ಗುಡ್ಡಗಳಲ್ಲಿ ಶುಷ್ಕ ವಾತಾವರಣದ ಬೆಳೆಯುವ ಮರಗಳಿಂದ "ಅಲ್-ಹೊಜಾರಿ" ಅಂಟನ್ನ ತೆಗೆಯುತ್ತಾರೆ. ಈ ಪ್ರದೇಶದಲ್ಲಿ, ಮುಂಗಾರು ಮೋಡಗಳು, ಮಂಜು ತೇವಾಂಶ, ಆರ್ದ್ರತೆ ಕಡಿಮೆ ಇರುವುದಿಲ್ಲ.
ಇನ್ನು "ಆಶಾಬಿ" ಫ್ರಾಂಕಿನ್ಸೆನ್ಸ್ ಅತ್ಯಂತ ಕಡಿಮೆ ಬೆಲೆಬಾಳುವದು, ಮರಗಳು ಸಮುದ್ರದ ಸಮೀಪದಲ್ಲಿ ಬೆಳೆಯುವುದರಿಂದ ಮತ್ತು ಮಾನ್ಸೂನ್ ಮಳೆಯಿಂದ ಪ್ರಭಾವಿತವಾಗಿರುವ ಕಾರಣದಿಂದ ಇದು ಅತಿ ಕಡಿಮೆ ಗುಣಮಟ್ಟದ್ದಾಗಿರುತ್ತದೆ.
ಫ್ರಾಂಕಿನ್ಸೆನ್ಸ್ ಗಿಡಗಳನ್ನ ನೆಟ್ಟು ಎಂಟು ಹತ್ತು ವರ್ಷಗಳ ಬಳಿಕ ಅಂಟನ್ನ ಉತ್ಪಾದಿಸಲು ಪ್ರಾರಂಭಿಸುತ್ತವೆ. ಅದರ ನಂತರ ವಾತಾವರಣ ಸೂಕ್ತವಾಗಿದ್ದರೆ ಅತಿ ವೇಗವಾಗಿ ಬೆಳೆಯುತ್ತವೆ. ಈ ಮರಗಳ ಎತ್ತರ ಐದು ಮೀಟರ್ ಗಳಿಷ್ಟುರುತ್ತವೆ. ಹಾಗೂ ಒಂದೇ ಒಂದು ಬೇರನ್ನು ಹೊಂದಿರುತ್ತದೆ. ಗಿಡ ಬೆಳೆದಂತೆ ತೊಗಟೆಯ ಕೆಳಗೆ ಸಣ್ಣ ಗುಂಪುಗಳಲ್ಲಿ ಗಮ್ ರಾಳದ ಗ್ರಂಥಿಗಳು ಬೆಳೆಯುತ್ತವೆ, ಎಲೆಗಳ ರೂಪದಲ್ಲಿ ತೊಗಟೆಯಿಂದ ಈಚೆ ಬಂದು ಬೆಳೆಯುತ್ತವೆ. ಮರದ ಕೊಂಬೆಗಳು ಚಿಕ್ಕದಾಗಿದ್ದು ಮತ್ತು ದಟ್ಟವಾಗಿರುತ್ತವೆ. ಎಲೆಗಳು ಅವುಗಳ ಬದಿಗಳಲ್ಲಿ ಬೆಳೆಯುತ್ತವೆ. ದ್ರಾಕ್ಷಿಯ ಗೊಂಚಲಿನಂತೆ ಗುಂಪಾದ ಆಕಾರವನ್ನು ಹೊಂದಿರುವ ಸಣ್ಣ ಹೂವುಗಳು ರೆಂಬೆಗಳ ಬದಿಗಳಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ. ಹೂ ಬಿಡುವ ಅವಧಿಯ ನಂತರ, ಒಣ ಬೀಜಗಳು ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಬೀಳುತ್ತವೆ. ಪ್ರಾಚೀನ ಕಾಲದಲ್ಲಿ ಮರದ ಎಲ್ಲಾ ಭಾಗಗಳನ್ನು ಬಳಸಲಾಗುತ್ತಿತ್ತು. ತೊಗಟೆಯನ್ನು ಹತ್ತಿ ಬಟ್ಟೆಗೆ ಬಣ್ಣವಾಗಿ, ಎಲೆಗಳು ಪ್ರಾಣಿಗಳ ಮೇವಾಗಿ ಮತ್ತು ಮೊಗ್ಗುಗಳು, ಹೂವುಗಳು ಮತ್ತು ಹಣ್ಣುಗಳು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಬಾಯಿಯ ವಾಸನೆಯನ್ನು ಹೊರಹಾಕಲು ಟಾನಿಕ್ ಆಗಿ ಬಳಸಲಾಗುತಿತ್ತು.
ಇಲ್ಲಿನ ಸ್ಥಳೀಯ ಸರ್ಕಾರ, ಹೀಗೆ ಇಂತಹ ಹಲವಾರು ವಿಶೇಷಗಳನ್ನ ಗುರುತಿಸಿ ಅದನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯುವ ಕೆಲಸವನ್ನ ಮಾಡುತ್ತದೆ. ಅಷ್ಟೇ ಅಲ್ಲದೆ ಆ ಪ್ರದೇಶಗಳನ್ನ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ಮರೆಯುವುದಿಲ್ಲ ಹಾಗು ಜನ ಜಾಗೃತಿ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತದೆ.











Click below headings